ಬೆಟ್ಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೆಟ್ಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 08, 2016

ಮಿಂಚ್ಕಲ್


ಸುಮಾರು ೧೦ ವರ್ಷಗಳ ಹಿಂದೆ, ಗೆಳೆಯ ದಿನೇಶ್ ಹೊಳ್ಳ ಮಿಂಚುಕಲ್ಲಿಗೆ ಚಾರಣ ಆಯೋಜಿಸಿದ್ದರು. ಆ ಚಾರಣಕ್ಕೆ ತೆರಳಲು ನನಗೆ ಆಗಿರಲಿಲ್ಲ. ಘಟ್ಟದ ಕೆಳಗಿನಿಂದ ಮಿಂಚುಕಲ್ಲನ್ನು ಏರುವುದು ಒಂದು ಸವಾಲೇ ಸರಿ. ಅದು ಕಷ್ಟಕರ ಹಾದಿಯಾಗಿದ್ದು, ಬಹಳ ನಡೆಯಬೇಕಾಗುವುದು. ಆ ಚಾರಣ ತಪ್ಪಿದ್ದಕ್ಕೆ ನಾನು ಒಳಗೊಳಗೇ ಸಂತೋಷಪಟ್ಟಿದ್ದೆ.



೨೦೧೩ರ ಮಾರ್ಚ್ ತಿಂಗಳಲ್ಲಿ, ರಮೇಶ್ ಕಾಮತ್ ನೇತೃತ್ವದಲ್ಲಿ ನಾವು ಏಳು ಮಂದಿ ಮಿಂಚುಕಲ್ಲಿಗೆ ಹೊರಡಲು ಆಣಿಯಾದೆವು. ಆದರೆ ಚಾರಣ ಹಾದಿ ಘಟ್ಟದ ಮೇಲಿನಿಂದ ಆಗಿತ್ತು. ಚಾರಣ ಆರಂಭಿಸುವ ಹಳ್ಳಿಗೆ ಅದೊಂದು ಸಂಜೆ ಬಂದು ದೇವಾಲಯದ ಮುಂದೆ ರಾತ್ರಿ ಕಳೆದೆವು.


ಮರುದಿನ ಮುಂಜಾನೆ ಸುತ್ತಲೂ ಬೆಟ್ಟಗಳೆಲ್ಲಾ ಮಂಜಿನಲ್ಲಿ ಸ್ನಾನ ಮಾಡುತ್ತಿದ್ದವು. ಅದೊಂದು ಸುಂದರ ದೃಶ್ಯವಾಗಿತ್ತು. ಹಲವಾರು ವರ್ಷಗಳ ಹಿಂದೆ ಮೇರುತಿ ಬೆಟ್ಟದ ತುದಿಯನ್ನೇರಿದಾಗ ಅಲ್ಲಿಂದಲೂ ಇದೇ ತೆರನಾದ ದೃಶ್ಯವನ್ನು ಆನಂದಿಸಿದ್ದೆವು.


ಮುಂಜಾನೆ ಆರಕ್ಕೇ ಚಾರಣವನ್ನು ಆರಂಭಿಸಿದೆವು. ಈ ದಾರಿಯಾಗಿ ಚಾರಣಕ್ಕೆ ತೆರಳುವವರಿಗೆ ಊರಿನ ಮೂರು ನಾಯಿಗಳು ಎಂದಿಗೂ ಜೊತೆ ನೀಡುತ್ತವೆ. ಅವು ಕೂಡಾ ನಮ್ಮೊಂದಿಗೆ ಚಾರಣಕ್ಕೆ ಅಣಿಯಾದವು.



 
ಹಿತವಾದ ವಾತಾವರಣದಲ್ಲಿ ಆರಂಭವಾದ ಚಾರಣವನ್ನು ಆನಂದಿಸುತ್ತಾ ಮುಂದೆ ಸಾಗಿದೆವು. ಈ ದಾರಿಯಾಗಿ ಮಿಂಚುಕಲ್ಲಿಗೆ ತೆರಳುವುದು ಬಹಳ ಸುಲಭ. ಚಾರಣದುದ್ದಕ್ಕೂ ಹಾದಿ ತೆರೆದ ಸ್ಥಳದ ಮೂಲಕ ಹಾದುಹೋಗುವುದರಿಂದ ಎಲ್ಲೆಲ್ಲೂ ಪ್ರಕೃತಿಯ ಸುಂದರ ನೋಟ ಲಭ್ಯ.



ಹಲವಾರು ಸಣ್ಣ ಪುಟ್ಟ ಬೆಟ್ಟಗಳನ್ನು ಸುತ್ತುವರಿದು ದಾಟಿ ಹಾಗೂ ಹಲವಾರು ದಿಣ್ಣೆಗಳನ್ನು ಏರಿಳಿದು ಮುಂದೆ ಸಾಗಿದೆವು.



ಕೆಲವೆಡೆ ಒಂದು ಸಣ್ಣ ಬೆಟ್ಟದ ತುದಿ ತಲುಪಿದಾಗ ಮುಂದಿನ ಸುಂದರ ದೃಶ್ಯದ ಅನಾವರಣ. ಕಣ್ಮುಂದೆ ಕಾಣುತ್ತಿರುವ ದೃಶ್ಯದ ಮೂಲಕವೇ ನಾವೀಗ ಹಾದುಹೋಗಬೇಕೆಂಬ ರೋಮಾಂಚನ.



ದೂರದೂರಕ್ಕೂ ಬೆಟ್ಟಗಳೇ ರಾರಾಜಿಸುತ್ತಿದ್ದವು. ೩೬೦ ಕೋನದ ಎಲ್ಲಾ ಮೂಲೆಗಳಲ್ಲೂ ಸಾಲು ಸಾಲು ವಿವಿಧ ಗಾತ್ರದ ಆಕಾರದ ಬೆಟ್ಟಗಳು. ಅವುಗಳದ್ದೇ ಸಾಮ್ರಾಜ್ಯ. ಅವುಗಳದ್ದೇ ರಾಜ್ಯಭಾರ.



ಚಾರಣದ ಸಮಯದಲ್ಲಿ ಮಾತನಾಡುವುದನ್ನು ನಾನು ಎಂದಿಗೂ ಇಷ್ಟಪಡುವುದಿಲ್ಲ. ಅದರಲ್ಲೂ ನಾನು ಎಂದಿಗೂ ಉಳಿದವರಿಗಿಂತ ಹಿಂದೆಯೇ ಇದ್ದಿರುತ್ತೇನೆ. ಈ ಚಾರಣದಲ್ಲಂತೂ ಇದ್ದ ಏಳು ಜನರಲ್ಲಿ ಎರಡು ತಂಡಗಳಾಗಿದ್ದವು. ಒಂದು ತಂಡ ಮುಂದೆ ಸಾಗುತ್ತಿದ್ದು ಅದರಲ್ಲಿ ಆರು ಜನರು ಮತ್ತು ಮೂರು ನಾಯಿಗಳಿದ್ದರೆ ಇನ್ನೊಂದು ಒಂದು ವ್ಯಕ್ತಿಯ ತಂಡ ಹಿಂದೆ ಇತ್ತು. ಬೀಸುವ ಗಾಳಿಯ ಸದ್ದು ಮಾತ್ರ ನನ್ನ ಸಂಗಾತಿ. ಆ ಮೂರು ನಾಯಿಗಳಲ್ಲಿ, ಒಂದು ನಾಯಿ ನಾನು ಬಂದೇನೋ ಇಲ್ಲವೋ ಎಂದು ಖಾತ್ರಿ ಮಾಡಿಕೊಂಡು ನಂತರ ಮುಂದೆ ಸಾಗುತ್ತಿತ್ತು!!



ಹಿಂದಿನಿಂದ ಹೀಗೆ ಒಬ್ಬನೇ ಬರಬೇಕಾದರೆ ಚಾರಣವನ್ನು ಬಹಳ ಆನಂದಿಸಿದೆ. ಇಂತಹ ವಿಶಿಷ್ಟ ಒಂಟಿತನ ಮತ್ತೆ ಮತ್ತೆ ಸಿಗದು. ಚಾರಣದಲ್ಲಿ ಮಾತ್ರ ಅದು ಲಭ್ಯವಾಗುವುದು. ಇಲ್ಲಂತೂ ಜೊತೆಯಾಗಿದ್ದ ಬೆಟ್ಟಗಳೂ ಅಪರಿಮಿತ ಆನಂದ ನೀಡಿದವು.


 
ಒಂದೆಡೆ ವಿಶ್ರಮಿಸಲು ಸುಮಾರು ಹದಿನೈದು ನಿಮಿಷ ಕಳೆದೆವು. ಇಲ್ಲಿಂದ ಕುಂಭಕಲ್ಲು ಕಾಣುತ್ತಿತ್ತು.



ನಂತರ ಮತ್ತೆ ಬೆಟ್ಟ ದಿಣ್ಣೆಗಳ ನಡುವಿನಿಂದ ಚಾರಣ ಸಾಗಿತು. ಕೊನೆಗೂ ದೂರದಲ್ಲಿ, ಮತ್ತೊಂದು ವಿಶಾಲ ಪ್ರದೇಶದ ಅಂಚಿನಲ್ಲಿ ಮಿಂಚುಕಲ್ಲಿನ ಮೊದಲ ನೋಟ ಪ್ರಾಪ್ತಿಯಾಯಿತು.



ಎಡಭಾಗದಲ್ಲಿ ಆಳವಾದ ಇಳಿಜಾರಿನ ಕಣಿವೆ. ಅಲ್ಲಿ ಸಣ್ಣ ಶೋಲಾ ಕಾಡುಗಳ ಹಾಗೂ ಅವನ್ನು ಸುತ್ತುವರಿದ ಬೆಟ್ಟಗಳ ನೋಟ.



ಕೊನೆಗೂ ಮಿಂಚುಕಲ್ಲಿನ ತುದಿ ತಲುಪಿದೆವು. ಸಮಯ ೧೦ ಆಗಿತ್ತು. ಗಮ್ಯಸ್ಥಾನ ತಲುಪಲು ನಮಗೆ ನಾಲ್ಕು ತಾಸು ಬೇಕಾಯಿತು. ಆದರೆ ನಾವು ಬಹಳ ನಿಧಾನವಾಗಿ ಚಾರಣ ಮಾಡಿದ್ದೆವು. ಅಲ್ಲಲ್ಲಿ ನಿಲ್ಲುತ್ತ, ಹರಟುತ್ತಾ, ತುಂಬಾನೇ ರಿಲ್ಯಾಕ್ಸ್ ಆಗಿ ಮಾಡಿದ ಚಾರಣವಿದು. ಸ್ವಲ್ಪ ವೇಗವಾಗಿ ನಡೆದರೆ ಎರಡುವರೆ ಅಥವಾ ಮೂರು ತಾಸುಗಳಲ್ಲಿ ಮಿಂಚುಕಲ್ಲು ತಲುಪಬಹುದು.



 
ಮಿಂಚುಕಲ್ಲಿನ ಮೇಲೆ ವಿಶಾಲ ಸ್ಥಳವಿದೆ. ಇಲ್ಲಿ ಸುಮಾರು ಒಂದು ತಾಸು ಕಳೆದೆವು. ಮಿಂಚುಕಲ್ಲಿನ ಇನ್ನೊಂದು ತುದಿಯಲ್ಲಿ ಕಣಿವೆಯಿದ್ದು, ಈ ಕಣಿವೆಯಾಚೆಯಿರುವ ಬೃಹತ್ ಬೆಟ್ಟವೇ ಅಮೇದಿಕಲ್ಲು. ಈ ದೃಶ್ಯಗಳನ್ನು ಸವಿಯುತ್ತಾ ಅಲ್ಲಿ ಸುಮಾರು ಸಮಯ ಕಳೆದೆವು.



ಸುಮಾರು ೧೧ ಗಂಟೆಗೆ ಅಲ್ಲಿಂದ ಹಿಂತಿರುಗಲು ಶುರು ಮಾಡಿದೆವು. ಈಗ ಬಿಸಿಲು ನಿಧಾನವಾಗಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿತ್ತು.



ಆದರೂ ಅಂತಹ ತೊಂದರೆಯೇನಿಲ್ಲದೆ ಅಲ್ಲೊಂದೆರಡು ಮರಗಳಿದ್ದ ಜಾಗದೆಡೆ ತಲುಪಿ ಊಟ ಮಾಡಿ ವಿಶ್ರಮಿಸಿದೆವು. ಮತ್ತೆ ಚಾರಣ ಆರಂಭಿಸಿದಾಗ ಸಮಯ ೨ ದಾಟಿತ್ತು. ಈಗ ಬಿಸಿಲಿನ ತಾಪ ನನ್ನ ವೇಗವನ್ನು ಕುಂಠಿತಗೊಳಿಸಿತ್ತು. ನೀರು ಬೇಗನೇ ಖಾಲಿಯಾಗತೊಡಗಿತ್ತು.


 
ನಾವು ಮುಂಜಾನೆ ಚಾರಣ ಆರಂಭಿಸಿದಾಗ ಒಂದು ದೊಡ್ಡ ಇಳಿಜಾರನ್ನು ದಾಟಿ ಬಂದಿದ್ದೆವು. ಹಿಂತಿರುಗುವಾಗ, ದಾರಿಯ ಕೊನೆಯಲ್ಲಿ ಸಿಗುವ ಈ ಏರುಹಾದಿಯನ್ನು ಕ್ರಮಿಸಲು ನನಗೆ ಬಹಳ ಕಷ್ಟವಾಗಲಿದೆ ಎಂದು ನಾನು ಮುಂಜಾನೆಯೇ ಗ್ರಹಿಸಿದ್ದೆ. ನಾವು ಮಿಂಚುಕಲ್ಲು ತುದಿ ತಲುಪಿದಾಗ ವಿವೇಕ್ ಕಿಣಿ, ಎಲ್ಲರಿಗೂ ಒಂದೊಂದು ಕಿತ್ತಳೆ ಹಣ್ಣನ್ನು ನೀಡಿದ್ದರು. ಈ ಏರುಹಾದಿಯ ನೆನಪಾಗಿ, ಆ ಜೀವರಕ್ಷಕ ಕಿತ್ತಳೆಯನ್ನು ನಾನು ಹಾಗೆಯೇ ಇಟ್ಟುಕೊಂಡಿದ್ದೆ. ನೀರನ್ನೂ ಸುಮಾರಾಗಿ ಇಟ್ಟುಕೊಂಡಿದ್ದೆ.



ಅದಾಗಲೇ ಎಂಟು ತಾಸಿನ ಚಾರಣ ಮಾಡಿಯಾಗಿತ್ತು. ಆದರೆ ಈ ಕೊನೆಯ ಭಾಗ ಶುರುವಾಗುವ ಮೊದಲೇ ಮಾನಸಿಕವಾಗಿ ತೊಂದರೆ ನೀಡಲು ಆರಂಭಿಸಿತ್ತು. ನಿಧಾನವಾಗಿ ಹೆಜ್ಜೆಯಿಡಲು ಆರಂಭಿಸಿದೆ. ಐದೈದು ಹೆಜ್ಜೆಗೂ ವಿರಮಿಸಿದೆ. ಇಲ್ಲಿ ವಿವೇಕ್ ನೀಡಿದ್ದ ಕಿತ್ತಳೆ ಆಪತ್ಬಾಂಧವನಾಗಿ ಪ್ರಯೋಜನಕ್ಕೆ ಬಂದಿತು. ಕಿತ್ತಳೆಯಲ್ಲಿ ೧೦ ಎಸಳುಗಳು ಇರುತ್ತವೆ. ಇಲ್ಲೊಂದು, ಅಲ್ಲೊಂದು ಮತ್ತೆ ಮುಂದೆ ಮತ್ತೊಂದು ಎಂದು ಮೊದಲೇ ನಿರ್ಧರಿಸಿ ಮೇಲೆ ತಲುಪಿದಾಗ ಕೊನೆಯ ಎಸಳನ್ನು ಬಾಯೊಳಗಿಟ್ಟೆ. ಸುಮಾರು ೩೦ ನಿಮಿಷ ಆ ರಣಬಿಸಿಲಿನಲ್ಲಿ ಬಹಳ ಕಷ್ಟದಿಂದ ಮೇಲೇರಿದ್ದನ್ನು ಎಂದೂ ಮರೆಯಲಾರೆ.

ಸೋಮವಾರ, ಫೆಬ್ರವರಿ 08, 2016

ಏರಿಕಲ್ಲನ್ನು ಏರಿ... ಮತ್ತೊಮ್ಮೆ...


೨೦೧೫ರ ಜನವರಿ ತಿಂಗಳಂದು ಉಡುಪಿ ಯೂತ್ ಹಾಸ್ಟೆಲ್ ವತಿಯಿಂದ ಏರಿಕಲ್ಲಿಗೆ ಚಾರಣ ಆಯೋಜಿಸಲಾಗಿತ್ತು. ನಾನೂ ಸೇರಿಕೊಂಡೆ. ಈ ಮೊದಲು ೨೦೦೭ರಲ್ಲಿ ಒಮ್ಮೆ ಏರಿಕಲ್ಲಿಗೆ ತೆರಳಿದ್ದೆ. ಆ ಚಾರಣದ ಸುಂದರ ನೆನಪುಗಳು ಮತ್ತೊಮ್ಮೆ ಏರಿಕಲ್ಲಿನೆಡೆ ತೆರಳಲು ನನಗೆ ಪ್ರೇರಕವಾದವು. ಈ ರಮೇಶ್ ಕಾಮತ್ ಎಲ್ಲೆಲ್ಲೋ ಸುತ್ತಾಡುತ್ತಿರುತ್ತಾರೆ. ಅವರೊಂದಿಗೆ ಸುಧೀರ್ ಕುಮಾರ್ ಕೂಡಾ. ಉಡುಪಿ ಯೂತ್ ಹಾಸ್ಟೆಲ್‍ಗೆ ಏರಿಕಲ್ಲಿಗೆ ದಾರಿ ತಿಳಿದಿರಲಿಲ್ಲ. ಆದರೆ ಈ ಇಬ್ಬರು ಮತ್ತೆ ಮತ್ತೆ ಏರಿಕಲ್ಲನ್ನು ಏರಿಳಿದಿದ್ದರಿಂದ ಅವರನ್ನು ಚಾರಣಕ್ಕೆ ಬರುವಂತೆ ವಿನಂತಿಸಲಾಯಿತು.



ಕಾಡಿನೊಳಗೆ ಸುಮಾರು ೪೫ ನಿಮಿಷ ನಡೆದ ಬಳಿಕ, ನಂತರದ ಒಂದುವರೆ ತಾಸು ಚಾರಣ ತೆರೆದ ಪ್ರದೇಶದಲ್ಲಿ. ಅಸಲಿಗೆ ಈ ಚಾರಣ ಸುಲಭದ್ದು. ಆದರೆ ಅಂದು ಬಿಸಿಲು ನಮ್ಮನ್ನು ಹೈರಾಣಾಗಿಸಿತು. ಚಾರಣದುದ್ದಕ್ಕೂ ಎಲ್ಲಿಯೂ ನೀರು ಸಿಗದಿರುವುದರಿಂದ, ಕೊನೆಕೊನೆಗೆ ಅಲ್ಲಿ ನೀರಿಗೆ ಹಾಹಾಕಾರ.



ಚಾರಣದ ಒಂದು ಭಾಗದಲ್ಲಿ ಎರಡು ದಾರಿಗಳಿವೆ. ಸುತ್ತುಬಳಸಿ ತೆರಳಿದರೆ ದಾರಿ ’ಯು’ ಆಕಾರದಲ್ಲಿ ತಿರುಗಿ ಬೆಟ್ಟದ ಮೇಲೆ ಬರುವುದು. ಇಲ್ಲವಾದಲ್ಲಿ ನೇರವಾಗಿ ಮೇಲೆ ಹತ್ತಿ ಆ ಸುತ್ತಿ ಬಳಸಿ ಬರುವ ದಾರಿಯನ್ನು ಸೇರಿಕೊಳ್ಳಬಹುದು. ಏಳು ವರ್ಷಗಳ ಹಿಂದೆ ಈ ಶಾರ್ಟ್‍ಕಟ್ ಮೂಲಕ ತೆರಳಿದ್ದೆ. ಇಂದು ಒಂದಿಬ್ಬರು ತರುಣರನ್ನು ಹೊರತುಪಡಿಸಿ ಉಳಿದೆಲ್ಲರೂ ಸುತ್ತಿಬಳಸಿ ಬರುವ ದಾರಿ ಮೂಲಕವೇ ತೆರಳಿದ್ದರೂ, ನಾನು ಹುಂಬತನದಿಂದ ಆ ಶಾರ್ಟ್‍ಕಟ್ ಮೂಲಕ ನೇರವಾಗಿ ಮೇಲೇರತೊಡಗಿದೆ. ಚಾರಣದಲ್ಲಿ ನಾನೇ ಹಿಂದೆ ಇದ್ದಿದ್ದು ಕೂಡಾ ನನ್ನನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿತು.



ಅರ್ಧ ದಾರಿ ಏರುವಷ್ಟರಲ್ಲಿ ಯಾಕಾದರೂ ಈ ದಾರಿಯಾಗಿ ಬಂದೆನೋ ಎಂದು ಪರಿತಪಿಸತೊಡಗಿದೆ. ಹಿಂದಿರುಗಿ ನೋಡಿದರೆ ನಾನು ಸುಮಾರಾಗಿ ಮೇಲೆ ಬಂದಾಗಿತ್ತು. ಮತ್ತೆ ಕೆಳಗಿಳಿದು, ಮತ್ತೊಂದು ದಾರಿಯಲ್ಲಿ ಬರುವಷ್ಟರಲ್ಲಿ ತುಂಬಾನೇ ತಡವಾಗುವುದು ಎಂದರಿತು ಬೇರೆ ದಾರಿಯಿಲ್ಲದೆ ಮುನ್ನಡೆದೆ. ಮೇಲೇರಿದಂತೆ ದಾರಿ ಇನ್ನಷ್ಟು ಕಠಿಣ ಮತ್ತು ನೇರ. ಎರಡು ಕಡೆ, ಆ ಪೊದೆಗಳ ನಡುವೆ ಎಲ್ಲಿ ಕಾಲಿಡುವುದೆಂದು ಕಾಣದೆ ಎಡವಿಬಿದ್ದೆ.



ಸುಮಾರು ಮುಕ್ಕಾಲು ಭಾಗ ಮೇಲೇರಿದಾಗ, ಮತ್ತೊಂದು ದಾರಿಯಿಂದ ಬರುತ್ತಿದ್ದ ನನ್ನ ಸಹಚಾರಣಿಗರು ಕಾಣಸಿಕ್ಕರು. ಆಹಾ..... ನನಗಿಂತ ಎಷ್ಟೋ ಮುಂದಿದ್ದ ಇವರನ್ನು ನಾನು ಈಗ ಸೇರಿಕೊಂಡೆ ಎಂಬ ಉತ್ಸಾಹ, ಸಂತೋಷದಿಂದ ಮತ್ತೆ ಮೇಲೇರಲು ಆರಂಭಿಸಿದೆ. ಆದರೆ ದಾರಿ ಇನ್ನಷ್ಟು ಕಠಿಣವಾಗತೊಡಗಿತು. ಕೊನೆಗೆ ಒದ್ದಾಡಿ, ಗುದ್ದಾಡಿ, ತಡಬಡಿಸಿ, ಮತ್ತೊಂದೆರಡು ಸಲ ಜಾರಿಬಿದ್ದು, ಉಳಿದವರನ್ನು ಸೇರಿಕೊಂಡೆ.



ಏರಿಕಲ್ಲು ಇನ್ನೂ ದೂರವಿತ್ತು. ಆದರೆ ಅಷ್ಟರಲ್ಲಿ ನನ್ನ ದೇಹ ವಿಶ್ರಾಂತಿಗೆ ಬೊಬ್ಬಿಡಲಾರಂಭಿಸಿತ್ತು. ಸುಮಾರು ಹೊತ್ತು ಆ ಬಿಸಿಲಿನಲ್ಲಿಯೇ ವಿಶ್ರಮಿಸಿದೆ. ಆ ಶಾರ್ಟ್‍ಕಟ್ ನನ್ನ ಬೆವರಿಳಿಸಿತ್ತು.




ಅಲ್ಲಿಂದ ಮುಂದೆ ನಿಧಾನವಾಗಿ ನಡೆದು ಇನ್ನೊಂದು ೨೦ ನಿಮಿಷದಲ್ಲಿ ಏರಿಕಲ್ಲಿನ ಬುಡವನ್ನು ತಲುಪಿದೆ. ನಾನೇ ಕೊನೆಯವನೆಂದು ಮತ್ತೆ ಬೇರೆ ಹೇಳಬೇಕೆ? ಇಲ್ಲಿ ಮತ್ತೆ ವಿಶ್ರಾಂತಿ. ಸುತ್ತಲಿನ ಬೆಟ್ಟ ಗುಡ್ಡಗಳ ದೃಶ್ಯದ ಅವಲೋಕನ. ಹರಟೆ. ಕೊರೆತ. ಉದರ ಪೋಷಣೆ. ಜಿಹ್ವಾ ಚಪಲ ಪೂರೈಕೆ. ಇತ್ಯಾದಿ.



ಈ ಚಾರಣ ಸುಲಭದ್ದು ಎಂದು ಹೊರಟ ನಮಗೆ ಪ್ರಕೃತಿ ಅಂದು ತಕ್ಕ ಪಾಠ ಕಲಿಸಿತ್ತು. ಸೂರ್ಯದೇವನ ಪ್ಲ್ಯಾನ್ ಬೇರೆನೇ ಇತ್ತು. ಆತ ನಮ್ಮನ್ನು ಸಿಕ್ಕಾಪಟ್ಟೆ ಕಾಡಿದ. ತನ್ನನ್ನು ಗಣನೆಗೆ ತಗೆದುಕೊಳ್ಳದೇ ಚಾರಣ ಆರಂಭಿಸಿದ ನಮ್ಮನ್ನು ತರಾಟೆಗೆ ತೆಗೆದುಕೊಂಡ, ಚಾರಣದ ಹೊಸ ಅನುಭವವನ್ನು ನೀಡಿದ ಮತ್ತು ಸ್ವಲ್ಪ ಜೋರಾಗಿಯೇ ಎಚ್ಚರಿಕೆಯನ್ನೂ ನೀಡಿದ.