ಭಾನುವಾರ, ನವೆಂಬರ್ 24, 2013

ಊಸರವಳ್ಳಿ...


ಮಾನ್ಸೂನ್ ವಾಕ್‍ನ ಒಂದು ತಿಂಗಳ ಬಳಿಕ ಈ ಮಳೆಗಾಲದ ಅತಿಥಿಯ ಅತಿಥಿಯಾಗಲು ಹೊರಟೆ. ಈ ಬಾರಿ ರಾಗಣ್ಣ ಮಾತ್ರ ನನಗೆ ಜೊತೆಗಾರರು. ಅಂದು ಮಾದಣ್ಣನಿಗೆ ಅದೇನೋ ಕೆಲಸ. ತನ್ನನ್ನು ಬಿಟ್ಟು ಹೋಗುತ್ತಿರುವ ಬಗ್ಗೆ ಅವರು ಪ್ರಬಲ ಪ್ರತಿಭಟನೆ ವ್ಯಕ್ತಪಡಿಸಿದರೂ ಅದಕ್ಕೆ ಸೊಪ್ಪು ಹಾಕದೆ ನಾವಿಬ್ಬರು ಹೊರಟೇಬಿಟ್ಟೆವು. ಹಳ್ಳಿಯ ಸಜ್ಜನರೊಬ್ಬರಿಗೆ ಮೊದಲೇ ಫೋನ್ ಮೂಲಕ ತಿಳಿಸಿದ್ದರಿಂದ ನಮಗೆ ಮಾರ್ಗದರ್ಶಿಗಳಾಗಿ ಇಬ್ಬರು ರೆಡಿಯಾಗಿದ್ದರು.


ಮಳೆಯ ಆರ್ಭಟ ಕಡಿಮೆಯಾಗಿತ್ತು. ಮೋಡ ಕವಿದ ವಾತಾವರಣವಿತ್ತು. ತನ್ನ ಇರುವಿಕೆಯನ್ನು ಸೂರ್ಯ ನೆನಪಿಸುವಂತೆ ಆಗಾಗ ಬಿಸಿಲು ಬರುತ್ತಿತ್ತು. ಈ ನಡುವೆ ಆಗಾಗ ಮೂರ್ನಾಲ್ಕು ನಿಮಿಷಗಳ ಕಾಲ ತುಂತುರು ಮಳೆ ಬೀಳುತ್ತಿತ್ತು. ಈ ಮಳೆಯಂತೂ ಸುಖಾಸುಮ್ಮನೆ ನಮ್ಮನ್ನು ಒದ್ದೆಮಾಡಲು ಪ್ರೋಕ್ಷಣೆಗೈದಂತೆ ಬಂದು ಹೋಗುತ್ತಿತ್ತು. ಅಂದು ಚಾರಣವಿಡೀ ಇದೇ ರೀತಿಯ ವಾತಾವರಣ. ಬಿಸಿಲು, ಮಳೆ, ಮೋಡಗಳು ಸರದಿ ರೀತಿಯಲ್ಲಿ ಬಂದು ನಮಗೆ ’ಹ್ವಾಯ್’ ಹೇಳಿ ಹೋಗುತ್ತಿದ್ದವು.


ಮೋಡ ಮತ್ತು ಮಳೆ ಇದ್ದಾಗ ಹಳ್ಳಿ ಹೇಗೆ ಕಾಣುತ್ತದೆ ಎಂದು ಕಳೆದ ಬಾರಿ ನಾವು ನೋಡಿಯಾಗಿತ್ತು. ಈ ಬಾರಿ ಹಳ್ಳಿಯ ಲುಕ್ಕೇ ಬೇರೆ. ಮೋಡ, ಮಳೆಗಳ ನಡುವೆ ಬಿಸಿಲೂ ಬಂದು ಅಲ್ಲಿ ದೃಶ್ಯ ವೈಭವವೇ ನಮಗಾಗಿ ಕಾದಿತ್ತು. ನಮ್ಮಿಬ್ಬರ ಕ್ಯಾಮರಾಗಳು ಚಕಚಕನೆ ಕಾರ್ಯಾರಂಭಿಸಿದವು.


ತಿಂಗಳ ಹಿಂದೆ ಬಂದಾಗ ಆಗಷ್ಟೇ ನಾಟಿ ಮಾಡಿದ ಸ್ಥಿತಿಯಲ್ಲಿದ್ದ ಭತ್ತದ ಸಸಿಗಳು, ಈಗ ಸ್ವಲ್ಪ ಎತ್ತರಕ್ಕೆ ಬೆಳೆದು ನಿಂತು ಗದ್ದೆಗಳಿಗೆ ಹಚ್ಚ ಹಸಿರು ರಂಗನ್ನು ಬಳಿದಿದ್ದವು. ಅಂದು ಸಂಪೂರ್ಣ ನಸುಗಪ್ಪು ಬಣ್ಣ ಬಳಿದಂತೆ ತೋರುತ್ತಿದ್ದ ಅಂಬರ, ಇಂದು ನಸುಗಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಿಗೆ ತನ್ನ ಮೈಯುದ್ದಕ್ಕೂ ಸಮಾನ ರೀತಿಯಲ್ಲಿ ಸ್ಥಾನಮಾನ ನೀಡಿತ್ತು. ಹಳ್ಳಿ ತನ್ನ ಮಂಜಿನ ಪರದೆಯನ್ನು ಕಳಚಿಹಾಕಿತ್ತು. ಆಗಸದೆತ್ತರದಲ್ಲಿ ಅಟ್ಟಹಾಸಗೈದು ಮಳೆ ಸುರಿಸುತ್ತಿದ್ದ ಕರಿಮೋಡಗಳನ್ನು, ಧರೆಗಿಳಿದಂತೆ ತೋರುತ್ತಿದ್ದ ಬಿಳಿಮೋಡಗಳು ಸ್ಥಾನಪಲ್ಲಟಗೊಳಿಸಿದ್ದವು. ಹಳ್ಳಿಯನ್ನು ಸುತ್ತುವರಿದಿರುವ ಬೆಟ್ಟಗುಡ್ಡಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದವು.

 
ಹಿಂದಿನ ದಿನದವರೆಗೂ ಬೀಳುತ್ತಿದ್ದ ಮಳೆ, ನಮ್ಮ ಅದೃಷ್ಟಕ್ಕೆ ಅಂದೇ ಕಡಿಮೆಯಾಗಿತ್ತು. ಎಲ್ಲಾ ರೀತಿಯಲ್ಲಿ ವಾತಾವರಣ ಚಾರಣಯೋಗ್ಯವಾಗಿತ್ತು. ಹಳ್ಳಿಯೊಳಗೆ ಸುಮಾರು ದೂರ ನಡೆದ ಬಳಿಕ ಜಲಧಾರೆ ಗೋಚರಿಸಿತು. ನೀರಿನ ಮಟ್ಟ ಕಡಿಮೆಯಾಗಿರುವುದನ್ನು ಅಷ್ಟು ದೂರದಿಂದಲೇ ಗಮನಿಸಬಹುದಾಗಿತ್ತು. ಇನ್ನು ಮಾದಣ್ಣನ ಪ್ರತಿಭಟನೆಗೆ ತಲೆಬಾಗಿ, ಎರಡು ವಾರಗಳ ಬಳಿಕ ಬರುವ ನಿರ್ಧಾರ ಮಾಡಿದ್ದರೆ ಅಲ್ಲಿ ಜಲವೇ ಇರದ ಸಾಧ್ಯತೆಯಿತ್ತು!


ಮನೆಯೊಂದರ ಹಿಂದಿರುವ ಎರಡು ಗದ್ದೆಗಳನ್ನು ದಾಟಿದ ಬಳಿಕ ಕಾಡು ನಮ್ಮನ್ನು ಬರಮಾಡಿತು. ಹದವಾದ ಏರುಹಾದಿಯಲ್ಲಿ ಸುಮಾರು ಒಂದು ತಾಸು ನಡೆದೆವು. ಕಾಡಿನೊಳಗಿನ ಕಾಲುದಾರಿ ಹಲವೆಡೆ ಮಾಯವಾಗಿತ್ತು. ಕಳೆದೆರಡು ವರ್ಷಗಳಿಂದ ಕಾಡು ಉತ್ಪತ್ತಿ ಸಂಗ್ರಹಿಸುವವರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಈಗ ಕೇವಲ ಒಂದಿಬ್ಬರು ಮಾತ್ರ ಉಳಿದಿದ್ದಾರೆ ಎಂದು ತಿಳಿದುಬಂತು. ಹಾಗಾಗಿ ಕಾಡಿನೊಳಗೆ ಹೋಗುವವರೂ ಕಡಿಮೆಯಾಗಿದ್ದು, ಕಾಲುದಾರಿಯನ್ನು ಕ್ರಮೇಣ ಕಾಡು ಆವರಿಸಿಕೊಳ್ಳುತ್ತಿದೆ. ಈ ಕಾಡುತ್ಪತ್ತಿ ಸಂಗ್ರಹಿಸುವ ಕೆಲಸದಲ್ಲಿ ಶ್ರಮ ಹೆಚ್ಚು ಆದಾಯ ಕಡಿಮೆ ಎಂದು ಹಳ್ಳಿಗರ ಅಭಿಪ್ರಾಯ. ದಿನಗೂಲಿಯೇ ೪೦೦ ರೂಪಾಯಿಗಳಷ್ಟು ಸಿಗುವಾಗ ಮತ್ತು ರವಿವಾರಗಳಂದು ಸ್ವ ಸಹಾಯ ಸಂಘಗಳ ಚಟುವಟಿಕೆಗಳಲ್ಲಿ ಬ್ಯುಸಿ ಇರುವಾಗ ಎಲ್ಲಿಯ ಕಾಡು, ಎಲ್ಲಿಯ ಕಾಡುತ್ಪತ್ತಿ? ಏನೇ ಇರಲಿ, ಈ ರೀತಿಯ ಬದಲಾವಣೆ ಕಾಡಿಗೆ ಒಳ್ಳೆಯದೇ ತಾನೆ ಎಂದುಕೊಂಡು ನಾವು ಹರ್ಷಗೊಂಡೆವು.


ಸರಿಸುಮಾರು ಒಂದು ತಾಸಿನ ಬಳಿಕ ನಮ್ಮ ಮಾರ್ಗದರ್ಶಿ, ’ಇನ್ನು ನೇರ ಹತ್ಬೇಕು, ಸ್ವಲ್ಪ ಕಷ್ಟ ಆಗ್ಬಹುದು’ ಎಂದಾಗ, ಮುಂದೆ ನೋಡಿದರೆ ದಾರಿಯೇ ಇಲ್ಲ! ಮಾರ್ಗದರ್ಶಿಗಳಿಬ್ಬರು ದಾರಿಗಡ್ಡವಾಗಿ ಬೆಳೆದಿದ್ದ ಕುರುಚಲು ಗಿಡಗಳನ್ನು ಕಚಕಚನೆ ಕೊಯ್ಯುತ್ತ ದಾರಿಮಾಡಿಕೊಂಡು ಮುನ್ನಡೆದರು. ಹೆಚ್ಚಿನೆಡೆ ಆಧಾರಕ್ಕಾಗಿ ಹಿಡಿಯಲು ಈ ಗಿಡಗಳೇ ಗತಿ. ಇಂತಹ ನಾಲ್ಕಾರು ಗಿಡಗಳನ್ನು ಒಂದು ಬಾರಿ ಹಿಡಿದೇ ಹೆಜ್ಜೆಯಿಡಬೇಕು. ಒಂದನ್ನೇ ಹಿಡಿದರೆ ಅದು ಕಿತ್ತುಬಂದು ನಾವು ಬಿದ್ದುಬಿಡುವುದು ನಿಶ್ಚಿತವಾಗಿತ್ತು. ಸತತ ಮಳೆಯಿಂದಾಗಿ ಒದ್ದೆಗೊಂಡಿದ್ದ ಮಣ್ಣಿನಲ್ಲಿ ಕಾಲೂರಲು ಕೂಡಾ ಆಧಾರದ ಅವಶ್ಯಕತೆಯಿತ್ತು. ಸುಮಾರಾಗಿ ದೊಡ್ಡದಿರುವ ಕಲ್ಲು-ಬಂಡೆಗಳಿಗೆ ಕಾಲನ್ನು ಆಧಾರವಾಗಿಟ್ಟು ಮೇಲೇರೋಣವೆಂದರೆ ಅವು ಎಲ್ಲವೂ ಸಡಿಲ ಮಣ್ಣಿನ ಕಾರಣ ಅಲುಗಾಡುತ್ತಿದ್ದವು.


ನಾಲ್ಕೈದು ಕಡೆ ಬಹಳ ಕಷ್ಟವಾಯಿತು. ಅತ್ತ ಇತ್ತ ಏನಾದರೂ ಆಧಾರಕ್ಕೆ ಹಿಡಿದುಕೊಳ್ಳೋಣವೆಂದರೆ ಅಲ್ಲಿ ಮುಳ್ಳಿನ ಗಿಡಗಳದ್ದೇ ಸಾಮ್ರಾಜ್ಯ. ಕಾಲೂರಲು ಆಧಾರವಾಗಿ ಸಣ್ಣಪುಟ್ಟ ಕಲ್ಲುಗಳೂ ಇರಲಿಲ್ಲ. ಒಂದು ಕಾಲು ಎತ್ತಿದರೆ ಇನ್ನೊಂದು ಕಾಲು ಜಾರುತ್ತಿತ್ತು. ಒಂದೆರಡು ಕಡೆ ಕಾಲು ಜಾರಿ, ನಾಲ್ಕಾರು ಅಡಿ ಕೆಳಗೆವರೆಗೂ ಜಾರಿಕೊಂಡೇ ಬರಬೇಕಾಯಿತು. ಆಯತಪ್ಪಿದರೆ ನಮ್ಮ ಎಡಭಾಗದಲ್ಲಿ ಕಣಿವೆಯ ಆಳಕ್ಕೆ ಬೀಳುತ್ತಿದ್ದ ಹಳ್ಳಕ್ಕೆ ನಾವು ಬೀಳುವ ಅಪಾಯವಿತ್ತು. ಹೀಗಿರುವಾಗ ಬೇರೆ ದಾರಿ ಇಲ್ಲದೆ ಮುಳ್ಳಿನ ಗಿಡದಿಂದ ಕೈ ಚುಚ್ಚಿಸಿಕೊಂಡೇ ಮುನ್ನಡೆಯಬೇಕಾಯಿತು. ಇದು ಬಹಳ ಸವಾಲಿನ ಏರುದಾರಿಯಾಗಿತ್ತು. ಚಾರಣಿಗನೊಬ್ಬನಿಗೆ ಈ ೪೫ ನಿಮಿಷಗಳ ಏರುಹಾದಿಯಲ್ಲಿ ಸಹಾಯಕವಾಗಿ ಏನೂ ಇರಲಿಲ್ಲ. ಎಲ್ಲವೂ ಸವಾಲಾಗಿಯೇ ಇತ್ತು. ಆದರೆ ಆ ರೋಚಕ ಅನುಭವ ಮಾತ್ರ ಮರೆಯಲಾಗದಂತದ್ದು.

 

ಚಾರಣ ಶುರುಮಾಡಿದ ಸುಮಾರು ೨ ತಾಸಿನ ಬಳಿಕ ನಮ್ಮ ಮಾರ್ಗದರ್ಶಿಗಳು ಸರಿಯಾಗಿ ಜಲಧಾರೆಯ ಪಾರ್ಶ್ವಕ್ಕೆ ನಮ್ಮನ್ನು ಮುಟ್ಟಿಸಿದರು. ಅದೇನು ಸೌಂದರ್ಯ, ಅದೇನು ಬಿನ್ನಾಣ. ಗಾಳಿಯ ರಭಸ ಮತ್ತು ಬೀಸುವ ದಿಕ್ಕಿಗನುಗುಣವಾಗಿ ತನ್ನ ರೂಪವನ್ನು ಬದಲಿಸುವ ವಯ್ಯಾರಗಿತ್ತಿ. ಮೋಡ, ಮಳೆ, ಬಿಸಿಲಿಗನುಗುಣವಾಗಿ ಬಣ್ಣ ಬದಲಿಸುವ ಊಸರವಳ್ಳಿ. ಕ್ಲಿಕ್ಕಿಸಿದ ಅಷ್ಟೂ ಚಿತ್ರಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ತನ್ನನ್ನು ತಾನು ಪ್ರದರ್ಶಿಸಿದ ರೂಪದರ್ಶಿ. ಕೆಲವೊಮ್ಮೆ ನೇರವಾಗಿ, ಇನ್ನೊಮ್ಮೆ ಓಲಾಡುತ್ತ, ಮತ್ತೊಮ್ಮೆ ಮೈಯುಬ್ಬಿಸಿಕೊಂಡು, ಮಗದೊಮ್ಮೆ ಕಲ್ಲಿನ ಮೇಲ್ಮೈಗಂಟಿಕೊಂಡೇ, ಆಗಾಗ ಅಡ್ಡಾದಿಡ್ಡಿಯಾಗಿ, ಹೀಗೆ ಹಲವು ರೂಪಗಳಲ್ಲಿ ಧುಮುಕಿ ನಮಗೆ ಚಾರಣಾನಂದ ನೀಡಿದ ಈ ಜಲಕನ್ಯೆಗೆ ಅದೆಷ್ಟು ಕೃತಜ್ಞತೆ ಹೇಳಿದರೂ ಕಡಿಮೆ.


ಆಗಾಗ ಮೋಡಗಳ ಮರೆಯಿಂದ ಹೊರಬರುತ್ತಿದ್ದ ಸೂರ್ಯ ತನ್ನ ಪ್ರಖರ ಕಿರಣಗಳನ್ನು ಜಲಧಾರೆಯ ಮೇಲೆ ಹರಿಬಿಡುತ್ತಿರುವಾಗ ’ಲೈಟ್ಸ್ ಆನ್’ ಆದ ಅನುಭವವಾಗುತ್ತಿತ್ತು. ಸೂರ್ಯನ ಕಿರಣಗಳಲ್ಲಿ ಮೀಯುತ್ತಿರುವ ಜಲಧಾರೆ ಇನ್ನಷ್ಟು ಪ್ರಜ್ವಲವಾಗಿ ಕಾಣುತ್ತಿತ್ತು. ೧೩೦ ಅಡಿ ಎತ್ತರದ ವಜ್ರವೇ ಧುಮುಕುತ್ತಿದೆ ಎಂಬ ಭಾವನೆ ಬರುವಷ್ಟು ಹೊಳಪನ್ನು ಜಲಧಾರೆ ಹೊರಸೂಸುತ್ತಿತ್ತು. ಕ್ಷಣಾರ್ಧದಲ್ಲಿ ರವಿ ಮಾಯವಾಗಿ ಮತ್ತೆ ಮೋಡಗಳು ಬಂದು ’ಲೈಟ್ಸ್ ಆಫ್’. ಈ ವಿಶಿಷ್ಟ ಜಲಧಾರೆಯ ಅತಿಥಿಯಾಗಿ ೪೫ ನಿಮಿಷಗಳಲ್ಲಿ ವರ್ಣಿಸಲಾಗದಷ್ಟು ಸೌಂದರ್ಯದ ಹೊಳಹುಗಳನ್ನು ಕಣ್ಣಾರೆ ಕಂಡು ಬಂದ ಭಾಗ್ಯ ನಮ್ಮದು.


ದೂರದಲ್ಲಿ ಕಾರ್ಮೋಡದ ದೊಡ್ಡ ಗುಚ್ಛವೊಂದು ಹಳ್ಳಿಯೆಡೆ ತೇಲಿಬರುವುದನ್ನು ಗಮನಿಸುತ್ತಿದ್ದ ನಮ್ಮ ಮಾರ್ಗದರ್ಶಿಗಳು - ಮಳೆ ಬರುವ ಸಾಧ್ಯತೆಯಿದ್ದು, ಕಡಿದಾದ ಇಳಿಜಾರನ್ನು ಮಳೆ ಬರುವ ಮೊದಲೇ ಇಳಿದುಬಿಟ್ಟರೆ ಲೇಸು - ಎಂದು ಎಚ್ಚರಿಸಿದಾಗಲೇ ನಾವಿಬ್ಬರು ಆ ಸ್ವಪ್ನಲೋಕದಿಂದ ಹೊರಬಂದದ್ದು. ಅಲ್ಲಿ ಕಳೆದ ೪೫ ನಿಮಿಷಗಳು ಒಂದು ಅದ್ಭುತ ಲೋಕಕ್ಕೆ ತೆರಳಿ ತೇಲಾಡಿ ಬಂದ ಅನುಭವ.

 

ಕೆಳಗಿಳಿಯಲು ಆರಂಭಿಸಿದ ಕೂಡಲೇ ಬಿರುಸಾಗಿ ಮಳೆ ಹೊಯ್ಯಲು ಆರಂಭಿಸಿತು. ಎರಡೇ ನಿಮಿಷದಲ್ಲಿ ಮಳೆ ಮಾಯ. ಮಳೆ ಬೀಳುತ್ತಾ ಇದ್ದಿದ್ದರೆ ಕೆಳಗಿಳಿಯುವುದು ಬಹಳ ಕಷ್ಟವಾಗುತ್ತಿತ್ತು. ಆಶ್ಚರ್ಯದ ಮಾತೆಂದರೆ ಮೇಲೇರಿದಕ್ಕಿಂತ ಸಲೀಸಾಗಿ ಕೆಳಗಿಳಿದು ಬಂದೆವು. ಹಳ್ಳಿಯನ್ನು ತಲುಪಿದ ಕೂಡಲೇ ನಮ್ಮ ಮಾರ್ಗದರ್ಶಿಗಳಿಗೆ ಧನ್ಯವಾದ ಹೇಳಿ, ಅಲ್ಲೊಂದೆಡೆ ಕುಳಿತು ಊಟ ಮಾಡಿದೆವು. ಸಮಯ ಅದಾಗಲೇ ೩ ದಾಟಿತ್ತು. ಅಲ್ಲಿ ಸುಮಾರು ಒಂದು ತಾಸು ಚಾರಣವನ್ನು ಮೆಲುಕು ಹಾಕುತ್ತ, ಹರಟುತ್ತ ಕುಳಿತೆವು. ನಂತರ ನಿಧಾನವಾಗಿ ಒಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು.

  

ಮುಂಗೈ ಮತ್ತು ಬೆರಳುಗಳೊಳಗೆ ಸೇರಿಕೊಂಡಿದ್ದ ಮುಳ್ಳಿನ ೩ ಚೂರುಗಳು ತಮ್ಮ ಇರುವಿಕೆಯನ್ನು ಸಾರುತ್ತ ನೋವನ್ನುಂಟುಮಾಡುತ್ತಿದ್ದವು. ಅವುಗಳನ್ನು ಹೊರತೆಗೆಯುವ ಕೆಲಸ ಡಾ.ಲೀನಾ ಅವರದ್ದಾಗಿತ್ತು. ಅವುಗಳನ್ನು ತೆಗೆಯಬೇಕಾದರೆ ಬಹಳ ನೋವುಂಟಾಯಿತು. ನಾನು ಹಲ್ಲುಗಳನ್ನು ಅವುಡುಗಚ್ಚಿ ಕುಳಿತ ಪರಿ ನೋಡಿ, "ಸುಮ್ನೆ ಯಾಕೆ ಕಾಡು, ಫಾಲ್ಸು.... ಯಾಕೆ ಜೀವಕ್ಕೆ ಕಷ್ಟ ಮಾಡ್ಕೊಳ್ತೀರಿ... " ಎಂದು ಗೊಣಗುತ್ತ ಮುಳ್ಳಿನ ಚೂರುಗಳನ್ನು ತೆಗೆದಳೆನ್ನಿ. ಚಾರಣದ ಸುಖದ ಮುಂದೆ ಈ ಮುಳ್ಳಿನ ನೋವು ಯಾವ ಲೆಕ್ಕ? ಆಕೆ ಹೇಳುವುದನ್ನು ನಿಲ್ಲಿಸುವುದಿಲ್ಲ. ನಾನು ಚಾರಣವನ್ನು ನಿಲ್ಲಿಸುವುದಿಲ್ಲ, ಸದ್ಯದ ಮಟ್ಟಿಗೆ.

ಮಂಗಳವಾರ, ನವೆಂಬರ್ 19, 2013

ತುರುವೇಕೆರೆಯ ದೇವಾಲಯಗಳು


ತುರುವೇಕೆರೆ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳ. ದೇವಾಲಯಗಳನ್ನು ನಿರ್ಮಿಸಲು ಅಗತ್ಯವಿರುವ ಬಳಪದ ಕಲ್ಲುಗಳು ತುರುವೆಕೆರೆಯಲ್ಲೇ ಸಿಗುತ್ತಿದ್ದರಿಂದ ಹೊಯ್ಸಳ ದೊರೆಗಳು ಇಲ್ಲಿಂದಲೇ ಆ ಕಲ್ಲುಗಳನ್ನು ತಮ್ಮ ಸಾಮ್ರಾಜ್ಯದಲ್ಲಿ ದೇವಾಲಯ ನಿರ್ಮಿಸುವಲ್ಲಿಗೆ ಸಾಗಿಸುತ್ತಿದ್ದರು ಎಂದು ನಂಬಲಾಗಿದೆ. ತುರುವೇಕೆರೆಯ ಪ್ರಮುಖ ಪ್ರಾಚೀನ ದೇವಾಲಯಗಳೆಂದರೆ ಚನ್ನಕೇಶವ, ಮೂಲೆ ಶಂಕರೇಶ್ವರ ಮತ್ತು ಗಂಗಾಧರೇಶ್ವರ ದೇವಾಲಯಗಳು.


ಚನ್ನಕೇಶವ ದೇವಾಲಯವನ್ನು ಇಸವಿ ೧೨೬೩ರಲ್ಲಿ ಹೊಯ್ಸಳ ದೊರೆ ೩ನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಆತನ ದಂಡನಾಯಕನಾಗಿದ್ದ ಸೋಮಣ್ಣ ಎಂಬವನು ನಿರ್ಮಿಸಿದನು. ಸುಮಾರು ೩ ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣಗೊಂಡಿರುವ ಸರಳ ಶೈಲಿಯ ಈ ಏಕಕೂಟ ದೇವಾಲಯವು ಪೂರ್ವಾಭಿಮುಖವಾಗಿದ್ದು ಗರ್ಭಗುಡಿ, ನವರಂಗ, ಸುಕನಾಸಿ ಮತ್ತು ಹೊರಚಾಚು ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿರುವ ಚನ್ನಕೇಶವನ ಮೂರ್ತಿಯು ಪ್ರಭಾವಳಿ ಮತ್ತು ವಿಷ್ಣುವಿನ ಹತ್ತು ಅವತಾರಗಳ ಕೆತ್ತನೆಗಳಿಂದ ಅಲಂಕೃತವಾಗಿದೆ.


ಇತರ ಹೊಯ್ಸಳ ದೇವಾಲಯಗಳ ಪೂಜಿತ ವಿಗ್ರಹಗಳಿಗೆ ಹೋಲಿಸಿದರೆ ಈ ದೇವಾಲಯದ ಚನ್ನಕೇಶವನ ವಿಗ್ರಹ ಕಳಪೆ ಮಟ್ಟದ್ದಾಗಿದೆ ಎಂದು ಇತಿಹಾಸಕಾರರ ಅಭಿಪ್ರಾಯ. ಈ ರೀತಿ ಅಭಿಪ್ರಾಯ ಬರಲು ಕಾರಣವೇನೆಂದರೆ ಇಲ್ಲಿನ ವಿಗ್ರಹ ಸ್ವಲ್ಪ ಸಣ್ಣದಾಗಿದ್ದು ಹೊಟ್ಟೆ ಭಾಗದಲ್ಲಿ ಅಗಲವೂ ಆಗಿ ಕೆತ್ತಲ್ಪಟ್ಟಿದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ಕಳಪೆ ಗುಣಮಟ್ಟವನ್ನು ಕಣ್ಣಾರೆ ನೋಡಲು ಆಗದೇ ಹೋಗಿದ್ದು ನನಗೆ ನಿರಾಸೆಯುಂಟುಮಾಡಿತು.


ಗೋಪುರವನ್ನು ನಾಲ್ಕು ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೂಲ ಕಲಶ ಎಂದೋ ಬಿದ್ದುಹೋಗಿದೆ. ದೇವಾಲಯದ ಹೊರಗೋಡೆಯಲ್ಲಿ ಅಲ್ಲಲ್ಲಿ ಕೆಲವು ಗೋಪುರಗಳನ್ನು ಕೆತ್ತಲಾಗಿದ್ದು ಬಿಟ್ಟರೆ ಬೇರೆ ಯಾವ ಯಾವುದೇ ಭಿತ್ತಿಗಳಿಲ್ಲ.


ಹೆಸರಿಗೆ ತಕ್ಕಂತೆ ಊರಿನ ಒಂದು ಮೂಲೆಯಲ್ಲಿ ಮೂಲೆ ಶಂಕರೇಶ್ವರ ದೇವಾಲಯವಿದೆ. ಆದರೆ ಈ ಹೆಸರು ಬರಲು ಅಸಲಿ ಕಾರಣವೆಂದರೆ ಗೋಪುರದಲ್ಲಿ ಕೆತ್ತಿರುವ ೬೪ ಮೂಲೆಗಳಿಂದಾಗಿ ಎಂದು ಈ ದೇವಾಲಯದ ಬಗ್ಗೆ ಡಿ.ಎನ್.ಮಂಜುನಾಥ್ ಎಂಬವರು ಲೇಖನವೊಂದರಲ್ಲಿ ಬರೆದಿದ್ದಾರೆ. ಗೋಪುರದ ತುಂಬಾ ಸಣ್ಣ ಸಣ್ಣ ಶಿಖರಗಳೇ ತುಂಬಿಹೋಗಿದ್ದು ಮೂಲೆಗಳು ಯಾವುವು ಎಂದು ತಿಳಿಯಲೇ ಇಲ್ಲ. ಈ ದೇವಾಲಯವನ್ನು ಕೂಡಾ ಹೊಯ್ಸಳ ದಂಡನಾಯಕ ಸೋಮಣ್ಣನೇ ೧೨ನೇ ಶತಮಾನದಲ್ಲಿ ನಿರ್ಮಿಸಿರಬೇಕು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.


ದಕ್ಷಿಣಾಭಿಮುಖವಾಗಿ ಜಗತಿಯ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯವು ಆಸನದ ವ್ಯವಸ್ಥೆಯಿರುವ ಎರಡು ಕಂಬಗಳ ಸುಂದರ ಮುಖಮಂಟಪ, ವಿಶಾಲ ನವರಂಗ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಹೊಳಪಿರುವ ಕರಿಕಲ್ಲಿನಿಂದ ನಿರ್ಮಿಸಲಾಗಿರುವ ಇಲ್ಲಿನ ಶಿವಲಿಂಗ ನಾಲ್ಕು ಅಡಿ ಎತ್ತರವಿದ್ದು ಆಕರ್ಷಕವಾಗಿದೆ ಎನ್ನಲಾಗುತ್ತದೆ.


ಗೋಪುರವನ್ನು ನಾಲ್ಕು ತಾಳಗಳಲ್ಲಿ ನಿರ್ಮಿಸಲಾಗಿದ್ದು, ಮೇಲಿರುವ ಪದ್ಮವು ಉಳಿದ ದೇವಾಲಯಗಳಿಗಿಂತ ಭಿನ್ನವಾಗಿದ್ದು ಅತ್ಯಾಕರ್ಷಕವಾಗಿದೆ. ಚನ್ನಕೇಶವ ದೇವಾಲಯದಂತೆ ಇಲ್ಲೂ ಹೊರಗೋಡೆಯಲ್ಲಿ ಕೆಲವು ಗೋಪುರಗಳನ್ನು ಕೆತ್ತಿದ್ದು ಬಿಟ್ಟರೆ ಬೇರೆ ಭಿತ್ತಿಚಿತ್ರಗಳಿಲ್ಲ. ಹೊರಗೋಡೆಯಲ್ಲಿ ಜಕ್ಕಣ್ಣ, ಸರೋಜ ಮತ್ತು ಈಶ್ವರ ಎಂಬ ಹೆಸರುಗಳಿವೆಯಂತೆ. ಇವು ದೇವಾಲಯ ಕೆತ್ತಿದ ಶಿಲ್ಪಿಗಳ ಹೆಸರುಗಳಿರಬಹುದು. ಸ್ವಲ್ಪ ಹುಡುಕಾಡಿದ ನನಗೆ ಆ ಹೆಸರುಗಳನ್ನು ಕೆತ್ತಿದ ಸ್ಥಳ ಸಿಗಲಿಲ್ಲ.


ಇಪ್ಪತ್ತು ವರ್ಷಗಳ ಮೊದಲು ಈ ದೇವಾಲಯಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದವು. ಚನ್ನಕೇಶವ ದೇವಾಲಯ ಜೀರ್ಣಾವಸ್ಥೆಗೆ ತಲುಪಿದ್ದು ಸುತ್ತಲೂ ಗಿಡಗಂಟಿಗಳಿಂದ ಆವೃತವಾಗಿತ್ತು. ಮೂಲೆ ಶಂಕರೇಶ್ವರ ದೇವಾಲಯ ಮಣ್ಣಿನಲ್ಲಿ ಹೂತುಹೋಗಿತ್ತು ಮತ್ತು ಮೇಲ್ಛಾವಣಿ ಕುಸಿದುಬಿದ್ದಿತ್ತು. ಸ್ಥಳೀಯರ ಪ್ರಯತ್ನದಿಂದ ಪ್ರಾಚ್ಯ ವಸ್ತು ಇಲಾಖೆ ಮತ್ತು ಧರ್ಮಸ್ಥಳದ ಧರ್ಮೋತ್ಠಾನ ಟ್ರಸ್ಟ್ ವತಿಯಿಂದ ಅನುದಾನ ಬಂದು ದೇವಾಲಯದ ಜೀರ್ಣೋದ್ಧಾರ ಸಾಧ್ಯವಾಗಿದೆ. ಎರಡೂ ದೇವಾಲಯಗಳನ್ನು ಸಂಪೂರ್ಣವಾಗಿ ಬಿಚ್ಚಿ ಮೂಲ ನಿರ್ಮಾಣಕ್ಕೆ ತಕ್ಕಂತೆ ಮರು ಜೋಡಿಸಿ ಗತವೈಭವ ಮರಳಿ ಬರುವಂತೆ ಮಾಡಲಾಗಿದೆ. ಆದರೂ ನನ್ನಂತಹ ಪ್ರವಾಸಿಗರು ಭೇಟಿ ನೀಡಿದಾಗ ದೇವಾಲಯಗಳಿಗೆ ಬೀಗ ಜಡಿದಿರುತ್ತದೆ. ಮೂಲೆ ಶಂಕರೇಶ್ವರ ದೇವಾಲಯದ ಪ್ರಾಂಗಣ ದನ, ನಾಯಿ ಮತ್ತು ಹಂದಿಗಳು ಅಲೆದಾಡುವ ತಾಣವಾಗಿದೆ. ಸಮೀಪದ ಮನೆಗಳಲ್ಲಿ ಕೇಳಿದರೆ ಆಸಕ್ತಿಯೇ ಇಲ್ಲದವರಂತೆ ಉತ್ತರಿಸುತ್ತಾರೆ. ದೇವಾಲಯಗಳ ವೈಭವ ಮರಳಿ ಬಂದಿದೆ ಆದರೆ ಸ್ಥಳೀಯರ ಮನ:ಸ್ಥಿತಿ ಬದಲಾಗದೇ ಇರುವುದು ವಿಪರ್ಯಾಸ.


ಉತ್ತರಾಭಿಮುಖವಾಗಿರುವ ಗಂಗಾಧರೇಶ್ವರ ದೇವಾಲಯಕ್ಕೂ ಬೀಗ ಹಾಕಲಾಗಿತ್ತು. ಈ ದೇವಾಲಯದಲ್ಲಿ ೩ ಪ್ರಮುಖ ಆಕರ್ಷಣೆಗಳಿವೆ. ಮೊದಲನೇದಾಗಿ ಕಾಣಬರುವುದು ತನ್ನದೇ ಆದ ಮಂಟಪದಲ್ಲಿ ಆಸೀನನಾಗಿರುವ ಬೃಹತ್ ಗಾತ್ರದ ಅದ್ಭುತ ನಂದಿ. ಈ ದೇವಾಲಯದ ಎರಡನೇ ವೈಶಿಷ್ಟ್ಯವೆಂದರೆ ಶಿವಲಿಂಗದ ಹಿಂದೆ ಕಮಾನಿನ ಆಕಾರದಲ್ಲಿ ಶಿವನ ಜಟೆಯನ್ನು ತೋರಿಸಲಾಗಿದ್ದು, ಅದರ ಕೆಳಗೆ ಪದ್ಮಾಸನದಲ್ಲಿ ಕುಳಿತಿರುವ ಗಂಗೆಯ ವಿಗ್ರಹವನ್ನು ಕೆತ್ತಲಾಗಿದೆ.

 

ಪ್ರಮುಖ ದ್ವಾರವನ್ನು ಹೊರತುಪಡಿಸಿ ದೇವಾಲಯದ ನವರಂಗಕ್ಕೆ ಎಡ ಪಾರ್ಶ್ವದಿಂದ ಇನ್ನೊಂದು ದ್ವಾರವಿದೆ. ಈ ದ್ವಾರವು ೨ ಕಂಬಗಳ ಮುಖಮಂಟಪವನ್ನು ಹೊಂದಿದ್ದು ಈ ಕಂಬಗಳಲ್ಲಿ ಕೆಲವು ಆಕರ್ಷಕ ಕೆತ್ತನೆಗಳಿವೆ. ಬೇಡರ ಕಣ್ಣಪ್ಪನ ಕೆತ್ತನೆಯೂ ಇಲ್ಲಿ ಕಂಡು ಬಂದದ್ದು ಒಂದು ಸೋಜಿಗ. (ನಿಲ್ಕುಂದದ ವೀರಭದ್ರೇಶ್ವರ ದೇವಾಲಯದಲ್ಲೂ ಬೇಡರ ಕಣ್ಣಪ್ಪನ ಕೆತ್ತನೆ ಇದೆ). ದೇವಾಲಯದ ೩ನೇ ಆಕರ್ಷಣೆಯೆಂದರೆ ಈ ದ್ವಾರದ ಮುಖಮಂಟಪದ ಛಾವಣಿಯಲ್ಲಿ ತೂಗುಹಾಕಲಾಗಿರುವ ದೊಡ್ಡ ಗಾತ್ರದ ಕಲ್ಲಿನ ಗಂಟೆ.


ತುರುವೇಕೆರೆಯನ್ನು ೧೩ನೇ ಶತಮಾನದ ಮಧ್ಯಭಾಗದಲ್ಲಿ ಒಂದು ಅಗ್ರಹಾರವನ್ನಾಗಿ (ಬಾಡಿಗೆ ಕೊಡುವ ಅವಶ್ಯಕತೆಯಿಲ್ಲದ ಹಳ್ಳಿ) ಹೊಸದಾಗಿ ನಿರ್ಮಿಸಿ ಅರ್ಚಕ ಸಮುದಾಯದವರಿಗೆ ವಾಸಿಸಲು ನೀಡಲಾಯಿತು. ಹೊಯ್ಸಳ ದಂಡನಾಯಕನಾಗಿದ್ದ ಸೋಮಣ್ಣನು ತನ್ನ ದೊರೆಯಾಗಿದ್ದ ೩ನೇ ನರಸಿಂಹನ ಮೇಲಿನ ಅಭಿಮಾನದಿಂದ ಈ ಸ್ಥಳಕ್ಕೆ ’ಸರ್ವಜ್ಞ ಶ್ರೀವಿಜಯ ನರಸಿಂಹಪುರ’ ಎಂಬ ಹೆಸರನ್ನಿಟ್ಟನು. (ತಿ.ನರಸೀಪುರ ತಾಲೂಕಿನ ಸೋಮನಾಥಪುರವನ್ನು ಅಗ್ರಹಾರವನ್ನಾಗಿ ಮಾಡಿ ಅಲ್ಲಿ ಪ್ರಸಿದ್ಧ ಕೇಶವ ದೇವಾಲಯವನ್ನು ಇಸವಿ ೧೨೫೮ರಲ್ಲಿ ನಿರ್ಮಿಸಿದವನು ಕೂಡಾ ಈ ಸೋಮಣ್ಣನೇ). ಶಿಲಾಶಾಸನವೊಂದರಲ್ಲಿ ಹೊಯ್ಸಳ ರಾಜ ೩ನೇ ನರಸಿಂಹನು, ಈ ’ಸರ್ವಜ್ಞ ಶ್ರೀವಿಜಯ ನರಸಿಂಹಪುರ’ ಎಂದು ಹೆಸರಿಟ್ಟ ನೂತನ ಅಗ್ರಹಾರಕ್ಕೆ ದಾನಗಳನ್ನು ನೀಡಿದ ವಿವರಗಳೂ ಇವೆ. ಈ ಅಗ್ರಹಾರ, ೩ನೇ ನರಸಿಂಹನ ರಾಣಿ ಲೋಕಾಂಬಿಕೆಯ ತವರೂರು ಕೂಡಾ ಆಗಿತ್ತು.

ಗುರುವಾರ, ನವೆಂಬರ್ 14, 2013

ಸ್ವಯಂಭೂ ಸೋಮೇಶ್ವರ ದೇವಾಲಯ - ಕಲಕೇರಿ


ಕಲಕೇರಿಯಲ್ಲಿ ದೊರೆತಿರುವ ಶಾಸನಗಳ ಪ್ರಕಾರ ಹಲವು ರಾಜವಂಶಗಳು ಆಳಿದ ಪ್ರದೇಶವಿದು. ಎಲ್ಲರೂ ತಮ್ಮ ಆಳ್ವಿಕೆಯ ಸಮಯದಲ್ಲಿ ದೇವಾಲಯಗಳನ್ನು ನಿರ್ಮಿಸಿ ಅಥವಾ ಇದ್ದ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಕಲಕೇರಿಗೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.


ಇಲ್ಲಿರುವ ದೇವಾಲಯಗಳೆಂದರೆ ಸ್ವಯಂಭೂ ಸೋಮೇಶ್ವರ, ಸರಸ್ವತಿ, ಜಯಸಿಂಗೇಶ್ವರ, ಮೂಲೆ ಬಸವಣ್ಣ, ಸೋಮೇಶ್ವರ ಮತ್ತು ಲಕ್ಕಮ್ಮ ದೇವಾಲಯ. ಶಾಸನಗಳಲ್ಲಿ ಈ ಊರನ್ನು ’ಕಲ್ಲುಕೆರೆ’ ಹಾಗೂ ’ಕಲ್ಕೆರೆ’ ಎಂದು ಕರೆಯಲಾಗಿದೆ. ಈಗ ಕಲಕೇರಿ ಅಥವಾ ಕಲ್ಕೇರಿ ಎಂದು ಕರೆಯಲಾಗುತ್ತದೆ.


ಕಲ್ಯಾಣಿ ಚಾಲುಕ್ಯ, ಯಾದವ, ಹೊಯ್ಸಳ ಮತ್ತು ವಿಜಯನಗರ ಅರಸರ ಕಾಲದ ೩೦ಕ್ಕೂ ಹೆಚ್ಚು ಶಾಸನಗಳು ಇಲ್ಲಿ ದೊರೆತಿವೆ. ಇವುಗಳಲ್ಲಿ ಸುಮಾರು ೧೦ ಶಾಸನಗಳು ಸ್ವಯಂಭೂ ಸೋಮೇಶ್ವರ ದೇವಾಲಯಕ್ಕೆ ಸಂಬಂಧಪಟ್ಟ ದಾನದತ್ತಿ ವಿವರಗಳನ್ನು ಒಳಗೊಂಡಿವೆ.


ಈ ತ್ರಿಕೂಟ ದೇವಾಲಯ ಸಂಪೂರ್ಣವಾಗಿ ಪಾಳುಬಿದ್ದಿತ್ತು. ಪುರಾತತ್ವ ಇಲಾಖೆ ಈಗ ದೇವಾಲಯವನ್ನು ನವೀಕರಿಸಿದೆ. ಪಶ್ಚಿಮದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವಿದ್ದರೆ ಉಳಿದೆರಡು (ಉತ್ತರ ಮತ್ತು ಪೂರ್ವ) ಗರ್ಭಗುಡಿಗಳು ಖಾಲಿಯಾಗಿವೆ (ದೇವಾಲಯವು ಪಾಳುಬಿದ್ದಿದ್ದರಿಂದ, ಪೂರ್ವದ ಗರ್ಭಗುಡಿಯಲ್ಲಿ ಇದ್ದ ಸೂರ್ಯದೇವನ ವಿಗ್ರಹವನ್ನು ಬಹಳ ಹಿಂದೆನೇ, ಸಮೀಪದಲ್ಲಿರುವ ಸೂರ್ಯನಾರಾಯಣ ದೇವಾಲಯದ ಖಾಲಿ ಇದ್ದ ಗರ್ಭಗುಡಿಯೊಂದರಲ್ಲಿ ಪ್ರತಿಷ್ಠಾಪಿಸಿರುವ ಪುರಾವೆಗಳಿವೆ). ಎಲ್ಲಾ ಗರ್ಭಗುಡಿಗಳಿಗೆ ಪ್ರತ್ಯೇಕ ಅಂತರಾಳವಿದ್ದು ಸಾಮಾನ್ಯ ನವರಂಗವಿದೆ.


ಎಲ್ಲಾ ಗರ್ಭಗುಡಿಗಳ ದ್ವಾರವು ೩ ಅಲಂಕೃತ ತೋಳುಗಳನ್ನು ಹೊಂದಿದ್ದು ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿವೆ. ಶಿವಲಿಂಗವಿರುವ ಗರ್ಭಗುಡಿಯ ದ್ವಾರದ ಕೆಳಗೆ ತ್ರಿಶೂಲ ಮತ್ತು ಡಮರುಗವನ್ನು ಹಿಡಿದಿರುವ ಶಿವನ ಕೆತ್ತನೆಯನ್ನು ಕಾಣಬಹುದು. ಸ್ವಯಂಭೂ ಆಗಿರುವ ಕಾರಣ ಶಿವಲಿಂಗ ತುಂಬಾ ಸಣ್ಣದಾಗಿದೆ. ಮಕರತೋರಣದಿಂದ ಅಲಂಕೃತಗೊಂಡಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಕೆತ್ತನೆಯನ್ನು ಎಲ್ಲಾ ಅಂತರಾಳಗಳ ಲಲಾಟದಲ್ಲಿ ಕಾಣಬಹುದಾಗಿದ್ದು ಇಕ್ಕೆಲಗಳಲ್ಲಿ ಜಾಲಂಧ್ರಗಳನ್ನೂ ಕಾಣಬಹುದು.


ಚಾಲುಕ್ಯ ಶೈಲಿಯ ನವರಂಗವು ವಿಶಾಲವಾಗಿದ್ದು ಕಕ್ಷಾಸನವನ್ನು ಹೊಂದಿದೆ. ಕಕ್ಷಾಸನದ ಮೇಲಿರುವ ೧೦ ಕಂಬಗಳನ್ನೂ ಸೇರಿಸಿ ನವರಂಗದಲ್ಲಿ ಒಟ್ಟು ೨೧ ಕಂಬಗಳಿವೆ. ನಂದಿಯು ಶಿವಲಿಂಗವಿರುವ (ಪಶ್ಚಿಮಕ್ಕಿರುವ) ಗರ್ಭಗುಡಿಗೆ ಮುಖಮಾಡಿ ಆಸೀನನಾಗಿದ್ದರೂ ಪೂರ್ವದಲ್ಲಿರುವ ಖಾಲಿ ಗರ್ಭಗುಡಿಗೆ ತುಂಬಾ ಸಮೀಪದಲ್ಲಿದೆ. ನಂದಿಯ ಸಮೀಪದಲ್ಲೇ ಪಾದಗಳ ಕೆತ್ತನೆಯಿರುವ ಎರಡು ಪಾಣಿಪೀಠಗಳನ್ನು ಇರಿಸಲಾಗಿದೆ.


೧೧ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯದ ಗರ್ಭಗುಡಿಗಳ ಮೇಲೆ ಕದಂಬ ಶೈಲಿಯ ಗೋಪುರಗಳಿವೆ. ಈ ಶೈಲಿಯಲ್ಲಿ ಗೋಪುರವನ್ನು ಮೆಟ್ಟಿಲುಗಳ ರೀತಿಯಲ್ಲಿ ಯಾವುದೇ ಅಲಂಕಾರವಿಲ್ಲದೆ ನಿರ್ಮಿಸಲಾಗುತ್ತದೆ. ದೇವಾಲಯದ ಹೊರಗೋಡೆಯಲ್ಲಿ ಯಾವುದೇ ಭಿತ್ತಿಚಿತ್ರಗಳಿಲ್ಲ.


ವಿಶಾಲವಾದ ಪ್ರಾಂಗಣ ಹೊಂದಿರುವ ಸ್ವಯಂಭೂ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಉತ್ತರಾಭಿಮುಖವಾಗಿರುವ ಇನ್ನೊಂದು ದೇವಾಲಯವಿದ್ದು ಇದನ್ನು ಸರಸ್ವತಿ ದೇವಾಲಯವೆಂದು ಹೇಳಲಾಗುತ್ತದೆ. ಇಲ್ಲಿದ್ದ ಸರಸ್ವತಿ ದೇವಿಯ ಮೂರ್ತಿ ಬಹಳ ವರ್ಷಗಳ ಹಿಂದೆ ಕಳುವಾಯಿತೆಂದು ಊರವರು ತಿಳಿಸಿದರು. ಹಂಸಪೀಠವಿರುವ ಗರ್ಭಗುಡಿ ಮತ್ತು ನಾಲ್ಕು ಕಂಬಗಳ ನವರಂಗವನ್ನು ಹೊಂದಿರುವ ಈ ದೇವಾಲಯ ಈಗ ಧೂಳು ಮತ್ತು ಬಾವಲಿಗಳಿಂದ ತುಂಬಿಹೋಗಿದೆ.


ಸಮೀಪದಲ್ಲೇ ಗರ್ಭಗುಡಿ ಮತ್ತು ಅಂತರಾಳ ಮಾತ್ರ ಹೊಂದಿರುವ ಸೋಮೇಶ್ವರ ದೇವಾಲಯವಿದೆ. ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯನ್ನು ಕಾಣಬಹುದು. ಅಂತರಾಳದ ದ್ವಾರವು ಜಾಲಂಧ್ರಗಳನ್ನು ಹೊಂದಿದ್ದು ಮೇಲ್ಭಾಗದಲ್ಲಿ ಮಕರತೋರಣದಿಂದ ಸುತ್ತುವರಿದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಕೆತ್ತಲಾಗಿದೆ.


ಸ್ವಯಂಭೂ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಹಲವಾರು ಶಾಸನಗಳನ್ನು ಮತ್ತು ವೀರಗಲ್ಲುಗಳನ್ನು ಇಡಲಾಗಿದೆ. ಇವುಗಳಲ್ಲಿ ಹೆಚ್ಚಿನ ವೀರಗಲ್ಲುಗಳಲ್ಲಿ ಸಂಬಂಧಪಟ್ಟ ವಿವರಗಳನ್ನೂ ನೀಡಲಾಗಿದೆ.


ಎರಡು ಸಾಲುಗಳಲ್ಲಿ ಇಡಲಾಗಿರುವ ಈ ವೀರಗಲ್ಲುಗಳೆಲ್ಲವೂ ಕಲಕೇರಿಯಲ್ಲೇ ದೊರೆತವು. ಇವುಗಳ ಮೇಲೆ ಬರೆದಿರುವುದನ್ನು ಓದಲು ಆಗದೇ ಅಸಹಾಯಕ ಸ್ಥಿತಿಯಲ್ಲಿರುವಾಗ ಹಳೆಗನ್ನಡ ಓದಲು ಕಲಿಯಬೇಕೆಂದು ಅನಿಸುತ್ತಿತ್ತು.


ಊರ ನಡುವೆ ಇರುವ ಲಕ್ಕಮ್ಮ ದೇವಾಲಯದ ವೈಶಿಷ್ಟ್ಯವೆಂದರೆ ಸುಮಾರು ೫ ಅಡಿ ಎತ್ತರದ ಕುಳಿತುಕೊಂಡಿರುವ ಭಂಗಿಯಲ್ಲಿರುವ ಭೈರವಿ ದೇವಿಯ ಮೂರ್ತಿ.


ದೇವಿಯ ಬಳಿಯಲ್ಲೇ ಕುಳಿತ ಭಂಗಿಯಲ್ಲಿರುವ ಭೈರವನ ಮೂರ್ತಿಯೂ ಇದ್ದು ಇದು ಸುಮಾರು ೨ ಅಡಿ ಎತ್ತರವಿರಬಹುದು. ಗರ್ಭಗುಡಿ ಮತ್ತು ಅಂತರಾಳವನ್ನು ಹೊಂದಿರುವ ದೇವಾಲಯ ಕದಂಬ ಶೈಲಿಯ ಗೋಪುರವನ್ನು ಹೊಂದಿದೆ.