ಕಡಲತೀರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಡಲತೀರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜನವರಿ 03, 2016

ದೀಪಸ್ತಂಭದ ಮೇಲಿನಿಂದ ನೋಟ...

 

ಈ ಊರಿನ ಬಂದರು ಬ್ರಿಟಿಷರ ಸಮಯದಲ್ಲಿ ಮತ್ತು ಅದಕ್ಕೂ ಮೊದಲಿನಿಂದಲೂ ವಹಿವಾಟು ಮತ್ತು ಸರಕು ಸಾಮಗ್ರಿಗಳ ಸಾಗಾಟಕ್ಕೆ ಬಹಳ ಹೆಸರುವಾಸಿಯಾಗಿತ್ತು. ಅಂದಿನ ಕಾಲದಲ್ಲಿ ಕರಾವಳಿಯ ಪ್ರಮುಖ ಬಂದರು ಆಗಿತ್ತು.


ಈ ಊರಿನಲ್ಲಿ ಸಮುದ್ರ ಸೇರುವ ಶರಭಿ ನದಿಯು ಬಂದರು ನಿರ್ಮಾಣಕ್ಕೆ ಸರಿಯಾದ ಸ್ಥಳವನ್ನು ಪ್ರಾಕೃತಿಕವಾಗಿ ನಿರ್ಮಿಸಿದೆ. ಒಂದು ಪಾರ್ಶ್ವದಲ್ಲಿರುವ ಬೆಟ್ಟದ ಮೇಲೆ ದೀಪಸ್ತಂಭವನ್ನು ಬ್ರಿಟಿಷರ ಸಮಯದಲ್ಲಿ ನಿರ್ಮಿಸಲಾಗಿದೆ. ದೀಪಸ್ತಂಭದ ಸಮೀಪದಲ್ಲೇ ಶಿವನ ದೇವಸ್ಥಾನವಿದೆ.

 
 
ಸರಿಸುಮಾರು ಮೂವತ್ತು ವರ್ಷಗಳ ಹಿಂದೆ, ೧೯೮೬ರಲ್ಲಿ ನನ್ನ ಸೋದರಮಾವ, ನನ್ನನ್ನು ಮತ್ತು ಸಂಬಂಧಿ ಅರುಣಾಚಲನನ್ನು ಅವರ ಪ್ರಿಮಿಯರ್ ಪದ್ಮಿನಿ ಕಾರಿನಲ್ಲಿ ಇಲ್ಲಿಗೆ ಕರೆತಂದಿದ್ದರು. ತದನಂತರ ಇಲ್ಲಿಗೆ ಭೇಟಿ ನೀಡಿದ್ದು ೨೦೧೫ರಲ್ಲಿ. ಕೆಲವು ಚಿತ್ರಗಳು.

 
 

ಗುರುವಾರ, ಏಪ್ರಿಲ್ 30, 2015

ಈ ಕಡಲತೀರ... ಅಂದ... ಅಪಾಯ...


ಈ ಊರಿನಲ್ಲಿ ನನ್ನ ಗೆಳೆಯ ಅನಿಲ ವಾಸವಾಗಿದ್ದಾನೆ. ಅದೊಂದು ಶನಿವಾರ ಮುಂಜಾನೆ ಆತನ ಆಹ್ವಾನದ ಮೇರೆಗೆ ನಾನು ಮತ್ತು ಸಂಬಂಧಿ ಅರುಣಾಚಲ ಆ ಕಡೆ ಹೊರಟೆವು. ಫುಲ್ ರಿಲ್ಯಾಕ್ಸ್ ಮಾಡಿ, ನೋಡಬೇಕೆಂದಿದ್ದ ಮೂರ್ನಾಲ್ಕು ಸ್ಥಳಗಳನ್ನು ನೋಡಿ ಮರುದಿನ ಸಂಜೆ ಉಡುಪಿಗೆ ಹಿಂತಿರುಗುವ ಪ್ಲ್ಯಾನ್ ನನ್ನದಾಗಿತ್ತು.


ಮೊದಲು ಈ ಕಡಲತೀರಕ್ಕೆ ತೆರಳಿದೆವು. ಮೂರ್ನಾಲ್ಕು ವರ್ಷಗಳ ಮೊದಲು ಉದ್ಯಮಿಯೊಬ್ಬರಿಗೆ ಈ ಕಡಲತೀರವನ್ನು ಜಿಲ್ಲಾ ಪ್ರಾಧಿಕಾರ ಅನಧಿಕೃತವಾಗಿ ಮಾರಾಟ ಮಾಡಿದೆ ಎಂಬ ಸುದ್ದಿ ದಿನಪತ್ರಿಕೆಯಲ್ಲಿ ಬಂದಿತ್ತು. ಸುದ್ದಿಯು ನಿಜವೋ ಅಥವಾ ತದನಂತರ ಏನಾಯಿತು ನನಗೆ ಗೊತ್ತಿಲ್ಲ. ಈ ಸ್ಥಳವೇ ಅಷ್ಟು ರಮಣೀಯವಾಗಿದೆ. ಕಡಲೊಳಗೆ ಚಾಚಿರುವ ಎರಡು ಬೆಟ್ಟಗಳ ನಡುವೆ ಇರುವ ಸುಮಾರು ಒಂದು ಕಿಮಿ ಉದ್ದವಿರುವ ಈ ಕಡಲತೀರವನ್ನು ಖರೀದಿಸಿ ಇಲ್ಲೇ ಒಂದು ರೆಸಾರ್ಟ್ ಸ್ಥಾಪಿಸಿ ರೊಕ್ಕ ಮಾಡುವ ವಿಚಾರ ಯಾರಿಗೂ ಬರಬಹುದು. ಆದರೆ ಅದಕ್ಕೆ ಕುಮ್ಮಕ್ಕು ನೀಡದೆ ಈ ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಬೇಕಾದ್ದು ಜಿಲ್ಲೆಯ ಕರ್ತವ್ಯ.

 
ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದರೆ ಈ ಸ್ಥಳ ಕೆಟ್ಟು ರಾಡಿಯಾಗುವುದರಲ್ಲಿ ಸಂದೇಹವೇ ಇಲ್ಲ. ಸದ್ಯಕ್ಕೆ ಪ್ರವಾಸಿಗರು ಯಾರೂ ಇತ್ತ ಸುಳಿಯುವುದಿಲ್ಲ. ಸಂಜೆ ಹೊತ್ತಿಗೆ ಆಸುಪಾಸಿನ ಜನರು ಬರುತ್ತಾರಷ್ಟೆ. ಅದು ಕೂಡಾ ಬಹಳ ವಿರಳ. ಆದರೆ ಹಾಗೆ ಬಂದವರು ಇಲ್ಲಿ ಮಜಾ ಉಡಾಯಿಸಿ ಅವಶೇಷಗಳನ್ನು ಬಿಟ್ಟು ಹೋಗುತ್ತಾರೆ ಎನ್ನುವುದು ವಿಪರ್ಯಾಸ.


ಕಡಲತೀರದ ಉದ್ದಕ್ಕೂ ಹೆಜ್ಜೆ ಹಾಕಿದೆವು. ಎಡಬದಿಯಲ್ಲಿರುವ ಬೆಟ್ಟವನ್ನು ಸುತ್ತು ಬಳಸಿ, ಬಂಡೆಗಳನ್ನು ದಾಟಿ, ಆ ಕಡೆ ತೆರಳಿದರೆ ಅಲ್ಲಿಂದ ಸುಂದರ ದೃಶ್ಯವನ್ನು ಕಾಣಬಹುದು.


ಅಂದ ಹಾಗೆ ಈ ಕಡಲತೀರಕ್ಕೆ ಭೇಟಿ ಸುಂದರ ದೃಶ್ಯವನ್ನು ಕಣ್ತುಂಬಾ ಸವಿಯುವುದಕ್ಕೆ ಮತ್ತು ನೆರಳಿನಲ್ಲಿ ಕುಳಿತು ಆನಂದಿಸುವುದಕ್ಕೆ ಮಾತ್ರ ಸೀಮಿತವಾಗಿರಬೇಕು. ನೀರಿಗಿಳಿಯುವುದು ತುಂಬಾನೇ ಅಪಾಯಕಾರಿ. ಈ ಕಡಲತೀರ ತಟದಿಂದಲೇ ಆಳವಾಗಿದೆ. ನಾನೆಂದಿಗೂ ಎಲ್ಲೂ ನೀರಿಗಿಳಿಯುವುದಿಲ್ಲ. ಹಾಗಿರುವಾಗ ಇಲ್ಲಂತೂ ಅಲೆಗಳ ರಭಸ ಮತ್ತು ಆಳವನ್ನು ನೋಡಿ ನೀರಿನಿಂದ ಸುಮಾರು ಅಂತರ ಕಾಯ್ದುಕೊಂಡೇ ತೀರದುದ್ದಕ್ಕೂ ಹೆಜ್ಜೆ ಹಾಕಿದೆ.


ಇಲ್ಲಿ ಎರಡನೇ ಬಾರಿ ಸಂಸಾರ ಸಮೇತ ತೆರಳಿದ್ದೆ. ಅರುಣಾಚಲನೂ ಸಂಸಾರ ಸಮೇತನಾಗಿ ಬಂದಿದ್ದ. ನೀರಿನಲ್ಲಿ ಕಾಲಿಡಬೇಕೆಂದು ನೇಹಲ್ ತುಂಬಾನೇ ಹಟ ಮಾಡುತ್ತಿದ್ದಳು. ಅಪಾಯದ ಅರಿವಿದ್ದರಿಂದ, ನೀರು ಕಾಲಿಗೆ ಸ್ವಲ್ಪ ತಾಗಿದ ಕೂಡಲೇ ಓಡಿ ಬರುವುದು ಎಂಬ ಷರತ್ತಿನೊಂದಿಗೆ ಆಕೆಯ ಕೈ ಹಿಡಿದು ನೀರಿನೆಡೆ ನಡೆದೆ. ಆದರೆ ನನ್ನ ಅಮ್ಮ ನಮ್ಮ ಹಿಂದೆನೇ ಬಂದಿದ್ದನ್ನು ನಾನು ಗಮನಿಸಲೇ ಇಲ್ಲ! ನೀರು ಕ್ಷಣಾರ್ಧದಲ್ಲಿ ರಭಸವಾಗಿ ನುಗ್ಗಿ ಬಂತು. ಕೂಡಲೇ ನಾವಿಬ್ಬರೂ ಓಡಿಬಂದೆವು. ನಾವು ನೀರಿನಿಂದ ದೂರ ಓಡಿ ಬರುತ್ತಿದ್ದರೆ, ಅರುಣಾಚಲ ನೀರಿನೆಡೆ ಓಡುತ್ತಿದ್ದ! ಯಾಕೆಂದು ಹಿಂತಿರುಗಿ ನೋಡಿದರೆ ಅಮ್ಮ ಸೊಂಟದ ತನಕ ನೀರಿನಲ್ಲಿ! ನೀರು ಬಂದಷ್ಟೇ ರಭಸದಿಂದ ಹಿಂದೆ ಸರಿಯಿತು. ಕಾಲುಗಳು ಮರಳಿನಲ್ಲಿ ಹೂತುಹೋಗಿದ್ದರಿಂದ ಅಮ್ಮ ಅಂದು ಅಪಾಯದಿಂದ ಪಾರಾದರು.


ಮುಂಜಾನೆ ಬಂದು, ವಿರಮಿಸಿ, ಮಧ್ಯಾಹ್ನದ ಊಟವನ್ನು ನೆರಳಿನಲ್ಲಿ ಮುಗಿಸಿ, ಪ್ರಕೃತಿಯ ಅಂದವನ್ನು ಆನಂದಿಸಿ, ಅಲ್ಲೇ ಚಾಪೆ ಹಾಸಿ, ಸಣ್ಣ ನಿದ್ರೆ ಹೊಡೆದು ಹಿಂತಿರುಗಲು ಈ ಕಡಲತೀರ ಸೂಕ್ತ ಸ್ಥಳ. ನೀರಿನಿಂದ ದೂರವುಳಿದಷ್ಟು ಒಳ್ಳೆಯದು.

ಭಾನುವಾರ, ಜುಲೈ 27, 2014

ಬೆಟ್ಟಗಳ ನಡುವೆ ಕಡಲತೀರ


ಬೆಟ್ಟದ ಅಂಚಿನಿಂದ ಕಾಣುವ ಈ ಕಡಲತೀರದ ಮೇಲಿನ ಚಿತ್ರದಲ್ಲಿರುವ ದೃಶ್ಯವನ್ನು ಸವಿಯಲು ಕಳೆದ ಸುಮಾರು ೨೫ ವರ್ಷಗಳಲ್ಲಿ ಅದೆಷ್ಟೋ ಸಲ ಇಲ್ಲಿಗೆ ಬಂದು ತೆರಳಿದ್ದು ಇದೆ. ಆದರೆ ಒಂದೇ ಒಂದು ಸಾರಿ ಕೆಳಗಿಳಿದು ಕಡಲತೀರಕ್ಕೆ ತೆರಳುವ ಪ್ರಯತ್ನ ದೂರವಿರಲಿ, ಆ ಯೋಚನೆಯನ್ನೂ ಮಾಡಿದ್ದಿರಲಿಲ್ಲ.


ಈ ಬಾರಿ ಬೆಟ್ಟವಿಳಿದು ತೀರಕ್ಕೇ ತೆರಳಬೇಕೆಂಬ ಇರಾದೆಯಿಂದ ಮತ್ತೊಮ್ಮೆ ಈ ಕಡಲತೀರದತ್ತ ತೆರಳಿದೆ. ಬೆಟ್ಟದ ತುದಿಯಿಂದ ಬಹಳ ದೂರವಿದ್ದಂತೆ ತೋರಿದರೂ, ಕೇವಲ ಐದಾರು ನಿಮಿಷಗಳಲ್ಲಿ ನಾವು ಕೆಳಗಿಳಿದಾಗಿತ್ತು.


ಕಡಲೊಳಗೆ ನುಗ್ಗಿರುವ ಎರಡು ಬೆಟ್ಟಗಳ ನಡುವೆ ಅಡಗಿರುವ ಸುಂದರ ಸ್ಥಳವಿದು. ಕೇವಲ ೮೦೦ ಮೀಟರ್ ಉದ್ದವಿರುವ ಈ ಕಡಲತೀರದ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ.


ಈ ಭಾಗದಲ್ಲಿ ’ಬೀಚ್ ಟ್ರೆಕ್’ ಮಾಡಿದವರು, ಈ ಕಡಲತೀರವನ್ನು ದಾಟಿಹೋಗುವ ಸಾಧ್ಯತೆಯಿದೆಯೇ ವಿನ:, ಬೇರೆ ಯಾರೂ ಇಲ್ಲಿಗೆ ಬರುವ ಚಾನ್ಸ್ ಇಲ್ಲ. ಸ್ಥಳೀಯರು ಕೂಡಾ ಬೆಟ್ಟದ ಅಂಚಿನಿಂದ ಕಾಣುವ ದೃಶ್ಯವನ್ನು ಆನಂದಿಸುತ್ತಾರೆಯೇ ಹೊರತು, ಕೆಳಗಿಳಿದು ಕಡಲತೀರಕ್ಕೆ ಹೋಗುವುದಿಲ್ಲ.


ಶುಭ್ರವಾಗಿದ್ದ ತೀರದ ಒಂದು ತುದಿಯಿಂದ ಇನ್ನೊಂದು ತುದಿಗೆ ವಾಕ್ ಮಾಡಿದೆವು. ಈ ಕಡಲತೀರದ ಆಕರ್ಷಣೆಯೇ ಎರಡು ತುದಿಗಳಲ್ಲಿರುವ ಸಣ್ಣ ಬೆಟ್ಟಗಳು. ಪ್ರಕೃತಿಯೇ ಎರಡು ಕಡೆ ಗೋಡೆ ರಚಿಸಿ, ನಡುವೆ ಈ ಕಡಲತೀರವನ್ನು ಬಂಧಿಸಿದೆ. ಒಂದು ಪಾರ್ಶ್ವದಲ್ಲಿರುವ ಬೆಟ್ಟವನ್ನು ಕಲ್ಲಿಗಾಗಿ ಕೊರೆಯಲಾಗುತ್ತಿದ್ದು, ಸುಮಾರಾಗಿ ನಾಶಮಾಡಲಾಗಿದೆ. ಇಲ್ಲಿನ ಸೌಂದರ್ಯಕ್ಕೆ ಇದೊಂದು ಕಪ್ಪುಚುಕ್ಕೆ. 


ಬೆಟ್ಟದ ಆ ಕಡೆ ಇರುವ ಬೀಚ್ ಸುಮಾರಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಲ್ಲಿ, ಪ್ರವಾಸಿಗರ ಹಾವಳಿಯಿಲ್ಲ. ಪ್ರವಾಸಿಗರಿಲ್ಲವೆಂದ ಬಳಿಕ, ಕಸಗಳಿಲ್ಲ, ಗೌಜಿಯಿಲ್ಲ, ಗಲಾಟೆಯಿಲ್ಲ. ಕೇವಲ ನಾವು ಮತ್ತು ಕಡಲಿನಲೆಗಳ ಸದ್ದು ಮಾತ್ರ.

ಭಾನುವಾರ, ಜನವರಿ 26, 2014

ಮಾಂಗ್ಟೇಶ್ವರನ ಕಡಲತೀರ


ಈ ಕಡಲತೀರಕ್ಕೆ ಯಾರೂ ಬರುವುದೇ ಇಲ್ಲ. ಊರಿನವರಲ್ಲಿ ಈ ಕಡಲತೀರಕ್ಕೆ ದಾರಿ ಕೇಳಿದರೆ, ಸ್ವಲ್ಪ ದೂರದಲ್ಲಿರುವ ಇದೇ ಹೆಸರುಳ್ಳ ಇನ್ನೊಂದು ಕಡಲತೀರಕ್ಕೆ ಕಳುಹಿಸುತ್ತಾರೆ. ನಿಖರವಾಗಿ ಕೇಳಿದರೆ ಮಾತ್ರ ಈ ಕಡಲತೀರ ನೋಡುವ ಭಾಗ್ಯ. ಇದು ನನಗೆ ಲೀನಾ ನೀಡಿದ ಮಾಹಿತಿ.


ಲೀನಾ, ಇದೇ ಊರಿನಲ್ಲಿ ನಾಲ್ಕೈದು ವರ್ಷ ಇದ್ದುದರಿಂದ ನನಗೆ ಕಡಲತೀರಕ್ಕೆ ದಾರಿ ಕೇಳುವ ಪ್ರಮೇಯ ಬರಲಿಲ್ಲ. ಆದರೂ ನೋಡೋಣವೆಂದು ಎರಡು ಕಡೆ ದಾರಿ ಕೇಳಿದೆ. ಊರವರು ಮತ್ತು ಪ್ರವಾಸಿಗರು ತೆರಳುವ ಆ ಮತ್ತೊಂದು ಕಡಲತೀರಕ್ಕೇ ನನಗೆ ದಾರಿ ತೋರಿಸಲಾಯಿತು. ಮತ್ತೆ ನಿಖರವಾಗಿ ಕೇಳಿದೆ. ಆಗ ನನಗೆ ಈ ಕಡಲತೀರದ ಬಗ್ಗೆ ತಿಳಿಸಲಾಯಿತು!!


ಅದೇನೇ ಇರಲಿ. ಯಾರೂ ಬರದಿದ್ದರೆ ಒಳ್ಳೆಯದೆ ತಾನೆ? ಇಲ್ಲಿ ತೀರಗುಂಟ ಜನವಸತಿ ಪ್ರದೇಶವಾಗಿದ್ದು, ಇವರ ಮುಖ್ಯ ಕಸುಬೇ ಮೀನು ಹಿಡಿಯುವುದು. ಮಣ್ಣಿನ ನೆಲ ಮುಗಿಯುವವರೆಗೆ ಮನೆಗಳಿದ್ದು, ಮರಳಿನ ನೆಲ ಆರಂಭವಾಗುವಲ್ಲಿ ಸಾಲಾಗಿ ದೋಣಿಗಳನ್ನು ನಿಲ್ಲಿಸಲಾಗಿತ್ತು. ಇಲ್ಲಿಗೆ ಬಸ್ಸು ಸೌಕರ್ಯ ಇಲ್ಲ. ಊರಿನಿಂದ ಕೇವಲ ೩ ಕಿಮಿ ದೂರ ಇರುವ ಈ ಸ್ಥಳಕ್ಕೆ ರಿಕ್ಷಾಗಳು ಓಡಾಡುತ್ತವೆ.


ಈ ಸ್ಥಳಕ್ಕೆ ಬರಲು ಇರುವ ಒಂದೇ ಕಾರಣವೆಂದರೆ ತೀರದಿಂದ ಸುಮಾರು ನೂರು ಮೀಟರುಗಳಷ್ಟು ದೂರದಲ್ಲಿರುವ ಒಂದು ನಡುಗುಡ್ಡೆ. ಇಲ್ಲಿಗೆ ತೆರಳಲು ಕಲ್ಲುಗಳನ್ನು ಹಾಕಿ ಕಲ್ಲುಸೇತು ನಿರ್ಮಿಸಲಾಗಿದೆ. ಈ ನಡುಗುಡ್ಡೆಯಲ್ಲಿ ಸ್ಥಳೀಯರಿಗೆ ಆಪ್ತನಾಗಿರುವ ಮಾಂಗ್ಟೇಶ್ವರನ ದೇವಾಲಯವಿದೆ. ಬರತದ ಸಮಯದಲ್ಲಿ ಕಲ್ಲುಸೇತು ಮುಳುಗುವುದರಿಂದ ಈ ನಡುಗುಡ್ಡೆಗೆ ಹೋಗಲು ಸಾಧ್ಯವಿಲ್ಲ.


ಅಲ್ಲೊಬ್ಬ ಯುವಕನ ಬಳಿ ಕೇಳಿದಾಗ, ’ಬೇಗ ಹೋಗಿ ಬನ್ನಿ, ನೀರು ಬರುವ ಸಮಯ ಆಯ್ತು’ ಎಂದ. ಆಗ ಅಲ್ಲೇ ಇದ್ದ ವಯಸ್ಕರೊಬ್ಬರು, ’ಇನ್ನು ತಡಾ ಅದೆ. ಸಾವ್ಕಾಶ ಹೋಗ್ಬನ್ನಿ’ ಎಂದಾಗ ಯಾರನ್ನು ನಂಬುವುದು ಎಂದೇ ತಿಳಿಯದಾಯಿತು. ವಯಸ್ಕ ವ್ಯಕ್ತಿ ಅನುಭವದ ಆಧಾರದ ಮೇಲೆಯೇ ಮಾತನಾಡುತ್ತಿರುವಂತೆ ತೋರಿದ ಕಾರಣ, ಅವರಿಬ್ಬರಿಗೂ ಧನ್ಯವಾದ ಹೇಳಿ, ಸಾವ್ಕಾಶ ಹೋಗಿಬರುವ ನಿರ್ಧಾರ ಮಾಡಿದೆ.


ಈ ಕಲ್ಲುಸೇತುವಿನ ಕಲ್ಲುಗಳು, ಎರಡೂ ಕಡೆಯಿಂದ ಅಲೆಗಳ ಹೊಡೆತಕ್ಕೆ ಚದುರಿಕೊಂಡು ಬಿದ್ದಿವೆ. ಒಂದರ ಮೇಲೊಂದನ್ನು ಪೇರಿಸಿ ಇಡಲಾಗಿದ್ದ ಕಲ್ಲುಗಳು ಈಗ ಒಂದರ ಬದಿಯಲ್ಲಿ ಒಂದು ಇವೆ. ಒಂದು ಬದಿಯಲ್ಲಿ ಬಹುದೂರದವರೆಗೂ ಸಾಲಾಗಿ ಇಡಲಾಗಿರುವ ದೋಣಿಗಳು ಮತ್ತು ದೂರದಲ್ಲಿ ಪಶ್ಚಿಮ ಘಟ್ಟಗಳ ಸಾಲು, ಇನ್ನೊಂದೆಡೆ ನದಿಯೊಂದು ಬಂದು ಸಮುದ್ರಕ್ಕೆ ಸೇರುವ ತಾಣ ಹಾಗೂ ನಂತರ ಸಮುದ್ರಕ್ಕೆ ತಾಗಿಕೊಂಡೇ ಉದ್ದಕ್ಕೆ ಚಾಚಿರುವ ಬೆಟ್ಟಗಳು.


ಇದು ಪ್ರವಾಸೀ ತಾಣವಾಗಿರದ ಕಾರಣ, ಸ್ಥಳೀಯರಿಗೆ ಶರಧಿ ತೀರವೇ ಶೌಚಾಲಯ! ನೋಡಲು ಕಡಲತೀರ ಶುಭ್ರವಾಗಿ ಕಂಡುಬಂದರೂ, ಅಲ್ಲಲ್ಲಿ ಸ್ಥಳೀಯರು ’ಚುಕ್ಕೆ’ಗಳನ್ನು ಹಾಕಿರುತ್ತಾರೆ. ಉಬ್ಬರದ ಸಮಯದಲ್ಲಿ ಶರಧಿ ಈ ಎಲ್ಲಾ ಚುಕ್ಕೆಗಳನ್ನು ಗುಡಿಸಿ ಸಾರಿಸಿಬಿಡುತ್ತದೆ. ಆದರೂ ಸ್ವಲ್ಪ ಜಾಗರೂಕರಾಗಿ ಹೆಜ್ಜೆ ಹಾಕುವುದು ಎಂದಿಗೂ ಒಳ್ಳೆಯದು. ನಾನು ನಡೆದು ಹೋಗುತ್ತಿರಬೇಕಾದರೆ ಒಬ್ಬ ಚುಕ್ಕೆ ಹಾಕುತ್ತಿದ್ದ, ಇನ್ನೊಬ್ಬ ಹಾಕಲು ಹೋಗುತ್ತಿದ್ದ. ಹಿಂತಿರುಗಬೇಕಾದರೆ ಮಗದೊಬ್ಬ, ನಾನು ಬರುತ್ತಿರುವುದನ್ನು ಕಂಡು ನನಗೆ ಬೆನ್ನು ಮಾಡಿ ಕೂತೇಬಿಟ್ಟ!


ಕಲ್ಲಿನಿಂದ ಕಲ್ಲಿಗೆ ಜಿಗಿಯುತ್ತಾ ನಡುಗುಡ್ಡೆ ತಲುಪಿದೆ. ಅಲ್ಲಿ ಮಾಂಗ್ಟೇಶ್ವರನ ಸಣ್ಣ ದೇವಾಲಯ. ಸಮೀಪವೇ ಸಣ್ಣ ಬಾವಿ. ಬದಿಯಲ್ಲೇ ಒಂದು ಶಿವಲಿಂಗ.


ಮೊದಲು ಮಾಂಗ್ಟೇಶ್ವರನಿಗೆ ನಮಸ್ಕರಿಸಿದೆ. ಬಳಿಕ ನಡುಗುಡ್ಡೆಯಿಂದ ಕಾಣಬರುವ ದೃಶ್ಯಗಳ ಚಿತ್ರಗಳನ್ನು ತೆಗೆದೆ. ತದನಂತರ ಸುಮಾರು ೨೦ ನಿಮಿಷ ಶಿವಲಿಂಗದ ಬಳಿ ಕುಳಿತು ನನ್ನ ಜೀವನದ ಬಗ್ಗೆ ಅವಲೋಕನ ಮಾಡಿದೆ!


ಎದುರಿನಲ್ಲಿರುವ ಸಣ್ಣ ಬೆಟ್ಟಕ್ಕೆ ತೆರಳುವುದು ನನ್ನ ಮುಂದಿನ ಗುರಿಯಾಗಿತ್ತು. ಈ ಬೆಟ್ಟ ಸಮೀಪದಲ್ಲೇ ಇದ್ದರೂ, ಅಲ್ಲಿ ನದಿ ಸಮುದ್ರ ಸೇರುವ ಸ್ಥಳವಾಗಿದ್ದರಿಂದ, ಆ ಕಡೆ ದಾಟುವುದು ಅಸಾಧ್ಯ. ಇರುವ ಒಂದೇ ದಾರಿಯೆಂದರೆ, ಮರಳಿ ೩ ಕಿಮಿ ದೂರವಿರುವ ಊರಿಗೆ ಬಂದು, ನಂತರ ಮತ್ತೆ ೫ ಕಿಮಿ ಕ್ರಮಿಸಿ ಬೆಟ್ಟದ ತುದಿ ತಲುಪುವುದು.


ಈ ಬೆಟ್ಟದ ತುದಿಯಿಂದ ಸಮುದ್ರ ತೀರದ ಮತ್ತು ಮಾಂಗ್ಟೇಶ್ವರನ ನಡುಗುಡ್ಡೆಯ ವಿಹಂಗಮ ನೋಟ ಲಭ್ಯ. ಮೋಡಗಳ ಮರೆಯಿಂದ ಸೂರ್ಯದೇವ, ಮಾಂಗ್ಟೇಶ್ವರನ ವಾಸಸ್ಥಾನದ ಮೇಲೆ ಮಾತ್ರ ಬೆಳಕು ಚೆಲ್ಲುತ್ತಿರುವಂತೆ ಕಾಣುತ್ತಿತ್ತು!


ಈ ಗುಡ್ಡದ ತುದಿಯವೆರೆಗೂ ಮಣ್ಣಿನ ರಸ್ತೆಯಿದೆ. ಈ ರಸ್ತೆ ಹಾಗೇ ಮುಂದುವರೆದು ಬೆಟ್ಟದ ಇನ್ನೊಂದು ಪಾರ್ಶ್ವದ ಕೆಳಗಿರುವ ಕಡಲತೀರದ ಸಮೀಪ ಕೊನೆಗೊಳ್ಳುತ್ತದೆ.


ಬೆಟ್ಟದ ತುದಿಯಿಂದ ಮಾಂಗ್ಟೇಶ್ವರನ ಕಡಲತೀರ ಸಂಸ್ಕೃತ ಅಕ್ಷರ ’ಓಂ’ ತರಹ ಕಾಣುತ್ತದೆ. ಇಲ್ಲಿ ಸುಮಾರು ೩೦ ನಿಮಿಷಗಳಷ್ಟು ಸಮಯ ಕಳೆದೆ. ಅಲ್ಲಿ ಯಾರೂ ಇರಲಿಲ್ಲ, ಯಾರೂ ಬರಲಿಲ್ಲ. ಅಲ್ಲಿ ಕೆಳಗೆ, ಬರತದ ಸಮಯವಾಗಿದ್ದರಿಂದ ಕಡಲು ನಿಧಾನವಾಗಿ ಕಲ್ಲುಸೇತುವೆಯನ್ನು ಆವರಿಸಿಕೊಳ್ಳುತ್ತಿತ್ತು.

ಮಾಹಿತಿ: ಡಾ! ಎಸ್.ಡಿ.ನಾಯ್ಕ