ಗುರುವಾರ, ಸೆಪ್ಟೆಂಬರ್ 27, 2012

ವೀರಭದ್ರ ದೇವಾಲಯ - ನೇರಲಿಗೆ


ನೇರಲಿಗೆಯಲ್ಲಿ ವೀರಭದ್ರ ದೇವಾಲಯವಿರುವ ಮಾಹಿತಿಯೇನೋ ಸಿಕ್ಕಿತು. ಆದರೆ ಇದು ಪ್ರಾಚೀನ ದೇವಾಲಯವೋ ಎಂಬುವುದರ ಬಗ್ಗೆ ಮಾಹಿತಿ ದೊರಕಲಿಲ್ಲ. ಆರು ವರ್ಷಗಳ ಹಿಂದೆ ನೇರಲಿಗೆಯಿಂದ ಕೇವಲ ಒಂದು ಕಿಮಿ ದೂರದಲ್ಲಿ ಹಾದುಹೋಗಿದ್ದೆ. ಅಂದು ಊರಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಇಂದು ಮಾಹಿತಿಯಿದ್ದು ಮತ್ತೆ ಊರಿನ ಸಮೀಪದಿಂದ ಹಾದುಹೋಗುವವನಿದ್ದೆ. ನೇರಲಿಗೆಗೆ ಹೋಗಬೇಕಾದರೆ ನನ್ನ ನಿಗದಿತ ಹಾದಿಯಿಂದ ಸುಮಾರು ೨೫ ಕಿಮಿ ದೂರ ಕ್ರಮಿಸಿ ನಂತರ ಮತ್ತೆ ೧೮ ಕಿಮಿ ವಾಪಾಸು ಬಂದು ನಿಗದಿತ ದಾರಿಯನ್ನು ಸೇರಬೇಕಾಗಿತ್ತು. ಸಮಯದ ಅಭಾವ ಕಾಡುತ್ತಿದ್ದರೂ, ಮತ್ತೊಮ್ಮೆ ನೇರಲಿಗೆಯ ಸಮೀಪ ನಾನು ಬರುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಅರಿತು ವೀರಭದ್ರನನ್ನು ನೋಡೇಬಿಡೋಣವೆಂದು ನಿರ್ಧರಿಸಿದೆ. ಒಂದು ವೇಳೆ ಇದು ಪ್ರಾಚೀನ ದೇವಾಲಯವಾಗಿರದಿದ್ದಲ್ಲಿ ಅಲ್ಲಿವರೆಗೆ ಬಂದದ್ದು ವ್ಯರ್ಥವಾಗಲಿದೆ ಎಂಬ ಯೋಚನೆಯೇ ನನ್ನನ್ನು ಕಾಡುತ್ತಿತ್ತು.


ನೇರಲಿಗೆಯಲ್ಲಿ ಮಠದಂತೆ ತೋರುವ ಕಟ್ಟಡವನ್ನು ದಾಟಿ ಸ್ವಲ್ಪ ಮುಂದೆ ಮನೆಯೊಂದರಲ್ಲಿ ಕೇಳಿದರೆ ಆ ಮನೆಯವರು ಅದೇ ಕಟ್ಟಡದತ್ತ ತೋರಿಸಿ ಅದೇ ವೀರಭದ್ರ ದೇವಾಲಯವೆಂದು ಹೇಳಿದಾಗ ಭಾರಿ ನಿರಾಸೆಯಾಯಿತು. ವಿನಾಕಾರಣ ಸಮಯ ವ್ಯರ್ಥವಾಯಿತಲ್ಲ ಎಂದು ಅಲ್ಲಿವರೆಗೆ ಬರುವ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ನನ್ನನ್ನೇ ಶಪಿಸುತ್ತಾ, ಬಂದದಕ್ಕಾದರೂ ನೋಡಿಬರೋಣವೆಂದು ದೇವಾಲಯದ ಒಳಗೆ ತೆರಳಿದೆ.


ನೆಲಕ್ಕೆ ಮಾರ್ಬಲ್ ಹಾಕಿದ್ದ ಚೌಕಾಕಾರದ ಹಜಾರದಂತಹ ಕೋಣೆಯನ್ನು ದಾಟಿದ ಕೂಡಲೇ ಅಂತರಾಳ ಮತ್ತು ಅಲ್ಲಿಂದಲೇ ಗರ್ಭಗುಡಿಯಲ್ಲಿರುವ ವೀರಭದ್ರನ ದರ್ಶನ. ಗರ್ಭಗುಡಿಯ ದ್ವಾರಕ್ಕೆ ಬೆಳ್ಳಿಯ ಲೇಪನ ಮಾಡಿದಂತೆ ಬಣ್ಣ ಸಾರಲಾಗಿತ್ತು. ವಿದ್ಯುತ್ ನಾನು ಬಂದ ಸಮಯ ನೋಡಿಯೇ ಕೈಕೊಟ್ಟಿತ್ತು. ಕತ್ತಲಲ್ಲಿ ನಾಲ್ಕಾರು ಚಿತ್ರಗಳನ್ನು ತೆಗೆದು, ಸರಿಯಾಗಿ ಬಂದವೋ ಎಂದು ಪರೀಕ್ಷಿಸಬೇಕಾದರೆ ಒಂದೆರಡು ವೈಶಿಷ್ಟ್ಯಗಳು ಕಂಡುಬಂದವು.


ಒಂದೇ ದ್ವಾರದಲ್ಲಿ ಗಜಲಕ್ಷ್ಮೀಯ ಎರಡು ಕೆತ್ತನೆಗಳಿರುವುದು ಗಮನ ಸೆಳೆಯಿತು. ದ್ವಾರದ ಲಲಾಟದಲ್ಲಿ ಯಕ್ಷ ಮತ್ತು ಯಕ್ಷಿಯರಿಂದ ಸುತ್ತುವರಿದ ಗಜಲಕ್ಷ್ಮೀಯಿದೆ. ದ್ವಾರದ ಮೇಲಿರುವ ಅಡ್ಡಪಟ್ಟಿಯಲ್ಲಿ ಮಕರತೋರಣದಿಂದ ಅಲಂಕೃತ ಗಜಲಕ್ಷ್ಮೀಯ ಇನ್ನೊಂದು ಕೆತ್ತನೆಯಿದ್ದು ಇದು ಲಲಾಟದಲ್ಲಿರುವ ಗಜಲಕ್ಷ್ಮೀಗಿಂತ ದೊಡ್ಡದಿದೆ. ಎರಡು ಗಜಲಕ್ಷ್ಮೀಗಳ ನಡುವೆ ಪ್ರಾಣಿಗಳ (ಪಕ್ಷಿಗಳ?) ಸಾಲೊಂದನ್ನು ಕೆತ್ತಲಾಗಿದೆ. ಅವು ಪ್ರಾಣಿಗಳೋ ಪಕ್ಷಿಗಳೋ ಎಂದೇ ಗೊತ್ತಾಗಲಿಲ್ಲ. ಡೈನೋಸಾರ್ ತರಹ ಕಾಣುತ್ತಿದ್ದವು. ಗರ್ಭಗುಡಿಯ ದ್ವಾರಕ್ಕೆ ಜಾಲಂಧ್ರಗಳಿದ್ದು ದ್ವಾರಪಾಲಕರೂ ಇದ್ದಾರೆ.


ಅಂತರಾಳದಲ್ಲಿ ವೀರಭದ್ರನತ್ತ ಮುಖ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡುವ ಭಂಗಿಯಲ್ಲಿ ವ್ಯಕ್ತಿಯೊಬ್ಬನ ಉಬ್ಬುಶಿಲ್ಪವಿದೆ. ಅಲ್ಲಿನವರಿಗೆ ಅದರ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ತಂಡಗದ ಚನ್ನಕೇಶವ ದೇವಾಲಯದಲ್ಲೂ ಇದೇ ತರಹದ ಉಬ್ಬುಶಿಲ್ಪವಿದ್ದು ಅದು ದೇವಾಲಯದ ಹೊರಗೆ ಇದೆ. ಅಂತರಾಳದ ದ್ವಾರಕ್ಕೆ ಒರಗಿಕೊಂಡು ಮಹಿಷಮರ್ದಿನಿಯ ಕೆತ್ತನೆಯೊಂದನ್ನು ಇರಿಸಲಾಗಿದೆ.


’ಇನ್ನೇನು, ಎಲ್ಲಾ ನೋಡಿ ಆಯಿತು’ ಎಂದು ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಅಲ್ಲಿದ್ದ ಒಬ್ಬರು, ’ಅವ್ರಿಗೆ(ನನಗೆ) ಈಶ್ವರನ ಗುಡಿ ತೋರಿಸ್ಲಿಲ್ಲೇನ್ರಿ..’ ಎಂದು ಅರ್ಚಕರನ್ನು ಕೇಳಿದರು. ’ಇಲ್ಲೆಲ್ಲಿ ಈಶ್ವರನ ಗುಡಿ’ ಎಂದು ನಾನು ನಿರುತ್ಸಾಹದಿಂದ ಆಕಡೆ ಈಕಡೆ ನೋಡುತ್ತಿರಬೇಕಾದರೆ ಆ ವ್ಯಕ್ತಿ ನನ್ನನ್ನು ಮತ್ತೆ ವೀರಭದ್ರ ದೇವಾಲಯದೊಳಗೆ ಕರೆದೊಯ್ದರು!


ಈಗ ಬಂತು ನೋಡಿ ದೇವಾಲಯ ನೋಡುವ ಅಸಲಿ ಮಜಾ. ವೀರಭದ್ರನ ಗರ್ಭಗುಡಿಯ ಸ್ವಲ್ಪ ಮೊದಲು ಎಡಭಾಗದಲ್ಲಿರುವ ತೆರೆದ ಜಾಗದಲ್ಲಿ ನುಸುಳಿದರೆ ಅಲ್ಲಿ ಈಶ್ವರನ ದೇವಾಲಯ! ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ. ದೇವಾಲಯದ ಬಾಗಿಲು ತೆರೆದಾಗಷ್ಟೇ ಅಲ್ಲಿನ ದೃಶ್ಯ ಅನಾವರಣಗೊಂಡಿತು. ವೀರಭದ್ರ ದೇವಾಲಯ ಪಶ್ಚಿಮಾಭಿಮುಖವಾಗಿದ್ದರೆ, ಈಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನೊಳಗೊಂಡಿದೆ.


ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಅವುಗಳಿಗೆ ನೀಲಿ ಬಣ್ಣ ಬಳಿಯಲಾಗಿದೆ. ಈ ನಾಲ್ಕು ಕಂಬಗಳ ನಡುವೆ ಎರಡು ನಂದಿಗಳನ್ನು ಒಂದು ಕಾಂಕ್ರೀಟ್ ಪೀಠದ ಮೇಲೆ ಇರಿಸಲಾಗಿದೆ.


ನವರಂಗದಲ್ಲಿರುವ ೬ ದೇವಕೋಷ್ಠಗಳಲ್ಲಿ ಮಹಿಷಮರ್ದಿನಿ, ಬ್ರಹ್ಮ, ಸಪ್ತಮಾತೃಕೆಯರು ಹಾಗೂ ನಾಗದೇವರು, ಸರಸ್ವತಿ, ಲಕ್ಷ್ಮೀನರಸಿಂಹ ಮತ್ತು ದೇವಿಯೊಬ್ಬಳ(ಯಾವ ದೇವಿ ಎಂದು ತಿಳಿಯಲಿಲ್ಲ) ಮೂರ್ತಿಗಳನ್ನು ಇರಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಈ ೬ ಮೂರ್ತಿಗಳು ಭಗ್ನಗೊಂಡಿಲ್ಲ. ಆದರೆ ಬಿಳಿ ಪಾಚಿಯ ಹಾವಳಿಗೆ ಮತ್ತು ಊರವರ ತೈಲ ಅಭಿಷೇಕಗಳಿಗೆ ಸಿಲುಕಿ ನೈಜ ರೂಪವನ್ನು ಕಳಕೊಂಡಿವೆ. ಇವನ್ನು ಸ್ವಚ್ಛಗೊಳಿಸಿ ಮತ್ತೆ ನಳನಳಿಸುವಂತೆ ಮಾಡಿದರೆ ಅವುಗಳ ಅಂದಕ್ಕೆ ಸಾಟಿಯೇ ಇರದು.


ಪಂಚಶಾಖ ಶೈಲಿಯ ಅಂತರಾಳದ ದ್ವಾರಕ್ಕೆ ಬೆಳ್ಳಿಯ ಬಣ್ಣದ ಲೇಪನ ಮಾಡಲಾಗಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಇಲ್ಲಿ ಗಜಲಕ್ಷ್ಮೀಗೆ ಚಾಮರ ಬೀಸುತ್ತಿರುವ ಪರಿಚಾರಿಕೆಯರನ್ನೂ ತೋರಿಸಿರುವುದು ವಿಶೇಷ. ದ್ವಾರದ ಶಾಖೆಗಳಲ್ಲಿ ಕ್ರಮವಾಗಿ ಚೌಕವಜ್ರತೋರಣ, ಬಳ್ಳಿಸುರುಳಿ, ಸ್ತಂಭ, ಸಂಗೀತಗಾರರು ನರ್ತಕಿಯರು ಮತ್ತು ಅಂಕು ಡೊಂಕು ಬಳ್ಳಿಯನ್ನು ಕೆತ್ತಲಾಗಿದೆ.


ನಾಲ್ಕನೇ ಶಾಖೆಯನ್ನು ಜಾಲಂಧ್ರವನ್ನಾಗಿಯೂ ಪರಿವರ್ತಿಸಿದ ಶಿಲ್ಪಿಯ ನೈಪುಣ್ಯತೆಯನ್ನು ಗಮನಿಸಿ. ವೃತ್ತದೊಳಗೆ ಸಂಗೀತಗಾರರನ್ನು ಮತ್ತು ನರ್ತಕಿಯರನ್ನು ಅದ್ಭುತವಾಗಿ ಕೆತ್ತಿದ ಬಳಿಕ ಅಳಿದುಳಿದ ಜಾಗವನ್ನೇ ಜಾಲಂಧ್ರದ ರೂಪದಲ್ಲಿ ಬಳಸಲು ಅನುವು ಮಾಡಿಕೊಟ್ಟಿದ್ದಾನೆ.


ಈ ನಾಲ್ಕನೇ ಶಾಖೆಯು ಹಾಗೇ ಮೇಲಕ್ಕೆ ಮುಂದುವರಿದು ದ್ವಾರದ ಮೇಲಿನ ಆಡ್ಡಪಟ್ಟಿಯಾಗಿರುವುದನ್ನು ಕಾಣಬಹುದು. ಇಲ್ಲಿ ನಡುವೆ ಶಿವನ ತಾಂಡವನೃತ್ಯದ ಕೆತ್ತನೆಯಿದ್ದು ಇಕ್ಕೆಲಗಳಲ್ಲಿ ತಲಾ ೩ ಕೆತ್ತನೆಗಳಿವೆ. ಅವೇನೆಂದು ತಿಳಿಯಲಿಲ್ಲ. ಶಾಖೆಗಳ ತಳಭಾಗದಲ್ಲಿ ತ್ರಿಶೂಲ, ಢಮರುಗ ಮತ್ತು ಗದಾಧಾರಿಯಾಗಿರುವ ಶಿವನ ಮಾನವ ರೂಪವನ್ನು ತೋರಿಸಲಾಗಿದೆ. ಶಿವನ ಬಳಿಯಲ್ಲಿ ಇರುವುದು ಪಾರ್ವತಿ ಇರಬಹುದು. ಪಾರ್ವತಿಯ ನಂತರ ಇರುವ ಕೆತ್ತನೆ ಯಾರದೆಂದು ಗೊತ್ತಾಗಲಿಲ್ಲ.


ಗರ್ಭಗುಡಿಯಲ್ಲಿ ಸುಂದರ ಪಾಣಿಪೀಠದ ಮೇಲೆ ಆಕರ್ಷಕ ಶಿವಲಿಂಗವಿದೆ. ಗರ್ಭಗುಡಿಯ ದ್ವಾರಕ್ಕೆ ಚಿನ್ನದ ಬಣ್ಣದ ಲೇಪನ ಮಾಡಲಾಗಿದೆ. ಈ ದ್ವಾರವು ಪಂಚಶಾಖ ತರಹದಾಗಿದ್ದು ಕೊನೆಯ ಎರಡು ಶಾಖೆಗಳ ಕೆತ್ತನೆ ಅಳಿಸಿಹೋಗಿದೆ ಅಥವಾ ಅವುಗಳ ಮೇಲೆ ಏನನ್ನೂ ಕೆತ್ತದೆ ಹಾಗೇ ಬಿಟ್ಟಿರಬಹುದು. ಮೊದಲ ಮೂರು ಶಾಖೆಗಳಲ್ಲಿ ಚೌಕವಜ್ರತೋರಣ, ಬಳ್ಳಿಸುರುಳಿ ಮತ್ತು ಸ್ತಂಭವನ್ನು ಕೆತ್ತಲಾಗಿದೆ.


ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಯಾರಿದ್ದಾನೆ ನೋಡಿ.... ಗಣೇಶ! ಅದು ಕೂಡಾ ಚಾಮರಧಾರಿ ಪರಿಚಾರಿಕೆಯರೊಂದಿಗೆ. ಇದನ್ನು ನೋಡಿ ಅಚ್ಚರಿ, ಸೋಜಿಗ ಮತ್ತು ಆನಂದ ಎಲ್ಲವೂ ಒಟ್ಟಿಗೆ ಆಯಿತು. ಗಣೇಶ ಲಲಾಟದಲ್ಲಿ ಹೀಗೆ ಏಕಮಾತ್ರವಾಗಿ ಪ್ರತ್ಯೇಕವಾಗಿ ಕಾಣಬರುವುದು ಬಹಳ ಅಪರೂಪ ಎಂದೇ ನನ್ನ ಭಾವನೆ.


ವೀರಭದ್ರನ ಗರ್ಭಗುಡಿಯ ಮೇಲೆ ದೊಡ್ಡ ಗೋಪುರವಿದ್ದರೆ ಈಶ್ವರನ ಗರ್ಭಗುಡಿಯ ಮೇಲೆ ಸಣ್ಣ ಗೋಪುರವೊಂದಿದೆ. ಈ ಗೋಪುರಗಳನ್ನು ನಂತರ ನಿರ್ಮಿಸಿದಂತೆ ತೋರುತ್ತದೆ. ದೇವಾಲಯದ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಕೆತ್ತಲಾಗಿದೆ ಮತ್ತು ಪಾರ್ಶ್ವಕ್ಕೊಂದರಂತೆ ಇರುವ ಎರಡು ದೇವಕೋಷ್ಠಗಳು ಖಾಲಿ ಇದ್ದು ಗೋಪುರದಿಂದ ಅಲಂಕೃತಗೊಂಡಿವೆ.


ಈಶ್ವರ ದೇವಾಲಯದ ಪ್ರಮುಖ ದ್ವಾರದ ಮೇಲಿರುವ ಗಜಲಕ್ಷ್ಮೀಯ ಕೆತ್ತನೆ ನಶಿಸಿಹೋಗಿದೆ. ಇದು ಬಹಳ ಅಲಂಕೃತ ಕೆತ್ತನೆಯಾಗಿದ್ದನ್ನು ಕಾಣಬಹುದು. ಗಜಲಕ್ಷ್ಮೀಯ ಎಡಭಾಗದಲ್ಲಿ ಇನ್ನೊಂದು ಆನೆ ಸೊಂಡಿಲಿನಲ್ಲಿ ಪಾತ್ರೆಯೊಂದನ್ನು ಹಿಡಿದು ಸೇವೆಗೆ ಅಣಿಯಾಗಿ ನಿಂತಿರುವುದನ್ನು ಕಾಣಬಹುದು. ಅಲ್ಲಿ ಇಬ್ಬರು ಪರಿಚಾರಿಕೆಯನ್ನೂ ತೋರಿಸಲಾಗಿದೆ. ಮಕರವನ್ನೂ ಕೆತ್ತಲಾಗಿದ್ದು ಅದರ ಹಿಂದೆ ಹೆಂಗಸೊಬ್ಬಳನ್ನು ತೋರಿಸಲಾಗಿದೆ. ಬಲಭಾಗದಲ್ಲಿಯೂ ಇದೇ ರೀತಿ ಕೆತ್ತನೆಯಿದ್ದು ಅದು ಸಂಪೂರ್ಣವಾಗಿ ನಶಿಸಿರುವುದನ್ನು ಕಾಣಬಹುದು. ನಾಲ್ಕು ಆನೆಗಳು, ಆರು ಪರಿಚಾರಿಕೆಯರು, ಎರಡು ಮಕರಗಳು ಮತ್ತು ಆಭರಣಧಾರಿಣಿ ಗಜಲಕ್ಷ್ಮೀ! ಇಷ್ಟು ಅಲಂಕೃತ ಗಜಲಕ್ಷ್ಮೀ ಕಾಣಬರುವುದು ಬಹಳ ವಿರಳ. ಈ ಅಮೋಘ ಕೆತ್ತನೆ ಹಾನಿಯಾಗದೇ ಉಳಿದಿದ್ದರೆ ಕಣ್ತುಂಬಾ ಸವಿಯಬಹುದಿತ್ತು.


ಒಂದೇ ಕಟ್ಟಡದೊಳಗೆ ವಿರುದ್ಧ ದಿಕ್ಕಿಗೆ ಮುಖ ಮಾಡಿ ಎರಡು ದೇವಾಲಯಗಳಿರುವುದು ಅಪರೂಪವಿರಬಹುದು. ಈಶ್ವರ ದೇವಾಲಯ ಅಚ್ಚರಿಗಳ ಸರಮಾಲೆಯನ್ನೇ ನನಗೆ ನೀಡಿತು. ನೇರಲಿಗೆಗೆ ಬರುವ ನಿರ್ಧಾರ ಮಾಡಿದ್ದು ಒಳ್ಳೆಯದಾಯಿತು. ಎಲ್ಲೂ ಕಾಣದ ಕೆಲವು ವೈಶಿಷ್ಟ್ಯಗಳನ್ನು ಈ ಜೋಡಿ ದೇವಾಲಯಗಳಲ್ಲಿ ಕಾಣುವ ಭಾಗ್ಯ ನನ್ನದಾಯಿತು. ಈ ದೇವಾಲಯದ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯನ್ನು ಸರಕಾರ ಈ ತಿಂಗಳು ಹೊರಡಿಸಿದೆ.

3 ಕಾಮೆಂಟ್‌ಗಳು:

Ashok ಹೇಳಿದರು...

Vishista Devalaya.. Chitragalu mattu mahiti chennagide....

Srik ಹೇಳಿದರು...

If HERITAGE is the deciding factor of the richness of a society, then we are the richest...

I am not exaggerating!!

It is heartening to see our Govt waking up to a historical announcement.
Thanks Rajesh for this wonderful post.

Srik

ರಾಜೇಶ್ ನಾಯ್ಕ ಹೇಳಿದರು...

ಅಶೋಕ್,
ಧನ್ಯವಾದ.

ಶ್ರೀಕಾಂತ್.
ನಮ್ಮ ಪರಂಪರೆ ನಿಸ್ಸಂದೇಹವಾಗಿಯೂ ಉತ್ಕೃಷ್ಟವಾದದ್ದು. ಅದರ ಬಗ್ಗೆ ನಮಗೆಲ್ಲರಿಗೂ ಅರಿವು ಮೂಡಬೇಕಷ್ಟೆ. ಧನ್ಯವಾದ.