ಗುರುವಾರ, ಜೂನ್ 13, 2013

ಹಣಕುಣಿ ಕೋಟೆ


ರಾಜಮಹಾರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ತಮ್ಮ ರಾಜಧಾನಿಯಿಂದ ಹೊರವಲಯದಲ್ಲಿರುವ ಕೆಲವು ಊರುಗಳಲ್ಲಿ ಸಣ್ಣ ಕೋಟೆಗಳನ್ನು ಕಟ್ಟಿಸುತ್ತಿದ್ದರು. ಈ ಕೋಟೆಗಳಿಂದ ರಾಜ್ಯಭಾರ ನಡೆಯುತ್ತಿರಲಿಲ್ಲ. ಇವುಗಳನ್ನು ಮದ್ದುಗುಂಡುಗಳ ದಾಸ್ತಾನು ಕೇಂದ್ರಗಳನ್ನಾಗಿ ಅಥವಾ ಬೊಕ್ಕಸದ ಕೇಂದ್ರವಾಗಿ ಅಥವಾ ಸೈನಿಕರ ತರಬೇತಿ ಕೇಂದ್ರವಾಗಿ ಮತ್ತಿತರ ಪ್ರಮುಖ ’ಇಲಾಖೆ’ಗಳ ಕೇಂದ್ರವಾಗಿ ಬಳಸಲಾಗುತ್ತಿತ್ತು.


ಇಂತಹ ಕೋಟೆಗಳಲ್ಲೊಂದು ಈ ಹಣಕುಣಿ ಕೋಟೆ. ನಾಲ್ಕಾರು ಬುರುಜುಗಳನ್ನು ಹೊಂದಿರುವ ತೀರಾ ಸಾಧಾರಣ ಕೋಟೆ ಇದು. ಈ ಸ್ಥಳ ಪ್ರವಾಸಿ ಕೇಂದ್ರವಾಗಿ ಪ್ರಸಿದ್ಧಿ ಪಡೆದಿಲ್ಲ. ತಾಲೂಕು ಕೇಂದ್ರದಿಂದ ಕೇವಲ ಐದು ಕಿಮಿ ದೂರದಲ್ಲಿದ್ದು, ಇನ್ನೂ ಸುದೃಢವಾಗಿರುವ ಕೋಟೆಯನ್ನು ಸ್ವಲ್ಪ ಅಭಿವೃದ್ಧಿಗೊಳಿಸಿ, ಸ್ವಚ್ಛಗೊಳಿಸಿದರೆ ಇತಿಹಾಸದ ಸಣ್ಣ ತುಣುಕೊಂದನ್ನು ಜೀವಂತವಾಗಿರಿಸಬಹುದು.


೧೭ನೇ ಶತಮಾನದ ಆರಂಭದಲ್ಲಿ ರಾಜಾ ರಾಮಚಂದ್ರ ಜಾಧವನಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ಆಗ ಹಣಕಾಸು ಅಥವಾ ಬೊಕ್ಕಸದ ಕೇಂದ್ರವಾಗಿ ಬಳಸಲ್ಪಡುತ್ತಿತ್ತು. ಇದೇ ಕಾರಣದಿಂದ ’ಹಣ’ಕುಣಿ ಎಂಬ ಹೆಸರು ಬಂದಿರಬಹುದೇ?


ಕೋಟೆಯನ್ನು ಪ್ರವೇಶಿಸಿದ ಕೂಡಲೇ ವಿಶಾಲವಾದ ತೆರೆದ ಸ್ಥಳ. ಈ ತೆರೆದ ಸ್ಥಳವನ್ನು ಹೊರತುಪಡಿಸಿ ಕೋಟೆಯ ಉಳಿದೆಲ್ಲಾ ಭಾಗಗಳಲ್ಲಿ ಗಿಡಗಂಟಿಗಳು ವ್ಯಾಪಕವಾಗಿ ಹಬ್ಬಿಬಿಟ್ಟಿವೆ. ಮುಂದಿನ ಹೆಜ್ಜೆ ಇಡುವಲ್ಲಿ ಏನಿದೆ ಎಂದೂ ಗೊತ್ತಾಗದಷ್ಟು ದಟ್ಟವಾಗಿ ಬೆಳೆದಿವೆ.


ಕೋಟೆಯ ಸುತ್ತಲೂ ಇರುವ ಕಂದಕ ಕಿರಿದಾದರೂ ಆಳವಾಗಿದೆ. ಕಂದಕದಲ್ಲೂ ಹುಲುಸಾಗಿ ಗಿಡಗಂಟಿಗಳು ಬೆಳೆದಿವೆ. ಊರಿನ ಕೊನೆಯಲ್ಲಿರುವ ಕೋಟೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಹೆಚ್ಚಿನ ಕೋಟೆಗಳಲ್ಲಿ, ಕೋಟೆಯ ಕಲ್ಲುಗಳನ್ನು ಊರವರು ಮನೆಯೆಡೆ ಸಾಗಿಸಿರುವುದನ್ನು ಕಾಣಬಹುದು. ಆದರೆ ಇಲ್ಲಿ ಅಂತಹದ್ದೇನೂ ಕಂಡುಬರಲಿಲ್ಲ.

ಮಾಹಿತಿ: ಕಣಜ

1 ಕಾಮೆಂಟ್‌:

Ashok ಹೇಳಿದರು...

Chennagide. Clean adru madi itkondre istu varsha idda kote innondastu varsha badukabahudu.