ಭಾನುವಾರ, ಡಿಸೆಂಬರ್ 21, 2008

ಒಂಬತ್ತು ಹಂತಗಳ ಜಲಧಾರೆ

ನವೆಂಬರ್ ೧೩, ೨೦೦೫.

ಹೊಸಗೋಡು ಜಲಪಾತ ನೋಡೋಣವೆಂದು ಉಡುಪಿಯಿಂದ ಯಮಾಹಾದಲ್ಲಿ ಹೊರಟು ಗೆಳೆಯ ಲಕ್ಷ್ಮೀನಾರಾಯಣ (ಪುತ್ತು) ನನ್ನು ಪಿಕ್ ಮಾಡಿ ದಾರಿಯಲ್ಲಿ ಹೋಟೇಲೊಂದಕ್ಕೆ ನುಗ್ಗಿದೆವು. ಇಲ್ಲಿ ನಮ್ಮ ಬೆಳಗಿನ ಉಪಹಾರ ನೆನಪಿನಲ್ಲಿರುವಂತದ್ದು. ೬೦ ರೂಪಾಯಿಯವರೆಗೆ ಬಿಲ್ ಆಗಬಹುದೆಂದು ನಿರೀಕ್ಷಿಸಿದ್ದೆ. ಆದರೆ ಬಿಲ್ ಆದದ್ದು ಕೇವಲ ರೂ.೨೮!! ದೇವಕಾರದ ಮಧುಕರ್ ಮನೆಯ ಊಟವನ್ನು ನೆನೆಸಿ ಪುತ್ತು ಭಾವೋದ್ವೇಗಕ್ಕೊಳಗಾದ. ಈತನಿಗೆ ಎಲ್ಲಿ ಹೋದರೂ ತಿಂದದ್ದು ಮಾತ್ರ ನೆನಪಿರುವುದು, ಪ್ರಕೃತಿ ನೋಡಿದ್ದೆಲ್ಲಾ ಅದೇ ಕ್ಷಣ ಮರೆತುಬಿಟ್ಟಿರುತ್ತಾನೆ. ಆದರೂ ಜೊತೆಗೊಬ್ಬ ಇದ್ದರೆ ಯಾವಾಗಲೂ ಒಳಿತು ಎಂಬ ಮಾತ್ರಕ್ಕೆ ಈತನನ್ನು ನಾನು ಕರೆದೊಯ್ಯುವುದು.

ಮುಂದೆ ದಾರಿಯಲ್ಲಿ ಸುಂದರ ಯುವಕನೊಬ್ಬ ಬಜಾಜ್ ಎಮ್-೮೦ ವಾಹನದಲ್ಲಿ ನಮ್ಮ ಸಮಾನಾಂತರಕ್ಕೆ ಬಂದು ನಿಧಾನಿಸಿದ. ಈತ ಜನಾರ್ಧನ, ಹೀರೇಬೈಲಿನ ಮಹಾದೇವ ನಾಯ್ಕರ ಮಗ. ಪರಸ್ಪರ ಪರಿಚಯ ಮಾಡಿಕೊಂಡು ನಂತರ ಅವರ ಮನೆಯತ್ತ ತೆರಳಿದೆವು. ಮಹಾದೇವ ನಾಯ್ಕರ ಮನೆ ಕಲಾವಿದರ ಮನೆ. ಜನಾರ್ಧನ ಒಬ್ಬ ಯಕ್ಷಗಾನ ಕಲಾವಿದ. ಸಾಲಿಗ್ರಾಮ ಮೇಳದೊಂದಿಗೆ ೨ ವರ್ಷ ತಿರುಗಾಟ ಮಾಡಿದ್ದರು. ಮಹಾದೇವ ನಾಯ್ಕರೂ ಉತ್ತಮ ಕಲಾವಿದರು. ಇಲ್ಲಿ ಕುಡಿಯಲು ಚಹಾ ಸಿಕ್ಕಿತು ನಂತರ ಎಳನೀರೂ ಸಿಕ್ಕಿತು. ’ಮುಂದಿನ ಸಲ ಮುಕ್ತಿ ಹೊಳೆ ಜಲಧಾರೆ ನೋಡ್ಲಿಕ್ಕೆ ಬನ್ನಿ, ಆಗ ನಮ್ಮ ಮನೆಗೆ ಬಂದು ಉಳ್ಕೊಳ್ಳಬೇಕು’ ಎಂದು ಜನಾರ್ಧನ ಆಗಲೇ ಅಹ್ವಾನ ನೀಡಿ, ’ಮುಂದೆ ತಿಮ್ಮಾ ಗೌಡರ ಮನೆಯಲ್ಲಿ ವಿಚಾರಿಸಿ, ಅವರ ಮನೆಯವರಲ್ಲೊಬ್ಬರು ದಾರಿ ತೋರಿಸಲು ಬರಬಹುದು’ ಎಂದು ಬೀಳ್ಕೊಟ್ಟರು.

ತಿಮ್ಮಾ ಗೌಡರ ಮನೆ ತಲುಪಿದಾಗ ಅವರ ಮಗ ಗಣಪತಿ ಪುತ್ತುವನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದ. ಪುತ್ತು ಹಳದೀಪುರದವನೆಂದು ಹೇಳಿದ ಕೂಡಲೇ ಗಣಪತಿಯ ಮುಖದಲ್ಲಿ ದೊಡ್ಡ ನಗು. ಪುತ್ತು ರಾಷ್ಟ್ರೀಯ ಮಟ್ಟದ ಕ್ವಾಲಿಫೈಡ್ ವಾಲಿಬಾಲ್ ರೆಫ್ರೀ. ಕರ್ನಾಟಕ, ಗೋವಾಗಳಲ್ಲೆಲ್ಲಾ ವಾಲಿಬಾಲ್ ಪಂದ್ಯಾವಳಿಗಳಲ್ಲಿ ರೆಫ್ರೀಯಾಗಿ ಹೋಗುತ್ತಾನೆ. ಹಳದೀಪುರದಲ್ಲಿ ವ್ಯಾಸಂಗ ಮಾಡಿದ್ದ ಗಣಪತಿ, ಸ್ಥಳೀಯ ವಾಲಿಬಾಲ್ ಪಂದ್ಯಾಟಗಳಲ್ಲಿ ಪುತ್ತುವನ್ನು ನೋಡಿದ್ದ. ಹೀಗಾಗಿ ಆ ಒಂದು ಮುಹೂರ್ತದಲ್ಲಿ ಇಬ್ಬರು ಆಗಂತುಕರು ಗೆಳೆಯರಾದರು. ಈ ಹಳ್ಳಿಯಲ್ಲೂ ತನ್ನನ್ನು ಗುರುತಿಸಿದರಲ್ಲಾ ಎಂದು ಪುತ್ತುವಿಗೆ ಖುಷಿಯೋ ಖುಷಿ. ಬೈಕನ್ನು ಗಣಪತಿಯ ಮನೆಯಲ್ಲೇ ಇರಿಸಿ ಜಲಧಾರೆಯತ್ತ ಹೊರಟೆವು. ಅದಾಗಲೇ ಇಬ್ಬರು ಹೊಸ ಗೆಳೆಯರು ಮಾತುಕತೆಯಲ್ಲಿ ತೊಡಗಿಯಾಗಿತ್ತು.


ಮುಂದೆ ಶಾಲೆಯ ಬಳಿಯೇ ಗಣಪತಿಯ ಸಂಬಂಧಿ ಹನ್ಮಂತ ನಮಗೆ ಜೊತೆಯಾದ. ಸುಮಾರು ೪೦೦ ಅಡಿ ಎತ್ತರದಿಂದ ೯ ಹಂತಗಳಲ್ಲಿ ಧುಮುಕುವ ಜಲಧಾರೆಯ ದೃಶ್ಯ ನೋಡಿ ಇನ್ನಷ್ಟು ವೇಗವಾಗಿ ನಡೆಯತೊಡಗಿದೆವು.


ಜಲಧಾರೆಯ ಮೊದಲ ೩ ಹಂತಗಳಿಗೆ ಮರಗಿಡಗಳು ಚೆನ್ನಾದ ಚಪ್ಪರ ಹಾಕಿವೆ. ಎಂದಿನಂತೆ ನಾನು ನಿಧಾನ ಬರತೊಡಗಿದಾಗ ಇನ್ನು ಮುಂದಕ್ಕೆ ಹೋಗುವುದು ಕಷ್ಟಕರ ಎಂದು ಹನ್ಮಂತ ವಟಗುಟ್ಟತೊಡಗಿದ. ಹಾಗೆ ೬ನೇ ಹಂತ ತಲುಪಿದಾಗ ಹನ್ಮಂತ ಮತ್ತದೇ ಮಾತನ್ನು ಪುನರಾವರ್ತಿಸಿದರೂ ನಾನದನ್ನು ಕಡೆಗಣಿಸಿದೆ.


ಮುಂದೆ ೫ನೇ ಹಂತವನ್ನು ತಲುಪಿದೆವು. ಇದು ೫೦ ಅಡಿ ಅಂತರದಲ್ಲಿ ೨ ಧಾರೆಗಳಾಗಿ ಧುಮುಕುತ್ತಿತ್ತು. ಹನ್ಮಂತನ ವಿರೋಧದ ನಡುವೆಯೂ ಮುಂದುವರಿಸಿದೆವು. ಇಲ್ಲಿ ನಡೆದದ್ದೇ ದಾರಿ. ಕಲ್ಲಿನ ಮೇಲ್ಮೈಯಲ್ಲಿ ಬೆಳೆದಿರುವ ಹುಲ್ಲುಗಳನ್ನು ಆಧಾರವಾಗಿ ಬಳಸಿ ಎಚ್ಚರಿಕೆಯಿಂದ ಮುಂದುವರಿದರಾಯಿತು. ೫ನೇ ಹಂತದ ಮೇಲೆ ತಲುಪಿದಾಗ ಇನ್ನು ಮುಂದಕ್ಕೆ ಹೋಗುವುದು ನಮ್ಮಿಂದ ಸಾಧ್ಯವೇ ಇಲ್ಲ ಎಂದು ಹನ್ಮಂತ ಕೂತುಬಿಟ್ಟ. ಪುತ್ತುವಿಗೆ ಬೆಳಗ್ಗೆ ತಿಂದದ್ದು ಮತ್ತು ಕುಡಿದ ಎಳನೀರೆಲ್ಲಾ ಕರಗಿ ಹೋಗಿರಬೇಕು. ಮೇಲೆ ಹತ್ತಿ ಹತ್ತಿ ಸಾಕಾದ ಆತನೂ ಹನ್ಮಂತನ ಮಾತಿಗೆ ಒಪ್ಪಿಗೆ ಸೂಚಿಸಿದ! ಇನ್ನೂ ಮೇಲಕ್ಕೆ ಹೋಗಲೇಬೇಕೆಂದು ನಾನು ಪಟ್ಟು ಹಿಡಿದೆ. (ನಂತರ ಹನ್ಮಂತನ ಮನೆಯಲ್ಲಿ ವಿಶ್ರಮಿಸುವಾಗ ಮೇಲೆ ಹೋಗುವುದು ಬೇಡವೆಂದು ತಾನೇಕೆ ಪದೇ ಪದೇ ಹೇಳುತ್ತಿದ್ದೆ ಎಂದು ಹನ್ಮಂತ ತಿಳಿಸಿದ. ನನ್ನ ೯೫ ಕೆ.ಜಿ. ಧಡೂತಿ ದೇಹವನ್ನು ನೋಡಿ ಆತನಿಗೆ ಅನುಮಾನವಿತ್ತಂತೆ ಈತನಿಂದಾಗದು ಎಂದು).


ಸುಂದರವಾಗಿರುವ ನಾಲ್ಕನೇ ಹಂತದ ಸನಿಹ ತಲುಪಬೇಕಾದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಕೇವಲ ೩ ಅಡಿ ಅಗಲವಿರುವ ಬಂಡೆಯ ಹಾದಿಯಲ್ಲಿ ೫೦ ಅಡಿಗಳಷ್ಟು ದೂರ ನಡೆದುಕೊಂಡು ಹೋಗಬೇಕು. ಈ ಹಾದಿಯ ಎರಡೂ ಬದಿಯಲ್ಲಿ ನೀರು ಹರಿಯುತ್ತದೆ. ನಿಧಾನವಾಗಿ ಈ ತೊಡಕನ್ನು ದಾಟಿ ಮುಂದುವರಿದೆ. ಜಲಧಾರೆಯ ಎರಡನೇ ಹಂತದ ಬಳಿಕ ನೀರಿನ ಹರಿವು ಇಬ್ಭಾಗವಾಗುತ್ತದೆ. ಒಂದು ಭಾಗ ಜಲಧಾರೆಯ ೩ನೇ ಹಂತವನ್ನು ನಿರ್ಮಿಸಿದರೆ ಮತ್ತೊಂದು ಭಾಗ ನಾಲ್ಕನೇ ಹಂತವನ್ನು ನಿರ್ಮಿಸುತ್ತದೆ. ಜಲಧಾರೆಯ ೫ನೇ ಹಂತದ ಮೊದಲು ೨ ಭಾಗಗಳು ಮತ್ತೆ ಒಂದುಗೂಡುತ್ತವೆ.

ನಾಲ್ಕನೇ ಹಂತವನ್ನು ದಾಟಿ ೧೦ ನಿಮಿಷ ಮತ್ತೆ ಬಂಡೆಯ ಮೇಲ್ಮೈಯನ್ನೇರಿದರೆ ಜಲಧಾರೆಯ ೩ ನೇ ಮತ್ತು ಪ್ರಮುಖ ಹಂತ. ಇದು ಸುಮಾರು ೧೦೦ ಅಡಿಯಷ್ಟು ಎತ್ತರವಿದ್ದು ತಳದಲ್ಲಿ ಸಣ್ಣ ಗುಂಡಿಯನ್ನು ಹೊಂದಿದೆ. ಇಲ್ಲಿ ೩ ಜನರಿಗೆ ಮಾತ್ರ ನೀರಿನಲ್ಲಿಳಿಯುವಷ್ಟು ಸ್ಥಳಾವಕಾಶವಿದೆ. ೯ನೇ ಹಂತದಿಂದ ೩ನೇ ಹಂತದ ತಳದವರೆಗೆ ಬರಲು ಸುಮಾರು ೬೦ ನಿಮಿಷ ಬೇಕಾಗುವುದು. ಬಿಸಿಲಲ್ಲಿ ಒಂದು ತಾಸು ನೇರವಾಗಿ ಮೇಲೇರಿ ಈಗ ತ್ರಾಣವೇ ಇರಲಿಲ್ಲ. ಅಲ್ಲೇ ಕುಳಿತು ವಿಶ್ರಮಿಸಿದೆವು. ಅರ್ಧ ಗಂಟೆಯ ಬಳಿಕ ಕೆಳಗಿಳಿಯಲಾರಂಭಿಸಿದೆವು.


ಹನ್ಮಂತ ನಮ್ಮನ್ನು ಆತನ ಮನೆಗೆ ಕರೆದೊಯ್ದ. ಮನೆಯಂಗಳದಲ್ಲೇ ಇದ್ದ ಗಿಡದಿಂದ ನಿಂಬೆ ಹಣ್ಣನ್ನು ಕಿತ್ತು ಅದರಿಂದ ಪಾನಕ ಮಾಡಿ ನಮಗೆ ಕೊಡಲಾಯಿತು. ಎಷ್ಟು ತಾಜಾವಾಗಿತ್ತೆಂದರೆ ಲೋಟದ ತುದಿಯಲ್ಲಿ ಪಾನಕ ಹನಿಗಳು ಮೇಲಕ್ಕೆ ಪುಟಿಯುತ್ತಿದ್ದವು. ಗಣಪತಿ ತೆಂಗಿನ ಮರವೊಂದನ್ನು ಏರಿ ಸೀಯಾಳ ಕೊಯ್ದು ಎಳನೀರು ಕುಡಿಸಿದ. ಲೀಟರ್ ಗಟ್ಟಲೆ ನೀರಿದ್ದವೇನೋ ಆ ಸೀಯಾಳಗಳಲ್ಲಿ. ಎಷ್ಟು ಕುಡಿದರೂ ಮುಗಿಯುತ್ತಿರಲಿಲ್ಲ. ಹನ್ಮಂತನ ಮಗಳು ರಕ್ಷಿತಾಳ ರಂಗು ಮತ್ತು ರೂಪ ಕಂಡು ಪುತ್ತುವಿಗೆ ಫುಲ್ಲು ಡೌಟು - ಆಕೆ ನಿಜವಾಗಿಯೂ ಹನ್ಮಂತನ ಮಗಳು ಹೌದೋ ಅಲ್ಲವೋ ಎಂದು!


ನಂತರ ಗಣಪತಿಯ ಮನೆಯಲ್ಲಿ ಆತ ಮತ್ತೆ ಸೀಯಾಳ ಬೀಳಿಸಿ ಕುಡಿಸಿದ! ದಿನವೆಂದರೆ ಹೀಗಿರಬೇಕು ನೋಡಿ! ಸೀಯಾಳದ ಮೇಲೆ ಸೀಯಾಳ. ತಾಜಾ ಲಿಂಬೆ ಪಾನಕ. ವ್ಹಾ! ಹಿರೇಬೈಲು ತಲುಪಿದಾಗ ಮಹಾದೇವ ನಾಯ್ಕರು ಮನೆಯ ದಣಪೆ(ಗೇಟು)ಯ ಬಳಿಯೇ ನಿಂತಿದ್ದರು. ಅಲ್ಲಿ ಬೈಕು ನಿಲ್ಲಿಸಿದಾಗ ಮತ್ತೆ ಅವರು ಬಿಟ್ಟಾರೆಯೇ. ಪುನ: ಒಳಗೆ ಕರೆದು ಮತ್ತೊಂದು ಬಾರಿ ಚಹಾ ಕುಡಿಸಿದರು. ಸ್ವಲ್ಪ ಹೊತ್ತು ಮಾತನಾಡಿ, ಮುಕ್ತಿ ಹೊಳೆ ಜಲಧಾರೆ ನೋಡಲು ಶೀಘ್ರವೇ ಬರಲಿದ್ದೇವೆಂದು ತಿಳಿಸಿ ಹೊರಟೆವು.

ಶನಿವಾರ, ಡಿಸೆಂಬರ್ 20, 2008

ಶಿವು


ಸಕ್ರೆಬೈಲು ಆನೆ ಬಿಡಾರದಲ್ಲಿ ಮೊನ್ನೆ (ಡಿಸೆಂಬರ್ ೧೮) ರಾತ್ರಿ 75 ವರ್ಷ ವಯಸ್ಸಿನ ಶಿವು ಹೆಸರಿನ ಈ ರಾಜ ಗಾಂಭೀರ್ಯದ ಸಲಗ ಕೊನೆಯುಸಿರೆಳೆಯಿತು. ೩ ವರ್ಷಗಳ ಹಿಂದೆ ಸಕ್ರೆಬೈಲಿಗೆ ಭೇಟಿ ನೀಡಿದ್ದಾಗ ಶಿವು ನನ್ನನ್ನು ಬಹಳ ಆಕರ್ಷಿಸಿದ್ದ. ಆತನ ಒಂದೆರಡು ಚಿತ್ರಗಳನ್ನು ತೆಗೆದಿದ್ದೆ. ಸಮೀಪ ತೆರಳಿ ಸೊಂಡಿಲಿನ ಮೇಲೆ ಕೈಯಾಡಿಸಿದ್ದೆ. ಮೈದಡವಿದ್ದೆ. ದಂತದ ಉದ್ದಕ್ಕೂ ಕೈಯಾಡಿಸಿದ್ದೆ. ಆಗಾಗ ಈ ಚಿತ್ರವನ್ನು ನೋಡಿ ಶಿವುನ ನೆನಪು ಮಾಡಿಕೊಳ್ಳುತ್ತಿದ್ದೆ. ಇನ್ನು ಆತ ಕೇವಲ ನೆನಪಾಗಿಯೇ ಉಳಿಯುತ್ತಾನೆ.

ಮಂಗಳವಾರ, ಡಿಸೆಂಬರ್ 16, 2008

ಮೈಲಾರಲಿಂಗೇಶ್ವರ ದೇವಾಲಯ - ಮೈಲಾರ


೦೯-೦೩-೨೦೦೮.

ಮೈಲಾರ ಜಾತ್ರೆಯ ಬಗ್ಗೆ ಬಹಳ ಕೇಳಿದ್ದೆ. ಲಕ್ಷಗಟ್ಟಲೆ ಜನರು ಒಟ್ಟಾಗುವ ಈ ಜಾತ್ರೆ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದು. ಮೈಲಾರದ ಮೈಲಾರಲಿಂಗೇಶ್ವರ ದೇವಾಲಯವನ್ನು ನೋಡಬೆಕೆನ್ನುವ ಆಸೆ ಕೊನೆಗೂ ಈಡೇರಿತು. ಆದರೆ ನಿರಾಸೆಯೂ ಆಯಿತು. ಇದೊಂದು ಪ್ರಾಚೀನ ದೇವಾಲಯವಿರಬಹುದೆಂದು ನಾನು ಊಹಿಸಿದ್ದೆ. ಆದರೆ ಇದು ಅತ್ಯಾಧುನಿಕ ದೇವಾಲಯವಾಗಿತ್ತು.


ಬಣ್ಣಬಣ್ಣದ ಅಷ್ಟೆತ್ತರದ ಸುಂದರ ಸ್ವಾಗತ ಗೋಪುರ, ಅತಿ ವಿಶಾಲ ಪ್ರಾಂಗಣ, ಚಪ್ಪಲಿ ಇಡಲು ಪ್ರತ್ಯೇಕ ಕೌಂಟರ್, ಪ್ರವೇಶ ಶುಲ್ಕ, ಗರ್ಭಗುಡಿಯ ಮೇಲೆ ಇನ್ನಷ್ಟು ಸುಂದರವಾಗಿರುವ ಬಣ್ಣಬಣ್ಣದ ಗೋಪುರ. ಎಲ್ಲೆಲ್ಲೂ ಮಾರ್ಬಲ್! ಗೋಡೆಯಲ್ಲೂ, ನೆಲದಲ್ಲೂ ಎಲ್ಲೆಲ್ಲೂ ಮಾರ್ಬಲ್. ಅಂಗಿ ಕಳಚಿ ಅಂತರಾಳದೊಳಗೆ ಪ್ರವೇಶಿಸಬೇಕೆಂಬ ನಿಯಮ. ಇಲ್ಲದಿದ್ದರೆ ಮಾರ್ಬಲ್ ಹಾಸಿ, ಹೊಳೆಯುವಂತೆ ಮಾಡಲಾಗಿದ್ದ ನವರಂಗದಲ್ಲೇ ನಿಂತು ಮೈಲಾರಲಿಂಗೇಶ್ವರನ ದರ್ಶನ ಮಾಡಿ ತೃಪ್ತಿಪಟ್ಟುಕೊಳ್ಳಬೇಕು.


ದೇವಾಲಯದ ಹೊರಗೆ ಮಹಿಳೆಯೊಬ್ಬಳು ಮೈಲಾರಲಿಂಗೇಶ್ವರನಿಗೆ ಸಾಷ್ಟಾಂಗ ನಮಸ್ಕಾರ ಸೇವೆ ಮಾಡುತ್ತಿದ್ದಳು. ದೇವಾಲಯದ ಸುತ್ತಲೂ ಹಾಸಿರುವ ಚಪ್ಪಡಿಕಲ್ಲಿನ ಮೇಲೆ ಉರಿಬಿಸಿಲಿನಲ್ಲಿ ಈಕೆಯ ದೇಹ ದಂಡಿಸಿಕೊಳ್ಳುವ ಸೇವೆ ನೋಡಿ ದಂಗಾದೆ. ಸಾಷ್ಟಾಂಗ ನಮಸ್ಕಾರ ಮಾಡುವುದು, ನಂತರ ಎದ್ದು ೫ ಹೆಜ್ಜೆ ನಡೆದು ಮತ್ತೆ ಸಾಷ್ಟಾಂಗ ನಮಸ್ಕಾರ! ನಾವು ದೇವಾಲಯವನ್ನು ಸಂಪೂರ್ಣವಾಗಿ ನೋಡಿ ಮುಗಿಸಿದರೂ ಈಕೆ ೨ ಸುತ್ತು ಮಾತ್ರ ಮುಗಿಸಿದ್ದಳು. ಎಷ್ಟು ಸುತ್ತುಗಳ ಸೇವೆಯಿತ್ತೇನೋ. ಅಬ್ಬಾ ಭಕ್ತಿಯೇ!


ದೇವಾಲಯದ ಆಧುನಿಕತೆ ನೋಡಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇವಾಲಯ ಇದಾಗಿರಲಾರದು ಎಂಬ ಸಂಶಯ ಬರಲಾರಂಭಿಸಿತು. ಈ ದೇವಸ್ಥಾನದಿಂದ ಅನತಿ ದೂರದಲ್ಲಿ ಸಂಪೂರ್ಣವಾಗಿ ಪಾಳುಬಿದ್ದಿರುವ ತುಂಬಾ ಸಣ್ಣ ದೇವಾಲಯವೊಂದಕ್ಕೆ ಬೇಲಿ ಹಾಕಲಾಗಿತ್ತು. ಅಲ್ಲೇ ಪುರಾತತ್ವ ಇಲಾಖೆಯ ನೀಲಿ ಮತ್ತು ಕೆಂಪು ಬಣ್ಣದ ಫಲಕ! ಹೊರಗಿನಿಂದ ನೋಡಿದರೆ ಎಲ್ಲರೂ ನಿರ್ಲಕ್ಷಿಸಲೇಬೇಕಾದ ದೇವಸ್ಥಾನ. ಇದೇ ಪುರಾತತ್ವ ಇಲಾಖೆ ಮೈಲಾರದಲ್ಲಿ ತನ್ನ ಸುಪರ್ದಿಗೆ ಪಡೆದಿರುವ ಹಳೇ ಮೈಲಾರಲಿಂಗೇಶ್ವರ ದೇವಾಲಯ. ಒಳಗೆಲ್ಲಾ ಕಸಕಡ್ಡಿಗಳ ರಾಶಿ. ಗರ್ಭಗುಡಿಯಲ್ಲಿ ಪಾಣಿಪೀಠ ರಹಿತ ಶಿವಲಿಂಗ, ಅಂತರಾಳ ಮತ್ತು ನವರಂಗ.


ಆದರೆ ಈ ದೇವಾಲಯದಲ್ಲೊಂದು ನನ್ನನ್ನು ಬಹಳ ಗಲಿಬಿಲಿ ಮಾಡಿದ ವೈಶಿಷ್ಟ್ಯತೆಯಿತ್ತು. ಅದೆಂದರೆ ೨ ನಂದಿಗಳು. ಇದರಲ್ಲೇನೂ ದೊಡ್ಡ ವಿಷಯ ಎಂದಿರಾ? ಒಂದು ನಂದಿ ಅಂತರಾಳದಲ್ಲಿದ್ದರೆ ಇನ್ನೊಂದು ನವರಂಗದಲ್ಲಿದೆ. ನವರಂಗದಲ್ಲಿರುವ ನಂದಿ ಗರ್ಭಗುಡಿಗೆ ಮುಖ ಮಾಡಿ ಇದೆ. ಆದರೆ ಅಂತರಾಳದಲ್ಲಿರುವ ನಂದಿ ಗರ್ಭಗುಡಿಗೆ ಬೆನ್ನು ಮಾಡಿ ಆಸೀನನಾಗಿದೆ!!! ಇದೇ ವಿಶೇಷ. ನಂದಿ ಎಂದಾದರೂ ತನ್ನ ಸ್ವಾಮಿ ಶಿವನಿಗೆ ಬೆನ್ನು ಮಾಡಿ ಕೂತಿರುವುದನ್ನು ಕಂಡಿದ್ದೀರಾ? ಆದರೆ ಇಲ್ಲಿ ಹಾಗಿತ್ತು. ಆ ನಂದಿ ಮೊದಲಿನಿಂದಲೂ ಅಲ್ಲೇ ಇತ್ತೋ ಅಥವಾ ನಂತರ ತಂದಿರಿಸಲಾಯಿತೋ ಎಂದು ತಿಳಿಯಲಿಲ್ಲ. ನಂತರ ತಂದಿರಿಸಿದರೂ, ಹೀಗೆ ಶಿವಲಿಂಗಕ್ಕೆ ಬೆನ್ನು ಮಾಡಿ ಯಾಕೆ ಇರಿಸುತ್ತಾರೆ..ಎಂಬ ಪ್ರಶ್ನೆ ಬಹಳ ಕಾಡಿತು. ಈಗಲೂ ಕಾಡುತ್ತಿದೆ.

ಅಷ್ಟರಲ್ಲಿ ಹುಡುಗನೊಬ್ಬ ಪ್ರತ್ಯಕ್ಷನಾದ. ’ನಮ್ಮಜ್ಜ ಈ ಗುಡಿ ನೋಡ್ಕೋತಾನ್ರಿ’ ಎಂದ. ’ನಿಮ್ಮಜ್ಜ ಈ ಕಸ ತೆಗೆದು ಗುಡಿ ಸ್ವಚ್ಛ ಮಾಡಲ್ಲೇನು’? ಎಂದು ಕೇಳಿದರೆ.... ’ನಿಮ್ಮಂತ ಮಂದಿ ಬರ್ತಾರ್ರಿ... ಹೊಲಸ್ ಮಾಡ್ತಾರ್ರಿ... ಹಂಗೇ ಹೋಗ್ತಾರ್ರಿ ....ನಮ್ಮಜ್ಜಂದೇನೂ ಇಲ್ರಿ...’ ಎನ್ನಬೇಕೆ. ಎಲಾ ಇವನ ಎಂದೆ. ’ಎಲ್ಲಿ ನಿಮ್ಮಜ್ಜ’ ಎಂದು ಕೇಳಲು...’ಆರಾಮ್ ತಗೊಳಾಕ್-ಹತ್ತಾರ್ರಿ...ಅದ್ಕೆ ನಾನ್ ಇಲ್ಲಿದ್ದೀನ್ರಿ’ ಎಂದ. ದೇವಾಲಯದ ಹೆಸರೇನೆಂದು ಕೇಳಲು, ನಾಗರಾಜ ದೇವಾಲಯವೆಂದ! ’ಏನ್ ಮಾತಾಡ್ತಿಲೇ..ಇಷ್ಟ್ ಮಸ್ತ್ ಶಿವಲಿಂಗ ಐತಿ...ಈಶ್ವರ ಗುಡಿ ಅನ್ನೋದ್ ಬಿಟ್ಟ್ ನಾಗರಾಜ ಗುಡಿ ಅಂತಿಯಲ್ಲೇ’ಎಂದೆ. ’ಏ ಇಲ್ರೀ ಸರ...ನಾಗರಾಜ ಗುಡಿನೇ. ನಮ್ಮಜ್ಜ ನೋಡ್ಯಾನ. ಅಂವ ರಾತ್ರಿ ಇಲ್ಲೇ ಇರ್ತಾನ. ನಾಗ್ರಹಾವು ಬರ್ತದ. ಇಲ್ಲಿ ಕುತ್ಕೊಳ್ತದ’ ಎಂದು ಶಿವಲಿಂಗವನ್ನು ತೋರಿಸಿದ. ’ಬೇರೆ ಯಾರ್ ನೋಡ್ಯಾರ ನಾಗರಹಾವ್ನ..? ಎಂದು ಕೇಳಿದರೆ..’ಏ ಯಾರೂ ನೋಡಿಲ್ರೀ...ನಮ್ಮಜ್ಜ ಮಾತ್ರ ನೋಡ್ಯಾನ..’ಎಂದ. ಅಜ್ಜ ಕಟ್ಟಿದ ಕತೆಯೋ...ಮೊಮ್ಮಗ ಕಟ್ಟಿದ ಕತೆಯೋ ತಿಳಿಯಲೇ ಇಲ್ಲ.


ಇನ್ನೇನು ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಡಬೇಕೆನ್ನುವಾಗ ರಾಜಭಟರ ದಿರಿಸು ಧರಿಸಿದ ವ್ಯಕ್ತಿಯೊಬ್ಬ ದಾರಿಗಡ್ಡವಾಗಿ ಬಂದುಬಿಟ್ಟ. ಆತನ ಹಿಂದೆ ಮಕ್ಕಳ ಸೈನ್ಯ. ಆ ವ್ಯಕ್ತಿ ನಮ್ಮ ಬಳಿಗೆ ಬಂದು ಹಲ್ಲು ಕಿರಿಯುತ್ತಾ ನಿಂತು ಕೈ ಸನ್ನೆಯಲ್ಲಿ ಏನೇನೋ ಹೇಳತೊಡಗಿದ. ಆತನಿಗೆ ಮಾತು ಬರುವುದಿಲ್ಲ ಎಂದು ತಿಳಿಯಲು ಗೆಳೆಯ ನಿರಂಜನ ಆತನಿಗೆ ಸ್ವಲ್ಪ ಹಣ ಕೊಟ್ಟು ಭುಜ ತಟ್ಟಿದಾಗ ದೊಡ್ಡ ನಗುವನ್ನು ಬೀರಿದ ಆತನ ಪೇಟದ ಬಗ್ಗೆ ಮಾತನಾಡುತ್ತಾ ಹಿರೆಹಡಗಲಿಯತ್ತ ಪ್ರಯಾಣ ಮುಂದುವರಿಸಿದೆವು.