ಮಂಗಳವಾರ, ನವೆಂಬರ್ 13, 2007

ಕಲಾವಳಿ - ಕರಾವಳಿಯ ಕಲಾವಿದರ ಸಂಗಮ


ಗೆಳೆಯ ದಿನೇಶ್ ಹೊಳ್ಳ ಕಳೆದ ಒಂದು ತಿಂಗಳಿನಿಂದ ಭಾರೀ ಬ್ಯುಸಿ. ಎಲ್ಲಾದರು ಚಾರಣ ಕಾರ್ಯಕ್ರಮವಿದೆಯೇ ಎಂದು ಫೋನಾಯಿಸಿದರೆ, 'ಓಓಓಓ...' ಎನ್ನುವ ರೀತಿ ನೋಡಿದರೆ ಚಾರಣ ಎಂಬ ಹವ್ಯಾಸವೇ ಮರೆತುಹೋಗಿದೆಯೇ ಎಂಬ ಸಂಶಯ ಬರುತ್ತಲಿದೆ. ಹೊಳ್ಳರು ಬ್ಯುಸಿ ಆದರೆ ಆ ತಿಂಗಳ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಹಳ್ಳ ಹಿಡಿದಂತೆ. ಈಗ ಸದ್ಯಕ್ಕೆ ಚಾರಣವಂತೂ ದೂರದ ಮಾತು. ನವೆಂಬರ್ ೨೫ರ ವರೆಗಂತೂ ಅವರಲ್ಲಿ ಮಾತನಾಡಲೂ ಸಮಯವಿಲ್ಲ.

ಕರಾವಳಿಯ ಕಲಾವಿದರೆಲ್ಲಾ ಸೇರಿ ನವೆಂಬರ್೨೪ ಮತ್ತು ೨೫, ೨೦೦೭ರಂದು ಒಂದು ಪ್ರಶಂಸನೀಯ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಆ ೨ ದಿನಗಳಂದು ಮಂಗಳೂರಿನ ಕದ್ರಿ ಪಾರ್ಕ್ ಬಳಿ ಕರಾವಳಿಯ ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸಿ ಪ್ರತಿ ಕಲಾವಿದನಿಗೂ ಒಂದು ಪ್ರತ್ಯೇಕ 'ಸ್ಟಾಲ್' ನೀಡಿ ಅಲ್ಲಿ ಅಯಾ ಕಲಾವಿದರು ರಚಿಸಿರುವ ಚಿತ್ರಗಳನ್ನು ಪ್ರದರ್ಶನ/ ಮಾರಾಟಕ್ಕೆ ಇಟ್ಟು ಸಂಪೂರ್ಣ ಪ್ರೋತ್ಸಾಹವನ್ನು ಪ್ರತಿ ಕಲಾವಿದನಿಗೆ ನೀಡುವುದು. ಈ ಮಧ್ಯೆ ಅಲ್ಲೇ ಇರುವ 'ಸ್ಟೇಜ್' ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಕದ್ರಿ ಪಾರ್ಕ್ ನ ಪಾರ್ಶ್ವದಲ್ಲಿರುವ ಸುಮಾರು ೧.೫ಕಿಮಿ ಉದ್ದದ ರಸ್ತೆಯಲ್ಲಿ ಈ ೨ ದಿನಗಳಂದು ವಾಹನ ಓಡಾಟ ಇರಲಾರದು. ರಸ್ತೆಯ ೨ ತುದಿಗಳಲ್ಲಿ ಸ್ವಾಗತ ಕಮಾನು. ರಸ್ತೆಯ ಇಕ್ಕೆಲಗಳಲ್ಲಿ ಆಯಾ ಕಲಾವಿದರ 'ಸ್ಟಾಲ್'ಗಳು. ಸುಮಾರು ೨೫೦ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಕಲಾವಿದ ತನ್ನ ಚಿತ್ರಗಳನ್ನು ಪ್ರದರ್ಶಿಸಲಿದ್ದಾನೆ.

ತನಗಾಗಿ ಕಾದಿರಿಸಿದ 'ಸ್ಟಾಲ್'ನ ಬಾಡಿಗೆಯಾಗಿ ಸಣ್ಣ ಮೊತ್ತವನ್ನು ಪಾವತಿಸಿವುದನ್ನು ಹೊರತುಪಡಿಸಿ, ತಾನು ರಚಿಸಿರುವ ಚಿತ್ರಗಳ ಮಾರಾಟದಿಂದ ಗಳಿಸಿದ ಹಣದಲ್ಲಿ ಆಯೋಜಕರಿಗೆ ಒಂದು ನಯಾ ಪೈಸೆಯನ್ನೂ ಯಾವುದೇ ಕಲಾವಿದ ನೀಡಬೇಕಾಗಿಲ್ಲ. ಉತ್ತಮ ಕಲೆಗಾರಿಕೆಯಿದ್ದೂ ತನ್ನ ಚಿತ್ರಗಳನ್ನು ಪ್ರದರ್ಶಿಸಲು ಹೆಣಗಾಡುವ ಕಲಾವಿದರಿಗೆ ಇದೊಂದು ಸುವರ್ಣಾವಕಾಶ.

ವಿಜಯ ಕರ್ನಾಟಕದಲ್ಲಿ ತನ್ನ 'ಸೂರ್ಯಕಾಂತಿ' ಅಂಕಣಕ್ಕಾಗಿ ಕರಾವಳಿಯ ಎಲ್ಲಾ ಕಲಾವಿದರನ್ನು ದಿನೇಶ್ ವ್ಯಕ್ತಿಗತವಾಗಿ ಭೇಟಿ ಮಾಡಬೇಕಾಗಿತ್ತು. ನೂರಕ್ಕಿಂತಲೂ ಅಧಿಕ ಕಲಾವಿದರನ್ನು ಭೇಟಿ ಮಾಡಿ ಮಾತನಾಡಿಸಿರುವ ಮತ್ತು ಸ್ವತ: ಉತ್ತಮ ಕಲಾವಿದನಾಗಿರುವ ದಿನೇಶ್, ಕಲಾವಿದರ ಬವಣೆಗಳನ್ನು ಸಮೀಪದಿಂದ ಬಲ್ಲರು. ಬಡ ಕಲಾವಿದರಿಗಿರುವ ಆರ್ಥಿಕ ಮುಗ್ಗಟ್ಟು, ಪ್ರೋತ್ಸಾಹದ ಕೊರತೆ, ರಾಜಕೀಯ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿರುವ ದಿನೇಶ್, ತನ್ನಂತೆ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೋಟಿ ಪ್ರಸಾದ್ ಆಳ್ವ, ಕರುಣಾಕರ ಎಮ್. ಎಚ್ ಇವರೊಂದಿಗೆ ಸೇರಿ ಈ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದಾರೆ. ಈ ಬಗ್ಗೆ ನನ್ನ ಕೊರೆತ ಇಷ್ಟು ಸಾಕೆನಿಸುತ್ತಿದೆ. ಇನ್ನು ಕೆಳಗೆ ಇರುವ ಹೆಚ್ಚಿನ ಮಾಹಿತಿಯನ್ನು 'ಕುಡ್ಲ ಕಲಾವಳಿ'ಯ 'ಮಾಹಿತಿ ಪುಟ' ದಿಂದ ನೇರವಾಗಿ ಕದ್ದು ಬರೆದಿದ್ಡೇನೆ.

ಇವತ್ತಿನ ಸಮಕಾಲೀನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳ ಹಾಗೆ ಚಿತ್ರಕಲಾ ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ, ಬದಲಾವಣೆಗಳು ಆಗಿವೆಯಾದರೂ, ಅವನ್ನು ಎದುರಿಸುವ ಸವಾಲುಗಳೂ ಕಲಾವಿದರ ಮುಂದೆ ಸಾಕಷ್ಟು ಬೆಳೆದು ನಿಂತಿವೆ. ಇವೆಲ್ಲವುಗಳಿಗೂ ಉತ್ತರಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ಹಾಗೂ ಇಂದಿನ ಅಗತ್ಯತೆಗಳನ್ನು ಕುರಿತು ಗಮನ ಹರಿಸುವಂತಹ ದೊಡ್ಡ ಪ್ರಮಾಣದ ಸಾಮೂಹಿಕ ಕಲಾ ಚಟುವಟಿಕೆಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲು ಇಲ್ಲಿನ ಎಲ್ಲಾ ಕಲಾವಿದರು ನಿರ್ಧಾರ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಬದಲಾದ ಜಾಗತೀಕರಣ ಸಂದರ್ಭದಲ್ಲಿ ಮತ್ತು ಇಂತಹ ಪ್ರಗತಿಪರ ಕೇಂದ್ರದಲ್ಲಿ 'ಕುಡ್ಲ ಕಲಾವಳಿ'ಯಂಥ ಬೃಹತ್ ಕಲಾಮೇಳವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲು ಎಲ್ಲಾ ಕಲಾವಿದರು ಸಂಕಲ್ಪ ಮಾಡಿದ್ದೇವೆ. ಇದು ನಮ್ಮ ಸಂಕಲ್ಪ ಮಾತ್ರವಲ್ಲ, ಸಾಂಸ್ಕೃತಿಕವಾಗಿ ಕಲಾ ಸಂಸ್ಕಾರವನ್ನು ಬಿತ್ತಿ ಬೆಳೆಯಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಕಲಾವಲಯದ ಪ್ರಮುಖರನೇಕರು ಸೇರಿ 'ಕುಡ್ಲ ಕಲಾವಳಿ' ಕಲಾಮೇಳವನ್ನು ೨೦೦೭ನೇ ನವೆಂಬರ್ ೨೪ ಮತ್ತು ೨೫ರಂದು ಮಂಗಳೂರಿನ 'ಕದ್ರಿ ಪಾರ್ಕ್'ನಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ಇಂತಹ ಒಂದು ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಂಗಳೂರಿನ ಎಸ್.ಎಸ್.ಕ್ರಿಯೇಶನ್ಸ್ ಬೆನ್ನೆಲುಬಾಗಿ ನಿಂತಿದೆ.

'ಕುಡ್ಲ ಕಲಾವಳಿ'ಯಲ್ಲಿ ಕರಾವಳಿಯ ಕಲಾವಿದರ ಚಿತ್ರಕಲೆ, ಶಿಲ್ಪಕಲೆ, ಭಿತ್ತಿ ಕಲೆ, ಛಾಯಾ ಚಿತ್ರಕಲೆ ಹಾಗೂ ಕರಕುಶಲ ಕಲೆಗಳ ಪ್ರದರ್ಶನಕ್ಕಾಗಿ ಸುಮಾರು ೨೦೦ ಕಲಾ ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು. ೨೫೦ಕ್ಕೂ ಹೆಚ್ಚು ಕಲಾವಿದರು ಮತ್ತು ೭೦೦ಕ್ಕೂ ಹೆಚ್ಚು ಚಿತ್ರಕಲಾ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಅಲ್ಲದೇ, 'ಕುಡ್ಲ ಕಲಾವಳಿ'ಯ ಪ್ರಮುಖ ಅಂಗವಾಗಿ ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಹಾಗೂ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಮುಖ್ಯ ಉದ್ದೇಶಗಳು:

  • ಸಮಾಜಿಕವಾಗಿ ಕಲೆಯನ್ನು ಮತ್ತು ಕಲಾಕೃತಿಗಳನ್ನು ಜನಸಮಾನ್ಯರಿಗೆ ತಲುಪಿಸುವುದು

  • ದೃಶ್ಯಕಲೆಯ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದು

  • ಪ್ರತಿಭಾವಂತ ಕಲಾವಿದರನ್ನು ಮತ್ತು ಅವರ ಕಲಾಕೃತಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದು

  • ಯುವ ಹಾಗೂ ಬೆಳಕಿಗೆ ಬಾರದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು

  • ಸಮಕಾಲೀನ ಕಲಾಕೃತಿಗಳ ಪರಿಚಯ

  • ಕುಶಲಕಲೆಯ ಅಭಿವ್ಯಕ್ತಿಯ ಅಂಶಗಳನ್ನು ಬಿಂಬಿಸುವುದು

  • ಆಧುನಿಕ ಕಲಾ ಬೆಳವಣಿಗೆಗಳ ಪರಿಚಯ

  • ಕಲಾ ಪ್ರಾತ್ಯಕ್ಷಿಕೆಗಳ ಮುಖಾಂತರ ಕಲಾ ತಂತ್ರಗಳನ್ನು ಪರಿಚಯಿಸುವುದು

  • ಹಿರಿಯ ಕಲಾವಿದರೊಬ್ಬರನ್ನು ಸನ್ಮಾನಿಸುವುದು


  • ಕಲಾ ಪ್ರಾತ್ಯಕ್ಷಿಕೆ:

  • ನಿಸರ್ಗ ಚಿತ್ರಣ (Landscape Painting)

  • ಭಿತ್ತಿ ಚಿತ್ರ/ಶಿಲ್ಪ (Murals)

  • ಕೋಲಾಜ್ ಚಿತ್ರ (Collage Works)

  • ಭಾವ ಚಿತ್ರ (Portrait Painting)

  • ಪ್ರತಿಷ್ಠಾಪನಾ ಕಲೆ (Installation Art)

  • ಛಾಯಾ ಚಿತ್ರ (Photography)

  • ಕಾರ್ಯದರ್ಶಿ - ದಿನೇಶ್ ಹೊಳ್ಳ; ಅಧ್ಯಕ್ಷರು - ಗಣೇಶ್ ಸೋಮಯಾಜಿ ಬಿ.; ಸಂಚಾಲಕರು - ಎನ್.ಎಸ್.ಪತ್ತಾರ್; ಸಹ ಸಂಚಾಲಕರು - ರಾಜೇಂದ್ರ ಕೇದಿಗೆ

    ಕುಡ್ಲ ಕಲಾವಳಿ - ಕರುಣಾಕರ್ ಎಮ್.ಎಚ್.; ದೂರವಾಣಿ - (೦೮೨೪) ೪೨೬೯೮೯೬; ವಿ ಅಂಚೆ - kudlakalavali@yahoo.co.in

    1 ಕಾಮೆಂಟ್‌:

    Aravind GJ ಹೇಳಿದರು...

    ಉತ್ತಮವಾದ ಲೇಖನ.

    ಕಲಾವಿದರನ್ನು ಪ್ರೋತ್ಸಾಹಿಸುವುದಕ್ಕಾಗಿ ಹಮ್ಮಿಕೊಳ್ಳುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯ. ಇದಕ್ಕಾಗಿ ಶ್ರಮಿಸುತ್ತಿರುವ ದಿನೇಶ್ ಹೊಳ್ಳ ಹಾಗು ಇತರರಿಗೆ ಅಭಿನಂದನೆಗಳು.