ಭಾನುವಾರ, ನವೆಂಬರ್ 10, 2013

ವೀರಭದ್ರೇಶ್ವರ ದೇವಾಲಯ - ಜಯಸಿಂಹಪುರ


ಇಸವಿ ೧೦೪೦ರಲ್ಲಿ ಚಾಲುಕ್ಯ ದೊರೆ ೨ನೇ ಜಯಸಿಂಹನು ನಿರ್ಮಿಸಿದ ಊರಾಗಿರುವುದರಿಂದ ಈ ಊರಿನ ಹೆಸರು ಜಯಸಿಂಹಪುರ. ಇಲ್ಲಿರುವ ವೀರಭದ್ರೇಶ್ವರ ದೇವಾಲಯವನ್ನು ಇಸವಿ ೧೭೨೫ರಲ್ಲಿ ರಾಜಾ ರಾಮಚಂದ್ರ ಜಾಧವನು ನಿರ್ಮಿಸಿದನು.


ಸುಮಾರು ೩೦೦ ವರ್ಷ ಹಳೆಯ ದೇವಾಲಯವಾದರೂ ಒಳಗೆಲ್ಲ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ದೇವಾಲಯದ ಮಹಾದ್ವಾರವೇ ಅತ್ಯಂತ ಆಕರ್ಷಕವಾಗಿದ್ದು, ಇದರ ಎತ್ತರವೇ ಪ್ರವಾಸಿಗರ ಗಮನ ಸೆಳೆಯುತ್ತದೆ. ದೇವಾಲಯ ನಿರ್ಮಿಸಿದ ರಾಜಾ ರಾಮಚಂದ್ರ ಜಾಧವನು ಸ್ವತ: ಒಬ್ಬ ಉತ್ತಮ ವಾಸ್ತುಶಿಲ್ಪಿಯಾಗಿದ್ದರಿಂದ ಇಂತಹ ವಿಶಿಷ್ಟ ದೇವಾಲಯದ ನಿರ್ಮಾಣವಾಗಲು ಸಾಧ್ಯವಾಗಿರಬೇಕು.


ದೇವಾಲಯದ ಮಹಾದ್ವಾರದ ಇಕ್ಕೆಲಗಳಲ್ಲಿ ದ್ವಾರದಷ್ಟೇ ಎತ್ತರವಿರುವ ಪ್ರಾಕಾರದ ಗೋಡೆಯಿದ್ದು, ಇದು ದೇವಾಲಯದ ಸುತ್ತಲೂ ಹಾಗೇ ಮುಂದುವರಿದಿದೆ. ದ್ವಾರದ ಮೇಲ್ಭಾಗದಲ್ಲಿ ಮಹಡಿಯ ಸಜ್ಜೆಯಿದ್ದು, ಇದು ಕಮಾನು ರೂಪದ ಐದು ಆಕರ್ಷಕ ಭಾಗಗಳನ್ನು ಹೊಂದಿದೆ. ಸಜ್ಜೆಯ ಇಕ್ಕೆಲಗಳಲ್ಲಿ, ಮೂರು ಸ್ತರಗಳಲ್ಲಿ ಪೌರಾಣಿಕ ಘಟನಾವಳಿಗಳ ಸಣ್ಣಸಣ್ಣ ಕೆತ್ತನೆಗಳನ್ನು ಕಾಣಬಹುದು. ಸಜ್ಜೆಯ ಮೇಲ್ಭಾಗದಲ್ಲೂ ಇಂತಹ ಕೆತ್ತನೆಗಳನ್ನೊಳಗೊಂಡ ಇನ್ನೊಂದು ಸ್ತರವನ್ನು ಕಾಣಬಹುದು.


ಗರ್ಭಗುಡಿಯ ಮೇಲೆ ನಿರ್ಮಿತವಾಗಿರುವ ವೃತ್ತಾಕಾರದ ಸುಂದರ ಗೋಪುರ ಗಮನ ಸೆಳೆಯುತ್ತದೆ. ಇಲ್ಲೂ ಪ್ರತಿ ಸ್ತರದಲ್ಲಿ, ಮಹಾದ್ವಾರದ ಮೇಲ್ಭಾಗದಲ್ಲಿರುವಂತೆ, ಸಣ್ಣಸಣ್ಣ ಕೆತ್ತನೆಗಳನ್ನು ಕಾಣಬಹುದು. ಗೋಪುರದ ಮೇಲೆ ಕಮಲವನ್ನಿಟ್ಟು ಅದರ ಮೇಲೆ ಕಲಶವನ್ನಿರಿಸಲಾಗಿದೆ.


ದೇವಾಲಯದೊಳಗೆ ಎಂದಿಗೂ ಜನಜಂಗುಳಿಯಿರುತ್ತದೆ. ಭಜನೆ, ಹರಕೆ ಇತ್ಯಾದಿಗಳು ನಡೆಯುತ್ತಾ ಇರುತ್ತವೆ. ಮಹಾದ್ವಾರದಿಂದ ಒಳಗೆ ಪ್ರವೇಶಿಸಿದ ಕೂಡಲೇ ವಿಶಾಲವಾದ ಹಜಾರ. ಹಜಾರದ ಮೇಲ್ಭಾದಲ್ಲಿ ಕಟ್ಟಿಗೆಯಿಂದ ನಿರ್ಮಿತಗೊಂಡಿರುವ ಸಜ್ಜೆಯನ್ನು ಕಾಣಬಹುದು.


ಹಜಾರದಿಂದ ದೇವಾಲಯದೊಳಗೆ ಪ್ರವೇಶಿಸಿದಾಗ ಅಲ್ಲೇ ಕಟಕಟೆಯನ್ನು ಹಾಕಲಾಗಿದೆ. ಇಲ್ಲಿಂದ ದಾಟಿ ಮುಂದಿರುವ ಗರ್ಭಗುಡಿಯೊಳಗೆ ಯಾರೂ ಹೋಗುವಂತಿಲ್ಲ. ಆದರೆ ಕೆಲವರು ಹೋಗಿ ಬರುತ್ತಿದ್ದರು. ’ಸ್ಪೆಷಲ್ ಪರ್ಮಿಷನ್’ ಇದ್ದರೆ ಮಾತ್ರ ಒಳಗೆ ಹೋಗಬಹುದು ಎಂದು ಆ ಕಟಕಟೆಯನ್ನು ಕಾಯುತ್ತಿದ್ದವನು ಹೇಳಿದ. ’ಸ್ಪೆಷಲ್ ಪರ್ಮಿಷನ್’ ಎಲ್ಲಿ ಕೇಳಬೇಕು ಎಂದು ಕೇಳಿದರೆ, ಸಾಹೇಬ್ರು ಈಗ ಇಲ್ಲ ಎಂಬ ಉತ್ತರ. ಕಟಕಟೆಯ ಸಮೀಪದಿಂದ ವೀರಭದ್ರನ ದರ್ಶನ ಮಾಡಬಹುದಾದರೂ, ಜನರ ಓಡಾಟ ತಳ್ಳಾಟದ ನಡುವೆ ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ದೂರದಿಂದ ಬಂದಿರುವುದರಿಂದ ಒಳಗೆ ಹೋಗಲು ಬಿಡುವಂತೆ ವಿನಂತಿಸಿದಾಗ, ’ಬೇಗ ಬಂದ್ಬಿಡಿ, ಒಳಗೆ ಅರ್ಚಕರು ಬೈತಾರೆ’ ಎಂದು ಕಟೆಕಟೆ ಕಾಯುತ್ತಿದ್ದವನು ಗೇಟು ತೆರೆದ.


ನಾನು ಗರ್ಭಗುಡಿಯ ಒಳಹೊಕ್ಕಾಗ ಅಲ್ಲಿನ ಸೌಂದರ್ಯ ಮತ್ತು ಅಲಂಕಾರವನ್ನು ನೋಡಿ ಅವಾಕ್ಕಾದೆ. ಅಲ್ಲೇ ಕುಳಿತು ಮಂತ್ರಪಠಣ ಮಾಡುತ್ತಿದ್ದ ಅರ್ಚಕ ಒಮ್ಮೆ ನನ್ನೆಡೆ ಕೆಂಗಣ್ಣು ಬೀರಿದ. ಅರ್ಧ ನಿಮಿಷ ವೀರಭದ್ರನಲ್ಲಿ ಬೇಡಿಕೊಂಡೆ. ನಂತರ ಚಿತ್ರವೊಂದನ್ನು ತೆಗೆದೆ. ಕೂಡಲೇ ಆಕ್ಷೇಪಿಸಲು ಬಾಯಿ ತೆರೆದ ಆ ಅರ್ಚಕನಿಂದ ಶಬ್ದಗಳು ಹೊರಬರುವಷ್ಟರಲ್ಲಿ ನಾನು ಗರ್ಭಗುಡಿಯ ಹೊರಗೆ ಕಾಲಿಟ್ಟಾಗಿತ್ತು. ಒಳಗೆ ಆತ ಚೀರಾಡುವುದು ನನಗೆ ಕೇಳಿಸುತ್ತಿತು. ಕಟಕಟೆ ಕಾಯುತ್ತಿದ್ದವನಿಗೆ ಧನ್ಯವಾದ ಹೇಳಿ ದೇವಾಲಯದಿಂದ ಹೊರಬಿದ್ದೆ.


ರಾಜಾ ರಾಮಚಂದ್ರ ಜಾಧವನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ವೀರಭದ್ರೇಶ್ವರನ ಮೂರ್ತಿಯ ಕೆತ್ತನೆ ಕೆಲಸ ಆರಂಭಿಸುವನು. ಆಗ ಆತನ ಕನಸಿನಲ್ಲಿ ಬರುವ ಶ್ರೀ ವೀರಭದ್ರೇಶ್ವರ ಸ್ವಾಮಿಯು, ’ಗದವಂತಿ’ (ಉಚ್ಚಾರ ತಪ್ಪು ಇರಬಹುದು) ಎಂಬ ಹಳ್ಳಿಯಲ್ಲಿ ತನ್ನ ಮೂರ್ತಿಯಿರುವುದಾಗಿಯೂ ಅದನ್ನು ತಂದು ಇಲ್ಲಿ ಪ್ರತಿಷ್ಠಾಪನೆ ಮಾಡುವಂತೆ ಹೇಳುವನು. ಸ್ವಾಮಿಯ ಆದೇಶದಂತೆ ರಾಜಾ ರಾಮಚಂದ್ರ ಜಾಧವನು ಖುದ್ದಾಗಿ ಗದವಂತಿ ಗ್ರಾಮಕ್ಕೆ ತೆರಳಿ, ಅಲ್ಲಿಂದ ವೀರಭದ್ರೇಶ್ವರನ ಮೂರ್ತಿಯನ್ನು ತಂದು, ಈ ದೇವಾಲಯದಲ್ಲಿ ಪ್ರತಿಷ್ಠಾಪಿಸುವನು.


ಊರಿನವರಿಗೆ ವೀರಭದ್ರೇಶ್ವರನಲ್ಲಿ ಅಪಾರ ನಂಬಿಕೆ. ಊರಿನಲ್ಲಿ ವ್ಯಾಪಾರ ನಡೆಸುವವರು ಮುಂಜಾನೆ ವೀರಭದ್ರೇಶ್ವರನ ದರ್ಶನ ಮಾಡಿ, ಪ್ರಸಾದವನ್ನು ತಂದು ಅಂಗಡಿಯಲ್ಲಿ ಇಟ್ಟ ಬಳಿಕವೇ ವ್ಯಾಪಾರ ಆರಂಭಿಸುವುದು. ವರ್ಷಕ್ಕೊಮ್ಮೆ ನಡೆಯುವ ವೀರಭದ್ರೇಶ್ವರನ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿರುತ್ತದೆ. ಆಗ ಈ ಊರಿಗೇ ಕಾಲಿಡುವಂತಿಲ್ಲ, ಅಷ್ಟು ಜನಸ್ತೋಮ!

2 ಕಾಮೆಂಟ್‌ಗಳು:

Vidya S ಹೇಳಿದರು...

Rajesh, Jayasimha hesaru nenapisiddakke dhanyawadagalu. Nanna tavaru jilleya Bidarina de aada Humanabad (Egina chaltiyalliruva Jayasimha nagarada hesaru) veerabhadra devalyavu sogasagi parichayeesiddira...

ರಾಜೇಶ್ ನಾಯ್ಕ ಹೇಳಿದರು...

ಸಾಗರ್,
ಧನ್ಯವಾದ.