ಭಾನುವಾರ, ಏಪ್ರಿಲ್ 29, 2012

ಕೇದಾರೇಶ್ವರ ದೇವಾಲಯ - ನಾಗಲಾಪುರ


ಇಲ್ಲಿ ದೊರೆತಿರುವ ಕೊನೆಯ ಹೊಯ್ಸಳ ದೊರೆ ೩ನೇ ಬಲ್ಲಾಳನ ಕಾಲದ ಶಾಸನಗಳ ಪ್ರಕಾರ ನಾಗಲಾಪುರ ಒಂದು ಪ್ರಸಿದ್ಧ ಅಗ್ರಹಾರವಾಗಿದ್ದು, ಹೊಯ್ಸಳ ಕಾಲದ ಇತರ ಅಗ್ರಹಾರಗಳಂತೆ ಇಲ್ಲೂ ವಿಷ್ಣು (ಚನ್ನಕೇಶವ) ಮತ್ತು ಶಿವ (ಕೇದಾರೇಶ್ವರ) ದೇವಾಲಯಗಳ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ. ಊರಿನ ಕೆರೆಯ ತಟದ ಮೇಲೆ ದಕ್ಷಿಣಾಭಿಮುಖವಾಗಿ ಇರುವ ಕೇದಾರೇಶ್ವರ ದೇವಾಲಯವನ್ನು ಇಸವಿ ೧೨೬೦ರಲ್ಲಿ ಹೊಯ್ಸಳ ದೊರೆ ೩ನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ಶಿಥಿಲಗೊಂಡಿದ್ದ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಶ್ರಮವಹಿಸಿ ಜೀರ್ಣೋದ್ಧಾರಗೊಳಿಸಿ ಕಾಪಾಡಿಕೊಂಡಿದೆ.


ಈ ದೇವಾಲಯಕ್ಕೆ ಹೆಚ್ಚಾಗಿ ಬೀಗ ಜಡಿದಿರುತ್ತದೆ. ಜವಾಬ್ದಾರಿ ಹೊತ್ತಿರುವ ಪ್ರಾಚ್ಯ ವಸ್ತು ಇಲಾಖೆಯ ಸಿಬ್ಬಂದಿ (ಬೀಗ ಇರುವ ವ್ಯಕ್ತಿ) ಎಂದಿಗೂ ಇಲ್ಲಿರುವುದಿಲ್ಲ. ಹೆಚ್ಚಿನ ಪ್ರವಾಸಿಗರು ದೇವಾಲಯವಿರುವ ಪ್ರಾಂಗಣದ ಎತ್ತರದ ಗೇಟನ್ನು ದಾಟಲಾಗದೇ ಸುಮಾರು ೪೦ ಮೀಟರುಗಳಷ್ಟು ದೂರದಿಂದಲೇ ದೇವಾಲಯವನ್ನು ವೀಕ್ಷಿಸಿ ನಿರಾಸೆಯಿಂದ ಹಿಂತಿರುಗುತ್ತಾರೆ. ಗೇಟು ಹಾರಿ ಪ್ರಾಂಗಣದೊಳಗೆ ತೆರಳುವ ಸಾಹಸ ಮಾಡಿದರೂ ದೇವಾಲಯದೊಳಗೆ ಹೋಗಲಂತೂ ಅಸಾಧ್ಯ. ಗೇಟಿಗೂ ಬೀಗ, ದೇವಾಲಯದ ದ್ವಾರಕ್ಕೂ ಬೀಗ.


ದೇವಾಲಯ ದಿಬ್ಬವೊಂದರ ಮೇಲಿರುವುದರಿಂದ ಇಲ್ಲಿ ಜಗತಿ ಕಾಣಬರುವುದಿಲ್ಲ. ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನೊಳಗೊಂಡಿರುವ ದೇವಾಲಯ ದಕ್ಷಿಣಾಭಿಮುಖವಾಗಿದ್ದರೂ ಗರ್ಭಗುಡಿ ಪೂರ್ವಾಭಿಮುಖವಾಗಿದೆ. ಗೋಪುರ ಮತ್ತು ಮುಖಮಂಟಪ ಕಣ್ಮರೆಯಾಗಿವೆ. ಎತ್ತರದ ಪೀಠದ ಮೇಲೆ ಸಣ್ಣ ಶಿವಲಿಂಗವಿದೆ. ದೇವಾಲಯದೊಳಗೆ ಒಂದು ಕವಾಟದಲ್ಲಿದ್ದ ಚಾಮುಂಡೇಶ್ವರಿಯ ವಿಗ್ರಹ ಹಲವು ವರ್ಷಗಳ ಹಿಂದೆ ಕಳುವಾಯಿತು ಎಂದು ಈ ದೇವಾಲಯದ ಬಗ್ಗೆ ಒಂದು ಲೇಖನದಲ್ಲಿ ಓದಿದ್ದೆ.


’ಬೈಚೋಜ’ ಎಂಬ ಶಿಲ್ಪಿಯು ಇಲ್ಲಿಯ ಮೂರ್ತಿಗಳನ್ನು ಕೆತ್ತಿದ ಶಿಲ್ಪಿ ಎಂದು ನಂಬಲಾಗಿದೆ. ಗಜಾಸುರಮರ್ದನ, ತಾಂಡವೇಶ್ವರ, ಉಮಾಮಹೇಶ್ವರ, ಇತ್ಯಾದಿ ಶಿವನ ರೂಪಗಳನ್ನು ಮತ್ತು ಬ್ರಹ್ಮ, ವಿಷ್ಣು, ದುರ್ಗೆ, ಸರಸ್ವತಿ ಇತ್ಯಾದಿ ಮೂರ್ತಿಗಳನ್ನೂ ಕೆತ್ತಲಾಗಿದೆ.


ನೀರಿನಲ್ಲಿ ಮೂಡುತ್ತಿರುವ ಪ್ರತಿಬಿಂಬವನ್ನು ನೋಡಿ ಮತ್ಸ್ಯಯಂತ್ರಕ್ಕೆ ಅರ್ಜುನ ಬಾಣಬಿಡುವ ಕೆತ್ತನೆ ಮನಗೆಲ್ಲುತ್ತದೆ.


ಹೊರಗೋಡೆಯ ತಳಭಾಗದಲ್ಲಿ ಆರು ಪಟ್ಟಿಕೆಗಳಿದ್ದು ಇದರಲ್ಲಿ ನಾಲ್ಕನೇ ಪಟ್ಟಿಕೆಯಲ್ಲಿ ಯಾವುದೇ ಕೆತ್ತನೆಗಳಿಲ್ಲ. ಉಳಿದವುಗಳಲ್ಲಿ ಕ್ರಮವಾಗಿ ಆನೆ, ಅಶ್ವ, ಬಳ್ಳಿಸುರುಳಿ, ಮಕರ ಮತ್ತು ಹಂಸಗಳ ಕೆತ್ತನೆಗಳಿವೆ.


ನವರಂಗದ ಒಂದು ಪಾರ್ಶ್ವದ ಗೋಡೆ ಉರುಳಿಬಿದ್ದಿದ್ದು ಅದನ್ನು ಪುನ: ರಚಿಸಲಾಗಿದೆ. ಆ ಭಾಗವನ್ನು ಬಿಟ್ಟರೆ ದೇವಾಲಯದ ಹೊರಗೋಡೆಯಲ್ಲಿ ಅದ್ಭುತ ಶಿಲ್ಪ ಕಲಾಕೃತಿಗಳ ರಸದೌತಣ. ಶಿಲ್ಪಕಲಾ ಆಸಕ್ತರಿಗೆ ನಿರಾಸೆ ಮಾಡದ ತಾಣ.

9 ಕಾಮೆಂಟ್‌ಗಳು:

Rakesh Holla ಹೇಳಿದರು...

Beautiful and informative...!!

Ashok ಹೇಳಿದರು...

Nice article with good photos..

Suresh ಹೇಳಿದರು...

Bahala chennagide...

Srik ಹೇಳಿದರು...

Beautiful!

Aravind GJ ಹೇಳಿದರು...

ಚೆನ್ನಾಗಿದೆ!!

Arun ಹೇಳಿದರು...

Amazing.. must give a visit..

lakshmi ಹೇಳಿದರು...

please take next trip to agentha and ellora cave photos.

Mamata ಹೇಳಿದರು...

thanks thanks thanks a lot...u r a good photographer..:-) loved this...

ರಾಜೇಶ್ ನಾಯ್ಕ ಹೇಳಿದರು...

ಪ್ರತಿಕ್ರಿಯಿಸಿದ ಗೆಳೆಯರೆಲ್ಲರಿಗೂ ಧನ್ಯವಾದ.