ಶುಕ್ರವಾರ, ಅಕ್ಟೋಬರ್ 31, 2014

ಬ್ರಹ್ಮೇಶ್ವರ ದೇವಾಲಯ - ಅಬಲೂರು


ಕನ್ನಡದ ಪ್ರಖ್ಯಾತ ವಚನ ಕವಿ ಸರ್ವಜ್ಞನ ಹುಟ್ಟೂರು ಈ ಅಬಲೂರು. ೧೭ನೇ ಶತಮಾನದಲ್ಲಿ ಸರ್ವಜ್ಞ ಜೀವಿಸಿರಬಹುದು ಎಂದು ಇತಿಹಾಸತಜ್ಞರ ಅಭಿಪ್ರಾಯ. ಶಾಸನಗಳಲ್ಲಿ ಈ ಊರನ್ನು ’ಅಂಬಲೂರು’ ಎಂದು ಕರೆಯಲಾಗಿದೆ. ಇಲ್ಲಿರುವ ಚಾಲುಕ್ಯ ಶೈಲಿಯ ಬ್ರಹ್ಮೇಶ್ವರ ದೇವಾಲಯವನ್ನು ೧೧-೧೨ನೇ ಶತಮಾನದ ಸಮಯದಲ್ಲಿ ನಿರ್ಮಿಸಿರಬಹುದು. ನಿಖರವಾಗಿ ಇಸವಿಯನ್ನು ತಿಳಿಸಲು ಎಲ್ಲೂ ಮಾಹಿತಿ ಸಿಗಲಿಲ್ಲ.


ಬ್ರಹ್ಮೇಶ್ವರ ದೇವಾಲಯದಲ್ಲಿ ನಂದಿಯ ಸುಂದರ ಮೂರ್ತಿಯಿರುವುದರಿಂದ ಊರವರು ಇದನ್ನು ಬಸವೇಶ್ವರ ದೇವಾಲಯವೆಂದು ಕರೆಯುತ್ತಾರೆ. ’ಅಬಲೂರು ಬಸವಣ್ಣ’ ಎಂದೇ ಖ್ಯಾತಿ ಪಡೆದಿರುವ ಈ ಬಸವಣ್ಣನಿಗೆ ವಾರ್ಷಿಕ ಜಾತ್ರೆ ನಡೆಯುತ್ತದೆ.


ಈ ತ್ರಿಕೂಟ ದೇವಾಲಯ ಸಾಮಾನ್ಯ ನವರಂಗವನ್ನು ಹೊಂದಿದೆ. ನವರಂಗದಲ್ಲಿ ಒಟ್ಟು ೧೨ ಕಂಬಗಳಿವೆ. ಪಶ್ಚಿಮದ ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಪೂರ್ವದ ಗರ್ಭಗುಡಿಯಲ್ಲಿ ಸೂರ್ಯದೇವನ ವಿಗ್ರಹವಿದ್ದು ಉತ್ತರದಲ್ಲಿ ವಿಷ್ಣುವಿನ ಮೂರ್ತಿಯಿದೆ. ಎಲ್ಲಾ ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳಗಳಿವೆ. ಸೂರ್ಯದೇವನ ಅಂತರಾಳ ದ್ವಾರರಹಿತವಾಗಿದ್ದರೆ ಉಳಿದೆರಡು ಅಂತರಾಳಗಳು ಜಾಲಂಧ್ರಗಳಿಂದ ಮತ್ತು ಮಕರತೋರಣದಿಂದ ಅಲಂಕೃತ ಸುಂದರ ತ್ರಿಶಾಖ ದ್ವಾರಗಳನ್ನು ಹೊಂದಿವೆ. ಪ್ರತಿ ಶಾಖೆಯಲ್ಲಿ ಬಳ್ಳಿತೋರಣಗಳಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.


ಇಲ್ಲೊಂದು ವೈಶಿಷ್ಟ್ಯವೆಂದರೆ ವಿಷ್ಣುವಿನ ಅಂತರಾಳದ ಮಕರತೋರಣದಲ್ಲಿ ವೇಣುಗೋಪಾಲ ಮತ್ತು ಆತನ ಇಕ್ಕೆಲಗಳಲ್ಲಿ ತಲಾ ಇಬ್ಬರು ಸ್ತ್ರೀಯರನ್ನು (ಗೋಪಿಕೆಯರು?) ತೋರಿಸಿರುವುದು. ವಿಷ್ಣುವಿನ ಗರ್ಭಗುಡಿಯಾಗಿರುವುದರಿಂದ ಆತನದ್ದೇ ಅವತಾರವೊಂದನ್ನು ತೋರಿಸುವ ಉದ್ದೇಶವಿದ್ದಿರಬಹುದು. ಶಿವಲಿಂಗದ ಅಂತರಾಳದ ಮಕರತೋರಣದಲ್ಲಿ ಗಣೇಶ, ಬ್ರಹ್ಮ, ನಟರಾಜ (ಶಿವ), ವಿಷ್ಣು ಮತ್ತು ಮಹಿಷಮರ್ದಿನಿಯ ಕೆತ್ತನೆಯಿದೆ.


ಸೂರ್ಯದೇವನ ಗರ್ಭಗುಡಿಯು ೫ ಶಾಖೆಗಳನ್ನು ಹೊಂದಿದ್ದರೆ, ಶಿವಲಿಂಗ ಮತ್ತು ವಿಷ್ಣು ಗರ್ಭಗುಡಿಗಳು ೬ ಶಾಖೆಗಳನ್ನು ಹೊಂದಿವೆ. ಶಾಖೆಗಳಲ್ಲಿರುವ ಕೆತ್ತನೆ ಅಪ್ರತಿಮ ಶೈಲಿಯದ್ದಾಗಿದ್ದು ಅತ್ಯಂತ ಮನೋಹರವಾಗಿವೆ. ಎಲ್ಲಾ ಗರ್ಭಗುಡಿಗಳು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ.


ಶಿವಲಿಂಗ ಮತ್ತು ವಿಷ್ಣು ಗರ್ಭಗುಡಿಗಳ ಶಾಖಾ ಕೆತ್ತನೆ ಏಕಪ್ರಕಾರವಾಗಿದೆ. ಇವುಗಳಲ್ಲಿ ಕ್ರಮವಾಗಿ - ವಜ್ರತೋರಣ, ನಾಗದೇವರು, ನರ್ತಕ ಹಾಗೂ ನರ್ತಕಿ, ವಿವಿಧ ಪ್ರಾಣಿಗಳು, ನೇರ ಬಳ್ಳಿ ಮತ್ತು ಯಕ್ಷ ಯಕ್ಷಿಯರನ್ನು ಕೆತ್ತಲಾಗಿದೆ.


ಎರಡನೇ ಮತ್ತು ಮೂರನೇ ಶಾಖೆಯಲ್ಲಿರುವ ಕೆತ್ತನೆಗಳನ್ನು ಕೆತ್ತಿರುವ ರೀತಿಯೂ ಅತ್ಯದ್ಭುತ. ಈ ಕೆತ್ತನೆಗಳಿರುವ ಫಲಕವನ್ನು ಪ್ರತ್ಯೇಕವಾಗಿ ಕೆತ್ತಿ ನಂತರ ಶಾಖೆಗಳಿಗೆ ತಾಗಿಸಿ ಕೂರಿಸಿರುವಂತೆ ಅನುಭವ ನೀಡುವ ರೀತಿಯಲ್ಲಿ ಕೆತ್ತಲಾಗಿದೆ. ಇದೇ ಕಾರಣದಿಂದ ನಡುವೆ ಅಂತರವಿರುವುದನ್ನು ಕಾಣಬಹುದು.


ಪ್ರಭಾವಳಿಯಲ್ಲಿ ಮಕರತೋರಣದಿಂದ ಅಲಂಕೃತ, ಶಂಖಚಕ್ರಗದಾಪದ್ಮಧಾರಿಯಾಗಿರುವ ಸುಮಾರು ೬ ಅಡಿ ಎತ್ತರದ ವಿಷ್ಣುವಿನ ಮೂರ್ತಿಯು ಗಮನ ಸೆಳೆಯುತ್ತದೆ. ಗರುಡಪೀಠದ ಮೇಲಿರುವ ವಿಷ್ಣುವಿನ ಇಕ್ಕೆಲಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ.


ಪ್ರಮುಖ ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದೆ. ಈ ಗರ್ಭಗುಡಿಯ ಮೇಲಿನ ಶಿಖರ ಮಾತ್ರ ಉಳಿದಿದೆ. ಶಿಖರವನ್ನು ೩ ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೇಲ್ಗಡೆ ಸುಂದರ ಕಲಶವಿದೆ. ಶಿಖರದ ಎಲ್ಲಾ ಸ್ತರಗಳಲ್ಲಿಯೂ ಶಿವನ ಕುಳಿತಿರುವ ಭಂಗಿಯಲ್ಲಿರುವ ಶಿಲ್ಪದ ಕೆತ್ತನೆಗಳನ್ನು ಕಾಣಬಹುದು. ನವರಂಗಕ್ಕೆ ಅರ್ಧ ಕಂಬಗಳಿರುವ ಕಕ್ಷಾಸನವಿದೆ. ಈ ಕಕ್ಷಾಸನ ಮತ್ತು ಛಾವಣಿಯ ನಡುವಿನ ತೆರೆದ ಜಾಗದಲ್ಲಿ ಊರವರು ಕಿಟಕಿಗಳನ್ನು ಕೂರಿಸಿಬಿಟ್ಟಿದ್ದಾರೆ! ಕಕ್ಷಾಸನದ ತಳಭಾಗದಲ್ಲಿ ಯುದ್ಧದೃಶ್ಯಗಳ ಕೆತ್ತನೆಯಿದೆ.


ಈ ದೇವಾಲಯದಲ್ಲಿ ನನ್ನನ್ನು ಬಹಳ ಆಕರ್ಷಿಸಿದ್ದು ನವರಂಗದಲ್ಲಿರುವ ಗಣೇಶನ, ಮಹಿಷಮರ್ದಿನಿಯ ಮತ್ತು ಬ್ರಹ್ಮನ ಅದ್ಭುತ ಮೂರ್ತಿಗಳು. ಗಣೇಶನ ವಿಗ್ರಹ ಹಾನಿಗೊಳಗಾಗಿದ್ದರೂ ಆಕರ್ಷಕವಾಗಿ ಕಾಣುತ್ತಿದೆ. ಗಣೇಶ ಆಸೀನನಾಗಿರುವ ಪೀಠವನ್ನು ಮೂಷಿಕಪೀಠವೆಂದು ಕರೆಯಬಹುದೇ? ಪೀಠದ ಮುಂಭಾಗದಲ್ಲಿ ಮೂಷಿಕನ ಕೆತ್ತನೆಯಿರುವುದನ್ನು ಗಮನಿಸಿ.


ಮಹಿಷಮರ್ದಿನಿ ಮತ್ತು ಬ್ರಹ್ಮನ ಮೂರ್ತಿಗಳು ಹಾನಿಗೊಳಗಾಗದೇ ಇರುವುದು ನಮ್ಮ ಅದೃಷ್ಟ. ಅವುಗಳ ಸ್ಪಷ್ಟತೆ ಮತ್ತು ಅಂದ ಸುಮಾರು ಸಮಯ ನನ್ನನ್ನು ಸೆರೆಹಿಡಿಯಿತು.


ಶಿವಲಿಂಗಕ್ಕೆ ಮುಖ ಮಾಡಿ ಸೂರ್ಯದೇವನಿದ್ದಾನೆ. ಸೂರ್ಯದೇವನ ಅಂತರಾಳದಲ್ಲಿಯೇ ಬಸವಣ್ಣನ ದೊಡ್ಡ ಮೂರ್ತಿಯಿರುವುದರಿಂದ ಸೂರ್ಯದೇವರನ್ನು ನೋಡಬೇಕಾದರೆ ಬಸವಣ್ಣನನ್ನು ದಾಟಿ ಹೋಗಬೇಕು. ಆದರೆ ಊರವರಿಗೆ ಬಸವಣ್ಣನೇ ಪ್ರಮುಖ ದೇವರಾಗಿರುವುದರಿಂದ ಬಸವಣ್ಣನ ಮುಂದೆಯೇ ಕಟಕಟೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಸೂರ್ಯದೇವನ ಅಂತರಾಳಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ! ವಿದ್ಯುತ್ ಇಲ್ಲದಿದ್ದರೆ ಸೂರ್ಯದೇವ ಕಾಣುವುದೇ ಇಲ್ಲ. ವಿದ್ಯುತ್ ಇದ್ದರೆ ನಂದಿಯ ಮುಂದಿನಿಂದಲೇ (ನವರಂಗದಿಂದ) ಸೂರ್ಯದೇವನನ್ನು ನೋಡಿ ತೃಪ್ತಿಪಡಬೇಕು. ’ಉಡುಪಿಯಿಂದ ಬಂದಿದ್ದೇನೆ, ಸೂರ್ಯದೇವರನ್ನು ಸಮೀಪದಿಂದ ನೋಡಲು ಅನುವು ಮಾಡಿ ಕೊಡಿ’ ಎಂದು ಅರ್ಚಕರನ್ನು ವಿನಂತಿಸಿದರೂ ಅವರು ಒಪ್ಪಲಿಲ್ಲ. ಅಲ್ಲಿದ್ದ ಊರಿನ ಹಿರಿಯರಿಬ್ಬರೂ ನನ್ನ ಪರವಾಗಿ ಅರ್ಚಕರಲ್ಲಿ ಕೇಳಿಕೊಂಡರೂ ಆ ಮನುಷ್ಯ ಒಪ್ಪಲೇ ಇಲ್ಲ. ಆ ಹಿರಿಯರು ನನ್ನಲ್ಲಿ - ’ಸರ, ನೀವ ಮುಂಜಾನೆ ಜಲ್ದಿ ಬಂದಿರಂದ್ರೆ ಪೂಜಾರಿ ಮತ್ತೊಬ್ಬ ಇರ್ತಾನ್ರಿ, ಅಂವ ಮಂದಿ ಕೇಳಿದ್ರ ಒಳಗ ಬಿಡ್ತಾನ್ರಿ. ಕರೆಂಟ ಇತ್ತೂ ಅಂದ್ರ ನೀವ ಇಲ್ಲಿಂದಾದ್ರೂ (ನವರಂಗದಿಂದ) ನೋಡಾಕ ಆಗ್ತಿತ್ತ...’ ಎಂದರು. ಆ ಅರ್ಚಕನಿಗೆ ಸೂರ್ಯದೇವ ಸ್ವಲ್ಪ ಒಳ್ಳೆಯ ಬುದ್ಧಿ ನೀಡಿದರೆ ಚೆನ್ನಾಗಿತ್ತು. ಅರ್ಚಕ ಇರದಿದ್ದರೆ ಕಟಕಟೆಯನ್ನು ಹಾರಿ ಒಳಗೆ ಹೋಗಬಹುದು!


ಈ ದೇವಾಲಯದ ಮುಂದೆ ಸರಸ್ವತಿ ದೇವಿಯ ದೇವಾಲಯವಿದೆ. ಮುಖಮಂಟಪ ಮತ್ತು ಗರ್ಭಗುಡಿಯನ್ನು ಹೊಂದಿರುವ ಸಣ್ಣ ದೇವಾಲಯ. ಸರಸ್ವತಿಯ ವಿಗ್ರಹ ಆಕರ್ಷಕವಾಗಿದ್ದು ಹಳದಿ ಸೀರೆಯನ್ನು ಉಡಿಸಲಾಗಿತ್ತು.