ಭಾನುವಾರ, ಜೂನ್ 29, 2014

ಹರಿಹರೇಶ್ವರ ದೇವಾಲಯ ಹಾಗೂ ನಾರಾಯಣ ದೇವಾಲಯ - ಸಾತೇನಹಳ್ಳಿ


ಹರಿಹರೇಶ್ವರ ದೇವಾಲಯವನ್ನು ಗದ್ದೆಗಳ ನಡುವೆ ದಿಬ್ಬವೊಂದರ ಮೇಲೆ ನಿರ್ಮಿಸಲಾಗಿದೆ. ದೇವಾಲಯದೊಳಗೆ ಸಾಧಾರಣ ಮಟ್ಟಿಗೆ ಸ್ವಚ್ಛತೆ ಇದ್ದರೂ ಹೊರಗಡೆ ಸುತ್ತಲೂ ಬೆಳೆದಿರುವ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿದರೆ ದೇವಾಲಯ ಇನ್ನಷ್ಟು ಆಕರ್ಷಕವಾಗಿ ಕಾಣುವುದು.


ಗರ್ಭಗೃಹದ ದ್ವಾರವು ಪಂಚಶಾಖಗಳನ್ನು ಹೊಂದಿದ್ದು ಇವುಗಳಲ್ಲಿ ಒಂದೆರಡರಲ್ಲಿ ಮಾತ್ರ ಕೆತ್ತನೆಗಳಿವೆ. ದ್ವಾರದ ಮೇಲಿನ ಅಡ್ಡಪಟ್ಟಿಯಲ್ಲಿ ೫ ಸಣ್ಣ ಗೋಪುರಗಳನ್ನು ಕೆತ್ತಲಾಗಿದೆ.


ಗರ್ಭಗುಡಿಯ ಮೇಲೆ ಕದಂಬ ಶೈಲಿಯ ಸುಂದರ ಗೋಪುರವಿದೆ.


ಹಳ್ಳಿಯ ಸಂದಿಗೊಂದಿಯಲ್ಲಿ ಅಡಗಿಕೊಂಡಿರುವ ನಾರಾಯಣ ದೇವಾಲಯವನ್ನು ಹುಡುಕುವುದೇ ಕಷ್ಟದ ಕೆಲಸ. ದೇವಾಲಯದ ಮುಂದಿನಿಂದಲೇ ಹಾದುಹೋದರೂ ಅದರ ಇರುವಿಕೆಯ ಅರಿವಾಗುವುದಿಲ್ಲ! ಆ ರೀತಿಯಲ್ಲಿ ಹಳ್ಳಿಯ ಮನೆ ಮತ್ತು ಪರಿಸರದಲ್ಲಿ ತನ್ನ ಸನ್ನಿಧಾನವನ್ನು ನಾರಾಯಣ ಗೌಪ್ಯವಾಗಿರಿಸಿಕೊಂಡಿದ್ದಾನೆ.


ಒಬ್ಬ ಮಾತ್ರ ನುಸುಳಬಹುದಾದಷ್ಟು ಅಗಲವಿರುವ ದ್ವಾರದ ಬಳಿ ನಿಂತು ಒಳಗೆ ಇಣುಕಿದರೆ ಬಾವಲಿಗಳು ನನ್ನ ಮುಖದ ಮುಂದೆನೇ ಹಾರಿದ್ದು ತಿಳಿಯಿತೇ ವಿನ: ಬೇರೇನೂ ಕಾಣಲಿಲ್ಲ. ಒಳಗೆಲ್ಲಾ ಕತ್ತಲು ಆವರಿಸಿಕೊಂಡಿತ್ತು.


ಗರ್ಭಗುಡಿಯಲ್ಲಿರುವ ೬ ಅಡಿ ಎತ್ತರದ ಶಂಖಚಕ್ರಗದಾಪದ್ಮಧಾರಿಯಾಗಿರುವ ನಾರಾಯಣನ ಮೂರ್ತಿ ಬಹಳ ಚೆನ್ನಾಗಿದೆ. ಮಕರತೋರಣದಿಂದ ಅಲಂಕೃತ ಪ್ರಭಾವಳಿ ಕೆತ್ತನೆಯಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ತೋರಿಸಲಾಗಿದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಜೂನ್ 22, 2014

ಚಂದ್ರಮೌಳೇಶ್ವರ ದೇವಾಲಯ - ಲಕ್ಕುಂಡಿ


ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನೊಳಗೊಂಡಿರುವ ಈ ದೇವಾಲಯ ಜೀರ್ಣಾವಸ್ಥೆಯಲ್ಲಿದೆ. ದೇವಾಲಯದ ಹೊರಗೋಡೆಯ ಕಲ್ಲಿನ ಮೇಲ್ಪದರ ಅರ್ಧದಷ್ಟು ಕಣ್ಮರೆಯಾಗಿದೆ. ಎರಡು ಅಡಿ ಎತ್ತರದ ಅಧಿಷ್ಠಾನದ ಮೇಲೆ ನಿರ್ಮಿತಗೊಂಡಿರುವ ದೇವಾಲಯ ಒಂದು ಪಾರ್ಶ್ವದಲ್ಲಿ ಪುರಾತನ ಬಾವಿಯಿದೆ.


ಹೊರಗಿನಿಂದ ಪಾಳುಬಿದ್ದಂತೆ ತೋರುವ ದೇವಾಲಯದ ಒಳಗೆ ಕೆಲವು ವೈಶಿಷ್ಟ್ಯತೆಗಳನ್ನು ಕಾಣಬಹುದು. ನಾಲ್ಕು ಕಂಬಗಳ ನವರಂಗದ ಛಾವಣಿಯಲ್ಲಿ ಚಚ್ಚೌಕದೊಳಗೆ ಸುಂದರ ಕಮಲವನ್ನು ಕೆತ್ತಲಾಗಿದ್ದು, ಈ ಕಮಲದ ನಟ್ಟನಡುವೆ ಉಗ್ರನರಸಿಂಹ ಹಿರಣ್ಯಕಶಿಪುವಿನ ವಧೆಗೈಯುವ ಆಕರ್ಷಕ ಚಿತ್ರಣವಿದೆ. ಉಗ್ರನರಸಿಂಹನ ಸುತ್ತಲೂ ಅಷ್ಟದಿಕ್ಪಾಲಕರನ್ನು ತೋರಿಸಲಾಗಿದೆ.


ನವರಂಗದ ಮೇಲ್ಛಾವಣಿಯಲ್ಲೇ ನಾಲ್ಕೂ ಕಂಬಗಳ ನಡುವೆ ನಾಲ್ಕೂ ದಿಕ್ಕಿನಲ್ಲಿ ವಿವರವಾಗಿ ಬರೆಯಲಾಗಿರುವ ಶಾಸನಗಳನ್ನು ಕಾಣಬಹುದು. ದೇವಾಲಯವನ್ನು ಯಾರು ಯಾವಾಗ ನಿರ್ಮಿಸಿದರು ಎಂಬ ಮಾಹಿತಿ ದೊರಕಲಿಲ್ಲ. ನವರಂಗದ ಬಳಿಕ ಇರುವ ತೆರೆದ ಅಂತರಾಳದಲ್ಲಿ ನಂದಿಯ ಸಣ್ಣ ಮೂರ್ತಿಯಿದೆ.


ಗರ್ಭಗುಡಿಯ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ಈ ಶಾಖೆಗಳು ಕ್ರಮವಾಗಿ ವಜ್ರತೋರಣ, ಸಂಗೀತಗಾರರು, ಜೋಡಿ ನಾಟ್ಯಗಾರರು, ಸ್ತಂಭ ಹಾಗೂ ಬಳ್ಳಿತೋರಣಗಳಿಂದ ಅಲಂಕೃತಗೊಂಡಿವೆ.


ಶಾಖೆಗಳ ತಳಭಾಗದಲ್ಲಿ ಮಾನವ ಆಕೃತಿಗಳನ್ನು ಕಾಣಬಹುದು. ದ್ವಾರದ ಎರಡೂ ಬದಿಗಳಲ್ಲಿ ನಾಲ್ಕನೇ ಶಾಖೆಯಲ್ಲಿ ಮಾತ್ರ ಮಾನವ ಆಕೃತಿ ಇರದಿರುವುದನ್ನು ಗಮನಿಸಬಹುದು.


ದ್ವಾರದ ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಈ ದೇವಾಲಯದ ಎರಡನೇ ವೈಶಿಷ್ಟ್ಯೆತೆಯೆಂದರೆ ಗಜಲಕ್ಷ್ಮೀಯ ಮೇಲಿರುವ ದುರ್ಗಾದೇವಿಯ ಕೆತ್ತನೆ. ತನ್ನ ಕೈ ಮತ್ತು ಕಾಲುಗಳಿಂದ ದುಷ್ಟಸಂಹಾರ ಮಾಡುತ್ತಿರುವ ದುರ್ಗಾದೇವಿಯ ನಿರೂಪಣೆಯು ಬಹಳ ಅಪರೂಪವಾಗಿ ಕಾಣಬರುವಂತಹ ಕೆತ್ತನೆಯಾಗಿದೆ.


ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಸುಂದರ ಶಿವಲಿಂಗವಿದೆ. ದೇವಾಲಯವು ಪುರಾತತ್ವ ಇಲಾಖೆಯಿಂದ ನಿರ್ವಹಿಸಲ್ಪಟ್ಟಿದ್ದು, ಸುತ್ತಲೂ ಬೇಲಿ ಹಾಕಲಾಗಿದೆ. ದೇವಾಲಯದ ಹೊರಗೋಡೆಯ ಕಲ್ಲಿನ ಹಾಸುಗಳನ್ನು ಪುನ: ನಿರ್ಮಿಸಿದರೆ ದೇವಾಲಯದ ಆಯುಷ್ಯ ಇನ್ನಷ್ಟು ವೃದ್ಧಿಯಾಗಬಹುದು.

ಭಾನುವಾರ, ಜೂನ್ 15, 2014

ಜಲಧಾರೆಯೊಂದರ ಕೆಲವು ಚಿತ್ರಗಳು


ಇದು ಚಾರಣವಲಯದಲ್ಲಿ ಚಿರಪರಿಚಿತವಾಗಿರುವ ಜಲಪಾತ. ಇದು ಎರಡನೇ ಹಂತವಾಗಿದ್ದು, ಹೆಚ್ಚಿನ ಚಾರಣಿಗರು ಮೊದಲನೇ ಹಂತಕ್ಕೆ ಮಾತ್ರ ಭೇಟಿ ನೀಡಿ ಹಿಂತಿರುಗುತ್ತಾರೆ. ಇಲ್ಲಿಗೆ ಮೊದಲ ಬಾರಿ ಬಂದಾಗ ನಾನೂ ಅದನ್ನೇ ಮಾಡಿದ್ದೆ. ಎರಡನೇ ಬಾರಿ ತೆರಳಿದ್ದು, ಈ ಎರಡನೇ ಹಂತ ನೋಡಲು! ಈ ಚಾರಣದ ಬಗ್ಗೆ ಅದಾಗಲೇ ಬರೆದಾಗಿದೆ. ಕೆಲವು ಚಿತ್ರಗಳನ್ನು ಮಾತ್ರ ಇಲ್ಲಿ ಹಾಕಿರುವೆ.

 
 
\

ಸೋಮವಾರ, ಜೂನ್ 09, 2014

ಜಲಸಂಗಿಯ ಮದನಿಕೆಯರು - ೨


ದೈವಿಕ ಸುಂದರಿ.


ಅಪ್ರತಿಮ ಮೈಮಾಟವುಳ್ಳ ಸುಂದರಿಯನ್ನು ನಗ್ನಗೊಳಿಸುತ್ತಿರುವ ಕಪಿ!


ಮುಂಗುಸಿ ಮತ್ತು ಹಾವನ್ನು ಹಿಡಿದಿರುವ ಮದನಿಕೆ.


ಮತ್ತೆ ಕಪಿ ತನ್ನ ಕಪಿಚೇಷ್ಟೆಯಿಂದ ಈ ಸುಂದರಿಗೆ ಕಾಡುತ್ತಿರುವುದು!

ಭಾನುವಾರ, ಜೂನ್ 01, 2014

ಕರ್ನಲ್ ಕಂಬ


ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇರುವ ಸಣ್ಣ ಬೆಟ್ಟದ ಮೇಲಿರುವ ಈ ಸ್ಮಾರಕವನ್ನು ಸರಿಸುಮಾರು ೧೬೯ ವರ್ಷಗಳ ಹಿಂದೆ ನಿರ್ಮಿಸಲಾಗಿದೆ.


ಬ್ರಿಟಿಷರ ಮದ್ರಾಸ್ ರೆಜಿಮೆಂಟ್‍ಗೆ ಒಳಪಟ್ಟಿದ್ದ ಇನ್‍ಫ್ಯಾಂಟ್ರಿಯೊಂದರ ಭಾಗವಾಗಿದ್ದ ಸಣ್ಣ ತುಕಡಿಯೊಂದರ ನಾಯಕರಾಗಿದ್ದ ಮೇಜರ್ ಜನರಲ್ ಕ್ಲೆಮೆಂಟ್ ಹಿಲ್ ಎಂಬವರು ಮೃತರಾದಾಗ ಅವರ ಸಮಾಧಿಯ ಮೇಲೆ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.


ಈಗ ಈ ಸ್ಥಳ 'ಕರ್ನಲ್ ಬೆಟ್ಟ' ಎಂದು ಊರಿನಲ್ಲಿ ಹೆಸರುವಾಸಿ. ಹಾಗೇನೆ ಸ್ಮಾರಕವನ್ನು 'ಕರ್ನಲ್ ಕಂಬ' ಎಂದು ಕರೆಯಲಾಗುತ್ತದೆ.


ಮೊದಲು ಅವಗಣನೆಗೆ ತುತ್ತಾಗಿದ್ದ ಕರ್ನಲ್ ಬೆಟ್ಟವನ್ನು, ಊರಿನ ರೋಟರಿ ಸಂಸ್ಥೆ, ಕಲ್ಲಿನ ಬೆಂಚುಗಳು, ಉದ್ಯಾನ, ಮಕ್ಕಳ ಪಾರ್ಕ್, ಇತ್ಯಾದಿ ನಿರ್ಮಿಸಿ ಸಂಜೆ ಕಳೆಯಲು ಉತ್ತಮ ತಾಣವನ್ನಾಗಿ ಮಾರ್ಪಾಡಿಸಿದೆ.


ಸ್ಮಾರಕದ ತಳಭಾಗದಲ್ಲಿರುವ ಫಲಕವೊಂದು ಇತಿಹಾಸವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ. ಈ ಫಲಕವನ್ನು ಒಂದೆರಡು ಕಡೆ ವಿರೂಪಗಳಿಸಲಾಗಿದೆ. ಕಪ್ಪು ಬಣ್ಣ ಎರಚಲಾಗಿರುವುದರಿಂದ ಬರೆದಿರುವುದನ್ನು ಓದಲು ಕಷ್ಟ. ಒಂದು ಸಂಪೂರ್ಣ ಸಾಲನ್ನು ಕೆರೆದು ವಿರೂಪಗೊಳಿಸಲಾಗಿದೆ (ಅಥವಾ ಕಾಲನ ದಾಳಿಗೆ ತುತ್ತಾಗಿ ವಿರೂಪಗೊಂಡಿರಲೂಬಹುದು).


ಈ ಫಲಕದಲ್ಲಿ ಹೀಗೆ ಬರೆಯಲಾಗಿದೆ - “This column is erected by the 14th Madras Native Infantry, a Guard of which Regiment in escorting to their final earthly resting place the remains of Major General Clement Hill had the sad duty of paying the last honours to ____ ____ ____ ____ and active military life. Won the love of every officer and man with whom he served. He died at the falls of Gairsuppah on the 20th of January 1845 in the 62nd year of his age while defending the Mysore Division”.


ಮೇಜರ್ ಜನರಲ್ ಕ್ಲೆಮೆಂಟ್ ಡೆಲ್‍ವ್ಸ್ ಹಿಲ್ ಅವರು ಹೊನ್ನಾವರದ ’ಹಿಲ್’ ಒಂದರ ಮೇಲೆ ಸಮಾಧಿಯಾದರು ಎಂಬುದೇನೋ ಸರಿ. ಆದರೆ ’ಕರ್ನಲ್ ಹಿಲ್(ಬೆಟ್ಟ)’ ಎಂದು ಈ ಬೆಟ್ಟಕ್ಕೆ ಹೆಸರು ಬರಲು ಕಾರಣವೇನಿರಬಹುದು? ಹಿಲ್ ಅವರು ಕರ್ನಲ್ ಆಗಿರಲಿಲ್ಲ. ಅವರೊಬ್ಬರು ಮೇಜರ್ ಜನರಲ್ ಆಗಿದ್ದರು. ಆಷ್ಟೇ ಅಲ್ಲದೆ, ಈ ಸ್ಮಾರಕದಲ್ಲಿರುವ ಫಲಕದಲ್ಲಿ ಅವರ ವಯಸ್ಸು ೬೨ ಆಗಿತ್ತು ಎಂದು ಬರೆಯಲಾಗಿದೆ. ಆದರೆ ಬ್ರಿಟಿಷ್ ದಾಖಲೆಗಳ ಪ್ರಕಾರ ಅವರು ಡಿಸೆಂಬರ್ ೬, ೧೭೮೧ ರಂದು ಜನಿಸಿದ್ದು, ಮರಣ ಹೊಂದಿದಾಗ ಅವರ ವಯಸ್ಸು ೬೩ ಆಗಿತ್ತು!


ಕ್ಲೆಮೆಂಟ್ ಹಿಲ್ ಅವರ ಪ್ರೀತಿಯ ನಾಯಿಯೊಂದಿತ್ತಂತೆ. ಈ ನಾಯಿ ಅವರ ದೇಹವನ್ನು ಬಿಟ್ಟು ದೂರ ಸರಿಯುತ್ತಿರಲಿಲ್ಲವಂತೆ. ಆ ಮೂಕ ಪ್ರಾಣಿಯ ಪ್ರೀತಿಯನ್ನು ಅರಿತು, ಸೈನಿಕರು ಅದನ್ನು ಹತ್ಯೆಗೈದು ಹಿಲ್ ಅವರ ಶವದೊಂದಿಗೆ ಅಲ್ಲೇ ಹೂಳಿದರಂತೆ. ಈ ಕಥೆಗೆ ಎಲ್ಲೂ ಮಾನ್ಯತೆ ಇಲ್ಲ. ಹಿಲ್ ಅವರ ಸಮಾಧಿಯಲ್ಲಿ ಅವರ ದೇಹದೊಂದಿಗೆ ನಾಯಿಯ ಶವವನ್ನೂ ಹೂಳಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.


ಕರ್ನಲ್ ಬೆಟ್ಟದ ಕೆಂಪು ಮಣ್ಣನ್ನು ಲೂಟಿ ಮಾಡುವ ಸಲುವಾಗಿ ಬೆಟ್ಟವನ್ನು ಕೊರೆಯುತ್ತಿರುವ ಬಗ್ಗೆ ಪ್ರಜಾವಾಣಿಯಲ್ಲಿ ಬಂದ ವರದಿಯನ್ನು ಯಥಾವತ್ತಾಗಿ ಮೇಲೆ ಹಾಕಿದ್ದೇನೆ.