ಶನಿವಾರ, ಅಕ್ಟೋಬರ್ 01, 2016

ಅಸ್ತಂಗತ


ಇಂದು ’ಅಲೆಮಾರಿಯ ಅನುಭವಗಳು’ ಆರಂಭಗೊಂಡು ಹತ್ತು ವರ್ಷಗಳಾದವು. 

ಈ ಬ್ಲಾಗಿನಿಂದ ನನ್ನ ಜೀವನದಲ್ಲಿ ಕೆಲವು ಧನಾತ್ಮಕ ಬೆಳವಣಿಗೆಗಳು ಆದವು. ’ಬರೆಯುವುದು’ ಅಂದರೆ ಹೇಗೆ ಎಂದೇ ಅರಿಯದ ನಾನು ಸಾಧಾರಣ ಮಟ್ಟಿಗೆ ಅದನ್ನು ಕಲಿತುಕೊಂಡೆ. ಹಲವಾರು ಸಮಾನ ಮನಸ್ಕರ ಪರಿಚಯವಾಯಿತು. ಪರಿಚಯ ಗೆಳೆತನವಾಗಿ ಬೆಳೆಯಿತು.

ನಿಮಗೆಲ್ಲರಿಗೆ ಗೊತ್ತಿರುವಂತೆ ನಾನು ಎಲ್ಲೂ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ಮಾಹಿತಿ ಕೇಳಬಾರದು ಮತ್ತು ಮಾಹಿತಿ ನೀಡಬಾರದು ಇದು ನನ್ನ ನಿಲುವು. ಚಾರಣ ಮಾಡಿ ಗೊತ್ತಿದ್ದವರು ಸ್ಥಳಗಳನ್ನು ತಾವಾಗಿಯೇ ಹುಡುಕಿಕೊಳ್ಳಬೇಕು.

ಒಂದು ಗಮ್ಯ ಸ್ಥಾನವನ್ನು ಬಹಳ ಕಷ್ಟಪಟ್ಟು ಮತ್ತು ಅಲ್ಲಿ ಇಲ್ಲಿ ವಿಚಾರಿಸಿ ಮಾಹಿತಿ ಪಡೆದುಕೊಂಡಿರುತ್ತೇವೆ. ಹಾಗಿರುವಾಗ ಆ ಮಾಹಿತಿಯನ್ನು ಅಷ್ಟು ಸುಲಭದಲ್ಲಿ ಯಾಕೆ ಎಲ್ಲೆಡೆ ಹಂಚಬೇಕು? ಇನ್ನೂ ಕೆಲವೊಮ್ಮೆ ದಾರಿ ತಪ್ಪಿ, ಗಮ್ಯ ಸ್ಥಳ ಸಿಗದೇ, ಚಾರಣವನ್ನು ಮೊಟಕುಗೊಳಿಸಿ ಹಿಂತಿರುಗಿ, ನಂತರ ಇನ್ನೊಂದು ದಿನ ಮತ್ತೆ ತೆರಳಿ, ನಾವು ನೋಡಬೇಕಾದ ಸ್ಥಳವನ್ನು ತಲುಪುತ್ತೇವೆ. ಅಂತಹ ಚಾರಣಗಳಲ್ಲಿ ನಾವು ವ್ಯಯಿಸಿದ ಸಮಯ, ಶ್ರಮಕ್ಕೆ ಬೆಲೆ ಕಟ್ಟಲಾಗದು. ಅವನ್ನೆಲ್ಲಾ ಸುಲಭದಲ್ಲಿ ಬೇರೆಯವರಿಗೆ ಹರಿವಾಣದಲ್ಲಿ ತೆಂಗಿನಕಾಯಿ ಇಟ್ಟು ದಾನ ಮಾಡಿದರೆ ನಮ್ಮ ಶ್ರಮ ಮತ್ತು ಸಮಯಕ್ಕೆ ನಾವೇ ಬೆಲೆ ನೀಡದಂತೆ.

ಚಾರಣ ಎನ್ನುವುದು ಆರಾಧನೆ ಇದ್ದ ಹಾಗೆ. ಪ್ರಕೃತಿಯ ಆರಾಧನೆ. ಅದಕ್ಕೂ ಭಾಗ್ಯ ಬೇಕು. ಇಲ್ಲಿ ಉದಾಸೀನ ಮಾಡಿದರೆ ಆ ಸಮಯ ಹೋದಂತೆ. ಅದು ಮತ್ತೆ ಬರದು. ಚಾರಣದಲ್ಲಿ ಮೌನಕ್ಕೆ ಪ್ರಾಶಸ್ತ್ಯ ದೊರಕಬೇಕು. ಆಗಲೇ ಚಾರಣದ ಸಂಪೂರ್ಣ ಚಿತ್ರಣ ಬಹಳ ವರ್ಷಗಳವರೆಗೆ ಅಚ್ಚಳಿಯದೇ ನಮ್ಮೊಡನೆ ಇರುತ್ತದೆ.

ಅದೆಷ್ಟೋ ಪರಿಸ್ಥಿತಿಗಳು ಹಾಗೂ ಸನ್ನಿವೇಶಗಳು ನಮ್ಮ ಪರವಾಗಿ ಇರಬೇಕು. ಮೊದಲನೆಯದಾಗಿ ಮನೆಯಲ್ಲಿ ಪೂರಕ ವಾತಾವರಣವಿರಬೇಕು ಮತ್ತು ಎರಡನೆಯದಾಗಿ ಚಾರಣ ಮಾಡುವಾಗ ಉತ್ತಮ ಸಂಗವಿರಬೇಕು. ಇವೆರಡು ನಮ್ಮ ಹತೋಟಿಯಲ್ಲಿರದ ವಿಷಯಗಳು. ಇವೆರಡನ್ನೂ ದೇವರು ನನಗೆ ಇದುವರೆಗೆ ಕರುಣಿಸಿದ್ದಾನೆ. 

ನಾನು ಚಾರಣದಲ್ಲಿ ಅನುಭವಿಸಿದ್ದು ಮತ್ತು ಪ್ರಯಾಣದ ಸಂದರ್ಭದಲ್ಲಿ ನೋಡಿದ್ದನ್ನು ಯಥಾವತ್ತಾಗಿ ಅಕ್ಷರ ರೂಪಕ್ಕೆ ಇಳಿಸುವ ನನ್ನ ಪ್ರಯತ್ನವನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ಮತ್ತು ಗೆಳೆಯರಿಗೆ ನಾನು ಎಂದಿಗೂ ಋಣಿ.

ಗುರುವಾರ, ಸೆಪ್ಟೆಂಬರ್ 15, 2016

ವಿರೂಪಾಕ್ಷ ದೇವಾಲಯ - ಲಕ್ಕುಂಡಿ


ಊರ ನಡುವೆ ಇರುವ ವಿರೂಪಾಕ್ಷ ದೇವಾಲಯವು ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನು ಒಳಗೊಂಡಿದೆ. ರಾಷ್ಟ್ರಕೂಟ ಶೈಲಿಯ ಈ ದೇವಾಲಯವು ಚೌಕಾಕಾರದ ತಳವಿನ್ಯಾಸವನ್ನು ಹೊಂದಿದೆ. ಇತಿಹಾಸಕಾರರ ಪ್ರಕಾರ ನಿರ್ಮಾಣದ ಬಹಳ ವರ್ಷಗಳ ಬಳಿಕ, ಅಂದರೆ ಚಾಲುಕ್ಯ ಅಥವಾ ಹೊಯ್ಸಳರ ಕಾಲದಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ. ದೇವಾಲಯಕ್ಕೆ ಮುಖಮಂಟಪ ಹಾಗೂ ಶಿಖರ ಇದ್ದ ಕುರುಹುಗಳನ್ನು ಕಾಣಬಹುದು. ವಿಶಾಲವಾಗಿದ್ದ ಮುಖಮಂಟಪದ ನೆಲಹಾಸು ಮಾತ್ರ ಈಗ ಉಳಿದಿದೆ.


ದೇವಾಲಯದ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ತೆರೆದ ಅಂತರಾಳದಲ್ಲಿ ಇನ್ನೆರಡು ಕಂಬಗಳಿದ್ದು, ಇವುಗಳ ನಡುವೆ ನಂದಿಯ ದೊಡ್ಡ ಮೂರ್ತಿಯಿದೆ.


ಗರ್ಭಗುಡಿಯ ದ್ವಾರವು ಅಲಂಕೃತ ಪಂಚಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ ವಜ್ರತೋರಣ, ವಾದ್ಯಗಾರರು, ಸ್ತಂಭ, ಸಂಗೀತಗಾರರು ಹಾಗೂ ಬಳ್ಳಿಸುರುಳಿಯನ್ನು ಕಾಣಬಹುದು. ಕೆಳಭಾಗದಲ್ಲಿ ಮಾನವ ಕೆತ್ತನೆಗಳಿವೆ.


ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮೀಯ ಸ್ಫುಟವಾದ ಕೆತ್ತನೆಯಿದೆ. ಗಜಲಕ್ಷ್ಮೀಯ ಮೇಲ್ಭಾಗದಲ್ಲಿ ಸಾಲಿನಲ್ಲಿ ಕುಳಿತಿರುವಂತೆ ಪಕ್ಷಿಗಳನ್ನು (ಕಾಗೆಯಂತೆ ಕಾಣುತ್ತವೆ!) ತೋರಿಸಲಾಗಿದೆ.


ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ದಿನಾಲೂ ಪೂಜೆ ಸಲ್ಲಿಸಿ ದೀಪ ಬೆಳಗಲಾಗುತ್ತದೆ. ದೇವಾಲಯದ ಹೊರಗೋಡೆಯಲ್ಲಿ ಗೋಪುರವಿರುವ ಮಂಟಪಗಳನ್ನು ಕೆತ್ತಿರುವುದನ್ನು ಬಿಟ್ಟರೆ ಬೇರೆ ಯಾವ ಕೆತ್ತನೆಗಳಿಲ್ಲ.


ದೇವಾಲಯಕ್ಕಿದ್ದ ಮುಖಮಂಟಪದ ವಿಶಾಲ ನೆಲಹಾಸಿನಲ್ಲಿ ಹಳ್ಳಿಗರು ಲೋಕಾಭಿರಾಮ ಹರಟುತ್ತಾ ಕುಳಿತಿರುತ್ತಾರೆ. ಅಕ್ಕಪಕ್ಕದಲ್ಲೆಲ್ಲಾ ಮನೆ ಹಾಗೂ ಅಂಗಡಿಗಳಿದ್ದು, ದೇವಾಲಯದ ಪರಿಸರದಲ್ಲಿ ಹಳೇ ಸಾಮಾನುಗಳನ್ನು ಎಲ್ಲೆಂದರಲ್ಲಿ ಹರಡಿರುವುದು ಕಂಡುಬರುತ್ತದೆ.

ಬುಧವಾರ, ಆಗಸ್ಟ್ 24, 2016

ಮಂಗಳವಾರ, ಜುಲೈ 19, 2016

ಚಾರಣ ಚಿತ್ರ - ೩೭









       ಮಂಜಿನೊಂದಿಗೆ ಟೈಮ್‍ಪಾಸ್‍...

ಭಾನುವಾರ, ಜುಲೈ 03, 2016

ಬೊಳ್ಮನೆ...


ಈ ಹಳ್ಳಿ ನಕ್ಸಲ್ ’ಸ್ಟ್ರಾಂಗ್ ಹೋಲ್ಡ್’. ಹಾಗಿದ್ದರೂ ೨೦೦೫ರ ಜುಲಾಯಿ ತಿಂಗಳಂದು ನಾವು ಹೊರಟದ್ದು ಇಲ್ಲೇ ಸಮೀಪದಲ್ಲಿರುವ ಜಲಧಾರೆಯೊಂದಕ್ಕೆ. ಬೆಟ್ಟ ಶ್ರೇಣಿಗಳಿಂದ ಇಳಿದು ಬರುವ ತೊರೆಯೊಂದರ ಜಾಡನ್ನು ಹಿಡಿದು ಹೊರಟ ನಮಗೆ ಸಿಕ್ಕಿದ್ದು, ಸುಮಾರು ೨೫ ಅಡಿ ಎತ್ತರವಿರುವ ಈ ಸಣ್ಣ ಜಲಪಾತ. ಸೂರ್ಯನ ಕಿರಣಗಳಿಗೂ ಆಸ್ಪದವಿಲ್ಲದ ದಟ್ಟ ಕಾಡಿನ ನಡುವಿನಲ್ಲಿರುವುದರಿಂದ ಈ ಜಲಧಾರೆ ಸುಂದರವಾಗಿದೆ. ಸುತ್ತಮುತ್ತಲಿನ ಪರಿಸರ, ಚಾರಣಗೈಯುವ ಕಠಿಣ ಹಾದಿ, ರವಿಯ ಕಿರಣಗಳಿಗೂ ಭೇಧಿಸಲಸಾಧ್ಯವಾದ ದಟ್ಟ ಕಾಡಿನಲ್ಲಿ ದಾರಿ ಮಾಡಿಕೊಂಡು, ಅಲ್ಲಲ್ಲಿ ಹೆಜ್ಜೇನಿನ ಗೂಡುಗಳು ಸಿಕ್ಕಾಗ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು, ದಟ್ಟ ಕಾಡಿನಲ್ಲಿ ದಿಕ್ಕಿನ ಅರಿವಿಲ್ಲದೆ ಆಗಾಗ ದಾರಿ ತಪ್ಪಿ, ಕೊನೆಗೂ ಜಲಪಾತದ ಸನಿಹ ಬಂದಾಗ ಉಂಟಾದ ಸಂತೋಷ ವರ್ಣಿಸಲಸಾಧ್ಯ. ಚಾರಣದ ಆರಂಭದಲ್ಲಿ, ಸೊಂಟಮಟ್ಟಕ್ಕೆ ಬೆಳೆದು ನಿಂತಿರುವ ಗಿಡಗಳ ನಡುವೆ ದಾರಿ ಮಾಡಿಕೊಂಡು ಸರಿಸುಮಾರು ೪೫ ನಿಮಿಷಗಳಷ್ಟು ಏರುದಾರಿಯನ್ನು ಕ್ರಮಿಸಿದ ಬಳಿಕ ಆರಂಭವಾಗುವುದು ದಟ್ಟ ಕಾಡು. ಕಾಡು ಎಷ್ಟು ದಟ್ಟವಾಗಿದೆಯೆಂದರೆ ಪೂರ್ವಾಹ್ನ ೧೧ರ ಸಮಯವಾಗಿದ್ದರೂ, ಸಂಜೆ ೬ರಂತಹ ವಾತಾವರಣ. ಭೀಮಗಾತ್ರದ ಮರಗಳಿಗಂತೂ ಲೆಕ್ಕವೇ ಇಲ್ಲ.


 
ತಿಂಗಳ ಹಿಂದೆ ಈ ಜಲಪಾತವನ್ನು ಹುಡುಕಿ ಬಂದಿದ್ದ ನಮ್ಮ ತಂಡದ ಕೆಲ ಸದಸ್ಯರು, ಹೆಜ್ಜೇನಿನ ಗೂಡಿಗೆ ನೀಡಬೇಕಾದ ಗೌರವ ನೀಡದಿದ್ದರಿಂದ ಅವುಗಳ ದಾಳಿಯನ್ನು ಎದುರಿಸಬೇಕಾಗಿ ಬಂದಿತ್ತು. ಧರಿಸಿದ್ದ ಜಾಕೆಟ್, ಕ್ಯಾಪ್ ಇತ್ಯಾದಿಗಳನ್ನು ಅಲ್ಲೇ ಬಿಸಾಡಿ ಚೆಲ್ಲಾಪಿಲ್ಲಿಯಾಗಿ ಎಲ್ಲಾ ದಿಕ್ಕುಗಳಲ್ಲಿ ಓಡಿ ಚಾರಣವನ್ನು ಮೊಟಕುಗೊಳಿಸಿ ಹಿಂತಿರುಗಿದವರಿಗೆ, ಈಗ ತಾವು ಬಿಸುಟ ಎಲ್ಲಾ ವಸ್ತುಗಳು ಮತ್ತೆ ಸಿಕ್ಕಾಗ ಉಂಟಾದ ಸಂಭ್ರಮ ನೋಡುವಂತಿತ್ತು. ಅಲ್ಲಲ್ಲಿ ಹತ್ತಿ ಇಳಿದು, ಎದ್ದು ಬಿದ್ದು, ದೈತ್ಯ ಗಾತ್ರದ ವೃಕ್ಷಗಳನ್ನು ಅಚ್ಚರಿಯಿಂದ ವೀಕ್ಷಿಸುತ್ತಾ, ಕಾಡಿನೊಳಗೆ ಸುಮಾರು ೧೦೦ ನಿಮಿಷ ಕ್ರಮಿಸಿದ ಬಳಿಕ ಜಲಪಾತದ ದರ್ಶನ ಆಗುವುದು. ಚಾರಣಗೈದು ಅಭ್ಯಾಸವಿದ್ದವರಿಗೆ ಜಲಪಾತವನ್ನು ಹುಡುಕಿಕೊಳ್ಳುವುದು ಅಸಾಧ್ಯವೇನಲ್ಲ. ಈ ಮಳೆಗಾಲದ ತೊರೆ ಹಾಗೆ ಮುಂದಕ್ಕೆ ಸಾಗಿ ಇನ್ನೂ ಕೆಲವು ಸಣ್ಣ ದೊಡ್ಡ ಜಲಪಾತಗಳನ್ನು ಸೃಷ್ಟಿಸಿದೆ. ಆದರೆ ಈ ಪ್ರಮುಖ ಜಲಪಾತದ ಅಂದಕ್ಕೆ ಉಳಿದವು ಸಾಟಿಯಾಗಲಾರವು. ಸೂರ್ಯನ ಬೆಳಕಿಗೆ ಎಲ್ಲೂ ಆಸ್ಪದವೇ ಇರದಿದ್ದರೂ, ಸರಿಯಾಗಿ ಜಲಪಾತದ ನೆತ್ತಿಯ ಮೇಲೆ ಕಾಡು ಕರುಣೆ ತೋರಿ, ಸೂರ್ಯನ ಬೆಳಕು ತೂರಿ ಬರಲು ಅವಕಾಶ ಮಾಡಿಕೊಟ್ಟಿದ್ದು, ಇದು ಜಲಪಾತದ ಸೌಂದರ್ಯವನ್ನು ಹೆಚ್ಚಿಸಿದೆ. ಜಲಪಾತದ ಮೇಲೆ ಬಲಬದಿಗೆ ಬಂಡೆಯೊಂದು ಹೊರಚಾಚಿ ನಿಂತಿದ್ದು, ಇದರ ಕೆಳಗೆ ನಿಂತು ಜಲಪಾತದ ಸೌಂದರ್ಯವನ್ನು ಬಹಳ ಸನಿಹದಿಂದ ಆಸ್ವಾದಿಸಬಹುದು.

ಭಾನುವಾರ, ಜೂನ್ 19, 2016

ತಿಲ್ಲಾರಿ...!

 

ಅಕ್ಟೋಬರ್ ೧೩, ೨೦೦೭. ಧಾರವಾಡ ಕೋರ್ಟ್ ಬಸ್ಸು ತಂಗುದಾಣದಲ್ಲಿ ನಾನು ಬಸ್ಸಿನಿಂದ ಇಳಿದಾಗ ಸರಿಯಾಗಿ ಮುಂಜಾನೆ ೪ ಗಂಟೆಯಾಗಿತ್ತು. ಅದೇ ಸಮಯಕ್ಕೆ ವಿವೇಕ್, ಗಂಗಾಧರ್ ಕಲ್ಲೂರ್, ಡಾ|ಸಂಜೀವ್ ಕುಲಕರ್ಣಿ, ಕುಮಾರ್ ಮತ್ತು ಮಕ್ಕಳಾದ ಮಿಂಚು ಮತ್ತು ನವೀನ್ ’ತಿಲ್ಲಾರಿ’ಗೆ ಹೊರಡುವವರಿದ್ದರು. ಕಲ್ಲೂರ್ ಯಾವಾಗಲೂ ಸಮಯದ ವಿಷಯದಲ್ಲಿ ಪಕ್ಕಾ. ನಾಲ್ಕು ಅಂದರೆ ನಾಲ್ಕೇ. ಒಂದು ನಿಮಿಷ ಆಚೀಚೆ ಇಲ್ಲ. ಸಮಯಕ್ಕೆ ಸರಿಯಾಗಿ ತಲುಪುತ್ತೇನೋ ಎಂಬ ಡೌಟು ನನಗಿತ್ತು. ರಾತ್ರಿ ೨ ರಿಂದಲೇ ವಿವೇಕ್ ನನಗೆ ಕರೆ ಮಾಡುತ್ತಾ ’ಎಲ್ಲಿದ್ದೀರಿ...ಎಲ್ಲಿದ್ದೀರಿ’ ಎಂದು ವಿಚಾರಿಸುತ್ತಾ ಇದ್ದರು.


ಸರಿಯಾಗಿ ನಾಲ್ಕಕ್ಕೇ ಧಾರವಾಡದಲ್ಲಿಳಿದೆ. ಅಷ್ಟರಲ್ಲಿ ಮತ್ತೆ ವಿವೇಕ್‍ರ ಫೋನ್. ಕೋರ್ಟ್ ಸ್ಟಾಪಿನಲ್ಲಿ ಇಳಿದಿದ್ದೇನೆ ಎಂದು ಹೇಳಿದ ಕೂಡಲೇ ’ಅಲ್ಲೇ ಇರಿ. ನಾವೂ ಹೊಂಟೀವಿ, ಇನ್ನೊಂದ್ ೫ ನಿಮಿಷದೊಳಗ ಅಲ್ಲಿರ್ತೀವಿ’ ಎಂದರು. ಮುಂಜಾನೆಯ ಕೆಲಸಗಳನ್ನು ಮುಗಿಸಲು ಸಮಯವಿರಲಿಲ್ಲ. ಸಮಯಕ್ಕಿಂತಲೂ ಹೆಚ್ಚಾಗಿ ಸರಿಯಾದ ಸ್ಥಳವಿರಲಿಲ್ಲ ಎನ್ನಬಹುದು. ಆದರೆ ಹಲ್ಲನ್ನಾದರೂ ತಿಕ್ಕಿಕೊಳ್ಳಬಹುದಲ್ಲ ಎಂದು ಅಲ್ಲೇ ’ಬ್ಯಾಂಕ್ ಆಫ್ ಇಂಡಿಯಾ’ದ ಮುಂದೆ ಬ್ರಶ್ ಮಾಡಿ ಕುಡಿಯಲು ತಂದಿದ್ದ ನೀರಿನಿಂದ ತೊಳೆದುಕೊಳ್ಳಬೇಕಾದರೆ ಸಂಜೀವ್ ಕುಲಕರ್ಣಿಯವರ ’ಓಮ್ನಿ’ ಬಂದು ನಿಂತಿತು.



ಮುಂಜಾನೆ ೫.೩೦ಕ್ಕೆ ಬೆಳಗಾವಿ. ಹಳೇದೆಲ್ಲಾ ನೆನಪು ಬರತೊಡಗಿತು. ಎರಡು ವರ್ಷ ಬೆಳಗಾವಿಯಲ್ಲಿ ವ್ಯಾಸಂಗ ಮಾಡುವ ನೆವದಲ್ಲಿ ಮಜಾ ಉಡಾಯಿಸಿದ್ದು ನೆನಪಾಗತೊಡಗಿತು. ಇಲ್ಲಿ ಉಪಹಾರ ಮುಗಿಸಿ ಅಂಬೋಲಿ ದಾರಿಯಲ್ಲಿ ಓಮ್ನಿ ಓಡಿತು. ಅಂಬೋಲಿ ದಾರಿಯಲ್ಲಿ ತೆರಳುವಾಗ ೧೯೯೬ರಲ್ಲಿ ನಾವು ೨೦ ಗೆಳೆಯರು ಸೇರಿ ೧೦ ಬೈಕಿನಲ್ಲಿ ಅಂಬೋಲಿಗೆ ಹೋಗಿದ್ದೆಲ್ಲಾ ಮತ್ತೆ ಮತ್ತೆ ನೆನಪಾಗತೊಡಗಿತು.



ರಾಜ್ಯದ ಗಡಿ ದಾಟಿ ಮಹಾರಾಷ್ಟ್ರ ಪ್ರವೇಶಿಸಿದೊಡನೆ ಸಿಗುವುದು ಮಹಿಪಾಲ್ ಘಡ್ ಎಂಬ ಕೋಟೆ. ಭೀಮಸೇನ ಜೋಶಿಯ ’ಆರಂಭೀ ವಂದೀನ...ಅಯೋಧ್ಯೇಚಾ ರಾಜಾ...’ ಹಾಡು ಮಹಿಪಾಲ್ ಘಡದ ಒಳಗಿನಿಂದ ತೇಲಿಬರುತ್ತಿತ್ತು. ಈಗ ಕೋಟೆಯಲ್ಲಿ ಏನೂ ಉಳಿದಿಲ್ಲ. ಬೆಳಗಾವಿಯ ವಿಹಂಗಮ ನೋಟ ಇಲ್ಲಿಂದ ಲಭ್ಯ. ’ಘಡ್’ ಎಂಬ ಹೆಸರು ಮಾತ್ರ ಆದರೆ ಅಲ್ಲಿ ಏನೂ ಇಲ್ಲ. ಸುಂದರ ದೃಶ್ಯ ಅಸ್ವಾದಿಸಲು ಹೋಗಬಹುದಷ್ಟೇ. ಕೋಟೆಯ ಗೋಡೆಗಳ ಕುರುಹು ಒಂದೆರಡು ಕಡೆ ಕಾಣಸಿಗುತ್ತವೆ. ಎಲ್ಲ ಕಡೆ ಮನೆಗಳು ಎದ್ದಿವೆ. ಮಹಿಪಾಲ್ ಘಡ್ ಮಹಾರಾಷ್ಟ್ರದಲ್ಲಿದ್ದರೂ ಇಲ್ಲಿಗೆ ದಿನಕ್ಕೆ ಆರೇಳು ಬಾರಿ ಬರುವ ಬಸ್ಸು ಮಾತ್ರ ಕರ್ನಾಟಕದ್ದು! ಅಲ್ಲಿಂದ ಹೊರಡುವಾಗ ಜೋಶಿಯವರ ’ಪಾವಲೊ.. ಪಾವಲೊ.. ಪಾವಲೊ ಪಂಢರಿ... ವೈಕುಂಠ ಭುವನ..’ ಹಾಡು ಮುಂಜಾನೆಯ ಆ ಹಿತವಾದ ವಾತಾವರಣದಲ್ಲಿ ಬಹಳ ಇಂಪಾಗಿ ಮಹಿಪಾಲ್ ಘಡದಿಂದ ಕೇಳಿಸುತ್ತಿತ್ತು. ದಾರಿಯಲ್ಲಿ ಸಿಗುವ ದೇವಸ್ಥಾನವೊಂದರ ಸಣ್ಣ ಕೊಳದಲ್ಲಿ ಎಲ್ಲರೂ ಸ್ನಾನ ಮಾಡಿದರು.



ನಂತರ ತಿಲ್ಲಾರಿ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟಿನೆಡೆ ತೆರಳಿದೆವು. ನದಿ ಮಹಾರಾಷ್ಟ್ರದಲ್ಲಿದ್ದರೂ, ಅಣೆಕಟ್ಟು ಕರ್ನಾಟಕದಲ್ಲಿದೆ! ಆದರೆ ಅಣೆಕಟ್ಟನ್ನು ನೋಡಿಕೊಳ್ಳುವುದು ಮಾತ್ರ ಮಹಾರಾಷ್ಟ್ರ ಸರಕಾರ! ಅಲ್ಲಿನ ಜನರಿಂದ ನಮಗೆ ತಿಳಿದ ವಿಷಯವಿದು. ’ಹೋ ಸಾವ್ಕಾರ್. ಡ್ಯಾಮ್ ತುಮ್ಚಾ ಕರ್ನಾಟಕ್ ಮದೀ ಆಹೆ, ಪಣ್ ಅಮ್ಚಾ ಮಹಾರಾಷ್ಟ್ರಾ ಸರ್ಕಾರ್ಚಾ ಆಧೀನ್ ಮದೀ ಅಹೆ’ ಎಂದು ಅಲ್ಲಿದ್ದ ಇಬ್ಬರು ಸ್ಥಳೀಯರು ತಿಳಿಸಿದಾಗ ನಾನು ಕಕ್ಕಾಬಿಕ್ಕಿ. ಇದು ಹೇಗೆ ಸಾಧ್ಯ ಎಂದು ಕಲ್ಲೂರ ಅವರಲ್ಲಿ ಕೇಳಿದಾಗ ಅವರೂ ಆ ಸ್ಥಳೀಯರು ಹೇಳಿದ ಮಾತಿಗೆ ಸಮ್ಮತಿ ಸೂಚಿಸಿದರು. ಈ ಮಾತನ್ನು ನಾನು ಈಗಲೂ ನಂಬುತ್ತಿಲ್ಲ.


ಇಲ್ಲಿ ಕರ್ನಾಟಕಕ್ಕೆ ಸೇರಿದ ಕೆಲವೊಂದು ಭಾಗಗಳಿಗೆ ರಸ್ತೆ ಇರುವುದು ಮಹಾರಾಷ್ಟ್ರದಲ್ಲಿ! ಮಹಾರಾಷ್ಟ್ರದೊಳಗೇ ನಮ್ಮ ರಾಜ್ಯದ ನೆಲ ತೂರಿಕೊಂಡಿದೆ. ಹಾಗಿರುವಲ್ಲೆಲ್ಲಾ ನಮ್ಮ ರಾಜ್ಯ ಸರಕಾರ ಬೇಲಿ ಹಾಕಿ ಕಾಯ್ದುಕೊಂಡಿದೆ. ತಿಲ್ಲಾರಿ ಅಣೆಕಟ್ಟಿನಿಂದ ಹೊರಗೆ ಹರಿಯುವ ನೀರು ಜಲಧಾರೆಯನ್ನೊಂದನ್ನು ನಿರ್ಮಿಸಿದೆ. ಇದಕ್ಕೆ ತಿಲ್ಲಾರಿ ಜಲಧಾರೆ ಎಂದು ಹೆಸರು.



ತಿಲ್ಲಾರಿ ಅಣೆಕಟ್ಟಿನಿಂದ ಸಮೀಪವೇ ಇದೆ ಸುಮಾರು ೪೦ ಅಡಿ ಎತ್ತರವಿರುವ ಸುಂದರ ತಿಲ್ಲಾರಿ ಜಲಧಾರೆ. ಜಲಧಾರೆಯ ಮುಂದಿರುವ ವಿಶಾಲ ಕೊಳದಿಂದ ಈ ಸ್ಥಳದ ಸೌಂದರ್ಯ ಇಮ್ಮಡಿಯಾಗಿದೆ ಎಂದು ಹೇಳಬಹುದು. ಜಲಧಾರೆಯ ನೀರು ಸೂರ್ಯನ ಮುಂಜಾನೆಯ ಕಿರಣಗಳಲ್ಲಿ ನೃತ್ಯ ಮಾಡುವಂತೆ ಹೊಳೆಯುತ್ತಿತ್ತು. ಈಜಾಡಲು ಬಹಳ ಪ್ರಶಸ್ತವಾದ ಸ್ಥಳ. ಒಂದೇ ತಾಸಿಗೆ ಮೊದಲು ಮಹಿಪಾಲ್ ಘಡದ ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡಿದರೂ, ಈ ಜಲಧಾರೆಯ ಅಂದಕ್ಕೆ ಮನಸೋತು ಎಲ್ಲರೂ ಮತ್ತೆ ನೀರಿಗಿಳಿದರು. ವಿಶಾಲ ಕೊಳಕ್ಕೆ ಹೊಳೆಯುತ್ತಾ ಧುಮುಕುತ್ತಿರುವ ಜಲಧಾರೆ. ಈ ಜಲರಾಶಿಯನ್ನು ಸುತ್ತುವರಿದ ಮರಗಿಡಗಳು. ನಾನು ಕಂಡ ಸುಂದರ ಜಲಧಾರೆಗಳಲ್ಲಿ ಇದೂ ಒಂದು.



ಅಲ್ಲಿಂದ ಸುಮಾರು ೧೦-೧೨ ಕಿಮಿ ದೂರವಿರುವ ಖಾಸಗಿ ಸ್ಥಳವೊಂದಕ್ಕೆ ಭೇಟಿ ನೀಡಿದೆವು. ಅಕ್ಕ ಪಕ್ಕದಲ್ಲಿ ೫೦ ಮೀಟರ್ ನಷ್ಟು ಅಂತರದಲ್ಲಿ ಸರಿಸುಮಾರು ೧೦೦ ಅಡಿಯಷ್ಟು ಆಳಕ್ಕೆ ಅವಳಿ ಜಲಧಾರೆಗಳು ಧುಮುಕಿ ಹಾಗೆ ಕೆಳಗೆ ಹರಿದು ತಿಲ್ಲಾರಿ ನದಿಯನ್ನು ಸೇರಿಕೊಳ್ಳುತ್ತವೆ. ಇಲ್ಲಿಂದ ತಿಲ್ಲಾರಿ ಕಣಿವೆಯ ಅದ್ಭುತ ದೃಶ್ಯ ಲಭ್ಯ. ದೂರದಲ್ಲೆರಡು ಜಲಧಾರೆಗಳು ಗೋಚರಿಸುತ್ತಿತ್ತು. ಕಲ್ಲೂರ್‌ರವರ ಬೈನಾಕ್ಯುಲರ್‌ನಲ್ಲಿ ವೀಕ್ಷಿಸಿದಾಗ ಅದ್ಭುತವಾಗಿ ಕಂಡವು ಈ ಜಲಧಾರೆಗಳು. ’ಅಲ್ಲಿಗೂ ಹೋಗೋಣ್ರೀ’ ಎಂದು ಅದಾಗಲೇ ಅಲ್ಲಿಗೆ ಭೇಟಿ ನೀಡಿದ್ದ ಕಲ್ಲೂರ್ ಹೇಳಿದಾಗ ಸುಮ್ಮನೆ ತಲೆಯಾಡಿಸಿದೆ.



ಅಲ್ಲಿಂದ ಮುಂದೆ ನಾವು ತೆರಳಿದ್ದು ತಿಲ್ಲಾರಿನಗರಕ್ಕೆ. ಇದು ಮಹಾರಾಷ್ಟ್ರದಲ್ಲಿದೆ. ತಿಲ್ಲಾರಿ ಅಣೆಕಟ್ಟು ನಿರ್ಮಿಸುವಾಗ ಉತ್ತುಂಗದಲ್ಲಿದ್ದ ತಿಲ್ಲಾರಿನಗರ ಈಗ ಪಾಳುಬಿದ್ದಿದೆ. ಸಾವೆಹಕ್ಲು ಮತ್ತು ಚಕ್ರಾ ಅಣೆಕಟ್ಟುಗಳನ್ನು ನೋಡಲು ತೆರಳುವಾಗ ನೋಡಿದ ’ಚಕ್ರಾನಗರ’ದ ನೆನಪಾಗತೊಡಗಿತು.


ಹಾಳಾದ ಸರಕಾರಿ ಕಟ್ಟಡಗಳು, ಹಾಳಾದ ಸರಕಾರಿ ವಾಹನಗಳು, ಮುರಿದುಬಿದ್ದ ಕುಸಿಯುತ್ತಿರುವ ಮನೆಗಳು, ಕುರುಚಲು ಸಸ್ಯಗಳಿಂದ ತುಂಬಿಹೋಗಿದ್ದ ಉದ್ಯಾನವನ. ಸರಕಾರಿ ವಾಹನಗಳಂತೂ ಅವುಗಳನ್ನು ಕೊನೆಯ ಬಾರಿ ಓಡಿಸಿದ ನಂತರ ತಂದು ಎಲ್ಲಿ ಹೇಗೆ ನಿಲ್ಲಿಸಲಾಗಿತ್ತೋ ಹಾಗೇ ನಿಂತುಕೊಂಡು ಮಳೆ ಗಾಳಿಗೆ ಸಂಪೂರ್ಣವಾಗಿ ಹಾಳಾಗಿಹೋಗಿವೆ.


ತಿಲ್ಲಾರಿನಗರದಲ್ಲಿ ಈಗಿರುವುದು ಒಂದು ವೃತ್ತ. ಒಂದು ರಸ್ತೆ ಪಟ್ನಿ ಕ್ರಾಸ್ ಮೂಲಕ ಬೆಳಗಾವಿಗೆ, ಇನ್ನೊಂದು ರಸ್ತೆ ಕೊಲ್ಲಾಪುರಕ್ಕೆ, ೩ನೇ ರಸ್ತೆ ತಿಲ್ಲಾರಿ ಅಣೆಕಟ್ಟಿಗೆ ಮತ್ತು ನಾಲ್ಕನೇ ರಸ್ತೆ ಗೋವಾಕ್ಕೆ.


ಗೋವಾದ ರಸ್ತೆಯಲ್ಲಿ ಒಂದು ಕಿಮಿ ಚಲಿಸಿದರೆ ಕಾಲುವೆಯೊಂದು ಸಿಗುತ್ತದೆ. ಈ ಕಾಲುವೆಯಲ್ಲಿ ತಿಲ್ಲಾರಿ ಅಣೆಕಟ್ಟಿನಿಂದ ನೀರು ಹರಿದು ಬರುತ್ತದೆ. ಇಲ್ಲಿ ಮತ್ತೊಮ್ಮೆ ಜಲಕ್ರೀಡೆ. ಕಾಲುವೆಯಲ್ಲಿ ಜಿಗಿಯುವುದು ಮತ್ತು ಶವಾಸನ, ಆ ಅಸನ, ಈ ಆಸನ ಎಂದು ಮಲ್ಕೊಂಡು ಬಿಟ್ಟರೆ ನೀರಿನ ಹರಿವು ದೇಹವನ್ನು ತಂತಾನೇ ಮುಂದಕ್ಕೆ ಒಯ್ಯುತ್ತಿತ್ತು. ಕಾಲುವೆಯಿಂದ ಮೇಲೆ ಬರುವುದು, ಮತ್ತೆ ಒಂದು ಕಿಮಿನಷ್ಟು ದೂರ ನಡೆದುಕೊಂಡು ಹೋಗಿ, ಪುನ: ಕಾಲುವೆಯಲ್ಲಿ ಜಿಗಿಯುವುದು, ನೀರಿನ ಹರಿವಿನೊಂದಿಗೆ ಸಲೀಸಾಗಿ ಬರುವುದು. ನಾಲ್ಕೈದು ಬಾರಿ ಈ ಕ್ರಿಯೆಯನ್ನು ಪುನರಾವರ್ತಿಸಲಾಯಿತು. 


ಗೋವಾ ರಸ್ತೆಯಲ್ಲಿ ೮ ಕಿಮಿ ಚಲಿಸಿದರೆ ದೋಣಗಾಂವ ಘಟ್ಟ ಸಿಗುವುದು. ಬಹಳ ಕಡಿದಾದ ಘಟ್ಟ. ಈ ದಾರಿಯಿಂದ ಚಲಿಸುವ ವಾಹನಗಳಿಗೆ ವಿಮೆ ಅನ್ವಯ ಆಗುವುದಿಲ್ಲ ಎಂಬ ಮಾತೇ ಈ ಘಟ್ಟದ ಅಪಾಯವನ್ನು ಎತ್ತಿ ಹೇಳುತ್ತದೆ. ಅಕ್ಟೋಬರ್ ೨ನೇ ವಾರದ ಮೊದಲು ಈ ಜಾಗಕ್ಕೆ ತೆರಳಿದರೆ ನೆಲದ ತುಂಬಾ ಹಳದಿ ಹೂವಿನ ಹಾಸಿಗೆ.


ಅಲ್ಲಿಂದ ನಂತರ ಕಾಳಿನಂದಿ ಎಂಬ ಹಳ್ಳಿಗೆ ತೆರಳಿದೆವು. ಈ ಊರಿಗೆ ಸಮೀಪವಿರುವ ಬೆಟ್ಟದ ಮೇಲೆ ಶಿವಾಜಿ ಕಟ್ಟಿಸಿದ ಕೋಟೆಯೊಂದಿದೆ. ಈ ಕೋಟೆಗೆ ಕಾಳಿನಂದಿಘಡ್ ಎನ್ನುತ್ತಾರೆ. ಇಲ್ಲಿ ಚಾರಣ ಆರಂಭಿಸಿದಾಗಲೇ ಸಂಜೆ ನಾಲ್ಕರ ಸಮಯ. ಕೇವಲ ೪೫ ನಿಮಿಷದ ಚಾರಣ. ದಾರಿ ಬಹಳ ಸುಂದರವಾಗಿತ್ತು. ಕೋಟೆಯಿಂದ ೩೬೦ ಕೋನದ ಅದ್ಭುತ ದೃಶ್ಯ. ಮತ್ತೆ ಕೆಳಗೆ ಹಳ್ಳಿ ತಲುಪಿದಾಗ ಸಮಯ ೬.೩೦. ಅಲ್ಲಿಂದ ನೇರವಾಗಿ ಧಾರವಾಡಕ್ಕೆ ಓಡಿತು ಓಮ್ನಿ.

ಭಾನುವಾರ, ಜೂನ್ 05, 2016

ಮಣಕೇಶ್ವರ ದೇವಾಲಯ - ಲಕ್ಕುಂಡಿ


ಮಣಕೇಶ್ವರ ದೇವಾಲಯವು ತ್ರಿಕೂಟಾಚಲವಾಗಿದ್ದು, ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಮೂರು ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳಗಳಿವೆ.



ಎಲ್ಲಾ ಗರ್ಭಗುಡಿಗಳಿಗೆ ಸಾಮಾನ್ಯ ನವರಂಗವಿದೆ. ನವರಂಗದಲ್ಲಿ ನಾಲ್ಕು ಕಂಬಗಳ ನಡುವೆ, ಮೇಲ್ಛಾವಣಿಯಲ್ಲಿ ಆಕರ್ಷಕ ಕೆತ್ತನೆಯಿದೆ.

 

ನವರಂಗದ ಕಂಬವೊಂದರ ಮೇಲೆ ೧೨ನೇ ಶತಮಾನದ ಶಾಸನವೊಂದನ್ನು ಕಾಣಬಹುದು. ಪಾಳುಬಿದಿದ್ದ ದೇವಾಲಯವನ್ನು ಪುರಾತತ್ವ ಇಲಾಖೆ ದುರಸ್ತಿಪಡಿಸಿದೆ.


ದೇವಾಲಯದ ಮುಂದೆನೇ ಸುಂದರವಾದ ಹಾಗೂ ವಿಶಾಲವಾದ ಬಾವಿಯೊಂದಿದೆ. ಇದನ್ನು ಮುಸುಕುನ ಬಾವಿ ಅಥವಾ ಸಿದ್ಧರ ಬಾವಿ ಎಂದು ಕರೆಯುತ್ತಾರೆ. ಆದರೆ ಶಾಸನಗಳಲ್ಲಿ ಈ ಬಾವಿಯನ್ನು ನಾಗರಬಾವಿ ಎಂದು ಕರೆಯಲಾಗಿದೆ.



ಸುಂದರ ಮೆಟ್ಟಿಲುಗಳನ್ನು ಹಾಗೂ ಆಕರ್ಷಕ ಗೋಪುರಗಳುಳ್ಳ ಮಂಟಪಗಳನ್ನು ಹೊಂದಿರುವ ಈ ಬಾವಿ ನೋಡುಗರ ಮನಸೂರೆಗೊಳ್ಳುತ್ತದೆ. ಬಾವಿಯ ಎಲ್ಲಾ ಮಂಟಪಗಳು ಖಾಲಿಯಿದ್ದರೂ, ಪಂಚಶಾಖಾ ದ್ವಾರ ಮತ್ತು ಗಜಲಕ್ಷ್ಮೀಯಿಂದ ಪರಿಪೂರ್ಣವಾಗಿ ಅಲಂಕೃತಗೊಂಡಿವೆ.


ಈ ಬಾವಿಯ ಸಮೀಪದಲ್ಲೇ ಇರುವ ಶಾಸನದಲ್ಲಿ, ಆದಿಕೇಯ ಕೇಶವ ದೇವ ಎಂಬವನ ಮೊಮ್ಮಗನಾಗಿದ್ದ ಹಾಗೂ ವಿಷ್ಣು ಭಟ್ಟ ಎಂಬವನ ಮಗನಾಗಿದ್ದ, ಕೇಶವ ಎಂಬವನು ಈ ಕೆರೆಯ ನಿರ್ವಹಣೆಗಾಗಿ ವಾರ್ಷಿಕ ಒಂದಷ್ಟು ಹಣವನ್ನು ನೀಡುತ್ತಿರುವುದಾಗಿ ಬರೆಯಲಾಗಿದೆ.


ಈ ಶಾಸನವು ಇಸವಿ ೧೧೯೫ರದ್ದಾಗಿದ್ದು, ಅದು ಹೊಯ್ಸಳ ದೊರೆ ಎರಡನೇ ಬಲ್ಲಾಳನ ಆಳ್ವಿಕೆಯ ಸಮಯ. ಹೊಯ್ಸಳರ ಸಮಯದಲ್ಲಿ ಕೆರೆಯ ನಿರ್ವಹಣೆಯೆ ಬಗ್ಗೆ ಶಾಸನ ದೊರೆತಿರುವ ಆಧಾರದ ಮೇರೆಗೆ, ಇತಿಹಾಸಕಾರರು ಈ ಕೆರೆಯ ನಿರ್ಮಾಣ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಆಗಿದೆ ಎಂದು ಅಭಿಪ್ರಾಯಪಡುತ್ತಾರೆ.


ಮಣಕೇಶ್ವರ ದೇವಾಲಯವನ್ನು, ಮಣಿಕೇಶ್ವರ ಹಾಗೂ ಮಾಣಿಕ್ಯೇಶ್ವರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಮುಸುಕಿನ ಬಾವಿಯನ್ನು ನಿರ್ಮಿಸಲು ಬಳಸಿದ ಕಲ್ಲುಗಳನ್ನೇ ಮಣಕೇಶ್ವರ ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ.

ಭಾನುವಾರ, ಮೇ 08, 2016

ಮಿಂಚ್ಕಲ್


ಸುಮಾರು ೧೦ ವರ್ಷಗಳ ಹಿಂದೆ, ಗೆಳೆಯ ದಿನೇಶ್ ಹೊಳ್ಳ ಮಿಂಚುಕಲ್ಲಿಗೆ ಚಾರಣ ಆಯೋಜಿಸಿದ್ದರು. ಆ ಚಾರಣಕ್ಕೆ ತೆರಳಲು ನನಗೆ ಆಗಿರಲಿಲ್ಲ. ಘಟ್ಟದ ಕೆಳಗಿನಿಂದ ಮಿಂಚುಕಲ್ಲನ್ನು ಏರುವುದು ಒಂದು ಸವಾಲೇ ಸರಿ. ಅದು ಕಷ್ಟಕರ ಹಾದಿಯಾಗಿದ್ದು, ಬಹಳ ನಡೆಯಬೇಕಾಗುವುದು. ಆ ಚಾರಣ ತಪ್ಪಿದ್ದಕ್ಕೆ ನಾನು ಒಳಗೊಳಗೇ ಸಂತೋಷಪಟ್ಟಿದ್ದೆ.



೨೦೧೩ರ ಮಾರ್ಚ್ ತಿಂಗಳಲ್ಲಿ, ರಮೇಶ್ ಕಾಮತ್ ನೇತೃತ್ವದಲ್ಲಿ ನಾವು ಏಳು ಮಂದಿ ಮಿಂಚುಕಲ್ಲಿಗೆ ಹೊರಡಲು ಆಣಿಯಾದೆವು. ಆದರೆ ಚಾರಣ ಹಾದಿ ಘಟ್ಟದ ಮೇಲಿನಿಂದ ಆಗಿತ್ತು. ಚಾರಣ ಆರಂಭಿಸುವ ಹಳ್ಳಿಗೆ ಅದೊಂದು ಸಂಜೆ ಬಂದು ದೇವಾಲಯದ ಮುಂದೆ ರಾತ್ರಿ ಕಳೆದೆವು.


ಮರುದಿನ ಮುಂಜಾನೆ ಸುತ್ತಲೂ ಬೆಟ್ಟಗಳೆಲ್ಲಾ ಮಂಜಿನಲ್ಲಿ ಸ್ನಾನ ಮಾಡುತ್ತಿದ್ದವು. ಅದೊಂದು ಸುಂದರ ದೃಶ್ಯವಾಗಿತ್ತು. ಹಲವಾರು ವರ್ಷಗಳ ಹಿಂದೆ ಮೇರುತಿ ಬೆಟ್ಟದ ತುದಿಯನ್ನೇರಿದಾಗ ಅಲ್ಲಿಂದಲೂ ಇದೇ ತೆರನಾದ ದೃಶ್ಯವನ್ನು ಆನಂದಿಸಿದ್ದೆವು.


ಮುಂಜಾನೆ ಆರಕ್ಕೇ ಚಾರಣವನ್ನು ಆರಂಭಿಸಿದೆವು. ಈ ದಾರಿಯಾಗಿ ಚಾರಣಕ್ಕೆ ತೆರಳುವವರಿಗೆ ಊರಿನ ಮೂರು ನಾಯಿಗಳು ಎಂದಿಗೂ ಜೊತೆ ನೀಡುತ್ತವೆ. ಅವು ಕೂಡಾ ನಮ್ಮೊಂದಿಗೆ ಚಾರಣಕ್ಕೆ ಅಣಿಯಾದವು.



 
ಹಿತವಾದ ವಾತಾವರಣದಲ್ಲಿ ಆರಂಭವಾದ ಚಾರಣವನ್ನು ಆನಂದಿಸುತ್ತಾ ಮುಂದೆ ಸಾಗಿದೆವು. ಈ ದಾರಿಯಾಗಿ ಮಿಂಚುಕಲ್ಲಿಗೆ ತೆರಳುವುದು ಬಹಳ ಸುಲಭ. ಚಾರಣದುದ್ದಕ್ಕೂ ಹಾದಿ ತೆರೆದ ಸ್ಥಳದ ಮೂಲಕ ಹಾದುಹೋಗುವುದರಿಂದ ಎಲ್ಲೆಲ್ಲೂ ಪ್ರಕೃತಿಯ ಸುಂದರ ನೋಟ ಲಭ್ಯ.



ಹಲವಾರು ಸಣ್ಣ ಪುಟ್ಟ ಬೆಟ್ಟಗಳನ್ನು ಸುತ್ತುವರಿದು ದಾಟಿ ಹಾಗೂ ಹಲವಾರು ದಿಣ್ಣೆಗಳನ್ನು ಏರಿಳಿದು ಮುಂದೆ ಸಾಗಿದೆವು.



ಕೆಲವೆಡೆ ಒಂದು ಸಣ್ಣ ಬೆಟ್ಟದ ತುದಿ ತಲುಪಿದಾಗ ಮುಂದಿನ ಸುಂದರ ದೃಶ್ಯದ ಅನಾವರಣ. ಕಣ್ಮುಂದೆ ಕಾಣುತ್ತಿರುವ ದೃಶ್ಯದ ಮೂಲಕವೇ ನಾವೀಗ ಹಾದುಹೋಗಬೇಕೆಂಬ ರೋಮಾಂಚನ.



ದೂರದೂರಕ್ಕೂ ಬೆಟ್ಟಗಳೇ ರಾರಾಜಿಸುತ್ತಿದ್ದವು. ೩೬೦ ಕೋನದ ಎಲ್ಲಾ ಮೂಲೆಗಳಲ್ಲೂ ಸಾಲು ಸಾಲು ವಿವಿಧ ಗಾತ್ರದ ಆಕಾರದ ಬೆಟ್ಟಗಳು. ಅವುಗಳದ್ದೇ ಸಾಮ್ರಾಜ್ಯ. ಅವುಗಳದ್ದೇ ರಾಜ್ಯಭಾರ.



ಚಾರಣದ ಸಮಯದಲ್ಲಿ ಮಾತನಾಡುವುದನ್ನು ನಾನು ಎಂದಿಗೂ ಇಷ್ಟಪಡುವುದಿಲ್ಲ. ಅದರಲ್ಲೂ ನಾನು ಎಂದಿಗೂ ಉಳಿದವರಿಗಿಂತ ಹಿಂದೆಯೇ ಇದ್ದಿರುತ್ತೇನೆ. ಈ ಚಾರಣದಲ್ಲಂತೂ ಇದ್ದ ಏಳು ಜನರಲ್ಲಿ ಎರಡು ತಂಡಗಳಾಗಿದ್ದವು. ಒಂದು ತಂಡ ಮುಂದೆ ಸಾಗುತ್ತಿದ್ದು ಅದರಲ್ಲಿ ಆರು ಜನರು ಮತ್ತು ಮೂರು ನಾಯಿಗಳಿದ್ದರೆ ಇನ್ನೊಂದು ಒಂದು ವ್ಯಕ್ತಿಯ ತಂಡ ಹಿಂದೆ ಇತ್ತು. ಬೀಸುವ ಗಾಳಿಯ ಸದ್ದು ಮಾತ್ರ ನನ್ನ ಸಂಗಾತಿ. ಆ ಮೂರು ನಾಯಿಗಳಲ್ಲಿ, ಒಂದು ನಾಯಿ ನಾನು ಬಂದೇನೋ ಇಲ್ಲವೋ ಎಂದು ಖಾತ್ರಿ ಮಾಡಿಕೊಂಡು ನಂತರ ಮುಂದೆ ಸಾಗುತ್ತಿತ್ತು!!



ಹಿಂದಿನಿಂದ ಹೀಗೆ ಒಬ್ಬನೇ ಬರಬೇಕಾದರೆ ಚಾರಣವನ್ನು ಬಹಳ ಆನಂದಿಸಿದೆ. ಇಂತಹ ವಿಶಿಷ್ಟ ಒಂಟಿತನ ಮತ್ತೆ ಮತ್ತೆ ಸಿಗದು. ಚಾರಣದಲ್ಲಿ ಮಾತ್ರ ಅದು ಲಭ್ಯವಾಗುವುದು. ಇಲ್ಲಂತೂ ಜೊತೆಯಾಗಿದ್ದ ಬೆಟ್ಟಗಳೂ ಅಪರಿಮಿತ ಆನಂದ ನೀಡಿದವು.


 
ಒಂದೆಡೆ ವಿಶ್ರಮಿಸಲು ಸುಮಾರು ಹದಿನೈದು ನಿಮಿಷ ಕಳೆದೆವು. ಇಲ್ಲಿಂದ ಕುಂಭಕಲ್ಲು ಕಾಣುತ್ತಿತ್ತು.



ನಂತರ ಮತ್ತೆ ಬೆಟ್ಟ ದಿಣ್ಣೆಗಳ ನಡುವಿನಿಂದ ಚಾರಣ ಸಾಗಿತು. ಕೊನೆಗೂ ದೂರದಲ್ಲಿ, ಮತ್ತೊಂದು ವಿಶಾಲ ಪ್ರದೇಶದ ಅಂಚಿನಲ್ಲಿ ಮಿಂಚುಕಲ್ಲಿನ ಮೊದಲ ನೋಟ ಪ್ರಾಪ್ತಿಯಾಯಿತು.



ಎಡಭಾಗದಲ್ಲಿ ಆಳವಾದ ಇಳಿಜಾರಿನ ಕಣಿವೆ. ಅಲ್ಲಿ ಸಣ್ಣ ಶೋಲಾ ಕಾಡುಗಳ ಹಾಗೂ ಅವನ್ನು ಸುತ್ತುವರಿದ ಬೆಟ್ಟಗಳ ನೋಟ.



ಕೊನೆಗೂ ಮಿಂಚುಕಲ್ಲಿನ ತುದಿ ತಲುಪಿದೆವು. ಸಮಯ ೧೦ ಆಗಿತ್ತು. ಗಮ್ಯಸ್ಥಾನ ತಲುಪಲು ನಮಗೆ ನಾಲ್ಕು ತಾಸು ಬೇಕಾಯಿತು. ಆದರೆ ನಾವು ಬಹಳ ನಿಧಾನವಾಗಿ ಚಾರಣ ಮಾಡಿದ್ದೆವು. ಅಲ್ಲಲ್ಲಿ ನಿಲ್ಲುತ್ತ, ಹರಟುತ್ತಾ, ತುಂಬಾನೇ ರಿಲ್ಯಾಕ್ಸ್ ಆಗಿ ಮಾಡಿದ ಚಾರಣವಿದು. ಸ್ವಲ್ಪ ವೇಗವಾಗಿ ನಡೆದರೆ ಎರಡುವರೆ ಅಥವಾ ಮೂರು ತಾಸುಗಳಲ್ಲಿ ಮಿಂಚುಕಲ್ಲು ತಲುಪಬಹುದು.



 
ಮಿಂಚುಕಲ್ಲಿನ ಮೇಲೆ ವಿಶಾಲ ಸ್ಥಳವಿದೆ. ಇಲ್ಲಿ ಸುಮಾರು ಒಂದು ತಾಸು ಕಳೆದೆವು. ಮಿಂಚುಕಲ್ಲಿನ ಇನ್ನೊಂದು ತುದಿಯಲ್ಲಿ ಕಣಿವೆಯಿದ್ದು, ಈ ಕಣಿವೆಯಾಚೆಯಿರುವ ಬೃಹತ್ ಬೆಟ್ಟವೇ ಅಮೇದಿಕಲ್ಲು. ಈ ದೃಶ್ಯಗಳನ್ನು ಸವಿಯುತ್ತಾ ಅಲ್ಲಿ ಸುಮಾರು ಸಮಯ ಕಳೆದೆವು.



ಸುಮಾರು ೧೧ ಗಂಟೆಗೆ ಅಲ್ಲಿಂದ ಹಿಂತಿರುಗಲು ಶುರು ಮಾಡಿದೆವು. ಈಗ ಬಿಸಿಲು ನಿಧಾನವಾಗಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿತ್ತು.



ಆದರೂ ಅಂತಹ ತೊಂದರೆಯೇನಿಲ್ಲದೆ ಅಲ್ಲೊಂದೆರಡು ಮರಗಳಿದ್ದ ಜಾಗದೆಡೆ ತಲುಪಿ ಊಟ ಮಾಡಿ ವಿಶ್ರಮಿಸಿದೆವು. ಮತ್ತೆ ಚಾರಣ ಆರಂಭಿಸಿದಾಗ ಸಮಯ ೨ ದಾಟಿತ್ತು. ಈಗ ಬಿಸಿಲಿನ ತಾಪ ನನ್ನ ವೇಗವನ್ನು ಕುಂಠಿತಗೊಳಿಸಿತ್ತು. ನೀರು ಬೇಗನೇ ಖಾಲಿಯಾಗತೊಡಗಿತ್ತು.


 
ನಾವು ಮುಂಜಾನೆ ಚಾರಣ ಆರಂಭಿಸಿದಾಗ ಒಂದು ದೊಡ್ಡ ಇಳಿಜಾರನ್ನು ದಾಟಿ ಬಂದಿದ್ದೆವು. ಹಿಂತಿರುಗುವಾಗ, ದಾರಿಯ ಕೊನೆಯಲ್ಲಿ ಸಿಗುವ ಈ ಏರುಹಾದಿಯನ್ನು ಕ್ರಮಿಸಲು ನನಗೆ ಬಹಳ ಕಷ್ಟವಾಗಲಿದೆ ಎಂದು ನಾನು ಮುಂಜಾನೆಯೇ ಗ್ರಹಿಸಿದ್ದೆ. ನಾವು ಮಿಂಚುಕಲ್ಲು ತುದಿ ತಲುಪಿದಾಗ ವಿವೇಕ್ ಕಿಣಿ, ಎಲ್ಲರಿಗೂ ಒಂದೊಂದು ಕಿತ್ತಳೆ ಹಣ್ಣನ್ನು ನೀಡಿದ್ದರು. ಈ ಏರುಹಾದಿಯ ನೆನಪಾಗಿ, ಆ ಜೀವರಕ್ಷಕ ಕಿತ್ತಳೆಯನ್ನು ನಾನು ಹಾಗೆಯೇ ಇಟ್ಟುಕೊಂಡಿದ್ದೆ. ನೀರನ್ನೂ ಸುಮಾರಾಗಿ ಇಟ್ಟುಕೊಂಡಿದ್ದೆ.



ಅದಾಗಲೇ ಎಂಟು ತಾಸಿನ ಚಾರಣ ಮಾಡಿಯಾಗಿತ್ತು. ಆದರೆ ಈ ಕೊನೆಯ ಭಾಗ ಶುರುವಾಗುವ ಮೊದಲೇ ಮಾನಸಿಕವಾಗಿ ತೊಂದರೆ ನೀಡಲು ಆರಂಭಿಸಿತ್ತು. ನಿಧಾನವಾಗಿ ಹೆಜ್ಜೆಯಿಡಲು ಆರಂಭಿಸಿದೆ. ಐದೈದು ಹೆಜ್ಜೆಗೂ ವಿರಮಿಸಿದೆ. ಇಲ್ಲಿ ವಿವೇಕ್ ನೀಡಿದ್ದ ಕಿತ್ತಳೆ ಆಪತ್ಬಾಂಧವನಾಗಿ ಪ್ರಯೋಜನಕ್ಕೆ ಬಂದಿತು. ಕಿತ್ತಳೆಯಲ್ಲಿ ೧೦ ಎಸಳುಗಳು ಇರುತ್ತವೆ. ಇಲ್ಲೊಂದು, ಅಲ್ಲೊಂದು ಮತ್ತೆ ಮುಂದೆ ಮತ್ತೊಂದು ಎಂದು ಮೊದಲೇ ನಿರ್ಧರಿಸಿ ಮೇಲೆ ತಲುಪಿದಾಗ ಕೊನೆಯ ಎಸಳನ್ನು ಬಾಯೊಳಗಿಟ್ಟೆ. ಸುಮಾರು ೩೦ ನಿಮಿಷ ಆ ರಣಬಿಸಿಲಿನಲ್ಲಿ ಬಹಳ ಕಷ್ಟದಿಂದ ಮೇಲೇರಿದ್ದನ್ನು ಎಂದೂ ಮರೆಯಲಾರೆ.