ಭಾನುವಾರ, ಫೆಬ್ರವರಿ 23, 2014

ಶಿವ ದೇವಾಲಯ - ಸೂಡಿ

 
ಹತ್ತು ಹಾಗೂ ಹನ್ನೊಂದನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ರಾಜಧಾನಿಯಾಗಿ ಮೆರೆದಿದ್ದ ಊರು ಸೂಡಿ. ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ (೧೦೭೬-೧೧೨೬) ನಾಣ್ಯಗಳನ್ನು ನಿರ್ಮಿಸುವ ಪ್ರಮುಖ ಟಂಕಸಾಲೆ ಸೂಡಿಯಲ್ಲೇ ಇತ್ತು. ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ ಮತ್ತು ಸೇವುಣ ಯಾದವರ ಕಾಲದ (ಇಸವಿ ೧೦೧೦ರಿಂದ ೧೨೦೨ರವರೆಗೆ ದಿನಾಂಕಗಳಿರುವ) ೧೬ ಶಾಸನಗಳು ಇಲ್ಲಿ ದೊರಕಿವೆ. ಆಗಿನ ಕಾಲದಲ್ಲಿ ಸೂಡಿಯನ್ನು ’ಸೂಂಡಿ’ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಪ್ರಮುಖ ದೇವಾಲಯಗಳೆಂದರೆ ಶಿವ ದೇವಾಲಯ, ಮಲ್ಲಿಕಾರ್ಜುನ ದೇವಾಲಯ ಮತ್ತು ಗಣಪತಿ ದೇವಾಲಯ.
 
 
ಈ ದೇವಾಲಯವನ್ನು ಜೋಡು ಕಲಶ ದೇವಾಲಯವೆಂದೂ ಕರೆಯಲಾಗುತ್ತದೆ. ಸುಮಾರು ಐದು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿರುವ ಈ ದ್ವಿಕೂಟ ದೇವಾಲಯವು ನವರಂಗ, ನಂದಿಮಂಟಪ ಮತ್ತು ತಲಾ ಎರಡು ಮುಖಮಂಟಪ, ಅಂತರಾಳ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಪಶ್ಚಿಮದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಪೂರ್ವದ ಗರ್ಭಗುಡಿ ಖಾಲಿಯಿದೆ.
 

ನಂದಿಯ ಆಕರ್ಷಕ ಮತ್ತು ಬೃಹತ್ ಮೂರ್ತಿಯು ಪಶ್ಚಿಮದ ಗರ್ಭಗುಡಿಗೆ ಮುಖಮಾಡಿಕೊಂಡು ಇದೆ. ಈ ದೇವಾಲಯವನ್ನು ಪಾರ್ಶ್ವದಿಂದ ವೀಕ್ಷಿಸಿದರೆ ಮುಖಮಂಟಪಗಳು ದೇವಾಲಯದ ನಡುವೆ ಇರದಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣವೇನೆಂದರೆ ನವರಂಗ ಮತ್ತು ಪೂರ್ವದ ಗರ್ಭಗುಡಿಯ ನಡುವೆ ನಿರ್ಮಿಸಲಾಗಿರುವ ನಂದಿಮಂಟಪ.
 

ಎರಡೂ ಮುಖಮಂಟಪಗಳು ಅರ್ಧಕಂಬಗಳಿರುವ ಕಕ್ಷಾಸನಗಳನ್ನು ಹೊಂದಿವೆ. ದಕ್ಷಿಣದ ಮುಖಮಂಟಪದ ಹೊರಗೆ ಕಲಶಗಳನ್ನು ಕೆತ್ತಲಾಗಿದ್ದು, ಉತ್ತರದ ಮುಖಮಂಟಪದ ಹೊರಭಾಗದಲ್ಲಿ ಕಲಶಗಳ ಜೊತೆಗೆ ಹೂವು, ಆನೆ ಮತ್ತು ಸಿಂಹಗಳನ್ನು ಕಾಣಬಹುದು.
 

ಆಯತಾಕಾರದ ನವರಂಗದಲ್ಲಿ ೮-೧೦ ಕಂಬಗಳಿವೆ. ನವರಂಗದ ನಂತರ ಪಶ್ಚಿಮದಲ್ಲಿ ತೆರೆದ ಅಂತರಾಳವಿದ್ದು ನಂತರ ಗರ್ಭಗುಡಿಯಿದೆ. ಪೂರ್ವದಲ್ಲಿ ನಂದಿಮಂಟಪವಿದ್ದು, ನಂತರ ತೆರೆದ ಅಂತರಾಳ ಹಾಗೂ ಗರ್ಭಗುಡಿ. ಈ ಗರ್ಭಗುಡಿ ಖಾಲಿಯಿದ್ದು ಕಸ ಮತ್ತು ಧೂಳಿನಿಂದ ತುಂಬಿಹೋಗಿದೆ. ಮೊದಲು ಇಲ್ಲಿ ಸೂರ್ಯದೇವನ ವಿಗ್ರಹವಿತ್ತೆಂದು ನಂಬಲಾಗಿದೆ.
 

ಎರಡೂ ಗರ್ಭಗುಡಿಗಳು ಪಂಚಶಾಖಾ ದ್ವಾರಗಳನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ. ಶಾಖೆಗಳಲ್ಲಿ ಅತ್ಯುತ್ತಮ ಅಲಂಕಾರಿಕಾ ಕೆತ್ತನೆಗಳು ಮತ್ತು ನಾಟ್ಯಜೋಡಿಯ ಕೆತ್ತನೆಗಳಿದ್ದರೂ ಅವುಗಳಿಗೆ ಬಳಿದಿರುವ ಕೆಂಪು ಬಣ್ಣದಿಂದ ಅವು ತಮ್ಮ ಆಕರ್ಷಣೆಯನ್ನು ಕಳಕೊಂಡಿವೆ. ಪಶ್ಚಿಮದ ಗರ್ಭಗುಡಿಯಲ್ಲಿ ಸುಮಾರು ಎರಡುವರೆ ಅಡಿ ಎತ್ತರದ ಸುಂದರ ಪಾಣಿಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದೆ. ಶಿವಲಿಂಗದ ಹಿಂದೆ ಗೋಡೆಯಲ್ಲಿ ಮಕರತೋರಣವಿದೆ. ಖಾಲಿಯಿರುವ ಗರ್ಭಗುಡಿಯಲ್ಲೂ ಈ ಮಕರತೋರಣದ ಕೆತ್ತನೆಯನ್ನು ಕಾಣಬಹುದು.
 

ಹೊರಗಿನಿಂದ ಅದ್ಭುತವಾಗಿ ಕಾಣುವ ದೇವಾಲಯದ ಒಳಗೆ ಪ್ರವೇಶಿಸಿದರೆ ಭ್ರಮನಿರಸನವಾಗುವುದು ಖಚಿತ. ದೇವಾಲಯ ಏನೇನೂ ಸ್ಚಚ್ಛವಾಗಿಲ್ಲ. ಎಲ್ಲೆಡೆ ಕಸಕಡ್ಡಿ, ಗುಟ್ಕಾ ಚೀಟಿಗಳು ಮತ್ತು ಧೂಳು. ಈ ಸುಂದರ ದೇವಾಲಯ ಕಾಲಹರಣ ಮಾಡುವವರು ಮತ್ತು ಪಡ್ಡೆ ಹುಡುಗರ ಬೀಡಾಗಿದೆ. ಇಲ್ಲಿ ಪೂಜೆಯಂತೂ ನಡೆಯುವುದಿಲ್ಲ. ದೇವಾಲಯದ ಕಕ್ಷಾಸನದಲ್ಲಿ (ಮೇಲಿನ ಚಿತ್ರ) ಕುಳಿತಿದ್ದ ಯುವಕನೊಬ್ಬ ತನ್ನ ಮೊಬೈಲ್ ಫೋನಿನಲ್ಲಿ ಜೋರಾಗಿ ಹಾಡು ಕೇಳುತ್ತಿದ್ದ. ದೇವಾಲಯದಲ್ಲಿ ಕುಳಿತು ಹೀಗೆ ಹಾಡು ಕೇಳುವುದರ ಬಗ್ಗೆ ಆತನಿಗೆ ನಾನು ಅಸಮಧಾನ ವ್ಯಕ್ತಪಡಿಸಿದಾಗ ಆತ ಹಾಡನ್ನು ಆಫ್ ಮಾಡಿದ. ನಾನು ದೇವಾಲಯದಿಂದ ಹೊರಗೆ ತೆರಳಿದ ಬಳಿಕ ಮತ್ತೆ ಹಾಡು ಕೇಳಲು ಆರಂಭಿಸಿದ.
 

ಹೇಳುವವರು ಕೇಳುವವರು ಯಾರೂ ಇಲ್ಲದಿರುವುದರಿಂದ ಎಲ್ಲರಿಗೂ ಈ ದೇವಾಲಯ ಒಂದು ’ಕಟ್ಟೆ’ ಆಗಿಬಿಟ್ಟಿದೆ. ನಾಲ್ಕು ವರ್ಷಗಳ ಹಿಂದೆಯಷ್ಟೇ ಪ್ರಾಚ್ಯ ವಸ್ತು ಇಲಾಖೆ ಈ ದೇವಾಲಯದ ನಿರ್ವಹಣೆಯನ್ನು ಕೈಗೆತ್ತಿಕೊಂಡಿದ್ದು ಇನ್ನೂ ಬಹಳ ಕೆಲಸ ಆಗಬೇಕಾಗಿದೆ. ವಿಶಾಲ ಮೈದಾನದಲ್ಲಿರುವ ದೇವಾಲಯಕ್ಕೊಂದು ಪ್ರಾಂಗಣ ರಚಿಸಿ ಆಕರ್ಷಕ ಉದ್ಯಾನ ರಚಿಸಿದರೆ ಊರವರ ಹಾವಳಿಯಿಂದ ದೇವಾಲಯವನ್ನು ರಕ್ಷಿಸಬಹುದು.
 

ನವರಂಗದಲ್ಲಿರಿಸಲಾಗಿರುವ ಬೃಹತ್ ಶಾಸನವೊಂದರ ದುರವಸ್ಥೆಯನ್ನು ಕಂಡರೆ ಖೇದವಾಗುತ್ತದೆ. ಇದರ ಮೇಲೆ ಏನೇನೋ ಬರೆದು ಸಂತೋಷಪಡುವ ವಿಕೃತ ಮನೋಭಾವ ಹೊಂದಿರುವ ಈ ಊರಿನವರಿಗೆ ಇಂತಹ ಸ್ಮಾರಕಗಳ ಮಹತ್ವದ ಬಗ್ಗೆ ಸ್ವಲ್ಪನೂ ಅರಿವಿಲ್ಲದಿರುವುದು ಆಶ್ಚರ್ಯದ ವಿಷಯ.
 

ದೇವಾಲಯದ ಹೊರಗೋಡೆಯಲ್ಲಿ ಹಲವಾರು ಸಣ್ಣ ಗೋಪುರಗಳನ್ನು ಕೆತ್ತಲಾಗಿದ್ದು ಬಿಟ್ಟರೆ ಬೇರೇನೂ ವಿಶೇಷವಿಲ್ಲ. ಹಾನಿಗೊಂಡಿದ್ದ ಪೂರ್ವದ ಗೋಪುರವನ್ನು ಪ್ರಾಚ್ಯ ವಸ್ತು ಇಲಾಖೆ ಮೂಲ ರೂಪಕ್ಕೆ ತಕ್ಕಂತೆ ಮರುನಿರ್ಮಾಣ ಮಾಡಿದೆ. ಪಶ್ಚಿಮದ ಗೋಪುರ ಯಾವುದೇ ಹಾನಿಗೊಳಗಾಗದೇ ತನ್ನ ಮೂಲರೂಪದಲ್ಲೇ ಕಂಗೊಳಿಸುತ್ತಿದೆ. ಗೋಪುರಗಳನ್ನು ನಾಲ್ಕು ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೇಲೊಂದು ಪದ್ಮವನ್ನಿರಿಸಿ ಅದರ ಮೇಲೆ ಕಲಶವನ್ನಿರಿಸಲಾಗಿದೆ.
 

ಮುಖಮಂಟಪದ ಮೇಲ್ಭಾಗದಲ್ಲಿದ್ದ ಕೈಪಿಡಿಯ ರಚನೆಯು ಬಿದ್ದುಹೋಗಿದ್ದು ಅಲ್ಪ ಸ್ವಲ್ಪ ಅವಶೇಷ ಹಾಗೆ ಉಳಿದಿರುವುದನ್ನು ಕಾಣಬಹುದು. ವಿರಳವಾಗಿ ಕಾಣಬರುವ ಇಳಿಜಾರಿನ ಮಾಡನ್ನು ಮುಖಮಂಟಪಗಳು ಹೊಂದಿರುವುದನ್ನು ಗಮನಿಸಿ.
 

ಈ ದೇವಾಲಯವನ್ನು ಇಸವಿ ೧೦೬೧ರಲ್ಲಿ ಕಲ್ಯಾಣಿ ಚಾಲುಕ್ಯ (ಪಶ್ಚಿಮ ಚಾಲುಕ್ಯ) ದೊರೆ ಒಂದನೇ ಸೋಮೇಶ್ವರನ ದಂಡನಾಯಕನಾಗಿದ್ದ ನಾಗದೇವ ಎಂಬವನು ನಿರ್ಮಿಸಿದನು. ಶಾಸನಗಳ ಪ್ರಕಾರ ನಾಗದೇವನು ನಿರ್ಮಿಸಿರುವುದರಿಂದ ಆಗ ಈ ದೇವಾಲಯವನ್ನು ನಾಗೇಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು. ಶಾಸನಗಳ ಪ್ರಕಾರ ಇಲ್ಲಿ ಕಲ್ಮೇಶ್ವರ, ಪಂಚಲಿಂಗ, ಅಚಲೇಶ್ವರ, ನಗರೇಶ್ವರ ಮತ್ತು ಬ್ರಹ್ಮೇಶ್ವರ ಎಂಬ ದೇವಾಲಯಗಳಿದ್ದವು. ಈಗ ಇವೆಲ್ಲಾ ನಾಶವಾಗಿದ್ದು ಶಿವ, ಮಲ್ಲಿಕಾರ್ಜುನ ಮತ್ತು ಗಣಪತಿ ದೇವಾಲಯಗಳು ಮಾತ್ರ ಉಳಿದುಕೊಂದಿವೆ.

2 ಕಾಮೆಂಟ್‌ಗಳು:

Ashok ಹೇಳಿದರು...

Mahiti mattu chayachitra eradu tumba chennagide..

ರಾಜೇಶ್ ನಾಯ್ಕ ಹೇಳಿದರು...

ಅಶೋಕ್,
ಧನ್ಯವಾದ.