ಟೀಮ್ ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಟೀಮ್ ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಡಿಸೆಂಬರ್ 31, 2007

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೨


ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್ನ ದೂರದೃಷ್ಟಿಯನ್ನು ಕಳಕೊಳ್ಳದಂತೆ ಪ್ರವಾಹದ ವಿರುದ್ಧ ಸಾಗಿ ಬಂದವರೆಂದರೆ ಈ ನಾಲ್ಕು ಮಂದಿ ಮಾತ್ರ. ಈ ನಾಲ್ವರ ಪ್ರಯತ್ನದಿಂದಲೇ ಟೀಮ್ ಮಂಗಳೂರು ತನ್ನ ಈಗಿನ ಯಶಸ್ಸಿನ ಹೊಸ್ತಿಲನ್ನು ತಲುಪಿದೆಯಲ್ಲದೇ ಬೇರೆ ಯಾರದೇ ಯಾವುದೇ ರೀತಿಯ ಕೊಡುಗೆ ಇಲ್ಲ.

ಗಾಳಿಪಟ ತಯಾರಿಸಲು ಬೇಕಾದ ವಸ್ತುಗಳನ್ನು ತರಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹಣಕಾಸಿನ ಜವಾಬ್ದಾರಿಯನ್ನು ಸರ್ವೇಶ್ ವಹಿಸಿಕೊಂಡರೆ, ಯಾವ ಕಡೆ, ಹೇಗೆ ಮತ್ತು ಎಲ್ಲೆಲ್ಲಿ ಕಡ್ಡಿಗಳನ್ನು ಯಾವ್ಯಾವ ಕೋನ ಮತ್ತು ಆಕಾರಗಳಲ್ಲಿ ಜೋಡಿಸಬೇಕು ಮತ್ತು ಗಾಳಿಯ ರಭಸವನ್ನು ತಡೆದುಕೊಳ್ಳಲು ಎಲ್ಲೆಲ್ಲಿ ತೂತುಗಳನ್ನು ಮಾಡಬೇಕು ಎಂಬಿತ್ಯಾದಿ 'ಟೆಕ್ನಿಕಲ್' ವಿಷಯಗಳ ಜವಾಬ್ದಾರಿ ಪ್ರಶಾಂತ್ ರದ್ದು. ದಿನೇಶ್ ಹೊಳ್ಳ ಒಬ್ಬ ಚಿತ್ರ ಕಲಾವಿದರಾಗಿದ್ದು, ತಾನೇ ಕೈಯಾರೆ ಬಿಡಿಸಿ ಗಾಳಿಪಟದ ವಿನ್ಯಾಸವನ್ನು ಸಿದ್ಧಪಡಿಸುವುದರಿಂದ ಶುರುಮಾಡಿ, ಅದಕ್ಕೆ ಖುದ್ದಾಗಿ ತಕ್ಕ ಬಣ್ಣ ನೀಡಿ ಅಂತಿಮ ರೂಪ ಕೊಟ್ಟ ಮೇಲೆ ನಂತರ ಬಟ್ಟೆಯನ್ನು ತಕ್ಕ ಆಕಾರಗಳಲ್ಲಿ ತುಂಡು ಮಾಡಿ ಬಣ್ಣ ಬಳಿದು, ಹೊಲಿಸಿ ಜೋಡಿಸುವವರೆಗೆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಂತರ ಗಿರಿಧರ್ ಕಾಮತ್ರದ್ದು 'ಸಾರ್ವಜನಿಕ ಸಂಪರ್ಕಾಧಿಕಾರಿ'ಯ ಕೆಲಸ. ಪತ್ರಿಕಾ ಪ್ರಕಟಣೆಗಳನ್ನು ಸಿದ್ಧಪಡಿಸುವುದು, ಟೀಮ್ ಮಂಗಳೂರಿನ ಪರವಾಗಿ ಅವಕಾಶ ಸಿಕ್ಕಲ್ಲಿ ಒಂದೆರಡು ಮಾತನಾಡಿ ಉತ್ತಮ ಅಭಿಪ್ರಾಯ ಮೂಡಿಸುವುದು, ಗಾಳಿಪಟ ಉತ್ಸವದ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸುವುದು ಇವರ ಜವಾಬ್ದಾರಿ.


ಒಂದು ಗಾಳಿಪಟ ತಯಾರಿಸಲು ಕನಿಷ್ಟ ೫೦೦ ಗಂಟೆಗಳಷ್ಟು ಸಮಯ ಬೇಕು. ರಾತ್ರಿ ೧೧ ರಿಂದ ಬೆಳಗ್ಗಿನ ಜಾವ ೩.೦೦ ಗಂಟೆಯವರೆಗೆ ಸರ್ವೇಶ್ ಮನೆಯಲ್ಲಿ ಗಾಳಿಪಟಕ್ಕೆ ನಿಧಾನವಾಗಿ ಆಕಾರ ಮತ್ತು ಬಣ್ಣ ನೀಡುವ ಕಾರ್ಯ ನಡೆಯುತ್ತದೆ. ಸುಮಾರು ೫ ತಿಂಗಳ ಬಳಿಕ ಒಂದು ದೈತ್ಯ ಯಕ್ಷಗಾನ ಪಾತ್ರಧಾರಿಯೋ, ಕಥಕ್ಕಳಿ ನೃತ್ಯಗಾರನೋ, ಭೂತ ಪಾತ್ರಧಾರಿಯೋ, ಡ್ರಾಗನ್ ಗಾಳಿಪಟವೋ ಅಥವಾ ಇನ್ಯಾವುದೋ ದೈತ್ಯ ಗಾಳಿಪಟ ತಯಾರಾಗುತ್ತದೆ.

ನಂತರ ಪಣಂಬೂರು ಕಡಲ ತೀರಕ್ಕೆ ತೆರಳಿ ಕೆಳೆದೈದು ತಿಂಗಳಿಂದ ರಾತ್ರಿಯೆಲ್ಲ ನಿದ್ದೆಬಿಟ್ಟು ತಯಾರಿಸಿದ ಗಾಳಿಪಟ ಸರಿಯಾಗಿ ಹಾರುತ್ತೋ ಇಲ್ವೋ ಎಂದು ಪರೀಕ್ಷೆ ಮಾಡುವ ಕಾಯಕ - ಟೆಸ್ಟ್ ಫ್ಲೈಯಿಂಗ್. ಆಗ ಇವರನ್ನು ನೋಡಿ 'ಗಾಳಿಪಟ ಮರ್ಲೆರ್ಗ್ ಬೇತೆ ಬೇಲೆ ಇಜ್ಜಾ ಪಣ್ದ್' (ಗಾಳಿಪಟ ಹುಚ್ಚರಿಗೆ ಬೇರೆ ಕೆಲಸ ಇಲ್ವಾ ಅಂತ) ಎಂದು ಕೊಂಕು ಮಾತನಾಡುವವರೇ ಹೆಚ್ಚಾಗಿದ್ದರು. ಹಾಗೆ ಮಾತನಾಡಿದವರೇ ಇಂದು 'ಯಾನ್ ಲಾ ಉಲ್ಲೆ ಟೀಮ್ ಮಂಗಳೂರುಡ್' (ನಾನೂ ಇದ್ದೇನೆ ಟೀಮ್ ಮಂಗಳೂರಿನಲ್ಲಿ) ಎಂದುಕೊಂಡು ಓಡಾಡುವುದು, ಮಾಧ್ಯಮದವರ ಮುಂದೆ ಹೇಳಿಕೆ ಕೊಡುವುದು, ಫೋಟೊಗಳಿಗೆ ಪೋಸು ಕೊಡುವುದು, ಇತ್ಯಾದಿಗಳನ್ನು ಮಾಡುವುದನ್ನು ನೋಡಿದರೆ.....

ಮೊದಲೆಲ್ಲ ಸಣ್ಣ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲು ಈ ನಾಲ್ವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಂಗಳೂರಿನಲ್ಲಿ ದೊಡ್ಡ ಮಟ್ಟದ ವ್ಯವಹಾರ ಮಾಡಿಕೊಂಡಿರುವವರಲ್ಲಿ ಗಾಳಿಪಟ ಉತ್ಸವವನ್ನು ಪ್ರಾಯೋಜಿಸುವಂತೆ ವಿನಂತಿಸಿದರೆ, ಅವರು ಇವರನ್ನು ಗಂಟೆಗಟ್ಟಲೆ ಕಾಯಿಸುವುದು, ಭಿಕ್ಷೆ ಬೇಡಲು ಬಂದವರಂತೆ ಮಾತನಾಡುವುದು, ತೀರ ನಿರ್ಲಕ್ಷ್ಯದಿಂದ ನಾಳೆ ಬಾ/ ಮುಂದಿನ ವಾರ ಬಾ ಎಂದು ಹೊರಗಟ್ಟುವುದು, ಕೊನೆಗೆ ಅಪಹಾಸ್ಯ ಮಾಡಿ ಜುಜುಬಿ ಎನಿಸಿಕೊಳ್ಳುವ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ನೀಡುವುದು - ಇವೆಲ್ಲವನ್ನು ಸಹಿಸಿಕೊಂಡು ಕೊಟ್ಟಷ್ಟನ್ನು ಒಟ್ಟು ಮಾಡಿ ಕಡೆಗೆ ತಮ್ಮ ಕೈಯಿಂದಲೇ ಹಣ ಹಾಕಿ ವರ್ಷಕ್ಕೊಮ್ಮೆ ಗಾಳಿಪಟ ಉತ್ಸವವನ್ನು ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಪಣಂಬೂರಿನ ಕಡಲ ತೀರದಲ್ಲಿ ಆಯೋಜಿಸುತ್ತಿದ್ದರು. ಆಗೆಲ್ಲ ಈ ನಾಲ್ವರೊಡನೆ ಕೈ ಜೋಡಿಸಿ ಸಹಾಯ ಮಾಡಲು ಮತ್ತೊಬ್ಬನಿರಲಿಲ್ಲ. ಈ ಎಲ್ಲಾ ಪ್ರಯತ್ನಗಳು ವ್ಯರ್ಥವೆನಿಸಲಿಲ್ಲ. ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರ ಮಕ್ಕಳ/ ಯುವಕರ ಸಂಖ್ಯೆ ಹೆಚ್ಚಾಗುತ್ತಿತ್ತು. ನಿಧಾನವಾಗಿಯಾದರೂ ಸರಿ ಆದರೆ ಸರಿಯಾದ ದಿಕ್ಕಿನಲ್ಲಿ ಟೀಮ್ ಮಂಗಳೂರು ಸಾಗತೊಡಗಿತ್ತು.


ದೊರಕಿರುವ ಯಶಸ್ಸಿನೊಂದಿಗೆ ಈಗ ಟೀಮ್ ಮಂಗಳೂರಿನ ಅನಧಿಕೃತ ಸದಸ್ಯರ ಸಂಖ್ಯೆ ಹೆಚ್ಚಾಗತೊಡಗಿದೆ. ಈ ನಾಲ್ವರ ಸ್ವಲ್ಪ ಪರಿಚಯವಿದ್ದವನೂ ಈಗ ಟೀಮ್ ಮಂಗಳೂರಿನ ಸದಸ್ಯನೇ! ಮಂಗಳೂರಿನಲ್ಲೊಬ್ಬ ಹೆಸರುವಾಸಿ ಚಿತ್ರಕಾರರಿದ್ದಾರೆ. ಮೊದಲು ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣಗಳನ್ನು ನೋಡಿ 'ಇವೆಲ್ಲ ಸರಿಯಿಲ್ಲ', 'ಇವರು ಸರಿಯಾಗಿ ಅಧ್ಯಯನ ಮಾಡದೇ ಬಣ್ಣ ಬಳಿಯುತ್ತಿದ್ದಾರೆ' ಎಂಬ ಹೇಳಿಕೆಗಳನ್ನು ತಾವಾಗಿಯೇ ಕೊಡುತ್ತಿದ್ದರು. ಈಗ ಟೀಮ್ ಮಂಗಳೂರು ಹೆಸರು ಗಳಿಸಿದ ಬಳಿಕ, ಆ ಗಾಳಿಪಟಗಳ ವಿನ್ಯಾಸ ಮಾಡಿದ್ದೂ ನಾನೇ ಅವುಗಳಿಗೆ ಬಣ್ಣ ಹಚ್ಚಿದ್ದು ನಾನೇ ಎಂದುಕೊಂಡು ಓಡಾಡುತ್ತಿದ್ದಾರೆ!

ಈಗ ವಿದೇಶ ಪ್ರವಾಸದ ಗೀಳು ಈ ಅನಧಿಕೃತ ಸದಸ್ಯರಿಗೆ. ದಿನೇಶ್ ಹೊಳ್ಳರಲ್ಲಿ ಪಾಸ್ ಪೋರ್ಟ್ ಇಲ್ಲ ಎಂಬ ವಿಷಯ ಗೊತ್ತಾದ ಕೂಡಲೇ ಅವರ ಜಾಗದಲ್ಲಿ ವಿದೇಶಕ್ಕೆ ತೆರಳಲು ಪೈಪೋಟಿ! ಹಾಗೆ ಪುಕ್ಕಟೆಯಾಗಿ ಹೋದವರು ಅಲ್ಲಾದರೂ ಸರಿಯಾಗಿ ಕೆಲಸ ಮಾಡಿದರೇ? ಅದೂ ಇಲ್ಲ. ಬರೀ ಗಾಳಿಪಟದ ನೂಲು ಹಿಡಕೊಂಡು ನಿಂತರೆ ಸಾಕಿತ್ತು. ಅದೂ ಮಾಡದೆ, ತಮ್ಮನ್ನು ಸ್ವಾಗತಿಸುವ ಸಮಯದಲ್ಲಿ ಕೆನ್ನೆಗೆ ಮುತ್ತಿಕ್ಕಿ ಸ್ವಾಗತಿಸಿದ ನಾರಿಯನ್ನು ಹುಡುಕಿಕೊಂಡು ಹೋಗುವುದು, ಚೆನ್ನಾದ ಬಟ್ಟೆ ಧರಿಸಿಕೊಂಡು 'ಸನ್ ಗ್ಲಾಸ್' ಏರಿಸಿಕೊಂಡು ಒಂದು ಆಯಕಟ್ಟಿನ ಸ್ಥಳದಲ್ಲಿ ಕುರ್ಚಿ ಹಾಕಿ ವಿ.ಐ.ಪಿ ಯಂತೆ ಏನೂ ಕೆಲಸ ಮಾಡದೆ ಕೂತುಬಿಡುವಿದು, ಸಮುದ್ರ ತೀರದಲ್ಲಿ ಸ್ನಾನ ಮಾಡುತ್ತಿರುವವರ ಚಿತ್ರ ತೆಗೆಯುತ್ತ ಅಲೆದಾಡುವುದು ಇತ್ಯಾದಿಗಳನ್ನು ಮಾಡಿ, 'ಟೀಮ್ ಮಂಗಳೂರು' ಹೆಸರಿನಲ್ಲಿ ವಿದೇಶ ಪ್ರವಾಸ ಮಾಡಿ ಬಂದು, 'ಫಾರೀನ್ ಪೋದ್ ಬತ್ತೆ' (ವಿದೇಶಕ್ಕೆ ಹೋಗಿ ಬಂದೆ) ಎಂದು ಸಿಕ್ಕವರಲ್ಲಿ ಕೊರೆದರಾಯಿತು. ಇಂತಹ ದಂಡಪಿಂಡಗಳ ಸಹವಾಸದಿಂದ ರೋಸಿಹೋಗಿರುವ ಸರ್ವೇಶ್, ಈಗ ದಿನೇಶ್ ಹೊಳ್ಳರಿಗೊಂದು ಪಾಸ್ ಪೋರ್ಟ್ ಮಾಡಿಸಿಕೊಟ್ಟಿದ್ದಾರೆ.


ತಂಡದ ಪ್ರಮುಖ ಸದಸ್ಯರಾಗಿರುವ ಪ್ರಶಾಂತ್ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವುದರಿಂದ ಗಾಳಿಪಟ ತಯಾರಿ ಈಗ ಸ್ವಲ್ಪ ನಿಧಾನವಾಗಿ ಸಾಗುತ್ತಿದೆ. ಪ್ರತಿ ಮುಂಜಾನೆ ೧೧.೧೫ಕ್ಕೆ ಮಂಗಳೂರಿನ 'ಕಾರ್ ಸ್ಟ್ರೀಟ್' ನಲ್ಲಿರುವ ಹೊಟೇಲ್ ತಾಜ್ ಮಹಲ್ ನಲ್ಲಿ ತನ್ನ ವಿಶಿಷ್ಟ ರುಚಿಯಿಂದ ಪ್ರಸಿದ್ಧಿ ಪಡೆದಿರುವ ಕಾಫಿಯನ್ನು ಹೀರುತ್ತಾ ಸರ್ವೇಶ್ ಮತ್ತು ದಿನೇಶ್ ಹೊಳ್ಳರದ್ದು ಗಾಳಿಪಟ ತಯಾರಿಯ ಹಂತದ ಬಗ್ಗೆ ಚರ್ಚೆ. ಟೀಮ್ ಮಂಗಳೂರಿನ ಎಲ್ಲಾ ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣದ ಬಗ್ಗೆ ಅಂತಿಮ ನಿರ್ಧಾರ ಇದೇ ಹೊಟೇಲ್ ತಾಜ್ ಮಹಲ್ ನ ಮೂಲೆಯ ಟೇಬಲ್ ಗಳಲ್ಲೊಂದರಲ್ಲಿ ತೆಗೆದುಕೊಳ್ಳಲಾಗುತ್ತದೆ!

ಕೊನೆಯದಾಗಿ ಗಾಳಿಪಟ ತಯಾರಿಸುವ ವಸ್ತುಗಳನ್ನು ತರಿಸುವ ಸ್ಥಳಗಳ ಬಗ್ಗೆ ಒಂದು ಮಾತು. ಕಡ್ಡಿಗಳನ್ನು ಹೊಸನಗರದಿಂದ ಸರ್ವೇಶ್ ಖುದ್ದಾಗಿ ಹೋಗಿ ತರುತ್ತಾರೆ. ಈಗ ಕೆಲವು ಕಡ್ಡಿಗಳು ಮುಂಬೈನಲ್ಲಿ 'ರೆಡಿಮೇಡ್' ಆಗಿ ಸಿಗುವುದರಿಂದ ಆಲ್ಲಿಂದಲೂ ತರಿಸಲಾಗುತ್ತದೆ. ನೂಲನ್ನು ಆಸ್ಟ್ರೇಲಿಯದಿಂದ ಮತ್ತು ಕಡ್ಡಿಗಳನ್ನು ದೃಢವಾಗಿ ಜೋಡಿಸಲು ಬಳಸಲಾಗುವ 'ಕ್ಲಿಪ್' ಗಳನ್ನು ಆಸ್ಟ್ರೇಲಿಯ ಮತ್ತು ಇಂಗ್ಲಂಡ್ ನಿಂದ ತರಿಸಲಾಗುತ್ತದೆ. ಬಟ್ಟೆಯನ್ನು ಇಂಗ್ಲಂಡ್, ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಕಡ್ಡಿ ಇರುವಲ್ಲಿ ಉನ್ನತ ಗುಣಮಟ್ಟದ ಬಟ್ಟೆಯನ್ನು ಬಳಸಬೇಕಾಗುವುದರಿಂದ ಅವನ್ನು ಇಂಗ್ಲಂಡ್ ನಿಂದಲೂ ಮತ್ತು ಕಡ್ಡಿಯಿಲ್ಲದಿರುವಲ್ಲಿ ಸ್ವಲ್ಪ ಕಡಿಮೆ ಗುಣಮಟ್ಟದ ಬಟ್ಟೆಯನ್ನು ಬಳಸಬಹುದಾದರಿಂದ ಅವನ್ನು ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಎಟ್ ಲೀಸ್ಟ್ ಬಣ್ಣವಾದರೂ ಭಾರತದ್ದು!

೨೦೦೮ ಜನವರಿ ೧೮ ಮತ್ತು ೧೯ರಂದು ಮಂಗಳೂರಿನ ಪಣಂಬೂರು ಕಡಲ ಕಿನಾರೆಯಲ್ಲಿ ಮಂಗಳೂರಿನ ೨ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.

ಟೀಮ್ ಮಂಗಳೂರಿನ ಅಂತರ್ಜಾಲ ತಾಣ: www.indiankites.com

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧


೨೦೦೮ ಜನವರಿ ೧೯ ಮತ್ತು ೨೦ ರಂದು ಮಂಗಳೂರಿನ ೨ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ್ಗುತ್ತಾ, ಏನು ಮಾಡಬೇಕೆಂದು ತೋಚದೆ, ಕಿವಿಯಿಂದ ಕಿವಿಯವರೆಗೆ ನಗುತ್ತಾ ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಪರಿಚಯದವರನ್ನು ಅಪ್ಪಿಕೊಂಡು ಸ್ವಾಗತಿಸುತ್ತಾ ಬಹಳ ಸಂಭ್ರಮದಿಂದ ಆಚೀಚೆ ಓಡಾಡುತ್ತ ಇದ್ದರು.

ಆ ದಿನ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು 'ಟೀಮ್ ಮಂಗಳೂರು' ಆಯೋಜಿಸಿತ್ತು. ಜನ ಪ್ರವಾಹವೇ ಪಣಂಬೂರು ಸಮುದ್ರ ತೀರಕ್ಕೆ ಹರಿದು ಬರುತ್ತಿತ್ತು. ಇಡೀ ಮಂಗಳೂರೇ ಗಾಳಿಪಟ ಉತ್ಸವ ನೋಡಲು ಪಣಂಬೂರು ಕಡಲ ತೀರದಲ್ಲಿ ನೆರೆದಿತ್ತು.

ಜನವರಿ ೨೩,೨೦೦೫ರಂದು ನಡೆದ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವ, ಟೀಮ್ ಮಂಗಳೂರಿನ ಸದಸ್ಯರ ಕನಸು ನನಸಾದ ದಿನ. ಇದು ಟೀಮ್ ಮಂಗಳೂರಿಗೆ ಒಂದು ದೊಡ್ಡ ಮಟ್ಟದ ಯಶಸ್ಸು ಕಂಡ ದಿನವಾಗಿತ್ತು. ಉತ್ಸವದ ಸಂಪೂರ್ಣ ಪ್ರಾಯೋಜಕತೆಯನ್ನು ಮಂಗಳೂರು ತೈಲಾಗಾರ(ಎಮ್.ಆರ್.ಪಿ.ಎಲ್)ದ ಪೋಷಕ ಸಂಸ್ಠೆಯಾಗಿರುವ ಓ.ಎನ್.ಜಿ.ಸಿ ವಹಿಸಿಕೊಂಡಿತ್ತು. ಮಿಡಿಯಾ ಪ್ರಾಯೋಜಕತೆಯ ಜವಾಬ್ದಾರಿಯನ್ನು ವಿಜಯ ಕರ್ನಾಟಕ ವಹಿಸಿಕೊಂಡಿದ್ದರಿಂದ ಉತ್ಸವದ ಪ್ರಚಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಗಾಳಿಪಟ ಉತ್ಸವ ವೀಕ್ಷಿಸಲು ಸುಮಾರು ಒಂದು ಲಕ್ಷದಷ್ಟು ಜನಸಮೂಹ ಸೇರಿತ್ತು. ಫ್ರಾನ್ಸ್, ಇಸ್ರೇಲ್, ಆಸ್ಟ್ರೇಲಿಯ, ಮಲೇಶ್ಯ, ಇಂಡೋನೇಶ್ಯ, ಇಂಗ್ಲಂಡ್, ಜಪಾನ್ ಮತ್ತು ಟರ್ಕಿ ದೇಶಗಳಿಂದ ಗಾಳಿಪಟಗಾರರು ಬಂದಿದ್ದರು.


ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದ ನಂತರ ಟೀಮ್ ಮಂಗಳೂರಿನ ಅದೃಷ್ಟ ಬದಲಾಯಿತು. ಬೇರೆ ದೇಶಗಳಿಂದ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಆಹ್ವಾನಗಳು ಬರಲಾರಂಭಿಸಿದವು. ಎಪ್ರಿಲ್ ೨೦೦೫ರಲ್ಲಿ ಫ್ರಾನ್ಸ್ ನ ಬರ್ಕ್ ಸುರ್ ಮರ್ ಎಂಬಲ್ಲಿ ನಡೆದ ಗಾಳಿಪಟ ಉತ್ಸವದಿಂದ ಪ್ರಾರಂಭಗೊಂಡು ೫ ಬಾರಿ ಟೀಮ್ ಮಂಗಳೂರು ವಿದೇಶ ಪ್ರಯಾಣ ಮಾಡಿ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದೆ. ಸೌದಿ ಅರೇಬಿಯ, ಟರ್ಕಿ, ಜಪಾನ್ ಮತ್ತು ಇಂಡೋನೇಶ್ಯಗಳಲ್ಲಿ ನಡೆಯುವ ಗಾಳಿಪಟ ಉತ್ಸವಗಳಿಗೆ ತೆರಳಲು ಟೀಮ್ ಮಂಗಳೂರಿಗೆ ನಾನಾ ಕಾರಣಗಳಿಂದ ಸಾಧ್ಯವಾಗಲಿಲ್ಲ.


ಭಾಗವಹಿಸಲು ತೆರಳಿದ ಎಲ್ಲಾ ಕಡೆಗಳಲ್ಲೂ ಭಾರತದ ಜನಪದ ಕಲೆಗಳಿಗೆ, ಪೌರಾಣಿಕ ಪಾತ್ರಗಳಿಗೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದೈತ್ಯ ಗಾತ್ರದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿಸಿ ವಿದೇಶಿಯರನ್ನು ದಂಗುಬಡಿಸಿ, ಪ್ರಶಂಸೆ ಪಡೆದು ಹೆಮ್ಮೆಯಿಂದ ಬೀಗುತ್ತ ಮರಳಿ ಬಂದಿದೆ ಟೀಮ್ ಮಂಗಳೂರು. ೨೦೦೫ರಲ್ಲಿ ಇಂಗ್ಲಂಡ್ ನಲ್ಲಿ ನಡೆದ ೨ ಗಾಳಿಪಟ ಉತ್ಸವಗಳಲ್ಲಿ 'ಬೆಸ್ಟ್ ಟೀಮ್' ಪ್ರಶಸ್ತಿಯನ್ನು ಗಳಿಸಿದ್ದು ಟೀಮ್ ಮಂಗಳೂರಿನ ಸಾಧನೆ. ಭಾರತದಿಂದ ಅಹ್ವಾನಿಸಲ್ಪಟ್ಟ ಏಕೈಕ ತಂಡವೆಂಬ ಹೆಗ್ಗಳಿಕೆ ಬೇರೆ. ೨೦೦೨ರ ಗುಜರಾತ್ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 'ಟೀಮ್ ಮಂಗಳೂರು' ತನ್ನ ೩೬ ಅಡಿ ಉದ್ದದ ಕಥಕ್ಕಳಿ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ದಾಖಲೆಯನ್ನು ಮಾಡಿತು. ಲಿಮ್ಕಾ ಸಾಧನೆಗಳ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಲಾಗಿದೆ. ಇಂಗ್ಲಂಡ್ ನ ಗಾಳಿಪಟ ಮಾಸ ಪತ್ರಿಕೆಯಾಗಿರುವ 'ದಿ ಕೈಟ್ ಫ್ಲೈಯರ್' ತನ್ನ ಜುಲೈ ೨೦೦೫ರ ಸಂಚಿಕೆಯ ಮುಖಪುಟದಲ್ಲಿ ಟೀಮ್ ಮಂಗಳೂರಿನ ಗಾಳಿಪಟಗಳನ್ನು ಮುದ್ರಿಸಿತ್ತು.

ಅಂದ ಹಾಗೆ ಏನಿದು 'ಟೀಮ್ ಮಂಗಳೂರು'?

ಗಾಳಿಪಟಗಳ ಬಗ್ಗೆ ಆಸಕ್ತಿ ಮತ್ತು ಅವುಗಳನ್ನು ತಯಾರಿಸಿ ಹಾರಿಸುವ ಹವ್ಯಾಸವಿರುವ ಸಮಾನ ಮನಸ್ಕರ ಒಂದು ಸಣ್ಣ ತಂಡ 'ಟೀಮ್ ಮಂಗಳೂರು'. ಗಾಳಿಪಟ ಹಾರಿಸುವುದನ್ನು ಒಂದು ಹವ್ಯಾಸವಾಗಿ ಜನರಲ್ಲಿ ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಯುವ ಜನಾಂಗದಲ್ಲಿ ಬೆಳೆಸಬೇಕು ಎಂಬ ಪ್ರಮುಖ ಉದ್ದೇಶದಿಂದ ೧೯೯೮ ರಲ್ಲಿ 'ಟೀಮ್ ಮಂಗಳೂರು' ಅಸ್ತಿತ್ವಕ್ಕೆ ಬಂತು. ಇದರೊಂದಿಗೆ ಯುವ ಜನಾಂಗದಲ್ಲಿ ಪ್ರಕೃತಿಯ ಪ್ರತಿ ಪ್ರೀತಿ ಹಾಗೂ ಗೌರವ ಬೆಳೆಸುವುದು ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯನ್ನು ತನ್ನ ಗಾಳಿಪಟಗಳ ಮೂಲಕ ಜಗತ್ತಿನೆಲ್ಲೆಡೆ ಸಾರುವುದು ಇವು ಇತರ ಉದ್ದೇಶಗಳಾಗಿವೆ.


ಈಗ ಟೀಮ್ ಮಂಗಳೂರಿನ ಮುಂದೆ ಇರುವ ಸವಾಲೆಂದರೆ ಪ್ರತಿ ವರ್ಷ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮಂಗಳೂರಿನಲ್ಲಿ ಆಯೋಜಿಸುವುದು. ೨೦೦೬ರಲ್ಲಿ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ೨೦೦೭ರಲ್ಲಿ ಜನವರಿಯಲ್ಲಿ ನಡೆದ 'ಬೀಚ್ ಉತ್ಸವ' ದಲ್ಲಿ ಟೀಮ್ ಮಂಗಳೂರು ತನ್ನ ಗಾಳಿಪಟಗಳನ್ನು ಹಾರಿಸಿದ್ದಲ್ಲದೇ ಬೇರೆ ದೇಶಗಳ ಗಾಳಿಪಟಗಾರರನ್ನೂ ಪಾಲ್ಗೊಳ್ಳಲು ತಾನಾಗಿಯೇ ಆಹ್ವಾನಿಸಿದ್ದರಿಂದ ಅದೇ ಒಂದು ಗಾಳಿಪಟ ಉತ್ಸವವಾಗಿಹೋಯಿತು. ೨೦೦೮ರಲ್ಲಿ ಜನವರಿ ೧೯ ಮತ್ತು ೨೦ ರಂದು ಮತ್ತೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಪ್ರತಿ ವರ್ಷ ಗಾಳಿಪಟ ಉತ್ಸವ ಮಾಡಲು ಪಡಬೇಕಾದ ಪರದಾಟ, ಇದ್ದ ತೊಡಕುಗಳು, ಪ್ರೋತ್ಸಾಹದ ಕೊರತೆ, ಪ್ರಾಯೋಜಕರ ಕೊರತೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಜನರ ನಿರುತ್ಸಾಹ ಮತ್ತು ನಿರ್ಲಕ್ಶ್ಯ ಟೀಮ್ ಮಂಗಳೂರಿಗೆ ನಿರಾಸೆಯನ್ನುಂಟು ಮಾಡುತ್ತಿದ್ದವು. ಆದರೂ ಕೂಡಾ ಛಲಬಿಡದೆ ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆ ಮತ್ತು ಒಂದು ಸಣ್ಣ ಗಾಳಿಪಟ ಉತ್ಸವವನ್ನು ಪಣಂಬೂರು ಕಡಲ ತೀರದಲ್ಲಿ ಸ್ವಂತ ಖರ್ಚಿನಲ್ಲಿ ಟೀಮ್ ಮಂಗಳೂರು ಮಾಡುತ್ತಿತ್ತು.


ಪ್ರತಿ ವರ್ಷ ಜನವರಿಯಲ್ಲಿ ಗುಜರಾತಿನಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಲು ಟೀಮ್ ಮಂಗಳೂರು ತೆರಳುತ್ತಿತ್ತು. ಯಕ್ಷಗಾನ ಪಾತ್ರಧಾರಿಯ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತು. ಹೈದರಾಬಾದ್ ನಲ್ಲಿ ನಡೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮತ್ತದೇ ಗಾಳಿಪಟಗಳನ್ನು ಹಾರಿಸಿ ಮತ್ತಷ್ಟು ಪ್ರಶಂಸೆಗಳ ಸುರಿಮಳೆ. ಈ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಬೇರೆ ದೇಶಗಳ ಗಾಳಿಪಟಗಾರರು ಟೀಮ್ ಮಂಗಳೂರಿನ 'ಹ್ಯಾಂಡ್ ಮೇಡ್' ಗಾಳಿಪಟಗಳಿಂದ ಆಕರ್ಷಿತರಾದರು. ತಮ್ಮ ದೇಶಗಳಿಗೆ ಹಿಂತಿರುಗಿದ ಬಳಿಕ ಅಲ್ಲಿನ ಗಾಳಿಪಟ ಉತ್ಸವ ಆಯೋಜಕರಿಗೆ ಟೀಮ್ ಮಂಗಳೂರಿನ ಬಗ್ಗೆ ಮಾಹಿತಿ ನೀಡಿ ಅಹ್ವಾನಿಸುವಂತೆ ಶಿಫಾರಸು ಮಾಡತೊಡಗಿದಾಗ ಟೀಮ್ ಮಂಗಳೂರಿನ ಖ್ಯಾತಿ ವಿದೇಶಗಳಲ್ಲಿ ಹರಡತೊಡಗಿತು.

ಮೊದಲೆಲ್ಲ ಎಲ್ಲಿ ಗುಜರಾತ್-ಹೈದರಾಬಾದ್ ನಿಂದ ಅಹ್ವಾನ ಬರುದಿಲ್ಲವೋ ಎಂದು ಆತಂಕಗೊಳಗಾಗುತ್ತಿದ್ದ ಸರ್ವೇಶ್, ಈಗ ಎಲ್ಲಿ ಫ್ರಾನ್ಸ್-ಇಂಗ್ಲಂಡ್ ಗಳಿಂದ ಆಹ್ವಾನ ಬರುದಿಲ್ಲವೋ ಎಂಬ ಆತಂಕಗೊಳಗಾಗುತ್ತಾರೆ!

ಟೀಮ್ ಮಂಗಳೂರಿನ ಅಂತರ್ಜಾಲ ತಾಣ: http://www.indiankites.com/