ಶುಕ್ರವಾರ, ಜುಲೈ 20, 2012

ಕಣಿವೆಯ ಚೆಲುವೆ


ಡಾ!ಗುತ್ತಲ್, ತನ್ನದೇ ವಾಹನವಾದರೂ ಸ್ವಲ್ಪವೂ ಕಾಳಜಿ ತೋರದೆ ಹಳ್ಳಿ, ಗುಡ್ಡಗಾಡು, ಕಾಡು ರಸ್ತೆಗಳಲ್ಲಿ ಸಿಕ್ಕಾಪಟ್ಟೆ ಓಡಿಸಿಬಿಡುತ್ತಾರೆ. ಸಣ್ಣ ಮರಗಳೇನಾದರೂ ದಾರಿಗಡ್ಡವಾಗಿ ಬಿದ್ದಿದ್ದರೆ ಅವುಗಳ ಮೇಲೆಯೇ ಚಲಾಯಿಸಿಬಿಡುತ್ತಾರೆ. ಅದೆಷ್ಟೋ ಸಲ ವಾಹನ ಜಖಂಗೊಂಡರೂ ಅವರಿನ್ನೂ ಪಾಠ ಕಲಿತಿಲ್ಲ. ಈ ಬಾರಿಯೂ ಮತ್ತೆ ಅದೇ ಪುನರಾವರ್ತನೆಯಾಯಿತು.


ಆದಿನ ಎರಡು ಜಲಧಾರೆಗಳನ್ನು ನೋಡುವ ಪ್ಲ್ಯಾನ್ ಮಾಡಿದ್ದೆವು. ಮೊದಲನೇದ್ದು ಮುಗಿಸಿ ಈಗ ಎರಡನೇದರೆಡೆಗೆ ತೆರಳುತ್ತಿದ್ದೆವು. ಸಮಯ ಅದಾಗಲೇ ಅಪರಾಹ್ನ ಮೂರು ದಾಟಿತ್ತು. ತರೆಗೆಲೆಗಳಿಂದ ಮುಚ್ಚಿದ್ದು ಅಂಕುಡೊಂಕಾಗಿ ಸಾಗುವ ರಸ್ತೆ. ದಾರಿಗಡ್ಡವಾಗಿ ಉರುಳಿದ್ದ ಮರವನ್ನು ಹಳ್ಳಿಗರು ಬದಿಗೆ ಸರಿಸಿದ್ದರೂ ನಮ್ಮ ವಾಹನ ಸಲೀಸಾಗಿ ಸಾಗುವಷ್ಟು ಜಾಗವಿರಲಿಲ್ಲ. ವಿವೇಕ್ ಕೆಳಗಿಳಿದು, ’ಸ್ವಲ್ಪ ಬಲಕ್ಕೆ .. ಎಡಕ್ಕೆ ... ಈಗ ಹಿಂದೆ ಹೋಗಿ... ಈಗ ಬಲಕ್ಕೆ... ಈಗ ಮತ್ತೆ ಹಿಂದೆ ಹೋಗಿ... ಈಗ ಎಡಕ್ಕೆ...’ ಎನ್ನುತ್ತಾ ಡೈರೆಕ್ಷನ್ ಕೊಡುತ್ತಿದ್ದರು. ಗೇರ್ ಬದಲು ಮಾಡಿ ಮಾಡಿ ತಾಳ್ಮೆ ಕಳಕೊಂಡ ಡಾ!ಗುತ್ತಲ್, ’ಏ... ಸರಿ..’ ಎನ್ನುತ್ತಾ ’ಭರ್ರ್..’ ಎಂದು ಮುಂದೆ ಬಂದೇಬಿಟ್ಟರು. ವಾಹನದ ಮುಂಭಾಗಕ್ಕೆ ದೊಡ್ಡ ಹಾನಿಯೇ ಆಯಿತು. ಆದರೂ ಮತ್ತೆ ತನ್ನದೇ ಧಾಟಿಯಲ್ಲಿ ’ನಡೀರಿ... ಸರಿ ಮಾಡಿದ್ರಾತು....’ ಎಂದು ಇನ್ನಷ್ಟು ವೇಗವಾಗಿ ದೌಡಾಯಿಸಿದರು.


ದಾರಿಯಲ್ಲಿ ಒಂದೆಡೆ ರಸ್ತೆ ಬಹಳ ಹಾಳಾಗಿತ್ತು. ಅಲ್ಲಿಯೇ ವಾಹನ ನಿಲ್ಲಿಸಿ ನಡೆಯಲು ಆರಂಭಿಸಿದೆವು. ಸ್ವಲ್ಪ ಮುಂದೆ ಸಿಕ್ಕ ಹಿರಿಯರೊಬ್ಬರಲ್ಲಿ ಜಲಧಾರೆಗೆ ದಾರಿಯ ಬಗ್ಗೆ ವಿಚಾರಿಸಿದೆವು. ಸಮೀಪದಲ್ಲೇ ಇದ್ದ ಅವರ ಮನೆಗೆ ತೆರಳಿ ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದೆವು. ಆ ಹಿರಿಯರ ಮಗ ನಮ್ಮೊಂದಿಗೆ ಬರಲು ಅಣಿಯಾದ. ಜಲಧಾರೆ ಧುಮುಕುವ ಕಣಿವೆಯು ಈ ಹಳ್ಳಿಯಿಂದಲೇ ಆರಂಭವಾಗುವುದರಿಂದ ಜಲಧಾರೆಯ ಮೇಲ್ಭಾಗಕ್ಕೂ ಮತ್ತು ತಳಭಾಗಕ್ಕೂ ಚಾರಣ ಕೈಗೊಳ್ಳಬಹುದು.


ಜಲಧಾರೆ ಸುಮಾರು ದೊಡ್ಡದಿದೆ ಎಂಬ ಮಾಹಿತಿಯಿದ್ದರೂ ಈ ಪರಿ ದೊಡ್ಡದಿರಬಹುದು ಎಂಬ ಕಲ್ಪನೆಯೇ ನಮಗಿರಲಿಲ್ಲ. ಜಲಧಾರೆಗೆ ವಿರುದ್ಧವಾಗಿರುವ ಗುಡ್ಡದಿಂದ ವೀಕ್ಷಿಸಿದರೆ ಅದೊಂದು ಮನಸೂರೆಗೊಳ್ಳುವ ನೋಟ. ಎರಡು ಹಂತಗಳಲ್ಲಿ ಸುಮಾರು ೨೭೦-೩೦೦ ಅಡಿ ಆಳಕ್ಕೆ ಧುಮುಕುವ ಜಲಧಾರೆಯ ಬುಡಕ್ಕೆ ಹೋಗುವ ಇರಾದೆ ನನಗಂತೂ ಆ ದಿನ ಇರಲಿಲ್ಲ. ನಮ್ಮೊಂದಿಗಿದ್ದ ಮಾರ್ಗದರ್ಶಿ ಯುವಕ ನೇರವಾಗಿ ಕೆಳಗಿಳಿಯುವ ದಾರಿಯ ಬಗ್ಗೆ ಮಾತನಾಡುತ್ತಿದ್ದ. ಮುಂಜಾನೆಯಷ್ಟೇ ತುಂತುರು ಮಳೆಯಾಗಿದ್ದರಿಂದ ಮತ್ತು ಈ ದಾರಿಯಲ್ಲಿ ಕಲ್ಲುಬಂಡೆಗಳನ್ನು ಆಧರಿಸಿ ನೇರವಾಗಿ ಕೆಳಗಿಳಿಯಬೇಕಾಗುವುದರಿಂದ ತುಸು ಹೆಚ್ಚೇ ಅಪಾಯವಿರುವುದನ್ನು ಅರಿತು ನಾವು ಆತನಿಗೆ ಸುತ್ತು ಬಳಸಿ ಮತ್ತೊಂದು ದಾರಿಯಲ್ಲಿ ಕರಕೊಂಡು ಹೋಗುವಂತೆ ವಿನಂತಿಸಿದೆವು.


ಈ ಮತ್ತೊಂದು ದಾರಿಯಲ್ಲಿ ನಮಗೆ ಜಲಧಾರೆಯ ಬಳಿ ತಲುಪಲು ಕನಿಷ್ಟ ೧೦೦ ನಿಮಿಷಗಳಾದರೂ ಬೇಕು. ಅಂದರೆ ಜಲಧಾರೆಯ ಬುಡ ತಲುಪುವಷ್ಟರಲ್ಲಿ ಸಮಯ ಆರು ದಾಟಿಬಿಡುತ್ತದೆ. ಅಷ್ಟು ಗಡಿಬಿಡಿ ಮಾಡುವ ಬದಲು ಇನ್ನೊಂದು ದಿನ ಮುಂಜಾನೆಯೇ ಇಲ್ಲಿಗೆ ಬಂದು ಆರಾಮವಾಗಿ ಚಾರಣ ಮಾಡಿ ಕೆಳಗಿಳಿದು ಹೋಗಿ, ಜಲಧಾರೆಯ ಬುಡದಲ್ಲೂ ಬೇಕಾದಷ್ಟು ಸಮಯ ಕಳೆದು ಬರೋಣವೆನ್ನುವುದು ನನ್ನ ಸಲಹೆಯಾಗಿತ್ತು. ಆದರೂ ಎಲ್ಲರೂ ಕೆಳಗಿಳಿಯುವ ನಿರ್ಧಾರ ಮಾಡಿದ್ದರಿಂದ ನಾನೂ ಹೆಜ್ಜೆ ಹಾಕಿದೆ. ಇಲ್ಲಿ ಜಲಧಾರೆಯ ೩೦೦ ಅಡಿ ಉದ್ದ ನೋಡಿಯೇ ಕೆಳಗಿಳಿಯುವುದು ಬೇಡ ಎನ್ನುವುದು ನನ್ನ ಸಲಹೆಯಾಗಿತ್ತು.


ಗುಡ್ಡದ ಅಂಚಿನಲ್ಲೇ ಸುಮಾರು ದೂರ ನಡೆದು ಕಣಿವೆಯ ಅತಿ ಕಡಿದಾದ ಭಾಗ ಕೊನೆಗೊಂಡ ಬಳಿಕ, ಕಣಿವೆಯನ್ನು ಇಳಿಯುವ ಕೆಲಸಕ್ಕೆ ’ಕಾಲು’ಹಾಕಿದೆವು. ಇಳಿಜಾರು ಕಡಿದಾಗಿದ್ದರಿಂದ ಮತ್ತು ಕಾಡು ದಟ್ಟವಾಗಿದ್ದರಿಂದ ವೇಗವಾಗಿ ನಡೆಯುವುದು ಅಸಾಧ್ಯವಾಗಿತ್ತು. ಮುಂಜಾನೆಯ ಮಳೆಯ ಕಾರಣ ಕಾಡಿನ ನೆಲ ಜಾರುತ್ತಿತ್ತು ಕೂಡಾ. ಎಷ್ಟೇ ಹೊತ್ತಾದರೂ ಹಳ್ಳದ ಶಬ್ದ ಕೂಡಾ ಕೇಳಿಸುತ್ತಿರಲಿಲ್ಲ. ಆದರೆ ನಮ್ಮ ಗುರಿ ಹಳ್ಳವಾಗಿರಲಿಲ್ಲ. ನಮ್ಮ ಗುರಿಯಾಗಿತ್ತು ಜಲಧಾರೆ. ಆದರೆ ಜಲಧಾರೆ ತಲುಪಲು ಹಳ್ಳ ಸಿಕ್ಕ ಬಳಿಕ ಹಳ್ಳಗುಂಟ ವಿರುದ್ಧ ದಿಕ್ಕಿನಲ್ಲಿ ಇನ್ನೊಂದಷ್ಟು ಹೊತ್ತು ನಡೆಯಬೇಕೆನ್ನುವುದು ಎಲ್ಲರನ್ನು ಇನ್ನಷ್ಟು ಚಿಂತೆಗೊಳಪಡಿಸಿತು.


ಇನ್ನು ಮುಂದೆ ಸಾಗುವುದು ಅನಾವಶ್ಯಕವೆಂದು ನನಗರಿವಾದಾಗ ಉಳಿದವರಿಗೆ ಮುಂದೆ ಸಾಗಲು ಹೇಳಿ ನಾನು ಅಲ್ಲೇ ಒಂದೆಡೆ ಆರಾಮವಾಗಿ ಕುಳಿತುಬಿಟ್ಟೆ. ಸುಮಾರು ಸಮಯದ ಬಳಿಕ ’ರಾಜೇಶ್, ಕೆಳಗೆ ಬರ್ರಿ... ಹಳ್ಳ ಸಿಕ್ತು. ಫ್ರೆಷ್ ಆಗಿ ವಾಪಾಸ್ ಹೋಗೋಣ..’ ಎಂದು ದೂರದಿಂದ ವಿವೇಕ್ ಜೋರಾಗಿ ಒದರಿದಾಗ, ’ಮುಖವನ್ನಾದರೂ ತೊಳೆದುಕೊಂಡು ಬರೋಣ’ ಎಂದು ’ಬೇಕೋ ಬೇಡವೋ’ ಎಂಬಂತೆ ಎದ್ದು ಮತ್ತೆ ನಿಧಾನವಾಗಿ ಮುಂದೆ ಸಾಗಿದೆ.


ನಾನು ಕೆಳಗೆ ತಲುಪುವಷ್ಟರಲ್ಲಿ ಉಳಿದವರದ್ದು ಜಲಕ್ರೀಡೆ ಆರಂಭವಾಗಿತ್ತು. ನಮ್ಮ ಮಾರ್ಗದರ್ಶಿಯ ಪ್ರಕಾರ ಜಲಧಾರೆ ಇನ್ನೂ ಒಂದು ತಾಸು ದೂರವಿತ್ತು ಮತ್ತು ನೇರವಾಗಿ ಇಳಿದುಬಿಟ್ಟಿದ್ರೆ ಇಷ್ಟು ಹೊತ್ತಿಗೆ ನಾವು ಹಿಂತಿರುಗಿ ಕೂಡಾ ಆಗ್ತಿತ್ತು! ಆದರೆ ಆ ದಾರಿಯಲ್ಲಿ ಅಂದು ಇಳಿಯಬಾರದು ಎಂಬ ನಮ್ಮ ನಿರ್ಧಾರ ಸರಿಯಾಗಿತ್ತು. ಮುಂಜಾನೆ ಮಳೆಯಾಗದಿದ್ದರೆ ನಾವು ಇಳಿಯುವ ಧೈರ್ಯ ಮಾಡುತ್ತಿದ್ದೆವು. ಈಗ ಇಲ್ಲಿ ಎಲ್ಲರೂ ಸುಮಾರು ಅರ್ಧ ಗಂಟೆ ಹಳ್ಳದಲ್ಲೇ ಬಿದ್ದು, ಹೊರಳಾಡಿದರು. ದಣಿವಾರಿಸಿಕೊಂಡರು. ಚಾರಣದ ಸಂಪೂರ್ಣ ಆನಂದ ಸಿಗುವುದೇ ಸ್ನಾನದಲ್ಲಿ ಎಂಬ ಭಾಷಣ ಅವರಿಂದ ನನಗೆ. ಅವರಿಗೆಲ್ಲಾ ಪರಮಾನಂದ. ಚಾರಣದ ಸಮಯದಲ್ಲಿ ಹರಿಯುವ ನೀರಿನಲ್ಲಿ ಸ್ನಾನದ ಮಜಾನೇ ಬೇರೆಯಂತೆ. ಸ್ನಾನದ ಬಳಿಕ ’ಲೈಟ್ ರಿಫ್ರೆಷ್‍ಮೆಂಟ್ ಸೆಷನ್’.


ನಂತರ ಮತ್ತೆ ಆ ದಟ್ಟ ಕಾಡನ್ನು ದಾಟಿ ಮೇಲೆ ತಲುಪುವಷ್ಟರಲ್ಲಿ ಸಾಕುಸಾಕಾಯಿತು. ಜಲಧಾರೆಯ ಸಮೀಪ ಬಂದಾಗ ಮುಸ್ಸಂಜೆಯ ಸೂರ್ಯನ ಕಿರಣಗಳು ಜಲಧಾರೆಯ ಇನ್ನೊಂದು ರೂಪವನ್ನು ಅನಾವರಣಗೊಳಿಸಿದ್ದವು.


ಈ ಚಾರಣ ಕೈಗೊಂಡು ಮೂರು ಮಳೆಗಾಲಗಳು ಉರುಳಿಹೋದವು. ಮತ್ತೆ ಆ ಕಡೆ ಸುಳಿಯಲು ನಮ್ಮಿಂದಾಗಲಿಲ್ಲ. ಪ್ರತಿ ಸಲ ವಿವೇಕ್ ಭೇಟಿಯಾದಾಗ, ’ಅದೊಂದ್ ಬಾಕಿಐತಲ್ರೀ..’ ಎನ್ನುತ್ತಾರೆ. ಈ ಮಳೆಗಾಲದ ಬಳಿಕವಾದರೂ ಈ ಜಲಧಾರೆಯ ಪಾದ ಮುಟ್ಟಿ ಆಶೀರ್ವಾದ ಪಡೆದು ಬರಬೇಕು.

ಮಂಗಳವಾರ, ಜುಲೈ 17, 2012

ನರಸಿಂಹ ದೇವಾಲಯ - ಹಲಸಿ


ಕದಂಬರ ದೇವಾಲಯಗಳಲ್ಲಿ ಶಿಲ್ಪಕಲೆಗೆ ಹೆಚ್ಚಿನ ಆದ್ಯತೆ ಇರುವುದಿಲ್ಲ ಮತ್ತು ಗೋಪುರ ನಿರ್ಮಾಣ ತುಂಬಾ ಸರಳವಾಗಿರುತ್ತದೆ. ಹಲಸಿಯ ನರಸಿಂಹ ದೇವಾಲಯವೂ ಇದಕ್ಕೆ ಹೊರತಾಗಿಲ್ಲ. ಸುಂದರ ಪ್ರಾಂಗಣದಲ್ಲಿರುವ ಸರಳ ರಚನೆಯ ದೇವಾಲಯವಿದು. ಶಿಲ್ಪಕಲೆ ರಸಿಕರಿಗೆ ಈ ದೇವಾಲಯ ನಿರಾಸೆ ಉಂಟುಮಾಡುವುದು ಖಾತ್ರಿ. ಪಲಸಿಕಾ, ಪಲಶಿ ಹಾಗೂ ಹಲಸಿಗೆ ಎಂಬಿತ್ಯಾದಿ ಹೆಸರುಗಳಿಂದಲೂ ಈ ಊರನ್ನು ಶಾಸನಗಳಲ್ಲಿ ಕರೆಯಲಾಗಿದೆ. ಬನವಾಸಿಯ ಬಳಿಕ ಹಲಸಿ ಕದಂಬರ ಎರಡನೇ ರಾಜಧಾನಿಯಾಗಿತ್ತು ಎನ್ನಲಾಗುತ್ತದೆ. ತದನಂತರ ಗೋವಾ ಕದಂಬರ ಕಾಲದಲ್ಲೂ ಪ್ರಮುಖ ಸ್ಥಳವಾಗಿ ಮೆರೆದಿದ್ದ ಊರಿದು.


ನರಸಿಂಹ ದೇವಾಲಯದ ಗೋಪುರ ಬನವಾಸಿಯ ಮಧುಕೇಶ್ವರ ದೇವಾಲಯದ ಗೋಪುರವನ್ನು ಹೋಲುತ್ತದೆ. ಹಲಸಿಯಲ್ಲಿ ಗೋಪುರ ಸ್ವಲ್ಪ ಅಗಲವಾಗಿದ್ದರೂ ಎರಡೂ ದೇವಾಲಯಗಳ ಗೋಪುರಗಳ ಮೂಲ ರಚನೆ ಸಮಾನವಾಗಿದೆ. ಹಲಸಿಯಲ್ಲಿರುವ ಇತರ ದೇವಾಲಯಗಳೆಂದರೆ ಸುವರ್ಣೇಶ್ವರ, ಕಪಿಲೇಶ್ವರ, ಕಲ್ಮೇಶ್ವರ, ಹತಕೇಶ್ವರ ಮತ್ತು ಗೋಕರ್ಣೇಶ್ವರ.


ಈ ದೇವಾಲಯದಲ್ಲಿ ಒಂದಕ್ಕೊಂದು ಮುಖ ಮಾಡಿಕೊಂಡು ಎರಡು ಗರ್ಭಗುಡಿಗಳಿವೆ. ಒಂದು ಗರ್ಭಗುಡಿಯಲ್ಲಿ ವಿಷ್ಣುವಿನ ಮೂರ್ತಿಯಿದ್ದರೆ ಇನ್ನೊಂದರಲ್ಲಿ ಭೂವರಾಹನ ಮೂರ್ತಿಯಿದೆ. ಈ ಗರ್ಭಗುಡಿಗಳ ನಡುವೆ ನಾಲ್ಕು ಕಂಬಗಳ ನವರಂಗವಿದೆ. ದೇವಾಲಯಕ್ಕಿರುವ ಎರಡು ದ್ವಾರಗಳು ನವರಂಗಕ್ಕೆ ತೆರೆದುಕೊಳ್ಳುತ್ತವೆ. ಒಂದು ದ್ವಾರದ ಮೆಟ್ಟಿಲೊಂದರಲ್ಲಿ ಕದಂಬರ ಇತರ ದೇವಾಲಯಗಳಲ್ಲಿರುವಂತೆ ಕನ್ಯೆಯೊಬ್ಬಳು ನಮಸ್ಕರಿಸುವ ಚಿತ್ರವನ್ನು ಬಿಡಿಸಲಾಗಿದೆ. ಕೆಳದಿ, ಇಕ್ಕೇರಿ, ಬೆಡಸಗಾವಿ ಮತ್ತು ಕವಲೇದುರ್ಗದ ದೇವಾಲಯಗಳಲ್ಲಿ ಈ ತರಹದ ಚಿತ್ರಗಳನ್ನು ಕಾಣಬಹುದು.


ಮೂಲತ: ಒಂದೇ ಗರ್ಭಗುಡಿಯಿದ್ದ ಈ ದೇವಾಲಯದ ಹೆಸರು ’ನರಸಿಂಹ ದೇವಾಲಯ’ವಾದರೂ ಇಲ್ಲಿ ನರಸಿಂಹನಿಗೆ ಪ್ರಮುಖ ಸ್ಥಾನವಿಲ್ಲ! ನರಸಿಂಹನ ಮೂಲವಿಗ್ರಹವನ್ನು ಬಹಳ ಹಿಂದೆನೇ ಮೂಲಸ್ಥಾನದಿಂದ ತೆಗೆಯಲಾಗಿದ್ದು ಅಲ್ಲಿ ನಾರಾಯಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನರಸಿಂಹನ ಮೂರ್ತಿಯನ್ನು ಗರ್ಭಗುಡಿಯ ಒಳಗೆನೇ ಎಡಭಾಗದಲ್ಲಿರಿಸಲಾಗಿದ್ದು ಸರಿಯಾಗಿ ಕಾಣಿಸುವುದೂ ಇಲ್ಲ.


ದೇವಾಲಯದ ನವರಂಗದಲ್ಲಿ ಶಾಸನವೊಂದನ್ನು ಕಾಣಬಹುದು. ಈ ಶಾಸನದ ಪ್ರಕಾರ ದೇವಾಲಯವನ್ನು ಇಸವಿ ೧೧೬೯ರಲ್ಲಿ ರಾಜಾ ಶಿವಚಿತ್ತನಿಂದ ನಿರ್ಮಿಸಲ್ಪಟ್ಟಿದ್ದು, ಮಹಾರಾಜನ ಮಾತೋಶ್ರೀಯವರ ಇಚ್ಛೆಯಂತೆ ’ಅನಂತ ವೀರವಿಕ್ರಮ ನರಸಿಂಹ’ ದೇವರ ವಿಗ್ರಹವನ್ನು ಮಾತಾಯೋಗಿ ಎಂಬವರಿಂದ ಪ್ರತಿಷ್ಠಾಪನೆಗೊಳಿಸಲಾಯಿತು. ಇಸವಿ ೧೧೭೨ರಲ್ಲಿ ರಾಜಾ ವಿಷ್ಣುಚಿತ್ತ ವಿಜಯಾದಿತ್ಯನು ಹಳ್ಳಿಯೊಂದನ್ನು ನರಸಿಂಹ ದೇವರಿಗೆ ನೀಡಿದ್ದನ್ನೂ ಇದೇ ಶಾಸನದಲ್ಲಿ ತಿಳಿಸಲಾಗಿದೆ. ಭೂವರಾಹನ ವಿಗ್ರಹವಿರುವ ಗರ್ಭಗುಡಿಯನ್ನು ದೇವಾಲಯ ನಿರ್ಮಾಣಗೊಂಡ ೧೭ ವರ್ಷಗಳ ಬಳಿಕ (ಇಸವಿ ೧೧೮೬ರಲ್ಲಿ) ಕದಂಬ ದೊರೆ ಮೂರನೇ ವಿಜಯಾದಿತ್ಯನ ಕಾಲದಲ್ಲಿ ನಿರ್ಮಿಸಲಾಯಿತು. ಸುಮಾರು ೬ ಅಡಿ ಎತ್ತರವಿರುವ ಭೂ ವರಾಹನ ವಿಗ್ರಹವೇ ಈ ದೇವಾಲಯದ ಆಕರ್ಷಣೆ.


ದೇವಾಲಯದ ಪ್ರಾಂಗಣದೊಳಗೆ ಗಣೇಶ ಮತ್ತು ಶಿವನ ಸಣ್ಣ ಗುಡಿಗಳಿವೆ. ಅಲ್ಲೇ ಸಮೀಪದಲ್ಲಿ ಪುಷ್ಕರಿಣಿಯೊಂದಿದೆ. ಪುರಾತತ್ವ ಇಲಾಖೆ ದೇವಾಲಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಸುಂದರ ಉದ್ಯಾನವನ್ನು ದೇವಾಲಯದ ಸುತ್ತಲೂ ನಿರ್ಮಿಸಲಾಗಿದ್ದು ವಿಶ್ರಮಿಸಲು ಸೂಕ್ತ ಸ್ಥಳ. ಈ ದೇವಾಲಯದಲ್ಲಿ ತಿನ್ನಲು ಪ್ರಸಾದ ಏನು ಗೊತ್ತೇ? ಪೇಡಾ! ನನಗೆ ಪ್ರಸಾದ ರೂಪದಲ್ಲಿ ಪೇಡಾ ದೊರಕಿದ್ದು ತಿಳಿದ ಲೀನಾ ಓಡೋಡಿ ತಾನೂ ಪ್ರಸಾದ ಪಡೆಯಲು ಹೋದರೆ, ಆಕೆಗೆ ಸಿಕ್ಕಿದ್ದು ತೀರ್ಥ ಮತ್ತು ಗಂಧ ಮಾತ್ರ.

ಮಾಹಿತಿ: ಸೌಮ್ಯ ನಾರಾಯಣ ಆಚಾರಿ ಮತ್ತು ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಜುಲೈ 15, 2012

ಚಾರಣ ಚಿತ್ರ - ೧೮


ವರ್ಣಚಿತ್ರದಲ್ಲೂ ಪ್ರಕೃತಿಯ ಕಪ್ಪುಬಿಳುಪಿನ ಮೆರೆದಾಟ....

ಬುಧವಾರ, ಜುಲೈ 11, 2012

ಪಂಚಲಿಂಗೇಶ್ವರ ದೇವಾಲಯ - ಹೂಲಿ


ಪಂಚಲಿಂಗೇಶ್ವರ ದೇವಾಲಯ ಹೂಲಿಯ ಪ್ರಮುಖ ದೇವಾಲಯ. ಪ್ರಾಚ್ಯ ವಸ್ತು ಇಲಾಖೆ ಈ ದೇವಾಲಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದೆ. ಮೂರು ದಿಕ್ಕುಗಳಿಂದಲೂ ದ್ವಾರಗಳಿರುವ ಭವ್ಯವಾದ ಮುಖಮಂಟಪವನ್ನು ಹೊಂದಿರುವ ಈ ದೇವಾಲಯ ವಿರಳವಾಗಿ ಕಾಣಬರುವ ಪಂಚಕೂಟ ಶೈಲಿಯದ್ದಾಗಿದೆ.


ಮುಖಮಂಟಪದಲ್ಲಿ ೫೦ಕ್ಕೂ ಮಿಕ್ಕಿ ಕಂಬಗಳಿದ್ದು ಒಟ್ಟು ನಾಲ್ಕು ತರಹದ ಕಂಬಗಳಿವೆ. ಕಕ್ಷಾಸನದ ಮೇಲೆ ಒಂದು ವಿನ್ಯಾಸದ ಕಂಬಗಳಿದ್ದರೆ, ಮುಖಮಂಟಪದ ಒಳಗಡೆ ಎರಡನೇ ತರಹದ ಕಂಬಗಳಿವೆ. ಮುಖಮಂಟಪದ ನಟ್ಟ ನಡುವೆ ಚೌಕಾಕಾರದ ರಂಗದ ಮೇಲಿರುವ ನಾಲ್ಕು ಕಂಬಗಳು ಮೂರನೇ ತರಹದ ವಿನ್ಯಾಸವನ್ನು ಹೊಂದಿದ್ದರೆ, ನವರಂಗದ ದ್ವಾರದ ಸ್ವಲ್ಪ ಮೊದಲು ಇಕ್ಕೆಲಗಳಲ್ಲಿರುವ ೨ ಕಂಬಗಳು ನಾಲ್ಕನೇ ಮಾದರಿಯದ್ದಾಗಿವೆ. ಈ ನಾಲ್ಕನೇ ಮಾದರಿಯ ೨ ಕಂಬಗಳ ಮೇಲ್ಮೈಯಲ್ಲಿ ಮಾತ್ರ ಸೂಕ್ಷ್ಮ ಕೆತ್ತನೆಗಳನ್ನು ಮಾಡಲಾಗಿದೆ.


ನವರಂಗವು ಅಷ್ಟಶಾಖಾ ದ್ವಾರವನ್ನು ಹೊಂದಿದೆ. ದ್ವಾರದ ಮೇಲ್ಭಾಗದಲ್ಲಿ ಎಂಟು ಚೌಕಾಕಾರದ ಭಾಗಗಳಲ್ಲಿ ಅದೇನನ್ನು ಕೆತ್ತಲಾಗಿದೆ ಎಂದು ತಿಳಿಯಲಿಲ್ಲ. ನವರಂಗದೊಳಗೆ ಎರಡು ಸಾಲುಗಳಲ್ಲಿ ಒಟ್ಟು ಎಂಟು ಕಂಬಗಳಿವೆ ಮತ್ತು ನಂದಿಯು ಪ್ರಮುಖ ಶಿವಲಿಂಗಕ್ಕೆ ಮುಖ ಮಾಡಿ ನವರಂಗದ ಮಧ್ಯದಲ್ಲಿ ಆಸೀನನಾಗಿದ್ದಾನೆ.


ಒಂದೇ ಉದ್ದನೆಯ ಕೋಣೆಯನ್ನು ೩ ಗರ್ಭಗುಡಿಗಳನ್ನಾಗಿ ವಿಂಗಡಿಸಲಾಗಿದೆ. ಇಲ್ಲಿ ೩ ಶಿವಲಿಂಗಗಳನ್ನು ಕಾಣಬಹುದು. ಈ ೩ ಲಿಂಗಗಳೂ ಒಂದೇ ಗರ್ಭಗುಡಿಯಲ್ಲಿದ್ದರೂ ಮೂರಕ್ಕೂ ನವರಂಗದಿಂದ ಪ್ರತ್ಯೇಕ ದ್ವಾರಗಳಿರುವ ಕಾರಣ ೩ ಪ್ರತ್ಯೇಕ ಗರ್ಭಗುಡಿಗಳಿರುವ ಭಾವನೆಯನ್ನು ಹುಟ್ಟುಹಾಕುತ್ತವೆ. ಪ್ರಮುಖ ಶಿವಲಿಂಗದ ದ್ವಾರದ ಇಕ್ಕೆಲಗಳಲ್ಲಿರುವ ದೇವಕೋಷ್ಠಗಳಲ್ಲಿ ವಿಷ್ಣು ಮತ್ತು ಗಣೇಶನ ಮೂರ್ತಿಗಳಿವೆ.


ಉಳಿದೆರಡು ಗರ್ಭಗುಡಿಗಳು ನವರಂಗದ ಎಡಕ್ಕೆ ಮತ್ತು ಬಲಕ್ಕೆ ಇದ್ದು ಎದುರುಬದುರಾಗಿವೆ ಮತ್ತು ಶಿವಲಿಂಗಗಳನ್ನು ಹೊಂದಿವೆ. ಎಲ್ಲಾ ಗರ್ಭಗುಡಿಗಳು ಉತ್ಕೃಷ್ಟ ಕೆತ್ತನೆಗಳನ್ನೊಳಗೊಂಡಿರುವ ಆರು ಶಾಖೆಗಳ ದ್ವಾರಗಳನ್ನು ಹೊಂದಿವೆ. ಲಲಾಟಗಳಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.


ಎಲ್ಲಾ ೫ ಶಿವಲಿಂಗಗಳ ನೆತ್ತಿಯ ಮೇಲೆ ಆಕರ್ಷಕ ಗೋಪುರಗಳನ್ನು ರಚಿಸಲಾಗಿದೆ. ದೇವಾಲಯದ ದೂರದ ನೋಟದಲ್ಲಿ ಈ ಐದು ಗೋಪುರಗಳು ಎದ್ದು ಕಾಣುತ್ತವೆ ಮತ್ತು ದೇವಾಲಯದ ರಚನೆಯ ಬಗ್ಗೆ ಕುತೂಹಲವನ್ನು ಮೂಡಿಸುತ್ತವೆ. ಪಂಚಲಿಂಗೇಶ್ವರ ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ. ಆಕರ್ಷಕ ಮುಖಮಂಟಪ ಮತ್ತು ಅತ್ಯಾಕರ್ಷಕವಾಗಿ ಕಾಣುವ ಐದು ಗೋಪುರಗಳೇ ಪಂಚಲಿಂಗೇಶ್ವರನ ಪ್ರಮುಖ ಆಸ್ತಿ.

ಅಂದು ಇಂದು:


ಕಪ್ಪು ಬಿಳುಪು ಚಿತ್ರಗಳನ್ನು ಇಸವಿ ೧೮೭೪ರಲ್ಲಿ ತಗೆಯಲಾಗಿವೆ. ದೇವಾಲಯ ಶಿಥಿಲಗೊಳ್ಳುತ್ತಿರುವುದನ್ನು ಕಾಣಬಹುದು.


ವರ್ಣಚಿತ್ರಗಳನ್ನು ೨೦೧೦ರಲ್ಲಿ ತೆಗೆಯಲಾಗಿದೆ. ಪ್ರಾಚ್ಯ ವಸ್ತು ಇಲಾಖೆಯ ಪ್ರಯತ್ನದಿಂದ ದೇವಾಲಯ ಇಂದು ತನ್ನ ಮೂಲ ರೂಪದಲ್ಲಿದೆ.

ಮಂಗಳವಾರ, ಜುಲೈ 10, 2012

ಕುಂಬ್ಳೆ ಹಾಗೂ ಕೆಪಿಎಲ್

ಅನಿಲ್ ಕುಂಬ್ಳೆ ಕೆ‍ಎಸ್‍ಸಿಎ ಚುಕ್ಕಾಣಿ ಹಿಡಿದು ಒಂದು ವರ್ಷಕ್ಕೂ ಹೆಚ್ಚಿನ ಸಮಯವಾಗಿದೆ. ಆದರೆ ಈ ಅವಧಿಯಲ್ಲಿ ಆಡಳಿತದಲ್ಲಿ ಅವರು ಏನು ಸುಧಾರಣೆಗಳನ್ನು ತಂದಿದ್ದಾರೆ ಎನ್ನುವುದರ ಬದಲು ಏನು ಪ್ರಮಾದಗಳನ್ನು ಮಾಡಿದ್ದಾರೆ ಎಂಬುವುದೇ ಕಣ್ಣಿಗೆ ರಾಚಿತ್ತಿರುವುದು ದುರಾದೃಷ್ಟ. ಯಾವುದೇ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದು ಸುದ್ದಿಯಾಗುವುದಿಲ್ಲ. ಸುದ್ದಿ ಆಗಬೇಕಾಗೂ ಇಲ್ಲ, ಆಗಲೂಬಾರದು. ಯಾಕೆಂದರೆ ಒಳ್ಳೆಯ ಕೆಲಸ ಮಾಡುವುದು ಆ ವ್ಯಕ್ತಿಯ ಜವಾಬ್ದಾರಿ. ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಅದು ಸುದ್ದಿಯಾಗುವ ಅವಶ್ಯಕತೆಯೂ ಇಲ್ಲ. ಆದರೆ ಜವಾಬ್ದಾರಿ ನಿರ್ವಹಣೆಯಲ್ಲಿ ಸ್ವಂತ ಅಭಿಪ್ರಾಯಗಳು ಪಾತ್ರ ವಹಿಸಿದರೆ ಆಗ ಎಡವಟ್ಟುಗಳು ಆಗುವುದು ಸಹಜ. ಆ ಎಡವಟ್ಟುಗಳು ಸುದ್ದಿಯಾಗುವುದೂ ಅಷ್ಟೇ ಸಹಜ.

ಎಷ್ಟೋ ವರ್ಷಗಳಿಂದ ಕೆ‍ಎಸ್‍ಸಿಎಯಲ್ಲಿ ಮನೆಮಾಡಿರುವ ಲಂಚಗುಳಿತನ, ಸೋಮಾರಿತನ, ಭ್ರಷ್ಟಾಚಾರ, ಪಟ್ಟಭದ್ರಹಿತಾಸಕ್ತಿತನ ಇತ್ಯಾದಿಗಳನ್ನು ಹೋಗಲಾಡಿಸುವುದು ಯಾರಿಂದಲೂ ಅಸಾಧ್ಯ. ಅದಕ್ಕೆ ಹಲವಾರು ವರ್ಷಗಳೇ ಬೇಕು. ಈ ಹಲವಾರು ವರ್ಷಗಳ ಕಾಲ ಕುಂಬ್ಳೆಯಂತಹ ಪ್ರಾಮಾಣಿಕ ವ್ಯಕ್ತಿಗಳೇ ಚುಕ್ಕಾಣಿ ಹಿಡಿದರೆ ಸಾಧ್ಯವಾಗಬಹುದಾದ ಕೆಲಸವದು. ಆದರೆ ಇದ್ದಷ್ಟು ಕಾಲ ಅಸಮಾಧಾನಗಳಿಗೆ ಅನುವು ಮಾಡಿಕೊಡದೆ ಕಾರ್ಯನಿರ್ವಹಿಸುವತ್ತ ಕುಂಬ್ಳೆ ಎಡವುತ್ತಿದ್ದಾರೆ ಎಂದು ಅನಿಸುತ್ತಿದೆ. ಎಲ್ಲರನ್ನೂ ಸಂತುಷ್ಟರನ್ನಾಗಿರಿಸಿ ಕಾರ್ಯನಿರ್ವಹಿಸುವುದು ಅಸಾಧ್ಯ. ಆದರೆ ಕುಂಬ್ಳೆಯ ಸ್ವಂತ ಅಭಿಪ್ರಾಯಗಳು ಕೆಲವು ವಿಷಯಗಳಲ್ಲಿ ತೊಂದರೆಗಳನ್ನು ಹುಟ್ಟುಹಾಕಿರುವುದು ಕಾಣಬರುತ್ತದೆ.

ನಾಲ್ಕು ವರ್ಷಗಳ ಹಿಂದೆ ಕೆಪಿಎಲ್ ಜನ್ಮತಾಳಿದಾಗ ಅಪಸ್ವರ ಹಾಡಿದ್ದು ಮೂವ್ವರು ಕ್ರಿಕೆಟಿಗರು ಮಾತ್ರ - ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ರಾಹುಲ್ ದ್ರಾವಿಡ್. ಶ್ರೀನಾಥ್ ಅದಾಗಲೇ ನಿವೃತ್ತಿ ಹೊಂದಿದ್ದು, ಉಳಿದಿಬ್ಬರು ಐಪಿಎಲ್‍ನಲ್ಲಿ ಆಡಿದವರು ಮತ್ತು ಈಗಲೂ ಐಪಿಎಲ್‍ನೊಂದಿಗೆ ಸಂಬಂಧವನ್ನು ಒಂದಲ್ಲಾ ಒಂದು ರೀತಿಯಲ್ಲಿ ಇಟ್ಟುಕೊಂಡವರು. ಶ್ರೀನಾಥ್ ಕೂಡಾ ಐಪಿಎಲ್ ವಿರುದ್ಧ ಮಾತನಾಡಿದವರಲ್ಲ ಎಂಬುವುದು ಗಮನಾರ್ಹ. ಆದರೆ ಈ ಮೂವ್ವರು ಕೆಪಿಎಲ್‍ನ್ನು ಮಾತ್ರ ಬಹಿರಂಗವಾಗಿಯೇ ವಿರೋಧಿಸಿದರು. ಯುವಕ್ರಿಕೆಟಿಗರ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಇದು ಸರಿಯಾದ ದಾರಿಯಲ್ಲ ಎನ್ನುವುದು ಇವರ ಒಟ್ಟಾರೆ ಅಭಿಪ್ರಾಯ.

ಹಾಗಿದ್ದಲ್ಲಿ ಐಪಿಎಲ್ ಯುವಕ್ರಿಕೆಟಿಗರಿಗೆ ಉತ್ತಮ ಮಾದರಿಯೇ? ಹಣ ಗಳಿಸಲು ಇರಬಹುದು. ಆದರೆ ವೈಯುಕ್ತಿಕ ಬೆಳವಣಿಗೆಗೆ? ಖಂಡಿತವಾಗಿಯೂ ಅಲ್ಲ. ಐಪಿಎಲ್ ದ್ವೇಷಿಸದ ಅನಿಲ್, ಕೆಪಿಎಲ್‍ನ್ನು ಮಾತ್ರ ಯಾಕೆ ದ್ವೇಷಿಸುತ್ತಿದ್ದಾರೆ ಎಂದೇ ತಿಳಿಯದಾಗಿದೆ. ವೈಯುಕ್ತಿಕವಾಗಿ ಅವರು ಎಂದೂ ಕೆಪಿಎಲ್‍ನ್ನು ಇಷ್ಟಪಟ್ಟವರಲ್ಲ. ಆದರೆ ಅವರು ಈಗ ಇರುವ ಹುದ್ದೆ ವೈಯುಕ್ತಿಕ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಿಲ್ಲ. ನದಿಯ ಹರಿವಿನೊಂದಿಗೆ ಹೋಗುವುದು ಎಂದೂ ಕುಂಬ್ಳೆ ಇಷ್ಟಪಟ್ಟವರಲ್ಲ. ಆದರೆ ಕೆಪಿಎಲ್ ವಿಷಯದಲ್ಲಿ ನದಿಯ ಹರಿವು ಸಹಜವಾಗಿಯೂ ರಭಸವಾಗಿಯೂ ಇರುವಾಗ ಕುಂಬ್ಳೆ ಯಾಕೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆನ್ನುವುದು ತಿಳಿದುಬರುತ್ತಿಲ್ಲ. ಐಪಿಎಲ್ ಎಂಬ ಗಂಗೆಯೊಂದಿಗೆ ಸಾಗಲು ಸಾಧ್ಯವಾಗುವಾಗ ಕೆಪಿಎಲ್ ಎಂಬ ಶರಾವತಿಯೊಂದಿಗೆ ಸಾಗಲು ಯಾಕೆ ಹಿಂದೇಟು?

ಕುಂಬ್ಳೆ ಮತ್ತು ಟೀಮ್‍ನ ನಿರಾಸಕ್ತಿಯ ಕಾರಣ ಕೆಪಿಎಲ್-೩ ನಡೆಯಲೇ ಇಲ್ಲ. ಈಗಾಗಲೇ ತಂಡದ ಮಾಲಕರ ಮತ್ತು ಕೆ‍ಎಸ್‍ಸಿಎ ನಡುವೆ ಎರಡು ಸುತ್ತಿನ ಮಾತುಕತೆಗಳು ನಡೆದಿವೆ. ಮೊದಲ ಸುತ್ತಿನಲ್ಲಿ ಬರೀ ಗೌಜಿ ಗಲಾಟೆ ಮತ್ತು ಕುಂಬ್ಳೆ ತಂಡದ ವಿರುದ್ಧ ಮಾಲಕರ ದೂರುಗಳು. ಎರಡನೇ ಸುತ್ತಿನಲ್ಲಿ ಸ್ವಲ್ಪ ಸೌಮ್ಯ ಧೋರಣೆ ತಾಳಿದ ಕೆ‍ಎಸ್‍ಸಿಎ ಸೆಪ್ಟೆಂಬರ್‌‍ನಲ್ಲಿ ಕೆಪಿಎಲ್ ನಡೆಸುವ ಮಾತುಕೊಟ್ಟಿದೆ. ಕೆ‍ಎಸ್‍ಸಿಎಯ ಈ ನಡತೆಯಿಂದ ಬೇಸತ್ತು ಈಗಾಗಲೇ ೩ ತಂಡಗಳ ಮಾಲೀಕರು ತಮ್ಮ ತಂಡಗಳನ್ನು ವಿಸರ್ಜನೆಗೊಳಿಸಿದ್ದಾರೆ.

ವಿಪರ್ಯಾಸವೆಂದರೆ ಕೆಪಿಎಲ್ ವಿರೋಧಿ ಕೆ‍ಎಸ್‍ಸಿಎ ಅಧ್ಯಕ್ಷರು, ಐಪಿಎಲ್ ತಂಡದೊಂದಿಗೆ ಫುಲ್‍ಟೈಮ್ ಜವಾಬ್ದಾರಿ ಹೊತ್ತಿದ್ದಾರೆ. ಈ ಜವಾಬ್ದಾರಿಯ ಕಾರಣ ವರ್ಷಕ್ಕೆ ೨ ತಿಂಗಳು ಕುಂಬ್ಳೆ, ಕೆ‍ಎಸ್‍ಸಿಎ ಕಚೇರಿಯತ್ತ ಸುಳಿಯುವುದೇ ಇಲ್ಲ. ಅಲ್ಲಿ ಐಪಿಎಲ್ ನಡೆಯುತ್ತಿದ್ದರೆ ಇಲ್ಲಿ ಕೆ‍ಎಸ್‍ಸಿಎ ಅಧ್ಯಕ್ಷರೇ ಇಲ್ಲ. ಹಾಗಿರುವಾಗ ಕೆ‍ಎಸ್‍ಸಿಎ ದೈನಂದಿನ ಕಾರ್ಯಗಳು ನಡೆಯುವುದಾದರೂ ಹೇಗೆ? ಅದು ಸಾಧ್ಯವಾಗುವುದು ಕುಂಬ್ಳೆಯ ಎರಡು ಸಮರ್ಥ ಸೇನಾನಿಗಳಾಗಿರುವ ಜಾವಗಲ್ ಶ್ರೀನಾಥ್ ಮತ್ತು ವಿಜಯ್ ಭಾರದ್ವಾಜ್ ಇವರುಗಳಿಂದ. ಬೆಂಗಳೂರು ಸಮೀಪದ ಆಲೂರಿನಲ್ಲಿ ಒಂದೇ ನಿವೇಶನದಲ್ಲಿ ೩ ಸುಂದರ ಹಸಿರುಹುಲ್ಲು ಮೈದಾನಗಳನ್ನು ನಿರ್ಮಿಸಿರುವ ಕೀರ್ತಿ ವಿಜಯ್ ಭಾರದ್ವಾಜ್‍ಗೆ ಸಲ್ಲುತ್ತದೆ.

ಯುವಕ್ರಿಕೆಟಿಗರ ಬೆಳವಣಿಗೆಗೆ ಕೆಪಿಎಲ್ ಸರಿಯಾದ ಮಾದರಿಯಲ್ಲ ಎನ್ನುವ ಅನಿಲ್, ಪಂದ್ಯವೊಂದರಲ್ಲಿ ಅಜೇಯ ೪೫೧ ಓಟಗಳನ್ನು ಗಳಿಸಿದ ಮಹಾರಾಷ್ಟದ ಹದಿನೇಳರ ಹರೆಯದ ವಿಜಯ್ ಝೋಲ್‍ನನ್ನು (ಹೆಸರು ಝೋಲೆ ಅಥವಾ ಝೋಳೆ ಎಂದೂ ಇರಬಹುದು) ತಾನೇ ಖುದ್ದಾಗಿ ಆರ್‌ಸಿಬಿಗೆ ಸೇರಿಸಿದ್ದು ಯಾಕೆ? ಕೆಪಿಎಲ್ ಮತ್ತು ಐಪಿಎಲ್ ನಡುವಿನ ವ್ಯತ್ಯಾಸವೇನೆಂದು ಕುಂಬ್ಳೆನೇ ವಿವರಿಸಬೇಕು. ಝೋಲ್‍ಗೆ ಐಪಿಎಲ್ ಒಳ್ಳೆಯ ಮಾದರಿಯಾದರೆ, ಮಂಗಳೂರಿನ ಹದಿನೇಳರ ಹರೆಯದ ಯುವ ಕ್ರಿಕೆಟಿಗ ಲಿನ್ ಡಿಸೋಜಾನಿಗೆ ಕೆಪಿಎಲ್ ಯಾಕೆ ಒಳ್ಳೆಯ ಮಾದರಿಯಲ್ಲ? ಕೆಪಿಎಲ್‍ನಿಂದ ತಾನೆ ಜೊನಾಥನ್ ರಾಂಗ್ಸೆನ್ ರಾಜ್ಯ ತಂಡವನ್ನು ಪ್ರತಿನಿಧಿಸಲು ಸಾದ್ಯವಾದದ್ದು? ಕೆಪಿಎಲ್‍ನಿಂದ ತಾನೆ ಮಿಥುನ್ ಬೀರಾಲ ತನ್ನ ಸ್ವಂತ ಸಾಮರ್ಥ್ಯದಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು? ಕೆಪಿಎಲ್‍ನಿಂದ ತಾನೆ ಅರುಣ್ ಕುಮಾರ್, ಆನಂದ್ ಕಟ್ಟಿ, ಡೇವಿಡ್ ಜಾನ್ಸನ್ ಮತ್ತು ಮನ್ಸೂರ್ ಅಲಿ ಖಾನ್ ’ಓಲ್ಡ್ ಈಸ್ ಗೋಲ್ಡ್’ ಎಂದು ಮತ್ತೆ ಸಾಬೀತುಪಡಿಸಿದ್ದು?

ಕೆಪಿಎಲ್ ಬಗ್ಗೆ ಅಷ್ಟೆಲ್ಲಾ ಹಗೆಯಿದ್ದರೆ ಆಯಾ ತಂಡದ ಮಾಲೀಕರಿಗೆ ಅವರು ಖರ್ಚು ಮಾಡಿದ ಹಣವನ್ನು ವಾಪಸ್ಸು ನೀಡಿ ಕೆಪಿಎಲ್ ಎಂಬ ಪಂದ್ಯಾವಳಿಯನ್ನೇ ಕೊಂದುಬಿಡಬಹುದಲ್ಲವೇ? ಮಾಲೀಕರಿಗೆ ತಮ್ಮ ತಮ್ಮ ಹಣ ವಾಪಾಸು ಸಿಕ್ಕರೆ ಅವರೂ ಖುಷ್, ’ಯುವಕರಿಗೆ ಸರಿಯಾದ ಮಾದರಿಯಲ್ಲದ’ ಪಂದ್ಯಾವಳಿ ಇನ್ನೂ ಪ್ರಸಿದ್ಧಿ ಪಡೆಯುವ ಮೊದಲೇ ಅದನ್ನು ಹೊಸಕಿಹಾಕಿದ ಸಾಧನೆ ಮಾಡಿದ ಕೆ‍ಎಸ್‍ಸಿಎಯೂ ಖುಷ್. ಹಾಗೆ ಮಾಡುವ ಧೈರ್ಯವನ್ನೂ ಕೆ‍ಎಸ್‍ಸಿಎ ತೋರುತ್ತಿಲ್ಲ.

ಸುಮಾರು ವರ್ಷಗಳ ಮೊದಲು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ದೇಶೀಯ ಕ್ರಿಕೆಟ್ ಪಂದ್ಯಗಳ ವಿವರವನ್ನು ಜೋಸೆಫ್ ಹೂವರ್ ಎಂಬ ಕ್ರೀಡಾ ಪತ್ರಕರ್ತರು ನೀಡುತ್ತಿದ್ದರು. ಅವರ ವಿವರಗಳು ಮತ್ತು ವಿಶ್ಲೇಷಣೆಗಳು ಅದ್ಭುತವಾಗಿರುತ್ತಿದ್ದವು. ಕನಿಷ್ಟ ಎರಡು ಸಲ ಓದದಿದ್ದರೆ ನನಗೆ ಸಮಾಧಾನವಿರುತ್ತಿರಲಿಲ್ಲ. ಹಿಂದೂ ಪತ್ರಿಕೆಯಲ್ಲಿ ಆರ್.ಮೋಹನ್‍ರ ಅಂತರಾಷ್ಟ್ರೀಯ ಪಂದ್ಯಗಳ ವಿವರ ಮತ್ತು ಡೆಕ್ಕನ್ ಹೆರಾಲ್ಡ್‌ನಲ್ಲಿ ಜೋಸೆಫ್ ಹೂವರ್ ಅವರ ದೇಶೀಯ ಪಂದ್ಯಗಳ ವಿವರ ಓದುವುದರಲ್ಲೇ ತುಂಬಾ ಆನಂದ ಸಿಗುತ್ತಿತ್ತು. ಜೋಸೆಫ್ ಹೂವರ್ ಈಗ ಕೆಪಿಎಲ್‍ನಲ್ಲಿ ಬೆಳಗಾವಿ ತಂಡದ ಜೊತೆಗಿದ್ದಾರೆ.

ವಿಜಯವಾಣಿ ಪತ್ರಿಕೆಯಲ್ಲಿ ಈಗ ಹೂವರ್ ’ದಿಟ್ಟ ಆಟ’ ಎಂಬ ಅಂಕಣ ಬರೆಯುತ್ತಿದ್ದಾರೆ. ಇವರ ಅಂಕಣಗಳನ್ನು ಗಮನಿಸಿದರೆ ಈಗ ಅಧಿಕಾರದಲ್ಲಿರುವ ಕೆ‍ಎಸ್‍ಸಿಎ ಪದಾಧಿಕಾರಿಗಳ ವಿರುದ್ಧ ಇವರ ಸಮರ ಈ ಅಂಕಣದ ಮೂಲಕ ಸಾಗಿದೆ. ಇಷ್ಟು ವರ್ಷಗಳ ಕಾಲ ಹೇಳಲಾಗದ್ದನ್ನು ’ದಿಟ್ಟ ಆಟ’ದ ಮೂಲಕ ಹೂವರ್ ಹೇಳಿಕೊಳ್ಳುತ್ತಿದ್ದಾರೋ ಅಥವಾ ನಿಜವಾಗಿಯೂ ’ದಿಟ್ಟ ಆಟ’ವನ್ನೇ ಆಡುತ್ತಿದ್ದಾರೋ ಅಥವಾ ಕೆಪಿಎಲ್ ಬಗ್ಗೆ ಕೀಳು ಅಭಿಪ್ರಾಯ ಮತ್ತು ಧೋರಣೆಯನ್ನು ಹೊಂದಿರುವ ಕೆ‍ಎಸ್‍ಸಿಎ ವಿರುದ್ಧ ’ದಿಟ್ಟ ಆಟ’ದ ಮೂಲಕ ಹುಳುಕುಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಿ ಸೇಡು ತೀರಿಸುತ್ತಿದ್ದಾರೋ ನನಗಂತೂ ಗೊತ್ತಾಗುತ್ತಿಲ್ಲ.

ಕೆ‍ಎಸ್‍ಸಿಎಯ ಕೆಳಹಂತದ ನೌಕರರಿಗೆ ಇರುವ ಕಡಿಮೆ ಸಂಬಳದ ಕುರಿತಾಗಿ ಮತ್ತು ಅವರಿಗೆ ಬೋನಸ್ ಸಿಗದೆ ಎಷ್ಟೋ ವರ್ಷಗಳು ಉರುಳಿರುವುದರ ಬಗ್ಗೆಯಿಂದ ಶುರುವಾಗಿ ಅಶೋಕಾನಂದ್ ಆಯ್ಕೆ ಸಮಿತಿಯ ಸದಸ್ಯರಾಗಿ ಅರ್ಧ ಶತಕ ಸಾಧಿಸಿದ್ದರ ತನಕ ಹೂವರ್ ದಿಟ್ಟ ಆಟ ಸಾಗಿದೆ. ಈ ಎರಡು ಲೇಖನಗಳ ನಡುವೆ ಇನ್ನೂ ಒಂದೆರಡು ಲೇಖನಗಳೂ ಬಂದಿದ್ದು ಈಗ ನೆನಪಾಗುತ್ತಿಲ್ಲ. ಆದರೆ ಒಂದಂತೂ ನಿಜ. ಹಲವಾರು ವರ್ಷಗಳಿಂದ ಕೆ‍ಎಸ್‍ಸಿಎ ಬಗ್ಗೆ ನನ್ನನ್ನು ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ಹೂವರ್ ’ದಿಟ್ಟ ಆಟ’ದ ಮೂಲಕ ಉತ್ತರ ದೊರಕಿತು.

ತೂಮಕೂರಿನ ಪಾಲ್ ರಾಮಚಂದ್ರರಾವ್ ಅಶೋಕಾನಂದ್, ಕರ್ನಾಟಕ (ಆಗ ಮೈಸೂರು) ಅಲ್ಲದೆ ಹೈದರಾಬಾದ್ ಮತ್ತು ತಮಿಳುನಾಡು (ಆಗ ಮದ್ರಾಸ್) ತಂಡವನ್ನೂ ಪ್ರತಿನಿಧಿಸಿದವರು. ೧೯೫೭ರಿಂದ ಆರಂಭಿಸಿ ೧೯೭೨ರವರೆಗೆ ದೇಶೀಯ ಪಂದ್ಯಾವಳಿಗಳಲ್ಲಿ ಆಡಿದ್ದಾರೆ. ಕರ್ನಾಟಕದ ಪರವಾಗಿ ಆರಂಭಿಕ ಆಟಗಾರನಾಗಿ ಆಡಿದ್ದಾರೆ. ಆಯ್ಕೆಗಾರನಾಗಿ ಯಾವುದೇ ತಾರತಮ್ಯ ಇವರು ಮಾಡದೇ ಇದ್ದರೂ, ಇವರು ಯಾಕೆ ಯಾವಾಗಲೂ ಆಯ್ಕೆ ಸಮಿತಿಯಲ್ಲಿರುತ್ತಾರೆ ಎಂಬ ಪ್ರಶ್ನೆ ಕಳೆದ ಹಲವಾರು ವರ್ಷಗಳಿಂದ ನನ್ನನ್ನು ಕಾಡುತ್ತಿತ್ತು. ಆಯ್ಕೆ ಸಮಿತಿಯ ಸದಸ್ಯ ಎಂಬ ಕಾರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಅಂತರಾಷ್ಟ್ರೀಯ, ದೇಶೀಯ ಮತ್ತು ಐಪಿಎಲ್ ಪಂದ್ಯಗಳ ನಂತರ ನಡೆಯುವ ಬಹುಮಾನ ವಿತರಣೆ ಸಂದರ್ಭದಲ್ಲೂ ಸೂಟುಬೂಟುಧಾರಿಯಾಗಿ ಅಶೋಕಾನಂದ್ ಹಾಜರಿರುತ್ತಿದ್ದರು. ಆದರೆ ಒಂದು ಬಾರಿಯೂ ತಪ್ಪಿಯೂ ಆಯ್ಕೆ ಸಮಿತಿಯ ಉಳಿದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದುದು ನಾನಂತೂ ಗಮನಿಸಿಲ್ಲ. ಇಷ್ಟೇ ಅಲ್ಲದೆ ಆಯ್ಕೆ ಸಮಿತಿಯ ಉಳಿದ ಸದಸ್ಯರು ಬದಲಾದರೂ ಅಶೋಕಾನಂದ್ ಬದಲಾಗುತ್ತಿರಲಿಲ್ಲ! ಅವರು ಒಂಥರಾ ’ಅಜರಾಮರ ಆಯ್ಕೆಗಾರ’. ಇದಕ್ಕೆ ಕಾರಣ ಅವರಲ್ಲಿರುವ ಅಪಾರ ವೋಟ್ ಬ್ಯಾಂಕ್ ಎನ್ನುವುದು ಹೂವರ್ ಅಂಕಣದ ಮೂಲಕವೇ ತಿಳಿದುಬಂತು. ಕುಂಬ್ಳೆ ಮತ್ತು ತಂಡ ಕೂಡಾ ವೋಟುಗಳಿಗಾಗಿ ಅಶೋಕಾನಂದ್ ಅವರನ್ನು ಆಯ್ಕೆ ಸಮಿತಿಗೆ ನೇಮಿಸಿದ್ದು ದು:ಖದ ವಿಷಯ.

ಹೂವರ್ ಕೇಳುವ ಪ್ರಶ್ನೆಯೇನೆಂದರೆ ಆಯ್ಕೆ ಸಮಿತಿಯನ್ನು ಬೆಂಗಳೂರು ಲೀಗಿನ ಪಂದ್ಯಗಳು ಆರಂಭವಾಗುವ ಮೊದಲೇ ನೇಮಿಸಬೇಕಲ್ಲವೇ ಎಂದು. ಆದರೆ ಕುಂಬ್ಳೆ ಮತ್ತು ಟೀಮ್, ಆಯ್ಕೆಗಾರರು ಯಾರು ಎನ್ನುವುದನ್ನು ಲೀಗಿನ ಕೇವಲ ಎರಡು ಪಂದ್ಯಗಳು ಮಾತ್ರ ಉಳಿದಿರುವಾಗ ಅಂತಿಮಗೊಳಿಸಿರುವುದು ಏನನ್ನು ಸೂಚಿಸುತ್ತದೆ? ಲೀಗ್ ಪಂದ್ಯಗಳ ಸರಾಸರಿಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಆಟಗಾರರ ಅರ್ಹತೆಯನ್ನು ಅಳೆಯಲಾಗುತ್ತದೆ ಎನ್ನುವುದು ಇದರ ಅರ್ಥ. ರನ್ನು/ವಿಕೆಟ್ ಗಳಿಸಿದ ಸನ್ನಿವೇಶ, ರನ್ನು/ವಿಕೆಟ್ ಗಳಿಸಿದ ರೀತಿ, ಯಾವ ಪಿಚ್‍ನಲ್ಲಿ ಆಡಿದ್ದು, ಬಲಿಷ್ಟ ತಂಡಗಳ ವಿರುದ್ಧ ಗಳಿಸಿದ ರನ್ನು/ವಿಕೆಟ್ ಎಷ್ಟು ಎಂಬಿತ್ಯಾದಿ ಪ್ರಮುಖ ಮಾನದಂಡನೆಗಳಿಲ್ಲದೆ ರಾಜ್ಯ ತಂಡದ ಆಯ್ಕೆ ಮಾಡಲಾಗುತ್ತದೆ. ಚುಕ್ಕಾಣಿ ಹಿಡಿದವರು ಬದಲಾದರೂ ’ಸಿಸ್ಟಮ್’ ಬದಲಾಗಿಲ್ಲ ಎನ್ನುವುದೇ ಖೇದಕರ.

ತಂಡದ ಆಯ್ಕೆಯ ವಿಷಯ ಬಂದಾಗ ಸ್ಟುವರ್ಟ್ ಬಿನ್ನಿಯ ಬಗ್ಗೆ ಬರೆಯದಿದ್ದರೆ ಹೇಗೆ? ೨೦೦೩ರಲ್ಲಿ ತನ್ನ ೧೯ನೇ ವಯಸ್ಸಿನಲ್ಲೇ ರಾಜ್ಯಕ್ಕೆ ಆಡುವ ಭಾಗ್ಯ ಈತನದ್ದು. ದೌರ್ಭಾಗ್ಯ ಕರ್ನಾಟಕದ್ದು. ಬರೋಬ್ಬರಿ ಎಂಟು ಋತುಗಳಲ್ಲಿ ಬೇಜವಾಬ್ದಾರಿ ಆಟ ಪ್ರದರ್ಶಿಸಿದರೂ ಮತ್ತೆ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲನಾಗಿದ್ದು ಒಂದು ದೊಡ್ಡ ’ಕೇಸ್ ಸ್ಟಡಿ’ ಆಗಬಹುದೇನೋ! ೨೦೧೦ರ ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ರಣಜಿ ಫೈನಲ್ ಪಂದ್ಯ ನೆನಪಿದೆ ತಾನೆ? ಆ ಪಂದ್ಯಕ್ಕೆ ಬಾಲಚಂದ್ರ ಅಖಿಲ್ ಬದಲು ಸ್ಟುವರ್ಟ್ ಬಿನ್ನಿಯನ್ನು ಆಡಿಸಿದ್ದು ’ದೊಡ್ಡ ವಿಷಯ’ವಾಗಿತ್ತು. ಆದರೂ ಜವಾಬ್ದಾರಿ ತೋರದ ಸ್ಟುವರ್ಟ್ ಪಂದ್ಯದ ಎಲ್ಲಾ ದಿನ ತಡರಾತ್ರಿ ತನಕ ಮೈಸೂರು ಸ್ಪೋರ್ಟ್ಸ್ ಕ್ಲಬ್‍ನಲ್ಲಿ ಗುಂಡು ಏರಿಸುತ್ತಾ ಪಾರ್ಟಿ ಮಾಡಿದ್ದು ಎಲ್ಲೂ ಸುದ್ದಿಯಾಗದಂತೆ ನೋಡಿಕೊಳ್ಳಲಾಯಿತು. ಈಗ ಒಮ್ಮೆಲೇ ಜ್ಞಾನೋದಯವಾದಂತೆ ಉತ್ತಮ ನಿರ್ವಹಣೆ ತೋರಿದ ಹಿಂದಿನ ರಹಸ್ಯವೇನು? ಕಳೆದ ಎಂಟು ಋತುಗಳಲ್ಲಿ ಆದಂತೆ ಇನ್ನು ಮುಂದೆ ಅನಾಯಾಸವಾಗಿ ಆಯ್ಕೆಯಾಗುವುದು ಅಸಾಧ್ಯವಾದ ಮಾತು ಎಂಬ ಕಿವಿಮಾತು ಕುಂಬ್ಳೆ ತಂಡದಿಂದ ರೋಜರ್‌ಗೆ ಹೋಗಿರುವ ಸಾಧ್ಯತೆಯಿದೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಅದೆಷ್ಟು ಪ್ರತಿಭಾವಂತ ಆಟಗಾರರಿಗೆ ಈ ಕಾರಣದಿಂದ ಅವಕಾಶ ತಪ್ಪಿರಬಹುದು? ಸ್ಟುವರ್ಟ್‍ನನ್ನು ದಾರಿಗೆ ತಂದದಕ್ಕಾದರೂ ಕುಂಬ್ಳೆಗೆ ಧನ್ಯವಾದ ಹೇಳಬಹುದೇನೋ.

ಐಪಿಎಲ್ ಪಂದ್ಯದ ಸಮಯದಲ್ಲಿ ಟಿಕೇಟು ಹಂಚುವ ವಿಷಯದಲ್ಲಿ ಆದ ಗೊಂದಲ, ಕಸ ವಿಲೇವಾರಿ ಮಾಡದ ಬೆಂಗಳೂರು ಮಹಾನಗರಪಾಲಿಕೆಯ ಸೇಡಿನ ವರ್ತನೆ, ವೆಂಕಟೇಶ್ ಪ್ರಸಾದ್ ಪೋಲೀಸ್ ಅಧಿಕಾರಿಯೊಡನೆ ಉದ್ಧಟತನದಿಂದ ವರ್ತಿಸಿದ ಘಟನೆ, ತನ್ನ ಸ್ವಂತ ಸಾಮರ್ಥ್ಯದಿಂದ ರಾಷ್ಟ್ರ ತಂಡಕ್ಕೆ ವಿನಯ್ ಕುಮಾರ್ ಆಯ್ಕೆಯಾದರೂ ಅಲ್ಲಿ ಅನಿಲ್ ಕೈವಾಡ ಇರುವ ಶಂಕೆ, ಇವನ್ನೆಲ್ಲಾ ಸರಿಯಾದ ’ಪಬ್ಲಿಕ್ ರಿಲೇಷನ್ಸ್’ ಇದ್ದರೆ ಅಲ್ಲೇ ಮ್ಯಾನೇಜ್ ಮಾಡಿಕೊಳ್ಳಬಹುದಾದ ವಿಷಯಗಳಾಗಿದ್ದವು.

ಎಷ್ಟೇ ಸ್ವಾಭಿಮಾನಿಯಾದ, ಪ್ರಾಮಾಣಿಕವಾದ ಹಾಗೂ ಸಮರ್ಥನಾದ ವ್ಯಕ್ತಿ ಬಂದರೂ ಕೆ‍ಎಸ್‍ಸಿಎಯಲ್ಲಿ ಕೆಲವೊಂದು ವಿಷಯಗಳಲ್ಲಿ ಏನೂ ಬದಲಾವಣೆ ಆಗದು ಎಂದೆನಿಸುತ್ತಿದೆ.

ಅಂದ ಹಾಗೆ ಕೆಲವು ಪ್ರತಿಭಾವಂತ ಆಟಗಾರರು ರಾಜ್ಯ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟಕರ ಎಂದು ಮನಗಂಡು ಬೇರೆ ರಾಜ್ಯಗಳಿಗೆ ಆಡುವ ಪರಿಪಾಠ ಈಗಲೂ ಮುಂದುವರಿದಿದೆ. ಹುಬ್ಬಳ್ಳಿಯ ೨೩ರ ಹರೆಯದ ನಿತಿನ್ ಬಿಲ್ಲೆ ಈಗ ರೈಲ್ವೇಸ್ ಪರವಾಗಿ ಆಡುತ್ತ ತನ್ನ ಚೊಚ್ಚಲ ಋತುವಿನಲ್ಲೇ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನ ೨೦ರ ಹರೆಯದ ಯುವ ಆರಂಭಿಕ ಬ್ಯಾಟ್ಸ್‌ಮನ್ ವಿ.ಚೆಲುವರಾಜ್ ಕೂಡಾ ಕಳೆದೆರಡು ಋತುಗಳಿಂದ ರೈಲ್ವೇಸ್ ಪರವಾಗಿ ಆಡುತ್ತಾ ಸಾಧಾರಣ ಪ್ರದರ್ಶನ ತೋರಿದ್ದಾರೆ. ಹಾಗೇನೆ ’ಎರಡನೇ ರಾಹುಲ್ ದ್ರಾವಿಡ್’ ಎಂದೇ ಬಿಂಬಿಸಲಾಗಿದ್ದ ಬೆಳಗಾವಿಯ ದೀಪಕ್ ಚೌಗುಲೆ ರಾಜ್ಯ ತಂಡದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದೆ ತಂಡದಿಂದ ಹೊರಬಿದ್ದ ಬಳಿಕ ಕಳೆದೆರಡು ಋತುಗಳಿಂದ ಝಾರ್‌ಖಂಡ್ ಪರವಾಗಿ ಆಡುತ್ತಿದ್ದಾರೆ. ಮೊದಲ ಋತುವಿನಲ್ಲಿ ಆಡಿಸಲಾದ ಕೆಲವು ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದರೆ, ಎರಡನೇ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಭಾನುವಾರ, ಜುಲೈ 08, 2012

ಈಶ್ವರ ದೇವಾಲಯ - ಹಂಸಭಾವಿ


ಹಂಸಭಾವಿ ಮೂಲಕ ಮುಂದಿನ ಊರಿಗೆ ಹೋಗಬೇಕಾಗಿತ್ತು. ನಾನು ತೊಡೆಯ ಮೇಲೆ ನಕಾಶೆ ಹರಡಿ ಅದರಲ್ಲಿ ಮಗ್ನನಾಗಿದ್ದೆ. ನನ್ನ ಚಾಲಕ ಟ್ಯಾಕ್ಸಿ ನಿಲ್ಲಿಸಿದ. ’ಏನಾಯ್ತು’ ಎಂದು ಕೇಳಿದರೆ, ’ನೋಡಿ, ಹಳೇ ದೇವಾಲಯ’ ಎಂದು ರಸ್ತೆಯ ಮತ್ತೊಂದು ಮಗ್ಗುಲಲ್ಲಿ ಮರದ ನೆರಳಿನಲ್ಲಿರುವ ಈಶ್ವರ ದೇವಾಲಯದೆಡೆ ಕೈತೋರಿಸಿದರು. ಹಂಸಭಾವಿಯಲ್ಲಿ ಹಳೇ ದೇವಾಲಯವಿದ್ದ ಮಾಹಿತಿಯೇ ನನ್ನಲ್ಲಿರಲಿಲ್ಲ. ಅನಿರೀಕ್ಷಿತವಾಗಿ ಇನ್ನೊಂದು ದೇವಾಲಯವನ್ನು ನೋಡಿದಂತಾಯಿತು.


ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಲಿಲ್ಲ. ಇಸವಿ ೧೨೦೮ರ ವೀರಗಲ್ಲೊಂದನ್ನು ದೇವಾಲಯದ ಮುಂಭಾಗದಲ್ಲಿ ಕಾಣಬಹುದು. ದೊರೆತಿರುವ ಶಾಸನವೊಂದನ್ನೂ ಅಲ್ಲಿರಿಸಲಾಗಿದೆ. ಕೆರೆಯ ತಟದಲ್ಲಿರುವ ದೇವಾಲಯದ ಮೇಲೆಲ್ಲಾ ಹುಲ್ಲು ಬೆಳೆದಿದೆ.


ದೇವಾಲಯವು ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ಮೊದಲು ಮುಖಮಂಟಪ ಇದ್ದಲ್ಲಿ ಈಗ ನಾಲ್ಕು ಕಂಬಗಳನ್ನು ಛಾವಣಿಗೆ ಆಸರೆಯಾಗಿ ನೀಡಲಾಗಿದೆ.


ದೇವಾಲಯವನ್ನು ಪೂರ್ವದಿಂದ ಮತ್ತು ದಕ್ಷಿಣದಿಂದ ಪ್ರವೇಶಿಸಬಹುದು. ದಕ್ಷಿಣದ ದ್ವಾರ ನೇರವಾಗಿ ನವರಂಗಕ್ಕೇ ತೆರೆದುಕೊಳ್ಳುತ್ತದೆ. ಪೂರ್ವದಲ್ಲಿ ಮುಖಮಂಟಪ ಕಣ್ಮರೆಯಾಗಿರುವುದರಿಂದ, ಮುಖಮಂಟಪದಿಂದ ನವರಂಗಕ್ಕೆ ತೆರೆದುಕೊಳ್ಳುತ್ತಿದ್ದ ದ್ವಾರವೇ ಈಗ ದೇವಾಲಯದ ಪೂರ್ವದ ದ್ವಾರವಾಗಿದೆ.


ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳಿವೆ. ಇಲ್ಲಿರುವ ಮೂರು ದೇವಕೋಷ್ಠಗಳಲ್ಲಿ ಗಣೇಶ, ಮಹಿಷಮರ್ದಿನಿ ಮತ್ತು ನನ್ನಿಂದ ಗುರುತುಹಿಡಿಯಲಾಗದ ವಿಗ್ರಹವೊಂದನ್ನು ಇರಿಸಲಾಗಿದೆ. ದೇವಾಲಯದ ದಕ್ಷಿಣದ ದ್ವಾರದ ಇಕ್ಕೆಲಗಳಲ್ಲಿ ಕಕ್ಷಾಸನವಿದೆ. ಈ ಕಕ್ಷಾಸನಕ್ಕೆ ತಾಗಿಕೊಂಡೇ ಸಪ್ತಮಾತೃಕೆಯ ವಿಗ್ರಹವನ್ನು ಇಡಲಾಗಿದೆ.


ಅಂತರಾಳದ ಮತ್ತು ಗರ್ಭಗುಡಿಯ ದ್ವಾರದ ಶಾಖೆಗಳಲ್ಲಿ ಯಾವುದೇ ಅಲಂಕಾರಗಳಿಲ್ಲ. ಎರಡೂ ದ್ವಾರಗಳ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಕೆತ್ತಲಾಗಿದೆ. ಅಂತರಾಳದ ದ್ವಾರಕ್ಕೆ ಜಾಲಂಧ್ರಗಳ ರಚನೆಯಿದೆ.


ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಮುಖಮಾಡಿ ನಂದಿ ಅಂತರಾಳದಲ್ಲಿ ಆಸೀನನಾಗಿದ್ದಾನೆ. ಅಂತರಾಳದ ದ್ವಾರದ ತಳಭಾಗದಲ್ಲಿ ಇಬ್ಬದಿಗಳಲ್ಲಿ ತ್ರಿಶೂಲ ಮತ್ತು ಢಮರುಗಧಾರಿಯಾಗಿರುವ ಶಿವನ ಮಾನವರೂಪವನ್ನು ಕೆತ್ತಲಾಗಿದೆ. ಶಿವನ ಬದಿಯಲ್ಲಿ ಚಾಮರಧಾರಿಣಿಯೊಬ್ಬಳಿದ್ದಾಳೆ (ಪಾರ್ವತಿ ಇರಬಹುದು).


ಮುಖ್ಯರಸ್ತೆಯ ಬದಿಯಲ್ಲೇ ಇರುವ ದೇವಾಲಯ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ.

ಭಾನುವಾರ, ಜುಲೈ 01, 2012

ಪುರದೇಶ್ವರ ದೇವಾಲಯ - ಸವದತ್ತಿ


ಸವದತ್ತಿಯ ಮುಖ್ಯ ರಸ್ತೆಯಲ್ಲಿ ಸಿಕ್ಕ ಮಧ್ಯ ವಯಸ್ಕರೊಬ್ಬರಲ್ಲಿ ಪುರದೇಶ್ವರ ದೇವಾಲಯದ ದಾರಿ ಕೇಳಿದೆ. ಅವರು ದಾರಿ ತಿಳಿಸಿ, ’ನಾ ಹೇಳ್ದಂಗ ಹೋಗ್ರಿ, ಎರಡೇ ನಿಮಿಷ್ದೊಳಗ ನೀವ್ ಗುಡಿ ಮುಂದ...’ ಎಂದರು. ಅವರು ನೀಡಿದ ಕರಾರುವಕ್ಕಾದ ಮಾಹಿತಿಯ ಪ್ರಕಾರ ಸಂದಿಗೊಂದಿಗಳಲ್ಲಿ ಬೈಕು ಓಡಿಸಿ ಎರಡೇ ನಿಮಿಷಗಳಲ್ಲಿ ಪುರದೇಶ್ವರ ದೇವಾಲಯವಿರಬೇಕಾದ ಸ್ಥಳ (ಮೂರು ಓಣಿಗಳು ಸಂಧಿಸುವಲ್ಲಿ) ತಲುಪಿದೆ. ಆದರೆ ದೇವಾಲಯ ಕಾಣಲಿಲ್ಲ. ಅವರು ನಾನು ದೇವಾಲಯದ ಮುಂದೆ ಇರುತ್ತೇನೆ ಎಂದಿದ್ದರೇ ಹೊರತು, ದೇವಾಲಯ ನನ್ನ ಮುಂದೆ ಇರುತ್ತದೆ ಎಂದಿರಲಿಲ್ಲ!


ದೇವಾಲಯ ನನ್ನ ಹಿಂದೆ ಇರುವುದನ್ನು ನಾನು ಗಮನಿಸಿರಲಿಲ್ಲ. ಅಲ್ಲಿ ಹರಟೆ ಹೊಡೆಯುತ್ತಿದ್ದ ಹೆಂಗಸರಲ್ಲಿ ದೇವಾಲಯದ ಬಗ್ಗೆ ಕೇಳಿದಾಗ ಕಕ್ಕಾಬಿಕ್ಕಿಯಾದ ಅವರು, ’ಏ... ಇಲ್ಲೇ ಐತಲ್ರೀ, ಯಾರ್ ಬೇಕು ನಿಮಗ....’ ಎಂದು ಕೇಳಿದರು. ಮುಜುಗರ ಉಂಟಾಗಿ, ’ಪುರದೇಶ್ವರನೇ ಬೇಕು..’ ಎಂದೆ. ಅವರು ನಗುತ್ತಾ ’ಒಳಗ್ ಹೋಗ್ರಿ, ಗುಡಿಯೊಳಗ ಕುಂತಾನ...’ ಎಂದರು!
 

ದೇವಾಲಯ ಈಗಿರುವುದು ಖಾಸಗಿ ಸ್ಥಳವೊಂದರಲ್ಲಿ. ಅವರು ಸಹಜವಾಗಿಯೇ ತಮ್ಮ ಸ್ಥಳಕ್ಕೆ ಪ್ರಾಂಗಣ ರಚಿಸಿ ತೆಂಗು, ಬಾಳೆ ಇತ್ಯಾದಿ ಬೆಳೆದಿದ್ದಾರೆ. ಪುರದೇಶ್ವರನ ಮುಂಭಾಗದಲ್ಲಿ ವಿಶಾಲ ಸ್ಥಳಾವಕಾಶ ಇದ್ದರೂ ಉಳಿದ ಮೂರು ಪಾರ್ಶ್ವಗಳಲ್ಲಿ ಈ ಸ್ಥಳದ ಮಾಲೀಕರು ಬೆಳೆಸಿರುವ ಗಿಡಮರಗಳಿವೆ. ಬಲಭಾಗದಲ್ಲಿರುವ ಮನೆಯಲ್ಲಿ ಈ ಸ್ಥಳದ ಯುವ ಮಾಲೀಕ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾನೆ. ದೇವಾಲಯದ ದೈನಂದಿನ ಪೂಜೆ ಮತ್ತಿತರ ಕೆಲಸಗಳ ಜವಾಬ್ದಾರಿಯನ್ನು ಈ ಕುಟುಂಬವೇ ವಹಿಸಿಕೊಂಡಿದೆ.
 

ಖಾಸಗಿ ಜಾಗ ಎಂಬ ಮಾಹಿತಿ ಇಲ್ಲದ ಕಾರಣ ಮನೆಯ ಬಳಿಯಿಂದಲೇ ಹಾದು ದೇವಾಲಯದ ಹಿಂಭಾಗಕ್ಕೆ ತೆರಳಿದೆ. ತಮ್ಮ ಜಾಗದೊಳಗೆ ಗೂಳಿಯಂತೆ ನುಗ್ಗಿದ ನನ್ನನ್ನು ಕಂಡು ಗಾಬರಿಗೊಂಡ ಮನೆಯ ಯುವ ಗೃಹಿಣಿ ಹೊಸ್ತಿಲು ದಾಟದೆ ಅಳುಕುತ್ತಾ ನನ್ನ ಚಟುವಟಿಕೆಯನ್ನು ಗಮನಿಸತೊಡಗಿದಳು. ’ಏನಾದ್ರೂ ಆಗ್ಬೇಕಿತ್ತಾ...?’ ಎಂದು ನಾನು ಕೇಳಿದಾಗ ಗಲಿಬಿಲಿಗೊಂಡ ಆಕೆ, ’ಇಲ್ರೀ ಇಲ್ರೀ ಏನಿಲ್ರೀ ಸರ..., ಗುಡಿ ನೋಡಾಕ ಬಂದ್ರೇನೂ...’ ಎಂದು ಕೇಳಿ ಉಗಳು ನುಂಗಿದಳು. ಆಕೆ ಇನ್ನಷ್ಟು ಹೆದರಿದ್ದನ್ನು ಕಂಡು ’ಹೌದು’ ಎನ್ನುತ್ತಾ ದೇವಾಲಯದ ಹಿಂಭಾಗಕ್ಕೆ ತೆರಳಿದೆ. ದೇವಾಲಯ ಖಾಸಗಿ ಜಾಗದಲ್ಲಿದೆ ಎಂದು ಅರಿವಾದ ಬಳಿಕ, ಅವರದೇ ಜಾಗದಲ್ಲಿ ನಿಂತು ಅವರಿಗೆ ’ಏನಾಗ್ಬೇಕಾಗಿತ್ತು?’ ಎಂದು ಕೇಳಿದ್ದು ನಗು ಬರಿಸಿತು.


ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ತ್ರಿಕೂಟ ದೇವಾಲಯವಿದು. ದೇವಾಲಯದ ಕಲ್ಲಿನ ಹೊರಗೋಡೆ ಅಲ್ಪಸ್ವಲ್ಪ ಮಾತ್ರ ಉಳಿದುಕೊಂಡಿದೆ. ಅಳಿದುಳಿದಿರುವ ಭಿತ್ತಿಚಿತ್ರಗಳನ್ನು ಕಂಡರೆ ದೇವಾಲಯ ತುಂಬಾ ಇಂತಹದೇ ಕೆತ್ತನೆಗಳು ತುಂಬಿದ್ದವು ಎಂದು ತಿಳಿದುಬರುತ್ತದೆ. ಮಕರತೋರಣಗಳು, ದೇವಕೋಷ್ಠಗಳು, ಸಣ್ಣ ಗೋಪುರಗಳು, ಸ್ತಂಭಗಳು ಮತ್ತು ಅಲಂಕಾರಿಕಾ ಕೆತ್ತನೆಗಳನ್ನು ದೇವಾಲಯದ ಹೊರಗೋಡೆಯಲ್ಲಿ ಕಾಣಬಹುದು. ಪ್ರಮುಖ ಗರ್ಭಗುಡಿಯ ಶಿಖರದ ಅವಶೇಷಗಳನ್ನು ಮಾತ್ರ ಈಗ ಕಾಣಬಹುದಾಗಿದೆ.


ಅಷ್ಟರಲ್ಲಿ ಯಾರೋ ಬಂದಂತೆ ಭಾಸವಾಯಿತು. ಒಬ್ಬ ಯುವಕ ನಿಧಾನವಾಗಿ ನನ್ನ ಬಳಿಗೆ ಬಂದು ಪರಿಚಯ ಮಾಡಿಕೊಂಡ. ಈತನೇ ಜಾಗದ ಮಾಲೀಕ. ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ದೇವಾಲಯವನ್ನು ನೋಡಿ ಹೋಗಿರುವರಾದರೂ ಯಾವುದೇ ರೀತಿಯ ಪ್ರತಿಕ್ರಿಯೆ ಅವರಿಂದ ಬಂದಿಲ್ಲ ಎಂದು ಆತ ತಿಳಿಸಿದ.


ಸುಮಾರು ಇಪ್ಪತ್ತು ಕಂಬಗಳಿರುವ ಸಂಭಾಮಂಟಪ ವಿಶಾಲವಾಗಿದ್ದು ಕೆಲವರಿಗೆ ಮಧ್ಯಾಹ್ನದ ನಿದ್ರೆ ಹೊಡೆಯುವ ತಾಣವೂ ಹೌದು. ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದ್ದು, ನಂದಿಯನ್ನೂ ಇಲ್ಲೇ ಕಾಣಬಹುದು. ನವರಂಗದಲ್ಲಿ ಎರಡು ದೇವಕೋಷ್ಠಗಳಲ್ಲಿ ಒಂದು ಖಾಲಿಯಿದ್ದು ಇನ್ನೊಂದರಲ್ಲಿ ಇರುವ ಮೂರ್ತಿ ಯಾವುದೆಂದು ನನಗೆ ತಿಳಿಯಲಿಲ್ಲ.


ಮೂರೂ ಗರ್ಭಗುಡಿಗಳಲ್ಲಿ ಶಿವಲಿಂಗವಿದ್ದು ಪ್ರಮುಖ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ಮಾತ್ರ ನಿತ್ಯಪೂಜೆ ಸಲ್ಲಿಸಲಾಗುತ್ತದೆ. ಎಲ್ಲಾ ಗರ್ಭಗುಡಿಗಳು ಪ್ರತ್ಯೇಕ ಅಂತರಾಳವನ್ನು ಹೊಂದಿದ್ದು, ಇವುಗಳ ದ್ವಾರಗಳು ಜಾಲಂಧ್ರವನ್ನು ಹೊಂದಿವೆ. ದೇವಾಲಯ ನೋಡಿಕೊಳ್ಳಲು ಒಂದು ಸಮಿತಿ ಅಥವಾ ಒಂದು ಕೂಟ ಯಾವುದೂ ಅಸ್ತಿತ್ವದಲ್ಲಿಲ್ಲ. ಊರಿನ ಭಕ್ತರನ್ನು ಹೊರತುಪಡಿಸಿದರೆ ಬೇರೆ ಯಾರೂ ಇಲ್ಲಿಗೆ ಬರುವುದಿಲ್ಲ. ಪ್ರವಾಸಿಗರಂತೂ ಇತ್ತ ಸುಳಿಯುವುದೇ ಇಲ್ಲ. ಖಾಸಗಿ ಜಾಗದಲ್ಲಿದೆ ಎಂಬ ಮಾತ್ರಕ್ಕೆ ದೇವಾಲಯ ಇಷ್ಟಾದರೂ ಉಳಿದುಕೊಂಡಿದೆ.


ದೇವಾಲಯದ ಒಳಗೆಲ್ಲಾ ಬಣ್ಣ ಹಚ್ಚಿದವರು ಆ ಯುವಕನ ಅಜ್ಜ. ಆಗ ಈ ಸ್ಥಳದ ಮಾಲೀಕರಾಗಿದ್ದ ಅವರು ದೇವಾಲಯ ಅಂದವಾಗಿ ಕಾಣಬಹುದು ಎಂದು ಭಾವಿಸಿ ಬಣ್ಣ ಹಚ್ಚಿ ಅಂದವನ್ನೆಲ್ಲಾ ಹಾಳುಗೆಡವಿದರು ಎಂದು ಈ ಯುವಕನ ಅಭಿಪ್ರಾಯ. ಈ ಯುವಕನ ಪೂರ್ವಜರೇ ಶಿಥಿಲಗೊಂಡು ಪಾಳುಬಿದ್ದಿದ್ದ ದೇವಾಲಯವನ್ನು ದುರಸ್ತಿಪಡಿಸಿದ್ದಾರೆ.


ನಂತರ ಸವದತ್ತಿ ಪೇಟೆಯಲ್ಲಿ ಹಿರಿಯರೊಬ್ಬರ ಭೇಟಿಯಾಗಿ ಅವರೊಡನೆ ಪುರದೇಶ್ವರ ದೇವಾಲಯದ ಕುರಿತು ಮಾತನಾಡಬೇಕಾದರೆ ದೇವಾಲಯದ ಉಸ್ತುವಾರಿ ನೋಡಲು ಒಂದು ಸಮಿತಿ ಕೆಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲಿತ್ತು ಎಂಬ ವಿಷಯ ತಿಳಿದುಬಂತು. ಊರಿನವರಿಂದ ಮತ್ತು ಹೊರಗಿನ ಊರುಗಳಿಂದಲೂ ದೇವಾಲಯದ ಅಭಿವೃದ್ಧಿಗೆ ಮತ್ತು ಮರುನಿರ್ಮಾಣಕ್ಕೆಂದು ದೊಡ್ಡ ಪ್ರಮಾಣದಲ್ಲಿ ಧನಸಂಗ್ರಹ ಮಾಡಲಾಗಿತ್ತು. ಹೀಗೆ ಒಟ್ಟುಗೂಡಿದ ಹಣವೆಲ್ಲಾ ಎಲ್ಲಿ ಮಾಯವಾಯಿತೆಂದು ಇದುವರೆಗೂ ನಿಗೂಢವಾಗಿದೆ. ಸಮಿತಿ ಎಂದೋ ವಿಸರ್ಜಿತಗೊಂಡಿದ್ದು ಅದರೊಂದಿಗೆ ಸಂಗ್ರಹಗೊಂಡ ಹಣವೂ ಮಾಯವಾಯಿತು. ನನ್ನ ಪ್ರಶ್ನೆಗಳು ಹೆಚ್ಚಾಗುತ್ತಿದ್ದಂತೆ ನಾನ್ನೊಬ್ಬ ಪತ್ರಕರ್ತ ಎಂಬ ಸಂಶಯವುಂಟಾಗಿ ಹೆಚ್ಚಿನ ವಿಷಯವನ್ನು ಅವರು ಬಹಿರಂಗಪಡಿಸಲಿಲ್ಲ.


ಹಣ ಎಲ್ಲಿಹೋಯಿತೋ ಮತ್ತು ಸಮಿತಿಯ ಸದಸ್ಯರು ಎಲ್ಲಿಹೋದರೋ.. ಆದರೆ ದೇವಾಲಯದ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಪ್ರತಿ ಮಳೆಗಾಲದ ಬಳಿಕ ದುರಸ್ತಿಕಾರ್ಯ ಮಾಡಲೇಬೇಕಾಗುತ್ತದೆ ಎಂದು ಯುವ ಮಾಲೀಕನ ಅಳಲು. ದೇವಾಲಯದ ದಕ್ಷಿಣದ ಗರ್ಭಗುಡಿಯ ಛಾವಣಿ ಕುಸಿಯುತ್ತಿರುವುದನ್ನು ಆತ ನನಗೆ ತೋರಿಸಿದ. ಶೀಘ್ರ ದುರಸ್ತಿಪಡಿಸಬೇಕೆಂದು ಪ್ರಾಚ್ಯ ವಸ್ತು ಅಧಿಕಾರಿಗಳಿಗೆ ಪತ್ರ ಬರೆದಿರುವೆನೆಂದೂ, ಬೆಳಗಾವಿಗೆ ತೆರಳಿ ಅವರನ್ನು ಭೇಟಿಯೂ ಮಾಡಿರುವೆನೆಂದು ಆತ ತಿಳಿಸಿದ.


ಸವದತ್ತಿಯಲ್ಲಿರುವ ಇನ್ನೊಂದು ಪ್ರಾಚೀನ ದೇವಾಲಯವಾದ ಅಂಕೇಶ್ವರ ದೇವಾಲಯನ್ನು ಊರವರು ’ಕುಮಾರರಾಮ’ ದೇವಾಲಯವೆಂದು ಕರೆಯುತ್ತಾರೆ. ಈ ದೇವಾಲಯಕ್ಕೆ ತೆರಳುವುದೆಂದರೆ ಸವದತ್ತಿಯ ಎಲ್ಲಾ ಓಣಿಗಳ ಪರಿಚಯ ಮಾಡಿಕೊಂಡಂತೆ. ಒಂದು ಓಣಿಯಿಂದ ಇನ್ನೊಂದು ನಂತರ ಮತ್ತೊಂದು ನಂತರ ಮಗದೊಂದು ಹೀಗೆ ದಾರಿ ಕೇಳುತ್ತಾ ಕುಮಾರರಾಮನ ಸನ್ನಿಧಿ ತಲುಪಿದಾಗ, ಇದೇ ರಟ್ಟ ವಂಶದ ರಾಜರಿಂದ ಇಸವಿ ೯೭೦ ರಲ್ಲಿ ನಿರ್ಮಿತ ಅಂಕೇಶ್ವರ ದೇವಾಲಯವೇ ಎಂಬ ಸಂಶಯ ಬರಲಾರಂಭಿಸಿತು.


ದೇವಾಲಯದ ಗರ್ಭಗುಡಿಯ ಹೊರಗೋಡೆಯಲ್ಲಿ ಮಾತ್ರ ಮೂಲ ದೇವಾಲಯದ ರಚನೆಯನ್ನು ಕಾಣಬಹುದು. ಉಳಿದೆಲ್ಲೆಡೆ ಹೊಸತನ, ಆಧುನೀಕರಣ, ಬಣ್ಣ ಇತ್ಯಾದಿ. ಗರ್ಭಗುಡಿಯ ದ್ವಾರದ ಕೆತ್ತನೆಯಲ್ಲಿ ಎರಡು ವೈಶಿಷ್ಟ್ಯಗಳಿವೆ. ಮೊದಲನೇಯದಾಗಿ ಲಲಾಟದಲ್ಲಿ ಗೌತಮ ಬುದ್ಧನ ಕೆತ್ತನೆಯಿದೆ!


ಎರಡನೇಯದಾಗಿ ದ್ವಾರದ ಶಾಖೆಗಳ ತಳಭಾಗದಲ್ಲಿ ಐದು ಸ್ತ್ರೀಯರ ಕೆತ್ತೆನೆಗಳಿವೆ. ಇವಕ್ಕೆಲ್ಲಾ ಬಣ್ಣ ನೀಡಿ ಅಸಹ್ಯಗೊಳಿಸಲಾಗಿದೆ. ದ್ವಾರದ ತಳಭಾಗದಲ್ಲಿರುವ ಎಲ್ಲಾ  ಕೆತ್ತನೆಗಳು ಸ್ತ್ರೀ ರೂಪದ್ದೇ ಆಗಿರುವುದು ಅಪರೂಪ.


ಹಿಂತಿರುಗುವಾಗ ಮತ್ತೆ ಎಲ್ಲಾ ಓಣಿಗಳನ್ನು ದಾಟಿ ಸಂತೆ ನಡೆಯುತ್ತಿದ್ದ ಕೊನೆಯ ಓಣಿ ತಲುಪಿದೆ. ಹದಿನೈದು ಅಡಿ ಅಗಲದ ಓಣಿಯ ಇಕ್ಕೆಲಗಳಲ್ಲಿ ಕುಳಿತಿರುವ ಸಂತೆಯ ಮಾರಾಟಗಾರರು, ಖರೀದಿ ಮಾಡುವ ಭರಾಟೆಯಲ್ಲಿ ಗ್ರಾಹಕರು ಮತ್ತು ಆಚೀಚೆ ಓಡಾಡುವ ಜನರು. ಇವೆಲ್ಲದರೆ ನಡುವೆ ಕಸರತ್ತು ಮಾಡಿ ಬೈಕು ಚಲಾಯಿಸಿ ಇನ್ನೇನು ಮುಖ್ಯರಸ್ತೆ ಸಮೀಪಿಸುತ್ತಿದ್ದಂತೆ ’ಸಿಗ್ಲಿಲ್ಲೇನ್ರಿ ಗುಡಿ...?’ ಎಂಬ ಪ್ರಶ್ನೆ ಎಲ್ಲೋ ಬದಿಯಿಂದ ತೂರಿಬಂತು. ಹಿಂದೆ ತಿರುಗಿ ನೋಡಿದರೆ ಅದೇ ಮಹಿಳೆ! ದೇವಾಲಯಕ್ಕೆ ತೆರಳುವಾಗ ತರಕಾರಿ ಖರೀದಿಸುವುದರಲ್ಲಿ ಮಗ್ನಳಾಗಿದ್ದ ಆಕೆಯ ಬಳಿ ದಾರಿ ಕೇಳಿದ್ದೆ. ಆಕೆಯ ಖರೀದಿ ಇನ್ನೂ ನಡೆದಿತ್ತು.

ಬೈಕು ನಿಲ್ಲಿಸದೇ, ’ಏ... ಸಿಗ್ತ್ರಿ ಮೇಡಮ ಅ ಅ ಅ ಅ....’ ಎಂದೆ.
’ಮತ್ತ.... ಲಗೂನೆ ಬಂದ್ಬಿಟ್ರಲ್ಲ... ಪೂಜಿ ಕೊಟ್ಟಿಲ್ಲೇನ....’!!!!!!!!!!! ಎಂಬ ಅನಿರೀಕ್ಷಿತ ಪ್ರಶ್ನೆ ಬಂದಾಗ ನನ್ನಲ್ಲಿ ಉತ್ತರವಿರಲಿಲ್ಲ.

ಆಗಲೇ ಹೊಳೆದದ್ದು- ಹೌದಲ್ವೇ. ಭೇಟಿ ನೀಡಿದ ಪ್ರಾಚೀನ ದೇವಾಲಯಗಳಲ್ಲಿ ಒಂದು ಕಡೆಯೂ ನಾನು ಪೂಜೆ ಸಲ್ಲಿಸಿದ ನಿದರ್ಶನವಿಲ್ಲ! ನಾಚಿಕೆಗೇಡು. ಆಗಲೇ ನಾನು ಭೇಟಿ ನೀಡುವ ಇನ್ನು ಮುಂದಿನ ದೇವಾಲಯದಲ್ಲಿ ಪೂಜೆ ನೀಡುವ ಅವಕಾಶವಿದ್ದರೆ ನೀಡಬೇಕೆಂಬ ಸಂಕಲ್ಪ ಮಾಡಿಕೊಂಡೆ. ಅಮೃತಾಪುರದ ಅಮೃತೇಶ್ವರ ದೇವಾಲಯದಲ್ಲಿ ಅದು ಈಡೇರಿತು. ತದನಂತರ ಭೇಟಿ ನೀಡಿದ ದೇವಾಲಯಗಳಲ್ಲೂ ಪೂಜೆ ಸಲ್ಲಿಸುವುದನ್ನು ಹಾಗೇ ಮುಂದುವರೆಸಿಕೊಂಡು ಬಂದಿದ್ದೇನೆ.