ಬುಧವಾರ, ಜನವರಿ 17, 2007

ಕರ್ನಾಟಕ ಕ್ರಿಕೆಟ್ ೩ - ಯೆರೆ ಗೌಡ

ಇವರ ಪೂರ್ಣ ಹೆಸರು ಯೀರೆ ಕಾರೆಕಲ್ಲು ತಿಪ್ಪಣ್ಣ ಗೌಡ. ರಾಯಚೂರಿನಿಂದ ಉದ್ಭವಿಸಿದ ಅತ್ಯುತ್ತಮ ಸೆಲ್ಫ್ ಮೇಡ್ ಆಟಗಾರ. ಹೆಚ್ಚಿನ ಪ್ರತಿಭೆ ಇಲ್ಲದೆ ಸ್ವಂತ ಪರಿಶ್ರಮದಿಂದ ಕಷ್ಟಪಟ್ಟು ಕ್ರಿಕೆಟ್ ಜಗತ್ತಿನಲ್ಲಿ ವೇಗವಾಗಿ ಮೇಲೇರಿದ ಅಸಾಧಾರಣ ಶ್ರಮಜೀವಿ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿರುವ ಗೌಡರಿಗೆ ೩೫ ವರ್ಷ ವಯಸ್ಸು.

೯೦ ರ ದಶಕದ ಪ್ರಾರಂಭದಲ್ಲಿ ದಕ್ಷಿಣ ವಲಯದ ತಂಡಗಳ ನಡುವೆ ೨೩ ವರ್ಷದೊಳಗಿನವರಿಗಾಗಿ ಪಿ.ರಾಮಚಂದ್ರ ರಾವ್ ಟ್ರೋಫಿ ಪಂದ್ಯಾಟ ನಡೆಯುತ್ತಿತ್ತು. ಹೆಸರಿಗೆ ದಕ್ಷಿಣ ವಲಯ ಎಂದಿದ್ದರೂ ಕೇವಲ ೩ ತಂಡಗಳು - ಕರ್ನಾಟಕ, ಹೈದರಾಬಾದ್ ಮತ್ತು ತಮಿಳುನಾಡು - ಮಾತ್ರ ಇದರಲ್ಲಿ ಭಾಗವಹಿಸುತ್ತಿದ್ದವು. ೯೨-೯೩, ೯೩-೯೪, ಮತ್ತು ೯೪-೯೫ ಈ ೩ ಋತುಗಳಲ್ಲೂ ಕರ್ನಾಟಕ ಯೀರೆ ಗೌಡರ ನೇತೃತ್ವದಲ್ಲಿ ಪಿ.ರಾಮಚಂದ್ರ ರಾವ್ ಟ್ರೋಫಿಯನ್ನು ಗೆದ್ದಿತ್ತು. ಪ್ರತಿ ಋತುವಿನಲ್ಲೂ ಯೀರೆ ಗೌಡ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಹಾಗೇನೇ ಪ್ರತೀ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆ ಶತಕದ ಆಧಾರದ ಮೇಲೆ ಆಯ್ಕೆಯಾಗುತ್ತಿದ್ದರು. ಬರೀ ಆಯ್ಕೆ ಆಗುತ್ತಿದ್ದರು ಅಷ್ಟೆ, ಆಡಲು ಅವಕಾಶ ಸಿಗುತ್ತಿರಲಿಲ್ಲ. ಮತ್ತೆ ಕರ್ನಾಟಕದ ಪರವಾಗಿ ಮುಂದಿನ ಋತುವಿನ ಪಿ.ರಾಮಚಂದ್ರ ರಾವ್ ಟ್ರೋಫಿ ಪಂದ್ಯಾಟದಲ್ಲೇ ಆಡುವುದು!

೯೨-೯೩ ಮತ್ತು ೯೩-೯೪ ಋತುಗಳಲ್ಲಿ ಆಯ್ಕೆಗಾರರು ಯೀರೆ ಗೌಡರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಕೊಡಲಿಲ್ಲ. ಪಾನೀಯ ಹೊರುವುದು, ಪೆವಿಲಿಯನ್ ನಿಂದ ಬ್ಯಾಟಿಂಗ್ ಮಾಡುತ್ತಿದ್ದವರಿಗೆ ಸಂದೇಶ ರವಾನಿಸುವುದು, ಇವಿಷ್ಟೇ ಈ ೨ ವರ್ಷಗಳಲ್ಲಿ ಗೌಡರು ಮಾಡಿದ್ದು. ಗೌಡರಿಗಿಂತ ಕಡಿಮೆ ಅರ್ಹತೆ ಹೊಂದಿದ್ದ ಇತರ ಆಟಗಾರರು ಕರ್ನಾಟಕವನ್ನು ಈ ಅವಧಿಯಲ್ಲಿ ಪ್ರತಿನಿಧಿಸಿದರು. ಅದಾಗಲೇ ಯೀರೆ ಬಹಳಷ್ಟು 'ಫ್ರಸ್ಟ್ರೇಟ್' ಆಗಿದ್ದರು.

೯೪-೯೫ ರ ಋತುವಿನಲ್ಲಿ ಮೊದಲ ೩ ಪಂದ್ಯಗಳಲ್ಲಿ ಅಂತಿಮ ಹನ್ನೊಂದರಲ್ಲಿ ಮತ್ತೆ ಗೌಡರಿಗೆ ಸ್ಥಾನವಿಲ್ಲ. ನಾಲ್ಕನೇ ಪಂದ್ಯ ಹೈದರಾಬಾದ್ ವಿರುದ್ಧ ಬಿಜಾಪುರದಲ್ಲಿತ್ತು. ಉತ್ತರ ಕರ್ನಾಟಕದವರಾದ ಯೀರೆ ಗೌಡರನ್ನು ಆ ಭಾಗದಲ್ಲೇ ನಡೆಯುವ ಪಂದ್ಯದಲ್ಲಿ ಅಂತೂ ಕೊನೆಗೆ ಆಡಿಸಲಾಯಿತು. ಆದರೆ ಯೀರೆ ಕೇವಲ ೧೬ ಓಟ ಗಳಿಸಿದರು. ನಂತರ ಪಲಕ್ಕಾಡ್ ನಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ ಮತ್ತೆ ವೈಫಲ್ಯ. ಗಳಿಸಿದ್ದು ೦ ಮತ್ತು ೩೭. ನಂತರ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ ನಡೆದ ಕ್ವಾ.ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಯೀರೆ ಗಳಿಸಿದ್ದು ೨೪ ಓಟ. ಕರ್ನಾಟಕ ಗಳಿಸಿದ್ದೇ ೧೭೧ ಓಟ. ಸುನಿಲ್ ಜೋಶಿಯ ೭೮ ರ ನಂತರದ ಮೊತ್ತವೇ ಗೌಡರದ್ದು. ಇದನ್ನು ವೈಫಲ್ಯವೆಂದು ಪರಿಗಣಿಸಲಾಗದು. ಆದರೆ ಆಯ್ಕೆಗಾರರು ಎಂಬ ಹಾಸ್ಯಗಾರರಿಗೆ ಇದೆಲ್ಲಿ ತಿಳಿಯಬೇಕು. ದ್ವೀತಿಯ ಇನ್ನಿಂಗ್ಸ್ ನಲ್ಲಿ ಯೀರೆ ಗಳಿಸಿದ್ದು ಅಜೇಯ ೧೬ ಓಟಗಳು. ೩ ಪಂದ್ಯಗಳಲ್ಲಿ ೨೩.೨೫ ಸರಾಸರಿಯಲ್ಲಿ ೯೩ ಓಟಗಳು.

ಹುಡುಗನಲ್ಲಿ ಕ್ಷಮತೆ ಇದೆ, ಸ್ವಲ್ಪ ಪ್ರೋತ್ಸಾಹ, ಉತ್ತೇಜನ ನೀಡಿದರೆ ಕರ್ನಾಟಕಕ್ಕೆ ಉತ್ತಮ ಆಟಗಾರನೊಬ್ಬ ಯೀರೆ ಗೌಡರ ರೂಪದಲ್ಲಿ ಸಿಗುತ್ತಾನೆ ಎಂಬ ದೂರದೃಷ್ಟಿ ಯಾವುದೇ ಆಯ್ಕೆಗಾರನಿಗೆ ಇರದೇ ಇದ್ದದ್ದು ಕರ್ನಾಟಕದ ದುರಾದೃಷ್ಟ. ಅವರು ನೌಕರಿ ಮಾಡುತ್ತಿದ್ದ ಬೆಂಗಳೂರಿನ 'ವ್ಹೀಲ್ ಎಂಡ್ ಎಕ್ಸೆಲ್' ಸಂಸ್ಥೆ ಇಂಡಿಯನ್ ರೈಲ್ವೇಸ್ ಗೆ ಸೇರಿದ್ದರಿಂದ, ಯೀರೆ ರೈಲ್ವೇಸ್ ಪರವಾಗಿ ಆಡಲು ಎಲ್ಲಾ ರೀತಿಯಲ್ಲೂ ಅರ್ಹರಾಗಿದ್ದರು. ಆದರೂ ಕರ್ನಾಟಕವನ್ನು ಪ್ರತಿನಿಧಿಸಬೇಕು ಎಂಬ ಬಲವಾದ ಹಂಬಲದಿಂದ ೩ ವರ್ಷ ಕಾದರು. ಎಷ್ಟೇ ವೈಫಲ್ಯ ಕಂಡರೂ ಆಡುತ್ತಿದ್ದ ಇತರರು ಮತ್ತು ೨ ವೈಫಲ್ಯ ಕಂಡ ತನಗೆ ತೋರಿಸುತ್ತಿದ್ದ ನಿರ್ಲಕ್ಷ್ಯದಿಂದ ಕಡೆಗೆ ಬೇಸತ್ತು ೯೫-೯೬ ಋತುವಿನಲ್ಲಿ ರೈಲ್ವೇಸ್ ಪರವಾಗಿ ಆಡಿದರು. ೧೧ ವರ್ಷಗಳವರೆಗೆ ಸತತವಾಗಿ ರೈಲ್ವೇಸ್ ತಂಡವನ್ನು ಹೆಮ್ಮೆಯಿಂದ ಪ್ರತಿನಿಧಿಸಿದರು. ಆ ತಂಡದ 'ಬ್ಯಾಟಿಂಗ್ ಬ್ಯಾಕ್-ಬೋನ್' ಆಗಿದ್ದರು ನಮ್ಮ ಯೀರೆ ಗೌಡ.

ಕಳೆದ ೧೦ ವರ್ಷಗಳಲ್ಲಿ ರೈಲ್ವೇಸ್ ೩ ಬಾರಿ ರಣಜಿ ಟ್ರೋಫಿಯನ್ನು ಗೆದ್ದಿದೆ ಮತ್ತು ೨ ಬಾರಿ ಫೈನಲ್ ತಲುಪಿದೆ. ರೈಲ್ವೇಸ್ ತಂಡದ ಈ ಸಾಧನೆಗೆ ಯೀರೆ ಗೌಡರ ಕೊಡುಗೆ ಅಪಾರವಾದದ್ದು. ಗೌಡರಲ್ಲೊಂದು ಸ್ಕಿಲ್ ಇದೆ. ಅದೆಂದರೆ ಬಾಲಂಗೋಚಿಗಳನ್ನು ಒಂದೆಡೆ ನಿಲ್ಲಿಸಿ ಆಡಿಸುವುದು. ಈ ಸ್ಕಿಲ್ ಅತೀ ಕಡಿಮೆ ಆಟಗಾರರಿಗೆ ಇರುತ್ತೆ. ಬೇಗನೆ ೫-೬ ಹುದ್ದರಿಗಳು ಉರುಳಿದರೆ, ಬಾಲಂಗೋಚಿಗಳ ಸಹಾಯದಿಂದ ತಂಡವನ್ನು ಉತ್ತಮ ಮೊತ್ತದೆಡೆ ಕೊಂಡುಯ್ಯುವುದನ್ನು ರೈಲ್ವೇಸ್ ಗೆ ಗೌಡರು ಕಳೆದ ದಶಕದಲ್ಲಿ ಮಾಡುತ್ತಾ ಬಂದಿದ್ದಾರೆ.

೨೦೦೪-೦೫ ರ ರಣಜಿ ಫೈನಲ್ ಪಂದ್ಯ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ. ನಾಲ್ಕನೇ ದಿನದ ಭೋಜನ ವಿರಾಮದವರೆಗೆ ರೈಲ್ವೇಸ್ ತನ್ನ ಎರಡನೇ ಬಾರಿಯಲ್ಲಿ ೬ ಹುದ್ದರಿಗಳನ್ನು ಕಳಕೊಂಡು ಒಟ್ಟಾರೆ ಕೇವಲ ೨೮೨ ಓಟಗಳಿಂದ ಮುಂದಿತ್ತು. ಇನ್ನೂ ಒಂದುವರೆ ದಿನಗಳ ಆಟ ಉಳಿದಿತ್ತು. ಆಗ ತನ್ನ ಸ್ಕಿಲ್ ತೋರ್ಪಡಿಸಿದ ಯೀರೆ ಮರುದಿನ ಭೋಜನ ವಿರಾಮದ ನಂತರ ಸುಮಾರು ೭೦ ನಿಮಿಷಗಳವರೆಗೆ ನೆಲಕಚ್ಚಿ ನಿಂತು ಆಡಿದರು. ಕೊನೆಯ ಹುದ್ದರಿ ಉರುಳಿದಾಗ ತಂಡದ ಒಟ್ಟಾರೆ ಮುನ್ನಡೆ ೫೧೭ ಓಟಗಳಷ್ಟು ಆಗಿತ್ತು. ಯೀರೆ ಗಳಿಸಿದ್ದು ಅಜೇಯ ೧೩೮ ಓಟಗಳನ್ನು. ಕೊನೆಯ ೪ ಹುದ್ದರಿಗಳೊಂದಿಗೆ ಸೇರಿಸಿದ್ದು ೨೩೫ ಓಟಗಳನ್ನು. ಪಂಜಾಬ್ ಗೆಲ್ಲುವ ಚಾನ್ಸೇ ಇರಲಿಲ್ಲ. ಇಂತಹ ಅನೇಕ ಬಾರಿಗಳನ್ನು ಯೀರೆ ರೈಲ್ವೇಸ್ ಗೆ ಆಡಿದ್ದಾರೆ. ಕಳೆದ ದಶಕದಲ್ಲಿ ಕರ್ನಾಟಕ ಕಳಕೊಂಡ 'ಕ್ಲಾಸ್ ಒನ್' ಆಟಗಾರ ಯೀರೆ.

ಈ ಮಧ್ಯೆ ಕರ್ನಾಟಕದ ವಿರುದ್ಧ ರೈಲ್ವೇಸ್ ಒಂದೆರಡು ಬಾರಿ ಆಡಿದೆ. ೨೦೦೦-೦೧ ಋತುವಿನಲ್ಲಿ ಕ್ವಾ,ಫೈನಲ್ ಪಂದ್ಯದಲ್ಲಿ ಕರ್ನಾಟಕ ರೈಲ್ವೇಸ್ ವಿರುದ್ಧ ಮೊದಲ ಬಾರಿಯ ಮುನ್ನಡೆ ಆಧಾರದಲ್ಲಿ ಸೋತಿತು. ರೈಲ್ವೇಸ್ ಪರವಾಗಿ ಯೀರೆ ೨೬ ಮತ್ತು ೯೨ ಓಟ ಗಳಿಸಿದ್ದರು. ೨೦೦೪-೦೫ ರಲ್ಲಿ ಮತ್ತೆ ನಡೆದ ಮುಖಾಮುಖಿಯಲ್ಲಿ ಪಂದ್ಯ ಡ್ರಾ ಆಯಿತು. ಯೀರೆ ೩೦ ಓಟ ಗಳಿಸಿದ್ದರು.
೧೯೯೮-೯೯ ರ ನಂತರ ಕರ್ನಾಟಕ ರಣಜಿ ಟ್ರೋಫಿಯಲ್ಲಿ ವಿಫಲವಾಗುತ್ತಾ ಇತ್ತು. ಆತ್ತ ರೈಲ್ವೇಸ್ ಪರವಾಗಿ ಯೀರೆ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹಳೆಯ ಗೆಳೆಯರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್, ಯೀರೆ ಮತ್ತೆ ಕರ್ನಾಟಕಕ್ಕಾಗಿ ಆಡಬೇಕು ಎಂದು ಮುಕ್ತವಾಗಿ ಹೇಳಿಕೆಗಳನ್ನು ಕೊಟ್ಟಿದ್ದರು. ಮಧ್ಯ ಕ್ರಮಾಂಕದಲ್ಲಿ ಒಬ್ಬ ಉತ್ತಮ ಆಟಗಾರನ ಕೊರತೆ ಕರ್ನಾಟಕಕ್ಕೆ ಇತ್ತು. ವೈಯುಕ್ತಿಕವಾಗಿ ತನ್ನ ಹಳೆ ಗೆಳೆಯರಿಬ್ಬರು ಕರ್ನಾಟಕಕ್ಕೆ ಆಡುವಂತೆ ಕೇಳಿಕೊಂಡಾಗ, ಯೀರೆ ನಯವಾಗಿ ನಿರಾಕರಿಸಿದ್ದರು.

ಕರ್ನಾಟಕಕ್ಕೆ ಆಡಬೇಕು ಎಂಬ ಹಂಬಲ ಮನದಾಳದಲ್ಲಿದ್ದರೂ, ಹೆಸರು ಮತ್ತು ಯಶಸ್ಸು ತಂದುಕೊಟ್ಟ ರೈಲ್ವೇಸ್ ನ್ನು ಒಮ್ಮೇಲೆ ಬಿಟ್ಟುಬಿಡಲು ಗೌಡರು ತಯಾರಿರಲಿಲ್ಲ. ಯೀರೆಯನ್ನು ಎಲ್ಲರು ಮೆಚ್ಚುವುದು ಅವರ ಇದೇ ಗುಣಕ್ಕಾಗಿ. ಆದರೂ ಶ್ರೀನಾಥ್ ಪಟ್ಟು ಬಿಡಲಿಲ್ಲ. ಮತ್ತೆ ಮತ್ತೆ ತನ್ನ ಗೆಳೆಯನನ್ನು ಕೇಳಿಕೊಂಡರು. ಯೀರೆ ೨೦೦೩ ರಿಂದ ನಿರಾಕರಿಸುತ್ತಲೇ ಇದ್ದರು, ಶ್ರೀನಾಥ್ ಕೇಳುತ್ತಲೇ ಇದ್ದರು. ಅಂತೂ ಕೊನೆಗೆ ೩ ವರ್ಷಗಳ ಪ್ರಯತ್ನದ ಬಳಿಕ ಈ ಋತುವಿನಲ್ಲಿ ಕರ್ನಾಟಕಕ್ಕಾಗಿ ಆಡಲು ಯೀರೆ ಗೌಡ ಒಪ್ಪಿದರು. ಈ ಬಾರಿ ನಿರಾಕರಿಸಲಾಗದಂತಹ 'ಆಫರ್' ಅವರಿಗೆ ಕೊಡಬೇಕು ಎಂದು ನಿರ್ಧರಿಸಿದ ಕೆ.ಎಸ್.ಸಿ.ಎ, ಕರ್ನಾಟಕದ ನಾಯಕತ್ವದ 'ಆಫರ್' ನ್ನು ಅವರ ಮುಂದಿರಿಸಿದಾಗ, ಮೊದಲೇ ಗೆಳೆಯರ ವಿನಂತಿಗಳಿಗೆ ೮೦% ಸೋತಿದ್ದ ಯೀರೆ ಸಂಪೂರ್ಣವಾಗಿ ಸೋತರು.

ಈ ಋತುವಿನ ಮೊದಲ ಪಂದ್ಯದಲ್ಲಿ ಬರೋಡ ವಿರುದ್ಧ ಕರ್ನಾಟಕಕ್ಕೆ ಡಬಲ್ ಶಾಕ್. ಕರ್ನಾಟಕದ ಪರವಾಗಿ ಯೀರೆ ಗೌಡ ಆಡಲಿಕ್ಕೆ ರೈಲ್ವೇಸ್-ನ್ 'ನೋ ಒಬ್ಜೆಕ್ಷನ್ ಸರ್ಟಿಫಿಕೇಟ್', ಬಿ.ಸಿ.ಸಿ.ಐ ಗೆ ತಲುಪದಿದ್ದ ಕಾರಣ ಯೀರೆ ಮೊದಲ ಪಂದ್ಯವನ್ನು ಆಡಲಾಗಲಿಲ್ಲ. ಕರ್ನಾಟಕ ಈ ಪಂದ್ಯವನ್ನು ಹೀನಾಯವಾಗಿ ಸೋತಿತು. ನಂತರದ ಪಂದ್ಯಗಳಲ್ಲಿ ಆಂಧ್ರದ ವಿರುದ್ಧ ಸ್ವಲ್ಪ ಮೈ ಮರೆತದ್ದನ್ನು ಬಿಟ್ಟರೆ ನಮ್ಮ ಹುಡುಗರು ಗೌಡರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ವೆಲ್ ಕಮ್ ಬ್ಯಾಕ್ ಯೀರೆ ಗೌಡ.

ಕಾಮೆಂಟ್‌ಗಳಿಲ್ಲ: