ಸೋಮವಾರ, ಜನವರಿ 15, 2007

ಕರ್ನಾಟಕ ಕ್ರಿಕೆಟ್ - ೨

ಯೆರೆ ಗೌಡರ ಸಮರ್ಥ ನೇತೃತ್ವದಲ್ಲಿ ಕರ್ನಾಟಕ ಈ ಋತುವಿನ (೨೦೦೬-೦೭) ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದೆ. ಎಲೀಟ್ ಲೀಗ್ ನ ತನ್ನ ಗುಂಪಿನಲ್ಲಿ ಆಡಿದ ೭ ಪಂದ್ಯಗಳಲ್ಲಿ ೩ ಗೆಲುವು (ಹರ್ಯಾನ, ಉತ್ತರ ಪ್ರದೇಶ ಮತ್ತು ತಮಿಳುನಾಡು ವಿರುದ್ಧ), ೩ ಡ್ರಾ (ದೆಹಲಿ, ಅಂಧ್ರ ಪ್ರದೇಶ ಮತ್ತು ಸೌರಾಷ್ಟ್ರ ವಿರುದ್ಧ) ಮತ್ತು ೧ ಸೋಲಿನ (ಬರೋಡ ವಿರುದ್ಧ) ಸಾಧನೆಯೊಂದಿಗೆ ದ್ವೀತಿಯ ಸ್ಥಾನ ಪಡೆದಿದೆ.

ಜನವರಿ ೨೩ ರಿಂದ ೨೭ ರವರೆಗೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ, ಬಂಗಾಲವನ್ನು ಎದುರಿಸಲಿದೆ. ಈ ಪಂದ್ಯ ಕೊಲ್ಕತ್ತಾದಲ್ಲಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಕರ್ನಾಟಕಕ್ಕೆ 'ಹೋಮ್ ಅಡ್ವಾಂಟೇಜ್' ಇರುವುದಿಲ್ಲ. ಬಂಗಾಲ, ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಕರ್ನಾಟಕಕ್ಕಿಂತ ಬಲಶಾಲಿಯಾಗಿರುವ ತಂಡ. ರಾಬಿನ್ ಉತ್ತಪ್ಪ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಕಾರಣ ಅವರ ಅನುಪಸ್ತಿತಿ ಕರ್ನಾಟಕಕ್ಕೆ ದುಬಾರಿಯಾಗಬಹುದು. ಈ ದೊಡ್ಡ ಸವಾಲನ್ನು ಕರ್ನಾಟಕದ ಆಟಗಾರರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡೋಣ. ರಣಜಿ ಟ್ರೋಫಿ ಇತಿಹಾಸದಲ್ಲಿ ಸೆಮಿಫೈನಲ್ ನಲ್ಲಿ ಕರ್ನಾಟಕ ೩ ಸಲ ಬಂಗಾಲದೊಂದಿಗೆ ಆಡಿದ್ದು ಎರಡು ಬಾರಿ ಸೋತು ಒಂದು ಬಾರಿ ಗೆದ್ದಿದೆ.

ಸದ್ಯಕ್ಕೆ ನಾಯಕ ಯೆರೆ ಗೌಡ, ಕೋಚ್ ವೆಂಕಟೇಶ್ ಪ್ರಸಾದ್, ಮ್ಯಾನೇಜರ್ ರಘುರಾಮ್ ಭಟ್ ಮತ್ತು ತಂಡದ ಎಲ್ಲಾ ಸದಸ್ಯರಿಗೆ ರಣಜಿ ಟ್ರೋಫಿ ಸೆಮಿಫೈನಲ್ ತಲುಪಿದ್ದಕ್ಕೆ ಅಭಿನಂದನೆಗಳು ಮತ್ತು ಬಂಗಾಲ ವಿರುದ್ಧದ ಪಂದ್ಯಕ್ಕೆ ಶುಭ ಹಾರೈಕೆಗಳು.

೧೯೯೯-೨೦೦೦ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ರಣಜಿ ಸೆಮಿಫೈನಲ್ ನಲ್ಲಿ ಹೈದರಾಬಾದ್ ಗೆ ಪ್ರಥಮ ಬಾರಿಯ ಮುನ್ನಡೆಯ ಆಧಾರದಲ್ಲಿ ಸೋತ ೭ ವರ್ಷಗಳ ಬಳಿಕ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ತಲುಪಿದೆ. ಕಾಕತಾಳೀಯವೆಂದರೆ ಆಗ ಹೈದರಾಬಾದ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ತಂಡದ ನಾಯಕರಾಗಿದ್ದ ವೆಂಕಿ, ಇಂದು ಕೋಚ್ ಆಗಿದ್ದಾರೆ. ಈಗ ತಂಡದಲ್ಲಿರುವ ಮತ್ತು ೭ ವರ್ಷಗಳ ಹಿಂದಿನ ಸೆಮಿಫೈನಲ್ ನಲ್ಲಿ ಆಡಿದ ಆಟಗಾರರೆಂದರೆ ಬ್ಯಾರಿಂಗ್ಟನ್ ರೋಲಂಡ್, ಬಾಲಚಂದ್ರ ಅಖಿಲ್, ಸುನಿಲ್ ಜೋಶಿ ಮತ್ತು ತಿಲಕ್ ನಾಯ್ಡು.

ರಣಜಿ ಟ್ರೋಫಿ ಪಂದ್ಯಾಟದಲ್ಲಿ ಕರ್ನಾಟಕಕ್ಕಿದು ೨೬ನೇ ಸೆಮಿಫೈನಲ್ ಪ್ರವೇಶ. ರಣಜಿ ಟ್ರೋಫಿ ಆರಂಭವಾದದ್ದು ೧೯೩೪-೩೫ರಲ್ಲಿ. ೭೩ ಋತುಗಳಲ್ಲಿ ಕರ್ನಾಟಕ ೨೬ ಸಲ ಸೆಮಿಫೈನಲ್ ಪ್ರವೇಶಿಸಿದಂತಾಯಿತು. ಕರ್ನಾಟಕ ೧೧ ಬಾರಿ ಸೆಮಿಫೈನಲ್ ನಲ್ಲಿ ಗೆದ್ದರೆ, ೧೪ ಬಾರಿ ಸೋತಿದೆ. ಈ ಬಾರಿ ಏನಾಗಬಹುದು?

೧೯೭೩-೭೪ ಋತುವಿನಲ್ಲಿ ಪ್ರಥಮ ಬಾರಿಗೆ ನಮ್ಮ ರಣಜಿ ತಂಡವನ್ನು 'ಕರ್ನಾಟಕ'ವೆಂದು ಕರೆಯಲಾಯಿತು. ಅದುವರೆಗೆ ನಮ್ಮ ತಂಡವನ್ನು 'ಮೈಸೂರು' ಎಂದು ಕರೆಯಲಾಗುತ್ತಿತ್ತು. ಮೈಸೂರು ಎಂದು ಕರೆಯಲಾಗುತ್ತಿದ್ದಾಗ ೧೨ ಬಾರಿ ಸೆಮಿಫೈನಲ್ ಪ್ರವೇಶವಾಗಿ ೨ ಬಾರಿ ಸೆಮಿಫೈನಲ್ ಗೆದ್ದರೆ, ಕರ್ನಾಟಕ ನಾಮಧೇಯದೊಂದಿಗೆ ೧೩ ಬಾರಿ ಸೆಮಿಫೈನಲ್ ಪ್ರವೇಶವಾಗಿ ೯ ಬಾರಿ ಸೆಮಿಫೈನಲ್ ಗೆಲ್ಲಲಾಗಿದೆ.

ಆಸಕ್ತಿಯುಳ್ಳವರಿಗಾಗಿ ಕರ್ನಾಟಕ ಸೆಮಿಫೈನಲ್ ತಲುಪಿದ ಋತುಗಳ ಪಟ್ಟಿ ಮತ್ತು ಸೆಮಿಫೈನಲ್ ಪಂದ್ಯಗಳ ಫಲಿತಾಂಶ ಈ ಕೆಳಗಿದೆ.

ಋತು ನಾಯಕ ವಿರೋಧಿ ತಂಡ ಫಲಿತಾಂಶ

೧೯೪೧-೪೨ ಶಫಿ ದಾರಾಶಾಹ ಬಂಗಾಲ ಗೆಲುವು
೧೯೪೫-೪೬ ಬಿ.ಕೆ.ಗರುಡಾಚಾರ್ ಹೋಳ್ಕರ್ ಸೋಲು
೧೯೫೧-೫೨ ಪಿ.ಆರ್.ಶ್ಯಾಮಸುಂದರ್ ಮುಂಬಾಯಿ ಸೋಲು
೧೯೫೨-೫೩ ಪಿ.ಆರ್.ಶ್ಯಾಮಸುಂದರ್ ಬಂಗಾಲ ಸೋಲು
೧೯೫೯-೬೦ ಎ.ಎಸ್.ಕೃಷ್ಣಸ್ವಾಮಿ ಬಿಹಾರ ಗೆಲುವು
೧೯೬೩-೬೪ ವಿ.ಸುಬ್ರಮಣ್ಯ ಮುಂಬಾಯಿ ಸೋಲು
೧೯೬೫-೬೬ ವಿ.ಸುಬ್ರಮಣ್ಯ ರಾಜಸ್ಥಾನ ಸೋಲು
೧೯೬೬-೬೭ ವಿ.ಸುಬ್ರಮಣ್ಯ ಮುಂಬಾಯಿ ಸೋಲು
೧೯೬೮-೬೯ ವಿ.ಸುಬ್ರಮಣ್ಯ ಬಂಗಾಲ ಸೋಲು
೧೯೬೯-೭೦ ಇ.ಎ.ಎಸ್.ಪ್ರಸನ್ನ ಮುಂಬಾಯಿ ಸೋಲು
೧೯೭೦-೭೧ ಪಿ.ಆರ್.ಅಶೋಕಾನಂದ್ ಮಹಾರಾಷ್ಟ್ರ ಸೋಲು
೧೯೭೧-೭೨ ಇ.ಎ.ಎಸ್.ಪ್ರಸನ್ನ ಮುಂಬಾಯಿ ಸೋಲು
೧೯೭೩-೭೪ ಇ.ಎ.ಎಸ್.ಪ್ರಸನ್ನ ಮುಂಬಾಯಿ ಗೆಲುವು
೧೯೭೪-೭೫ ಇ.ಎ.ಎಸ್.ಪ್ರಸನ್ನ ದೆಹಲಿ ಗೆಲುವು
೧೯೭೫-೭೬ ವಿ.ಎಸ್.ವಿಜಯ್ ಕುಮಾರ್ ಬಿಹಾರ ಸೋಲು
೧೯೭೭-೭೮ ಇ.ಎ.ಎಸ್.ಪ್ರಸನ್ನ ದೆಹಲಿ ಗೆಲುವು
೧೯೭೮-೭೯ ಜಿ.ಆರ್.ವಿಶ್ವನಾಥ್ ಬರೋಡ ಗೆಲುವು
೧೯೮೧-೮೨ ಜಿ.ಆರ್.ವಿಶ್ವನಾಥ್ ಮುಂಬಾಯಿ ಗೆಲುವು
೧೯೮೨-೮೩ ಬೃಜೇಶ್ ಪಟೇಲ್ ಹರ್ಯಾನ ಗೆಲುವು
೧೯೮೪-೮೫ ಜಿ.ಆರ್.ವಿಶ್ವನಾಥ್ ದೆಹಲಿ ಸೋಲು
೧೯೮೬-೮೭ ಸದಾನಂದ್ ವಿಶ್ವನಾಥ್ ದೆಹಲಿ ಸೋಲು
೧೯೯೫-೯೬ ರಾಹುಲ್ ದ್ರಾವಿಡ್ ಹೈದರಾಬಾದ್ ಗೆಲುವು
೧೯೯೭-೯೮ ರಾಹುಲ್ ದ್ರಾವಿಡ್ ಹೈದರಾಬಾದ್ ಗೆಲುವು
೧೯೯೮-೯೯ ಸುಜಿತ್ ಸೋಮಸುಂದರ್ ಪಂಜಾಬ್ ಗೆಲುವು
೯೯-೨೦೦೦ ವೆಂಕಟೇಶ್ ಪ್ರಸಾದ್ ಹೈದರಾಬಾದ್ ಸೋಲು
೨೦೦೬-೦೭ ಯೆರೆ ಗೌಡ ಬಂಗಾಲ ?

ಕಾಮೆಂಟ್‌ಗಳಿಲ್ಲ: