ಭಾನುವಾರ, ಮೇ 15, 2011

ಹಾರ್ನಹಳ್ಳಿಯ ಚನ್ನಕೇಶವ ಮತ್ತು ಸೋಮೇಶ್ವರ


ಹಾರ್ನಹಳ್ಳಿ ೧೮೮೨ರವರೆಗೆ ಒಂದು ತಾಲೂಕು ಕೇಂದ್ರವಾಗಿತ್ತು. ಅರಸೀಕೆರೆ ತಾಲೂಕು ರಚನೆಯಾದ ಬಳಿಕ ಅದರೊಂದಿಗೆ ಹಾರ್ನಹಳ್ಳಿ ವಿಲೀನವಾಯಿತು. ಹಿಂದೆ ಈ ಗ್ರಾಮವನ್ನು ಲಕ್ಷ್ಮೀನರಸಿಂಹಪುರವೆಂದೂ ನಂತರ ಹಿರಿಯ ಸೋಮನಾಥಪುರವೆಂದೂ ನಂತರ ಹಾರುವನಹಳ್ಳಿಯೆಂದೂ ಕರೆಯಲಾಗುತ್ತಿತ್ತು. ಊರಿನ ನಟ್ಟನಡುವೆ ಹಾದುಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಸಮಾನ ಅಂತರಗಳಲ್ಲಿ ಕೇಶವ ದೇವಾಲಯ ಮತ್ತು ಸೋಮೇಶ್ವರ ದೇವಾಲಯಗಳಿವೆ. ಎರಡೂ ದೇವಾಲಯಗಳನ್ನು ೧೩ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.


ಪೂರ್ವಾಭಿಮುಖವಾಗಿರುವ ಕೇಶವ ದೇವಾಲಯವನ್ನು ಇಸವಿ ೧೨೩೪ ರಲ್ಲಿ ನಿಜೇಶ್ವರ ಭಟ್ಟ, ಸಂಕಣ್ಣ ಮತ್ತು ಗೋಪಣ್ಣ ಎಂಬ ಮೂವರು ಸಹೋದರರು ತಮ್ಮ ತಂದೆಯ ಸ್ಮರಣಾರ್ಥ ಮಲ್ಲಿತಮ್ಮ ಎಂಬ ಶಿಲ್ಪಿಯಿಂದ ನಿರ್ಮಿಸಿದರು. ಈ ಮಲ್ಲಿತಮ್ಮನೇ ನಂತರ ಸೋಮನಾಥಪುರ, ನುಗ್ಗೇಹಳ್ಳಿ ಮತ್ತು ಹೊಸಹೊಳಲು ದೇವಾಲಯಗಳಲ್ಲಿಯೂ ಕೆಲಸ ಮಾಡಿದ್ದನೆಂದು ನಂಬಲಾಗಿದೆ. ಪ್ರಧಾನ ಗರ್ಭಗುಡಿಯಲ್ಲಿ ಚನ್ನಕೇಶವ ದೇವರ ಮೂರ್ತಿಯಿದ್ದು, ಉಳಿದೆರಡರಲ್ಲಿ ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ ಮೂರ್ತಿಗಳಿವೆ. ತ್ರಿಕೂಟ ಶೈಲಿಯ ದೇವಸ್ಥಾನದ ಪ್ರಧಾನ ಗರ್ಭಗುಡಿಯ ಮೇಲ್ಭಾಗದಲ್ಲಿ ಆಕರ್ಷಕ ಗೋಪುರವಿದೆ.


ಶಾಸನಗಳಲ್ಲಿ ಈ ದೇವಾಲಯವನ್ನು ನರಸಿಂಹ ದೇವಾಲಯವೆಂದು ಕರೆಯಲಾಗಿದೆ. ದೇವಾಲಯ ನಿರ್ಮಿಸಿದ ೩ ಸಹೋದರರು ಪ್ರತಿಷ್ಠಾಪಿಸಿದ್ದು ಲಕ್ಷ್ಮೀನರಸಿಂಹ ದೇವರ ಮೂರ್ತಿಯನ್ನಾಗಿದ್ದರಿಂದ ಶಾಸನಗಳಲ್ಲಿ ಹಾಗೆ ಹೇಳಿದ್ದಿರಬಹುದು. ಮುಖಮಂಟಪ, ಸುಖನಾಸಿ ಮತ್ತು ನಾಲ್ಕು ಕಂಬಗಳ ನವರಂಗವನ್ನು ದೇವಾಲಯ ಹೊಂದಿದೆ. ನವರಂಗದ ಛಾವಣಿಯಲ್ಲೂ ಸುಂದರ ಕೆತ್ತನೆಗಳಿವೆ. ಸುಖನಾಸಿಯಲ್ಲಿ ಒಂದು ಪಾರ್ಶ್ವದಲ್ಲಿ ೩೦ ಮೂಲೆಗಳ ಕಂಬ ಮತ್ತು ಇನ್ನೊಂದು ಪಾರ್ಶ್ವದಲ್ಲಿ ೬೦ ಮೂಲೆಗಳ ಕಂಬವಿದೆ. ಇಲ್ಲಿ ದಿನಾಲೂ ಪೂಜೆ ನಡೆಯುತ್ತದೆ. ನವರಾತ್ರಿ, ವೈಕುಂಠ ಏಕಾದಶಿ ಮತ್ತು ಶ್ರಾವಣ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.


ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳನ್ನು ಅದ್ಭುತವಾಗಿ ಮತ್ತು ಒತ್ತೊತ್ತಾಗಿ ಕೆತ್ತಲಾಗಿದೆ. ಹೊರಗೋಡೆಯ ತಳಭಾಗದಿಂದ ಒಂದರ ಮೇಲೊಂದರಂತೆ ೬ ಪಟ್ಟಿಗಳಲ್ಲಿ (ಸಾಲುಗಳಲ್ಲಿ) ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ತಳಭಾಗದಲ್ಲಿ ಮೊದಲು ಆನೆಗಳ ಸಾಲನ್ನು ನಂತರ ಅಶ್ವಗಳ ಸಾಲನ್ನು ಕೆತ್ತಲಾಗಿದೆ. ಮೂರನೆಯದಾಗಿ ಬಳ್ಳಿ ಸುರುಳಿಯನ್ನು ಕೆತ್ತಲಾಗಿದೆ. ನಾಲ್ಕನೇ ಸಾಲನಲ್ಲಿ ಯಾವುದೇ ಕೆತ್ತನೆಗಳಿಲ್ಲ. ಐದನೇ ಸಾಲಿನಲ್ಲಿ ಮಕರ ಹಾಗೂ ಕೊನೆಯ ಪಟ್ಟಿಯಲ್ಲಿ ಹಂಸಗಳ ಸಾಲನ್ನು ಕೆತ್ತಲಾಗಿದೆ.


ಈ ಆರು ಪಟ್ಟಿಗಳ ಮೆಲೆ ಭಿತ್ತಿಚಿತ್ರಗಳನ್ನು ಕೆತ್ತಲಾಗಿದೆ. ಈ ಕೆತ್ತನೆಗಳಿಗೆ ಮಾರುಹೋಗದಿರಲು ಅಸಾಧ್ಯ. ಇಲ್ಲಿ ೧೪೦ ಕೆತ್ತನೆಗಳಿದ್ದು ಪ್ರತಿಯೊಂದು ಸುಮಾರು ೨-೩ ಅಡಿ ಎತ್ತರವಿವೆ. ಬಲಮುರಿ ಗಣೇಶನ ಕೆತ್ತನೆಯಂತೂ ಅದ್ಭುತವಾಗಿದೆ.


ಉಳಿದ ಪ್ರಮುಖ ಕೆತ್ತನೆಗಳು - ಕಾಳಿಂಗಮರ್ದನ, ರತಿ ಮನ್ಮಥ, ಬ್ರಹ್ಮ, ಮಹಿಷಾಸುರಮರ್ದಿನಿ, ವಾಮನ, ಹರಿಹರ, ದುರ್ಗಾ, ಭೈರವ, ದಕ್ಷಿಣಾಮೂರ್ತಿ, ಹಿರಣ್ಯಕಷಿಪು, ಆರು ಕೈಗಳ ವೀಣಾ ಸರಸ್ವತಿ, ಬಲರಾಮ, ಪರಶುರಾಮ, ಇತ್ಯಾದಿ.


ಸೋಮೇಶ್ವರ ದೇವಾಲಯ ದಕ್ಷಿಣಾಭಿಮುಖವಾಗಿದೆ. ಮುಖಮಂಟಪದ ಮೇಲೆ ನಂದಿಯ ಮೂರ್ತಿಯನ್ನು ಕೂರಿಸಿರುವುದು ವಿಶೇಷ. ಚನ್ನಕೇಶವ ದೇವಾಲಯದಲ್ಲಿ ೩ ಗರ್ಭಗುಡಿಗಳು ಮತ್ತು ಒಂದೇ ದ್ವಾರವಿದ್ದರೆ, ಇಲ್ಲಿ ಒಂದೇ ಗರ್ಭಗುಡಿ ಮತ್ತು ೩ ದ್ವಾರಗಳಿವೆ. ಗರ್ಭಗುಡಿಯಲ್ಲಿ ಸೋಮೇಶ್ವರ ಹೆಸರಿನ ಶಿವಲಿಂಗವಿದ್ದು ಮೇಲ್ಭಾಗದಲ್ಲಿ ಕಲಶವಿರುವ ಗೋಪುರವಿದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ನಮಗೆ ಒಳಗೆ ತೆರಳಲಾಗಲಿಲ್ಲ.


ಹೊರಗೋಡೆಯಲ್ಲಿರುವ ಕೆತ್ತನೆಗಳ ರಚನೆ ಮತ್ತು ತಳಭಾಗದಲ್ಲಿರುವ ಪಟ್ಟಿಗಳ ರಚನೆ ಎಲ್ಲವೂ ಚನ್ನಕೇಶವ ದೇವಾಲಯವನ್ನೇ ಹೋಲುತ್ತದೆ. ಆದರೆ ಇಲ್ಲಿ ಕೆತ್ತನೆಗಳ ಕಾರ್ಯ ಅಪೂರ್ಣವಾಗಿದೆ. ಹೊರಗೋಡೆಯಲ್ಲಿ ತಳಭಾಗದಿಂದ ೬ ಪಟ್ಟಿಗಳೇನೋ ಇವೆ. ಆದರೆ ಇವುಗಳ ಮೇಲಿನ ಕೆತ್ತನೆ ಕೆಲಸ ಕೆಲವೊಂದೆಡೆ ಮಾತ್ರ ಇದೆ. ಇಲ್ಲೂ ಮೊದಲ ಸಾಲಿನಲ್ಲಿ ಆನೆಗಳು ಮತ್ತು ಎರಡನೇ ಸಾಲಿನಲ್ಲಿ ಅಶ್ವಗಳಿವೆ. ಆದರೆ ನಂತರದ ಸಾಲುಗಳಲ್ಲಿ ಕೆಲವೆಡೆ ಮಾತ್ರ ಕೆತ್ತನೆಗಳಿವೆ.


ಹೊರಗೋಡೆಯಲ್ಲಿ ಭಿತ್ತಿಚಿತ್ರಗಳಿವೆ. ಆದರೆ ದೇವಾಲಯದ ಸುತ್ತಲೂ ಎಲ್ಲೆಡೆಯಲ್ಲೂ ಕೆತ್ತಲಾಗಿಲ್ಲ. ಇಲ್ಲಿರುವ ಪ್ರಮುಖ ಕೆತ್ತನೆಗಳು - ಭೈರವ, ದುರ್ಗಾ, ಲಕ್ಷ್ಮೀ, ತ್ರಿವಿಕ್ರಮ, ಹರಿಹರ, ಮೋಹಿನಿ, ತಾಂಡವ ಗಣೇಶ, ಮಹಿಷಾಸುರಮರ್ದಿನಿ, ವೇಣುಗೋಪಾಲ, ನೃತ್ಯ ಭಂಗಿಯಲ್ಲಿರುವ ಶಿವ, ಕಾಳಿಂಗಮರ್ದನ, ಇತ್ಯಾದಿ.


ಹಾರ್ನಹಳ್ಳಿಯಲ್ಲೊಂದು ವಿಶಾಲವಾದ ಸುಂದರ ಕೆರೆ ಇದೆ. ೧೧ನೇ ಶತಮಾನದಲ್ಲಿ ಹೊಯ್ಸಳ ದೊರೆ ಸೋಮೇಶ್ವರನು ತನ್ನ ಮಗಳು ನಾಗರತಿಯ ಹೆಸರಿನಲ್ಲಿ ಕಟ್ಟಿರುವ ಪುರಾತನ ಕೆರೆ ಇದು. ಈಗಲೂ ಈ ಕೆರೆಯನ್ನು ’ನಾಗರ್ತಿ ಕೆರೆ’ಯೆಂದೇ ಕರೆಯಲಾಗುತ್ತದೆ.


ಸೋಮೇಶ್ವರನು ಇಲ್ಲಿ ಕೋಟೆಯೊಂದನ್ನೂ ನಿರ್ಮಿಸಿದ್ದಾನೆ. ಊರಿನಲ್ಲಿ ಕೋಟೆಯ ಅವಶೇಷಗಳನ್ನು ಕಾಣಬಹುದು ಎನ್ನಲಾಗುತ್ತದೆಯಾದರೂ ನನಗಂತೂ ಎಲ್ಲೂ ಕಾಣಬರಲಿಲ್ಲ. ಊರಿನ ಹೊರಗೆ ಎಲ್ಲಾದರೂ ಇರಬಹುದು.

ಮಾಹಿತಿ: ಐ.ಸೇಸುನಾಥನ್, ಬಿ.ಆರ್.ಸತ್ಯನಾರಾಯಣ ಮತ್ತು ನಾಗೇಂದ್ರ ಹಾರ್ನಹಳ್ಳಿ

4 ಕಾಮೆಂಟ್‌ಗಳು:

Aravind GJ ಹೇಳಿದರು...

ಸೊಗಸಾದ ವರ್ಣನೆ!!

Sreenath ಹೇಳಿದರು...

ur doing very good job sir..its very informative to all..thankyou..

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್, ಶ್ರೀ
ನಿಮಗಿಬ್ಬರಿಗೂ ಧನ್ಯವಾದಗಳು.

ಉಮೇಶ ಮುಂಡಳ್ಳಿ ಭಟ್ಕಳ ಹೇಳಿದರು...

ಲೇಖನ ತುಂಬ ುತ್ತಮವಾಗಿ ಮೂಡಿಬಂದಿದೆ.ನಾನು ಉತ್ತರ ಕನ್ನಡ ಜಿಲ್ಲೆಯವನೆ. ನಿಮ್ಮ ಹಲವು ಶೈಲಿಗಳು ಆ ಪ್ರವಾಸಿ ತಾಣಕ್ಕೆ ನನ್ನ ಕರೆದುಕೊಂಡು ಹೋದ ಻ನನ್ಯ ಻ನುಭವ ಮೂಡಿಸಿತು.