ಭಾನುವಾರ, ಮೇ 13, 2012

ನದಿಗುಂಟ ನಡಿಗೆ...


’ನದಿಗುಂಟ ಟ್ರೆಕ್ ಮಾಡೋಣೇನ್ರಿ’ ಎಂದು ವಿವೇಕ್ ಕೇಳಿದಾಗ ಒಪ್ಪಿಕೊಂಡೆ. ಧಾರವಾಡದಲ್ಲಿ ಹಲವಾರು ವರ್ಷ ವಾಸ್ತವ್ಯವಿದ್ದು ಈಗ ಊರಿಗೆ ಮರಳಿರುವ ತಮ್ಮ ಗೆಳೆಯ ಶ್ರೀಪಾದ ಭಟ್ಟರನ್ನು ವಿವೇಕ್ ಸಂಪರ್ಕಿಸಿ ಬರುವ ದಿನಾಂಕವನ್ನು ಅವರಿಗೆ ತಿಳಿಸಿದರು.


ಊರಿನ ಹೆಸರನ್ನು ನಾನೆಲ್ಲೂ ತಿಳಿಸುವುದಿಲ್ಲ ಎಂಬುವುದು ತಮಗೆಲ್ಲರಿಗೆ ಗೊತ್ತೇ ಇದೆ. ಆದರೆ ಈ ಸಲ ತಿಳಿಸುತ್ತೇನೆ. ಯಾಕೆಂದರೆ ಊರಿನ ಹೆಸರು ಎಷ್ಟು ಸೊಗಸಾಗಿಯೂ ವಿಚಿತ್ರವಾಗಿಯೂ ಇದೆ ಎಂದರೆ ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಹಲವಾರು ’ಮೆಮೊರಿ’ ಕಸರತ್ತುಗಳನ್ನು ಮಾಡಬೇಕಾಯಿತು! ಈ ಊರಿನ ಹೆಸರು ’ಕೂಗಳಬಳ್ಳಿಮಠ’.


ಶ್ರೀಪಾದರು ತಮ್ಮ ಮನೆಯಲ್ಲಿ ನಮಗೋಸ್ಕರ ಲಘು ಉಪಹಾರವನ್ನು ರೆಡಿ ಮಾಡಿಟ್ಟಿದ್ದರು. ನಮ್ಮ ಉಪಹಾರ ಮುಗಿದಿದ್ದರೂ, ಅವರ ಒತ್ತಾಯಕ್ಕೆ ಮತ್ತೊಮ್ಮೆ ಉಪಹಾರ ಮಾಡಿದೆವು. ಶ್ರೀಪಾದರು ನಮ್ಮೊಂದಿಗೆ ಚಾರಣಕ್ಕೆ ಅಣಿಯಾದರು. ಊಟ ನಾವು ತಂದಿದ್ದೇವೆ ಎಂದು ಎಷ್ಟು ಹೇಳಿದರೂ ಕೇಳದೆ, ಅವರ ಮನೆಯ ಸದಸ್ಯರು ’ಊಟ ತಯಾರು ಮಾಡಿ ಇಡ್ತೀವಿ. ಎಷ್ಟೇ ಹೊತ್ತಾದ್ರೂ ಇಲ್ಲೇ ಬಂದು ಊಟ ಮಾಡಿ’ ಎಂದು ಪ್ರೀತಿಯಿಂದ ಎಚ್ಚರಿಸಿ ಕಳಿಸಿದರು.


ತೋಟ, ಬ್ಯಾಣ, ಇತ್ಯಾದಿಗಳನ್ನು ದಾಟಿ ಕಣಿವೆಯಂಚಿನಲ್ಲಿರುವ ಮನೆಯ ಸಮೀಪದಿಂದ ಹಾದುಹೋಗುತ್ತಿರುವಾಗ ಅಲ್ಲಿ ಮರವೊಂದರ ಕೆಳಗೆ ಅಪ್ಪ-ಮಗ ಕುಳಿತಿದ್ದರು. ಅಪ್ಪನಿಗೆ ೮೫ರ ಆಸುಪಾಸು. ಮಗನಿಗೆ ಸುಮಾರು ೫೦-೫೫. ಅಪ್ಪ ಮಗನಿಗೆ ಜ್ಯೋತಿಷ್ಯ ವಿದ್ಯೆಯ ಬಗ್ಗೆ ಕೆಲವು ವಿಷಯಗಳನ್ನು ಬೋಧಿಸುತ್ತಿದ್ದರು. ಆ ದೃಶ್ಯವನ್ನು ಕಂಡು ಬಹಳ ಆನಂದವಾಯಿತು. ಈ ವಯಸ್ಸಿನಲ್ಲೂ ಕಲಿಸುವ ಮತ್ತು ಕಲಿಯುವ ಹುಮ್ಮಸ್ಸು. ’ಬರ್ಬೇಕಾದ್ರೆ ಆಸರೆ ತಗೊಂಡು ಹೋಗಿ’ ಎಂದು ಅಪ್ಪ-ಮಗ ಕಳಿಸಿಕೊಟ್ಟರು.


ಸ್ವಲ್ಪ ಮುಂದೆ ಕಣಿವೆಯನ್ನು ಇಳಿದು ನದಿತಟಕ್ಕೆ ಕಾಲಿರಿಸಿದೆವು. ಇಷ್ಟು ಸುಂದರವಾಗಿರುವ ಪರಿಸರದಲ್ಲಿ ಈ ನದಿ ಹರಿಯುತ್ತದೆ ಎಂಬ ಕಲ್ಪನೆ ಇರಲಿಲ್ಲ. ಕಾಡು, ಕಣಿವೆ, ಕಲ್ಲುಬಂಡೆಗಳು ಎಲ್ಲವೂ ಅದ್ಭುತ.


ಎಲ್ಲೆಡೆ ಕಲ್ಲಿನ ಮೇಲ್ಮೈಯೇ ಆಗಿರುವುದರಿಂದ ಸ್ವಲ್ಪ ಆಯ ತಪ್ಪಿದರೂ ಅಥವಾ ಜಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಒಂದೆರಡು ಕಡೆ ಅಪಾಯವಿದ್ದರೂ ಅಲ್ಲಿನ ಸೌಂದರ್ಯಕ್ಕೆ ಮನಸೋತು ಮುಂದೆ ತೆರಳುವ ನಿರ್ಧಾರ ಮಾಡಿದೆವು. ನಂತರ ಮುಂದೆ ಕಂಡುಬಂದ ದೃಶ್ಯಗಳು ನಾವು ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡೆವು ಎಂದು ಸಾಬೀತುಪಡಿಸಿದವು.


ಈ ನದಿ ನಿರ್ಮಿಸುವ ಜಲಧಾರೆಯ ತುದಿ ತಲುಪಲು ಇನ್ನೇನು ಒಂದೆರಡು ನಿಮಿಷದ ನಡಿಗೆ ಇರುವಾಗ ಎದುರಾದ ತುಂಬಾ ಅಪಾಯಕಾರಿ ಮತ್ತು ೫೦-೬೦ ಅಡಿ ಲಂಬವಾದ ’ಡ್ರಾಪ್’ನ್ನು ಕಂಡು ಇಷ್ಟು ಸಾಕು ಎಂದು ಅಲ್ಲಿಗೇ ನಿಲ್ಲಿಸಿದೆವು.


ನದಿಯ ಹರಿವಿನ ರಭಸಕ್ಕೆ ನಿರ್ಮಿತವಾಗಿರುವ ಕಲ್ಲಿನ ವಿನ್ಯಾಸಗಳು ಮನಸೂರೆಗೊಂಡವು. ಕಣಿವೆ ವಿಶಾಲವಾಗಿದ್ದು, ಮಳೆಗಾಲದಲ್ಲಿ ನದಿಯ ಹರಿವು ಕಣಿವೆಯ ಸಂಪೂರ್ಣ ಅಗಲಕ್ಕೂ ವ್ಯಾಪಿಸಿಕೊಳ್ಳುತ್ತದೆ.


ತುಂಬಾ ಉತ್ತಮ ಚಾರಣದಿಂದ ಸಂತಸಗೊಂಡ ಎಲ್ಲರೂ ಆಳ ಕಡಿಮೆಯಿದ್ದಲ್ಲಿ ಒಂದು ತಾಸಿಗೂ ಅಧಿಕ ಸಮಯ ಜಲಕ್ರೀಡೆಯಾಡಿ ಉಲ್ಲಸಿತಗೊಂಡರು.


ಕಣಿವೆಯೇರಿ ಅಪ್ಪ-ಮಗ ಜೋಡಿಯ ಮನೆ ಹೊಕ್ಕೆವು. ಬೆಳಗ್ಗೆ ೯ಕ್ಕೇ ಅವರ ಮನೆ ದಾಟಿ ಹೋಗಿದ್ದ ನಾವು ಈಗ ಮರಳಿ ಬಂದಾಗ ಸಮಯ ಮಧ್ಯಾಹ್ನ ೩ ಆಗಿತ್ತು. ಅಷ್ಟೂ ಜನರಿಗೆ ರುಚಿಯಾದ ಮಜ್ಜಿಗೆ ರೆಡಿ ಮಾಡಿಟ್ಟ ಅವರು ನಮಗಾಗಿಯೇ ಕಾದು ಕುಳಿತಿದ್ದರು. ಇಲ್ಲಿ ಸ್ವಲ್ಪ ದಣಿವಾರಿಸಿ ನಂತರ ಶ್ರೀಪಾದರ ಮನೆ ತಲುಪಿದಾಗ ಅಲ್ಲಿ ಊಟದ ಸಮಯ.


ಆ ಮನೆಯವರೆಲ್ಲಾ ಸಂಭ್ರಮದಿಂದ ಓಡಾಡುತ್ತಾ ಬಾಳೆ ಎಲೆ ಹಾಕಿ ಪಟಪಟನೆ ನಮಗೆಲ್ಲಾ ಬಡಿಸಿದರು. ಈ ಪರಿ ನಮಗೆ ಆತಿಥ್ಯ ಸಿಗಬೇಕೆಂದರೆ ಎಲ್ಲಿ ಪುಣ್ಯ ಮಾಡಿದ್ದೇವೋ ಏನೋ. ಚಾರಣದಿಂದ ದಣಿದಿದ್ದೆವು. ಈಗ ಭರ್ಜರಿ ಊಟಾನೂ ಆಯಿತು. ಇನ್ನು ಬಾಕಿ ಇದ್ದಿದ್ದು ನಿದ್ರೆ. ಅದರ ಅರಿವಿದ್ದ ಮನೆಯವರು ಮಾಳಿಗೆಗೆ ಹೋಗಿ ಸ್ವಲ್ಪ ವಿಶ್ರಮಿಸಿ ’ಕವಳಾ’ ಹಾಕಿಕೊಳ್ಳಿ ಎಂದು ಮೇಲೆ ಕಳಿಸಿದರು. ವಿಶಾಲವಾದ ಕೋಣೆಯಲ್ಲಿ ಜಮಖಾನೆ ಹಾಸಿ, ತಲೆದಿಂಬುಗಳನ್ನು ಜೋಡಿಸಿ ಇಡಲಾಗಿತ್ತು. ಮುಂದಿನ ಅರ್ಧ ಗಂಟೆ ನಿದ್ರೆಯ ಸಮಯ.


ಮನೆಯವರೊಂದಿಗೆ ಹರಟುತ್ತಾ ಕೆಳಗೇ ಇದ್ದ ವಿವೇಕ್, ’ಮೇಲೆ ಹೋದವರೆಲ್ಲಾ ಕೆಳಗೆ ಬರಲಿಲ್ಲವಲ್ಲ’ ಎಂದು ಮೇಲೆ ಬಂದರೆ ಎಲ್ಲರೂ ನಿದ್ರಾವಶ! ’ಯಪ್ಪಾ. ಏನ್ ನಿದ್ದಿ! ಏನ್ರೋ ಧಾರವಾಡ ಹೋಗೋ ವಿಚಾರ ಐತೋ ಇಲ್ಲ...’ ಎಂದು ಎಲ್ಲರನ್ನೂ ಎಬ್ಬಿಸಿದರು. ಕೆಳಗಿಳಿದು ಬಂದರೆ ಅಲ್ಲಿ ಚಹಾ ರೆಡಿ! ನಾವು ಬಂದಿದ್ದು ಚಾರಣಕ್ಕೋ? ಅಥವಾ ಶ್ರೀಪಾದರ ಮನೆಯಲ್ಲಿ ಉಪಹಾರ, ಊಟ, ಚಹಾ ಸ್ವೀಕರಿಸಲಿಕ್ಕೋ? ಊರಿನ ಹೆಸರಿನಷ್ಟೇ ಸುಂದರ ಅಲ್ಲಿನ ನೆನಪುಗಳು. ಸಮಯ ಕಳೆದಂತೆ ಉಳಿಯುವುದು ಈ ನೆನಪುಗಳು ಮಾತ್ರ ತಾನೆ?

9 ಕಾಮೆಂಟ್‌ಗಳು:

Rakesh Holla ಹೇಳಿದರು...

ಕಣಿವೆಯ ಹಾದಿ ಮತ್ತು ಭಟ್ಟರ ಆತಿತ್ಯ ನೋಡಿದರೆ ನಾನು ನಿಮ್ಮೊಂದಿಗೆ ಕೂಗಳಬಳ್ಳಿಮಠಕ್ಕೆ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸದೆ ಇರಲ್ಲ...

ಸಿಂಧು sindhu ಹೇಳಿದರು...

ಪ್ರೀತಿಯ ರಾಜೇಶ್,
ಮಂತ್ರಮುಗ್ಧ!
ಫೋಟೋ, ದಾರಿ, ನಡಿಗೆ, ಪ್ರಕೃತಿಯ ಮಡಿಲು, ಮತ್ತು ಭಟ್ಟರ ಅದರ ಆತಿಥ್ಯ ಎಲ್ಲದು ಬಲು ಚೆಂದಕ್ಕೆ ಅನುಭವಕ್ಕೆ ಬಂತು.
ನೀವು ನಿಜವಾಗಲು ಪುಣ್ಯವಂತರು.
ಅರೋಗ್ಯ ಜೋಪಾನ.

ಪ್ರೀತಿಯಿಂದ,
ಸಿಂಧು

Ashok ಹೇಳಿದರು...

nice place, hospitality and article...

Shruthikumar TD ಹೇಳಿದರು...

Thumba chennagide- Prakuruthi madillali a soundraya saviyuva suka namagu barali.

Danyavadagalu

Aravind GJ ಹೇಳಿದರು...

ವಾವ್!! ಎಂಥ ಸುಂದರವಾದ ಜಾಗ. ಅದಕ್ಕೆ ತಕ್ಕ ಆತಿಥ್ಯ!!

Srik ಹೇಳಿದರು...

Wow! Speechless!!

Teamgsquare ಹೇಳಿದರು...

Lovely place ..........

Wanderer/Alemaari ಹೇಳಿದರು...

entha sundaravada jaaga. Maanavara sahavasavillada shuddha taaNa. Yentha bandegaLu matthu avugaLa vividha akaragaLu. Intha jaaga nodi banda neevu nijavagalu punyavantharu.

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.