ನೊಳಂಬ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೊಳಂಬ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮಾರ್ಚ್ 27, 2016

ನೀಲಕಂಠ ಕಾಳೇಶ್ವರ ದೇವಾಲಯ - ಕಾಳಗಿ

















ಶಾಸನಗಳಲ್ಲಿ ಕಾಳಗಿಯನ್ನು ’ಕಾಳುಗೆ’ ಎಂದು ಬರೆಯಲಾಗಿದೆ. ಕಲ್ಯಾಣಿ ಚಾಲುಕ್ಯ ಹಾಗೂ ಕಳಚೂರಿ ವಂಶದ ಆಳ್ವಿಕೆಯ ಕಾಲದಲ್ಲಿ ಸುತ್ತಮುತ್ತಲಿನ ಒಂದು ಸಾವಿರ ಹಳ್ಳಿಗಳಿಗೆ ಕಾಳಗಿ ರಾಜಧಾನಿಯಾಗಿತ್ತು. ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಅವುಗಳಿರುವ ಮೂಲದಿಕ್ಕುಗಳಿಗೆ ಅನುಸಾರವಾಗಿಯೇ ಇಲ್ಲಿಯೂ ಪ್ರತಿಷ್ಠಾಪಿಸಲಾಗಿರುವುದರಿಂದ ಕಾಳಗಿಯನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ.


ಇಲ್ಲಿರುವ ನೀಲಕಂಠ ಕಾಳೇಶ್ವರ ದೇವಾಲಯವು ಬಹಳ ಪುರಾತನವಾದದ್ದು ಎಂದು ನಂಬಲಾಗಿದೆ. ಇತಿಹಾಸಕಾರರು ಈ ದೇವಾಲಯವು ೨ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎನ್ನುತ್ತಾರೆ. ಇಸವಿ ೧೧೦೩ರ ಶಾಸನವೊಂದರಲ್ಲಿ ಈ ದೇವಾಲಯವನ್ನು ಸ್ವಯಂಭೂ ಕಾಳೇಶ್ವರ ಎಂದು ಸಂಬೋಧಿಸಲಾಗಿದೆ. ಇನ್ನೊಂದು ಶಾಸನದಲ್ಲಿ ಬಾಣವಂಶದ ದೊರೆ ಗೊಂಕರಸನ ತಂದೆ ವೀರ ಕಾಳರಸನು ಈ ದೇವಾಲಯಕ್ಕೆ ಭೂಮಿ ನೀಡಿದ್ದಾನೆ ಎಂದು ತಿಳಿಸಲಾಗಿದೆ. ಶಾಸನಗಳಿಂದ ತಿಳಿದುಬಂದಿರುವ ಇನ್ನೊಂದು ಮಾಹಿತಿಯೆಂದರೆ ಇಸವಿ ೧೦೯೩ರಲ್ಲಿ ಚಾಲುಕ್ಯ ದೊರೆ ತ್ರಿಭುವನಮಲ್ಲನು ಈ ದೇವಾಲಯಕ್ಕೆ ದಾನ ನೀಡಿರುವುದು.


ದೇವಾಲಯದ ಆವರಣದಲ್ಲಿ ಆಯತಾಕಾರದ ಪುಷ್ಕರಿಣಿಯಿದೆ. ಎಂದೂ ಬತ್ತದ ಗಂಗೆ ಎಂದು ಈ ಪುಷ್ಕರಿಣಿಯನ್ನು ಕರೆಯಲಾಗುತ್ತದೆ. ಇಲ್ಲಿ ಉದ್ಭವವಾಗುವ ನೀರು ನೆಲದಡಿಯಿಂದಲೇ ಹರಿದು ಸಮೀಪದಲ್ಲೇ ಹರಿಯುವ ರುದ್ರಹಳ್ಳಕ್ಕೆ ಸೇರುತ್ತದೆ. ಪುಷ್ಕರಿಣಿಯಿಂದ ಹೊರಹರಿಯುವ ನೀರು, ರುದ್ರಹಳ್ಳಕ್ಕೆ ಸೇರುವ ಸ್ವಲ್ಪ ಮೊದಲು ಶಿವಲಿಂಗವೊಂದನ್ನು ಹಾದುಹೋಗುತ್ತದೆ. ಸದಾ ನೀರಿನಲ್ಲೇ ಇರುವ ಈ ಶಿವಲಿಂಗ, ನಾನು ತೆರಳಿದ ಮುನ್ನಾ ದಿನ ಮಳೆಬಿದ್ದಿದ್ದರಿಂದ, ನೀರಿನ ಪ್ರಮಾಣ ಹೆಚ್ಚಾಗಿ, ನೀರಿನಲ್ಲಿ ಮುಳುಗಿತ್ತು ಮತ್ತು ಕಾಣುತ್ತಿರಲಿಲ್ಲ.


ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯ ಕಾಲಕಾಲಕ್ಕೆ ನವೀಕರಣಗೊಂಡಿರುವುದರಿಂದ, ಆಧುನಿಕ ದೇವಾಲಯದಂತೆ ಕಾಣುತ್ತದೆ. ಮುಖಮಂಟಪದಲ್ಲಿ ಒತ್ತೊತ್ತಾಗಿ ಹಲವಾರು ಕಂಬಗಳಿವೆ. ನವರಂಗ, ಅಂತರಾಳ ಹಾಗೂ ಗರ್ಭಗುಡಿಗಳ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರನ್ನು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕಾಣಬಹುದು. ಸಣ್ಣ ಉದ್ಭವ ಶಿವಲಿಂಗಕ್ಕೆ ದಿನಾಲೂ ಪೂಜೆ ನಡೆಯುತ್ತದೆ.


ನವರಂಗದಲ್ಲಿ ಚತುರ್ಮುಖ ಗಣೇಶನ ಅಪರೂಪದ ಮೂರ್ತಿಯಿದೆ. ಈ ಮೂರ್ತಿಗೊಂದು ಪ್ರಶಸ್ತ ಸ್ಥಾನ ನೀಡಿ ಪೂಜೆ ಸಲ್ಲಿಸಬಹುದು. ಆದರೆ ತೀರಾ ಸಣ್ಣದಿರುವ ನವರಂಗದ ಮೂಲೆಯಲ್ಲಿ ಈ ಮೂರ್ತಿಯಿದೆ. ಇಟ್ಟಿರುವ ಸ್ಥಳ ಎಷ್ಟು ಇಕ್ಕಟ್ಟಾಗಿದೆಯೆಂದರೆ ಈ ಚತುರ್ಮುಖ ಗಣೇಶನ ನಾಲ್ಕನೇ ಮುಖ ನೋಡುವುದು ಅಸಾಧ್ಯ! ನವರಂಗದ ಛಾವಣಿಯಲ್ಲಿ ಸುಂದರ ಕೆತ್ತನೆಯೊಂದಿದೆ.


ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೇಲೆ ಹಾಕಿರುವ (ಪ್ರಜಾವಾಣಿಯಲ್ಲಿ ಈ ದೇವಾಲಯದ ಬಗ್ಗೆ ಬಂದ ಲೇಖನದ ತುಣುಕು) ಲೇಖನವನ್ನು ಓದಿ ತಿಳಿದುಕೊಳ್ಳಬಹುದು.


ದೇವಾಲಯಕ್ಕೆ ತಾಗಿಕೊಂಡೇ ಹರಿಯುವ ರುದ್ರಹಳ್ಳವನ್ನು ದಿಟ್ಟಿಸುತ್ತ ಕುಳಿತಿರುವಂತೆ ಗಣೇಶನ ಮತ್ತು ಬಸವನ ಮೂರ್ತಿಗಳಿವೆ. ಗಣೇಶನಿಗೆ ತಾಗಿಕೊಂಡೇ ನಾಗನ ಕಲ್ಲೊಂದು ಅಡ್ಡ ಮಲಗಿದೆ. ಹಳ್ಳಿಗರ ಅಸಡ್ಡೆ ಅದೆಷ್ಟರ ಮಟ್ಟಿಗೆ ಇದೆಯೆಂದರೆ ಈ ಮೂರ್ತಿಗಳಿಗೆ ಯಾವ ಗೌರವನೇ ಇಲ್ಲ! ಅನತಿ ದೂರದಲ್ಲಿ ಹಸ್ತಿಯ (ಹಾಗೆಂದು ನಾನು ತಿಳಿದುಕೊಂಡಿದ್ದೇನೆ) ಮೂರ್ತಿಯೊಂದು ಗಣೇಶ ಮತ್ತು ಬಸವನಂತೆ ರುದ್ರಹಳ್ಳದತ್ತ ದಿಟ್ಟಿಸಿ ನೋಡುತ್ತಿತ್ತು. ಇನ್ನೂ ಸ್ವಲ್ಪ ದೂರದಲ್ಲಿ ಚನ್ನಕೇಶವನ ಭಗ್ನ ಮೂರ್ತಿಯೊಂದು ಮಣ್ಣಿನಲ್ಲಿ ಅರ್ಧ ಹೂತುಹೋಗಿದ್ದು, ಅದೆಲ್ಲೋ ದಿಟ್ಟಿಸುವಂತೆ ತೋರುತ್ತಿತ್ತು.


ರುದ್ರಹಳ್ಳದ ಇನ್ನೊಂದು ದಡದಲ್ಲಿ ೪೦ ಗುಣಿಸು ೪೦ ಅಳತೆಯುಳ್ಳ ಚೌಕಾಕಾರದ ಪುಷ್ಕರಿಣಿಯಿದೆ. ಈ ಪುಷ್ಕರಿಣಿಯನ್ನು ಲಕ್ಷ್ಮೀನರಸಿಂಹ ತೀರ್ಥ ಎಂದು ಕರೆಯುತ್ತಾರೆ. ಈ ಲಕ್ಷ್ಮೀನರಸಿಂಹ ತೀರ್ಥದ ನಟ್ಟನಡುವೆ ನಾಲ್ಕು ದಿಕ್ಕುಗಳಿಂದ ಪ್ರವೇಶದ್ವಾರಗಳುಳ್ಳ ಸಣ್ಣ ದೇವಾಲಯವಿದೆ. ಒಳಗಡೆ ಪೀಠ ಬಿಟ್ಟರೆ ಈ ಪಾಳು ದೇವಾಲಯದಲ್ಲಿ ಯಾವುದೇ ಮೂರ್ತಿಯಿಲ್ಲ.


ಈ ಪುಷ್ಕರಿಣಿಯ ನೀರು ಶುದ್ಧವಾಗಿದ್ದು, ತಿಳಿ ನೀಲಿ ಬಣ್ಣವನ್ನು ಹೊಂದಿದೆ. ಆದರೂ ನೀರಿನಲ್ಲಿ ತೇಲುತ್ತಿರುವ ಪಾಚಿಯನ್ನು ತೆಗೆದು ಸ್ವಚ್ಛಗೊಳಿಸಿದರೆ ಪುಷ್ಕರಿಣಿ ಇನ್ನಷ್ಟು ಆಕರ್ಷಕವಾಗಿ ಕಾಣುವುದು.

ಮಂಗಳವಾರ, ಮಾರ್ಚ್ 13, 2012

ಕಲ್ಲೇಶ್ವರ ದೇವಾಲಯ - ಅರಳಗುಪ್ಪೆ


ಅರಳಗುಪ್ಪೆಯಲ್ಲಿ ಕೆರೆಯ ತಟದಲ್ಲಿ ನೆಲೆಗೊಂಡಿದ್ದಾನೆ ಕಲ್ಲೇಶ್ವರ. ಶಾಸನಗಳಲ್ಲಿ ಈ ಊರನ್ನು ’ಅಳರಿಗುಪ್ಪೆ’ ಎಂದು ಕರೆಯಲಾಗಿದೆ. ಅಷ್ಟ ದೇವಾಲಯಗಳ ಸಮುಚ್ಚಯವಿರುವ ವಿಶಾಲ ಪ್ರಾಂಗಣ ಮೊದಲ ನೋಟಕ್ಕೆ ಅಷ್ಟೇನು ಆಕರ್ಷಕವಾಗಿ ಕಾಣಬರುವುದಿಲ್ಲ. ಇರುವ ಎಲ್ಲಾ ದೇವಾಲಯಗಳಿಗೂ ಬಣ್ಣ ಬಳಿಯಲಾಗಿದೆ. ಕಲ್ಲೇಶ್ವರನ ಮತ್ತು ಉಮಾಮಹೇಶ್ವರ ಗುಡಿಗಳಿಗೆ ಪ್ರಾಮುಖ್ಯತೆ ನೀಡಿ ಹಳದಿ ಬಣ್ಣ ಬಳಿದರೆ ಉಳಿದವುಗಳಿಗೆ ಬಿಳಿ.


ಕಲ್ಲೇಶ್ವರ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು. ಅಲ್ಲೇ ಇದ್ದ ಅಜ್ಜಿಯೊಬ್ಬಳನ್ನು ಬೀಗದ ಬಗ್ಗೆ ವಿಚಾರಿಸಿದಾಗ ಆಕೆ ಏನನ್ನೂ ಮಾತನಾಡದೆ ಎತ್ತಲೋ ಹೋದಳು. ’ಏನಪ್ಪಾ ಸೊಕ್ಕು ಈ ಮುದುಕಿಗೆ’ ಎಂದು ಮನದಲ್ಲೇ ಆಕೆಗೆ ಹಿಡಿಶಾಪ ಹಾಕುತ್ತಾ ದೇವಾಲಯದ ದ್ವಾರದ ಚಿತ್ರಗಳನ್ನು ತೆಗೆಯುತ್ತಿರಬೇಕಾದರೆ ಆ ಅಜ್ಜಿ ಒಬ್ಬರನ್ನು ಕರಕೊಂಡು ಬಂದಳು! ಇವರು ದೇವಾಲಯದ ಜವಾಬ್ದಾರಿಯನ್ನು ಹೊತ್ತಿರುವ ವ್ಯಕ್ತಿಯಾಗಿದ್ದು, ದೇವಾಲಯದ ಬಾಗಿಲಿನ ಬೀಗ ತೆಗೆದರು. ಅಜ್ಜಿಗೆ ಧನ್ಯವಾದ ಹೇಳಿ, ಮನದಲ್ಲೇ ಕ್ಷಮೆಯನ್ನೂ ಯಾಚಿಸಿದೆ.


ನೊಳಂಬ ರಾಜರಿಂದ ಒಂಬತ್ತನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಏಕಕೂಟವಾಗಿದ್ದು ನವರಂಗ, ದ್ವಾರರಹಿತ ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಗರ್ಭಗುಡಿಯ ದ್ವಾರವು ನಾಲ್ಕು ತೋಳುಗಳದ್ದಾಗಿದ್ದು ಒಳಗೆ ಕರಿಕಲ್ಲಿನ ಆಕರ್ಷಕ ಶಿವಲಿಂಗವಿದೆ. ಈ ದೇವಾಲಯದಲ್ಲಿ ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ. ದೇವಾಲಯವನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಲಾಗಿದೆ. ದೇವಾಲಯದ ಎರಡು ಪ್ರಮುಖ ಆಕರ್ಷಣೆಗಳೆಂದರೆ ನವರಂಗದ ಛಾವಣಿಯಲ್ಲಿರುವ ಅದ್ಭುತ ಕೆತ್ತನೆಗಳು ಮತ್ತು ದೇವಾಲಯದ ದ್ವಾರದಲ್ಲಿರುವ ಕೆತ್ತನೆಗಳು.


ದೇವಾಲಯದ ದ್ವಾರವು ನಾಲ್ಕು ತೋಳುಗಳದ್ದಾಗಿದ್ದು ವಾದ್ಯಗಾರರು, ನರ್ತಕಿಯರು ಮತ್ತು ದ್ವಾರಪಾಲಕರನ್ನು ಹೊಂದಿದೆ. ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಗಜಲಕ್ಷ್ಮೀಯ ಕೆತ್ತನೆಯ ಮೇಲಿನ ಸಾಲಿನಲ್ಲಿ ೫ ಕುಬ್ಜರು ಕುಳಿತಿರುವಂತೆ ಕೆತ್ತಲಾಗಿದೆ. ಅವರು ಯಾರು, ಯಾಕೆ ಹಾಗೆ ಕೆತ್ತಲಾಗಿದೆ, ಮಹತ್ವ ಏನು ಎಂದು ತಿಳಿಯಲಿಲ್ಲ. ಗಂಧರ್ವರು ಆಗಿರಬಹುದು.


ನವರಂಗದ ಛಾವಣಿಯಲ್ಲಿ ಸುತ್ತಲೂ ಅಷ್ಟದಿಕ್ಪಾಲಕರನ್ನು ತಮ್ಮ ತಮ್ಮ ವಾಹನಗಳಲ್ಲಿ ಆಸೀನರಾಗಿರುವಂತೆ ಕೆತ್ತಲಾಗಿದ್ದು, ನಟ್ಟನಡುವೆ ತಾಂಡವೇಶ್ವರನ ಮೂರ್ತಿಯನ್ನು ಕೆತ್ತಲಾಗಿದೆ. ಸಂಪೂರ್ಣ ಆಭರಣಧಾರಿಯಾಗಿ ತಾಂಡವ ನೃತ್ಯದಲ್ಲಿ ತಲ್ಲೀನನಾಗಿರುವ ಶಿವನ ಸುತ್ತಲೂ ತಾಳ, ಕೊಳಲು ಮತ್ತು ಮೂರು ಮಡಕೆಗಳಂತಹ ವಾದ್ಯವೊಂದನ್ನು ನುಡಿಸುತ್ತಿರುವವರ ಕೆತ್ತನೆಯಿದೆ. 


ಇವೆಲ್ಲಕ್ಕಿಂತಲೂ ನನ್ನನ್ನು ಆಕರ್ಷಿಸಿದ್ದು ಹಾರಾಡುವ ಗಂಧರ್ವರ ಕೆತ್ತನೆಗಳು. ತಾಂಡವೇಶ್ವರನ ಕೆತ್ತನೆಯಿರುವ ಚೌಕದ ನಾಲ್ಕು ಮೂಲೆಗಳಲ್ಲೂ ಹಾರವನ್ನು ಹಿಡಿದು ಶಿವನತ್ತ ಮುಖ ಮಾಡಿರುವ ಗಂಧರ್ವರನ್ನು ಕೆತ್ತಿರುವ ರೀತಿ ಅದ್ಭುತ. ನೋಡಿದಷ್ಟು ವಿಸ್ಮಯಗೊಳಿಸುವ ಕೆತ್ತನೆ.


ದೇವಾಲಯದ ಹೊರಗೆ ನಂದಿಯ ಸುಂದರ ಮೂರ್ತಿಯಿದೆ. ಕಲ್ಲೇಶ್ವರನ ಸನ್ನಿಧಿಯ ಅಕ್ಕಪಕ್ಕದಲ್ಲಿ ಗಣೇಶ ಮತ್ತು ಸುಬ್ರಹ್ಮಣ್ಯರ ದೇವಾಲಯಗಳಿವೆ.


ನೇರ ಎದುರಿಗೆ ಉಮಾಮಹೇಶ್ವರನ ದೇವಾಲಯವಿದೆ. ಎತ್ತರದ ಪೀಠದ ಮೇಲಿರುವ ಉಮಾಮಹೇಶ್ವರನ ವಿಗ್ರಹ ಆಕರ್ಷಕವಾಗಿದ್ದು ಇಬ್ಬರು ಹಾರುವ ಗಂಧರ್ವರನ್ನೊಳಗೊಂಡ ಪ್ರಭಾವಳಿ ಕೆತ್ತನೆಯನ್ನು ಹೊಂದಿದೆ. ಪೀಠದ ತಳಭಾಗದಲ್ಲಿ ನಂದಿಯ ಕೆತ್ತನೆಯಿದೆ.


ಗಂಗರ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲ್ಪಡುವ ಇನ್ನೂ ನಾಲ್ಕು ಸಣ್ಣ ಶಿವ ದೇವಾಲಯಗಳು ಪ್ರಾಂಗಣದೊಳಗೇ ಇವೆ. ಕೆರೆಯ ತಟದಲ್ಲೇ ಸುಂದರ ಮಂಟಪವೊಂದಿದೆ.