ಸೋಮವಾರ, ಜುಲೈ 06, 2015

ಉಂಚಳ್ಳಿಯ ಚೆಂದುಳ್ಳಿ...


ನಾಲ್ಕಾರು ಸಲ ಈ ಜಲಧಾರೆಗೆ ತೆರಳಿದರೂ, ಪ್ರತೀ ಸಲ ವೀಕ್ಷಣಾ ಕಟ್ಟೆಯಿಂದ ನೋಡಿ ತೃಪ್ತಿಪಟ್ಟಿದ್ದೆ ವಿನ: ಕಣಿವೆಯ ಕೆಳಗಿಳಿದು ಜಲಧಾರೆಯ ಬುಡಕ್ಕೆ ತೆರಳಿರಲಿಲ್ಲ.


ಎಪ್ರಿಲ್ ೨೦೧೫ರ ಉಡುಪಿ ಯೂತ್ ಹಾಸ್ಟೆಲ್ ಚಾರಣವನ್ನು ಈ ಜಲಧಾರೆಗೆ ಆಯೋಜಿಸೋಣವೆಂದು ನಾನು ಉಡುಪಿ ಯೂತ್ ಹಾಸ್ಟೆಲ್ ಅಧ್ಯಕ್ಷರಿಗೆ ಸಲಹೆ ನೀಡುವ ಹಿಂದೆ ನನ್ನ ಸ್ವಾರ್ಥವೂ ಇತ್ತು.


ವಾಹನ ನಿಲ್ಲಿಸುವ ಸ್ಥಳದಿಂದ ಒಂದು ತಾಸಿನಲ್ಲಿ ನಾವು ಜಲಧಾರೆಯ ಬುಡ ತಲುಪಿದ್ದೆವು. ಬಿಸಿಲಿನ ತಾಪ ಎಲ್ಲರನ್ನೂ ಕಂಗೆಡಿಸಿತ್ತು. ಕೂಡಲೇ ನೀರಿಗಿಳಿದ ಸುಮಾರು ಚಾರಣಿಗರು ಅಲ್ಲೇ ಸಮಯ ಕಳೆದರು.


ಜಲಧಾರೆಯ ಮುಂದೆ ಇರುವ ಎತ್ತರದ ಸ್ಥಳದಲ್ಲಿ ಬಂಡೆಯೊಂದರ ನೆರಳಿನಲ್ಲಿ ಕುಳಿತು ಜಲಧಾರೆಯ ಸೌಂದರ್ಯವನ್ನು, ಅಗಾಧತೆಯನ್ನು ವಿಸ್ಮಯಭರಿತನಾಗಿ ಆನಂದಿಸಿದೆ.


ಕಲ್ಲಿನ ಪದರಗಳ ವಿಶಿಷ್ಟ ರಚನೆ ಮನಸೆಳೆಯಿತು. ನೀರಿನ ರಭಸಕ್ಕೆ ಹಲವಾರು ವರ್ಷಗಳಿಗೆ ಒಂದರಂತೆ, ಬಂಡೆಗಳು ಸಡಿಲಗೊಂಡು ಜಲಧಾರೆಯ ತಳಕ್ಕೆ ಉರುಳಿಬೀಳುತ್ತಿವೆ.


ಜಲಧಾರೆಯ ಬುಡದಲ್ಲಿರುವ ಅತ್ಯಾಕರ್ಷಕ ಕೊಳ ಸ್ಥಳದ ಸೌಂದರ್ಯವನ್ನು ಉತ್ತುಂಗಕ್ಕೆ ಏರಿಸಿತ್ತು. 


ಅಲ್ಲಿ ನಾನೊಬ್ಬನೇ ಸುಮಾರು ಒಂದು ತಾಸು ಕುಳಿತಿದ್ದೆ. ಬಾಲ್ಕನಿಯಲ್ಲಿ ಕುಳಿತ ನನ್ನ ಮುಂದೆ ಜಲಧಾರೆ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತಿತ್ತು. ಮೂರು ಸೀಳುಗಳಲ್ಲಿ ಮೂರು ವಿವಿಧ ರೀತಿಗಳಲ್ಲಿ ನೀರು ಕೆಳಗಿಳಿದು ಬರುವ ದೃಶ್ಯ ನೋಡುತ್ತಾ ಮೈಮರೆತೆ.


ಮಳೆಗಾಲದಲ್ಲಿ ಶಿವನ ತಾಂಡವನೃತ್ಯದಂತೆ ರೌದ್ರಾವತಾರ ತಾಳುವ ಈ ಜಲಧಾರೆ, ಈಗ, ಹೇಗೆ ಕೈಲಾಸದಲ್ಲಿ ಶಿವ ತನ್ನ ಶಾಂತ ರೂಪದಲ್ಲಿ ಮಂದಹಾಸ ಬೀರುತ್ತಿರುತ್ತಾನೋ ಅದೇ ರೀತಿಯಲ್ಲಿ ಸೌಮ್ಯವತಿಯಾಗಿ ತನ್ನ ಇನ್ನೊಂದು ರೂಪವನ್ನು ಪ್ರದರ್ಶಿಸುತ್ತಿತ್ತು.


ಶಿವನ ಎರಡು ರೂಪಗಳಂತೆ, ಈ ಜಲಧಾರೆಯ ಎರಡು ರೂಪಗಳು ಕೂಡಾ ಮನಸಿನಲ್ಲಿ ಅಚ್ಚಳಿಯದಂತೆ ಇರುವ ಹೊಳಹುಗಳು.

2 ಕಾಮೆಂಟ್‌ಗಳು:

sunaath ಹೇಳಿದರು...

ಉಂಚಳ್ಳಿಯ ಜಲಪಾತದ ಚಿತ್ರಗಳನ್ನು ನೋಡಿ ಖುಶಿಯಾಯಿತು. ಇದೀಗ ನಿಜವಾಗಿಯೂ ಶಿವನ ಶಾಂತ ರೂಪ!

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಧನ್ಯವಾದ.