ಶುಕ್ರವಾರ, ನವೆಂಬರ್ 17, 2006

ಕರ್ನಾಟಕದ ಮುಕುಟಕ್ಕೆ ಪ್ರವಾಸ - ೧


ಕಳೆದ ಮೇ ತಿಂಗಳಂದು ಮಂಗಳೂರಿನ ಗೆಳೆಯರಿಬ್ಬರು, ಮೂರ್ನಾಲ್ಕು ದಿನ ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಎಂದಾಗ ಗುಲ್ಬರ್ಗ, ಬೀದರ್ ಹಾಗೂ ಬಸವಕಲ್ಯಾಣ ಸುತ್ತಾಡಿಕೊಂಡು ಬರೋಣವೆಂದು ನಿರ್ಧರಿಸಿದೆವು. ನನ್ನ ಬಳಿಯಿದ್ದ ಲೇಖನಗಳೆಲ್ಲವನ್ನೂ ಹಲವಾರು ಸಲ ಓದಿ, ಅಂತರ್ಜಾಲವನ್ನು ಜಾಲಾಡಿ, ನೋಡಬೇಕಾದ ಎಲ್ಲಾ ಸ್ಥಳಗಳ ಪಟ್ಟಿಯೊಂದನ್ನು ಅಂತಿಮಗೊಳಿಸಿದೆ. ಆದರೆ ಹೊರದುವ ಮುನ್ನಾ ದಿನ ರಾತ್ರಿ ಗೆಳೆಯರಿಬ್ಬರೂ ಕ್ಷುಲ್ಲಕ ಸಬೂಬುಗಳನ್ನು ಹೇಳಿ ಹಿಂದೆ ಸರಿದರು. ಒಬ್ಬರಿಗೆ ಮನೆಯಲ್ಲಿನ ಕೋಳಿ (!) ಪದಾರ್ಥ ಬಿಟ್ಟು ಬರಲಾಗದಿದ್ದರೆ ಮತ್ತೊಬ್ಬರಿಗೆ ತಾನು ರಜೆ ಹಾಕಿದರೆ ತನ್ನ ಸಂಸ್ಥೆಗೆ (ಸಾವಿರಾರು ನೌಕರರಿರುವ ಎಂ ಆರ್ ಪಿ ಎಲ್) ನಷ್ಟ ಉಂಟಾಗಬಹುದು ಎಂಬ ಚಿಂತೆ! ಬಹಳ ದಿನಗಳ ಆಸೆ ಈಡೇರುವಂತಿರುವಾಗ, ನಾನು ಒಬ್ಬನೇ ಹೋಗುವ ನಿರ್ಧಾರ ಮಾಡಿದೆ.

ಜೂನ್ ೨ರಂದು ಅಪರಾಹ್ನ ೧.೩೦ಕ್ಕೆ ಉಡುಪಿಯಿಂದ ಹೊರಟ ಕರ್ನಾಟಕ ಸಾರಿಗೆ ಬಸ್ಸು ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟ, ಸಿರ್ಸಿ, ಮುಂಡಗೋಡ, ಹುಬ್ಬಳ್ಳಿ, ಧಾರವಾಡ, ಲೋಕಾಪುರ, ಸೌಂದತ್ತಿ, ರಾಮದುರ್ಗ, ಮುಧೋಳ, ಜಮಖಂಡಿ, ಬಿಜಾಪುರ, ದೇವರ ಹಿಪ್ಪರಗಿ, ಸಿಂದಗಿ, ಅಲಮೇಲ ಮತ್ತು ಅಫಜಲಪುರ ಇವಿಷ್ಟು ಊರುಗಳ ದರ್ಶನ ಮಾಡಿಸಿ ಶನಿವಾರ ಜೂನ್ ೩ರ ಮುಂಜಾನೆ ೯ ಗಂಟೆಗೆ ಗುಲ್ಬರ್ಗ ತಲುಪಿತು. ವಸತಿ ಗೃಹವೊಂದಕ್ಕೆ ನುಗ್ಗಿ, ೧೦ ಗಂಟೆಗೆ ಅಲ್ಲಿಂದ ಹೊರಬಿದ್ದೆ. ರಿಕ್ಷಾವೊಂದರಲ್ಲಿ ಕುಳಿತು ಗುಲ್ಬರ್ಗ ಕೋಟೆಗೆ ಹೋಗುವಂತೆ ಹೇಳಿದರೆ, ಆತ ಗುಲ್ಬರ್ಗ ಕೋರ್ಟಿಗೆ ಹೋಗುವುದೇ? ಆ ಸಂದರ್ಭದಲ್ಲಿ ನನ್ನ ಹಾಗೂ ರಿಕ್ಷಾ ಚಾಲಕನ ಸಂಭಾಷಣೆ ಈ ಕೆಳಗಿನಂತಿತ್ತು.

ನಾನು: ಇಲ್ಲಿಗ್ ಯಾಕ್ ತಗೊಂಡ್ ಬಂದ್ಯಪ್ಪಾ?
ಆತ: ನೀವೇ ಹೇಳಿದ್ರಲ್ಲಿ ಸರ, ಕೋರ್ಟಿಗ್ ಹೋಗ್ಬೆಕ್ ಅಂತಾ
ನಾನು: ಅಲ್ಲಪ್ಪಾ ತಮ್ಮಾ, ನಾನ್ ಅಂದಿದ್ದು ಕೋಟೆ, ಕೋರ್ಟ್ ಅಂತ ಅಂದಿಲ್ ನಾನು
ಆತ: ಏ ಇಲ್ಲ್ ಬಿಡ್ರಿ. ನೀವಂದಂಗೆ ನೀವ್ ಹೇಳಿದ್ ಜಾಗಕೇ ತಂದೀನಿ
ನಾನು: ನಿನ್ಗೆ ಕೋಟೆ ಅಂದ್ರೆ ಗೊತ್ತಿಲ್ಲ ಅನ್ಸುತ್ತೆ. ರಾಜ ಮಹಾರಾಜ್ರು ಮತ್ತೆ ಸುಲ್ತಾನ್ರು ಕಟ್ಟ್ಸಿದ್ದು ಉದ್ದ್ಕೆ ಗ್ವಾಡಿ ಹಂಗ್ ಇರುತ್ತಲ್ಲಾ, ಅದ್ಕೆ ಕೋಟೆ ಅಂತಾರ.
ಆತ: ಅದ್ಕೆ ಕೋಟೆ ಅಂತಾರೆ ಅಂತ ನಿಮ್ಗ್ ಯಾರ್ ಹೇಳಿದ್ರೀ ಸರ?
ನಾನು: ಮತ್ತೇನಂತಾರ?
ಆತ: ಅದ್ಕೆ 'ಕಿಲಾ' ಅಂತಾರ್ರೀ ಸರ, 'ಕಿಲಾ'.
ನಾನು: (ನನ್ನಷ್ಟಕ್ಕೆ ನಕ್ಕು) ಓ ಹಂಗೇನ? ಸರೀಪ್ಪಾ, ನಡೀ ಮತ್ತ, ಕಿಲಾಗ್ ಹೋಗೋಣು.

ಗುಲ್ಬರ್ಗ ಕೋಟೆಯನ್ನು ವಾರಂಗಲ್-ನ ರಾಜಾ ಗುಲ್-ಚಂದ್ ಕಟ್ಟಿಸಿದ್ದ. ದೆಹಲಿಯ ಸುಲ್ತಾನ ಮೊಹಮ್ಮದ್ ಬಿನ್ ತುಘಲಕ್ ದಂಡೆತ್ತಿ ಬಂದು ಗುಲ್ಬರ್ಗವನ್ನು ವಶಪಡಿಸಿ, ಅದರ ಮೇಲ್ವಿಚಾರಣೆಯನ್ನು ತನ್ನ ಸೇನಾಧಿಪತಿಯಾದ ಅಲ್ಲಾವುದ್ದೀನ್ ಬಹ್ಮನ್ ಶಾ, ಇವನಿಗೆ ಒಪ್ಪಿಸಿದನು. ಅತ್ತ ದೆಹಲಿಯಲ್ಲಿ ತುಘಲಕ್ ದುರ್ಬಲನಾಗುತ್ತಿದ್ದಂತೆ, ಇತ್ತ ಅಲ್ಲಾವುದ್ದೀನ್ ಬಹ್ಮನ್ ಶಾ, ಗುಲ್ಬರ್ಗವನ್ನು ತುಘಲಕ್ ಸಾಮ್ರಾಜ್ಯದಿಂದ ಬೇರ್ಪಡಿಸಿ ತನ್ನನ್ನು ತಾನೇ ಅಧಿಪತಿಯೆಂದು ಘೋಷಿಸಿ ಬಹಮನಿ ಸಾಮ್ರಾಜ್ಯವನ್ನು ೧೩೪೭ರಲ್ಲಿ ಸ್ಠಾಪಿಸಿ, ಕೋಟೆಯನ್ನು ೨೬ ಬುರುಜು ಹಾಗೂ ೧೫ ತುಪಾಕಿಗಳೊಂದಿಗೆ ಮತ್ತಷ್ಟು ಬಲಿಷ್ಠಗೊಳಿಸಿದನು. ಗುಲ್ಬರ್ಗ ಕೋಟೆಯನ್ನು ಪ್ರವೇಶಿಸಿದಂತೆ ಮೊದಲಿಗೆ ಕಾಣುವುದು ರಂಗ ಮಹಲ್. ಸುಮಾರು ಎಂಬತ್ತು ಅಡಿಯಷ್ಟು ಎತ್ತರವಿರುವ ಈ ಚೌಕಾಕಾರದ ಕಟ್ಟಡದ ಮೇಲೆ ಮೂರು ತುಪಾಕಿಗಳು ಮೂರು ದಿಕ್ಕಿಗೆ ಮುಖ ಮಾಡಿಕೊಂಡು ನಿಂತಿವೆ. ರಂಗ ಮಹಲ್ ಎಂಬ ಹೆಸರು ಯಾಕೆ ಇಟ್ಟರು ಎನ್ನುವುದು ತಿಳಿಯಲಿಲ್ಲ.


ರಂಗ ಮಹಲಿನಿಂದ ಅನತಿ ದೂರದಲ್ಲಿರುವುದೇ ಭವ್ಯವಾದ ಜಾಮಿಯ ಮಸೀದಿ. ಎರಡನೇ ಬಹಮನಿ ಸುಲ್ತಾನ ಒಂದನೇ ಮಹಮೂದ್ ಶಾ (೧೩೫೮ - ೧೩೭೫), ಈ ವಿಶಾಲವಾದ ೩೮೦೧೬ ಚ ಅ ವಿಸ್ತೀರ್ಣವಿರುವ ಜಾಮಿಯ ಮಸೀದಿಯನ್ನು ೧೩೬೭ರಲ್ಲಿ ಕಟ್ಟಿಸಿದನು. ಈ ಮಸೀದಿ ೨೧೬ ಅಡಿ ಉದ್ದ, ೧೭೬ ಅಡಿ ಅಗಲವಿದ್ದು ಸರಿಸುಮಾರು ೮೦ ಗುಮ್ಮಟಗಳನ್ನು ಹೊಂದಿದೆ. ಮಸೀದಿಯ ಒಳಗಡೆ, ದೊಡ್ಡ ಗುಮ್ಮಟದ ನೇರ ಕೆಳಗೆ ಇರುವ ಜಾಗದಲ್ಲಿ, ಈಗ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಇದೇ ಪ್ರಾರ್ಥನೆ ಸಲ್ಲಿಸುವ ಜಾಗದಲ್ಲಿ ನಾಲ್ಕನೆ ಬಹಮನಿ ಸುಲ್ತಾನನಾಗಿದ್ದ ಒಂದನೆ ದೌದ್ ಶಾನನ್ನು (೧೩೭೮), ಆತ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವಾಗಲೇ ಕೊಲೆ ಮಾಡಲಾಗಿತ್ತು. ಒಂದನೆ ದೌದ್ ಶಾ, ಸುಲ್ತಾನನ ಪಟ್ಟವನ್ನು ತನ್ನ ಕೈಗೆ ತೆಗೆದುಕೊಳ್ಳುವ ಸಲುವಾಗಿ, ಮೂರನೆ ಬಹ್ಮನಿ ಸುಲ್ತಾನನಾದ ಅಲ್ಲಾವುದ್ದೀನ್ ಮುಜಾಹಿದ್ ಶಾನನ್ನು (೧೩೭೫ - ೧೩೭೮) ಕೊಲೆ ಮಾಡಿದ್ದನು. ಇದಕ್ಕೆ ಪ್ರತಿಕಾರವಾಗಿ, ಅಲ್ಲಾವುದ್ದೀನ್ ಮುಜಾಹಿದ್ ಶಾನ ಸೋದರಿ ರುಹ್ ಪರ್ವಾರ್ ಆಘಾ, ಸೇವಕನೊಬ್ಬನ ಮೂಲಕ ದೌದ್ ಶಾನ ಕೊಲೆ ಮಾಡಿಸಿ ಸೇಡು ತೀರಿಸಿಕೊಂಡಳು. ನಾನು ಆ ಜಾಗದಲ್ಲಿ ನಿಂತು, ಯಾವ ರೀತಿ ಕೊಲೆ ಮಾಡಿರಬಹುದು ಎಂದು ಯೋಚಿಸುತ್ತಾ, ನೆತ್ತಿಯ ಮೇಲಿದ್ದ ದೊಡ್ಡ ಗುಮ್ಮಟದ ಒಳಮೇಲ್ಮೈಯ ಅಂದವನ್ನು ಆಸ್ವಾದಿಸುತ್ತಾ ಸ್ವಲ್ಪ ಕಾಲ ಕಳೆದೆ.


ನಂತರ ಮಸೀದಿಯಿಂದ ಹೊರಬಿದ್ದು, ಸ್ವಲ್ಪವೇ ದೂರದಲ್ಲಿದ್ದ ಕೋಟೆಯ ಬುರುಜುಗಳತ್ತ ನಡೆದೆ. ಇಲ್ಲೇ ಇರುವ ಒಂದು ಬುರುಜಿನ ಮೇಲೆ ಮತ್ತೊಂದು ತುಪಾಕಿ ಇದೆ. ಈ ತುಪಾಕಿ ರಂಗ ಮಹಲಿನ ಮೇಲಿರುವ ತುಪಾಕಿಗಳಿಗಿಂತಲೂ ದೊಡ್ಡದಾಗಿದೆ. ಇಲ್ಲಿಂದಲೇ ದೂರದಲ್ಲಿ ಒಂದು ದಿಬ್ಬದ ಮೇಲಿರುವ 'ಚೋರ್ ಗುಂಬಝ್' ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕೋಟೆಯ ಗೋಡೆಗಳು ಈಗಲೂ ಸುದೃಢವಾಗಿವೆ ಆದರೆ ಸುತ್ತಲೂ ಇರುವ ಕಂದಕದಲ್ಲಿರುವ ಕೊಳಚೆ ನೋಡಿದಾಗ ಮಾತ್ರ ಅಸಹ್ಯವೆನಿಸುತ್ತದೆ. ಕೋಟೆಯೊಳಗೆ ವಾಸವಿರುವ ಮುಸಲ್ಮಾನರು ಮಾತ್ರ ಅಲ್ಲಲ್ಲಿ ಬಹಿರ್ದೆಸೆ ಮಾಡುತ್ತಾ, ಅಲ್ಲಲ್ಲಿ ಕೊಳಕನ್ನು ಎಸೆಯುತ್ತಾ, ಕೋಟೆಯನ್ನು ಮತ್ತಷ್ಟು ಅಸಹ್ಯಗೊಳಿಸುತ್ತಾ, 'ತಾವಿದ್ದಲ್ಲಿ ಕೊಳಚೆ - ಕೊಳಚೆಯಿದ್ದಲ್ಲಿ ತಾವು' ಎಂಬ ಮಾತಿಗೆ ತಕ್ಕಂತೆ ಜೀವನ ನಡೆಸುತ್ತಾ, ಬಂದವರನ್ನು ವಿಚಿತ್ರವಾಗಿ ದಿಟ್ಟಿಸುತ್ತಾ ಹಾಯಾಗಿದ್ದಾರೆ.


ಕೋಟೆಯಿಂದ ಮತ್ತೊಂದು ರಿಕ್ಷಾದಲ್ಲಿ ನನ್ನ ಸವಾರಿ ಹೊರಟಿತು ಸೂಫಿ ಸಂತ ಖ್ವಾಜಾ ಬಂದೇ ನವಾಝ್ ದರ್ಗಾದ ಕಡೆಗೆ. ಈತನನ್ನು ಹಝ್ರತ್ ಖ್ವಾಜಾ ಸ್ಯೆಯದ್ ಮೊಹಮ್ಮದ್ ಗೇಸು ದರಾಝ್ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಒಂಬತ್ತನೆ ಬಹಮನಿ ಸುಲ್ತಾನ, ಒಂದನೆ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿ (೧೪೨೨ - ೧೪೩೬), ಈ ದರ್ಗಾವನ್ನು ೧೪೨೨ರಲ್ಲಿ ಕಟ್ಟಿಸಿದನು. ದರ್ಗಾದ ಒಳಗೆ, ಗುಮ್ಮಟದ ಒಳಮೇಲ್ಮೈಯಲ್ಲಿ ಕೆತ್ತಿರುವ ವಿಶಿಷ್ಟ ಹೊಳಪಿನ ಚಿತ್ರಗಳು ಮಾತ್ರ ಅದ್ಭುತವಾಗಿವೆ. ನನಗೆ ಇವುಗಳನ್ನು 'ಚಿತ್ರಗಳು' ಎನ್ನುವ ಬದಲು 'ಹೊಳಪಿನ ಲೇಪನಗಳು' ಅನ್ನುವುದೇ ಸೂಕ್ತ ಎಂದೆಣಿಸಿತು. ದರ್ಗಾದ ಒಳಗೆ ಕುಳಿತು ಸುಮಾರು ೧೦ ನಿಮಿಷಗಳಷ್ಟು ಕಾಲ ಈ ಹೊಳಪಿನ ಲೇಪನಗಳನ್ನು ವೀಕ್ಷಿಸಿ, ಬಂದೇ ನವಾಝನ ಗೋರಿಗೆ ನಮಸ್ಕರಿಸಿ ಹೊರಬಿದ್ದೆ. ದರ್ಗಾದ ಬಾಗಿಲಲ್ಲೇ ಹತ್ತಾರು ಹೆಂಗಸರು ಕತ್ತು ಕೊಂಕಿಸಿ ಒಳಗಿನ ದೃಶ್ಯವನ್ನು ಹಾಗೂ ಬಂದೇ ನವಾಝನ ಗೋರಿಯನ್ನು ನೋಡಲು ಹಪಿಹಪಿಸುತ್ತಿದರು. ದರ್ಗಾದ ಒಳಗೆ ಛಾಯಾಚಿತ್ರ ತೆಗೆಯುವುದು ಮತ್ತು ಹೆಂಗಸರಿಗೆ ಪ್ರವೇಶ ಇವೆರಡನ್ನು ನಿಷೇಧಿಸಲಾಗಿದೆ.


ದರ್ಗಾದ ಹೊರಗಡೆ ಎಲ್ಲಾ ಕಡೆ ಗೋರಿಗಳೇ ಗೋರಿಗಳು. ಮುಘಲರು ಕಟ್ಟಿಸಿದ್ದು ಎನ್ನಲಾದ ಒಂದು ಮಸೀದಿ ದರ್ಗಾದ ಪ್ರಾಂಗಣದೊಳಗೆ ಇದೆ. ಸಮೀಪದಲ್ಲೆ ಕೆಲವು ಹೆಂಗಸರು ಜಗಲಿಯೊಂದಕ್ಕೆ ತಲೆ ಬಡಿದುಕೊಳ್ಳುತ್ತಿದ್ದರು. ಅಲ್ಲೇ ಕೂತಿದ್ದವನೊಬ್ಬನಲ್ಲಿ ಅವರು ಹಾಗೇಕೆ ಮಾಡುತ್ತಿದ್ದಾರೆಂದು ಕೇಳಿ ಒಂದು ದೊಡ್ಡ ತಪ್ಪು ಮಾಡಿದೆ ನೋಡಿ, ಆತ ಮುಂದಿನ ೧೫ ನಿಮಿಷಗಳ ಕಾಲ ನನ್ನನ್ನು ಬಿಡಲೇ ಇಲ್ಲ. ಅದೆಷ್ಟೊ ಕೊರಕರನ್ನು ಕಂಡಿದ್ದೇನೆ, ಆದರೆ ಈತ ಮಾತ್ರ ಅವರೆಲ್ಲರನ್ನು ಮೀರಿ ನಿಲ್ಲುವ ಅನಾಹುತ ಕೊರಕ. 'ಯು ಸೀ, ದ ಮ್ಯಾಜಿಕಲ್ ಅಟ್ಮಾಸ್ಫಿಯರ್ ಆಫ್ ದಿಸ್ ಪ್ಲೇಸ್.......' ಅಂತ ಆಂಗ್ಲ ಭಾಷೆಯಲ್ಲಿ ಶುರುಮಾಡಿದವ ಮುಂದಿನ ೧೫ ನಿಮಿಷಗಳ ಕಾಲ ಹಿಂದಿ, ಕನ್ನಡ ಹಾಗೂ ಆಂಗ್ಲ ಭಾಷೆಗಳ ಮಿಶ್ರಣದಲ್ಲಿ ನನ್ನ ಕೈಯನ್ನು ಬಲವಾಗಿ ಹಿಡಿದು ಏನೇನೋ ಕೊರೆದ, ಆದರೆ ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಲಿಲ್ಲ. ಆತನಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯಿತು. ಅಲ್ಲೊಬ್ಬ ತನ್ನ ಬೇಗಮ್ ಜತೆ ನಿಂತಿದ್ದ. ಆತನಲ್ಲಿ ಕೇಳಿದರೆ, ದುರುಗುಟ್ಟಿಕೊಂಡು ನೋಡಿದ. ಇಬ್ಬರು ಇಸ್ಲಾಮಿಕ್ ಸುಂದರಿಯರು ಸ್ವಲ್ಪ ದೂರ ನಿಂತು ಆ ಹೆಂಗಸರು ತಲೆ ಬಡಿದುಕೊಳ್ಳುವುದನ್ನು ತದೇಕಚಿತ್ತದಿಂದ ನೋಡುತ್ತಿದ್ದರು. ಅವರಲ್ಲಿ ಕೇಳಿದರೆ, ಉತ್ತರ ನೀಡುವುದರ ಬದಲು ಸುಂದರವಾಗಿ ನಕ್ಕರು. ಈ ಸಾಬಿಗಳೇ ವಿಚಿತ್ರ.

ನಂತರ ನಾನು ನಡೆದಿದ್ದು ಹಫ್ತ್ ಗುಂಬಝ್ ಕಡೆಗೆ. ದರ್ಗಾಕ್ಕೆ ರಿಕ್ಷಾದಲ್ಲಿ ಹೋಗುತ್ತಿರುವಾಗ, ಹಫ್ತ್ ಗುಂಬಝ್ ದಾಟಿ ಹೋಗಿದ್ದರಿಂದ ದಾರಿ ಕೇಳುವ ಅವಶ್ಯಕತೆಯಿರಲಿಲ್ಲ. ದರ್ಗಾದಿಂದ ನಡೆದರೆ ೧೦ ನಿಮಿಷದಲ್ಲಿ ಹಫ್ತ್ ಗುಂಬಝ್ ತಲುಪಬಹುದು. ಇಲ್ಲಿ ೫ ಗೋರಿಗಳಿವೆ (ಮೂರನೇ, ನಾಲ್ಕನೇ, ಆರನೇ, ಏಳನೇ ಮತ್ತು ಎಂಟನೇ ಬಹಮನಿ ಸುಲ್ತಾನರ ಗೋರಿಗಳು).


ಉಳಿದ ೩ ಗೋರಿಗಳು - ಬಹಮನಿ ಸಾಮ್ರಾಜ್ಯದ ಸಂಸ್ಥಾಪಕ ಅಲ್ಲಾವುದ್ದೀನ್ ಬಹ್ಮನ್ ಶಾ, ಎರಡನೇ ಮತ್ತು ಐದನೇ ಸುಲ್ತಾನರ ಗೋರಿಗಳು - 'ಸೆ ಗುಂಬಝ್' ಎಂಬಲ್ಲಿ ಇವೆ. ಆದರೆ ಈ ಸ್ಥಳ ಗುಲ್ಬರ್ಗಾದಲ್ಲಿ ಎಲ್ಲಿದೆ ಎನ್ನುವುದು ಎಷ್ಟು ವಿಚಾರಿಸಿದರೂ ತಿಳಿಯಲಿಲ್ಲ. ನಾನು ಕೇಳಿದವರಲ್ಲಿ ಹೆಚ್ಚಿನವರಿಗೆ 'ಸೆ ಗುಂಬಝ್' ಹೆಸರೇ ಹೊಸದಾಗಿತ್ತು, ಇನ್ನು ಕೆಲವರು ಹೆಸರು ಕೇಳಿದ್ದರು ಆದರೆ ಎಲ್ಲಿದೆ ಎಂದು ತಿಳಿಯದವರಾಗಿದ್ದರು. ಅಂತೂ ನನಗೆ 'ಸೆ ಗುಂಬಝ್' ನೋಡಲು ಆಗಲಿಲ್ಲ. ಒಂಬತ್ತನೆ ಬಹ್ಮನಿ ಸುಲ್ತಾನ ಒಂದನೆ ಶಿಯಾಬುದ್ದೀನ್ ಅಹ್ಮದ್ ಶಾ ವಾಲಿ (೧೪೨೨ - ೧೪೩೬), ೧೪೨೬ರಲ್ಲಿ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್-ಗೆ ವರ್ಗಾಯಿಸಿದ್ದರಿಂದ ಉಳಿದ ಬಹಮನಿ ಸುಲ್ತಾನರ ಗೋರಿಗಳು ಬೀದರ್ ಸಮೀಪದ ಅಶ್ತೂರ್-ನಲ್ಲಿವೆ.

ಹಫ್ತ್ ಗುಂಬಝ್ ನೋಡಿದ ನಂತರ ಅಳಂದ ರಸ್ತೆಯಲ್ಲಿರುವ ಚೋರ್ ಗುಂಬಝ್ ಕಡೆಗೆ ಆಟೋದಲ್ಲಿ ತೆರಳಿದೆ. ಎತ್ತರವಾದೊಂದು ದಿಬ್ಬದ ಮೇಲಿರುವುದರಿಂದ, ಗುಲ್ಬರ್ಗದಲ್ಲಿ ಎಲ್ಲಿಂದ ನೋಡಿದರೂ ಈ ಚೋರ್ ಗುಂಬಝ್ ಕಾಣಿಸುತ್ತದೆ. ಬಿಜಾಪುರದ ಗೋಲ್ ಗುಂಬಝ್ ಮಾದರಿಯಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು. ಯಾರು ಕಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಿರ್ಜನ ಪ್ರದೇಶದಲ್ಲಿರುವ ಚೋರ್ ಗುಂಬಝ್, ಅಂತಹ ವಿಶೇಷವೇನಿಲ್ಲದ ನಾಲ್ಕು ಗೋಡೆಗಳುಳ್ಳ ಎರಡಂತಸ್ತಿನ ಪಾಳು ಬೀಳುತ್ತಿರುವ ಸಾಧಾರಣ ಸೌಧವಾದರೂ ಭೇಟಿ ನೀಡಲು ಯೋಗ್ಯವಾಗಿರುವಂತದ್ದು. ಒಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಸ್ವಾಗತಿಸಿದ್ದು ಧೂಳು, ಕಳಚಿ ಬಿದ್ದಿರುವ ಗೋಡೆಯ ಮೇಲುಕವಚಗಳು, ಗವ್ವೆಂದು ಬೀಸುತ್ತಿದ್ದ ಗಾಳಿ, ಎದ್ದು ಹೋದ ನೆಲಹಾಸು ಮತ್ತು ಕಪ್ಪನೆಯ ಬಣ್ಣ ಕಳೆದುಕೊಂಡ ಗುಮ್ಮಟದ ಒಳಮೇಲ್ಮೈ.


ಒಳಗಡೆ ಇರುವುದು ಎರಡಂತಸ್ತು ಉದ್ದದ ಒಂದೇ ದೊಡ್ಡ ಕೋಣೆ. ಗೋಡೆಗಳ ಮಧ್ಯೆ ಮನುಷ್ಯನೊಬ್ಬ ನಡೆದಾಡಲು ಅವಶ್ಯವಿರುವ ಜಾಗವನ್ನಷ್ಟೇ ಕೊರೆದು ಮೇಲಿನ ಅಂತಸ್ತುಗಳಿಗೆ ಹೋಗಲು ಮೆಟ್ಟಿಲುಗಳನ್ನು ಮಾಡಿದ್ದಾರೆ. ಕತ್ತಲೆ ಕವಿದ ಮೆಟ್ಟಿಲುಗಳನ್ನು ನೋಡಿ ಹೆದರಿಕೆಯಾದರೂ, ಹುಂಬ ಧೈರ್ಯದಿಂದ ಮೇಲಿನ ಅಂತಸ್ತುಗಳಿಗೆ ಹೋದೆ. ಒಬ್ಬನೇ ಇದ್ದಿದ್ದರಿಂದ ಚೋರ್ ಗುಂಬಝ್-ನಲ್ಲಿ 'ಚೋರ್'-ನಂತೆ ಆಚೀಚೆ ಓಡಾಡುತ್ತಿರುವಂತೆ ಭಾಸವಾಯಿತು. ಮೊದಲನೇ ಅಂತಸ್ತಿಗೆ ಒಂದು ಸುತ್ತು ಹಾಕಿ ಎರಡನೆ ಅಂತಸ್ತಿಗೆ ತೆರಳಿದೆ. ಗುಮ್ಮಟದ ಸುತ್ತ ಒಂದು ಸುತ್ತು ತಿರುಗುತ್ತಿರುವಾಗ, ರಭಸವಾಗಿ ಬೀಸುತ್ತಿದ್ದ ಗಾಳಿ ಭಯವನ್ನು ಹುಟ್ಟಿಸುತ್ತಿತ್ತು. ಮೆಟ್ಟಿಲುಗಳನ್ನು, ಸ್ಥಳ ವ್ಯರ್ಥ ಮಾಡದೆ ನಿರ್ಮಿಸಿರುವ ಪರಿಯನ್ನು ಮೆಚ್ಚಬೇಕು. ನಂತರ ಬೀದರ್ ಹಾಗೂ ಬಸವಕಲ್ಯಾಣಗಳಲ್ಲೂ ನೋಡಿದೆಲ್ಲಾ ಕಡೆ ಮೆಟ್ಟಿಲುಗಳ ರಚನೆ ನನ್ನನ್ನು ಬಹುವಾಗಿ ಆಕರ್ಷಿಸಿತು.


ಅದೇ ಆಟೋದಲ್ಲಿ ನಂತರ ತೆರಳಿದ್ದು ಶರಣ ಬಸವೇಶ್ವರ ದೇವಸ್ಥಾನಕ್ಕೆ (ಮೇಲಿರುವ ಚಿತ್ರ). ಸುಂದರವಾಗಿ ಹಾಗೂ ಅದ್ಭುತವಾಗಿ ನಿರ್ಮಿಸಲಾಗಿರುವ ಈ ದೇವಸ್ಥಾನ, ಗೋರಿ - ಗುಂಬಝ್ ನೋಡಿ ನೋಡಿ ದಣಿಯುತ್ತಿದ್ದ ನನಗೆ ಅಪರಿಮಿತ ಉಲ್ಲಾಸವನ್ನು ನೀಡಿತು. ಈ ದೇವಸ್ಥಾನವನ್ನು ಶಾರ್ಟ್ ಆಗಿ ಎಸ್.ಬಿ.ಟೆಂಪಲ್ ಎಂದೂ ಕರೆಯುತ್ತಾರೆ. ಅದ್ದೂರಿಯಾಗಿ ಖರ್ಚು ಮಾಡಿ ಈ ದೇವಸ್ಥಾನವನ್ನು ನಿರ್ಮಿಸಲಾಗಿರುವುದರಿಂದ ಆಧುನಿಕ ನಿರ್ಮಾಣ ಶೈಲಿಯ ಎಲ್ಲಾ ಕುರುಹುಗಳನ್ನು ಕಾಣಬಹುದು. ವಿಶಾಲವಾಗಿರುವ ಪ್ರಾಂಗಣ, ಪ್ರಶಾಂತ ವಾತಾವರಣ ಮತ್ತು ಕಂಬಗಳ ಮೇಲಿನ ಕರಕುಶಲ ಕೆಲಸ ಇಲ್ಲಿನ ವೈಶಿಷ್ಟ್ಯ. ಮುಂಜಾನೆಯಿಂದ ತಿರುಗಾಡಿ ದಣಿದಿದ್ದ ನನಗೆ ವಿರಮಿಸಲು ಎಸ್.ಬಿ.ಟೆಂಪಲ್ ಸೂಕ್ತ ಸ್ಥಳವಾಗಿತ್ತು.

ವಸತಿ ಗೃಹದಿಂದ 'ಚೆಕ್ ಔಟ್' ಮಾಡಿ ಗುಲ್ಬರ್ಗ ಬಸ್ ನಿಲ್ದಾಣಕ್ಕೆ ಬಂದಾಗ ಮುಗಳಖೋಡದಿಂದ ಬಂದ ಬಸ್ಸು ಬೀದರ್-ಗೆ ಹೊರಡಲು ಅಣಿಯಾಗುತ್ತಿತ್ತು. ಸಂಜೆ ೬ಕ್ಕೆ ಗುಲ್ಬರ್ಗ ಬಿಟ್ಟ ಬಸ್ಸು ಹುಮ್ನಾಬಾದ್ ಮೂಲಕ ರಾತ್ರಿ ೯.೧೫ಕ್ಕೆ ಬೀದರ್ ತಲುಪಿತು. ಇಲ್ಲೊಂದು ವಸತಿ ಗೃಹಕ್ಕೆ ತೆರಳಿ ಮರುದಿನದ ಬೀದರ್ ಸುತ್ತಾಟವನ್ನು ಎದುರುನೋಡುತ್ತಾ ನಿದ್ರಾವಶನಾದೆ.

ಮುಂದುವರಿಯುವುದು...೨ನೇ ಭಾಗದಲ್ಲಿ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

KOLI PADARTHA MATHU MRPL NALLI RAJE HAKADE NIMMA FRIENDS KAI KOTTA KARANA NEEVU OBBERE HODADU NIMMA KARNATAKA NODUVE ASAKTHIYANNU ETHI THORISUTHADE.NIMMA ARTCLE ODI NAMMAGE KARNATAKA SUTHUVA HAMBALA JASTHIYAGIDE.ADARE NIMMA FRIENDS MELE E NETNALLI TEEKEEESUVA AGATHYA ERALILLA ANTHA KANUTHADE.

ರಾಜೇಶ್ ನಾಯ್ಕ ಹೇಳಿದರು...

ಮಾನ್ಯರೆ,

ಲೇಖನ ಓದಿ ತಮಗೆ ಕರ್ನಾಟಕ ಸುತ್ತುವ ಹಂಬಲ ಜಾಸ್ತಿಯಾಗಿದ್ದಲ್ಲಿ ನಾನು ಈ ಲೇಖನ ಬರೆದಿದ್ದು ಸಾರ್ಥಕವಾಯ್ತು. ನನ್ನ ಈ ಇಬ್ಬರು ಗೆಳೆಯರ ಬಗ್ಗೆ ನಾನು ಬರೆದದ್ದು ತಮಗೆ ಇಷ್ಟವಾಗಲಿಲ್ಲ ಎಂದು ಕಾಣುತ್ತೆ. ನನ್ನ ಈ ಇಬ್ಬರು 'ಕರ್ನಾಟಕ ಸುತ್ತಾಡಲು ಸಮಯವಿಲ್ಲ ಆದರೆ ಗೋವಾ, ಹಿಮಾಲಯ ಇತ್ಯಾದಿ ಸುತ್ತಾಡಲು ಸಮಯವಿದೆ' ಎಂಬ ಮನೋಭಾವ ಹೊಂದಿರುವ ಗೆಳೆಯರು ತಮ್ಮ ಆಪ್ತರೇನು? ತಾವು ಟಿಪ್ಪಣಿಯೊಂದಿಗೆ ತಮ್ಮ ನಾಮಧೇಯವನ್ನು ಬರೆದಿದ್ದರೆ ಚೆನ್ನಾಗಿರುತ್ತಿತ್ತು!