ಶನಿವಾರ, ಆಗಸ್ಟ್ 18, 2007

ಕೊಡಗಿನ ಕೆಲವು ಬೆಡಗಿಯರು


ಅಗೋಸ್ಟ್ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಕಾರ್ಯಕ್ರಮ - ಕೊಡಗಿನ ನಾಲ್ಕಾರು ಜಲಧಾರೆಗಳಿಗೆ ಭೇಟಿ. ಇಲ್ಲಿ ಚಾರಣ ಇರಲಿಲ್ಲ. ಬರೀ ಪ್ರಯಾಣ. ೨೩ ಜನರ ತಂಡ ತೋಡಿಕಾನ ತಲುಪಿದಾಗ ಮುಂಜಾನೆ ೧೧ ಗಂಟೆ. ಅಲ್ಲಿಂದ ಅರ್ಧ ಗಂಟೆ ನಡೆದು, ೨ ಹಳ್ಳಗಳನ್ನು ದಾಟಿ ರಮಣೀಯವಾಗಿ ಧುಮುಕ್ಕುತ್ತಿದ್ದ ದೇವರಗುಂಡಿ ಜಲಧಾರೆಯ ಸಮೀಪ ತಲುಪಿದೆವು. ಇದೊಂದು ಸಣ್ಣ ಜಲಧಾರೆ, ೩೫ ಅಡಿ ಎತ್ತರವಿರಬಹುದು.

ತೋಡಿಕಾನಕ್ಕೆ ಮರಳಿ, ನಮ್ಮನ್ನೆಲ್ಲಾ ಹೊತ್ತು ಮೋಹನನ 'ಶಕ್ತಿ' ಕೊಡಗು ಜಿಲ್ಲೆಯನ್ನು ಪ್ರವೇಶಿಸಿತು. ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಪ್ರವೇಶಿಸಿದ ಐದಾರು ಕಿಮಿ ಬಳಿಕ ಸಿಗುವ ದೇವರಕೊಲ್ಲಿ ಎಂಬಲ್ಲಿ ರಸ್ತೆ ಬದಿಯಲ್ಲೇ ಸುಮಾರು ೬೦ ಡಿಯಷ್ಟು ಎತ್ತರದಿಂದ ಧುಮುಕುವ ಜಲಧಾರೆಯೊಂದಿದೆ. ಇದಕ್ಕೆ ದೇವರಕೊಲ್ಲಿ ಜಲಧಾರೆ ಅಥವಾ ಅಬ್ಬಿಗೊಳ್ಳಿ ಎಂದೂ ಕರೆಯುತ್ತಾರೆ.

ಮಡಿಕೇರಿ ತಲುಪಿ ಅಬ್ಬಿ ಜಲಧಾರೆಗೆ ತೆರಳುವ ಪ್ಲ್ಯಾನ್ ಮೊದಲೇ ಇತ್ತು ಮತ್ತು ಎಲ್ಲರಿಗೂ ಅದರ ಬಗ್ಗೆ ತಿಳಿಸಲಾಗಿತ್ತು. ಮಡಿಕೇರಿಗೆ ೩ ಕಿಮಿ ಮೊದಲು ಸಿಗುವ ಬೈಪಾಸ್ ರಸ್ತೆಯಲ್ಲಿ, 'ಕಾರ್ಯಕ್ರಮದ ಆಯೋಜಕರು' ಎನಿಸಿಕೊಂಡವರು ಯಾರಿಗೂ ಮಾಹಿತಿ ನೀಡದೆ ನೇರವಾಗಿ ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಯತ್ತ ಚಲಿಸುವಂತೆ ಮುಂದೆ ಕೂತು ಮೋಹನನಿಗೆ ಮಾರ್ಗದರ್ಶನ ನೀಡಿದರು. ಹೆಚ್ಚಿನವರು ಅಬ್ಬಿ ಜಲಧಾರೆಯನ್ನು ನೋಡಿರಲಿಲ್ಲ. ಇದನ್ನು ಕಡೆಗಣಿಸಿ, 'ತಾವು ನೋಡಿದ್ದೇವೆ' ಎಂಬ ಮಾತ್ರಕ್ಕೆ ಆಯೋಜಕರು ಕೊನೆಯ ಕ್ಷಣದಲ್ಲಿ ಯಾರಿಗೂ ತಿಳಿಸದೆ ಅಬ್ಬಿ ಭೇಟಿಯನ್ನು ರದ್ದು ಮಾಡಿದ್ದರಿಂದ ಅವರು ಎಲ್ಲರಲ್ಲೂ ಕ್ಷಮೆ ಕೇಳಬೇಕು. ಕೊಡಗಿಗೆ ಭೇಟಿ ನೀಡಿ ಐದಾರು ಜಲಧಾರೆಗಳನ್ನು ನೋಡಿ ಬಂದೆ, ಆದರೆ ಅಬ್ಬಿ ನೋಡಲಿಲ್ಲ ಎಂದರೆ ನಗೆಪಾಟಲಾಗುವ ಪರಿಸ್ಥಿತಿ. ಆಯೋಜಕರು ಇಂತಹ ತಪ್ಪನ್ನು ಇನ್ನೆಂದು ಮಾಡದಿರಲಿ.

ಅಬ್ಬಿಯಾಲ ಜಲಧಾರೆ ನೋಡುವ ಪ್ಲ್ಯಾನ್ ಕೂಡಾ ಮೊದಲೇ ಇತ್ತು. ಈಗ ನೋಡಿದರೆ ಮೋಹನ 'ಶಕ್ತಿ'ಯನ್ನು ಮೂರ್ನಾಡು ಮಾರ್ಗವಾಗಿ ಓಡಿಸುತ್ತಿದ್ದ! ನಮಗ್ಯಾರಿಗೂ ಈ ಮೂರ್ನಾಡು ಎಲ್ಲಿ, ಅಬ್ಬಿಯಾಲಕ್ಕೆ ದಾರಿ ಎಲ್ಲಿ, ಯಾವ ದಾರಿ ಒಂದೂ ತಿಳಿಯದಾಗಿತ್ತು. ಆದರೆ ತನ್ನ ಮನದನ್ನೆಯನ್ನು ಭೇಟಿ ಮಾಡಲು ಆಗಾಗ ವಿರಾಜಪೇ ಟೆಗೆ ಎಡತಾಕುತ್ತಿದ್ದ ಸುಧೀರ್ ಕುಮಾರ್-ಗೆ ಕೊಡಗಿನ ದಾರಿಗಳು ಚಿರಪರಿಚಿತವಾಗಿದ್ದರಿಂದ ಅವರು ಕೂಡಲೇ ಅಲರ್ಟ್ ಆಗಿ, 'ಎಲ್ಲಿ ಹೋಗುತ್ತಿದ್ದೀರಿ? ಯಾಕೆ ಅಬ್ಬಿ ಇಲ್ಲ? ಈ ದಾರಿಯಲ್ಲಿ ಅಬ್ಬಿಯಾಲ ಕೂಡಾ ಸಿಗುವುದಿಲ್ಲ' ಎಂದು ಆಯೋಜಕರಿಗೆ ತಿವಿದರು. ಅಂತೂ ಕಡೆಗೆ ಮರಳಿ ಮಡಿಕೇರಿಗೆ ಬಂದು ಚೆಟ್ಟಳ್ಳಿ ಮಾರ್ಗವಾಗಿ ತೆರಳಿ ಸುಂದರ ಅಬ್ಬಿಯಾಲ ಜಲಧಾರೆಯನ್ನು ನೋಡಿದೆವು.


ಸುಮಾರು ೮೦ ಅಡಿ ಎತ್ತರದಿಂದ ೨ ಕವಲುಗಳಲ್ಲಿ ಸುಂದರವಾಗಿ ಧುಮುಕುತ್ತಿದ್ದ ಈ ಜಲಧಾರೆ ನೋಡಿ ಮನಸಾರೆ ಆನಂದಿಸಿದೆವು.

ಅಸಾಮಾನ್ಯ ಈಜು ಪಟು ಆಗಿದ್ದು, ವರ್ಷಕ್ಕೊಮ್ಮೆ ನಮ್ಮೊಂದಿಗೆ ಚಾರಣಕ್ಕೆ ಬರುವ ಮಹಾಶಯರೊಬ್ಬರು ತಾವು ಆಯೋಜಕರಲ್ಲದೆಯೂ ಆಯೋಜಕರ ಗೆಟಪ್ಪಿನಲ್ಲಿ ವರ್ತಿಸುತ್ತಾ, ಅಬ್ಬಿಯಾಲ ಜಲಧಾರೆಯನ್ನು ನೋಡುತ್ತಾ ನನ್ನಲ್ಲಿ, 'ಇದು ಫಾಲ್ಸ್ ಅಲ್ಲ! ಇದು ತೋಡು'!!!! ಎನ್ನುತ್ತಾ ತಾವು ಮತ್ತಷ್ಟು ಮೂರ್ಖರೆಂದು ಸಾಬೀತುಪಡಿಸಿದರು. ನಮ್ಮ 'ನಿಜವಾದ' ಆಯೋಜಕರು ಸುಮ್ಮನಿದ್ದು, ಇಂತಹ 'ಪೊಳ್ಳು' ಆಯೋಜಕರಿಗೆ ನಿರ್ಧಾರ ತೆಗೆದುಕೊಳ್ಳಲು ಯಾಕೆ ಬಿಡುತ್ತಿದ್ದರು ಎಂಬುದು ತಿಳಿಯಲಿಲ್ಲ. ಆದರೆ ಆ ದಿನ ರಾತ್ರಿ ತಡರಾತ್ರಿ ತನಕ ಮಲಗದೇ ಗಲಾಟೆ ಎಬ್ಬಿಸಿ ಉಳಿದವರಿಗೆ ತೊಂದರೆ ಕೊಡುತ್ತಿದ್ದ ಒಂದಿಬ್ಬರನ್ನು ಗದರಿಸುವ ಕೆಲಸವನ್ನು ಮತ್ತೆ ನಮ್ಮ 'ನಿಜವಾದ' ಆಯೋಜಕರೇ ಮಾಡಬೇಕಾಯಿತು. ಭಾಷಣ ಬಿಗಿಯುವ 'ಪೊಳ್ಳು' ಆಯೋಜಕರು ಅದಾಗಲೇ ನಿದ್ರಾವಶರಾಗಿದ್ದರು!

ಗೋಣಿಕೊಪ್ಪಲು ತಲುಪಿದಾಗ ಸಂಜೆ ೬ ರ ಸಮಯ! ಅಷ್ಟು ಬೇಗ ಯಾಕೆ ಬಂದೆವು ಎಂದು ಇನ್ನೂ ತಿಳಿಯದಾಗಿದೆ. ೮ ಗಂಟೆಗಷ್ಟು ಹೊತ್ತಿಗೆ ಬಂದರೆ ಸಾಕಿತ್ತು. ಅಬ್ಬಿ ನೋಡಿ ಬರಲು ನಮ್ಮಲ್ಲಿ ಧಾರಾಳ ಸಮಯವಿತ್ತು. ಅಥವಾ, 'ಅಬ್ಬಿ ಫಾಲ್ಸಾ, ಅದು ಫಾಲ್ಸ್ ಅಲ್ಲ. ಅದು ಕೂಡಾ ತೋಡು'!!! ಎಂದು ಆಯೋಜಕರ ನಿಲುವಿದ್ದಿತ್ತೇನೋ.... ಆ ಕಾರಣಕ್ಕಾಗಿ ಅಬ್ಬಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಿದ್ದಿರಬೇಕು!

ಮರುದಿನ ಮುಂಜಾನೆ ೬ಕ್ಕೇ ಇರ್ಪು ಜಲಧಾರೆಯತ್ತ ತೆರಳಿದೆವು. ಇರ್ಪು ಒಂದು ಸುಂದರ ಹಳ್ಳಿ. ಅದಕ್ಕೆ ಕಲಶವಿಟ್ಟಂತೆ ಸುಂದರ ರಾಮೇಶ್ವರ ದೇವಸ್ಥಾನ. ಒಬ್ಬರಿಗೆ ೧೦ ರೂಪಾಯಿ ತೆತ್ತು ೫ ನಿಮಿಷ ನಡೆದು ರುದ್ರರಮಣೀಯವಾಗಿ ಧುಮುಕುತ್ತಿದ್ದ ಇರ್ಪು ಜಲಧಾರೆಯನ್ನು ನೋಡಿ ಬೆರಗಾದೆವು. ಅಪಾರ ಜಲರಾಶಿ ಇರ್ಪುವಿನ ಉದ್ದವನ್ನೇ ಕಡಿಮೆಗೊಳಿಸಿತ್ತು! ೧೫೦ ಅಡಿಯ ಜಲಧಾರೆ ೯೦ ಅಡಿಯಷ್ಟು ಎತ್ತರವಿದ್ದಂತೆ ಕಾಣುತ್ತಾ ಕಂಗೊಳಿಸುತ್ತಿತ್ತು.

ನಂತರ ಮರಳಿ ಗೋಣಿಕೊಪ್ಪಲಿಗೆ ಬಂದು ಅಲ್ಲಿ ಕೂರ್ಗ್ ಪಬ್ಲಿಕ್ ಸ್ಕೂಲ್ ಎಂಬ ರೆಸಿಡೆನ್ಶಿಯಲ್ ಶಾಲೆಯೊಂದಕ್ಕೆ ಭೇಟಿ ನೀಡಿದೆವು. ಅಲ್ಲಿನ ಪ್ರಾಂಶುಪಾಲರು ಮತ್ತು ಮ್ಯಾನೇಜರ್ ಉಡುಪಿಯವರೇ ಆಗಿದ್ದರಿಂದ ನಮಗೆಲ್ಲಾ ವಿಪರೀತ ಮರ್ಯಾದೆ. ಒಂದು ರೆಸಿಡೆನ್ಶಿಯಲ್ ಶಾಲೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಮೀಪದಿಂದ ಕಂಡೆವು. ಆದರೆ ಸಣ್ಣ ಸಣ್ಣ ಮಕ್ಕಳ ಕಳೆಗುಂದಿದ ಮುದ್ದು ಮುಖಗಳನ್ನು ನೋಡುವಾದ 'ಅಯ್ಯೋ, ಪಾಪ' ಅನ್ನಿಸದೇ ಇರಲಿಲ್ಲ.

೩ ಜಲಧಾರೆಗಳುಳ್ಳ ಹಳ್ಳಿಯಾದ ಚೇಲಾವರ ತಲುಪಿದೆವು. ಹೆಚ್ಚಿನವರು ಎಮೆಪಾರೆ ಜಲಧಾರೆ ಮಾತ್ರ ನೋಡಿ ಮರಳುತ್ತಾರೆ. ಅನತಿ ದೂರದಲ್ಲಿ ಕಬ್ಬೆ(ಬಲ್ಲಿಯಟ್ರ) ಜಲಧಾರೆ ಮತ್ತು ಹಾಲುಹೊಳೆ ಜಲಧಾರೆ ಎಂಬ ಇನ್ನೆರಡು ಜಲಧಾರೆಗಳಿರುವುದು ಕೆಲವರಿಗೆ ಮಾತ್ರ ಗೊತ್ತು. ಎಮೆಪಾರೆ ಜಲಧಾರೆಯಲ್ಲಿ ಭರ್ಜರಿ ನೀರಿತ್ತು. ೫೦ ಅಡಿ ಅಗಲವಿದ್ದು ಅಷ್ಟೇ ಎತ್ತರದಿಂದ ಧುಮುಕುವ ಇದರ ದೃಶ್ಯ ರಮಣೀಯ.

ನಂತರ ನಾನು ಉಳಿದೆರಡು ಜಲಧಾರೆಗಳನ್ನು ಹುಡುಕತೊಡಗಿದೆ. ಕೂರ್ಗ್ ಪಬ್ಲಿಕ್ ಸ್ಕೂಲ್-ನ ಪ್ರಾಂಶುಪಾಲರು, 'ಎಮೆಪಾರೆ ಜಲಧಾರೆ ನೋಡಿ ಹಾಗೆ ಮುಂದೆ ತೆರಳಿದರೆ ಕಬ್ಬೆ ಎಂಬಲ್ಲಿ ಬೆಟ್ಟ ಗುಡ್ಡಗಳ ರಮಣೀಯ ನೋಟ ಸಿಗುತ್ತದೆ' ಎಂದು ತಿಳಿಸಿದ್ದರಿಂದ, ನಮ್ಮ ಕೆಲವು ಹಿರಿತಲೆಗಳು ನಾವು ಬಂದಿದ್ದು 'ಜಲಧಾರೆಗಳನ್ನು ನೋಡಲು' ಎಂಬುದನ್ನು ಮರೆತು ಆ ಕಡೆ ನಡೆದೇಬಿಟ್ಟರು. ನನಗೆ ಉಳಿದೆರಡು ಜಲಧಾರೆಗಳನ್ನು ಹುಡುಕಬೇಕಿತ್ತು. ೧೫ ನಿಮಿಷದಲ್ಲಿ ಹುಡುಕಿಬಿಡುತ್ತಿದ್ದೆ. ಆದರೆ ನಾವು ಬಂದ ಪ್ರಮುಖ ಉದ್ದೇಶವನ್ನು 'ಹಿರಿಯರೆನಿಸಿಕೊಂಡವರೇ' ಮತ್ತು ಈ ಹಿರಿಯರೊಂದಿಗೆ 'ಆಯೋಜಕರೆನಿಸಿಕೊಂಡವರು' ಕೂಡಾ ಮರೆತು ಎಲ್ಲರನ್ನೂ ಬೆಟ್ಟ ನೋಡಲು ಕರೆದೊಯ್ದಿದ್ದು ನನಗೆ ಕಸಿವಿಸಿಯನ್ನುಂಟುಮಾಡಿತು. ನಾನು ಆಯೋಜಕನಲ್ಲದ ಕಾರಣ ಎಲ್ಲವನ್ನೂ ಸಹಿಸಿ ಸುಮ್ಮನಿದ್ದೆ.

ಬೆಟ್ಟದ ದೃಶ್ಯ ಅದ್ಭುತವಾಗಿತ್ತು ಎನ್ನಿ. ಆದರೆ ಇಲ್ಲಿ ಅನಾವಶ್ಯಕವಾಗಿ ಆ 'ಹಿರಿಯರನ್ನು' ಒಳಗೊಂಡಂತೆ ಒಂದಿಬ್ಬರು ಬೆಟ್ಟದ ತುದಿಯನ್ನು ಏರಲು ಹೋಗಿ ೩೦ ನಿಮಿಷ ವ್ಯರ್ಥಗೊಳಿಸಿದರು ನೋಡಿ ಮೈಯೆಲ್ಲ ಉರಿದುಹೋಯ್ತು. ನಾನೆಲ್ಲಾದರೂ ಆಯೋಜಕನಾಗಿದ್ದರೆ ಅವರನ್ನೆಲ್ಲಾ ಅಲ್ಲೇ ಬಿಟ್ಟು ಚೇಲಾವರಕ್ಕೆ ಹಿಂತಿರುಗಿ ಉಳಿದೆರಡು ಜಲಧಾರೆಗಳನ್ನು ಹುಡುಕುತ್ತಿದ್ದೆ. ನಾಲ್ಕೈದು ಕಿಮಿ ನಡೆದು ಚೇಲಾವರಕ್ಕೆ ಹಿಂತಿರುಗುವುದೇ ಅವರಿಗೆ ತಕ್ಕ ಶಿಕ್ಷೆಯಾಗುತ್ತಿತ್ತು. ತಂಡದೊಂದಿಗೆ ಹೋದಾಗ ನಮ್ಮ ವರ್ತನೆ ಮತ್ತು ವಿಪರೀತ ಉತ್ಸಾಹ ಉಳಿದವರಿಗೆ ತೊಂದರೆ ನೀಡದಂತೆ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ನಮ್ಮಲ್ಲಿರುವ ಕೆಲವು ಕಿರಿಯರಿಗೆ ಈ ವಿಷಯಗಳನ್ನು ಮನದಟ್ಟು ಮಾಡಬೇಕಾಗಿರುವ ಹಿರಿಯರೇ (ಯಾವಾಗಲೂ ಸಮಚಿತ್ತರಾಗಿರುವ) ಅಂದು ಮಾತ್ರ ಈ ರೀತಿ ಎಡಬಿಡಂಗಿಗಳಂತೆ ಬೇಜವಾಬ್ದಾರಿಯಿಂದ ವರ್ತಿಸಬಾರದಿತ್ತು.

ಕಡೆಗೆ ಎಲ್ಲೂ ನಿಲ್ಲದೇ ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ತಲುಪಿ ೯.೩೦ಕ್ಕೆ ಮಂಗಳೂರಿನಲ್ಲಿದ್ದೆವು. ಕಾರ್ಯಕ್ರಮ ಉತ್ತಮವಾಗಿತ್ತು. ಇಲ್ಲಿ ಆಯೋಜಕರನ್ನು ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದೇನೆ. ಆದರೆ ಒಂದು ವಿಷಯದಲ್ಲಿ ಮಾತ್ರ ಅವರನ್ನು ಮೆಚ್ಚಬೇಕು. ರಾತ್ರಿ ತಂಗಲು ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೊಡಗಿಗೆ ತೆರಳಿ ಅಬ್ಬಿ ನೋಡಲಿಲ್ಲ ಎಂದು ಕೆಲವು ಯುವ ಮನಗಳಲ್ಲಿ ಮನೆ ಮಾಡಿದ್ದ ನಿರಾಸೆಯನ್ನು ಹೋಗಲಾಡಿಸಬಹುದಿತ್ತು.

11 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ.

ಸರಿಯಾದ ಪ್ಲಾನ್ ಇಲ್ಲದೆ ಹೀಗೆ ಅಯಿತು ಕಾಣುತ್ತದೆ

ಅಬ್ಬಿ ಇಲ್ಲದೆ ನಮ್ಮ ಚಾರಣಕ್ಕೆ ಮೆರಗು ಬರಲಿಲ್ಲ.

ಆಯೋಜಕರು ನಮ್ಮ ಅಭಿಪ್ರಾಯವನ್ನು ಸಹ ಕೇಳಬೇಕಿತು

ಅಲ್ವೆ ?

ಒಳ್ಳೆಯ ಪಿಕ್ನಿಕ್ ಆಂತ ಹೇಳಬಹುದು

Srik ಹೇಳಿದರು...

Super post.

Aravind GJ ಹೇಳಿದರು...

ಕೊಡಗಿನ ಜಲಪಾತಗಳ ನಿಮ್ಮ ನಿರೂಪಣೆ ಚೆನ್ನಾಗಿದೆ. ನಾನು ಕೊಡಗಿನಲ್ಲಿ ಅಬ್ಬಿ ಹಾಗು ಇರ್ಪು ಜಲಪಾತವನ್ನಷ್ಟೆ ನೋಡಿದ್ದೆ.

ಇವು ಮಳೆಗಾಲದ ಜಲಪಾತಗಳೋ ಅಥವಾ ಏಲ್ಲ ಕಾಲದಲ್ಲಿಯೂ ನೀರು ಇರುತ್ತದೆಯೊ?

ಯಜಮಾನ ಹೇಳಿದರು...

bahaLa sogasaagide aadarE oMdu prashne - ittichege hecchaagi jalapaatagaLannu veekshisuttiruva kaaraNa? maLe endO?

ರಾಜೇಶ್ ನಾಯ್ಕ ಹೇಳಿದರು...

ಸುಧೀರ್,
ಪ್ಲ್ಯಾನ್ ಏನೋ ಸರಿಯಾಗಿತ್ತು ಆದರೆ ಅದರ 'ಎಕ್ಸಿಕ್ಯೂಷನ್' ಸರಿಯಾಗಿರಲಿಲ್ಲ. ಒಟ್ಟಾರೆ ಉತ್ತಮ ಟ್ರಿಪ್.

ಶ್ರೀಕಾಂತ್,
ಧನ್ಯವಾದ.

ಅರವಿಂದ್,
ಕೊಡಗಿನಲ್ಲಿ ಅಬ್ಬಿ ಮತ್ತಿ ಇರ್ಪು ಬಿಟ್ಟರೆ ಉಳಿದೆಲ್ಲಾ ಜಲಧಾರೆಗಳು ಮಳೆಗಾಲದ ಅತಿಥಿಗಳು. ಒಂದೆರಡು (ಎಮೆಪಾರೆ ಸೇರಿ) ಜಲಧಾರೆಗಳಲ್ಲಿ ನವೆಂಬರ್ ವರೆಗೂ ಸ್ವಲ್ಪ ನೀರಿರುವುದು.

ಯಜಮಾನ,
ಮಳೆಗಾಲದಲ್ಲಿ ತಾನೆ ಜಲಧಾರೆಗಳ ಅಪ್ರತಿಮ ಸೌಂದರ್ಯವನ್ನು ಮನಸಾರೆ ಸವಿಯುವ ಅವಕಾಶವಿರುವುದು... ಆದ್ದರಿಂದ ಮಳೆಗಾಲದ ಚಾರಣಗಳಲ್ಲಿ ಜಲಧಾರೆಗಳಿಗೆ ಪ್ರಾಶಸ್ತ್ಯ.

PRAVINA KUMAR.S ಹೇಳಿದರು...

ಕೊಡಗಿನವರಂತೆ ಅಲ್ಲಿನ ಬೆಡಗಿಯರು ಸೂಪರ್.

veena ಹೇಳಿದರು...

ನೀವೆಲ್ಲಾ ಅದೇಗೆ ಟೈಮ್ ಮಾಡಿಕೊಂಡು ಹೋಗುತ್ತಿರಾ??? ನನಗಂತೂ ಇಂಥಹ ಪ್ರವಾಸ ಕಥನಗಳನ್ನು ಓದುವಾಗ ಛೆ! ಎಂಥಹ ಅವಕಾಶ ಕಳೆದು ಕೊಳ್ಳುತ್ತಿದ್ದೇನೆಂದು ಅನ್ನಿಸುತ್ತೆ.

Seema S. Hegde ಹೇಳಿದರು...

Nicely written :)

ರಾಜೇಶ್ ನಾಯ್ಕ ಹೇಳಿದರು...

ಪ್ರವೀಣ್,
ಎಷ್ಟು ಸರಿಯಾಗಿ ಹೇಳಿದ್ರಿ ನೋಡಿ.

ವೀಣಾ,
ಆಸಕ್ತಿಯಿದ್ದಲ್ಲಿ ಸಮಯವೇನು ಮಹಾ?

ಸೀಮಾ,
ಧನ್ಯವಾದ.

ಅನಾಮಧೇಯ ಹೇಳಿದರು...

ಜಲಪಾತದ ಫೂರ್ಣ ಪ್ರಮಾಣದ ಮಾಹಿತಿ ನಿಮ್ಮ ಬರವಣಿಗೆಯಲ್ಲಿದೆ. ನಿಮ್ಮ ಆಯೋಜಕರು ನಿಮ್ಮನ್ನು ನಿರಾಸೆಗೋಳಿಸಿದ್ದಕ್ಕೆ ಬೇಸರವಾಯಿತು. ಆ ಉಳಿದೆರಡುಜಲಪಾತವನ್ನು ನೋಡಿದಿದ್ದರೆ ಅವುಗಳ ಮಾಹಿತಿಯೂ ನಮ್ಮಂಥ ಓದುಗರಿಗೆ ಪುಕ್ಕಟೆಯಾಗಿ ಸಿಗುತ್ತಿತ್ತು.
ಲೀನಾ.

ರಾಜೇಶ್ ನಾಯ್ಕ ಹೇಳಿದರು...

ಲೀನಾ,
ಆಯೋಜಕರು ನಿಜವಾಗಿಯೂ ನಮ್ಮನ್ನು 'ಗೋಳಿ'ಸಿದರು. ನಮ್ಮನ್ನು ಅವರು'ಗೋಳಿ'ಸಿದ್ದರಿಂದ ಮತ್ತು ಉಳಿದೆರಡು ಜಲಧಾರೆಗಳನ್ನು ನೋಡಲಾಗದೇ ಇದ್ದಿದ್ದರಿಂದ ನಿಮಗೆ ಬೇಸರವುಂಟಾಗಿರುವುದನ್ನು ಆಯೋಜಕರಿಗೆ ತಿಳಿಸುವೆ.