ಸೋಮವಾರ, ನವೆಂಬರ್ 03, 2008

ಛಲಗಾರ ಅನಿಲ್ ಕುಂಬ್ಳೆ


ಭಾರತದ ಟೆಸ್ಟ್ ಕ್ರಿಕೆಟಿಗ ನಂಬರ್ ೧೯೨. ಇನ್ನೆಂದೂ ಈ ಮಹಾನ್ ಆಟಗಾರನನ್ನು ನಾವು ಭಾರತಕ್ಕಾಗಿ ಅಥವಾ ಕರ್ನಾಟಕಕ್ಕಾಗಿ ಆಡುವುದನ್ನು ಕಾಣೆವು. ನಿನ್ನೆ ನಿವೃತ್ತಿ ಘೋಷಿಸಿದ ಅನಿಲ್ ಕುಂಬ್ಳೆ, ಭಾರತ ಕಂಡ ಅಪ್ರತಿಮ ಸ್ಪಿನ್ ಬೌಲರ್. ಆ ಮಾಸಿದ ೧೯೨ ನಂಬರಿನ ಕ್ಯಾಪ್ ಇನ್ನು ಅನಿಲ್ ಮನೆಯಲ್ಲಿ ಗೌರವದ ಸ್ಥಾನ ಪಡೆದು ವಿಶ್ರಮಿಸಲಿದೆ. ೧೯೯೦ ಅಗೋಸ್ಟ್ ೯ ರಂದು ಮ್ಯಾಂಚೆಸ್ಟರ್-ನಲ್ಲಿ ತನ್ನ ಪ್ರಥಮ ಟೆಸ್ಟ್ ಪಂದ್ಯದ ಪ್ರಥಮ ದಿನದಿಂದ, ೨೦೦೮ ನವೆಂಬರ್ ೨ ರವರೆಗೆ ತನ್ನ ಕೊನೆಯ ಅಂದರೆ ೧೩೨ನೇ ಟೆಸ್ಟ್ ಪಂದ್ಯದ ಕೊನೆಯ ದಿನದವರೆಗೆ ಆ ೧೯೨ನೇ ಸಂಖ್ಯೆಯ ಕ್ಯಾಪ್-ನ್ನು ಹೆಮ್ಮೆಯಿಂದಲೇ ಧರಿಸಿ ದೇಶಕ್ಕಾಗಿ ಆಡಿದ ಛಲಗಾರ ಅನಿಲ್.

ನನ್ನ ಫೇವರಿಟ್ ಕ್ರಿಕೆಟಿಗ ಅಂದರೆ ಅನಿಲ್ ಕುಂಬ್ಳೆ ಮಾತ್ರ. ಕುಂಬ್ಳೆಯನ್ನು ಮೆಚ್ಚಲು ಹಲವಾರು ಕಾರಣಗಳಿವೆ. ಯಾವ ಸನ್ನಿವೇಶದಲ್ಲೂ ಬೌಲಿಂಗ್ ಮಾಡಲು ಅನಿಲ್ ತಯಾರು. ಎಷ್ಟೇ ಹೊತ್ತಿನ ತನಕ ಬೇಕಾದರೂ ಬೌಲ್ ಮಾಡಬಲ್ಲರು. ಈ ಪಿಚ್-ನಲ್ಲಿ ತನಗೆ ಯಾವುದೇ ವಿಕೆಟ್ ದೊರೆಯದು ಎಂದು ಗೊತ್ತಿದ್ದೂ, ಆ ಒಂದು ವಿಕೆಟಿಗಾಗಿ ದಿನಕ್ಕೆ ೪೦ರಷ್ಟು ಓವರುಗಳನ್ನು ಬೌಲ್ ಮಾಡಲು ಸದಾ ತಯಾರಿರುವ ಅಪ್ರತಿಮ ಎಸೆಗಾರ ಅನಿಲ್. ಒಂದು ವಿಕೆಟ್ ದೊರಕಿದ ಕೂಡಲೆ ವಿಶ್ರಮಿಸದೇ ಇನ್ನೊಂದನ್ನು ಯಾವ ರೀತಿಯಲ್ಲಿ ಗಳಿಸಬಹುದು ಎಂಬ ತಯಾರಿಯಲ್ಲಿ ಅನಿಲ್ ತನ್ನನ್ನು ತೊಡಗಿಸಿಕೊಳ್ಳುತ್ತಾರೆ. ತನ್ನ ಇತಿಮಿತಿಗಳ ಅರಿವು ಚೆನ್ನಾಗಿ ಇದ್ದಿದ್ದರಿಂದ ಅನಿಲ್ ೬೧೯ ಟೆಸ್ಟ್ ಹುದ್ದರಿಗಳನ್ನು ಗಳಿಸಲು ಸಾಧ್ಯವಾಯಿತು. ಕ್ರೀಡೆಯ ವಿದ್ಯಾರ್ಥಿ ಎಂದೇ ತನ್ನನ್ನು ಅನಿಲ್ ಪರಿಗಣಿಸಿದ್ದರಿಂದ ಕೊನೆಯವರೆಗೂ ಅನಿಲ್ ಹುದ್ದರಿಗಳನ್ನು ಗಳಿಸುತ್ತಲೇ ಇದ್ದರು. ಮೊದಲ ಹುದ್ದರಿ ಅಲನ್ ಲ್ಯಾಂಬ್ ಮತ್ತು ಕೊನೆಯ ಹುದ್ದರಿ ಮಿಷೆಲ್ ಜಾನ್ಸನ್.

೧೯೮೯ ನವೆಂಬರ್ ೧೮ರಂದು ಸಿಕಂದರಾಬಾದಿನಲ್ಲಿ ಹೈದರಾಬಾದ್ ವಿರುದ್ಧ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಅನಿಲ್ ಆಡಿದರು. ಪ್ರಥಮ ಬಲಿ ಅಬ್ದುಲ್ ಖಯ್ಯಾಮ್. ಮುಂದಿನ ವರ್ಷವೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅನಿಲ್, ಒಂದೇ ಟೆಸ್ಟ್ ಪಂದ್ಯದ ಬಳಿಕ ಕಡೆಗಣಿಸಲ್ಪಟ್ಟರು. ನಂತರ ೨ ವರ್ಷಗಳ ಕಾಲ ರಣಜಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮರಳಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬಳಿಕ ಅನಿಲ್ ತಿರುಗಿ ನೋಡಿಲ್ಲ.

ಈ ಮಧ್ಯೆ ಹಲವಾರು ಬಾಯಿಬಡುಕರು ಈತನಿಗೆ ಚೆಂಡನ್ನು ಸ್ಪಿನ್ ಮಾಡಲು ಬರುವುದಿಲ್ಲ, ಗೂಗ್ಲಿ ಎಸೆಯಲು ಬರುವುದಿಲ್ಲ, ಸ್ಪಿನ್ನರೋ ಅಥವಾ ವೇಗದ ಬೌಲರೋ ಎಂಬಿತ್ಯಾದಿ ಕುಹಕದ ಮಾತುಗಳನ್ನು ಹೇಳುತ್ತಾ ಇದ್ದರು. ವಿಷಾದದ ಮಾತೆಂದರೆ ಕುಂಬ್ಳೆ ಕೊನೆಯ ಪಂದ್ಯವನ್ನು ಆಡುತ್ತಿರುವಾಗಲೂ ಇವೇ ಮಾತುಗಳು ಕೇಳಿ ಬರುತ್ತಿದ್ದವು. ಕುಂಬ್ಳೆ ಏನನ್ನು ಸಾಧಿಸಿದ್ದಾರೆ ಮತ್ತು ತನ್ನ ಸಾಮರ್ಥ್ಯ ಮತ್ತು ತನ್ನಲ್ಲಿರುವ ಕೌಶಲ್ಯಗಳನ್ನು ಬಳಸಿ ಅದೆಷ್ಟು ಬಾರಿ ಭಾರತಕ್ಕೆ ವಿಜಯವನ್ನು ದೊರಕಿಸಿಕೊಟ್ಟಿದ್ದಾರೆ ಎಂಬುದು ಮುಖ್ಯವೇ ಹೊರತು ಸ್ಪಿನ್ ಮಾಡಲು ಬರುತ್ತೋ ಇಲ್ಲವೋ ಎಂಬುದಲ್ಲ. ವಿಕೆಟ್ ಗಳಿಸಲು ದೊಡ್ಡ ಮಟ್ಟದ ಸ್ಪಿನ್ ಬೇಕಾಗಿಲ್ಲ. ಚೆಂಡು ಸ್ವಲ್ಪವೇ ಸ್ಪಿನ್ ಆದರೂ ಸಾಕು, ಕೀಪರ್ ಅಥವಾ ಸ್ಲಿಪ್ ನಲ್ಲಿ ಕ್ಯಾಚ್ ಆಗುವ ಮೂಲಕ ವಿಕೆಟ್ ಸಿಗುತ್ತದೆ ಎಂಬ ಮಾತು ಕುಂಬ್ಳೆಗೆ ಗೊತ್ತಿತ್ತು. ಬ್ಯಾಟ್ಸ್ ಮನ್-ಗಳ ಮನಸ್ಸಿನಲ್ಲಿ ಸಂಶಯವನ್ನು ಉಂಟುಮಾಡುವುದೇ ಎಸೆಗಾರನ ಕರ್ತವ್ಯ. ಇದನ್ನು ಅನಿಲ್ ೧೮ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.

ಅನಿಲ್ ಎಸೆದ ಚೆಂಡುಗಳು ಪಿಚ್-ನಿಂದ ಭಾರೀ ಮಟ್ಟಕ್ಕೆ ನೆಗೆಯುತ್ತಿದ್ದರಿಂದ ’ಜಂಬೋ’ ಎಂಬ ಹೆಸರೂ ಕುಂಬ್ಳೆಗಿದೆ. ಈ ಹೆಸರನ್ನಿಟ್ಟವರು ನವಜೋತ್ ಸಿಂಗ್ ಸಿದ್ಧು. ಭುಜದ ಆಪರೇಷನ್ ಆದ ಮೇಲೆ ಕುಂಬ್ಳೆಯ ಚೆಂಡುಗಳು ಆ ನೆಗೆತವನ್ನು ಕಳಕೊಂಡರೂ ಹೆಸರು ಮಾತ್ರ ಉಳಿದಿದೆ. ೨೦೦೧ರಲ್ಲಿ ಭುಜದ ಆಪರೇಷನ್ ಬಳಿಕ ಮತ್ತೆ ವಿಕೆಟ್ ಕೀಳುವ ಕಾಯಕವನ್ನು ಅನಿಲ್ ಮುಂದುವರಿಸಿದರು. ಆದರೆ ಈಗ ಮೊದಲಿನಂತೇ ಚೆಂಡುಗಳಿಗೆ ಬೌನ್ಸ್ ನೀಡಲು ಅನಿಲ್ ಅಸಮರ್ಥರಾಗಿದ್ದರು. ಅದಾಗಲೇ ಸುಮಾರು ೩೦೦ ಹುದ್ದರಿಗಳನ್ನು ಅನಿಲ್ ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ್ದರು. ಕುಂಬ್ಳೆ ಬೌಲಿಂಗಿನಲ್ಲಿ ಬೌನ್ಸ್ ಇಲ್ಲದ ಕಾರಣ ಇನ್ನು ಮುಂದೆ ಅವರು ಮೊದಲಿನಷ್ಟು ಅಪಾಯಕಾರಿಯಾಗಲಾರರು ಎಂಬ ಮಾತುಗಳು ಅಲ್ಲಿಲ್ಲಿ ತೇಲಲಾರಂಭಿಸಿದವು. ಆದರೆ ಅನಿಲ್ ಅದ್ಯಾವ ಮಟ್ಟದ ಛಲಗಾರನೆಂದರೆ ತನ್ನ ಬೌಲಿಂಗಿನಲ್ಲಿ ಗೂಗ್ಲಿಯನ್ನು ಅಳವಡಿಸಿಕೊಂಡರು. ವೇಗವನ್ನು ನಿಯಂತ್ರಿಸುವ ಮೂಲಕ ಚೆಂಡನ್ನು ವಿವಿಧ ರೀತಿಯಲ್ಲಿ ಎಸೆಯಲು ಕಲಿತುಕೊಂಡರು. ಕ್ರೀಸನ್ನು ಕಲಾತ್ಮಕವಾಗಿ ಬಳಸಲು ಆರಂಭಿಸಿದರು. ಅತ್ತ ಹರ್ಭಜನ್ ಸಿಂಗ್, ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾವನ್ನು ಧೂಳೀಪಟ ಮಾಡುತ್ತಿರಬೇಕಾದರೆ ಇತ್ತ ಈ ಎಲ್ಲಾ ಪ್ರಯೋಗಗಳನ್ನು ಸದ್ದಿಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನಿಲ್ ಮಾಡುತ್ತಿದ್ದರು.

ಆ ನಂತರದ ವರ್ಷಗಳಲ್ಲಿ ಅನಿಲ್ ಭಾರತದ ಎರಡನೇ ಪ್ರಮುಖ ಸ್ಪಿನ್ನರ್ ಆಗಿ ಆಯ್ಕೆಯಾಗತೊಡಗಿದರು. ಸೌರವ್ ಗಾಂಗೂಲಿ ನಾಯಕರಾಗಿದ್ದರು. ಆಗ ಸೌರವ್ ಮತ್ತು ಅನಿಲ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಸೌರವ್ ಬೆಂಬಲ ಸಂಪೂರ್ಣವಾಗಿ ಹರ್ಭಜನ್ ಸಿಂಗಿಗೆ ಇದ್ದಿದ್ದರಿಂದ ಹರ್ಭಜನ್ ಫರ್ಸ್ಟ್ ಚಾಯ್ಸ್ ಸ್ಪಿನ್ನರ್. ಹರ್ಭಜನ್ ಕೂಡಾ ಚೆನ್ನಾಗಿ ಬೌಲ್ ಮಾಡುತ್ತಿದ್ದರು. ಆದರೆ ಅನಿಲ್ ಕೂಡಾ ಕಡಿಮೆಯಿರಲಿಲ್ಲ. ತನ್ನ ಹೊಸ ಎಸೆತಗಳನ್ನು ಯಶಸ್ವಿಯಾಗಿ ಬಳಸಿ ಹುದ್ದರಿ ಕೀಳುವ ಕಾಯಕ ಮುಂದುವರಿಸಿದ್ದರು. ಆದರೂ ಸೌರವ್-ಗೆ ಹರ್ಭಜನ್ ಮೇಲೆ ತುಂಬಾ ಪ್ರೀತಿ. ಒಂದೇ ಸ್ಪಿನ್ನರ್ ಆಡುವಲ್ಲಿ ಅನಿಲ್ ಹೊರಗುಳಿಯಬೇಕಾಗುತ್ತಿತ್ತು.

ತುಂಬಾ ಸ್ಪರ್ಧಾತ್ಮಕ ಕ್ರೀಡಾಳಾಗಿರುವ ಕುಂಬ್ಳೆಗೆ ತಂಡದಿಂದ ತಾನು ಹೊರಗಿರುವುದು ಇಷ್ಟವಿರುತ್ತಿರಲಿಲ್ಲ. ಸೌರವ್-ಗೆ ಕೂಡಾ ಅಂತಿಮ ಹನ್ನೊಂದರಲ್ಲಿ ನಿನ್ನ ಹೆಸರಿಲ್ಲ ಎಂದು ಕುಂಬ್ಳೆಗೆ ತಿಳಿಸಲು ಧೈರ್ಯ ಸಾಲುತ್ತಿರಲಿಲ್ಲ ಮತ್ತು ಧೈರ್ಯಕ್ಕಿಂತ ಹೆಚ್ಚಾಗಿ ಕುಂಬ್ಳೆಯ ಕಟು ಪ್ರಶ್ನೆಗಳಿಗೆ ಉತ್ತರ ನೀಡಲು ಗಂಗೂಲಿಗೆ ಸಾಧ್ಯವಾಗುತ್ತಿರಲಿಲ್ಲ. ಕುಂಬ್ಳೆಗೆ ತಿಳಿಹೇಳುವ ಜವಾಬ್ದಾರಿ ಆಗ ರಾಹುಲ್ ದ್ರಾವಿಡ್ ಮೇಲೆ ಬೀಳುತ್ತಿತ್ತು. ಸೌರವ್-ಗೆ ಗೆಳೆಯ ಮತ್ತು ಅನಿಲ್-ಗೆ ಆಪ್ತ ಗೆಳೆಯನಾಗಿದ್ದ ರಾಹುಲ್ ಈ ಮಧ್ಯವರ್ತಿ ಕೆಲಸವನ್ನು ಯಶಸ್ವಿಯಾಗಿಯೇ ನಿಭಾಯಿಸಿದರೆನ್ನಿ. ಗಾಂಗೂಲಿಯ ಪ್ರಕಾರ ಕುಂಬ್ಳೆಯ ಸಾಮರ್ಥ್ಯ ಕ್ಷೀಣಿಸುತ್ತಿದೆ ಮತ್ತು ಒಬ್ಬ ಯುವ ಸ್ಪಿನ್ನರಿಗೆ ಅವಕಾಶ ನೀಡಿದರೆ ಯಾವಾಗಲೂ ಉತ್ತಮ. ಈ ಶೀತಲ ಸಮರ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಕೆಲ ಕಾಲ ಗಾಂಗೂಲಿ ಮತ್ತು ಕುಂಬ್ಳೆ ನಡುವೆ ಮಾತುಕತೆ ಇರಲಿಲ್ಲ. ಆದರೆ ನಂತರ ಅನಿಲ್ ನಾಯಕನಾದಾಗ, ಪ್ರತಿ ಸಲವೂ ತಂಡದಲ್ಲಿ ಗಾಂಗೂಲಿ ಇರಲೇಬೇಕೆಂದು ಸಿಲೆಕ್ಷನ್ ಮೀಟಿಂಗುಗಳಲ್ಲಿ ಜಿದ್ದಿಗೆ ಬೀಳುತ್ತಿದ್ದರು. ಒಂದೆರಡು ಪಂದ್ಯಗಳಲ್ಲಿ ಗಾಂಗೂಲಿ ವಿಫಲರಾದಾಗ ಕರ್ನಲ್ (ವೆಂಗ್-ಸಾರ್ಕರ್) ನೇತೃತ್ವದ ಆಯ್ಕೆ ಸಮಿತಿ ಗಾಂಗೂಲಿಯನ್ನು ಕೈಬಿಡುವ ನಿರ್ಧಾರಕ್ಕೆ ಬಂದರೂ ಆತನನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಅನಿಲ್. ಇದೇ ಕಾರಣಕ್ಕೆ ಅನಿಲ್ ಇಷ್ಟವಾಗುವುದು. ಗಾಂಗೂಲಿಯಲ್ಲಿ ಇನ್ನೂ ಸಾಮರ್ಥ್ಯವಿದೆ ಎಂದು ಅವರ ಆಯ್ಕೆಯನ್ನು ಸಮರ್ಥಿಸಿ ಅವರನ್ನು ಆಡಿಸಿದ್ದು ಅನಿಲ್ ಹಿರಿಮೆ. ಈಗ ಗಾಂಗೂಲಿಗೆ ಅನಿಲ್ ಎಂದರೆ ಅಪಾರ ಗೌರವ.

೨೦೦೪ರ ಆಸ್ಟ್ರೇಲಿಯಾ ಪ್ರವಾಸ. ಮತ್ತೆ ಗಾಂಗೂಲಿ ನಾಯಕ. ಮೊದಲ ಟೆಸ್ಟ್ ಪಂದ್ಯದಲ್ಲಿ ಅನಿಲ್ ಇಲ್ಲ. ಈ ಪಂದ್ಯ ಆಡಿದ ಹರ್ಭಜನ್ ಗಾಯಗೊಂಡು ಭಾರತಕ್ಕೆ ಮರಳಿದರು. ಕಾಂಗರೂಗಳಿಗೆ ಕುಂಬ್ಳೆ ಅಂದರೆ ಅಗೌರವ. ಭಾರತದಲ್ಲಿ ಮಾತ್ರ ವಿಕೆಟ್ ಕೀಳುವ ಸಾಮರ್ಥ್ಯವುಳ್ಳವ ಎಂಬ ಭಾವನೆ. ಆದರೆ ಅನಿಲ್ ಈ ಬಾರಿ ಸಜ್ಜಾಗಿದ್ದರು. ಹರ್ಭಜನ್ ಗಾಯಾಳಾಗಿದ್ದು ಕುಂಬ್ಳೆಯ ಅದೃಷ್ಟ. ಮುಂದಿನ ೩ ಪಂದ್ಯಗಳನ್ನಾಡಿದ ಅನಿಲ್, ೨೪ ಹುದ್ದರಿಗಳನ್ನು ಕೆಡವಿ ಕಾಂಗರೂಗಳನ್ನು ಕಂಗೆಡಿಸಿ ಹೆಮ್ಮೆಯಿಂದ ಬೀಗುತ್ತಾ ಭಾರತಕ್ಕೆ ಮರಳಿದರು. ಕುಂಬ್ಳೆಯೇನೂ ಹೆದರಬೇಕಾದ ಬೌಲರ್ ಅಲ್ಲ, ಆತನನ್ನು ಸುಲಭದಲ್ಲಿ ನಿಭಾಯಿಸಿಕೊಳ್ಳಬಹುದು ಎಂದು ಅರಾಮವಾಗಿದ್ದ ಕಾಂಗರೂಗಳನ್ನು ತನ್ನ ಹೊಸ ರೀತಿಯ ಎಸೆತಗಳಿಂದ ಕಂಗಾಲಾಗಿ ಮಾಡಿದರು ಅನಿಲ್. ಈ ಸರಣಿಯ ಬಳಿಕ ಮತ್ತೆ ಕುಂಬ್ಳೆ ಫರ್ಸ್ಟ್ ಚಾಯ್ಸ್ ಸ್ಪಿನ್ನರ್ ಆದರು. ಮಾನಸಿಕವಾಗಿ ಕುಂಬ್ಳೆ ತುಂಬಾ ಗಟ್ಟಿಗ. ಈ ಆಸ್ಟ್ರೇಲಿಯಾ ಪ್ರವಾಸ ಅವರ ಜೀವನದ ಶ್ರೇಷ್ಠ ನಿರ್ವಹಣೆಗಳಲ್ಲೊಂದು.

ಸಚಿನ್ ತೆಂಡೂಲ್ಕರ್-ನಂತೆ ಅನಿಲ್ ಹುಟ್ಟಾ ಪ್ರತಿಭಾವಂತ ಕ್ರಿಕೆಟಿಗನಲ್ಲ. ಕಠಿಣ ಪರಿಶ್ರಮದಿಂದ ಯಶಸ್ಸನ್ನು ಕಂಡುಕೊಂಡವರ ಸಾಲಿಗೆ ಅನಿಲ್ ಸೇರುತ್ತಾರೆ. ಮಾಮೂಲಿ ಲೆಗ್ ಸ್ಪಿನ್ ಗಿಂತ ಸ್ವಲ್ಪ ವಿಭಿನ್ನ ಬೌಲರ್ ಆಗಿರುವ ಅನಿಲ್, ಅಗಾಗ ತನ್ನ ಬೌಲಿಂಗನ್ನು ಸುಧಾರಿಸಿಕೊಳ್ಳಬೇಕಿತ್ತು. ಕೇವಲ ಬೌನ್ಸ್ ಮೇಲೆ ನಿರ್ಭರರಾಗಿರುವಂತಿರಲಿಲ್ಲ. ಆಪರೇಷನ್ ಆದ ಮೇಲಂತೂ ಸತತ ಪರಿಶ್ರಮದಿಂದ ಭಾರತಕ್ಕೆ ಆಡಲು ಅರ್ಹನೆನಿಸಿಕೊಳ್ಳುವಷ್ಟು ಮಟ್ಟಕ್ಕೆ ತನ್ನ ಬೌಲಿಂಗನ್ನು ಕುಂಬ್ಳೆ ಸುಧಾರಿಸಿಕೊಳ್ಳುತ್ತಿದ್ದರು. ಇವರ ಎಸೆತಗಳಲ್ಲಿರುವುದು ಸಣ್ಣ ಮಟ್ಟದ ಬದಲಾವಣೆಗಳು. ಈ ಸಣ್ಣ ಬದಲಾವಣೆಗಳಿಗಾಗಿ ಅನಿಲ್ ಬಹಳ ಶ್ರಮಪಟ್ಟಿದ್ದಾರೆ. ಅನಿಲ್ ಪಟ್ಟಿರುವ ಶ್ರಮದ ಬಗ್ಗೆ ನಾನಿಷ್ಟು ಏಕೆ ಹೇಳುತ್ತಿದ್ದೇನೆಂದರೆ, ಇವರ ಅರ್ಧದಷ್ಟು ಪರಿಶ್ರಮವನ್ನು ಸಚಿನ್ ಮಾಡಿದ್ದರೂ, ಇದುವರೆಗೆ ಸಚಿನ್ ೬೦ರಷ್ಟು ಟೆಸ್ಟ್ ಶತಕಗಳನ್ನು ಗಳಿಸಿಯಾಗಿರುತ್ತಿತ್ತು. ಹೀಗಿರುವಾಗ ಅನಿಲ್ ಪಟ್ಟಿರುವ ಶ್ರಮ ಅದ್ಯಾವ ಮಟ್ಟದ್ದು ಎನ್ನುವುದು ತಿಳಿಯುತ್ತದೆ. ಪ್ರತಿಭೆಯಿದ್ದವರಿಗೆ ಹೆಚ್ಚು ಪರಿಶ್ರಮದ ಅಗತ್ಯವಿರುವುದಿಲ್ಲ! ಆದರೆ ಪ್ರತಿಭೆಯಿಲ್ಲದವರಿಗೆ ಪರಿಶ್ರಮವೇ ಸಂಜೀವಿನಿ.

ದವಡೆಗೆ ಪೆಟ್ಟು ಬಿದ್ದರೂ, ಬೆರಳುಗಳಿಗೆ ಪೆಟ್ಟು ಬಿದ್ದರೂ ಬೌಲಿಂಗ್ ಮಾಡಲು ಹಿಂಜರಿಯದ ಧೀರ ಅನಿಲ್ ಕುಂಬ್ಳೆ. ಎಲ್ಲಾ ಬೌಲರುಗಳು ದಣಿದು ಸುಸ್ತಾಗಿರುವಾಗ, ಯಾರಿಗೆ ಚೆಂಡು ನೀಡಲಿ ಎಂದು ನಾಯಕ ಚಿಂತಿಸುತ್ತಿರುವಾಗ ಮುಂದೆ ಬರುವ ಬೌಲರ್ ಅನಿಲ್. ದಣಿವು ಮತ್ತು ಸುಲಭದಲ್ಲಿ ಬಿಟ್ಟುಕೊಡುವುದು ಅನಿಲ್ ಕುಂಬ್ಳೆಗೆ ಗೊತ್ತಿರದ ವಿಷಯಗಳು. ಎದುರಾಳಿ ತಂಡದ ಗೆಲುವು ನಿಶ್ಚಿತವಾಗಿದ್ದರೂ ಇನ್ನೊಂದು ಹುದ್ದರಿ ಬೀಳಿಸಿ ಗೆಲುವಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುವ ಅಪೂರ್ವ ಮನೋಭಾವನೆಯುಳ್ಳ ಆಟಗಾರ ಅನಿಲ್. ಅದಕ್ಕೇ ಕುಂಬ್ಳೆ ಇಷ್ಟವಾಗುವುದು.

ಅನಿಲ್ ಕುಂಬ್ಳೆ ೧೮ ವರ್ಷಗಳ ಕಾಲ ೧೩೨ ಟೆಸ್ಟ್ ಪಂದ್ಯಗಳಲ್ಲಿ ಮತ್ತು ೨೭೧ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ದೇಶದ ಮತ್ತು ತನ್ನ ಗೌರವಕ್ಕೆ ಕಿಂಚಿತ್ತೂ ಹಾನಿಯುಂಟಾಗದಂತೆ ನಡೆದುಕೊಂಡಿದ್ದಾರೆ. ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ತಂಡವನ್ನು ನಡೆಸಿದ ರೀತಿ ಪ್ರಶಂಸಾರ್ಹ. ಕ್ರಿಕೆಟ್ ಬಿಟ್ಟು ಇತರ ವಿಷಯಗಳಿಂದ ಎರಡು ತಂಡಗಳ ನಡುವೆ ಬಿಕ್ಕಟ್ಟು ಉಂಟಾದಾಗ ನಾಯಕನಾಗಿ ಸರಿಯಾದ ಸಮಯದಲ್ಲಿ ಸರಿಯಾದ ಮಾತುಗಳನ್ನಾಡಿ ತಂಡದ ಮತ್ತು ದೇಶದ ಗೌರವವನ್ನು ಉಳಿಸಿದ್ದು ಅನಿಲ್ ಕುಂಬ್ಳೆಯ ಸಮರ್ಥ ನಾಯಕತ್ವಕ್ಕೆ ಸಾಕ್ಷಿ. ’ಓನ್ಲೀ ಒನ್ ಟೀಮ್ ಪ್ಲೇಯ್ಡ್ ವಿಥಿನ್ ದ ಸ್ಪಿರಿಟ್ ಆಫ್ ದ ಗೇಮ್’ ಎಂಬ ಕುಂಬ್ಳೆಯ ಒಂದು ವಾಕ್ಯ ಇಡೀ ಆಸ್ಟ್ರೇಲಿಯಾವನ್ನೇ ನಿದ್ರೆಯಿಂದ ಎಚ್ಚರಿಸಿತು. ತಮ್ಮ ತಂಡವೆಂದರೆ ಹೆಮ್ಮೆಯಿಂದ ಬೀಗುತ್ತಿದ್ದ ಆಸ್ಟ್ರೇಲಿಯಾದ ಜನರು ಕುಂಬ್ಳೆಯ ಈ ಮಾತಿನ ಬಳಿಕ ತಮ್ಮ ತಂಡದ ನಡತೆಯನ್ನು ಖಂಡಿಸತೊಡಗಿದರು. ಕುಂಬ್ಳೆಯಂತಹ ಹೆಚ್ಚು ಮಾತನಾಡದ ದಿಗ್ಗಜನಿಂದ ಈ ಮಾತನ್ನು ಕೇಳಿ ಕಾಂಗರೂ ಆಟಗಾರರೇ ಥಂಡಾ ಹೊಡೆದುಬಿಟ್ಟರು. ಆ ಸನ್ನಿವೇಶಗಳನ್ನು ಅನಿಲ್ ನಿಭಾಯಿಸಿದ ರೀತಿಯನ್ನು ಮೆಚ್ಚಬೇಕು. ೨೦೦೪ರ ಪ್ರವಾಸದಲ್ಲಿ ೪೦೦ನೇ ವಿಕೆಟ್ ಪಡೆದಿದ್ದರೆ ೨೦೦೭ರ ಪ್ರವಾಸದಲ್ಲಿ ೬೦೦ನೇ ವಿಕೆಟ್ ಪಡೆದು ಸತತ ೨ನೇ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಂಬ್ಳೆ ಯಶಸ್ವಿಯಾಗಿ ಹಿಂತಿರುಗಿದರು.

ಅನಿಲ್ ಬೌಲಿಂಗಿನಲ್ಲಿ ಇಲ್ಲದಿರುವುದು ಬಹಳವಿದೆ. ಆದರೆ ತನ್ನ ಬೌಲಿಂಗಿನಲ್ಲಿ ಇರುವುದನ್ನು ಬಳಸಿಕೊಂಡೇ ಭಾರತಕ್ಕೆ ಹೆಚ್ಚಿನ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ವಿಜಯದ ರೂವಾರಿ ಅನಿಲ್. ಕ್ರಿಕೆಟ್ ಮೈದಾನದಲ್ಲಿ ವ್ಯಾಘ್ರನಂತೆ ಇರುವ ಅನಿಲ್, ಹೊರಗಡೆ ಅಷ್ಟೇ ಸೌಮ್ಯ. ಕುಂಬ್ಳೆಗಿರುವ ’ವರ್ಕ್ ಎಥಿಕ್’ ಭಾರತ ತಂಡದಲ್ಲಿ ಇನ್ಯಾರಿಗೂ ಇಲ್ಲ. ಎಲ್ಲರಿಗೂ ಇದ್ದರೆ ಭಾರತ ಬಹಳ ಮೊದಲೇ ಉತ್ತಮ ತಂಡವಾಗಿರುತ್ತಿತ್ತು.

ಇನ್ನು ಮುಂದೆ ನನ್ನ ನೆಚ್ಚಿನ ಆಟಗಾರನನ್ನು ಭಾರತಕ್ಕಾಗಿ ಆಡುವುದನ್ನು ಕಾಣಲಾರೆ ಎಂಬ ವಿಷಾದದ ಭಾವನೆಯೊಂದಿಗೆ ಕುಂಬ್ಳೆಯ ಕೊನೆಯ ೪ ಓವರುಗಳನ್ನು ನೋಡುತ್ತಿದ್ದೆ. ೧೮ ವರ್ಷಗಳ ಕಾಲ ಇದ್ದ ಅತಿಥಿ ಈಗ ಒಮ್ಮೆಲೇ ನಿರ್ಗಮಿಸುವಂತೆ ಭಾಸವಾಗುತ್ತಿತ್ತು. ನನಗರಿವಿಲ್ಲದಂತೆ ಕಣ್ಣುಗಳು ತೇವವಾಗಿದ್ದವು.

ಒಳ್ಳೆದಾಗಲಿ, ಅನಿಲ್.

ಬುಧವಾರ, ಅಕ್ಟೋಬರ್ 22, 2008

ರಾಜ್ಯ ಮಟ್ಟದ ಚಾರಣ 2008 - ಉಡುಪಿ ಯೂತ್ ಹಾಸ್ಟೆಲ್

ಉಡುಪಿ ಯೂತ್ ಹಾಸ್ಟೆಲ್ 2008 ನವೆಂಬರ್ 13, 14, 15, ಮತ್ತು 16ರಂದು ರಾಜ್ಯ ಮಟ್ಟದ ಚಾರಣ ಕಾರ್ಯಕ್ರಮವನ್ನು ಆಯೋಜಿಸಿದೆ.

ಚಾರಣ ಹಾದಿಯ ವಿವರಗಳು ಈ ಕೆಳಗಿನಂತಿವೆ.

ನವೆಂಬರ್ 13: ಮಧ್ಯಾಹ್ನ ೩ ಗಂಟೆಯ ಬಳಿಕ ಬೇಸ್ ಕ್ಯಾಂಪ್-ಗೆ (ಮಾವಿನಕಾರು ಅಥವಾ ಬಾವುಡಿ) ಆಗಮನ. ಸಂಜೆಗೆ ಚಾರಣ ಹಾದಿಯ ಮತ್ತು ಅಲ್ಲಿನ ಸ್ಥಳಗಳ ಬಗ್ಗೆ ಮಾಹಿತಿ ಹಾಗೂ ಪರಿಚಯ, ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಒಂದೆರಡು ಮಾತು.

ನವೆಂಬರ್ 14: ಮಾವಿನಕಾರಿನಲ್ಲಿ ಬೇಸ್ ಕ್ಯಾಂಪ್ ಆದರೆ ಅಲ್ಲಿಂದ ಬಾವುಡಿಗೆ ಚಾರಣ. ನಂತರ ಬಾವುಡಿ ಜಲಧಾರೆಗೆ ಚಾರಣ. ಜಲಧಾರೆಯಿಂದ ಬಾವುಡಿಗೆ ಹಿಂತಿರುಗಿ ನಂತರ ಮೇಗಣಿಗೆ ಚಾರಣ. (ಸುಮಾರು 15 ಕಿ.ಮಿ)

ನವೆಂಬರ್ 15: ಮೇಗಣಿಯಿಂದ ಗಾಳಿಗುಡ್ಡ, ಹದ್ದುಬರೆ ಮತ್ತು ದೇವಕುಂದ ಬೆಟ್ಟಗಳಿಗೆ ಚಾರಣ. (ಸುಮಾರು 10 ಕಿ.ಮಿ)

ನವೆಂಬರ್ 16: ಮೇಗಣಿಯಿಂದ ಹುಲ್ಲುಕುಡಿಕೆಗೆ ಚಾರಣ. ದಾರಿಯಲ್ಲಿ ಹರಿಗೆ ಜಲಧಾರೆಗೆ ಭೇಟಿ. (ಸುಮಾರು 9 ಕಿ.ಮಿ.) ಹುಲ್ಲುಕುಡಿಕೆಯಲ್ಲಿ ಸಣ್ಣ ಬೀಳ್ಕೊಡುಗೆ ಸಮಾರಂಭ.

ಈ ಚಾರಣ ಕಾರ್ಯಕ್ರಮದ ವೈಶಿಷ್ಟ್ಯವೇನೆಂದರೆ ಇದೇ ಕೊನೆಯ ಬಾರಿಗೆ ಈ ಸ್ಥಳಗಳನ್ನು ನೋಡುವ ಅವಕಾಶ. ಮೇಲೆ ತಿಳಿಸಿರುವ ಎಲ್ಲಾ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಪಟ್ಟಾ ಜಮೀನು ಎಲ್ಲವನ್ನು ಉದ್ಯಮಿಯೊಬ್ಬರು ಖರೀದಿಸಿರುವುದರಿಂದ ಅವರು ಇನ್ನೊಮ್ಮೆ ಇಲ್ಲಿಗೆ ಬರಲು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಸಿಯೇ, ಈ ಚಾರಣ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಅನುಮತಿ ನೀಡಿದ್ದಾರೆ.

ಆಸಕ್ತಿಯುಳ್ಳವರು 9845937556, 9945414193 ಮತ್ತು 9342985704 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ಭಾನುವಾರ, ಅಕ್ಟೋಬರ್ 19, 2008

ಜಲಧಾರೆ - ದೇವಸ್ಥಾನ


ಹಿಡ್ಲುಮನೆಯಲ್ಲಿ ಗದ್ದೆಗಳನ್ನು ದಾಟಿ ಸಿಗುವ ತೊರೆಯೊಂದರ ಜಾಡನ್ನು ಹಿಡಿದು ನಡೆದರೆ ಒಂದರ ಬಳಿಕ ಒಂದರಂತೆ ಹಿಡ್ಲುಮನೆ ಜಲಧಾರೆಯ ೭ ಹಂತಗಳು. ೩ನೇ ಹಂತ ೪೦ ಅಡಿಯಷ್ಟು ಎತ್ತರವಿದೆ ಮತ್ತು ಪ್ರಮುಖ ಹಂತವಾದ ೭ನೇ ಹಂತವು ೮೦ ಅಡಿಯಷ್ಟು ಎತ್ತರವಿದೆ. ಉಳಿದ ಹಂತಗಳು ಹೆಚ್ಚೆಂದರೆ ೧೫-೨೦ ಅಡಿಯಷ್ಟು ಎತ್ತರವಿರಬಹುದು.


೨೦೦೪ ಮೇ ತಿಂಗಳಲ್ಲಿ ರಮೇಶ್ ಕಾಮತ್-ರೊಂದಿಗೆ ಹಿಡ್ಲುಮನೆ ಜಲಧಾರೆಗೆ ತೆರಳಿದ್ದೆ. ಕೆಲವೊಂದೆಡೆ ರಸ್ತೆ ನನ್ನ ಯಮಾಹಾವೇ ಒದ್ದಾಡುವಷ್ಟು ಹದಗೆಟ್ಟಿತ್ತು. ಮೇ ತಿಂಗಳಾದ್ದರಿಂದ ನೀರಿನ ಪ್ರಮಾಣ ಬಹಳ ಕಡಿಮೆಯಿತ್ತು. ಅಕ್ಟೋಬರ್ ೨೦೦೫ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮದ ಜವಾಬ್ದಾರಿಯನ್ನು ದಿನೇಶ್ ಹೊಳ್ಳ ನನ್ನ ಮೇಲೆ ಹೊರಿಸಿದ್ದರು. ಹಿಡ್ಲುಮನೆಗೆ ಮೇ ತಿಂಗಳಲ್ಲಿ ತೆರಳಿದಾಗಲೇ ರಸ್ತೆ ಅಷ್ಟು ಕೆಟ್ಟಿರುವಾಗ ಈಗ ಅಕ್ಟೋಬರ್ ತಿಂಗಳಲ್ಲಿ ಹೇಗಿರಬಹುದೋ ಎಂಬ ಕಳವಳ ಶುರುವಾಗಿ ಬೇರೆ ದಾರಿಯಿದೆಯೇ ಎಂದು ನೋಡಿ ಬರೋಣವೆಂದು ಹಿಡ್ಲುಮನೆಗೆ ಹೊರಟೆ.


ಈ ಬಾರಿ ಅನಿಲ್ ನನ್ನೊಂದಿಗಿದ್ದು, ನಾವಿಬ್ಬರು ಬೇರೊಂದು ದಾರಿಯಲ್ಲಿ ಹಿಡ್ಲುಮನೆಯತ್ತ ಹೊರಟೆವು. ಈ ದಾರಿ ಚೆನ್ನಾಗಿದ್ದರಿಂದ ಒಂದು ವಾರದ ಬಳಿಕ ಬರುವಾಗ ಇದೇ ದಾರಿಯಲ್ಲಿ ಬಂದರಾಯಿತು ಎಂದು ಹಿಡ್ಲುಮನೆಯತ್ತ ಮುಂದುವರಿದೆವು. ಹಿಡ್ಲುಮನೆಯ ವೈಶಿಷ್ಟ್ಯವೆಂದರೆ ಪ್ರಮುಖ ಹಂತದಿಂದ ಕೆಳಗಿನವರೆಗೆ (ಮೊದಲ ಹಂತದವರೆಗೆ) ನೀರು ಕರಿ ಕಲ್ಲಿನ ಪದರಗಳ ಮೇಲೇ ಹರಿದುಕೊಂಡು ಬರುತ್ತದೆ. ಮಧ್ಯದಲ್ಲೆಲ್ಲೂ ಮಣ್ಣಿರುವ ನೆಲವೇ ಇಲ್ಲ. ಇಷ್ಟೇ ಅಲ್ಲದೇ ನೀರಿನಲ್ಲೇ ನಡೆಯುತ್ತಾ ಸಲೀಸಾಗಿ ಮೇಲಕ್ಕೇರಬಹುದು. ಈ ಕಲ್ಲಿನ ಪದರಗಳ ಮೇಲಿನಿಂದ ಸತತವಾಗಿ ನೀರು ಹರಿಯುತ್ತಿದ್ದರೂ ಜಾರಿ ಬೀಳುವ ಸಂಭವವೇ ಇಲ್ಲ! ಎರಡೂ ಬದಿಯಲ್ಲಿ ದಟ್ಟ ಕಾಡು. ತಂಪು ನೀರಿನಲ್ಲೇ ಮೇಲೇರಬೇಕಾದ್ದರಿಂದ ಎರಡೂ ಪಾದಗಳು ’ಥಂಡಾ’ ಹೊಡೆಯಲು ಶುರುಮಾಡಿದ್ದವು. ೩ನೇ ಹಂತದ ಬಳಿ ಹಳ್ಳದಿಂದ ಬದಿಗೆ ಸರಿದು ಮೇಲೇರಬೇಕು.


ನಂತರದ ದೃಶ್ಯ ಬಹಳ ಸುಂದರ. ನಾಲ್ಕನೇ, ಐದನೇ ಮತ್ತು ಆರನೇ ಹಂತಗಳು, ಒಂದರ ಮೇಲೊಂದು, ನೀರಿನ ಸುಂದರ ಹರಿವಿನಿಂದ ಅಲಂಕೃತಗೊಂಡ ಮೆಟ್ಟಿಲುಗಳಂತೆ ಕಾಣುತ್ತಿದ್ದವು. ಇಷ್ಟೇ ಸಾಲದೆಂಬಂತೆ ಇಕ್ಕೆಲಗಳಲ್ಲಿ ಕಾಡಿನ ಹಸಿರ ತೋರಣ. ಮೇಲಿನಿಂದ ಕಾಡಿನ ಚಪ್ಪರ. ಈ ಹಂತಗಳನ್ನು ದಾಟಿ ನಾನು ಪ್ರಮುಖ ಹಂತದ ಬಳಿ ತಲುಪುವಷ್ಟರಲ್ಲಿ ಅನಿಲ್ ಅದಾಗಲೇ ಸ್ನಾನಕ್ಕಿಳಿದಿದ್ದ.


ಮುಂದಿನ ವಾರವೇ ಯೂತ್ ಹಾಸ್ಟೆಲ್ ತಂಡದೊಂದಿಗೆ ಮತ್ತೆ ಹಿಡ್ಲುಮನೆಯಲ್ಲಿದ್ದೆ. ಮೋಹನನ ’ಶಕ್ತಿ’ ದಾರಿಯಲ್ಲಿ ಇಳಿಜಾರೊಂದನ್ನು ಇಳಿದ ತಕ್ಷಣವೇ ಸ್ತಬ್ಧವಾಯಿತು. ಕತ್ತಲಾಗುತ್ತಿದ್ದರಿಂದ ಜಲಧಾರೆಯ ೩ನೇ ಹಂತದವರೆಗೆ ಮಾತ್ರ ತೆರಳಿದೆವು. ನಾವು ಹಿಂತಿರುಗುವಷ್ಟರಲ್ಲೇ ಮೋಹನ, ’ಶಕ್ತಿ’ಯನ್ನು ಇಳಿಜಾರನ್ನು ಹತ್ತಿಸುವ ವಿಫಲ ಪ್ರಯತ್ನ ಮಾಡುತ್ತಿದ್ದ. ಗಾಲಿಗಳು ಒದ್ದೆ ನೆಲದಲ್ಲಿ ಜಾರಿ ಹಿಂದಕ್ಕೆ ಬರುತ್ತಿದ್ದವು. ಅಚೀಚೆ ಬೆಳೆದಿದ್ದ ಗಿಡಗಳನ್ನು ತಂದು ಚಕ್ರದ ಕೆಳಗೆ ಇಟ್ಟು ಏನೇನೋ ಮಾಡಿ ಇಳಿಜಾರನ್ನು ಮೇಲೇರುವಂತೆ ಮಾಡಿದಾಗ ಸುಮಾರು ೪೦ ನಿಮಿಷಗಳು ಕಳೆದುಹೋದವು.


ಇಷ್ಟೆಲ್ಲಾ ಆಗುವಾಗ ನನ್ನ ಕ್ಯಾಮರಾಗಳಿದ್ದ ಬ್ಯಾಗ್ ಮತ್ತು ರೈನ್-ಕೋಟ್ ಇದ್ದ ಬ್ಯಾಗುಗಳನ್ನು ಅಲ್ಲೇ ಪೊದೆಯೊಂದರ ಬಳಿ ಇರಿಸಿದ್ದೆ. ಈಗ ನೋಡಿದರೆ ರೈನ್-ಕೋಟ್ ಇದ್ದ ಬ್ಯಾಗ್ ಮಾತ್ರ ಇತ್ತು. ೨ ಕ್ಯಾಮರಾಗಳಿದ್ದ ಬ್ಯಾಗ್ ಮಾಯ! ಆ ದಾರಿಯಾಗಿ ಒಬ್ಬ ಹಳ್ಳಿಗ ಹೋಗಿದ್ದನ್ನು ನಮ್ಮಲ್ಲಿ ಒಂದಿಬ್ಬರು ನೋಡಿದ್ದರು. ಆತನೇ ಒಯ್ದಿರಬೇಕೆಂದು ಎಲ್ಲರಿಗೂ ಖಚಿತವಾಗಿತ್ತು. ಈಗ ಕತ್ತಲಲ್ಲಿ ಆತನನ್ನು ಎಲ್ಲಿ ಹುಡುಕುವುದು? ’ಶಕ್ತಿ’ ಯನ್ನು ಆ ತೊಡಕಿನಿಂದ ದಾಟಿಸಿದೆವೆಂದು ಎಲ್ಲರೂ ಸಂತೋಷಪಡುತ್ತಿರಬೇಕಾದರೆ, ನನ್ನ ಕ್ಯಾಮರಾಗಳು ಕಳೆದುಹೋದ ಘಟನೆ. ಸ್ವಲ್ಪ ಮುಂದೆ ಹಳ್ಳಿಗರ ಗುಂಪೂಂದು ಕಾಣಿಸಿದಾಗ, ನಮ್ಮ ಸುಧೀರ್ ಕುಮಾರ್ ಅವರಲ್ಲಿ ಬ್ಯಾಗ್ ಕಳೆದುಹೋಗಿದ್ದರ ಬಗ್ಗೆ ತಿಳಿಸಿ, ನನ್ನ ಮನೆಯ ದೂರವಾಣಿ ಸಂಖ್ಯೆಯನ್ನು ಅವರಿಗೆ ನೀಡಿ, ಆ ದಾರಿಯಾಗಿ ಒಬ್ಬ ಹಳ್ಳಿಗ ಹೋದದ್ದನ್ನೆಲ್ಲಾ ಅವರಿಗೆ ತಿಳಿಸಿದರು.

ಇಲ್ಲಿ ನಮಗೆ ಸುಮಾರು ಒಂದು ಗಂಟೆ ಕಳೆದುಹೋಯಿತು. ಸಿಗಂದೂರಿನ ಹೋಟೇಲಿನ ಯಜಮಾನರೊಂದಿಗೆ ದೂರವಾಣಿಯಲ್ಲೇ ಮಾತನಾಡಿ ೨೭ ಚಾರಣಿಗರಿಗೆ ಆ ದಿನ ರಾತ್ರಿಯ ಊಟ ತಯಾರು ಇಡಲು ಸೂಚಿಸಿದ್ದೆ. ಅಂತೆಯೇ ದೇವಸ್ಥಾನದಲ್ಲಿ ತಂಗಲು ವ್ಯವಸ್ಥೆ ಮಾಡಲೂ ವಿನಂತಿಸಿದ್ದೆ. ಅವರದ್ದು ಒಂದೇ ವಿನಂತಿ. ರಾತ್ರಿ ೮ ಗಂಟೆಯ ಒಳಗೆ ಬಂದುಬಿಡಿ ಎಂದು. ನಮ್ಮ ಈಗಿನ ಪರಿಸ್ಥಿತಿ ನೋಡಿದರೆ ಅದು ಸಾಧ್ಯವೇ ಇರಲಿಲ್ಲ.

ಮುಂದೆ ಸಿಗುವ ತೊರೆಯ ಬಳಿ ಈಗ ಇದ್ದೆವು. ತೊರೆಯ ಒಂದು ತುದಿಯಲ್ಲಿ ದೊಡ್ಡ ಕೊಳವೆಯೊಂದನ್ನು ರಸ್ತೆಯ ಅಂಚಿಗೆ ಹೂತಿಡಲಾಗಿತ್ತು. ಬರುವಾಗ ಇಳಿಜಾರಾಗಿದ್ದರಿಂದ ’ಶಕ್ತಿ’ ಸಲೀಸಾಗಿ ಬಂತು. ಈಗ ಹಿಂದಿನ ಗಾಲಿಗಳು ಆ ಕೊಳವೆಯನ್ನು ಮೇಲೇರಿ ದಾಟಲು ಕೇಳಲೇ ಇಲ್ಲ. ಇಲ್ಲಿ ಮತ್ತಷ್ಟು ಸಮಯ ವ್ಯರ್ಥವಾಯಿತು. ೨೦ ನಿಮಿಷಗಳ ಪ್ರಯತ್ನದ ಬಳಿಕ ಹಿಂದಿನ ಗಾಲಿಗಳು ಕೊಳವೆ ದಾಟಿದವು ಆದರೆ ಒಂದು ದೊಡ್ಡ ಶಬ್ದದೊಂದಿಗೆ. ’ಶಕ್ತಿ’ಯ ಯಾವುದೋ ಭಾಗ ಹಾನಿಗೊಳಗಾಗಿತ್ತು. ಆದರೂ ಮೋಹನ ತನ್ನ ಮುಖಭಾವದಲ್ಲಿ ಏನನ್ನೂ ತೋರ್ಗೊಡದೆ ಸಿಗಂದೂರಿನತ್ತ ಹೊರಟ. ಆ ತೊರೆಯಿಂದ ಸಿಗಂದೂರು ೩೬ಕಿಮಿ ದೂರ. ಸಮಯ ೭.೪೫ ಆಗಿತ್ತು. ಈಗ ಮೊಬೈಲ್ ಸಿಗ್ನಲ್ ಸಿಗುತ್ತಿದ್ದರಿಂದ ಸಿಗಂದೂರಿಗೆ ಕರೆ ಮಾಡಿ ಬರಲು ತಡವಾಗುವುದೆಂದು ತಿಳಿಸಿದೆ.

ಯಾವಾಗಲೂ ಶರವೇಗದಲ್ಲಿ ’ಶಕ್ತಿ’ ಓಡಿಸುವ ಮೋಹನ, ಈಗ ತುಂಬಾ ನಿಧಾನವಾಗಿ ಚಲಾಯಿಸುತ್ತಿದ್ದ. ಬ್ಯಾಕೋಡಿನಲ್ಲಿ ಒಂದೈದು ನಿಮಿಷ ’ಶಕ್ತಿ’ಯನ್ನು ನಿಲ್ಲಿಸಿ ಅದೇನೋ ತಪಾಸಣೆಯನ್ನು ಮೋಹನ ಮಾಡತೊಡಗಿದಾಗ ನನಗೆ ಕಳವಳ ಶುರುವಾಗಿತ್ತು. ಕಾದು ಕಾದು ಬೇಸತ್ತು ಎಲ್ಲಾದರೂ ಸಿಗಂದೂರಿನ ಭಟ್ಟರು ಹೋಟೇಲನ್ನು ಮುಚ್ಚಿಬಿಟ್ಟರೆ? ತಂಡದ ಉಳಿದ ಸದಸ್ಯರು ಕಾಮತರ ಹಾಸ್ಯ ಚಟಾಕಿಗಳನ್ನು ಎಂಜಾಯ್ ಮಾಡುವುದರಲ್ಲಿ ಮಗ್ನರಾಗಿದ್ದರು. ಶಕ್ತಿಯ ತುಂಬಾ ನಗುವಿನ ಸ್ಫೋಟ. ಅಂತೂ ೧೦.೧೫ಕ್ಕೆ ಸಿಗಂದೂರಿನಲ್ಲಿದ್ದೆವು. ೩೬ ಕಿಮಿ ಕ್ರಮಿಸಲು ೧೫೦ ನಿಮಿಷಗಳು! ಇಷ್ಟು ನಿಧಾನವಾಗಿ ಮೋಹನ ನಿದ್ರೆಯಲ್ಲೂ ವಾಹನ ಚಲಾಯಿಸಿವುದಿಲ್ಲ. ದಣಿದಿದ್ದ ಎಲ್ಲರೂ ಭರ್ಜರಿಯಾಗಿಯೇ ಊಟ ಮಾಡಿದರೆನ್ನಿ. ಇಲ್ಲೂ ಕಾಮತರ ಹಾಸ್ಯ ಚಟಾಕಿಗಳು ಅವ್ಯಾಹತವಾಗಿ ಮುಂದುವರಿದವು. ಹೋಟೇಲಿನ ಸಿಬ್ಬಂದಿಗಳೂ ನಮಗೆ ಬಡಿಸುವಾಗ ಕಾಮತರ ಹಾಸ್ಯ ಚಟಾಕಿಗಳಿಗೆ ಬಿದ್ದು ಬಿದ್ದು ನಗುತ್ತಿದ್ದರು!!


ಸಿಗಂದೂರಿನ ಚೌಡೇಶ್ವರಿ ದೇವಿಗೆ ಮುಂಜಾನೆ ೪ಕ್ಕೇ ಮಹಾಪೂಜೆ. ಮುಂಜಾನೆ ೩ಕ್ಕೆ ನಾವೆಲ್ಲರೂ ಮಲಗಿದ್ದ ವಿಶಾಲ ಕೊಠಡಿಯ ಬಾಗಿಲನ್ನು ಬಡಿಯುತ್ತಾ, ’ಏಳಿ, ಏಳಿ, ಪೂಜೆಯ ಸಮಯ, ಇನ್ನೊಂದು ತಾಸು ಮಾತ್ರ. ಎದ್ದು ತಯಾರಾಗಿ’ ಎನ್ನುತ್ತಾ ಎಬ್ಬಿಸುತ್ತಿದ್ದರು. ಪ್ರತಿ ೫ ನಿಮಿಷಕ್ಕೊಮ್ಮೆ ಬಂದು ಬಾಗಿಲು ಬಡಿಯುತ್ತಾ ಎಬ್ಬಿಸಿ ಹೋಗುತ್ತಿದ್ದರು. ರಾತ್ರಿ ಎಲ್ಲರೂ ಮಲಗುವಾಗಲೇ ೧೨ ದಾಟಿತ್ತು. ಎಬ್ಬಿಸಿದವನಿಗೆ ಒಂದಷ್ಟು ಹಿಡಿಶಾಪ ಹಾಕಿದರೂ, ೪.೧೫ರ ಹೊತ್ತಿಗೆ ನಮ್ಮಲ್ಲಿ ಹೆಚ್ಚಿನವರು, ಸ್ನಾನ ಮುಗಿಸಿ ದೇವಿಯ ಸನ್ನಿಧಾನದಲ್ಲಿದ್ದರು.

ತನ್ನಲ್ಲಿದ್ದ ಸಲಕರಣೆಗಳಿಂದ ಸ್ವಲ್ಪ ದುರಸ್ತಿ ಕಾರ್ಯವನ್ನು ಸಿಗಂದೂರಿನಲ್ಲೇ ಮಾಡಿದ್ದ ಮೋಹನ, ಈಗ ತುಮರಿಯಲ್ಲಿ ಸುಮಾರು ೪೫ ನಿಮಿಷ ’ಶಕ್ತಿ’ಯ ದುರಸ್ತಿ ಕಾರ್ಯವನ್ನು ಮುಂದುವರಿಸಿದ. ಹೊಸಗದ್ದೆಯ ನಾಗರಾಜ್ ಮನೆಗೆ ಭೇಟಿ ನೀಡಿ, ದಬ್ಬೆ ಜಲಧಾರೆಗೆ ಚಾರಣ ಮಾಡಿದ ಬಳಿಕ ಭೀಮೇಶ್ವರಕ್ಕೆ ಭೇಟಿ ನೀಡಿ ಕಾರ್ಯಕ್ರಮ ಮುಕ್ತಾಯಗೊಳಿಸಿದೆವು.

ಮನೆ ತಲುಪಿದಾಗ ನನಗೊಂದು ಅಚ್ಚರಿ ಕಾದಿತ್ತು. ’ಕ್ಯಾಮರಾಗಳಿದ್ದ ಬ್ಯಾಗು ಸಿಕ್ಕಿದೆ’ ಎಂಬ ದೂರವಾಣಿ ಕರೆ ಬಂದಿತ್ತು. ಮರುದಿನ ಮುಂಜಾನೆ ೫ಕ್ಕೇ ಹಿಡ್ಲುಮನೆಗೆ ಹೊರಟೆ. ಅಲ್ಲಿ ತಲುಪಿದಾಗ ಹಳ್ಳಿಗರು ಒಬೊಬ್ಬರಾಗಿ ಒಟ್ಟುಗೂಡಿದರು. ಕ್ಯಾಮಾರಾಗಳಿದ್ದ ಬ್ಯಾಗನ್ನು ಒಯ್ದವನ ಮನೆಗೆ ತಲುಪಿದೆವು. ಆ ದಿನ ರಾತ್ರಿ ದಾರಿಯಲ್ಲಿ ಸಿಕ್ಕ ಹಳ್ಳಿಗರೊಂದಿಗೆ ಆ ದಾರಿಯಾಗಿ ತೆರಳಿದ ಹಳ್ಳಿಗನೊಬ್ಬನ ಮೇಲೆ ನಾವು ಸಂಶಯ ವ್ಯಕ್ತಪಡಿಸಿದ್ದರಿಂದ, ಅವರು ಆ ದಾರಿಯಲ್ಲಿರುವ ಐದಾರು ಮನೆಗಳಲ್ಲಿ ವಿಚಾರಿಸಿದಾಗ ಒಂದು ಮನೆಯವರು ತಮ್ಮಲ್ಲಿ ಬ್ಯಾಗ್ ಇದ್ದದ್ದನ್ನು ತಿಳಿಸಿದ್ದರು.

’ಅಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಬ್ಯಾಗ್ ತಗೊಂಡುಬಂದೆ’ ಎಂದು ಆತ ಹೇಳಿದ್ದು ’ಸುಳ್ಳು’ ಎಂದು ತಿಳಿಯಲು ಯಾರಿಗೂ ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಆ ಮನುಷ್ಯ ಊರಿನ ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿರುವಾಗ ಹೆದರಿ ’ವಾರಸುದಾರರಿಲ್ಲದೆ ಈ ಬ್ಯಾಗ್ ಬಿದ್ದಿತ್ತು. ಅದ್ಕೆ ಎತ್ಕೊಂಡು ಬಂದೆ’ ಎಂದು ರೀಲು ಬಿಟ್ಟಿದ್ದ. ’ಹಾಗಿದ್ದಲ್ಲಿ, ನನ್ನ ಮತ್ತೊಂದು ಬ್ಯಾಗನ್ನು ಯಾಕೆ ಅಲ್ಲೇ ಬಿಟ್ಟು ಬಂದೆ. ಅದನ್ನೂ ಎತ್ಕೊಂಡು ಬರಬೇಕಾಗಿತ್ತಲ್ಲವೇ..’ ಎಂದು ನಾನು ಕೇಳಲು ಬಾಯಿ ತೆರೆದವ ಸುಮ್ಮನಾದೆ. ಕ್ಯಾಮರಾಗಳು ಸಿಕ್ಕಿದ್ದೇ ನನಗೆ ಬಹಳ ಸಂತೋಷವಾಗಿತ್ತು. ಇನ್ನು ಆ ವಿಷಯವನ್ನು ಮುಂದಕ್ಕೆ ಒಯ್ಯಲು ನನಗೆ ಆಸಕ್ತಿಯಿರಲಿಲ್ಲ. ಬ್ಯಾಗಿನ ಎಲ್ಲಾ ಕೋಣೆಗಳನ್ನು ಅವರು ತಡಕಾಡಿದ ಕುರುಹುಗಳಿದ್ದವು. ಧನ ರೂಪದಲ್ಲಿ ಏನೂ ಸಿಗದೆ ಅವರು ನಿರಾಶರಾದರೇನೋ. ಮುಖಂಡನಂತಿದ್ದ ಒಬ್ಬ ’ಕ್ಷಮಿಸಿ ಸಾರ್. ನಿಮಗೆ ತೊಂದರೆ ಆಯಿತು. ಎಂದೂ ಹೀಗೆ ಆಗಿರಲಿಲ್ಲ ಇಲ್ಲಿ....’, ಎಂದು ಕಳ್ಳತನವಾದದ್ದನ್ನು ಪರೋಕ್ಷವಾಗಿ ಒಪ್ಪುತ್ತಾ ಕ್ಷಮೆಯಾಚಿಸಿದ.