ಭಾನುವಾರ, ಜೂನ್ 26, 2011
ಭಾನುವಾರ, ಜೂನ್ 19, 2011
ಸೊಗಲ
ಬೆಳಗಾವಿ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಸಂಸಾರ ಸಮೇತನಾಗಿ ತೆರಳಿದ್ದೆ. ಆಸುಪಾಸಿನ ಜಿಲ್ಲೆಗಳ ಎಲ್ಲಾ ಶಾಲೆಗಳ ವಾರ್ಷಿಕ ಪ್ರವಾಸದಲ್ಲಿ ಈ ಸ್ಥಳಕ್ಕೆ ಒಂದು ಪ್ರವಾಸ ಇದ್ದೇ ಇದೆ. ಇಲ್ಲೊಂದು ಸುಮಾರು ೧೨೦ ಅಡಿ ಎತ್ತರದ ಜಲಧಾರೆಯಿದೆ. ಮೇಲ್ಭಾಗಕ್ಕೆ ತೆರಳಲು ೧೫೦ ಮೆಟ್ಟಿಲುಗಳು. ಜಲಧಾರೆಯ ನೆತ್ತಿಯ ಬಳಿಯಲ್ಲೇ ಶಿವನ ಸುಮಾರು ೨೫ ಅಡಿ ಎತ್ತರದ ಪ್ರತಿಮೆ. ಅಲ್ಲೊಂದು ಶಿವನ ದೇವಸ್ಥಾನ. ಆಸು ಪಾಸಿನ ಬೆಟ್ಟಗಳ ಮೇಲೆ ವಿಹಾರಕ್ಕೆ ತೆರಳಲು ಮೆಟ್ಟಿಲುಗಳ ಮತ್ತು ಕಾಲುದಾರಿಗಳ ರಚನೆ.
ಇಲ್ಲಿ ದೊರೆತಿರುವ ಚಾಲುಕ್ಯರ ಕಾಲದ ಶಾಸನದ ಪ್ರಕಾರ ರಾವಣನ ಅನುಚರರಾದ ಮಾಲಿ ಮತ್ತು ಸುಮಾಲಿ ಎಂಬ ಶಿವಭಕ್ತರು ಈ ಸ್ಥಳದಲ್ಲಿ ಸೋಮೇಶ್ವರ ದೇವಾಲಯವನ್ನು ಪ್ರತಿಷ್ಠಾಪಿಸಿದರೆಂದು ಮತ್ತು ಆಗ ಈ ಸ್ಥಳವನ್ನು ’ಸುಮಾಲಿ’ ಎಂದು ಕರೆಯಲಾಗುತ್ತಿತ್ತು ಎಂದು ತಿಳಿಸಲಾಗಿದೆ. ನಂತರ ಸುಗೋಲ ಎಂಬ ಮುನಿಯು ಇಲ್ಲಿ ತಪಸ್ಸು ಮಾಡಿದ್ದನೆಂಬ ಕಾರಣದಿಂದ ಈ ಸ್ಥಳಕ್ಕೆ ಈಗ ’ಸೊಗಲ’ ಎಂಬ ಹೆಸರು. ಇಲ್ಲಿರುವ ಬೆಟ್ಟಗಳ ನಡುವಿನಿಂದ ಪ್ರಾಕೃತಿಕವಾಗಿ ಹರಿಯುತ್ತಿರುವ ತೊರೆಯೊಂದೇ ಇಲ್ಲಿಗೆ ನೀರಿನ ಮೂಲ. ದೇವಾಲಯದ ಬಳಿಯೇ ಈ ಜಲಧಾರೆ ಸುಮಾರು ೧೫ ಅಡಿ ಎತ್ತರದಿಂದ ಧುಮುಕಿ ನಂತರ ಸ್ವಲ್ಪ ಮುಂದಕ್ಕೆ ಹರಿದು ದೊಡ್ಡ ಜಲಧಾರೆಯಾಗಿ ೧೨೦ ಅಡಿ ಆಳಕ್ಕೆ ಬೀಳುತ್ತದೆ.
ಆದರೆ ತೊರೆಯ ಪ್ರಾಕೃತಿಕ ಹರಿವನ್ನು ಈಗ ಸಂಪೂರ್ಣವಾಗಿ ಮರೆಮಾಚಲಾಗಿದೆ. ಅಗಲವಾಗಿ ಹರಿಯುತ್ತಿದ್ದ ತೊರೆಯನ್ನು ಇಕ್ಕೆಲಗಳಲ್ಲಿ ಮಣ್ಣು ಮುಚ್ಚಿ ಸಣ್ಣ ಮೋರಿಯ ರೂಪಕ್ಕೆ ತರಲಾಗಿದೆ. ತೊರೆ ಈಗ ಮೋರಿಯಾಗಿ ಬದಲಾಗಿದೆ. ಇಷ್ಟೇ ಅಲ್ಲದೆ, ಮೋರಿಯನ್ನೂ ಮತ್ತು ಮೊದಲು ತೊರೆಯಾಗಿದ್ದ ಜಾಗವನ್ನು ಈಗ ಸಿಮೆಂಟ್ ಹಾಕಿ ಪೂರ್ಣವಾಗಿ ಮುಚ್ಚಲಾಗಿದ್ದು, ಭೂಮಿಯ ಕೆಳಗಿನಿಂದ ನೀರು ಹರಿದುಬರುವಂತೆ ಭ್ರಮೆಯನ್ನು ಸೃಷ್ಟಿಸಲಾಗಿದೆ.
ಮೊದಲ ಜಲಧಾರೆಯ ಮೇಲ್ಭಾಗಕ್ಕೆ ತೆರಳಿದರೆ ತೊರೆಯ ಜಾಡೇ ಕಾಣಬರುವುದಿಲ್ಲ. ಎಲ್ಲೆಡೆ ಕಾಂಕ್ರೀಟ್ ಹಾಕಲಾಗಿದೆ. ಈ ಕಾಂಕ್ರೀಟ್-ನ ಅಡಿಯಲ್ಲಿರುವ ಮೋರಿಯಲ್ಲೇ ನೀರು ಹರಿದುಬರುತ್ತದೆ. ನೀರು ಬೀಳುವಲ್ಲಿ ಭಕ್ತಾದಿಗಳಿಗೆ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಏರ್ಪಾಟು ಮಾಡುವ ಸಲುವಾಗಿ, ಮೋರಿಯನ್ನು ಪೈಪಿನ ಮೂಲಕ ಎರಡು ಕವಲುಗಳಲ್ಲಿ ಹರಿಯುವಂತೆ ಮಾಡಲಾಗಿದೆ, ಇದ್ಯಾವುದೂ ಕಣ್ಣಿಗೆ ಕಾಣುವುದಿಲ್ಲ. ಎಲ್ಲವೂ ಕಾಂಕ್ರೀಟ್ ಮೇಲ್ಮೈಯ ಕೆಳಗೆ ಅಡಗಿಕೊಂಡಿವೆ. ಮೂಲ ಸ್ವರೂಪವನ್ನು ಮಾನವ ಯಾವ ಮಟ್ಟಕ್ಕೆ ಹಾಳು ಮಾಡುತ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ.
ಅಕ್ಕಪಕ್ಕದಲ್ಲಿರುವ ಬೆಟ್ಟಗಳ ರಚೆನೆ ಆಕರ್ಷಣೀಯ. ವಿಹಾರಕ್ಕೆ ಯೋಗ್ಯ ಸ್ಥಳ. ಈ ಬೆಟ್ಟಗಳ ಮೇಲೆ ಪಾಳುಬಿದ್ದ ಕೋಟೆಯೊಂದಿದ್ದು ಅದನ್ನು ಕದಂಬರಾಯನ ಕೋಟೆ ಎಂದು ಕರೆಯಲಾಗುತ್ತದೆ. ಮುಸ್ಸಂಜೆಯಾಗಿದ್ದರಿಂದ ಕೋಟೆಯನ್ನು ಹುಡುಕಲು ನಾನು ತೆರಳಲಿಲ್ಲ.
ಎರಡನೇ ಜಲಧಾರೆ ಧುಮುಕುವಲ್ಲಿ ಈಗ ವಿಶಾಲ ಕೆರೆಯ ರಚನೆಯನ್ನು ಮಾಡಲಾಗಿದೆ. ಮೊದಲು ನೀರು ಹಾಗೆ ಕೆಳಗೆ ಹರಿದುಹೋಗುತ್ತಿತ್ತು. ಪ್ರವಾಸಿಗರಿಗೆ ಜಲಧಾರೆಯ ನೀರಿಗೆ ತಲೆಕೊಡಲು ಉತ್ತಮ ತಾಣವಾಗಿತ್ತು. ಆದರೆ ಈಗ ಮೊದಲ ಜಲಧಾರೆಯಲ್ಲಿ ಸ್ನಾನಕ್ಕೆ ಏರ್ಪಾಟು ಮಾಡಿರುವುದರಿಂದ, ಈ ಆಕರ್ಷಕ ಎರಡನೇ ಜಲಧಾರೆಯ ಮುಂದೆ ವಿಶಾಲ ಕೃತಕ ಕೆರೆಯನ್ನು ಸೃಷ್ಟಿಸಲಾಗಿದೆ.
ಇಲ್ಲಿ ರಜಾದಿನಗಳಲ್ಲಿ ಯಾವಗಲೂ ಜನಜಂಗುಳಿ. ವಾರದ ದಿನಗಳಲ್ಲಿ ತೆರಳಿದರೆ ಶಾಂತ ಪರಿಸರದಲ್ಲಿ ನೆಮ್ಮದಿಯಾಗಿ ಸಮಯ ಕಳೆಯಬಹುದು.
ಭಾನುವಾರ, ಮೇ 29, 2011
ಲಕ್ಷ್ಮೀನರಸಿಂಹ ದೇವಾಲಯ - ವಿಘ್ನಸಂತೆ

ವಿಘ್ನಸಂತೆಯ ಲಕ್ಷ್ಮೀ ನರಸಿಂಹ ದೇವಾಲಯದ ಅರ್ಚಕ ವಾಸವಿರುವುದು ೩ ಕಿಮಿ ದೂರವಿರುವ ಇನ್ನೊಂದು ಹಳ್ಳಿಯಲ್ಲಿ. ಅಲ್ಲಿ ವಿಚಾರಿಸಿದಾಗ ಅವರು ಕೆಲವೊಂದು ದಿನಗಳ ಮಟ್ಟಿಗೆ ಎಲ್ಲೋ ತೆರಳಿರುವುದಾಗಿ ತಿಳಿದುಬಂತು. ಬೀಗದಕೈ ಬಗ್ಗೆ ವಿಚಾರಿಸಿದರೆ ಯಾರಿಗೂ ಏನೂ ಗೊತ್ತಿಲ್ಲ. ಅದಾಗಲೇ ಸಮಯ ಸಂಜೆ ೬.೧೫ ಆಗಿತ್ತು. ಇನ್ನು ಸಮಯ ವ್ಯರ್ಥ ಮಾಡುವುದು ಬೇಡವೆಂದು ವಿಘ್ನಸಂತೆಯತ್ತ ತೆರಳಿದೆ.

ಸಣ್ಣ ದಿಬ್ಬದ ಮೇಲೆ ಸ್ಥಿಥಗೊಂಡಿರುವ ಈ ತ್ರಿಕೂಟ ದೇವಾಲಯವನ್ನು ಹೊಯ್ಸಳರು ಇಸವಿ ೧೨೮೬ರಲ್ಲಿ ನಿರ್ಮಿಸಿದ್ದಾರೆ. ದೇವಾಲಯದ ಹೊರಗೋಡೆಯಲ್ಲಿ ಪ್ರತಿ ಕಲ್ಲಿನ ಕಂಬಗಳ ನಡುವೆ ಕಮಲವೊಂದನ್ನು ಕೆತ್ತಲಾಗಿದ್ದು ಬಿಟ್ಟರೆ ಬೇರೆ ಯಾವ ಭಿತ್ತಿಚಿತ್ರಗಳೂ ಇಲ್ಲ. ಪ್ರಮುಖ ಗರ್ಭಗುಡಿಯ ಮೇಲಿನ ಗೋಪುರ ಮಾತ್ರ ಉಳಿದುಕೊಂಡಿದೆ. ಗೋಪುರವನ್ನು ಮೂರು ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೇಲೊಂದು ಪದ್ಮವನ್ನಿರಿಸಿ ಅದರ ಮೇಲೆ ಕಲಶವನ್ನಿರಿಸಲಾಗಿದೆ.

ದೇವಾಲಯದ ಮೇಲ್ಛಾವಣಿಯ ಸುತ್ತಲೂ ಕೆತ್ತನೆಯಿದೆ. ಇವಕ್ಕೆ ’ಕೈಪಿಡಿ’ ಎನ್ನಲಾಗುತ್ತದೆ. ಹೆಚ್ಚಿನ ಹೊಯ್ಸಳ ದೇವಾಲಯಗಳಲ್ಲಿ ಕೈಪಿಡಿಯಿದ್ದು ಅವುಗಳ ಕೆತ್ತನೆಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. ಕೈಪಿಡಿ ಇದ್ದರೆ ದೇವಾಲಯಕ್ಕೊಂದು ಮುಕುಟವಿದ್ದಂತೆ ಎಂದು ನಂಬಲಾಗುತ್ತದೆ.

ಗೋಪುರದ ಮೂರು ಬದಿಯಲ್ಲಿ (ಮುಂಭಾಗ ಹೊರತುಪಡಿಸಿ) ಸಣ್ಣ ಸಣ್ಣ ಕಲಾತ್ಮಕ ಕೆತ್ತನೆಗಳಿವೆ. ಮೇಲ್ನೋಟಕ್ಕೆ ಎಲ್ಲಾ ಬದಿಯಲ್ಲೂ ಒಂದೇ ತರಹದ ಕೆತ್ತನೆಗಳಿವೆ ಎಂದೆನಿಸಿದರೂ ಸೂಕ್ಷ್ಮವಾಗಿ ಪ್ರಮುಖ ಕೆತ್ತನೆಗಳನ್ನು ಗಮನಿಸಿದರೆ ಎಲ್ಲೂ ಪುನರಾವರ್ತನೆ ಕಂಡುಬರುವುದಿಲ್ಲ. ಅಷ್ಟೆತ್ತರದಲ್ಲಿರುವ ಈ ಕೆತ್ತನೆಗಳನ್ನು ಸರಿಯಾಗಿ ನೋಡುವುದು ಅಸಾಧ್ಯ. ಚೆನ್ನಾದ ಕ್ಯಾಮರಾ ಇದ್ದರೆ ಉತ್ತಮ ಚಿತ್ರಗಳನ್ನು ತೆಗೆಯಬಹುದು.


ದೇವಾಲಯವಿರುವ ದಿಬ್ಬಕ್ಕಿರುವ ನಾಲ್ಕಾರು ಮೆಟ್ಟಿಲುಗಳನ್ನೇರಿದ ಕೂಡಲೇ ಸ್ವಾಗತ ನೀಡುವುವು ಕುಳಿತುಕೊಂಡ ಭಂಗಿಯಲ್ಲಿರುವ ಎರಡು ಆನೆಗಳು. ಅದೇಕೋ ಈ ಕಲ್ಲಿನ ಆನೆಗಳು ಬಹಳ ಮುದ್ದಾಗಿ ಕಂಡವು.

ಅಪರೂಪದ ಮತ್ತು ಸರಳ ವಿನ್ಯಾಸದ ಎರಡು ಕಂಬಗಳ ಹೊರಚಾಚು ಮುಖಮಂಟಪವನ್ನು ದೇವಾಲಯವು ಹೊಂದಿದೆ. ಮುಖಮಂಟಪದ ಮೇಲ್ಛಾವಣಿಯ ಒಳಮೇಲ್ಮೈಯಲ್ಲಿ ಕಲಾತ್ಮಕ ಕೆತ್ತನೆಯನ್ನು ಕಾಣಬಹುದು. ದೇವಾಲಯದ ಪ್ರಮುಖ ದ್ವಾರವು ಐದು ತೋಳುಗಳನ್ನು ಹೊಂದಿದೆ.

ಈ ದೇವಾಲಯದಲ್ಲಿ ೩ ವಿಶೇಷತೆಗಳಿವೆ. ಪ್ರಮುಖ ದ್ವಾರದ ಮೇಲ್ಭಾಗದಲ್ಲಿ ಎಲ್ಲೆಡೆ ಇರುವಂತೆ ಗಜಲಕ್ಷ್ಮೀಯ ಕೆತ್ತನೆಯಿರದೆ ವೇಣುಗೋಪಾಲನ ಸುಂದರ ಕೆತ್ತನೆಯಿದೆ. ಇಕ್ಕೆಲಗಳಲ್ಲಿ ಗೊಲ್ಲರು, ಗೋಪಿಕಾ ಸ್ತ್ರೀಯರು ಮತ್ತು ಹಸುಗಳು ವೇಣುಗೋಪಾಲನಿಗೆ ನಮಸ್ಕರಿಸುವ ದೃಶ್ಯದ ಕೆತ್ತನೆಯಿದೆ.

ಎರಡನೇ ವಿಶೇಷತೆಯೇನೆಂದರೆ ದೇವಾಲಯದ ಪ್ರಾಮುಖ ದ್ವಾರದ ನೇರ ಮೇಲಕ್ಕೆ ಛಾವಣಿಯಲ್ಲಿರುವ ಕೈಪಿಡಿಯಲ್ಲಿ ನಾಟ್ಯಗಣಪತಿಯ ಸುಂದರ ಕೆತ್ತನೆಯಿದೆ. ನಾಟ್ಯಗಣೇಶನೂ ಆಗಿದ್ದು ಬಲಮುರಿಯೂ ಆಗಿರುವುದು ಇನ್ನೂ ವಿಶೇಷ. ಮೂರನೆಯದಾಗಿ ದೇವಾಲಯದ ಒಳಗಿರುವ ಲಕ್ಷ್ಮೀನರಸಿಂಹ ವಿಗ್ರಹ. ಲಕ್ಷ್ಮೀಯು ನರಸಿಂಹನ ತೊಡೆಯ ಮೇಲೆ ಆಸೀನಳಾಗಿದ್ದು, ಆಕೆಯ ಪಾದ ಕಮಲವೊಂದರ ಮೇಲಿದೆ. ಪಾದದ ಭಾರವನ್ನು ತಾಳುವಂತೆ ಕಮಲಕ್ಕೆ ಆನೆಯೊಂದು ತನ್ನ ಸೊಂಡಿಲನ್ನು ಆಧಾರವಾಗಿ ನೀಡಿರುವ ಸುಂದರ ಕೆತ್ತನೆ (ಈ ಮಾಹಿತಿ ಕೆಳಗೆ ನೀಡಿರುವ ಕೊಂಡಿಯಲ್ಲಿ ದೊರಕಿತು. ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ನನಗೆ ಈ ಸುಂದರ ಮೂರ್ತಿಯನ್ನು ನೋಡಲಾಗಲಿಲ್ಲ).

ದೇವಾಲಯದ ಒಳಭಾಗದ ರಚನೆಯನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದಾದಂತಹ ಸರಳ ವಿನ್ಯಾಸ ಈ ದೇವಾಲಯದ್ದು. ಎಲ್ಲಾ ಗರ್ಭಗುಡಿಗಳಿಗೂ ಸಾಮಾನ್ಯ ನವರಂಗವಿದ್ದು ಅಂತರಾಳ ಇದ್ದಂತೆ ಅನಿಸುವುದಿಲ್ಲ. ದೇವಾಲಯದ ಪ್ರಮುಖ ಗರ್ಭಗುಡಿಯಲ್ಲಿ ಚನ್ನಕೇಶವನ ವಿಗ್ರಹವಿದ್ದು, ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ಮೂರ್ತಿಗಳಿವೆ.
ಮಾಹಿತಿ: ಇಲ್ಲಿಂದ ಮತ್ತು ಇಲ್ಲಿಂದ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)










