ಭಾನುವಾರ, ಜನವರಿ 29, 2012

ಶಾಂತೇಶ್ವರ ದೇವಾಲಯ - ತಿಳವಳ್ಳಿ


ಶಾಸನಗಳಲ್ಲಿ ಸಾವಂತೇಶ್ವರ ಎಂದು ಕರೆಯಲಾಗಿರುವ ದೇವಾಲಯವನ್ನು ಇಂದು ಶಾಂತೇಶ್ವರ ಎಂದು ಕರೆಯಲಾಗುತ್ತದೆ. ಪೂರ್ವಾಭಿಮುಖವಾಗಿರುವ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲ ಸಭಾಮಂಟಪವನ್ನು ಹೊಂದಿದೆ.


ಈ ದೇವಾಲಯ ಇನ್ನೂ ಸುಸ್ಥಿತಿಯಲ್ಲಿರುವುದು ನಾವೆಲ್ಲಾ ಸಂತೋಷಪಡಬೇಕಾದ ವಿಷಯ. ದೇವಾಲಯಕ್ಕೊಂದು ಪ್ರಾಂಗಣ ರಚಿಸುವುದರಲ್ಲಿ ವಿಳಂಬವಾದ ಕಾರಣ ಸಮೀಪದವರೆಗೂ ಮನೆಗಳಿವೆ. ದೇವಾಲಯ ಸಂಪೂರ್ಣವಾಗಿ ಕಾಣುವಂತೆ ಚಿತ್ರ ತೆಗೆಯಲು ಯಾವ ದಿಕ್ಕಿನಿಂದಲೂ ನನಗೆ ಸಾಧ್ಯವಾಗಲಿಲ್ಲ. ವಿಶಾಲ ಕೋನ ಮಸೂರ ಇರುವ ಛಾಯಾಚಿತ್ರಗ್ರಾಹಿ ಇದ್ದರೆ ಸಾಧ್ಯವಾಗಬಹುದು. ಪ್ರಾಂಗಣದ ಒಳಗೆಲ್ಲಾ ಆಳೆತ್ತರದ ಹುಲ್ಲುಗಳು ಬೆಳೆದುಬಿಟ್ಟಿವೆ. ಇವುಗಳನ್ನು ತೆಗೆದು ಸ್ವಚ್ಛಗೊಳಿಸಿದರೆ ದೇವಾಲಯ ಇನ್ನಷ್ಟು ಆಕರ್ಷಕವಾಗಿ ಕಾಣಬಹುದು.


ಗರ್ಭಗುಡಿಯ ದ್ವಾರ ಸಪ್ತಶಾಖೆಗಳನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಈ ಶಾಖೆಗಳಲ್ಲಿರುವ ಕೆತ್ತನೆಗಳು ಅಲಂಕಾರಿಕ ತರಹದ್ದಾಗಿದ್ದು ಸಾಧಾರಣವಾಗಿವೆ. ಶಾಖೆಗಳ ತಳಭಾಗದಲ್ಲಿರುವ ಮಾನವ ರೂಪದ ಕೆತ್ತನೆಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಗರ್ಭಗುಡಿಯಲ್ಲಿ ಎರಡುವರೆ ಅಡಿ ಎತ್ತರದ ಪಾಣಿಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದ್ದು, ದಿನಾಲೂ ಪೂಜೆ ಸಲ್ಲಿಸಲಾಗುತ್ತದೆ.


ಅಂತರಾಳದ ದ್ವಾರವು ಚತುರ್ಶಾಖ ತರಹದ್ದಾಗಿದ್ದು, ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನು ಹೊಂದಿದೆ. ಅಂತರಾಳದ ದ್ವಾರದ ಮೇಲಿರುವ ಅಡ್ಡಪಟ್ಟಿಯಲ್ಲಿ ಹಲವಾರು ನೃತ್ಯಗಾರರು ಮತ್ತು ಸಂಗೀತಗಾರರ ಸಣ್ಣ ಸಣ್ಣ ಕೆತ್ತನೆಗಳಿವೆ. ಅಂತರಾಳದಲ್ಲಿಯೇ ನಂದಿಯ ಮೂರ್ತಿಯಿದೆ.


ಸಭಾಮಂಟಪದಲ್ಲಿ ಒಟ್ಟು ೪೮ ಕಂಬಗಳಿದ್ದು ಸುತ್ತಲೂ ಕಕ್ಷಾಸನವಿದೆ. ಮೂರು ದಿಕ್ಕುಗಳಿಂದ ಪ್ರವೇಶಿಸಬಹುದಾದ ಸಭಾಮಂಟಪದ ಮಧ್ಯಭಾಗದಲ್ಲಿ ಅರ್ಧ ಅಡಿ ಎತ್ತರದ ವೇದಿಕೆ ಮೇಲೆ ೧೨ ಕಂಬಗಳ ನವರಂಗವಿದೆ. ನವರಂಗದ ಭುವನೇಶ್ವರಿಯಲ್ಲಿ ತಲೆಕೆಳಗಾಗಿರುವ ತಾವರೆಯ ಕೆತ್ತನೆ ಇದೆ. ತಾವರೆಯ ಕೆತ್ತನೆ ಸುಂದರವಾಗಿದ್ದರೂ, ಮೊಗ್ಗಿನ ಕೆತ್ತನೆ ಅಪೂರ್ಣವೆನಿಸುತ್ತದೆ. ಈ ತಾವರೆಯ ಸುತ್ತಲೂ ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ.


ಸಭಾಮಂಟಪದಲ್ಲಿ ನಾಲ್ಕು ದೇವಕೋಷ್ಠಗಳಿದ್ದು ಇವುಗಳಲ್ಲಿ ಒಂದು ಖಾಲಿಯಿದೆ. ಉಳಿದ ಮೂರರಲ್ಲಿ ಕ್ರಮವಾಗಿ ಮಹಿಷಮರ್ದಿನಿ, ತಂಬೂರಿ ವಾದಕ ಮತ್ತು ಸಪ್ತಮಾತೃಕೆಯರ ಮೂರ್ತಿಗಳಿವೆ. ಈ ವಿಗ್ರಹಗಳು ಪಾಚಿಗಟ್ಟಿ ಹಾಳಾಗುತ್ತಿವೆ.


ತಿಳವಳ್ಳಿಯಲ್ಲಿ ಕಲ್ಯಾಣ ಚಾಲುಕ್ಯ, ಯಾದವ ಮತ್ತು ವಿಜಯನಗರ ಅರಸರ ಕಾಲದ ೩೦ಕ್ಕೂ ಅಧಿಕ ಶಿಲಾಶಾಸನಗಳು ದೊರಕಿವೆ. ಇವುಗಳಲ್ಲಿ ತಿಳವಳ್ಳಿಯನ್ನು ’ಅನಾದಿ ಅಗ್ರಹಾರ ತಿಳವಳ್ಳಿ’ ಎಂದು ಕರೆಯಲಾಗಿದೆ. ಈ ಶಿಲಾಶಾಸನಗಳು ತಿಳವಳ್ಳಿಯ ಕೆರೆಗೆ ಕಲ್ಲಿನ ಕೆಲಸಕ್ಕೆ ದಾನ ಮಾಡಿದ ಬಗ್ಗೆ, ಆಗ ಇದ್ದ ಹಲವು ದೇವಾಲಯಗಳಿಗೆ ಸಂಬಂಧಿಸಿದಂತೆ ದಾನದತ್ತಿ ವಿವರಗಳು ಮತ್ತು ತಿಳವಳ್ಳಿಯಲ್ಲಿ ನೆಲೆಗೊಂಡಿದ್ದ ಹಲವು ವ್ಯಾಪಾರಿ ಸಮುದಾಯದವರ ಗುಂಪುಗಳ ಬಗ್ಗೆ ವಿವರವಾಗಿ ತಿಳಿಸುತ್ತವೆ.


ದೇವಾಲಯದ ಹೊರಗೆ ಒಂದು ಶಿಲಾಶಾಸನ ಮತ್ತು ವೀರಗಲ್ಲನ್ನು ಇಡಲಾಗಿದೆ. ಈ ಶಿಲಾಶಾಸನದಲ್ಲಿ ದೇವಗಿರಿ ಯಾದವ ವಂಶದ ಪ್ರಸಿದ್ಧ ದೊರೆ ಎರಡನೇ ಸಿಂಘಾನನ ಆಳ್ವಿಕೆಯ ಸಮಯದಲ್ಲಿ ಆತನ ಮಹಾಪಸಾಯಿತನಾಗಿದ್ದ(ಪೋಷಾಕುಗಳ ಜವಾಬ್ದಾರಿ ಹೊತ್ತವನು) ಕಾಳಿದೇವ ಠಾಕೂರ ಎಂಬವನು, ಯುದ್ಧದಲ್ಲಿ ವೀರಮರಣವನ್ನು ಹೊಂದಿದ ತನ್ನ ತಂದೆ ಸಾವಂತ ಠಾಕೂರನ ಸ್ಮರಣಾರ್ಥ ಇಸವಿ ೧೨೩೯ರಲ್ಲಿ ಈ ದೇವಾಲಯವನ್ನು ನಿರ್ಮಿಸಿದನು ಎಂದು ತಿಳಿಸಲಾಗಿದೆ. ಯಾದವರಿಂದ ನಿರ್ಮಿಸಲ್ಪಟ್ಟರೂ ಚಾಲುಕ್ಯ ಶೈಲಿಯನ್ನು ಅನುಕರಿಸಲಾಗಿದೆ.


ದೇವಾಲಯದ ಶಿಖರವನ್ನು ೩ ತಾಳಗಳಲ್ಲಿ ನಿರ್ಮಿಸಲಾಗಿದೆ. ಗೋಪುರದ ಪ್ರತಿ ತಾಳದಲ್ಲಿ ಇರಬೇಕಾದ ಕೆತ್ತನೆಗಳು ಬಿದ್ದುಹೋಗಿದ್ದು ಶಿವನ ತಾಂಡವನೃತ್ಯದ ಕೆಲವು ಶಿಲ್ಪಗಳು ಮಾತ್ರ ಉಳಿದುಕೊಂಡಿವೆ. ದೇವಾಲಯದ ಸುತ್ತಲೂ ಕೈಪಿಡಿ ಇದೆ. ಕೈಪಿಡಿಯ ಕೆತ್ತನೆಗಳಲ್ಲೂ ಕೆಲವು ಮಾತ್ರ ಉಳಿದುಕೊಂಡಿವೆ.


ಗರ್ಭಗುಡಿಯ ಹೊರಗೋಡೆಯಲ್ಲಿ ಗೋಪುರಗಳನ್ನು ಹಾಗೂ ದೇವಕೋಷ್ಠಗಳನ್ನು ಕಾಣಬಹುದು. ಇರುವ ೩ ದೇವಕೋಷ್ಠಗಳು ಖಾಲಿಯಿವೆ.


ಕಕ್ಷಾಸನದ ಹೊರಭಾಗದಲ್ಲಿ ಸಣ್ಣ ಸಣ್ಣ ಗೋಪುರಗಳನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಈ ಗೋಪುರಗಳ ಮೇಲಿರುವ ಅಲಂಕಾರಿಕಾ ಬಳ್ಳಿ ಸುರುಳಿಯ ಕೆತ್ತನೆಯಂತೂ ಮನೋಹರವಾಗಿದೆ.


ಸಭಾಮಂಟಪದ ಪ್ರಮುಖ ದ್ವಾರದ ಕಕ್ಷಾಸನದಲ್ಲಿ ನೃತ್ಯಗಾರರನ್ನು ಮತ್ತು ವಾದ್ಯಗಾರರನ್ನು ತೋರಿಸಲಾಗಿದೆ. ದೇವಾಲಯ ಪ್ರವೇಶಿಸುವ ದ್ವಾರದಲ್ಲಿ ಹೆಚ್ಚಿನೆಡೆ ಇಂತಹ ಕೆತ್ತನೆಗಳಿರುತ್ತವೆ. ಉಳಿದೆರಡು ದ್ವಾರಗಳ ಕಕ್ಷಾಸನದಲ್ಲಿ ಕೆಲವು ಮಿಥುನ ಶಿಲ್ಪಗಳನ್ನೂ ಕಾಣಬಹುದು.

ಅಂದು - ಇಂದು:


ಕಪ್ಪು ಬಿಳುಪು ಚಿತ್ರಗಳು ತಿಳವಳ್ಳಿ ಶಾಂತೇಶ್ವರ ದೇವಾಲಯದ ಇಸವಿ ೧೮೮೫ ರಲ್ಲಿ ತೆಗೆದ ಚಿತ್ರಗಳು. ವರ್ಣ ಚಿತ್ರಗಳನ್ನು ೨೦೧೧ರಲ್ಲಿ ತೆಗೆಯಲಾಗಿದೆ. ದೇವಾಲಯ ಅಂದು ಇದ್ದಂತೆ ಇದೆ. ಏನೂ ಹಾನಿಯಾಗದೆ ಉಳಿದುಕೊಂಡಿದೆ. ಇದರ ಶ್ರೇಯ ಪ್ರಾಚ್ಯ ವಸ್ತು ಇಲಾಖೆಗೆ ಸಲ್ಲಬೇಕು.


ದೇವಾಲಯದ ಸುತ್ತಲೂ ವಿಶಾಲವಾದ ಸ್ಥಳವಿದ್ದು, ಸ್ವಚ್ಛವಾಗಿರುವುದನ್ನು ಚಿತ್ರದಲ್ಲಿ ಕಾಣಬಹುದು. ಇಂದು ಪರಿಸ್ಥಿತಿ ಹಾಗಿಲ್ಲ. ವಿಶಾಲ ಸ್ಥಳವಂತೂ ಇಲ್ಲ. ಆದರೆ ಹೊರಗಡೆಯ ಹುಲ್ಲನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿದರೆ ಚೆನ್ನಾಗಿರುವುದು.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಶುಕ್ರವಾರ, ಜನವರಿ 27, 2012

ರಾಹುಲ್, ಸಾಕು ಆಡಿದ್ದು...


ನೀನು ೩೫ನೇ ವಯಸ್ಸಿನ ನಂತರ ಆಡುವುದನ್ನು ಮುಂದುವರಿಸಿದ್ದೇ ಆಸ್ಟ್ರೇಲಿಯಾದಲ್ಲಿ ನಿನಗೆ ಸಂಪೂರ್ಣವಾಗಿ ದೊರಕದ ಯಶಸ್ಸನ್ನು ಗಳಿಸಲು. ಆಸ್ಟ್ರೇಲಿಯಾವನ್ನು ಅವರದೇ ನಾಡಿನಲ್ಲಿ ಸೋಲಿಸಲು. ಇವೆರಡೂ ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣವೆಂದರೆ ನೀನೀಗ ಯುವಕನೂ ಅಲ್ಲ ಮತ್ತು ನೀನೆಂಬ ಅಭೇದ್ಯ ಗೋಡೆಗೆ ನೀನಾಗಿಯೇ ರಂಧ್ರಗಳನ್ನು ಕೊರೆಯುತ್ತಾ ಇದ್ದೀಯಾ. ಆದ್ದರಿಂದ ದಯವಿಟ್ಟು ಆಡುವುದನ್ನು ನಿಲ್ಲಿಸು. ಈಗ ಸರಿಯಾದ ಸಮಯ.

ನೀನಿನ್ನು ಸಾಧಿಸುವುದು ಏನೂ ಉಳಿದಿಲ್ಲ. ಸಾಧಿಸುವುದಿದ್ದರೆ ಅದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ರನ್ನು ಗಳಿಸುವುದು. ಅವಿನ್ನು ದೂರದ ಮಾತುಗಳು. ಸುಬ್ರಹ್ಮಣ್ಯಮ್ ಬದರೀನಾಥ್ ಕಳೆದ ನಾಲ್ಕೈದು ವರ್ಷಗಳಿಂದ ಕಾಯುತ್ತಾ ಇದ್ದಾನೆ. ಈಗ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ನಿನ್ನ ಸ್ಥಾನ ತುಂಬಿಸಲು ತಯಾರಾಗಿದ್ದಾರೆ. ಹಿಂದೆ ಸರಿಯಲು ಇದಕ್ಕಿಂತ ಉತ್ತಮ ಕಾಲ ಇನ್ನಿಲ್ಲ. ವೈಫಲ್ಯವನ್ನು ಒಪ್ಪಿಕೊಂಡು ಹಿಂದೆ ಸರಿದರೆ ಘನತೆ ಹೆಚ್ಚುವುದು.

ಎರಡು ವರ್ಷಗಳ ಮೊದಲು ನಿನ್ನ ಬ್ಯಾಟಿಂಗ್‍ನಲ್ಲಿ ಆಫ್ ಸ್ಟಂಪಿನ ಹೊರಗೆ ಹೋಗುವ ಚೆಂಡಿಗೆ ಬ್ಯಾಟನ್ನು ತಾಗಿಸುವ ಕೆಟ್ಟ ಪರಿಪಾಠ ಅದೆಲ್ಲಿಂದ ತೂರಿಬಂತೋ ದೇವರೇ ಬಲ್ಲ. ಬಹಳ ಶ್ರಮವಹಿಸಿ ನೀನು ಅದನ್ನು ಸುಧಾರಿಸಿ ಕಳೆದ ವರ್ಷ ಅತ್ಯುತ್ತಮ ನಿರ್ವಹಣೆ ನೀಡಿದೆ. ಕಳೆದ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಕೊನೆಗೊಂಡ ಕೂಡಲೇ ನೀನು ನಿವೃತ್ತಿ ಘೋಷಿಸಿದ್ದರೆ ಚೆನ್ನಾಗಿತ್ತು. ಆದರೆ ಆಸ್ಟ್ರೇಲಿಯಾದ ಕನಸೊಂದು ಬಾಕಿ ಇತ್ತಲ್ವೆ...

ಈಗ ಆ ಕನಸೂ ನನಸಾಗಲಿಲ್ಲ. ರಾಹುಲ್, ಇನ್ನು ಆಡುವುದು ವ್ಯರ್ಥ. ಸಾಧಿಸುವುದು ಏನೂ ಉಳಿದಿಲ್ಲ. ನೀನು ಇನ್ನೂ ಆಡಿ ಇನ್ನಷ್ಟು ಶತಕಗಳನ್ನು ಗಳಿಸಬಹುದು, ಇನ್ನಷ್ಟು ರನ್ನುಗಳನ್ನು ಗಳಿಸಬಹುದು. ಆದರೆ ಏನು ಪ್ರಯೋಜನ? ನೀನು ಆಸ್ಟ್ರೇಲಿಯಾದಲ್ಲಿ ರನ್ನುಗಳನ್ನು ಗಳಿಸಿದ್ದಿದ್ದರೆ ಅದಕ್ಕೊಂದು ಮಹತ್ವವಿರುತ್ತಿತ್ತು. ನಿನಗೆ ನೀನೆ ಕೆಲವೊಂದು ಅಂಶಗಳನ್ನು ಸಾಬೀತುಪಡಿಸಿದಂತಾಗುತ್ತಿತ್ತು. ನಮಗೂ ಸಂತೋಷವಾಗುತ್ತಿತ್ತು.

ಆದರೆ ನೀನು ಆಸ್ಟ್ರೇಲಿಯಾದಲ್ಲಿ ಸಾಧಿಸಿದ್ದೇನು? ಬೌಲ್ಡ್. ಬೌಲ್ಡ್! ಬೌಲ್ಡ್!! ಬೌಲ್ಡ್!!! ಬೌಲ್ಡ್!!!! ಬೌಲ್ಡ್!!!!!. ಮೊದಲ ಬೌಲ್ಡ್ ಬಿಟ್ಟರೆ ಉಳಿದವುಗಳು ನೀನು ಔಟಾಗುವ ಚೆಂಡುಗಳಾ..? ಹದಿನೈದು ವರ್ಷಗಳಿಂದ ನಿನ್ನ ಪ್ರತಿಯೊಂದು ಇನ್ನಿಂಗ್ಸ್ ನೋಡಿದ್ದೇನೆ. ಆದರೆ ಹೇಗೆ ಆಡಬೇಕು ಎಂದು ತೋಚದೆ ಮೊದಲನೇ ಸರಣಿ ಆಡುವ ಆಟಗಾರನಂತೆ ಆಡಿದ್ದು ಇದೇ ಮೊದಲ ಬಾರಿ. ಮೊದಲೆಲ್ಲಾ ನೀನು ಬೌಲ್ಡ್ ಆಗಿ ಔಟಾದಾಗ ಅದು ಹೇಗೆ ಸಾಧ್ಯ ಎಂದು ಮತ್ತೆ ಮತ್ತೆ ನೋಡಿ ದೃಢೀಕರಿಸಿದರೆ ಈವತ್ತು, ನೀನು ಮತ್ತೆ ಬೌಲ್ಡ್ ಹೇಗೆ ಆಗಲಿಲ್ಲ... ಎಂದು ನೋಡುವ ಕಾಲ ಬಂದಿದೆ.

ಮೇಲೆ ಹೇಳಿದಂತೆ ಆಫ್ ಸ್ಟಂಪಿನ ಬಹಳ ಹೊರಗೆ ಇದ್ದ ಚೆಂಡುಗಳನ್ನು ಕೆಣಕುವ ಕೆಟ್ಟ ಚಾಳಿಯನ್ನು ಸರಿಪಡಿಸಿಕೊಂಡ ಬಳಿಕ, ಈಗ ಬ್ಯಾಟ್ ಮತ್ತು ಪ್ಯಾಡ್ ನಡುವೆ ಆನೆ ನುಗ್ಗುವಷ್ಟು ಜಾಗ ಬಿಡುವ ಕೆಟ್ಟ ಚಾಳಿ ಎಲ್ಲಿಂದ ಬೆಳೆಸಿಕೊಂಡೆ? ಮೊನ್ನೆ ಇಂಗ್ಲಂಡಿನಲ್ಲಿ ಆ ಅಭ್ಯಾಸವಿರಲಿಲ್ಲವಲ್ಲ. ನಿನ್ನ ರಕ್ಷಣಾತ್ಮಾಕ ಆಟದಲ್ಲಿ ಹುಳುಕುಗಳಿರಲಿಲ್ಲವಲ್ಲ. ಈಗ ಅವೆಲ್ಲಾ ಎಲ್ಲಿಂದ ಬಂದವು.

ಈ ಹೊಸ ಕೆಟ್ಟ ಚಾಳಿಯನ್ನು ಸರಿಪಡಿಸಿಕೊಳ್ಳುವಷ್ಟು ಸಮಯ ಈಗ ಇಲ್ಲ. ಪಾಂಟಿಂಗ್ ನಿನಗಿಂತ ಕೇವಲ ೯೯ ರನ್ನುಗಳಷ್ಟು ಹಿಂದೆ ಇದ್ದಾನೆ. ನೀನು ಈ ರನ್ನುಗಳ ಬೆಗ್ಗೆ ಹೆಚ್ಚು ತಲೆಕೆಡಿಸಿಕೊಂಡವನಲ್ಲ. ಆದರೂ ಒಂದು ಮಾತು - ಹಾಳಾಗಿ ಹೋಗ್ಲಿ ಆ ರನ್ನುಗಳು.

ಆಸ್ಟ್ರೇಲಿಯಾದಲ್ಲಿ ರನ್ನು ಗಳಿಸುವ ಟೆಕ್ನಿಕ್ ನಿನ್ನಲ್ಲಿತ್ತು. ಭಾರತಕ್ಕೆ ನಿನ್ನ ಅನುಭವದ ಅವಶ್ಯಕತೆಯಿತ್ತು. ಯಾರೂ ರನ್ನು ಗಳಿಸದಿದ್ದರೂ ನೀನು ಗಳಿಸಬೇಕಿತ್ತು. ಆ ರನ್ನುಗಳಿಗೆ ಅಪಾರ ಮಹತ್ವವಿರುತ್ತಿತ್ತು. ನಿನ್ನಿಂದ ಆ ನಿರೀಕ್ಷೆಯೂ ಇತ್ತು. ಆದರೆ ನಿರೀಕ್ಷೆಗೂ ಮೀರಿ ನೀನು ವಿಫಲನಾದೆ.

ಆಸ್ಟ್ರೇಲಿಯಾ ಬಿಟ್ಟು ಇತರ ದೇಶಗಳಲ್ಲಿ ನಿನಗಿಂತ ಕಡಿಮೆ ಅರ್ಹತೆಯುಳ್ಳ ಆಟಗಾರರೂ ರನ್ನು ಗಳಿಸಬಹುದು. ಇಂಗ್ಲಂಡ್‍ನಲ್ಲಿ ನಿನ್ನ ಅವಶ್ಯಕತೆಯಿದ್ದರೂ ಭಾರತ ಇನ್ನು ಅಲ್ಲಿಗೆ ತೆರಳುವುದು ನಾಲ್ಕು ವರ್ಷಗಳ ಬಳಿಕ. ಈ ನಾಲ್ಕು ವರ್ಷಗಳಲ್ಲಿ ಅಲ್ಲಿ ಯಶಸ್ವಿಯಾಗುವಂತೆ ನೀನೆ ನಿನ್ನ ಮಾರ್ಗದರ್ಶನದಲ್ಲಿ ನಮ್ಮ ಯುವ ಆಟಗಾರರನ್ನು ಪಳಗಿಸು. ನಿನಗಿಂತ ಕಡಿಮೆ ಅರ್ಹತೆಯುಳ್ಳ ಆಟಗಾರರು ರನ್ನು ಗಳಿಸುವಲ್ಲಿ ನಿನಗೇನು ಕೆಲಸ? ನೀನು ಆಸ್ಟ್ರೇಲಿಯಾದಲ್ಲಿ ರನ್ನು ಗಳಿಸಬೇಕಿತ್ತು, ರಾಹುಲ್. ನಿನ್ನ ನಿಜವಾದ ಸಾಮರ್ಥ್ಯ ಅಲ್ಲಿ ಬಳಕೆಯಾಗಬೇಕಿತ್ತು.

ಬೇರೆಡೆ (ಭಾರತವನ್ನು ಸೇರಿಸಿ) ಇನ್ನು ನೀನು ಗಳಿಸುವ ರನ್ನುಗಳಿಗೆ ಮಹತ್ವವಿರುವುದಿಲ್ಲ. ಮಹತ್ವವಿಲ್ಲದ ರನ್ನುಗಳ ಅವಶ್ಯಕತೆ ನಿನಗಿಲ್ಲ.

ನಿನ್ನ ನಿವೃತ್ತಿ ಘೋಷಣೆಯನ್ನು ಎದುರು ನೋಡುತ್ತಿದ್ದೇನೆ.....
ನಿನ್ನ ಅಭಿಮಾನಿ.

ಸೋಮವಾರ, ಜನವರಿ 23, 2012

ಉಡುಪಿ ಕೃಷ್ಣ ದೇವಾಲಯದಲ್ಲಿ ’ಭೂತ ಕೋಲ’


ಹಟ್ಟಿಗಳಲ್ಲಿರುವ ಗೋವುಗಳನ್ನು ಆಯಾ ಸೀಮೆಯ ದೈವ(ಭೂತ)ಗಳು ರಕ್ಷಿಸುತ್ತವೆ ಎಂದು ಅನಾದಿ ಕಾಲದಿಂದಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನಂಬಿಕೆ. ಈ ದೈವಗಳಿಗೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಿ ತೃಪ್ತಿಪಡಿಸುವುದೂ ಎಂದಿನಂತೆ ನಡೆದು ಬಂದಿರುವ ಪದ್ಧತಿ.


ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ನಾಲ್ಕು ದೈವಗಳಿವೆ. ದೇವಾಲಯದಲ್ಲಿ ಹಟ್ಟಿಯೂ ಇದೆ ಅಲ್ಲಿ ಗೋವುಗಳೂ ಇವೆ. ಸಮೀಪದಲ್ಲೇ ಈ ನಾಲ್ಕು ದೈವಗಳ ಸನ್ನಿಧಾನವೂ ಇದೆ. ಅನಾದಿ ಕಾಲದಿಂದಲೂ ಕೃಷ್ಣ ದೇವಾಲಯದಲ್ಲಿ ಈ ದೈವಗಳ ವಾಸ್ತವ್ಯವಿದ್ದರೂ ಅವುಗಳಿಗೆ ಎರಡು ವರ್ಷಗಳ ಮೊದಲವರೆಗೂ ಪೂಜೆ ಸಲ್ಲಿಸಿದ್ದೇ ಇಲ್ಲ!


ಮೊದಲು ದೇವಾಲಯದ ಹಟ್ಟಿಯಲ್ಲಿ ಬಹಳ ತೊಂದರೆಗಳಿದ್ದವು. ಗೋವುಗಳಿಗೆ ತೊಂದರೆಯುಂಟಾಗುತ್ತಿದ್ದವು. ನೋಡಿಕೊಳ್ಳುವವರಲ್ಲಿ ಮನಸ್ತಾಪ, ಜಗಳ ಇತ್ಯಾದಿ ಉಂಟಾಗುತ್ತಿದ್ದವು. ಏನಾದರೊಂದು ತೊಂದರೆ ಆಗಾಗ ತಲೆದೋರುತ್ತಲೇ ಇತ್ತು.


ಹಟ್ಟಿ ನೋಡಿಕೊಳ್ಳುವವರೇ ಪ್ರತಿ ಸಂಕ್ರಾಂತಿಗೆ ಈ ದೈವಗಳಿಗೆ ಸಣ್ಣ ಪ್ರಮಾಣದಲ್ಲಿ ಪೂಜೆ ಮಾಡುತ್ತಿದ್ದರು. ಜನವರಿ ೨೦೧೦ರಲ್ಲಿ ಶಿರೂರು ಮಠದ ಸ್ವಾಮಿಗಳು ಪರ್ಯಾಯ ಪೀಠವನ್ನೇರಿದ ಬಳಿಕ ಕೃಷ್ಣ ದೇವಾಲಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇವಾಲಯದ ವತಿಯಿಂದಲೇ ಈ ನಾಲ್ಕು ದೈವಗಳಿಗೆ ವರ್ಷಕ್ಕೊಮ್ಮೆ ಸಂಕ್ರಾಂತಿಯಂದು ಪೂಜೆ ಸಲ್ಲಿಸುವ ಪದ್ಧತಿಯನ್ನು ಆರಂಭಿಸಿದರು.


ಈಗ ಕೃಷ್ಣನ ಹಟ್ಟಿಯಲ್ಲಿ ತೊಂದರೆಗಳಿಲ್ಲ! ಇದು ಕಾಕತಾಳೀಯವೂ ಇರಬಹುದು. ಆದರೆ ದೇವಾಲಯದ ವತಿಯಿಂದಲೇ ದೈವಗಳಿಗೆ ಪೂಜೆ ಸಲ್ಲಿಸುವ ಪರಿಪಾಠ ಆರಂಭವಾದ ಬಳಿಕ ಹಟ್ಟಿಯಲ್ಲಿನ ತೊಂದರೆಗಳು ನಿವಾರಣೆಗೊಂಡವು.


ಗೆಜ್ಜೆಮಲ್ಲಿ, ಪಂಜುರ್ಲಿ, ವರ್ತೆ ಮತ್ತು ಕುಟ್ಟಿ ಇವೇ ಕೃಷ್ಣ ದೇವಾಲಯದಲ್ಲಿ ವಾಸವಾಗಿರುವ ನಾಲ್ಕು ದೈವಗಳು. ಹಟ್ಟಿಯಲ್ಲಿನ ತೊಂದರೆಗಳು ಕಡಿಮೆಯಾದ ಬಳಿಕ ತಮ್ಮ ಪರ್ಯಾಯ ಅವಧಿಯ ಅಂತಿಮ ದಿನಗಳಲ್ಲಿ ಶಿರೂರು ಶ್ರೀಗಳು ಈ ನಾಲ್ಕು ದೈವಗಳಿಗಾಗಿ ’ಭೂತಕೋಲ’ ವೊಂದನ್ನು ನಡೆಸಿಕೊಟ್ಟರು. ಇದು ಕೃಷ್ಣ ದೇವಾಲಯದ ಇತಿಹಾಸದಲ್ಲಿ ನಡೆದ ಪ್ರಥಮ ಭೂತಕೋಲ.


ಅಂತೆಯೇ ಗೆಳೆಯ ಗುರುದತ್ ಈಗ ಕೃಷ್ಣನ ಸೇವೆಯಿಂದ ಬಿಡುಗಡೆ ಹೊಂದಿದ್ದಾನೆ. ಎರಡು ವರ್ಷ ಕಟ್ಟುನಿಟ್ಟಿನ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಪರಿಪಾಲಿಸಿದ ಬಳಿಕ ಈಗ ಮತ್ತೆ ಮೊದಲ ಜೀವನಶೈಲಿಗೆ ಮರಳಲು ಮುಕ್ತನಾಗಿದ್ದಾನೆ. ನಾವೂ ನಿಬ್ಬೆರಗಾಗುವ ರೀತಿಯಲ್ಲಿ ಎರಡು ವರ್ಷದ ಪಥ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾನೆ.


ಶಿರೂರು ಮಠದ ಪರ್ಯಾಯ ಅವಧಿಯ ಸಮಯ ಕಳೆದೆರಡು ವರ್ಷ ಕೃಷ್ಣನ ಪ್ರತಿದಿನದ ಅಲಂಕಾರದ ಜೊತೆಗೆ ದೇವಾಲಯದಲ್ಲಿನ ದೈನಂದಿನ ಆಗುಹೋಗುಗಳ ಚಿತ್ರಗಳನ್ನು ತೆಗೆದು ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಮಠಕ್ಕೂ, ಕೃಷ್ಣನಿಗೂ ಮತ್ತು ದೇವಾಲಯದ ದೈನಂದಿನ ಕಾರ್ಯಕ್ರಮಗಳಿಗೂ ಅದ್ಭುತ ಪ್ರಚಾರ ನೀಡುವ ಗುರುದತ್ತನ ವಿನೂತನ ಪ್ರಯತ್ನ ಸಫಲವಾಗಿದೆ.


ಈ ಭೂತಕೋಲದ ಚಿತ್ರಗಳನ್ನೂ ಗುರುದತ್ತನೇ ತೆಗೆದದ್ದು. ಕೆಲವು ಚಿತ್ರಗಳನ್ನು ಮಾತ್ರ ಇಲ್ಲಿ ಪ್ರಕಟಿಸಿದ್ದೇನೆ. ಉಳಿದ ಚಿತ್ರಗಳನ್ನು ಈ ಕೊಂಡಿಯಲ್ಲಿನ ಪುಟದ ಕೊನೆಗೆ ಕಾಣಬಹುದು. ಶಿರೂರು ಮಠದ ಅಂತರ್ಜಾಲ ತಾಣದ ಒಳಹೊಕ್ಕ ಬಳಿಕ ಬಲಭಾಗದಲ್ಲಿ ದೈನಂದಿನ ಚಿತ್ರಗಳ ಕೊಂಡಿ ಇದೆ. ಪರ್ಯಾಯದ ಒಂದೆರಡು ದಿನ ಮೊದಲಿನಿಂದ (ಜನವರಿ ೧೮ರ ಮೊದಲಿನ) ನಡೆದ ಉತ್ಸವಗಳ ಕೆಲವು ಅದ್ಭುತ ಚಿತ್ರಗಳನ್ನು ಅಲ್ಲಿ ಕಾಣಬಹುದು.

ಬುಧವಾರ, ಜನವರಿ 18, 2012

ಅಕ್ಷರ ಅವಾಂತರ ೯ - ತೆಂಗು ಹಾಗೂ ಶುಲ್ಕ


ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಯ ಸಮಾಧಿ ಮಂದಿರದ ಬಳಿಯಲ್ಲಿ...
’ಟೆಂಗಿನಕಾಯಿ’ ಒಡೆಯಲು ’ಶುಲ್ಕ್’!

ಭಾನುವಾರ, ಜನವರಿ 08, 2012

ಒಂದು ಊರು, ಅಲ್ಲೊಂದು ಕೋಟೆ ಹಾಗೂ ಚಾರಣ


ನನ್ನ ಸೋದರಮಾವ ವಿಶಿಷ್ಟ ತಳಿಯ ಅಕ್ಕಿ ತರಲು ಕಾಲ್ನಡಿಗೆಯಲ್ಲಿ ಈ ಹಳ್ಳಿಗೆ ಹೋಗುವ ವಿಷಯವನ್ನು ಆಗಾಗ ನನ್ನಲ್ಲಿ ಹೇಳುತ್ತಿದ್ದರು. ಅದೊಂದು ಸಲ ಈ ಅಕ್ಕಿಯ ಅನ್ನ ಮಾಡಿ ಬಡಿಸಿದ್ದರು. ಅನ್ನಕ್ಕೇನೋ ವಿಶಿಷ್ಟ ಪರಿಮಳ. ’ಏನಿದು, ಅನ್ನಕ್ಕೆ ಸೆಂಟ್ ಹೊಡೆದು ನನಗೆ ಬಡಿಸಿದ್ದೀರಾ’.. ಎಂದು ಕೇಳಿದರೆ ಅವರು ಬೊಚ್ಚು ಬಾಯಿ ತೆಗೆದು ನಗುತ್ತಾ, ’ಹೆ ಹೆ ಹೆ ನೀನು ಹಂಗಿಸ್ತಿದ್ದಿಯಲ್ಲ, ಬರೀ ಆ ಹಳ್ಳಿಯ ಅಕ್ಕಿಯ ಬಗ್ಗೆ ಮಾತನಾಡುವುದೇ ಆಯ್ತು... ರುಚಿ ಯಾವಾಗ ತೋರಿಸ್ತೀರಾ ಅಂತಾ, ಅದಕ್ಕೆ ಈ ಸಲ ಆ ಅಕ್ಕಿಯನ್ನು ತರಿಸಿದವರಿಂದ ಸ್ವಲ್ಪ ಖರೀದಿಸಿ ನಿನಗೆ ರುಚಿ ತೋರಿಸುತ್ತಿದ್ದೇನೆ....’ ಎಂದರು. ’ಸರಿ ಸರಿ, ಅಲ್ಲಿ ಜಲಧಾರೆಯೇನಾದರೂ ಇದೆಯೇ..’ ಎಂದು ನಾನು ಮರುಪ್ರಶ್ನೆ ಹಾಕಿದಾಗ, ’ಜಲಧಾರೆ ಬಗ್ಗೆ ಗೊತ್ತಿಲ್ಲ. ಕೋಟೆಯೊಂದಿದೆ’ ಎಂದಿದ್ದರು. ನನಗೆ ಅಷ್ಟೇ ಸಾಕಿತ್ತು, ಈ ಹಳ್ಳಿಗೆ ತೆರಳುವ ನಿರ್ಧಾರ ಮಾಡಲು.


೨೦೦೩ರಲ್ಲಿ ಆ ಅಕ್ಕಿಯ ರುಚಿ ತೋರಿಸಿದ ಅವರು ೨೦೦೯ರಲ್ಲಿ ತೀರಿಕೊಂಡರು. ಅವರಿಗಾಗ ೯೦ ವರ್ಷ ವಯಸ್ಸು. ಅವರ ಪ್ರಕಾರ ಮೊದಲು ಈ ಹಳ್ಳಿಯಲ್ಲಿ ಕೇವಲ ನಾಲ್ಕಾರು ಮನೆಗಳಿದ್ದವು. ಅವರು ಕೊನೆಯ ಬಾರಿ ತೆರಳಿದಾಗ ಸುಮಾರು ೨೦ ಮನೆಗಳಿದ್ದವು. ಈಗ ನಾವು ತೆರಳಿದಾಗ ೪೨ ಮನೆಗಳಿದ್ದವು! ಜನರ ಸಂಖ್ಯೆ ಹೆಚ್ಚಿದಂತೆ ಮನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಡನ್ನು ಕಡಿದು ಸ್ಥಳಾವಕಾಶ ಮಾಡಿ ಸುಂದರವಾದ ಸ್ಥಳಗಳಲ್ಲಿ ಅಂದವಾದ ಮನೆಗಳನ್ನು ನಿರ್ಮಿಸಲಾಗಿದೆ.


ಕಾಲುದಾರಿ ಮಾತ್ರವಿದ್ದ ಈ ಹಳ್ಳಿಗೆ ರಸ್ತೆ ಸಂಪರ್ಕ ಆಗಿದ್ದು ಮೂರು ವರ್ಷಗಳ ಮೊದಲು. ಮಳೆಗಾಲದಲ್ಲಿ ಹಾಳಾಗುವ ರಸ್ತೆಯನ್ನು ಹಳ್ಳಿಗರೇ ದುರಸ್ತಿಪಡಿಸಿಕೊಳ್ಳುತ್ತಾರೆ. ರಸ್ತೆಯಾದ ಬಳಿಕ ಈಗ ೩ ಮನೆಗಳಲ್ಲಿ ದ್ವಿಚಕ್ರ ವಾಹನಗಳಿವೆ. ಇವರು ಹಳ್ಳಿಯಿಂದ ಕೆಳಗೆ ಮುಖ್ಯ ರಸ್ತೆಗೆ ಬಾಡಿಗೆಗೆ ಬೈಕು ಓಡಿಸುತ್ತಾರೆ! ಒಂದು ಟ್ರಿಪ್‍ಗೆ ೧೫೦ ರೂಪಾಯಿಗಳು. ’ಪೆಟ್ರೋಲ್ ಬಹಳ ಖರ್ಚಾಗ್ತದಲ್ರೀ..... ವಾಪಸ್ ಬರ್ಬೇಕಾದ್ರೆ ಅಪ್ಪೇ.... ಫಸ್ಟ್ ಗೇರೇ....’, ಇದು ನೂರಾ ಐವತ್ತು ರೂಪಾಯಿಗೆ ಸಿಕ್ಕ ಸಮಜಾಯಿಷಿ ಅದು ಕೂಡಾ ನಾವು ಕೇಳದೆ.


ಹಳ್ಳಿಗೆ ದಾರಿ ಪ್ರಾರಂಭವಾಗುವುದೇ ಕಡಿದಾದ ಏರಿನೊಂದಿಗೆ. ಮೂರು ತಿರುವುಗಳನ್ನು ಒಳಗೊಂಡಿರುವ ಈ ಅರಂಭಿಕ ಏರು ಮುಗಿಸುವಷ್ಟರಲ್ಲೇ ನಾನು ಏದುಸಿರು ಬಿಡಲಾರಂಭಿಸಿದ್ದೆ. ನನ್ನ ಇಬ್ಬರು ಸಹಚಾರಣಿಗರು ಮುಂದೆ ಸಾಗಿಯಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿರುವ ದಟ್ಟ ಮತ್ತು ಸುಂದರ ಕಾಡನ್ನು ಆನಂದಿಸುತ್ತಾ ನಿಧಾನವಾಗಿ ಮುನ್ನಡೆದೆ. ನೆರಳಿನಲ್ಲೇ ಚಾರಣ ಸಾಗುತ್ತಿತ್ತು. ದಾರಿ ಆರಂಭವಾದಾಗಿನಿಂದಲೇ ಹೆಣ್ಣೊಬ್ಬಳ ಪಾದರಕ್ಷೆಯ ಗುರುತು ರಸ್ತೆಯ ಮೇಲಿತ್ತು. ಯುವತಿಯದ್ದಾಗಿರಬಹುದೇ...?


ಅಲ್ಲಲ್ಲಿ ನಿಲ್ಲುತ್ತಾ ಹೃದಯ ಜೋರಾಗಿ ಬಡಿದುಕೊಳ್ಳುವ ಶಬ್ದ ಸ್ಥಿರಗೊಂಡ ಬಳಿಕ ಮತ್ತೆ ಮುಂದುವರಿಯುತ್ತಿದ್ದೆ. ಸ್ವಲ್ಪ ಮುಂದೆ ಸಹಚಾರಣಿಗರಿಬ್ಬರು ನನಗಾಗಿ ಕಾಯುತ್ತಿದ್ದರು. ಇವರಿಬ್ಬರು ಕೂಡಾ ’ಆಕೆ’ಯ ಬಗ್ಗೆನೇ ಮಾತನಾಡುತ್ತಿದ್ದರು. ಆ ಹೆಜ್ಜೆ ಗುರುತುಗಳೇ ನಮಗೆ ವೇಗವಾಗಿ ನಡೆಯಲು ಟಾನಿಕ್ ಎಂಬ ಮಾತು ಬೇರೆ. ಒಬ್ಬರಿಗೆ ಹಿಂದಿನ ವಾರದ ಚಾರಣದ ಸಮಯದಲ್ಲಿ ಪಾದ ಉಳುಕಿ ವಿಪರೀತ ನೋವು ಇದ್ದರೂ ಮತ್ತೆ ಈ ವಾರ ಚಾರಣಕ್ಕೆ ಬಂದಿದ್ದರು. ಆದರೆ ನಡೆಯುವ ವೇಗ ಮಾತ್ರ ಕಡಿಮೆಯಾಗಿರಲಿಲ್ಲ. ’ನೋವಿಲ್ಲ, ನೋವಿಲ್ಲ’ ಎಂದು ಹೇಳುತ್ತಾ ಮುಂದೆ ಸಾಗುತ್ತಿದ್ದರೂ ನೋವಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.


ಇಲ್ಲಿ ಒಂದೈದು ನಿಮಿಷ ವಿಶ್ರಮಿಸಿದ ಬಳಿಕ ಮತ್ತೆ ಮುಂದೆ ಸಾಗಿದೆವು. ಒಂದೇ ನಿಮಿಷದಲ್ಲಿ ಅವರಿಬ್ಬರು ಮುಂದೆ ಸಾಗಿ ಕಣ್ಮರೆಯಾಗಿಬಿಟ್ಟರು. ಮತ್ತೆ ಮುಂದಿನ ’ರೆಸ್ಟ್ ಪಾಯಿಂಟ್’ ಬರುವವರೆಗೆ ನನ್ನ ಸಂಗಾತಿಗಳೆಂದರೆ ಹಾವಿನಂತೆ ಸಾಗುವ ರಸ್ತೆ, ಪಿಸುಗುಡುವ ಗಾಳಿ, ಸದ್ದು ಮಾಡುವ ತರಗೆಲೆಗಳು, ಸಹಚಾರಣಿಗರ ಹೆಜ್ಜೆ ಗುರುತುಗಳು ಮತ್ತು ’ಅವಳ ಹೆಜ್ಜೆ’.


ರಸ್ತೆ ಆಗಾಗ ಪಡೆಯುತ್ತಿದ್ದ ಅಸಂಬದ್ಧ ತಿರುವುಗಳನ್ನು ಕಂಡರೆ ಹಳ್ಳಿ ಯಾವ ದಿಕ್ಕಿನಲ್ಲಿದೆ ಎಂದು ಊಹಿಸುವುದೇ ಅಸಾಧ್ಯವಾಗಿತ್ತು. ಒಂದು ದೊಡ್ಡ ಏರನ್ನು ಹತ್ತಿ ವಿಶ್ರಮಿಸಲು ನಿಂತಾಗ ಅಲ್ಲೇ ಮುಂದೆ ಮತ್ತೊಮ್ಮೆ ನನ್ನ ಸಹಚಾರಣಿಗರು ನನಗಾಗಿ ಕಾಯುತ್ತಿದ್ದರು. ಇಲ್ಲಿ ಸ್ವಲ್ಪ ಹೆಚ್ಚೇ ಹೊತ್ತು ವಿಶ್ರಮಿಸಿ ಮುನ್ನಡೆದೆವು. ನನ್ನನ್ನು ಮತ್ತೊಮ್ಮೆ ನನ್ನ ಸಂಗಾತಿಗಳ ಜೊತೆಗೆ ಬಿಟ್ಟು ಸಹಚಾರಣಿಗರಿಬ್ಬರು ಮುಂದೆ ಸಾಗಿದರು. ಸ್ವಲ್ಪ ಮುಂದೆ ನಡೆದು ವಿಶ್ರಮಿಸಲು ನಿಂತಾಗ ಹಿಂದೆ ಏನೋ ಶಬ್ದವಾಗಿ ಬೆಚ್ಚಿಬಿದ್ದೆ. ಸುಮಾರು ಆರುವರೆ ಅಡಿ ಎತ್ತರವಿದ್ದ ಯುವಕನೊಬ್ಬ ಕೈಯಲ್ಲೊಂದು ಸಣ್ಣ ಚೀಲ ಹಿಡಿದುಕೊಂಡು, ಎಲೆ ಅಡಿಕೆ ಜಗಿಯುತ್ತಾ ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಾ ಬರುತ್ತಿದ್ದ. ಕುಶಲೋಪರಿಯ ಬಳಿಕ ’ಘಟ್ಟ ಇನ್ನು ಮುಗಿಯಿತು’ ಎಂಬ ಸಂತೋಷದ ಸುದ್ದಿ ತಿಳಿಸಿ ಮುನ್ನಡೆದ.


ಈಗ ನೇರ ರಸ್ತೆಯಾಗಿದ್ದ ಕಾರಣ ನಾನೂ ವೇಗವಾಗಿ ಅವಳ ಹೆಜ್ಜೆಯನ್ನು ಹಿಂಬಾಲಿಸುತ್ತಿದ್ದೆ. ಕಾಡಿನ ನೆರಳಿನಲ್ಲಿ ಸಮತಟ್ಟಾದ ರಸ್ತೆಯಲ್ಲಿ ಅಹ್ಲಾದಕರ ನಡಿಗೆ. ಶೀಘ್ರದಲ್ಲೆ ಬಂತು ೩ನೇ ರೆಸ್ಟ್ ಪಾಯಿಂಟ್. ಅಡ್ಡಬಿದ್ದಿದ್ದ ಮರವೊಂದರ ಮೇಲೆ ಕಾಲುನೋವು ಇಲ್ಲದ ಸಹಚಾರಣಿಗ ಮಲಗಿ ವಿಶ್ರಮಿಸುತ್ತಿದ್ದರೆ, ಕಾಲುನೋವು ಇದ್ದ ಸಹಚಾರಣಿಗ ಕಾಲಿಗೆ ಸಣ್ಣ ಪ್ರಮಾಣದಲ್ಲಿ ಮಸಾಜ್ ಮಾಡಿಕೊಳ್ಳುತ್ತಿದ್ದರು. ನಾನು ಏನೂ ಕೇಳದಿದ್ದರೂ ’ನೋವಿಲ್ಲ’ ಎಂದು ಮತ್ತೆ ಆಶ್ವಾಸನೆ ನೀಡಿದರು. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದಾಗ ತಲೆಯ ಮೇಲೆ ಮೂಟೆಗಳನ್ನು ಹೊತ್ತ ಇಬ್ಬರು ಹಳ್ಳಿಗರು ಎದುರಾದರು. ಒಬ್ಬರಿಗೆ ಸುಮಾರು ೫೦-೫೫ ವಯಸ್ಸಾಗಿದ್ದರೆ ಇನ್ನೊಬ್ಬರಿಗೆ ಸುಮಾರು ೬೫ರ ಆಸುಪಾಸು ಆಗಿರಬಹುದು. ಆ ಅಜ್ಜನ ತಲೆ ಮೇಲೆ ಎರಡು ಮೂಟೆಗಳು! ಇವರಿಗೆ ಘಟ್ಟದ ಕೆಳಗೆ ತಲುಪಲು ಕನಿಷ್ಠ ಒಂದು ತಾಸಾದರು ಬೇಕು. ಆ ಭಾರ ಹೊತ್ತುಕೊಂಡು ಅವರಿಬ್ಬರು ವೇಗವಾಗಿ ಸಾಗಿದ ಪರಿ ಕಂಡು ದಂಗಾಗಿ ಅವರನ್ನು ನೋಡುತ್ತಾ ನಿಂತುಬಿಟ್ಟೆ.


ಸುಮಾರು ೩ ತಾಸು ನಡೆದು ಹಳ್ಳಿ ತಲುಪಿದಾಗ ಮಧ್ಯಾಹ್ನದ ಸಮಯ. ಕೋಟೆ ಇನ್ನೂ ನಾಲ್ಕು ಕಿಮಿ ದೂರದಲ್ಲಿತ್ತು. ಗದ್ದೆ, ತೋಟ, ಬಯಲು ಇತ್ಯಾದಿಗಳನ್ನು ದಾಟಿ ಮುನ್ನಡೆದೆವು. ಹಳ್ಳಿಯ ಶಾಲೆಯ ಮುಂದೆ ಒಂದು ಸುಂದರ ಒಂಟಿ ಮರ. ಸಮೀಪದ ಪಟ್ಟಣದಿಂದ ಆಗಮಿಸಿದ ಸುಮಾರು ಹದಿನೈದು ಯುವಕರ ತಂಡವೊಂದು ಇಲ್ಲಿ ಬೀಡು ಬಿಟ್ಟಿತ್ತು. ಮೋಜಿಗಾಗಿ ಬಂದಿದ್ದ ಅವರು ಹಳ್ಳಿಗರಿಂದ ಪಾತ್ರೆ ಪಗಡಿಗಳನ್ನು ಎರವಲು ಪಡೆದುಕೊಂಡು ಆ ಒಂಟಿ ಮರದ ಕೆಳಗೆ ಕೋಳಿ ಪದಾರ್ಥ ತಯಾರಿಸಲು ಆರಂಭಿಸಿದ್ದರು. ಅದರೊಂದಿಗೆ ಶರಾಬು ಕೂಡಾ ಇತ್ತು. ಇದೇ ಕಾರಣಕ್ಕಾಗಿ ನನ್ನ ಸಹಚಾರಣಿಗರಿಗೆ ಸ್ಥಳದ ಮಾಹಿತಿ ಎಲ್ಲೂ ಹಾಕಬೇಡಿ ಎಂದು ನಾನು ಯಾವಾಗಲೂ ವಿನಂತಿಸಿಕೊಳ್ಳುತ್ತೇನೆ. ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ, ಬ್ಲಾಗುಗಳಲ್ಲಿ ಹಾಕಿಕೊಳ್ಳಲಿ. ಆದರೆ ಮಾಹಿತಿ ಯಾಕೆ ನೀಡಬೇಕು? ನಾನು ಒಂದು ಸ್ಥಳದ ಬಗ್ಗೆ ಕಷ್ಟಪಟ್ಟು ಎಲ್ಲೆಲ್ಲಿಂದಲೋ ಮಾಹಿತಿ ಸಂಗ್ರಹಿಸಿ ನಂತರ ಅದನ್ನು ಗೌಪ್ಯವಾಗಿಡಲು ಬದ್ಧನಾಗಿದ್ದರೆ ನನ್ನೊಂದಿಗೆ ಬಂದ ಸಹಚಾರಣಿಗ(ರು) ಸಲೀಸಾಗಿ ಮಾಹಿತಿಯನ್ನು ಎಲ್ಲೆಡೆ ಹರಡಿಬಿಡುವುದನ್ನು ಕಂಡಾಗ ಬಹಳ ನೋವಾಗುತ್ತದೆ.


ಇಲ್ಲಿ ನಮ್ಮ ಭೇಟಿಯಾಯಿತು ಹನುಮಂತ ಗೌಡರೊಂದಿಗೆ. ಕೋಟೆಗೆ ದಾರಿ ತೋರಿಸಲು ಯಾರನ್ನಾದರು ಕಳಿಸಿಕೊಡುವಂತೆ ಅವರಲ್ಲಿ ಕೇಳಿಕೊಂಡೆವು. ಹಳ್ಳಿಗರಲ್ಲಿ ಕೆಲವರಿಗೆ ದೇವಸ್ಥಾನದ ಕೆಲಸ, ಇನ್ನೂ ಕೆಲವರಿಗೆ ಕೊನೆ ಕೊಯ್ಯುವ ಕೆಲಸ, ತೋಟದ ಕೆಲಸ ಹೀಗೆ ಎಲ್ಲರೂ ಕೆಲಸದಲ್ಲಿ ನಿರತರಾಗಿದ್ದರು. ಗೌಡ್ರಿಗೆ ದೇವಸ್ಥಾನದ ಕೆಲಸ. ಅವರು ಅಲ್ಲಿ ಇಲ್ಲಿ ಓಡಾಡಿ, ಫೋನ್ ಮಾಡಿದರೂ ಯಾರೂ ಸಿಗಲಿಲ್ಲ. ಕೋಟೆಗೆ ಹೋಗುವ ದಾರಿಯಲ್ಲೇ ತನ್ನ ಮನೆ ಇದೆ, ಸದ್ಯಕ್ಕೆ ಅಲ್ಲಿಗೆ ಬನ್ನಿ, ಅಲ್ಲಿ ಯಾರಾದರೂ ಸಿಗುತ್ತಾರೋ ನೋಡೋಣ ಎಂದು ನಮ್ಮನ್ನು ಅವರ ಮನೆಗೆ ಕರೆದೊಯ್ದರು. ದಣಿದಿದ್ದ ನಾವು ಇಲ್ಲಿ ಒಂದು ತಾಸಿಗೂ ಅಧಿಕ ಸಮಯ ವಿಶ್ರಮಿಸಿದೆವು.


ನನ್ನ ಸಹಚಾರಣಿಗರಿಬ್ಬರಿಗೆ ಸ್ವಲ್ಪ ಹೆಚ್ಚೇ ದಾಕ್ಷಿಣ್ಯ. ’ಊಟ ಮಾಡಿಕೊಂಡು ಹೋಗಿ’ ಎಂದು ಗೌಡರು ಹೇಳಿದರೆ ಅವರಿಬ್ಬರು ಬೇಡ ಎಂದುಬಿಟ್ಟರು. ನಾನು ಮೌನವಾಗಿದ್ದೆ. ಗೌಡರು ಮತ್ತೊಮ್ಮೆ ಕೇಳಿದರು, ಆಗಲೂ ಅವರಿಬ್ಬರಿಂದ ’ಬೇಡ’ ಎಂಬ ಉತ್ತರವೇ ಬಂತು. ನಾನು ಅಷ್ಟು ಚಪಾತಿಗಳನ್ನು ಮಧ್ಯಾಹ್ನದ ಊಟಕ್ಕೆಂದು ತಂದಿದ್ದೆ. ಮುಂಜಾನೆ ಉಪಹಾರ ಮಾಡಲು ಸಮಯ ಸಿಗದ ಕಾರಣ ಊಟಕ್ಕೆಂದು ತಂದ ಚಪಾತಿಗಳನ್ನು ಮುಂಜಾನೆಯ ಉಪಹಾರವನ್ನಾಗಿ ಖಾಲಿಮಾಡಿದ್ದೆವು. ಈಗ ನಮ್ಮಲ್ಲಿ ಏನೂ ಇರಲಿಲ್ಲ. ಇದೆಲ್ಲಾ ಗೊತ್ತಿದ್ದೂ, ’ಬೇಡ’ ಎನ್ನುವ ದಾಕ್ಷಿಣ್ಯದ ಪರಮಾವಧಿ ಕಂಡು ಸೋಜಿಗವೆನಿಸಿತು.


’ಇದನ್ನಾದರೂ ತಿನ್ನಿ’ ಎನ್ನುತ್ತಾ ಗೌಡರು ಬಾಳೆಹಣ್ಣಿನ ಗೊನೆಯನ್ನು ತಂದಿರಿಸಿದರು. ಠಣ್ ಠಣ್ ಠಣ್! ಎರಡೇ ನಿಮಿಷದಲ್ಲಿ ಅರ್ಧ ಗೊನೆಯಷ್ಟು ಬಾಳೆಹಣ್ಣುಗಳು ಖಾಲಿ! ತೋರುಬೆರಳಿನಷ್ಟು ಉದ್ದವಿದ್ದ ಬಾಳೆಹಣ್ಣುಗಳನ್ನು ಸಹಚಾರಣಿಗರಿಬ್ಬರು ಗುಳುಂ ಮಾಡಿಬಿಟ್ಟರು. ಅವರ ವೇಗ ಕಂಡು ಗೌಡರ ವಯೋವೃದ್ಧ ತಂದೆ ತಿಮ್ಮಾಗೌಡ್ರು ಕೂತಲ್ಲೇ ಹುಬ್ಬೇರಿಸಿದರು. ಏನಾಗುತ್ತಿದೆ ಎಂದು ಹನುಮಂತ ಗೌಡ್ರಿಗೆ ತಿಳಿಯುವಷ್ಟರಲ್ಲಿ ಅವರ ಬಾಳೆಗೊನೆ ಅರ್ಧ ಖಾಲಿಯಾಗಿತ್ತು. ಅವಕ್ಕಾದ ಗೌಡ್ರು ಅವರಿಬ್ಬರು ಸ್ವಲ್ಪ ನಿಧಾನಿಸಿದ ಕೂಡಲೇ ಅಳಿದುಳಿದ ಬಾಳೆಗೊನೆಯನ್ನು ಬೇಗನೇ ಒಳಗೆ ತಗೊಂಡುಹೋದರು.


ಬಾಳೆಗೊನೆ ಒಳಗಿಟ್ಟು ಹೊರಬಂದ ಗೌಡರು ’ತುಂಬಾ ಹಸಿವಿತ್ತೇನೋ, ಊಟ ಮಾಡಿದ್ರೆ ಒಳ್ಳೇದಿತ್ತು...’ ಎಂದ ಕೂಡಲೇ ನಾನು ’ಕೊಡಿ ಗೌಡ್ರೆ, ಊಟ ಕೊಡಿ’ ಎಂದುಬಿಟ್ಟೆ. ಊಟಕ್ಕಿರುವುದು ತರಕಾರಿ ಸಾರು ಎಂದು ಖಾತ್ರಿಮಾಡಿ ಊಟಕ್ಕೆ ಕುಳಿತೆವು. ಗೌಡರ ಮಡದಿ ತನ್ನ ಗಂಡ ಸೇವಿಸುವ ಅನ್ನದ ಪ್ರಮಾಣದಷ್ಟೇ ನಮಗೆ ಬಡಿಸಿದಾಗ ಅದನ್ನು ಖಾಲಿ ಮಾಡಲು ಬಹಳ ಪ್ರಯಾಸಪಡಬೇಕಾಯಿತು. ಅದೇನೋ ಉಪ್ಪಿನಲ್ಲಿ ನೆನೆಸಿದ್ದ ಮಾವಿನ ತುಂಡುಗಳನ್ನು ನೀಡಿದರು. ಅದನ್ನು ಇನ್ನಷ್ಟು ಕೇಳಿ ಬಡಿಸಿಕೊಂಡು ನನ್ನ ಪಾಲಿನ ಅನ್ನ ಖಾಲಿ ಮಾಡಿದೆ. ಕಾಲುನೋವು ಇದ್ದ ಚಾರಣಿಗ ಅಷ್ಟೆಲ್ಲಾ ಬಾಳೆಹಣ್ಣುಗಳನ್ನು ತಿಂದಿದ್ದರೂ ಈಗ ಇಷ್ಟೆಲ್ಲಾ ಅನ್ನ ಖಾಲಿ ಮಾಡಿದರು. ಅವರು ಕಾಲು ನೋವಿನಿಂದ ಬಹಳ ಬಳಲಿದ್ದು ಖಾತ್ರಿಯಾಯಿತು. ಕಾಲು ನೋವಿಲ್ಲದ ಚಾರಣಿಗ ಅನ್ನ ಖಾಲಿ ಮಾಡಲು ಪರದಾಡಿ ಆಗದೇ ಗೌಡ್ರಲ್ಲಿ  ಕ್ಷಮೆಯಾಚಿಸಿ ಅರ್ಧದಷ್ಟು ಊಟವನ್ನು ಬಿಟ್ಟುಬಿಟ್ಟರು.


ಊಟದ ಬಳಿಕ ಮತ್ತೆ ರೆಸ್ಟ್. ಚಾಪೆ ಹಾಸಿ ಅಡ್ಡಬಿದ್ದೆವು. ಕೊನೆಗೂ ಗೌಡರ ಅವಿರತ ಪ್ರಯತ್ನದಿಂದ ಮಂಜುನಾಥ ಗೌಡ ಎಂಬ ಯುವಕ ಕೋಟೆಗೆ ನಮ್ಮ ಮಾರ್ಗದರ್ಶಿಯಾಗಿ ಬರಲು ಅಣಿಯಾದ. ಅದಾಗಲೇ ಸಮಯ ೩ ದಾಟಿತ್ತು. ಘಟ್ಟದ ಕೆಳಗೆ ಕೊನೆಯ ಬಸ್ಸು ಸಂಜೆ ೭ಕ್ಕೆ. ಕೋಟೆ ನೋಡಿ ನಂತರ ೭ ಗಂಟೆಯೊಳಗೆ ರಸ್ತೆಯತ್ತ ತಲುಪುವುದು ಅಸಾಧ್ಯವಾಗಿತ್ತು. ಗೌಡರೊಂದಿಗೆ ಚರ್ಚಿಸಿದಾಗ, ಕೋಟೆಯಿಂದಲೇ ಆರಂಭವಾಗುವ ಕಾಲುದಾರಿಯೊಂದು ಮತ್ತೊಂದು ಹಳ್ಳಿಗೆ ತೆರಳುವುದೆಂದೂ, ೭ ಗಂಟೆಯ ಬಸ್ಸು ಈ ಹಳ್ಳಿಗೆ ತಲುಪುವಾಗ ೭.೧೫ ಆಗುವುದೆಂದೂ ಹಾಗೂ ಕೋಟೆಯಿಂದ ಈ ಹಳ್ಳಿಗಿರುವ ದೂರ ನಾವು ಬಂದ ದಾರಿಯ ಅರ್ಧದಷ್ಟು ಎಂದು ತಿಳಿದುಬಂದಾಗ ಅಲ್ಲಿಗೇ ತೆರಳುವ ನಿರ್ಧಾರ ಮಾಡಿದೆವು. ನಮಗೆ ಆತಿಥ್ಯ ನೀಡಿ, ಮಾರ್ಗದರ್ಶಿಯನ್ನೂ ನೀಡಿ ಬಹಳ ಸಹಕರಿಸಿದ ಗೌಡರಿಗೆ ವಿದಾಯ ಹೇಳಿ ಮಂಜುನಾಥನೊಂದಿಗೆ ಕೋಟೆಯತ್ತ ಹೆಜ್ಜೆ ಹಾಕಿದೆವು.


ಕಾಡು, ಕೋಟೆಯನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕೋಟೆಯ ಮೇಲ್ಭಾಗದಲ್ಲಿ ಇರುವ ತೆರೆದ ಸ್ಥಳವೊಂದನ್ನು ಹೊರತುಪಡಿಸಿ ಉಳಿದೆಲ್ಲೆಡೆ ಕಾಡು, ಕಾಡು ಮತ್ತು ಕೇವಲ ಕಾಡು. ಬೆಟ್ಟದ ಪ್ರಾಕೃತಿಕ ರಚನೆಯನ್ನು ಕೋಟೆ ನಿರ್ಮಿಸಲು ಚಾಣಾಕ್ಷ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಬೆಟ್ಟದ ಬುಡದಿಂದ ಸ್ವಲ್ಪ ಮೇಲೆ ಕೋಟೆಯ ಮೊದಲ ಸುತ್ತಿನ ಮಹಾದ್ವಾರವಿದೆ. ಸಣ್ಣ ಸಣ್ಣ ಚಪ್ಪಡಿ ಕಲ್ಲುಗಳನ್ನು ಬಳಸಿ ಕೋಟೆಯ ಗೋಡೆಗಳನ್ನು ಸುಭದ್ರವಾಗಿ ನಿರ್ಮಿಸಲಾಗಿದೆ. ಗೋಡೆ ಮೇಲಕ್ಕೆ ಹೋದಂತೆ ಕೆಂಪುಕಲ್ಲುಗಳನ್ನು ಬಳಸಲಾಗಿದೆ.


ಕೋಟೆಯ ಒಳಗಡೆ ಹೋದಂತೆಲ್ಲಾ ಎಲ್ಲವೂ ಗೊಂದಲಮಯ. ಎಲ್ಲಾ ದಿಕ್ಕುಗಳಿಂದಲೂ ಕಾಡು ಆವೃತವಾಗಿರುವುದರಿಂದ ಕೋಟೆ ಎಷ್ಟು ಸುತ್ತುಗಳನ್ನು ಹೊಂದಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಬೆಟ್ಟವೇರಿದಂತೆ ಒಂದೊಂದೇ ಸುತ್ತನ್ನು ದಾಟುತ್ತಾ ಮುನ್ನಡೆದೆವು. ಪ್ರತಿ ಸುತ್ತುಗಳ ನಡುವೆ ಇರುವ ಕಂದಕದ ರಚನೆ ಪ್ರಾಕೃತಿಕವಾಗಿದೆ. ಒಂದನೇ ಸುತ್ತಿನಿಂದ ನೋಡುವಾಗ ಎರಡನೇ ಸುತ್ತಿನ ಗೋಡೆ ೩೦-೪೦ ಅಡಿಗಳಷ್ಟು ಎತ್ತರವಾಗಿ ಕಾಣಿಸಿದರೂ, ಒಳಗಿನಿಂದ ಕೇವಲ ನಾಲ್ಕೈದು ಅಡಿ ಎತ್ತರವಿದೆ.


ಇದು ಸುಮಾರು ಮೂರು ಅಥವಾ ನಾಲ್ಕು ಸುತ್ತಿನ ಕೋಟೆಯಿರಬಹುದು. ಕೋಟೆಯ ಬುರುಜುಗಳನ್ನು ಮತ್ತು ಎಲ್ಲಾ ಸುತ್ತಿನ ಗೋಡೆಗಳನ್ನು ಮರಗಳು, ಬೇರುಗಳು ಹೆಬ್ಬಾವಿನಂತೆ ಸುತ್ತಿಕೊಂಡಿವೆ. ಮಳೆಗೆ, ಗಾಳಿಗೆ ಈ ಮರಗಳು ಉರುಳಿದರೆ ಕೋಟೆಯ ಆ ಭಾಗ ಧರಾಶಾಹಿಯಾದಂತೆ.


ಕೋಟೆಯ ತುದಿಯಲ್ಲಿ ಸಭಾಂಗಣದಂತೆ ಕಾಣುವ ರಚನೆಯಿದೆ. ಅರ್ಧಚಂದ್ರಾಕಾರ ವೃತ್ತದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಿದ್ದು, ಮುಂದೆ ಸುಮಾರು ೨೫ ಅಡಿ ಸ್ಥಳ ಬಿಟ್ಟು ಚೌಕಾಕಾರದ ವೇದಿಕೆಯೊಂದರ ಅವಶೇಷವಿದೆ. ಈ ವೇದಿಕೆಗೆ ಮೊದಲು ಸುಂದರವಾದ ಮಂಟಪವಿತ್ತೇನೋ. ಮಂಟಪ ರಚಿಸಲು ಬಳಸಿದ ಕಲ್ಲುಗಳು ಅಲ್ಲೇ ಬಿದ್ದುಕೊಂಡಿವೆ.


ಕೋಟೆಯ ಒಂದು ಸುತ್ತಿನಿಂದ ಶೀಘ್ರವಾಗಿ ಹೊರಬರಲು ಕಳ್ಳದಾರಿಯೊಂದಿದೆ. ಇದು ಎರಡು ಸುತ್ತುಗಳ ನಡುವೆ ಇರುವ ಕಂದಕಕ್ಕೆ ತೆರೆದುಕೊಳ್ಳುತ್ತದೆ. ಈ ಕಂದಕದಲ್ಲಿ ನಿಂತರೆ ಅದೊಂದು ಮರೆಯಲಾಗದ ಕ್ಷಣ. ಇಕ್ಕೆಲಗಳಲ್ಲಿರುವ ಎತ್ತರದ ಗೋಡೆಗಳು ಮತ್ತು ಸುತ್ತಮುತ್ತಲೂ ಇರುವ ಮರಗಳ ನಡುವೆ ತರಗೆಲೆಗಳಿಂದ ತುಂಬಿಹೋಗಿದ್ದ ಕಂದಕದಲ್ಲಿ ನಿಲ್ಲುವುದೇ ಒಂದು ರೋಮಾಂಚಕ ಅನುಭವ.


ಬಳಿಯಲ್ಲೇ ಇದ್ದ ಎತ್ತರದ ಬುರುಜೊಂದನ್ನು ಕಾಡಿನ ಬಳ್ಳಿಗಳು, ಮರಗಳು ಮತ್ತು ಬೇರುಗಳು ಆವರಿಸಿಕೊಂಡುಬಿಟ್ಟಿದ್ದವು. ಇದರ ಮೇಲೆ ತೆರಳಿ ಅಲ್ಲಿಂದ ಕಾಡಿನ ಸೌಂದರ್ಯವನ್ನು ಇನ್ನಷ್ಟು ಸವಿದೆವು.


ನಂತರ ಕೋಟೆಯ ಮತ್ತಷ್ಟು ಒಳಗೆ ಮಂಜುನಾಥ ನಮ್ಮನ್ನು ಕರೆದೊಯ್ದ. ಕಡಿದಾದ ಇಳಿಜಾರಿನ ದಾರಿಯ ಬಳಿಕ ಧುತ್ತೆಂದು ಎದುರಾದ ಕೋಟೆಯ ರಕ್ಷಕನೂ ಮತ್ತು ಕೋಟೆಯ ದೇವರೂ ಆಗಿರುವ ’ಗಂಡುಬೀರಪ್ಪ’.


ಘಟ್ಟದ ಕೆಳಗಿನ ಹಳ್ಳಿಗಳಲ್ಲಿ ವಾಸವಿರುವ ಸಾಬಿಗಳು ಈ ಕೋಟೆಗೆ ನಿಧಿ ತೆಗೆಯಲು ಬಂದಿದ್ದರು. ಸುಮಾರು ನಾಲ್ಕು ದಿವಸ ಕೋಟೆಯಲ್ಲೇ ಇದ್ದು ಅಲ್ಲಲ್ಲಿ ಅಗೆದು ತೆಗೆದು ನೋಡಿದರೂ ಏನೂ ಸಿಗಲಿಲ್ಲ. ಅದೊಂದು ದಿನ ತಮ್ಮೆಲ್ಲಾ ಸಲಕರಣೆಗಳನ್ನು ಹಿಡಿದುಕೊಂಡು ಲಬೋಲಬೋ ಎಂದು ಹೊಯ್ಕೊಳ್ಳುತ್ತಾ ಹಳ್ಳಿಯೆಡೆ ಓಡಿಬಂದರು. ಅವರ ಪಾಡು ಹೇಳತೀರದು. ಮೈ ಕೈಯಲ್ಲೆಲ್ಲಾ ಪರಚಿದ ಗಾಯಗಳು. ಕಾಲುಗಳಲ್ಲಿ ರಕ್ತ. ಮುಖದಲ್ಲಿ ಪ್ರೇತಕಳೆ. ಏನನ್ನೋ ತೊದಲುತ್ತಾ ಘಟ್ಟದ ಕೆಳಗೆ ಓಡಿದರು. ಹಳ್ಳಿಗರು ವಿವರಿಸಿದ ಘಟನೆ ಇದು.


ಕೋಟೆಯ ನಡುವೆ ಇರುವ ಸೂರಿಲ್ಲದ ದೇವರಾದ ’ಗಂಡುಬೀರಪ್ಪ’ ಈ ಕೋಟೆಯ ಮತ್ತು ಈ ಹಳ್ಳಿಯ ರಕ್ಷಕ ಎಂದು ಹಳ್ಳಿಗರು ನಂಬಿದ್ದಾರೆ. ಕೋಟೆಯ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಮರಕಡಿಯುವುದು, ನಿಧಿಶೋಧನೆಗಾಗಿ ಅಗೆಯುವುದು ಇತ್ಯಾದಿ ಮಾಡಿದರೆ ಗಂಡುಬೀರಪ್ಪನೇ ತಕ್ಕ ಶಾಸ್ತಿ ಮಾಡುತ್ತಾನೆ ಎಂದು ಎಲ್ಲರ ನಂಬಿಕೆ. ಆದ್ದರಿಂದ ಯಾರೂ ಕೋಟೆಯ ಮತ್ತು ಈ ಕಾಡಿನ ತಂಟೆಗೆ ಬರುವುದೇ ಇಲ್ಲ. ಅಪ್ಪಿತಪ್ಪಿ ಯಾರಾದರೂ ಕೋಟೆಯ ಅಥವಾ ಕಾಡಿನ ಉಸಾಬರಿಗೆ ಬಂದರೆ ಆ ಸಾಬಿಗಳಿಗೆ ಆದ ದುರವಸ್ಥೆಯೇ ಎಲ್ಲರಿಗೂ ಆಗುವುದು ಎಂಬ ನಂಬಿಕೆ ಎಲ್ಲೆಡೆ ಮನೆಮಾಡಿಕೊಂಡಿದೆ.


ಕೋಟೆ ತುಂಬಾ ಚಿನ್ನ ತುಂಬಿದೆ ಎಂಬ ನಂಬಿಕೆಯೂ ಎಲ್ಲೆಡೆ ಇದೆ. ಆದರೆ ಗಂಡುಬೀರಪ್ಪನ ಹೆದರಿಕೆಯೂ ಎಲ್ಲರಿಗಿದೆ. ಕೋಟೆಯ ಒಳಗೆ ಹೇರಳ ನೀರು ಲಭ್ಯವಿರುವುದರಿಂದ ಇಲ್ಲಿ ಕಾಡು ಕಡಿದು ತೋಟ ಮಾಡುವ ದುರಾಲೋಚನೆಯೂ ಕೆಲವು ಹಳ್ಳಿಗರಿಗೆ ಬಂದಿತ್ತು. ಆದರೆ ಗಂಡುಬೀರಪ್ಪನಲ್ಲಿ ತೋಟ ಮಾಡುವ ವಿಚಾರವನ್ನು ಪ್ರಶ್ನೆ ರೂಪದಲ್ಲಿ ಕೇಳಿದಾಗ ನಕಾರಾತ್ಮಕ ಉತ್ತರ ಬಂದ ಕಾರಣ ಆ ವಿಚಾರವನ್ನೂ ಕೈಬಿಡಲಾಗಿದೆ.


ಅದೇನೇ ಇರಲಿ. ಗಂಡುಬೀರಪ್ಪನ ಇರುವಿಕೆ ಮತ್ತು ಆತನ ಶಕ್ತಿಯಲ್ಲಿ ಹಳ್ಳಿಗರಿಗೆ ಇರುವ ಅಪಾರ ನಂಬಿಕೆಯಿಂದ ಕಾಡು ಮತ್ತು ಕೋಟೆ ಸುರಕ್ಷಿತವಾಗಿವೆ. ಇದೊಂದೇ ಕಾರಣಕ್ಕಾಗಿ ಗಂಡುಬೀರಪ್ಪನಿಗೆ ಜೈಕಾರ ಜೈಕಾರ ಜೈಕಾರ.


ಕೋಟೆಯ ಮೊದಲನೇ ಸುತ್ತಿಗೆ ಹಿಂತಿರುಗಿ ಅಲ್ಲಿ ಸ್ವಲ್ಪ ಸಮಯ ವಿಶ್ರಮಿಸಿದೆವು. ಇಲ್ಲೊಂದು ಮಾಸಿದ ವೀರಗಲ್ಲು ಇದೆ. ಮಂಜುನಾಥನ ಮನೆನಾಯಿ ’ಫಂಡು’ ಕೋಟೆಯುದ್ದಕ್ಕೂ ನಮ್ಮೊಂದಿಗೆ ಅಲೆದಾಡಿ ಈಗ ನಮ್ಮೊಂದಿಗೆ ಕುಳಿತಿದ್ದ. ಅಲ್ಲೇ ಇದ್ದವು ಮಂಜುನಾಥನ ಮನೆಯ ದನಗಳು. ಮನೆಯೆಡೆ ಹೊರಟಿದ್ದ ಅವುಗಳು, ತಮ್ಮ ಒಡೆಯ ಕೋಟೆಯೊಳಗೆ ತೆರಳುವುದನ್ನು ಕಂಡು ಅಲ್ಲೇ ಮೇಯುತ್ತಾ ಮಂಜುನಾಥ ಹಿಂತಿರುಗುವುದನ್ನು ಕಾಯುತ್ತಿದ್ದವು.


ಮಂಜುನಾಥನು ಮನೆಯತ್ತ ತೆರಳಲು ಅಣಿಯಾದರೆ ನಾವು ಆ ಮತ್ತೊಂದು ಹಳ್ಳಿಯೆಡೆ ಘಟ್ಟ ಇಳಿಯಲು ಅಣಿಯಾದೆವು. ಸಮಯ ೫ ಗಂಟೆಯಾಗಿ ೫ ನಿಮಿಷ ಆಗಿತ್ತು. ಸರಿಯಾಗಿ ೬.೩೦ಕ್ಕೆ ಕತ್ತಲು ಆಗುತ್ತದೆ. ಅಷ್ಟರೊಳಗೆ ಕೆಳಗಿನ ಹಳ್ಳಿ ತಲುಪುವ ಇರಾದೆ. ನಮ್ಮಲ್ಲಿ ಟಾರ್ಚ್ ಇರಲಿಲ್ಲ. ಕತ್ತಲಾದರೆ ಒಂದು ಹೆಜ್ಜೆ ಇಡಲು ಸಾಧ್ಯವಾಗದಷ್ಟು ದಟ್ಟ ಕಾಡು.


ಒಂದೈದು ನಿಮಿಷ ಸಾಗಿದ ಕೂಡಲೇ ಕೋಟೆಯ ಗಡಿ ಸೂಚಿಸುವ ಮೊದಲ ಸುತ್ತಿನ ಗೋಡೆಯನ್ನು ದಾಟಿದೆವು. ದಾರಿ ಹಾಗೆ ಮುಂದುವರಿಯಿತು. ಸ್ವಲ್ಪ ಮುಂದೆ ದೇವಿಯೊಬ್ಬಳ ಮೂರ್ತಿ. ಆ ದಿನವೇ ಯಾರೋ ಪೂಜೆ ಮಾಡಿ ಹೋದ ಕುರುಹುಗಳು. ಸಮಯ ೫.೩೦ ದಾಟಿದರೂ ಇನ್ನು ಘಟ್ಟದ ಇಳಿಜಾರು ಸಿಗದಾಗ ಆತಂಕ ಶುರುವಾಯಿತು. ಪಶ್ಚಿಮದ ಆಗಸ ಅದಾಗಲೇ ನಸುಗೆಂಪು ಬಣ್ಣಕ್ಕೆ ತಿರುಗುವ ತಯಾರಿ ಮಾಡಿತ್ತು. ಅಂತೂ ಅರ್ಧ ಗಂಟೆಯ ಬಳಿಕ ಇಳಿಜಾರು ಆರಂಭವಾಯಿತು.


ಸಹಚಾರಣಿಗರಿಬ್ಬರು ವೇಗವಾಗಿ ಮುನ್ನಡೆದು, ನನಗಾಗಿ ಕಾದು ಮತ್ತೆ ವೇಗವಾಗಿ ಮುನ್ನಡೆಯುವ ಪ್ರಕ್ರಿಯೆ ಆರಂಭಿಸಿದ್ದರು. ಹೋಗುವುದು ಬರುವುದು ಸೇರಿ ಹೆಚ್ಚೆಂದರೆ ೧೦ ಕಿಮಿ ಆಗಬಹುದು ಎಂದು ಬಂದರೆ ಈಗ ಸುಮಾರು ೨೦ ಕಿಮಿ ಸಮೀಪ ಆಗತೊಡಗಿದಾಗ ಎಡಕಾಲಿನ ಮೊಣಗಂಟು ಮಾತನಾಡತೊಡಗಿತು. ’ಇಪ್ಪತ್ತು ಕಿಮಿ ಎಂದು ಮೊದಲೇ ಹೇಳಬೇಕಿತ್ತು’ ಎಂದು ಆಕ್ಷೇಪಣೆ ಎತ್ತುತ್ತಿದ್ದ ಮೊಣಗಂಟಿನಿಂದ ನನ್ನ ವೇಗ ಕಡಿಮೆಯಾದರೂ ಎಲ್ಲೂ ನಿಲ್ಲದೆ ಮುನ್ನಡೆದೆ.


ಇಳಿಜಾರಿನ ಹಾದಿ ಕೊನೆಗೊಂಡಿದ್ದು ಹಳ್ಳಿಯ ಸರಹದ್ದು ತಲುಪಿದಾಗಲೇ. ಸಮಯ ೬.೩೦ ಆಗಿತ್ತು. ನಾಲ್ಕೈದು ಗದ್ದೆಗಳನ್ನು ದಾಟಿ ಹಳ್ಳಿಯ ರಸ್ತೆ ತಲುಪಿದಾಗ ಕತ್ತಲೆ ಆವರಿಸಿಬಿಟ್ಟಿತ್ತು. ಅಲ್ಲಿಂದ ಇನ್ನೆರಡು ಕಿಮಿ ನಡೆದು ಮುಖ್ಯ ರಸ್ತೆ ತಲುಪಿ ಕೊನೆಯ ಬಸ್ಸನ್ನೇರಿ ಟಿಕೇಟು ತೆಗೆದ ಕೂಡಲೇ ನಿದ್ರಾದೇವಿಗೆ ಶರಣಾಗಿಬಿಟ್ಟೆವು.