ಭಾನುವಾರ, ಅಕ್ಟೋಬರ್ 28, 2012

ನಾಗರಮಡಿ


ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕಗಳಲ್ಲಿ ನಾಗರಮಡಿ ’ಜಲಧಾರೆ’ಯ ಬಗ್ಗೆ ಲೇಖನಗಳು ಬಂದಿದ್ದವು. ೨೦೦೭ ಗಾಂಧಿ ಜಯಂತಿಯ ರಜೆಯನ್ನು ಸದುಪಯೋಗಪಡಿಸಿಕೊಳ್ಳೋಣವೆಂದು ಹೊರಟು ನಾಗರಮಡಿ ಇರುವ ಪುಟ್ಟ ಹಳ್ಳಿ ತಲುಪಿದಾಗ ಮಧ್ಯಾಹ್ನ ೧.೦೦ ಆಗಿತ್ತು.


ಈ ಹಳ್ಳಿಯ ಚೆಕ್ ಪೋಸ್ಟ್ ನಲ್ಲಿ ನಮ್ಮನ್ನು ಬಸ್ಸಿನ ನಿರ್ವಾಹಕರು ಇಳಿಸಿದರು. ಅಲ್ಲೇ ಒಂದು ಸಣ್ಣ ಹೋಟೇಲು. ಆ ಹೋಟೇಲ್ ನೋಡಿದರೆ ಹಸಿವೆಲ್ಲಾ ಮಾಯವಾಗಬೇಕು, ಅಷ್ಟು ಕೊಳಕು. ಆದರೆ ಅಲ್ಲಿ ಬೇರೆ ಹೋಟೇಲುಗಳಿರಲಿಲ್ಲ. ಭಲೇ ದಡಿಯರಾಗಿದ್ದ ಅಪ್ಪ-ಮಗ ಜೋಡಿ ಈ ಹೋಟೇಲನ್ನು ನಡೆಸುತ್ತಿದ್ದರು. ಇಲ್ಲಿ ಜನರ ಸಂಚಾರ ಕಡಿಮೆ. ಹೋಟೇಲಿಗೆ ಯಾರೂ ಬರುವಂತೆ ಕಾಣುತ್ತಿರಲಿಲ್ಲ.


ಒಂದೆರಡು ಕಿಮಿ ರಸ್ತೆಯಲ್ಲೇ ನಡೆದ ಬಳಿಕ ಬಲಕ್ಕೆ ತಿರುಗಿ ನೇರ ನಡೆದರೆ ನಾಗರಮಡಿ ಎಂದು ಹೋಟೇಲಿನ ಅಪ್ಪ-ಮಗ ನಮಗೆ ತಿಳಿಸಿದರು. ರಸ್ತೆಯಲ್ಲಿ ನಡೆಯುವಾಗ ನೋಟ ಚೆನ್ನಾಗಿತ್ತು. ದೂರದಲ್ಲೊಂದು ಅತ್ಯಾಕರ್ಷವಾಗಿ ಕಾಣುತ್ತಿದ್ದ ಶಿಖರ. ರಸ್ತೆಯ ಎರಡೂ ಪಾರ್ಶ್ವಗಳಲ್ಲಿ ಗದ್ದೆಗಳು. ಗದ್ದೆಗಳ ನಡುವೆ ಅಲ್ಲಲ್ಲಿ ಮನೆಗಳು. ಬಲಕ್ಕೆ ದೂರದಲ್ಲಿ ಬೆಟ್ಟಗಳ ಸಾಲು. ಅಲ್ಲೆಲ್ಲೋ ನಾಗರಮಡಿ ಇರಬಹುದೆಂದು ಊಹಿಸಿದೆ. ದೇವಸ್ಥಾನದ ಬಳಿ ರಸ್ತೆಯಿಂದ ತಿರುವು ಪಡೆದು ಒಳಗೆ ನಡೆದೆವು. ಐದು ನಿಮಿಷದ ಬಳಿಕ ನಂತರ ಮನೆಗಳಿಲ್ಲ. ಮಣ್ಣಿನ ರಸ್ತೆಯಲ್ಲಿ ೧೫ ನಿಮಿಷ ನಡೆದ ಬಳಿಕ ತೊರೆಯೊಂದರ ಪಾರ್ಶ್ವದಲ್ಲೇ ರಸ್ತೆ ಮುಂದುವರಿಯಿತು. ನಾಗರಮಡಿ ಜಲಧಾರೆ ಇದೇ ಹಳ್ಳದಿಂದ ನಿರ್ಮಿತವಾಗಿರಬಹುದೆಂದು ಮುನ್ನಡೆದೆವು.


ಸ್ವಲ್ಪ ಹೊತ್ತಿನ ಬಳಿಕ ಕಲ್ಲಿನ ಕ್ವಾರಿಯೊಂದು ಎದುರಾಯಿತು. ಬೆಟ್ಟವನ್ನು ಶಿಸ್ತುಬದ್ಧವಾಗಿ ಕೊರೆದು ಕರಿಕಲ್ಲನ್ನು ಲೂಟಿಗೈಯಲಾಗಿತ್ತು. ಇದರ ಬದಿಯಲ್ಲೇ ನಿಧಾನವಾಗಿ ಮೇಲೇರಿದೆವು. ಎಡಕ್ಕೆ ಕ್ವಾರಿಯ ಆಳವಿದ್ದರೆ, ಬಲಕ್ಕೆ ಹಳ್ಳ ಹರಿಯುತ್ತಿತ್ತು. ಜಲಧಾರೆಯ ಸದ್ದಂತೂ ಕೇಳಿಸುತ್ತಿರಲಿಲ್ಲ.


ಬೆಟ್ಟದ ಮೇಲೆ ತಲುಪಿದಾಗ ಕೆಳಗೆ ವಿಚಿತ್ರ ಆಕಾರದ ಬಂಡೆಯೊಂದು ಕಂಡುಬಂತು. ಅದರ ಕೆಳಗಡೆಯಿಂದ ಹಳ್ಳವು ಹರಿಯುತ್ತಿತ್ತು. ನೋಡಿಬರೋಣವೆಂದು ಕೆಳಗಿಳಿದರೆ ಅಲ್ಲೇ ಇತ್ತು ನಾಗರಮಡಿ ಜಲಧಾರೆ(?!). ಕೇವಲ ೧೦-೧೨ ಅಡಿ ಎತ್ತರದಿಂದ ನೀರು ಕೆಳಗೆ ಬೀಳುತ್ತಿತ್ತು!



ಆದರೆ ಆ ಬಂಡೆ! ನಾಗರಹಾವು ಹೆಡೆ ಎತ್ತಿದಾಗ ಕಾಣುವಂತೆ ಈ ಬಂಡೆ ಕಾಣುತಿತ್ತು. ಅದಕ್ಕೇ ನಾಗರಮಡಿ ಎಂಬ ಹೆಸರು. ಇದು ಸುಮಾರು ೩೦ ಅಡಿ ಎತ್ತರವಿದ್ದು, ಎರಡೂ ಪಾರ್ಶ್ವಗಳಲ್ಲಿರುವ ಕಲ್ಲಿನ ಗೋಡೆಯ ಮೇಲೆ ಆಧಾರವಾಗಿ ನಿಂತಿರುವುದು. ಇದರ ಕೆಳಗೇ ನೀರು ಧುಮುಕಿ, ೨೦ ಅಡಿ ಅಗಲ ಮತ್ತು ೨೫ ಅಡಿ ಉದ್ದದ ಕೊಳವೊಂದನ್ನು ಸೃಷ್ಟಿಸಿ ಮುಂದಕ್ಕೆ ಹರಿದು ಹೋಗುತ್ತಿತ್ತು.


ಜಲಧಾರೆ ಇರದಿದ್ದರೂ, ಸ್ಥಳ ಮಾತ್ರ ಬಹಳ ಚೆನ್ನಾಗಿತ್ತು. ಆ ಬಂಡೆಯ ರಚನೆ, ಹೆಡೆಯೆತ್ತಿ ನಿಂತಿರುವ ಅದರ ಆಕಾರ, ಬಂಡೆಯ ಅಡಿಯಲ್ಲಿರುವ ಈಜುಕೊಳದಂತಹ ನೀರಿನ ಗುಂಡಿ ಮತ್ತು ಸದ್ದಿಲ್ಲದ ಪ್ರಶಾಂತ ವಾತಾವರಣ.

ಮಾಹಿತಿ: ಅ.ಚಿಂ.ಜ್ಯೋತಿಷಿ ಮತ್ತು ಜಿ.ಡಿ.ಪಾಲೇಕರ

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Skath Sir, one visit kodbeku!

ರಾಜೇಶ್ ನಾಯ್ಕ ಹೇಳಿದರು...

ಭಾರ್ಗವ,
ಧನ್ಯವಾದ.