ಭಾನುವಾರ, ಡಿಸೆಂಬರ್ 17, 2006

ಕರ್ನಾಟಕದ ಮುಕುಟಕ್ಕೆ ಪ್ರವಾಸ - ೪


ಮರುದಿನ ಸೋಮವಾರ ಬೆಳಗ್ಗೆ ಬಸವಕಲ್ಯಾಣದಿಂದ ೪ ಕಿ.ಮಿ ದೂರದಲ್ಲಿರುವ ನಾರಾಯಣಪುರಕ್ಕೆ ಹೊರಟೆ. ಮುಂಜಾನೆ ೭.೩೦ಕ್ಕೆ ನಾರಾಯಣಪುರ ಕ್ರಾಸ್ ಬಳಿ ಬಂದಾಗ ಹಲವಾರು ರಿಕ್ಷಾಗಳು ನಿಂತಿದ್ದವು. ಇವಕ್ಕೆ ಟಮ್ ಟಮ್ ಅಂತಾರಂತೆ. ಒಂದು ಟಮ್ ಟಮ್ ೧೧-೧೨ ಜನರನ್ನು ತುಂಬಿಸಿಕೊಂಡು ಹೋಗುತ್ತೆ. ಇನ್ನೂ ಸರಿಯಾಗಿ ಮೀಸೆ ಬರದ ಹುಡುಗ ನನ್ನನ್ನು ಆತನ ಟಮ್ ಟಮ್-ನ ಒಳಗೆ ಕೂರಿಸಿ ಇನ್ನುಳಿದ ಪ್ರಯಾಣಿಕರಿಗಾಗಿ ಕಾಯತೊಡಗಿದ. ೧೨ ಜನರಿಗೆ ರೂಪಾಯಿ 3ರಂತೆ ನಾರಾಯಣಪುರಕ್ಕೆ ಒಂದು ಸವಾರಿಗೆ ಟಮ್ ಟಮ್ ೩೬ ರೂಪಾಯಿ ಗಳಿಸುತ್ತದೆ. ನಾನೊಬ್ಬನೇ ಅಷ್ಟು ಹಣವನ್ನು ನೀಡುತ್ತೇನೆ ಎಂದಾಗ ಟಮ್ ಟಮ್ ಹೊರಟಿತು. ನಾರಾಯಣಪುರದಲ್ಲಿ ಚಾಳುಕ್ಯರ ಕಾಲದ ಸುಂದರವಾದ ಶಿವ ದೇವಸ್ಥಾನವೊಂದಿದೆ. ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆಯೇ ಯಾವುದೋ ಪ್ರಾಚೀನ ಕಾಲಕ್ಕೆ ತೆರಳಿದಂತೆ ಭಾಸವಾಗುವುದಂತೂ ನಿಜ. ಇಲ್ಲೂ ಗರ್ಭಗುಡಿಯೊಳಗೆ ಪ್ರವೇಶಿಸಬಹುದು. ದೇವಾಲಯಕ್ಕೆ ಸುತ್ತು ಹಾಕಿದರೆ ಸುಂದರವಾಗಿ ಕೆತ್ತಿರುವ ಶಿಲಾಬಾಲಿಕೆಯರು ಗಮನ ಸೆಳೆಯುತ್ತಾರೆ.


ಬಸವಕಲ್ಯಾಣದಲ್ಲಿರುವ ಬಸವಣ್ಣನವರ ದೇವಸ್ಥಾನ ನನ್ನ ಮುಂದಿನ ಸ್ಟಾಪ್. ಹೊರಗಿನಿಂದ ದೇವಸ್ಥಾನ ಅಷ್ಟೇನು ಆಕರ್ಷಕವಾಗಿಲ್ಲ. ಕಲ್ಯಾಣ ಮಂಟಪಕ್ಕೆ ಬಂದಂತೆ ಅನ್ನಿಸತೊಡಗಿತು. ನಿಜಕ್ಕೂ ಅಲ್ಲಿ ಕಲ್ಯಾಣ ಮಂಟಪವಿತ್ತು. ಅದನ್ನು ದಾಟಿದ ನಂತರ ದೇವಾಲಯಕ್ಕೆ ಪ್ರವೇಶ. ಬಸವಣ್ಣನವರ ಮೂರ್ತಿಯಂತೂ ಬಹಳ ಆಕರ್ಷಕವಾಗಿದೆ.


ನಂತರ ಬಸವಕಲ್ಯಾಣ ಕೋಟೆಯತ್ತ ತೆರಳಿದೆ. ಮಹಾದ್ವಾರದ ಒಳಗೆ ಹೋದರೆ ಅಲ್ಲೊಂದು ಶಾಲೆ. ಕೋಟೆಯ ಮಹಾದ್ವಾರ ಮತ್ತು ಪ್ರಥಮ ದ್ವಾರದ ನಡುವೆ ಇರುವ ವಿಶಾಲ ಪ್ರಾಂಗಣದಲ್ಲಿ ಈಗ ಸರಕಾರ ಶಾಲೆಯೊಂದನ್ನು ನಡೆಸುತ್ತಿದೆ.


ಹಾಗೆ ಮುಂದೆ ಎರಡನೇ ಬಾಗಿಲತ್ತ ನಡೆದರೆ ಅದಕ್ಕೆ ಬೀಗ ಹಾಕಿತ್ತು. ಅಲ್ಲೇ ಒಂದು ಸೂಚನೆ: ಸೋಮವಾರ ರಜಾ ದಿನ. ಅಲ್ಲೇ ಕಲ್ಲಿಗೆ ತಲೆ ಹೊಡೆದುಕೊಳ್ಳುವಷ್ಟು ಸಿಟ್ಟು ಮತ್ತು ನಿರಾಸೆ ಎರಡೂ ಒಟ್ಟಿಗೆ ಆಯಿತು.


ಬೇರೆ ದಾರಿ ಕಾಣದೆ ತಿರುಗಿ ಮಹಾದ್ವಾರದತ್ತ ಬಂದೆ. ಮತ್ತದೇ ಮೆಟ್ಟಿಲುಗಳು.ಆಕರ್ಷಕವಾಗಿ ಕೆತ್ತಿದ, ಕಡಿದಾದ ಮೆಟ್ಟಿಲುಗಳು 1ನೇ ಮಹಡಿಗೆ ಕರೆದೊಯ್ದವು. ಅಲ್ಲಿ ಕೆಲವರು 'ಕಾರ್ಡ್ಸ್' ಆಡುತ್ತ ಕಾಲಹರಣ ಮಾಡುತ್ತಿದ್ದರು. ನಂತರ ಹಾಗೇ ಎರಡನೇ ಮಹಡಿಗೆ ತೆರಳಿದೆ. ಇಲ್ಲಿಂದ ಕೋಟೆಯ ಸಂಪೂರ್ಣ ದೃಶ್ಯ ಲಭಿಸಿ, ಸ್ವಲ್ಪ ಸಮಾಧಾನವೆನಿಸಿತು.


ಕೋಟೆಯಲ್ಲಿ ೧೯೪೮ರ ತನಕ ಹೈದರಾಬಾದಿನ ನಿಜಾಮರ ವಂಶಜರು ವಾಸಿಸುತ್ತಿದ್ದರು. ಕೋಟೆಯನ್ನು ಅಷ್ಟಕೋನಾಕೃತಿಯಲ್ಲಿ ಕಟ್ಟಲಾಗಿದ್ದು, ಪ್ರತಿಯೊಂದು ಹಂತವು ಮೊದಲಿನ ಹಂತಕ್ಕಿಂತ ಮೆಲ್ಮಟ್ಟದಲ್ಲಿರುವುದು. ಸುಮಾರು ೫ ಹಂತಗಳು ಇದ್ದಿರಬಹುದು ಎಂದು ಮಹಾದ್ವಾರದ ಮೇಲಿನಿಂದ ಊಹಿಸಿದೆ. ಕೋಟೆಯು ಕಂದಕದಿಂದ ಸುತ್ತುವರಿದ ಒಂದು ದಿಬ್ಬದ ಮೇಲಿದೆ. ಇಂತಹ ಅದ್ಭುತ ಮತ್ತು ವಿಶಿಷ್ಟ ಕೋಟೆಯನ್ನು ಒಳಹೊಕ್ಕು ನೋಡಲಾಗಲಿಲ್ಲವಲ್ಲ ಎಂಬ ಕೊರಗು ಮಾತ್ರ ಈಗಲೂ ಇದೆ.

ಅಕ್ಕನಾಗಮ್ಮನ ಗವಿ, ಬಸವಣ್ಣನವರ ಗವಿ ಮತ್ತು ಅರುಹಿನ ಮನೆ ಇವಿಷ್ಟನ್ನು ನೋಡಲು ಸಮಯವಿರಲಿಲ್ಲ. ಹುಮ್ನಾಬಾದ್-ನಿಂದ ೮ ಕಿ.ಮಿ. ದೂರವಿರುವ ಜಲಸಂಘಿಯಲ್ಲಿ ಚಾಳುಕ್ಯರು ಕಟ್ಟಿಸಿದ ಅದ್ಭುತವಾದ ದೇವಾಲಯವಿದೆ. ಆದರೆ ಸಮಯದ ಅಭಾವದಿಂದ ಇದನ್ನೂ ಕೈಬಿಡಬೇಕಾಯಿತು.


ಬೀದರ್-ನಿಂದ ಮಧ್ಯಾಹ್ನ 12.30ಕ್ಕೆ ಹೊರಡುವ ಬೀದರ್ - ಉಡುಪಿ ಬಸ್ಸು, 1.40ಕ್ಕೆ ಹುಮ್ನಾಬಾದ್ ಬಸ್ ನಿಲ್ದಾಣದಿಂದ ಹೊರಡುವುದರಿಂದ, 1.40ರ ಮೊದಲೇ ನಾನು ಹುಮ್ನಾಬಾದ್ ತಲುಪಬೇಕಿತ್ತು. ಅವಸರದಲ್ಲಿ, ಬಸವಕಲ್ಯಾಣದಿಂದ ಚಿಂಚೋಳಿಗೆ ಹೊರಟ ಬಸ್ಸನ್ನೇರಿ 1.30ಕ್ಕೆ ಹುಮ್ನಾಬಾದ್ ತಲುಪಿದೆ. ಶೋಲಾಪುರ, ಝಳಕಿ ಮಾರ್ಗವಾಗಿ ಬಿಜಾಪುರಕ್ಕೆ ಬಂದು ಮರುದಿನ ಅಂದರೆ ಮಂಗಳವಾರ ಮಧ್ಯಾಹ್ನ 12.30ಕ್ಕೆ ಉಡುಪಿಯಲ್ಲಿ ನಾನು ಇಳಿದಾಗ ಬಹು ದಿನದ ಆಸೆ ಪೂರೈಸಿದ ತೃಪ್ತಿಯಿತ್ತು.

ಒಂದನೇ ಭಾಗ ಇಲ್ಲಿದೆ. ಎರಡನೇ ಭಾಗ ಇಲ್ಲಿದೆ. ಮೂರನೇ ಭಾಗ ಇಲ್ಲಿದೆ.

ಕಾಮೆಂಟ್‌ಗಳಿಲ್ಲ: