ಭಾನುವಾರ, ಆಗಸ್ಟ್ 09, 2015

ಅಂದ ಹಾಗೂ ದುರಾಸೆ...


ಖಾಸಗಿ ಸ್ಥಳದಲ್ಲಿರುವ ಈ ಜಲಧಾರೆಯನ್ನು ನೋಡಲೋಸುಗ ಸಮೀಪದ ಪಟ್ಟಣಕ್ಕೆ ನಾವು ಬಂದಿಳಿದಾಗ ಸಮಯ ಬೆಳಿಗ್ಗೆ ೧೦.೧೫. ಇಲ್ಲಿಂದ ಸುಮಾರು ೭ ಕಿಮಿ ದೂರವಿರುವ ಈ ಜಲಧಾರೆಗೆ ನಡೆದೇ ಹೋಗಿ ಬರುವ ಇರಾದೆ ನಮಗಿತ್ತು. ಆದರೆ ಉಡುಪಿಗೆ ಅಲ್ಲಿಂದ ಕೊನೆಯ ಬಸ್ಸು ಮಧ್ಯಾಹ್ನ ೩.೪೫ಕ್ಕೆ ಎಂದು ತಿಳಿದಾಗ, ಈಗ ಆಟೋದಲ್ಲಿ ತೆರಳಿ ಹಿಂತಿರುಗುವಾಗ ನಡೆದು ಬರುವ ನಿರ್ಧಾರ ಮಾಡಿದೆವು.


ಅಲ್ಲೊಂದೆಡೆ ಉಪಹಾರ ಮುಗಿಸಿ ಹೊರಬರುತ್ತಿರುವಾಗ ರಿಕ್ಷಾವೊಂದು ಎಲ್ಲೋ ಹೊರಡಲು ಅಣಿಯಾಗುತ್ತಿತ್ತು. ಚಾಲಕ ಇನ್ನೂ ಹದಿಹರೆಯದವನಾಗಿದ್ದ. ಆತನಲ್ಲಿ ವಿಚಾರಿಸಿದಾಗ, ಜಲಧಾರೆ ತನಗೆ ಗೊತ್ತು.. ತಾನಲ್ಲಿ ತೆರಳಿದ್ದೇನೆ.. ಕರೆದೊಯ್ಯುತ್ತೇನೆ...ಎಂದು ನಮ್ಮನ್ನು ಹತ್ತಿಸಿ ಹೊರಟೇಬಿಟ್ಟ.


ಈತನ ಹೆಸರು ಸಂದೇಶ. ಪದವೀಧರ. ಓದಿನ ಬಳಿಕ ಸದ್ಯದ ವೃತ್ತಿ ರಿಕ್ಷಾ ಚಾಲನೆ. ಕೊನೆಯ ಮೂರು ಕಿಮಿ ರಸ್ತೆ ತೀರಾ ಹದಗೆಟ್ಟಿತ್ತು. ಫೋರ್ ವ್ಹೀಲ್ ಡ್ರೈವ್ ಜೀಪ್ ಮಾತ್ರ ಸಂಚರಿಸುವ ರಸ್ತೆಯಾಗಿತ್ತು. ಆದರೂ ಸಂದೇಶ ತನ್ನ ಆಪೆ ರಿಕ್ಷಾವನ್ನು, ’ಆದಷ್ಟು ಮುಂದೆ ಹೋಗುವ’ ಎನ್ನುತ್ತ ಚಾಕಚಕ್ಯತೆಯಿಂದ ಓಡಿಸುತ್ತಿದ್ದ.


ಒಂದೆರಡು ಕಡೆ ರಸ್ತೆಯ ಅವಸ್ಥೆ ನೋಡಿ ನಾವಾಗಿಯೇ ’ಸಾಕಪ್ಪಾ ಇಲ್ಲೇ ನಿಲ್ಲಿಸು’ ಎಂದರೂ ಕೇಳದೇ, ಹಟಕ್ಕೆ ಬಿದ್ದವನಂತೆ ಏನೇನೋ ಕಸರತ್ತು ಮಾಡುತ್ತಾ ಚಲಾಯಿಸುತ್ತಿದ್ದ. ಒಂದು ಕಡೆ ಹಿಂದಿನ ಚಕ್ರ ಕೆಸರಿನಲ್ಲಿ ಹೂತುಹೋದರೂ, ಏನೇನೂ ಬೇಜಾರು ಮಾಡದೆ ಕೆಳಗಿಳಿದು, ಕಲ್ಲುಗಳನ್ನಿಟ್ಟು ಬಹಳ ಕಷ್ಟದಿಂದ ಕೆಸರಿನಿಂದ ಹೊರಬಂದ.


 
ಕೊನೆಗೂ ಜಲಧಾರೆಯಿರುವ ಸ್ಥಳದ ಮಾಲೀಕನ ಮನೆಯ ಬಳಿ ಆತ ನಮ್ಮನ್ನು ’ಸುರಕ್ಷಿತವಾಗಿ’ ಬಿಟ್ಟಾಗ ನಾವು ನಿಟ್ಟುಸಿರುಬಿಟ್ಟೆವು. ಆತ ಕೇಳಿದಷ್ಟನ್ನು ಏನೇನೂ ಚೌಕಾಶಿ ಮಾಡದೆ ನೀಡಿದೆವು. ಆತ ಕಡಿಮೆಯೇ ತಗೊಂಡ ಬಿಡಿ.


ಮನೆಯನ್ನು ದಾಟಿ ಕೇವಲ ಮೂರೇ ನಿಮಿಷಗಳಷ್ಟು ನಡೆದು ಜಲಧಾರೆಯ ಮುಂದೆ ಇದ್ದೆವು. ಸುಮಾರು ೩೫ ಅಡಿಗಳಷ್ಟು ಎತ್ತರವಿರುವ ಜಲಧಾರೆಯ ತಳದಲ್ಲಿ ಆಕರ್ಷಕ ಕೊಳವಿದೆ. ಇಲ್ಲಿ ಮನಸೋ ಇಚ್ಛೆ ಜಲಕ್ರೀಡೆಯಾಡಬಹುದು. ನೀರು ಬೀಳುವಲ್ಲಿ ಆಳವಿರುವುದರಿಂದ ಅಲ್ಲಿಂದ ದೂರವುಳಿದರೆ ಒಳಿತು ಎಂದು ಸ್ಥಳದ ಮಾಲೀಕರ ಅಭಿಪ್ರಾಯ.


ಸಮೀಪದ ಊರಿನಲ್ಲಿರುವ ರೆಸಾರ್ಟ್‍ನವರು ತಮ್ಮಲ್ಲಿ ಬಂದ ಗ್ರಾಹಕರನ್ನು ಇಲ್ಲಿಗೆ ಕರೆತರುತ್ತಾರೆ. ಹಾಗೆ ಬಂದಾಗ ಈ ಸ್ಥಳದ ಮಾಲೀಕರಿಗೆ, ಒಬ್ಬೊಬ್ಬರಿಗೆ ಇಂತಿಷ್ಟು ಎಂದು ಹಣ ನೀಡುತ್ತಾರೆ. ಇದನ್ನೆಲ್ಲಾ ಕಂಡು ಈಗ ಸ್ಥಳದ ಮಾಲೀಕರಿಗೆ ಅತಿ ದುರಾಸೆ ಉಂಟಾಗಿದೆ. ಜೆಸಿಬಿಯೊಂದನ್ನು ತಂದು ಗದ್ದೆಗಳನ್ನೆಲ್ಲಾ ಸಮತಟ್ಟುಗೊಳಿಸಿ ತಾನೇ ಒಂದು ಹೋಮ್‍ಸ್ಟೇ ನಿರ್ಮಿಸುತ್ತೇನೆ ಎಂದು ನಮ್ಮಲ್ಲಿ ತನ್ನ ಯೋಜನೆಗಳನ್ನು ಹೇಳಿಕೊಂಡರು.


ಅವರ ಯೋಜನೆಗಳನ್ನು ಕೇಳಿ ದಿಗ್ಭ್ರಮೆಗೊಂಡ ನಾನು, ’ಈಗ ನಿಮಗೇನಾದರೂ ಕಡಿಮೆಯಿದೆಯೇ’ ಎಂದು ಕೇಳಿದೆ. ಇಬ್ಬರು ಗಂಡು ಮಕ್ಕಳು ಉತ್ತಮ ಕೆಲಸದಲ್ಲಿದ್ದು, ತಾನೂ ಕೃಷಿಯಿಂದ ಉತ್ತಮ ಆದಾಯ ಗಳಿಸಿ ಆರೋಗ್ಯವಂತನಾಗಿ ಸುಖವಾಗಿ ಇದ್ದೇನೆ ಎಂದು ಉತ್ತರ ನೀಡಿದರು!


ಇವರ ಮನೆಯಿಂದ ಜಲಧಾರೆಗೆ ಇರುವ ಮೂರು ನಿಮಿಷಗಳ ದಾರಿ ಬಹಳ ಸುಂದರವಾಗಿದೆ. ಎತ್ತರೆತ್ತರ ಮರಗಳ ನಡುವೆ ಇರುವ ಕಾಲುದಾರಿಯಲ್ಲಿ ಜಲಧಾರೆಯ ಸಮೀಪ ತೆರಳುವುದೇ ಸುಂದರ ಅನುಭವ. ಮರಗಳನ್ನೆಲ್ಲಾ ಕಡಿದುರುಳಿಸಿ, ಗುಡ್ಡದ ಮಣ್ಣನ್ನೆಲ್ಲಾ ಜೆಸಿಬಿಯಿಂದ ಕೆಳಗುರುಳಿಸಿ, ಎತ್ತರದ ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್‍ಗೆ ಸ್ಥಳ ಮಾಡುತ್ತೇನೆ ಎಂದಾಗಲಂತೂ ನನ್ನ ಜೊತೆಗಿದ್ದ ರಾಘಣ್ಣ ತಲೆತಿರುಗಿ ಬೀಳುವುದು ಬಾಕಿಯಿತ್ತು.


ಒಬ್ಬೊಬ್ಬರಿಗೆ ಮೂರು ಸಾವಿರ ಚಾರ್ಜ್ ಮಾಡುತ್ತಾರೆ.... ನಾನು ಅದರ ಅರ್ಧದಷ್ಟು ಚಾರ್ಜ್ ಮಾಡಿದರೂ ಹಣವೇ ಹಣ ಎಂದು ತನ್ನ ಬಲಗೈಯ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಬಳಸಿ ಹಣದ ಸಂಕೇತ ಮಾಡಿದಾಗ ತಮಾಷೆಯೆನಿಸಿತು. ಇನ್ನು ಮುಂದೆ ನಿಮ್ಮ ಹಾಗೆ ಇಲ್ಲಿ ಬಂದವರಿಗೆ ಹತ್ತು ರೂಪಾಯಿ ಶುಲ್ಕ ವಿಧಿಸುತ್ತೇನೆ ಎಂದು ತನ್ನ ದುರಾಸೆಯ ಪರಮಾವಧಿಯನ್ನು ತೋರ್ಪಡಿಸಿದರು. ಅವರ ಯೋಜನೆಗಳನ್ನು ಕೇಳಿ, ಎಲ್ಲಾ ಇದ್ದರೂ ಮತ್ತೆ ಬೇಕೆನ್ನುವ ದುರಾಸೆ ಕಂಡು ಬಹಳ ವಿಚಿತ್ರವೆನಿಸತೊಡಗಿತು.


ಜಲಧಾರೆಯ ಬಳಿ ಸುಮಾರು ಒಂದು ತಾಸು ಸಮಯ ಕಳೆದೆವು. ಅದಾಗಲೇ ಅಲ್ಲಿ ರೆಸಾರ್ಟ್‍ನಿಂದ ಒಂದು ಜೀಪ್ ಬಂದಿತ್ತು. ನಾವು ಹೊರಡಲು ಅಣಿಯಾಗುತ್ತಿದ್ದಾಗ ಅವರು ’ಇನ್ಯಾಕೆ ಅಲ್ಲಿವರೆಗೆ ನಡೆಯುತ್ತೀರಾ...ನಾವು ಡ್ರಾಪ್ ಕೊಡ್ತೀವಿ..’ ಎಂದು ನಮ್ಮನ್ನು ಪಟ್ಟಣದವರೆಗೆ ಬಿಟ್ಟರು. ಬೇಗನೇ ಬಂದ ನಮಗೆ ೨.೪೫ರ ಬಸ್ಸು ಸಿಕ್ಕಿತು. ಸಂಜೆ ೫ ಗಂಟೆಗೆ ಮನೆಯಲ್ಲಿದ್ದೆ.


ಒಟ್ಟು ೧೪ಕಿಮಿ ಚಾರಣ ಮಾಡುವ ಇರಾದೆಯಿಂದ ಈ ಜಲಧಾರೆ ನೋಡಲು ತೆರಳಿದ ನಾವು ಅಂದು ಒಂದು ಕಿಮಿ ಕೂಡಾ ಚಾರಣ ಮಾಡಲಿಲ್ಲ!!

5 ಕಾಮೆಂಟ್‌ಗಳು:

sunaath ಹೇಳಿದರು...

ಮೋಡಗಳೇ ಹನಿಗಳಾಗಿ ಬೀಳುತ್ತಿವೆಯೇನೋ ಎನ್ನಿಸುವ ಶುಭ್ರ, ಶ್ವೇತ ಜಲಧಾರೆಯ ಚಿತ್ರಗಳನ್ನು ಕಂಡು ಖುಶಿಯಾಯಿತು.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಧನ್ಯವಾದ.

Srik ಹೇಳಿದರು...

Sakhattaagide ee jaladhaare!

estu punya maadirabeku aa manushya intaha vatavaranadalli jeevana maaduttirabekadare!

Adakke runiyaagi iruvudu bittu kaadu kadedu resort maado yochane maduttanandare Enu hEluvudu aa mooda tanakke?!

Srik

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,
ವಿಪರ್ಯಾಸ...ಅಲ್ಲವೇ?

Unknown ಹೇಳಿದರು...

ನನ್ನ ಹೆಸರು ಮುದ್ದುಕೃಷ್ಣ ನನಗೂ ನಿಮ್ಮ ಹಾಗೆ ಚಾರಣ ಮಾಡುವ ಆಸೆ ನನಗೂ ನಿಮ್ಮ ಪೋನ್ ನಂಬರ್ ನೀಡುವಿರಾ ನನ್ನ ನಂಬರ್ 9945989222 ಹಾಗೂ ಮೇಲ್ madhukrishnakr30@gmail.com