ಭಾನುವಾರ, ಏಪ್ರಿಲ್ 27, 2014

ನನೇಶ್ವರ ದೇವಾಲಯ - ಲಕ್ಕುಂಡಿ


ನನೇಶ್ವರ ದೇವಾಲಯವು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ ಗರ್ಭಗುಡಿಯನ್ನೊಳಗೊಂಡಿದೆ. ಹೆಚ್ಚೇನು ಹಾನಿಯಾಗದೆ ಮೂಲ ರೂಪದಲ್ಲೇ ಉಳಿದಿರುವ ಕೆಲವು ದೇವಾಲಯಗಳಲ್ಲಿ ಇದೂ ಒಂದು. ಲಕ್ಕುಂಡಿಯ ಬಗ್ಗೆ ವಿವರವಾಗಿ ಈ ಮೊದಲೇ ಬರೆದಿರುವುದನ್ನು ಇಲ್ಲಿ ಓದಬಹುದು.


ಮುಖಮಂಟಪದಲ್ಲಿ ೨೦ ಕಂಬಗಳಿವೆ. ಈ ೨೦ ಕಂಬಗಳಲ್ಲಿ ನಾಲ್ಕು ತರಹದ ವಿನ್ಯಾಸಗಳನ್ನು ಕಾಣಬಹುದು. ಮುಖಮಂಟಪದ ನಡುವೆ ಎರಡು ಇಂಚು ಎತ್ತರದ ಚಚ್ಚೌಕವಿದ್ದು, ಇದರ ನಾಲ್ಕು ಮೂಲೆಗಳಲ್ಲಿ ಚಾಲುಕ್ಯ ಶೈಲಿಯ ಕಂಬಗಳನ್ನು ಕಾಣಬಹುದು.


ಮುಖಮಂಟಪದಲ್ಲಿರುವ ಕಂಬಗಳಲ್ಲಿ, ಕೊನೆಯ ಸಾಲಿನ ನಾಲ್ಕು ಕಂಬಗಳ ನವರಂಗದ ಹೊರಭಾಗಕ್ಕೆ ಬಹಳ ಸಮೀಪದಲ್ಲಿವೆ. ಮನುಷ್ಯ ನುಸುಳುವಷ್ಟು ಸ್ಠಳ ಕೂಡಾ ಇಲ್ಲ. ಇವುಗಳಲ್ಲಿ ಎರಡು ಕಂಬಗಳು ನವರಂಗದ ದ್ವಾರದ ಇಕ್ಕೆಲಗಳಿದ್ದು, ದ್ವಾರದ ಅಂದಕ್ಕೆ ಇಂಬು ನೀಡುತ್ತವೆ. ಈ ಎರಡು ಕಂಬಗಳ ತಳಭಾಗದಲ್ಲಿ ಮಾನವ ರೂಪದ ಕೆತ್ತನೆಗಳಿವೆ.


ನವರಂಗದ ದ್ವಾರವು ಪಂಚಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ. ಗಜಲಕ್ಷ್ಮೀಯ ಮೇಲೆ ಹಾರತೋರಣವಿದೆ.


ದ್ವಾರದ ಐದು ಶಾಖೆಗಳಲ್ಲಿ ಬಳ್ಳಿ ತೋರಣ, ನಾಗದೇವ, ಜೋಡಿ ನೃತ್ಯಗಾರರು, ಪೂರ್ಣಕುಂಭ ಕಲಶ ಹಾಗೂ ಕೀರ್ತಿಮುಖದಿಂದ ಅಲಂಕೃತ ಸ್ತಂಭ ಮತ್ತು ಹೂತೋರಣವಿರುವ ಸ್ತಂಭಗಳ ಕೆತ್ತನೆಯನ್ನು ಕಾಣಬಹುದು. ಇದರಲ್ಲಿ ನಾಗದೇವನನ್ನು ತೋರಿಸಿರುವ ರೀತಿ ಸೃಜನಾತ್ಮಕವಾಗಿದೆ.


ದ್ವಾರದ ತಳಭಾಗದಲ್ಲಿ ಶಾಖೆಗೊಂದರಂತೆ ೧೦ ಮನುಷ್ಯ ರೂಪದ ಕೆತ್ತನೆಗಳನ್ನು ಕಾಣಬಹುದು. ಇವು ಯಾರ ಕೆತ್ತನೆಗಳು ಎಂದು ಗೊತ್ತಾಗಲಿಲ್ಲ. ಹೆಚ್ಚಾಗಿ ರತಿ ಮನ್ಮಥರನ್ನು ಇಲ್ಲಿ ತೋರಿಸಲಾಗುತ್ತದೆ. ಆದರೆ ಎಲ್ಲಾ ದೇವಾಲಯಗಳಲ್ಲಿ ಹಾಗಿರುವುದಿಲ್ಲ.


ನವರಂಗಕ್ಕೆ ದಕ್ಷಿಣದಿಂದಲೂ ಒಂದು ದ್ವಾರವಿದ್ದು, ಈ ದ್ವಾರಕ್ಕೆ ಎರಡು ಕಂಬಗಳ ಹೊರಚಾಚು ಮುಖಮಂಟಪವಿದೆ. ಈ ದ್ವಾರವು ಅಲಂಕಾರರಹಿತ ಪಂಚಶಾಖೆಗಳನ್ನು ಮತ್ತು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ. ಎರಡೂ ಕಂಬಗಳ ತಳಭಾಗದಲ್ಲಿ ಮನುಷ್ಯ ರೂಪದ ಸುಂದರ ಕೆತ್ತನೆಗಳಿವೆ.


ನವರಂಗದಲ್ಲಿ ನಾಲ್ಕು ಅತ್ಯಾಕರ್ಷಕ ಕಂಬಗಳಿವೆ. ಇವುಗಳು ಪ್ರಭಾವಳಿ ಕೆತ್ತನೆಯಿಂದ ಸುಂದರವಾಗಿ ಅಲಂಕೃತಗೊಂಡಿವೆ. ಈ ಪ್ರಭಾವಳಿ ಕೆತ್ತನೆಯಲ್ಲಿ, ದಿಕ್ಕಿಗೊಂದರಂತೆ ಎಂಟು ಗೋಪುರಗಳಿವೆ. ಇವುಗಳಲ್ಲಿ ಪೂ.ಪ.ಉ.ದ ದಿಕ್ಕುಗಳಲ್ಲಿ ಮಂಟಪ ಗೋಪುರಗಳಿದ್ದರೆ, ಆ.ವಾ.ಈ.ನೈ ದಿಕ್ಕುಗಳಲ್ಲಿ ಸ್ತಂಭ ಮಂಟಪಗಳಿವೆ.


ನವರಂಗದ ಒಂದು ಕಂಬದಲ್ಲಿರುವ ಶಾಸನದಲ್ಲಿ, ದೇವಾಲಯದ ಪೂಜಾ ಖರ್ಚು ವೆಚ್ಚಗಳಿಗಾಗಿ, ಬಂಡಿ ಬಸವಿ ಸೆಟ್ಟಿ ಎಂಬವನ ಮಗನಾಗಿದ್ದ ಶಂಕರ ಸೆಟ್ಟಿ ಎಂಬ ವರ್ತಕನು, ಹಣವನ್ನು ನೀಡಿದ ಬಗ್ಗೆ ಹೇಳಲಾಗಿದೆ. ಈ ಶಾಸನವು ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ಆಳ್ವಿಕೆಯ ಕಾಲದ್ದಾಗಿದ್ದು, ಈ ಆಧಾರದ ಮೇಲೆ ಇತಿಹಾಸಕಾರರು, ದೇವಾಲಯದ ನಿರ್ಮಾಣ ಇಸವಿ ೧೧೮೬ಕ್ಕಿಂತಲೂ ಮೊದಲೇ ಆಗಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ನಿರ್ಮಾಣದ ನಿಖರ ವರ್ಷ ತಿಳಿಸುವ ಶಾಸನ ದೊರಕಿಲ್ಲ.


ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ದ್ವಾರವು ಅಲಂಕಾರವಿಲ್ಲದ ಐದು ಶಾಖೆಗಳನ್ನು ಹಾಗೂ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ. ಇಲ್ಲಿ ಗಜಗಳು ಹೂಮಾಲೆಯನ್ನು ಎತ್ತಿ ಹಿಡಿದಿರುವುದನ್ನು ಚೆನ್ನಾಗಿ ತೋರಿಸಲಾಗಿದೆ. ಅಂತರಾಳದ ಮೇಲ್ಛಾವಣಿಯಲ್ಲಿ ಕಮಲವನ್ನು ಕೆತ್ತಲಾಗಿದೆ.


ಶಿಖರವು ಗೋಪುರಗಳ ಹಾಗೂ ಕೀರ್ತಿಮುಖಗಳ ಕೆತ್ತನೆಯನ್ನು ಹೊಂದಿದ್ದು, ತುದಿಯಲ್ಲಿರುವ ಕಲಶ ಹಾನಿಯಾಗದೆ ಉಳಿದಿದೆ.


ಹೊರಗೋಡೆಯ ತಳಭಾಗದಲ್ಲಿರುವ ಪಟ್ಟಿಕೆಗಳಲ್ಲಿ, ಒಂದರಲ್ಲಿ ಮಾತ್ರ ಆನೆಗಳನ್ನು ಹೊರಗೋಡೆಯುದ್ದಕ್ಕೂ ಕೆತ್ತಲಾಗಿದೆ.


ದೇವಾಲಯದ ಹೊರಗೋಡೆಯ ಮೂರೂ ಪಾರ್ಶ್ವಗಳಲ್ಲಿ ಒಂದೊಂದು ಮಂಟಪವನ್ನು ಕೆತ್ತಲಾಗಿದೆ. ಇಳಿಜಾರಿನ ಮಾಡು, ಶಿಖರ ಹಾಗೂ ಕಲಶವನ್ನು ಹೊಂದಿರುವ ಈ ಮಂಟಪಗಳು ಈಗ ಖಾಲಿಯಿವೆ. ಉಳಿದಂತೆ ಹೊರಗೋಡೆಯಲ್ಲಿ ಹಲವಾರು ಸ್ತಂಭ ಗೋಪುರಗಳನ್ನು ಮತ್ತು ಕೆಲವು ಕೀರ್ತಿಮುಖಗಳ ಕೆತ್ತನೆಯನ್ನು ಕಾಣಬಹುದು.

ಭಾನುವಾರ, ಏಪ್ರಿಲ್ 20, 2014

ಬ್ರಹ್ಮೇಶ್ವರ ದೇವಾಲಯ - ಸವಡಿ


ಶಾಸನಗಳಲ್ಲಿ ಸವಡಿಯನ್ನು ’ಸಯ್ಯಡಿ’ ಹಾಗೂ ’ಸೈವಿಡಿ’ ಎಂದು ಕರೆಯಲಾಗಿದೆ. ಪಂಚತಂತ್ರದ ಲೇಖಕ ’ದುರ್ಗಸಿಂಹ’ ಇದೇ ಊರಿನವನಾಗಿದ್ದನು. ಸವಡಿಯಲ್ಲಿ ಎರಡು ಪುರಾತನ ದೇಗುಲಗಳಿವೆ - ಬ್ರಹ್ಮೇಶ್ವರ ಮತ್ತು ನಾರಾಯಣ.


೧೧ನೇ ಶತಮಾನದಲ್ಲಿ ರಾಷ್ಟ್ರಕೂಟ ಅರಸರಿಂದ ನಿರ್ಮಿತ ಈ ದೇವಾಲಯವನ್ನು ೧೫ನೇ ಶತಮಾನದಲ್ಲಿ ವಿಜಯನಗರ ಅರಸರು ನವೀಕರಣಗೊಳಿಸಿದ್ದಾರೆ ಎಂದು ಶಾಸನಗಳಿಂದ ತಿಳಿದುಬಂದಿದೆ. ಇಂದು ಬ್ರಹ್ಮೇಶ್ವರ ಎಂದು ಕರೆಯಲ್ಪಡುವ ಈ ದೇವಾಲಯನ್ನು ಅಂದು ’ತ್ರೈಪುರುಷ ದೇವಾಲಯ’ವೆಂದು ಕರೆಯಲಾಗುತ್ತಿತ್ತು. ದೇವಾಲಯದ ಮುಂಭಾಗ ಎಂದೋ ಬಿದ್ದುಹೋಗಿದೆ. ದೇವಾಲಯದ ಒಳಗಡೆ ಎಲ್ಲೆಡೆ ಸುಣ್ಣ ಬಳಿಯಲಾಗಿದೆ. ಸಭಾಮಂಟಪದಲ್ಲಿ ೬೦ಕ್ಕೂ ಮಿಕ್ಕಿ ಕಂಬಗಳಿದ್ದು ಇವುಗಳಿಗೂ ಸುಣ್ಣ ಬಳಿದು ವಿರೂಪಗೊಳಿಸಲಾಗಿದೆ. ಸಭಾಮಂಟಪದಲ್ಲಿ ಸಪ್ತಮಾತೃಕೆಯರು, ಗಣೇಶ ಮತ್ತು ಜೈನ ತೀರ್ಥಂಕರರೊಬ್ಬರ ಮೂರ್ತಿಗಳನ್ನು ಕಾಣಬಹುದು.


ಸಭಾಮಂಟಪದ ನಡುವೆ ೧೨ ಕಂಬಗಳ ಆಯತಾಕಾರದ ನವರಂಗವಿದೆ. ನಂದಿ ಇಲ್ಲೇ ಆಸೀನನಾಗಿದ್ದಾನೆ. ನವರಂಗದ ೨ ಕಂಬಗಳಲ್ಲಿ ಶಾಸನಗಳಿದ್ದು, ಅವಕ್ಕೂ ಸುಣ್ಣ ಬಳಿಯಲಾಗಿದೆ! ಅಂತರಾಳವು ಅಲಂಕಾರರಹಿತ ತ್ರಿಶಾಖ ದ್ವಾರವನ್ನು ಹೊಂದಿದ್ದು, ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯಿದೆ.


ಗರ್ಭಗುಡಿಯಲ್ಲಿರುವ ತ್ರಿಮೂರ್ತಿಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ಒಂದೇ ಪೀಠದ ಮೇಲೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ(ಶಿವಲಿಂಗ)ನ್ನು ಇರಿಸಲಾಗಿದೆ. ಹಂಸಪೀಠದ ಮೇಲೆ ಬ್ರಹ್ಮ, ನಂದಿಪೀಠದ ಮೇಲೆ ಶಿವಲಿಂಗ ಮತ್ತು ಗರುಡಪೀಠದ ಮೇಲೆ ವಿಷ್ಣುವಿರುವಂತೆ ತೋರಿಸಲೋಸುಗ ಹಂಸ, ನಂದಿ ಮತ್ತು ಗರುಡರನ್ನು ಕ್ರಮವಾಗಿ ಬ್ರಹ್ಮ, ಶಿವಲಿಂಗ ಮತ್ತು ವಿಷ್ಣುವಿನ ಮೂರ್ತಿಗಳ ಕೆಳಗೆ ಕೆತ್ತಲಾಗಿದೆ.


ಈ ಹಳ್ಳಿಗಳಲ್ಲಿ ವಿದ್ಯುತ್ತಿನದ್ದೇ ದೊಡ್ಡ ಸಮಸ್ಯೆ. ಎಲ್ಲಿ ಹೋದರೂ ’ಕರೆಂಟ್ ಇಲ್ಲದೇ ೨ ದಿನ ಆಯ್ತು, ಒಂದು ವಾರ ಆಯ್ತು...’ ಎಂಬ ಮಾತುಗಳು. ಈ ಊರಿನಲ್ಲೂ ಅದೇ ಸಮಸ್ಯೆ. ಕತ್ತಲಲ್ಲಿ ಸರಿಯಾದ ಚಿತ್ರ ತೆಗೆಯಬೇಕಾದರೆ ಸುಸ್ತಾಯಿತು. ಆದರೂ ತೆಗೆದ ಚಿತ್ರವೆಲ್ಲಾ ಅಂಕುಡೊಂಕು ಮತ್ತು ಅಷ್ಟಕ್ಕಷ್ಟೆ!


ಸುಂದರವಾಗಿ ಕೆತ್ತಲ್ಪಟ್ಟಿರುವ ಚರ್ತುರ್ಮುಖ ಬ್ರಹ್ಮನ ಮೂರ್ತಿಯು ಮಕರತೋರಣ ಮತ್ತು ಪ್ರಭಾವಳಿಯನ್ನು ಹೊಂದಿದೆ. ಬ್ರಹ್ಮನ ಇಕ್ಕೆಲಗಳಲ್ಲಿ ಸಾವಿತ್ರಿ ಮತ್ತು ಸರಸ್ವತಿಯರಿದ್ದಾರೆ. ವಿಷ್ಣುವಿನ ಮೂರ್ತಿಯೂ ಆಕರ್ಷಕವಾಗಿದ್ದು, ಎರಡು ಕೈಗಳಲ್ಲಿ ಶಂಖ ಮತ್ತು ಚಕ್ರಗಳನ್ನು ಮಾತ್ರ ತೋರಿಸಲಾಗಿದೆ. ಉಳಿದೆರಡು ಕೈಗಳು ಖಾಲಿಯಿವೆ. ವಿಷ್ಣುವಿನ ಮೂರ್ತಿಯೂ ಮಕರತೋರಣ ಮತ್ತು ಪ್ರಭಾವಳಿಯನ್ನು ಹೊಂದಿದ್ದು ಇಕ್ಕೆಲಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರಿದ್ದಾರೆ.

 

ದೇವಾಲಯದ ಹೊರಗೋಡೆಯಲ್ಲಿ ಹಲವಾರು ಸಣ್ಣ ಭಿತ್ತಿಚಿತ್ರಗಳಿವೆ. ತಳಭಾಗದಲ್ಲಿ ಗೋಪುರಗಳನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಭಿತ್ತಿಗಳಿವೆ. ದೇವಾಲಯದ ಹೊರಗೋಡೆಯ ಅಗಾಧತೆಗೆ ಈ ಭಿತ್ತಿಗಳು ಬಹಳ ಸಣ್ಣದಾಗಿ ಗೋಚರಿಸುತ್ತವೆ. ದೇವಾಲಯದ ಶಿಖರ ೧೯ನೇ ಶತಮಾನದ ಆರಂಭದ ಸಮಯದಲ್ಲಿ ಬಿದ್ದುಹೋಗಿದೆ.


ಭಿತ್ತಿಚಿತ್ರಗಳು ಸಣ್ಣದಾಗಿದ್ದರೂ ನೋಡಲು ಸುಂದರವಾಗಿವೆ. ನಿಧಾನವಾಗಿ ನಶಿಸುತ್ತಿರುವ ಈ ಕೆತ್ತನೆಗಳು ಪೌರಾಣಿಕ ಕಥಗಳನ್ನು ಬಿಂಬಿಸುತ್ತಿವೆ ಎಂದು ನನ್ನ ಊಹೆ.


ದೇವಾಲಯದ ಹೊರಗೋಡೆ ಇನ್ನೂ ಸುಸ್ಥಿತಿಯಲ್ಲಿದೆ. ಆದರೆ ಈ ದೇವಾಲಯವನ್ನು ಒತ್ತುವರಿಯ ಸಮಸ್ಯೆ ಕಾಡುತ್ತಿದೆ. ಮುಂಭಾಗದಲ್ಲಿ ಮತ್ತು ಒಂದು ಪಾರ್ಶ್ವದಲ್ಲಿ ಅತಿ ಸಮೀಪದಿಂದ ರಸ್ತೆ ಹಾದುಹೋಗಿದೆ. ಹಿಂಭಾಗದಲ್ಲಿ ಮತ್ತು ಇನ್ನೊಂದು ಪಾರ್ಶ್ವದಲ್ಲಿ ಮನೆಗಳಿವೆ. ನಾನು ಚಿತ್ರಗಳನ್ನು ತೆಗೆಯಬೇಕಾದರೆ ’ಸರ, ತಾವು ಸರ್ವೇ ಆಫೀಸಿನಿಂದ ಬಂದ್ರೇನು?’ ಎಂಬ ಪ್ರಶ್ನೆ.


ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ದೇವಾಲಯವನ್ನು ಉಳಿಸಿ, ಮೂಲರೂಪಕ್ಕೆ ತರಲು ಊರವರ ಸಹಕಾರ ಕೋರಿದ್ದಾರೆ. ಸರ್ವೇ ಆಫೀಸಿನ ಪ್ರಕಾರ ಹಳ್ಳಿಗರು ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹಳ್ಳಿಗರ ಪ್ರಕಾರ ಯಾವುದೇ ಒತ್ತುವರಿ ನಡೆದಿಲ್ಲ. ’ಜಾಗ ನಮ್ಮದೇ’ ಎಂದು ಸಾಬೀತುಪಡಿಸಲು ಕಾಗದಪತ್ರಗಳೆಲ್ಲಾ ಇವೆ ಎಂದು ಅವರ ವಾದ.


ದೇವಾಲಯದ ಹಿಂದೆ ಪ್ರಾಂಗಣ ರಚಿಸಲು ಕೂಡಾ ಸ್ಥಳಾವಕಾಶವಿಲ್ಲ. ಮುಂಭಾಗ ಮತ್ತು ಪಾರ್ಶ್ವಗಳಲ್ಲೂ ಅದೇ ಪರಿಸ್ಥಿತಿ. ಊರವರು ರಸ್ತೆ ಮತ್ತು ತಮ್ಮ ಜಾಗ ಬಿಟ್ಟುಕೊಡರು. ಅವರ ಸಹಕಾರವಿಲ್ಲದೆ ಪ್ರಾಚ್ಯ ವಸ್ತು ಇಲಾಖೆ ಏನೂ ಮಾಡದು. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬ್ರಹ್ಮೇಶ್ವರ ದೇವಾಲಯ ಅವನತಿಯತ್ತ ದಾಪುಗಾಲು ಹಾಕುತ್ತಿದೆ.

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

ಭಾನುವಾರ, ಏಪ್ರಿಲ್ 13, 2014

ವೀರಭದ್ರ ದೇವಾಲಯ - ಕಲ್ಲಾಪುರ


ಕದಂಬರ ಕಾಲದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ. ಪ್ರಶಾಂತ ಸ್ಥಳದಲ್ಲಿ ವಿಶಾಲ ಕೆರೆಯ ಸಮೀಪ ನೆಲೆಗೊಂಡಿರುವ ವೀರಭದ್ರನ ಸನ್ನಿಧಿಗೆ ಬರುವ ಸಂದರ್ಶಕರು ವಿರಳ. ಆರು ಕಿಮಿ ದೂರದಲ್ಲೇ ತಾಲೂಕು ಕೇಂದ್ರವಿದ್ದರೂ ಹೆಚ್ಚಿನವರಿಗೆ ಈ ದೇವಾಲಯದ ಬಗ್ಗೆ ಅರಿವಿಲ್ಲ. ಕಲ್ಲಾಪುರ ಮತ್ತು ಸಮೀಪದ ಹಳ್ಳಿಗಳ ಜನರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ.


ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿರುವ ದೇವಾಲಯದ ಗೋಪುರವು ಕದಂಬ ಶೈಲಿಯಲ್ಲಿದೆ. ಗೋಪುರದ ಮುಂದೆ ಬಸವನ ಕೆತ್ತನೆಯಿದೆ. ದೇವಾಲಯದ ಮುಂದೆ ಕುದುರೆ ಮೇಲೆ ಸವಾರಿ ಹೊರಟ ದೇವಿಯೊಬ್ಬಳ ಕೆತ್ತನೆಯಿರುವ ಕಲ್ಲನ್ನು ಇರಿಸಲಾಗಿದೆ.


ಇಳಿಜಾರು ಮಾಡನ್ನು ಹೊಂದಿರುವ ಮುಖಮಂಟಪದೊಳಗೆ ೧೨ ಕಂಬಗಳಿವೆ. ಇವುಗಳಲ್ಲಿ ೮ ಕಂಬಗಳು ಅರ್ಧಕಂಬಗಳಾಗಿದ್ದು, ಮುಖಮಂಟಪದ ತುದಿಯುದ್ದಕ್ಕೂ ಇರುವ ಕಲ್ಲಿನ ಆಸನದ ಮೇಲೆ ಇವೆ. ಉಳಿದ ನಾಲ್ಕು ಕಂಬಗಳು ಮುಖಮಂಟಪದ ನಟ್ಟನಡುವೆ ನವರಂಗದಲ್ಲಿವೆ. 


ನವರಂಗದಲ್ಲಿರುವ ನಾಲ್ಕೂ ಕಂಬಗಳು ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿದ್ದು, ಮುಂದಿನ ಎರಡು ಕಂಬಗಳ ವಿನ್ಯಾಸ ಹಿಂದಿನ ಎರಡು ಕಂಬಗಳ ವಿನ್ಯಾಸಕ್ಕಿಂತ ಭಿನ್ನವಾಗಿದೆ. ನವರಂಗದ ಮೇಲ್ಛಾವಣಿಯಲ್ಲಿ ಕಮಲದ ಸುಂದರ ಕೆತ್ತನೆಯನ್ನು ಕಾಣಬಹುದು.


ನವರಂಗ ತುದಿಯಲ್ಲಿ, ಅಂತರಾಳದ ದ್ವಾರಕ್ಕೆ ಸ್ವಲ್ಪ ಮೊದಲು, ನೆಲದಲ್ಲಿ ವ್ಯಕ್ತಿಯೊಬ್ಬನ ಸಾಷ್ಟಾಂಗ ನಮಸ್ಕಾರ ಮಾಡುವ ಭಂಗಿಯಲ್ಲಿ ಕೆತ್ತನೆಯಿದೆ. ಕದಂಬರು ನಿರ್ಮಿಸುವ ಹೆಚ್ಚಿನ ದೇವಾಲಯಗಳಲ್ಲಿ ಈ ರೀತಿಯ ಕೆತ್ತನೆಗಳನ್ನು ಕಾಣಬಹುದು. ಇದು ದೇವಾಲಯ ನಿರ್ಮಿಸಿದವರು, ತಮ್ಮದೇ ಅಥವಾ ತಮ್ಮ ಪರಿವಾರದವರ ಅಥವಾ ತಮ್ಮ ಆಪ್ತರ ಚಿತ್ರಗಳನ್ನು ದೇವಾಲಯವನ್ನು ಅಥವಾ ಗರ್ಭಗುಡಿಯನ್ನು ಪ್ರವೇಶಿಸುವ ದ್ವಾರದ ಮೂದಲು ಕೆತ್ತಲು ಅಪ್ಪಣೆ ನೀಡುತ್ತಿದ್ದರು. ದೇವಾಲಯದೊಳಗೆ ಬರುವವರು ಈ ಕೆತ್ತನೆಗಳನ್ನು ಮೆಟ್ಟಿಯೇ ಒಳಬರಬೇಕು ಎನ್ನುವ ಧೋರಣೆ. ಹಾಗೆ ಮಾಡುವುದರಿಂದ, ದೇವಾಲಯ ನಿರ್ಮಾಣದ ಸಮಯದಲ್ಲಿ ಏನಾದರೂ ಪ್ರಾಣ ಹಾನಿ ಅಥವಾ ಯಾರಿಗಾದರೂ ನೋವು ಉಂಟಾಗಿದ್ದರೆ ಅಥವಾ ತಮ್ಮ ಜೀವಿತ ಕಾಲದಲ್ಲಿ ತಾವು ಮಾಡಿರಬಹುದಾದ ಪಾಪ ಕಾರ್ಯಗಳಿಗೆ ಈ ರೀತಿ ಪಶ್ಚಾತ್ತಾಪ ಪಟ್ಟಂತಾಗುತ್ತದೆ ಎಂಬ ನಂಬಿಕೆ ಕದಂಬ ಅರಸರಲ್ಲಿತ್ತು.


ಅಂತರಾಳದ ದ್ವಾರವು ಮೂರು ಶಾಖೆಗಳನ್ನು ಹೊಂದಿದೆ. ಲಲಾಟದಲ್ಲಿ ಲಕ್ಷ್ಮೀಯ ಕೆತ್ತನೆಯಿದ್ದು, ತಳಭಾಗದಲ್ಲಿ ಇಕ್ಕೆಲಗಳಲ್ಲಿ ದ್ವಾರಪಾಲಕರಿದ್ದಾರೆ. ದ್ವಾರದ ಶಾಖೆಗಳು ಅಂದವಾದ ಅಲಂಕಾರಿಕಾ ಕೆತ್ತನೆಗಳನ್ನು ಹೊಂದಿವೆ. ಲಕ್ಷ್ಮೀಯ ಇಕ್ಕೆಲಗಳಲ್ಲಿ ಕಮಲದ ಮೊಗ್ಗುಗಳಿವೆ.


ಗರ್ಭಗುಡಿಯ ದ್ವಾರವು ಸಾಮಾನ್ಯವಾಗಿದ್ದು ಲಲಾಟದಲ್ಲಿ ಗಣೇಶನ ಕೆತ್ತನೆಯಿದೆ. ನೇರಲಿಗೆ ಈಶ್ವರ ದೇವಾಲಯದಲ್ಲೂ ಇದೇ ರೀತಿ ಗರ್ಭಗುಡಿಯ ಲಲಾಟದಲ್ಲಿ ಗಣೇಶನನ್ನು ಕೆತ್ತಲಾಗಿದೆ. ಹೀಗೆ ಕಾಣಬರುವುದು ಬಹಳ ಅಪರೂಪ. ಗರ್ಭಗುಡಿಯಲ್ಲಿ ವೀರಭದ್ರನ ಸುಮಾರು ನಾಲ್ಕು ಅಡಿ ಎತ್ತರದ ಮೂರ್ತಿಯಿದೆ.


ಮುಖಮಂಟಪವನ್ನು ಪ್ರವೇಶಿಸುವಲ್ಲಿ ಇಕ್ಕೆಲಗಳಲ್ಲಿ ಖಡ್ಗ ಹಿಡಿದು ಹೋರಾಡುವ ಮಹಿಳೆಯರ ಚಿತ್ರಣವಿದೆ. ಮುಖಮಂಟಪದ ಹೊರಭಾಗದಲ್ಲಿ ಕೆಲವು ಕೆತ್ತನೆಗಳನ್ನು ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ಜನಜೀವನಕ್ಕೆ ಸಂಬಂಧಪಟ್ಟವುಗಳಾಗಿವೆ.


ಡೋಲು ಬಾರಿಸುವವನು, ಪ್ರಾಣಿಗಳ ಮಿಥುನ ಕ್ರಿಯೆ, ಸೌಂದರ್ಯ ಹಾಗೂ ಮೈಮಾಟ ಪ್ರದರ್ಶಿಸುತ್ತಿರುವ ಯುವತಿಯರು, ಮಗು ಹೆರುವ ದೃಶ್ಯ, ಮನುಷ್ಯರ ಮಿಲನ ಕ್ರಿಯೆ ಇತ್ಯಾದಿ ಕೆತ್ತನೆಗಳಿವೆ.

ಭಾನುವಾರ, ಏಪ್ರಿಲ್ 06, 2014

ಮರೆಯಬಾರದ ಮರತೂರು


ಎರಡು ವರ್ಷಗಳ ಮೊದಲು ಮರತೂರು ಎಂಬ ಶಬ್ದಕ್ಕೆ ನನ್ನ ಜೀವನದಲ್ಲಿ ಯಾವುದೇ ಪ್ರಾಮುಖ್ಯತೆಯಿರಲಿಲ್ಲ. ಆದರೆ ಮರತೂರಿಗೆ ಭೇಟಿ ನೀಡಿದ ಬಳಿಕ ಈ ಊರಿಗಿರುವ ಐತಿಹಾಸಿಕ ಪ್ರಾಮುಖ್ಯತೆಯನ್ನು ಅರಿತು, ನಮಗೆಲ್ಲಾ ಅದರ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲದಿರುವ ಬಗ್ಗೆ ಖೇದವಾಯಿತು. ಬಹಳ ಪುರಾತನ ಕಾಲದಿಂದ ಕರ್ನಾಟಕದ ಹಾಗೂ ಕನ್ನಡದ ಪತಾಕೆಯನ್ನು ಎತ್ತಿ ಹಾರಿಸುತ್ತಿರುವ ಇಂತಹ ಊರುಗಳ ಬಗ್ಗೆ ಹಾಗೂ ಇಂತಹ ಊರುಗಳಲ್ಲಿ ಜನಿಸಿ ರಾಜ್ಯಕ್ಕೆ ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಿದ ಮಹಾನ್ ವ್ಯಕ್ತಿಯ ಬಗ್ಗೆ ನಮಗೆ ಅರಿವೇ ಇಲ್ಲದಿರುವುದು ಇನ್ನಷ್ಟು ಸೋಜಿಗವನ್ನುಂಟುಮಾಡಿತು.


ಮರತೂರಿನಲ್ಲಿ ಒಂದು ಸುಂದರ ಭವ್ಯ ಕಟ್ಟಡವಿದೆ. ಇದನ್ನು ’ವಿಜ್ಞಾನ ಭವನ’ ಎಂದು ಕರೆಯುತ್ತಾರೆ. ಇದನ್ನು ಇದೇ ಊರಿನಲ್ಲಿ ಜನಿಸಿರುವ ಕವಿ ವಿಜ್ಞಾನೇಶ್ವರರ ಸ್ಮರಣಾರ್ಥ ನಿರ್ಮಿಸಲಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಇದನ್ನು ಅಧ್ಯಯನ ಕೇಂದ್ರವನ್ನಾಗಿ ಬಳಸುತ್ತಿದೆ.


ಇಷ್ಟಕ್ಕೂ ಈ ವಿಜ್ಞಾನೇಶ್ವರ ಯಾರು? ಇವರು, ಪ್ರಸಿದ್ಧ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಗುರುಗಳಾಗಿದ್ದು, ಆಸ್ಥಾನ ಪಂಡಿತರೂ ಆಗಿದ್ದರು. ವಿಕ್ರಮಾದಿತ್ಯನ ರಾಜ್ಯಭಾರವನ್ನು ಚಾಲುಕ್ಯರ ಆಳ್ವಿಕೆಯಲ್ಲಿ ಸುವರ್ಣಾಕ್ಷರಗಳಿಂದ ಗುರುತಿಸಲ್ಪಡುತ್ತದೆ. ಇದಕ್ಕೆ ಪ್ರಮುಖ ಕಾರಣ ವಿಜ್ಞಾನೇಶ್ವರರ ಮಾರ್ಗದರ್ಶನ. ’ಮಿತಾಕ್ಷರ (ಹಿಂದೂ ನ್ಯಾಯ ಸಂಹಿತೆ)’ ಎಂಬ ಮಹಾನ್ ಗ್ರಂಥಗಳನ್ನು ಬರೆದವರೇ ಈ ವಿಜ್ಞಾನೇಶ್ವರ. ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಾಗಿದ್ದ ವಿಜ್ಞಾನೇಶ್ವರರು ಬರೆದ ಈ ಗ್ರಂಥ ಇಂದಿನ ಕಾನೂನು ಶಾಸ್ತ್ರದ ಮೂಲ. ಸಾವಿರ ವರ್ಷಗಳ ಹಿಂದೆನೇ ಹಿಂದೂ ಕಾನೂನು ಗ್ರಂಥ ಬರೆದು ಅದು ದೇಶಾದ್ಯಂತ ಜಾರಿಗೊಳ್ಳುವಷ್ಟು ಪ್ರಸಿದ್ಧಿಯಾಗಿದ್ದು ಕನ್ನಡಿಗರು ಹೆಮ್ಮೆ ಪಡುವ ವಿಷಯ.


ಮರತೂರಿಗೆ ನಾನು ತೆರಳುವ ಇರಾದೆ ಇದ್ದಿದ್ದು ಅಲ್ಲಿನ ದೇವಾಲಯಗಳನ್ನು ನೋಡಲು. ಅಂತೆಯೇ ಸ್ವಲ್ಪ ಮಾಹಿತಿ ಹುಡುಕಾಡಿದಾಗ ವಿಜ್ಞಾನೇಶ್ವರರ ಬಗ್ಗೆ ತಿಳಿದುಬಂತು. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಲಭ್ಯವಾಗಿರಲಿಲ್ಲ. ಈ ವರ್ಷ ಫೆಬ್ರವರಿ ತಿಂಗಳಂದು ಕನ್ನಡಪ್ರಭದಲ್ಲಿ ಶಾಲಿನಿ ರಜನೀಶ್ ಎಂಬವರು ವಿಜ್ಞಾನೇಶ್ವರರ ಬಗ್ಗೆ ವಿವರವಾಗಿ ಮಾಹಿತಿಯಿರುವ ಲೇಖನ ಬರೆದಿದ್ದಾರೆ. ಕನ್ನಡಿಗರೆಲ್ಲರೂ ಓದಲೇಬೇಕಾದ, ಸಮಗ್ರ ಮಾಹಿತಿಯಿರುವ ಅದ್ಭುತ ಲೇಖನವಿದು.


ಮರತೂರಿನಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ಬಹಳ ಪ್ರಸಿದ್ಧಿ ಪಡೆದಿರುವ ದೇವಾಲಯ. ಚಾಲುಕ್ಯ ಶೈಲಿಯ ಈ ದೇವಾಲಯದ ನಿರ್ಮಾಣ ವರ್ಷದ ಬಗ್ಗೆ ಮಾಹಿತಿ ದೊರಕಲಿಲ್ಲ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಒಳಗೊಂಡಿರುವ ದೇವಾಲಯ ಕಾಲಕಾಲಕ್ಕೆ ನವೀಕರಣಗೊಳ್ಳುತ್ತ ಬಂದಿದೆ. ಗೋಪುರ ಮತ್ತು ಹೊರಭಾಗಕ್ಕೆಲ್ಲ ಸುಣ್ಣ ಬಳಿಯಲಾಗಿದೆ.


ಕಾಶಿ ವಿಶ್ವನಾಥ ದೇವಾಲಯದಲ್ಲಿ ಎರಡು ಶಾಸನಗಳು ದೊರಕಿವೆ. ಇವುಗಳಲ್ಲಿ ಒಂದು ವಿಜ್ಞಾನೇಶ್ವರರ ಪರಿಚಯ ನೀಡುವ ಶಾಸನವಾಗಿದೆ. ಎರಡನೇ ಶಾಸನವು ವಿಜ್ಞಾನೇಶ್ವರರ ಮಗನಾಗಿದ್ದ ಹೆಗ್ಗಡೆ ಬೀಚಿರಾಜ ಹಾಗೂ ಆತನ ಪತ್ನಿ ಚಾಮಲಾ ದೇವಿಯರು ಮರತೂರಿನಲ್ಲಿ ದೇವಾಲಯವನ್ನು ನಿರ್ಮಿಸಿದಾಗ, ಹಲವರು ಭೂದಾನ ಮಾಡಿದ ವಿವರಗಳನ್ನು ಒಳಗೊಂಡಿದೆ.

 

ದೇವಾಲಯದ ಹಿಂಭಾಗದಲ್ಲಿ ಪುರಾತನ ಪುಷ್ಕರಿಣಿಯಿದೆ. ಅಗಲ ಕಿರಿದಾಗಿದ್ದು ಆಳವಿರುವ ಪುಷ್ಕರಿಣಿಯ ಮೆಟ್ಟಿಲುಗಳ ರಚನೆ ಆಕರ್ಷಕವಾಗಿದೆ. ನಿಧಾನವಾಗಿ ಶಿಥಿಲಗೊಳ್ಳುತ್ತಿರುವ ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಕರ್ನಾಟಕ ಸರಕಾರ ೨೦೧೨ರ ಕೊನೆಯಲ್ಲಿ ೫೦ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.


ಕಾಶಿ ವಿಶ್ವನಾಥ ದೇವಾಲಯದ ಪಡಸಾಲೆಗೆ ತಾಗಿಕೊಂಡೇ ಶಂಕರಲಿಂಗ ದೇವಾಲಯವಿದೆ. ನವರಂಗ, ತೆರೆದ ಅಂತರಾಳ ಮತ್ತು ಗರ್ಭಗುಡಿಯನ್ನು ಈ ದೇವಾಲಯ ಹೊಂದಿದೆ.


ಗರ್ಭಗುಡಿಯ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರು ಮತ್ತು ಮೇಲ್ಗಡೆ ಗಜಲಕ್ಷ್ಮೀಯ ಕೆತ್ತನೆಯಿದೆ. ಎತ್ತರದ ಪಾಣಿಪೀಠದಲ್ಲಿ ಶಿವಲಿಂಗವನ್ನು ಕಾಣಬಹುದು.


ದೇವಾಲಯದ ಮುಖಮಂಟಪದ ಬಳಿ ಗಣೇಶನ ದೊಡ್ಡ ಮೂರ್ತಿಯಿದೆ. ಹಾಗೇನೆ ನವರಂಗದ ದ್ವಾರದ ಒಂದು ಮೂಲೆಯಲ್ಲಿ ಗಣೇಶನ ಸಣ್ಣ ಮೂರ್ತಿಯನ್ನು ಇರಿಸಲಾಗಿದೆ.


ಇವೆರಡು ದೇವಾಲಯಗಳನ್ನು ದಾಟಿ ಮುನ್ನಡೆದಾಗ ಅನತಿ ದೂರದಲ್ಲಿ ದೇವಾಲಯದಂತೆ ತೋರುವ ರಚನೆಯೊಂದು ಕಾಣಬಂತು. ನೋಡೋಣವೆಂದು ಸಮೀಪ ತೆರಳಿದರೆ, ಅದು ಒಂದಾನೊಂದು ಕಾಲದಲ್ಲಿ ಭವ್ಯವಾಗಿ ಮೆರೆದಿದ್ದ ತ್ರಿಕೂಟಾಚಲ ರಚನೆಯ ಈಶ್ವರ ದೇವಾಲಯ!


ಈ ದೇವಾಲಯದ ಶೋಚನೀಯ ಪರಿಸ್ಥಿತಿ ಕಂಡು ನಾನು ಕಣ್ಣೀರಿಡುವುದೊಂದು ಬಾಕಿಯಿತ್ತು. ದೇವಾಲಯದ ಹೊರಗೋಡೆಯೆಲ್ಲಾ ಕುಸಿದುಬಿದ್ದು ಕಲ್ಲಿನ ರಾಶಿಯಾಗಿ ಮಾರ್ಪಾಡಾಗಿದೆ. ತ್ರಿಕೂಟಾಚಲದ ಕುರುಹಾಗಿ ಎರಡು ಗೋಪುರದ ಅವಶೇಷಗಳನ್ನು ಕಾಣಬಹುದು. ಇನ್ನೊಂದು ಗೋಪುರ ಎಂದೋ ಮಾಯವಾಗಿದೆ.


ದೇವಾಲಯವನ್ನು ಪ್ರವೇಶಿಸಬೇಕಾದರೆ ಕೊಟ್ಟಿಗೆಯೊಂದನ್ನು ಹಾದುಹೋಗಲೇಬೇಕು. ಪ್ರಮುಖ ದ್ವಾರದ ಮುಂಭಾಗದಲ್ಲಿ ಕಂಬ ಊರಿ, ಶೀಟು ಹಾಕಿಸಿ, ಎತ್ತುಗಳನ್ನು ಕಟ್ಟಿಹಾಕಲಾಗಿತ್ತು. ಈ ಎತ್ತುಗಳನ್ನು ದಾಟಿ ಮುಂದೆ ಹೋಗುವುದೇ ಒಂದು ಹರಸಾಹಸದ ಕೆಲಸವೆನಿಸಿತು.


ಪ್ರಮುಖ ದ್ವಾರದ ಪರಿಸ್ಥಿತಿ ಇನ್ನೂ ಶೋಚನೀಯ. ಮೇಲಿನ ಚಿತ್ರವೇ ಎಲ್ಲವನ್ನೂ ಹೇಳುತ್ತದೆ. ಪ್ರಮುಖ ದ್ವಾರದ ಹೊರಗಡೆ ಬಲಕ್ಕೆ ಕೊಟ್ಟಿಗೆಯಿದ್ದರೆ, ಎಡಕ್ಕೆ ಮನೆಯೊಂದರ ಗೋಡೆ. ದಾರಿ ಅಲ್ಲಿಗೇ ಕೊನೆ. ದೇವಾಲಯದ ಹೊರಗೋಡೆಗೇ ಮನೆಯ ಗೋಡೆಯನ್ನು ತಾಗಿಸಿ, ಮನೆಯೊಳಗಿನ ಕೋಣೆಯೊಂದನ್ನು ರಚಿಸಿಬಿಟ್ಟಿದ್ದಾರೆ! ಇನ್ನು ದ್ವಾರದ ಮೇಲಿರಬೇಕಾಗಿದ್ದ ಅಡ್ಡಪಟ್ಟಿ, ದ್ವಾರದ ಮುಂಭಾಗದಲ್ಲಿ ಕೆಳಗಡೆ ಅಡ್ಡಕ್ಕೆ ಮಲಗಿಕೊಂಡಿತ್ತು. ದ್ವಾರದ ಮೇಲೆ ರಾರಾಜಿಸಬೇಕಾಗಿದ್ದ ಗಜಲಕ್ಷ್ಮೀ, ಕೆಳಗೆ ಮಣ್ಣು ಮೆತ್ತುತ್ತಿದ್ದಳು.


ದೇವಾಲಯದೊಳಗೆ ಎಲ್ಲೆಡೆ ಕತ್ತಲು. ಪ್ರಮುಖ ಗರ್ಭಗುಡಿಯ ಛಾವಣಿ ಒಡೆದಿರುವುದರಿಂದ ಅಲ್ಲಿ ಬೆಳಕು ತೂರಿಬರುತ್ತಿತ್ತು. ಪ್ರಮುಖ ಗರ್ಭಗುಡಿ ಪ್ರತ್ಯೇಕ ಅಂತರಾಳವನ್ನು ಹಾಗೂ ಉಳಿದೆರಡು ಗರ್ಭಗುಡಿಗಳು ತೆರೆದ ಅಂತರಾಳವನ್ನು ಹೊಂದಿವೆ. ಎಲ್ಲಾ ಗರ್ಭಗುಡಿಗಳಿಗೆ ಒಂದೇ ನವರಂಗವಿದೆ. ಇಷ್ಟೇ ಅಲ್ಲದೆ ಈಗಲೂ ಎಲ್ಲಾ ಮೂರು ಗರ್ಭಗುಡಿಗಳಲ್ಲಿ ಶಿವಲಿಂಗಗಳಿವೆ.


ನವರಂಗದ ತುಂಬಾ ಸಾಮಾನು ಸರಂಜಾಮುಗಳು ತುಂಬಿಹೋಗಿವೆ. ನವರಂಗವನ್ನು ಹಳ್ಳಿಗರು ಗೋದಾಮಿನಂತೆ ಬಳಸುತ್ತಿದ್ದಾರೆ. ನಡುವೆ ಅಲ್ಲಲ್ಲಿ ಅತಿಯಾದ ಭಕ್ತಿಯಿಂದ ಬಣ್ಣ ಹಚ್ಚಲಾದ ನಾಗನ ಕಲ್ಲುಗಳನ್ನು ಕಾಣಬಹುದು.


ಪ್ರಮುಖ ಗರ್ಭಗುಡಿಯ ಅಂತರಾಳದ ದ್ವಾರದ ಪಾರ್ಶ್ವದಲ್ಲಿ ಗಣೇಶನ ಮೂರ್ತಿಯಿದೆ. ಗರ್ಭಗುಡಿಯು ಪಂಚಶಾಖೆಗಳನ್ನು ಹೊಂದಿದ್ದು ಮೇಲ್ಗಡೆ ಗಜಲಕ್ಷ್ಮೀಯನ್ನು ಹೊಂದಿದೆ.


ಎರಡನೇ ಗರ್ಭಗುಡಿಯಲ್ಲಿಯೂ ಸುಂದರ ಶಿವಲಿಂಗವಿದೆ. ಪಂಚಶಾಖೆಯ ದ್ವಾರವು ದ್ವಾರಪಾಲಕರನ್ನು ಹಾಗೂ ಗಜಲಕ್ಷ್ಮೀಯನ್ನು ಹೊಂದಿದೆ.


ಮೂರನೇ ಗರ್ಭಗುಡಿಯ ಬಳಿ ಸ್ವಲ್ಪವೂ ಬೆಳಕಿರಲಿಲ್ಲ. ಕ್ಯಾಮರಾದ ಬೆಳಕಿನಲ್ಲಿ ಅದ್ಯಾವುದೋ ಪ್ರಾಣಿ ಕಂಡಂತಾಗಿ ಹೌಹಾರಿದೆ. ನಾನು ಚಿತ್ರವನ್ನು ಪರಿಶೀಲಿಸಬೇಕೆನ್ನುವಷ್ಟರಲ್ಲಿ, ನಾಯಿಯೊಂದು ತಲೆತಗ್ಗಿಸಿಕೊಂಡು ನನ್ನನ್ನು ದಾಟಿ ದೇವಾಲಯದ ಹೊರನಡೆಯಿತು! ದೇವಾಲಯದ ಶೋಚನೀಯ ಪರಿಸ್ಥಿತಿಗೆ ತಿಲಕವಿಟ್ಟಂತಾಗಿತ್ತು.


ಮರತೂರಿನಲ್ಲಿ ಇನ್ನೂ ಹಲವಾರು ದೇವಾಲಯಗಳಿವೆ. ಆದರೆ ಅವೆಲ್ಲವೂ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿವೆ. ಸಮಯದ ಅಭಾವವಿದ್ದುದರಿಂದ ಅವೆಲ್ಲವನ್ನು ನೋಡಲು ನನಗಾಗಲಿಲ್ಲ. ಇಲ್ಲೊಂದು ಕೋಟೆಯೂ ಇದೆ. ಕೋಟೆಯೊಳಗೆ ತೆರಳಲು ಸರಿಯಾದ ದಾರಿಯಿಲ್ಲ. ಗಿಡಗಂಟಿಗಳು ಎಲ್ಲೆಡೆ ಹಬ್ಬಿಕೊಂಡಿದ್ದವು. ಈ ಸಣ್ಣ ಕೋಟೆಯ ಬುರುಜುಗಳು ಕುಸಿಯುತ್ತಿವೆ, ಗೋಡೆಗಳ ಕಲ್ಲುಗಳು ಮರೆಯಾಗುತ್ತಿವೆ, ಕುರುಚಲು ಗಿಡಗಳು ಕೋಟೆಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುತ್ತಿವೆ. ಇಲ್ಲಿರುವ ದೇವಾಲಯಗಳಂತೆ, ಈ ಕೋಟೆಗೂ ಕಾಯಕಲ್ಪದ ಅವಶ್ಯಕತೆಯಿದೆ.


ಮರತೂರನ್ನು ನಾವು ಮರೆಯಬಾರದು. ಚಾಲುಕ್ಯರ ಕಾಲದಲ್ಲಿ ಮೆರೆದಿದ್ದ ಊರಾಗಿತ್ತು ಈ ಮರತೂರು. ೩೦೦ ದೇವಾಲಯಗಳು, ೩೦೦ ಬಾವಿಗಳ ಊರಾಗಿತ್ತು ಈ ಮರತೂರು. ವಿಜ್ಞಾನೇಶ್ವರರ ಹುಟ್ಟೂರು ಇದಾಗಿರುವುದು, ಊರಿಗೆ ಇನ್ನಷ್ಟು ಹೆಮ್ಮೆಯ ವಿಷಯ. ಆದರೆ ಇಂದು ಎಲ್ಲರೂ ಮರೆತಿರುವ ಊರಾಗಿದೆ ಈ ಮರತೂರು. ಕಾಶಿ ವಿಶ್ವನಾಥ ದೇವಾಲಯವನ್ನು ಮಾತ್ರ ಚೆನ್ನಾಗಿಟ್ಟುಕೊಂಡರೆ ಸಾಲದು. ಊರಲ್ಲಿರುವ ಇನ್ನೂ ಹಲವಾರು ದೇವಾಲಯಗಳನ್ನು ಚೆನ್ನಾಗಿ ಕಾಪಾಡಿಕೊಂಡರೆ ಊರಿಗೊಂದು ಶೋಭೆ.

ಮಾಹಿತಿ: ಕಣಜ