ಶುಕ್ರವಾರ, ಫೆಬ್ರವರಿ 24, 2012

ಹೂಲಿ


ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಹೂಲಿಯನ್ನು ದೇವಸ್ಥಾನಗಳ ತೊಟ್ಟಿಲು ಎಂದೂ ಕರೆಯುತ್ತಾರೆ. ಹೂಲಿಯಲ್ಲಿ ೧೦೧ ದೇಗುಲಗಳಿದ್ದವು ಎಂದು ಹೇಳಲಾಗುತ್ತದೆ. ರಾಜ್ಯದ ಅತ್ಯಂತ ಪುರಾತನ ಸ್ಥಳಗಳಲ್ಲಿ ಹೂಲಿಯೂ ಒಂದು ಎಂದು ನಂಬಲಾಗಿದೆ. ಇಲ್ಲಿ ಇಸವಿ ೧೦೮೪ ಮತ್ತು ೧೧೮೧ರ ಶಾಸನಗಳು ದೊರೆತಿವೆ. ೧೦೮೪ರ ಶಾಸನದಲ್ಲಿ ಕಳಚೂರಿ ದೊರೆ ಬಿಜ್ಜಳ ಮತ್ತು ಆತನ ಮಗ ಅಹಮಲ್ಲದೇವನ ಹೆಸರುಗಳಿದ್ದರೆ ೧೧೮೧ರ ಶಾಸನದಲ್ಲಿ ತ್ರಿಭುವನಮಲ್ಲದೀವನ ಹೆಸರುಗಳಿವೆ. ಈ ಶಾಸನಗಳಲ್ಲಿ ಹೂಲಿಯನ್ನು ’ಪೂವಲ್ಲಿ’ ಎಂದು ಕರೆಯಲಾಗಿದ್ದು ವಿದ್ವಾಂಸರು ಮತ್ತು ಋಷಿ ಮುನಿಗಳು ವಾಸವಿದ್ದ ಸಂಪನ್ನ ಸ್ಥಳವಾಗಿತ್ತೆಂದು ಬರೆಯಲಾಗಿದೆ. ಹೂಲಿಯನ್ನು ಪೂಲಿ, ಪೂಲಿಗ್ರಾಮ, ಪೂಲಿಪುರ, ಪೂಲಿ ಅಗ್ರಹಾರ, ಮಹಾಗ್ರಹಾರ ಪೂಲಿ, ಚೂಡಾಮಣಿ ಪೂಲಿ ಎಂಬಿತ್ಯಾದಿ ಹೆಸರುಗಳಿಂದಲೂ ಕರೆಯಲಾಗಿದೆ.


ಒಂದೆಡೆ ವಿಶಾಲವಾದ ಕೆರೆ ಮತ್ತು ಮಗದೊಂದೆಡೆ ಬೆಟ್ಟಗಳ ಶ್ರೇಣಿಯ ನಡುವೆ ಭವ್ಯ ಪ್ರಾಚೀನ ದೇವಾಲಯಗಳನ್ನು ತನ್ನ ಒಡಲೊಳಗೆ ತುಂಬಿಸಿಕೊಂಡು ತಣ್ಣಗೆ ಕುಳಿತಿರುವ ಸಣ್ಣ ಹಳ್ಳಿ ಹೂಲಿ. ಎರಡು ಬೆಟ್ಟಗಳು ಸಂಧಿಸುವಲ್ಲಿ ಮಳೆಗಾಲದಲ್ಲಿ ಹಳ್ಳವೊಂದು ಹುಟ್ಟಿ ಜಲಧಾರೆಯೊಂದನ್ನು ನಿರ್ಮಿಸಿ ಕಣಿವೆಯಲ್ಲಿಳಿದು ಬಂದು ಹೂಲಿಯಲ್ಲಿರುವ ಕೆರೆಯನ್ನು ಸೇರುತ್ತದೆ. ಈ ಹಳ್ಳಕ್ಕೆ ಶಿವಕಾಶಿ ಹಳ್ಳ ಎನ್ನುತ್ತಾರೆ. ಕಣಿವೆಗೂ ಅದೇ ಹೆಸರು.


ಹೂಲಿಯಲ್ಲಿ ಎಲ್ಲೆಡೆ ಪಾಳುಬೀಳುತ್ತಿರುವ ದೇವಾಲಯಗಳು, ದೇವಾಲಯಕ್ಕೆ ಬಳಸಲಾಗಿದ್ದ ಕಲ್ಲುಗಳು ಮನೆಯ ಗೋಡೆಗಳನ್ನು ಅಲಂಕರಿಸಿರುವುದು, ವಿಶಾಲ ಕೆರೆಯಲ್ಲಿ ಅರ್ಧ ಮುಳುಗಿರುವ ಐತಿಹಾಸಿಕ ಕತೆ ಹೇಳುತ್ತಿರುವ ಕಲ್ಲಿನ ಕಂಬಗಳು, ಇದೇ ಕೆರೆಯಲ್ಲಿ ಬಟ್ಟೆ ಒಗೆಯಲು ಮಹಿಳೆಯರು ಬಳಸುವ ಕಲ್ಲುಗಳು ಎಲ್ಲವೂ ಹೂಲಿಯಲ್ಲಿ ಕಳೆದುಹೋದ ಭವ್ಯ ಇತಿಹಾಸದ ಕುರುಹುಗಳನ್ನು ನೀಡುತ್ತವೆ.


ವಿದ್ವಾಂಸರಿಂದ ಮತ್ತು ಪಂಡಿತರಿಂದ ತುಂಬಿ ತುಳುಕುತ್ತಿದ್ದ ಊರಾಗಿತ್ತು ಈ ಸ್ಥಳ. ಆಗಿನ ’ಮಹಾಗ್ರಹಾರ ಪೂಲಿ’ಯಲ್ಲಿ ಒಟ್ಟು ೧೦೦೦ಕ್ಕೂ ಅಧಿಕ ವಿದ್ವಾಂಸರು ಇದ್ದರು ಎಂದು ತಿಳಿದುಬಂದಿದೆ. ಭಾಷಾ ಪ್ರಯೋಗ, ವ್ಯಾಕರಣ ಮತ್ತು ತರ್ಕಗಳಲ್ಲಿ ಪರಿಣಿತರಾಗಿದ್ದ ಇವರೆಲ್ಲರು ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಕೂಡಾ ಹೊಂದಿದ್ದರು. ಹೂಲಿಯ ದೇವಾಲಯವೊಂದರಲ್ಲಿ ದೊರಕಿರುವ ಶಾಸನದಲ್ಲಿ ಗುರು-ಶಿಷ್ಯ ಪರಂಪರೆಯ ಬಗ್ಗೆ ವಿವರವಾದ ಉಲ್ಲೇಖವಿದೆ. ವಿದ್ಯಾಕೇಂದ್ರವಾಗಿ ಪ್ರಸಿದ್ಧಿ ಪಡೆದಿದ್ದ ಹೂಲಿಯಲ್ಲಿ ಅಂದಿನ ಕಾಲದ ಉನ್ನತ ವಿದ್ವಾಂಸರು ನೆಲೆಸಿದ್ದರು.


ಇಸವಿ ೧೬೫೦ರಲ್ಲಿ ರಾಘವಾಂಕ ಚರಿತವನ್ನು ಬರೆದ ಚಿಕ್ಕನಂಜೇಶನು ಇದೇ ಊರಿನವನಾಗಿದ್ದು, ಹೂಲಿಯನ್ನು ’ಪೂವಲಿ’ ಎಂದು ಬರೆದಿದ್ದಾನೆ. ಆಗಿನ ಕಾಲದಲ್ಲಿದ್ದ ಅಗ್ರಹಾರಗಳಲ್ಲಿ ಅಗ್ರಹಾರಗಳ ಮುಕುಟದಂತೆ ಹೂಲಿ ಇತ್ತು ಎಂದು ಚಿಕ್ಕನಂಜೇಶ ಹೇಳಿದ್ದಾನೆ.


ಹೂಲಿಯಲ್ಲಿ ಬೆಟ್ಟದ ಮೇಲೆ ೧೬೭೪ರಲ್ಲಿ ಶಿವಾಜಿಯಿಂದ ನಿರ್ಮಿಸಲ್ಪಟ್ಟಿದೆ ಎನ್ನಲಾಗುವ ಕೋಟೆಯೊಂದಿದೆ. ಪ್ರತಿ ದಿನ ಕೋಟೆಯ ಗೋಡೆಯ ಕಲ್ಲುಗಳು ವ್ಯವಸ್ಥಿತ ರೀತಿಯಲ್ಲಿ ಕಣ್ಮರೆಯಾಗುತ್ತಿವೆ. ಕೋಟೆಯ ಸಮೀಪದವರೆಗೆ ಟ್ರಾಕ್ಟರ್ ತೆರಳುವಂತೆ ಊರವರೇ ರಸ್ತೆ ಮಾಡಿಕೊಂಡಿದ್ದು ಕೋಟೆಯ ವಿನಾಶಕ್ಕೆ ತಾವೇ ಮುಂದಾಗಿದ್ದಾರೆ.


ಇಲ್ಲಿರುವ ಒಟ್ಟು ೧೫ (ಸಣ್ಣವು ದೊಡ್ಡವು ಎಲ್ಲಾ ಸೇರಿ - ಎರಡಂತೂ ತೀರಾ ಸಣ್ಣದಿವೆ) ದೇವಾಲಯಗಳಲ್ಲಿ ಕೇವಲ ಒಂದು ಮಾತ್ರ ಪ್ರಾಚ್ಯ ವಸ್ತು ಇಲಾಖೆಯ ಸುಪರ್ದಿಗೆ ಒಳಪಟ್ಟಿದೆ. ಉಳಿದ ದೇವಾಲಯಗಳು ನಿರ್ಲಕ್ಷ್ಯಕ್ಕೊಳಪಟ್ಟು ಧೂಳಿನ ಕಣಜಗಳಾಗಿ ಮಾರ್ಪಟ್ಟಿವೆ. ಒಂದೆರಡು ದೇವಾಲಯಗಳ ಒಳಗೆ ನಿಧಿಶೋಧನೆಗಾಗಿ ಅಗೆದು ಹಾಕಲಾಗಿದೆ. ಮುಳ್ಳಿನ ಗಿಡಗಳು, ಪೊದೆಗಳು ಈ ದೇವಾಲಯಗಳನ್ನು ಆವರಿಸಿಕೊಳ್ಳುತ್ತಿವೆ.


ನನ್ನ ಮೊದಲ ಭೇಟಿಯಲ್ಲಿ ಎಲ್ಲಾ ದೇವಾಲಯಗಳನ್ನು ಸಂದರ್ಶಿಸಲು ಸಾಧ್ಯವಾಗಲಿಲ್ಲ. ಸಂಸಾರ ಸಮೇತನಾಗಿ ತೆರಳಿದ್ದ ಕಾರಣ ನಾಲ್ಕು ದೇವಾಲಯಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ಲೀನಾ ಮತ್ತು ಆಕೆಯ ತಂಡವನ್ನು ಪಂಚಲಿಂಗೇಶ್ವರ ದೇವಾಲಯದ ಆವರಣದಲ್ಲೇ ಬಿಟ್ಟು ಉಳಿದ ದೇವಾಲಯಗಳನ್ನು ನೋಡಲು ತೆರಳಿದ್ದೆ. ಒಂದೊಂದೇ ದೇವಾಲಯಗಳನ್ನು ನೋಡುತ್ತಾ ಮೈಮರೆಯುತ್ತಾ ಮುಂದೆ ಮುಂದೆ ಹೋಗುತ್ತಾ ಇದ್ದೆ. ಲೀನಾಳ ಫೋನ್ ಬಂದು, ’ಎಲ್ಲಿ ಇದ್ದೀರಿ.. ಇನ್ನೆಷ್ಟು ಹೊತ್ತು..’ ಎಂದು ಆಕೆ ಗೊಣಗಿದಾಗಲೇ ನಾನು ಅವರನ್ನೆಲ್ಲಾ ಬಿಟ್ಟು ಬಂದು ಒಂದು ತಾಸಿಗೂ ಮಿಕ್ಕಿ ಸಮಯವಾಗಿತ್ತು ಎಂದು ಅರಿವಾಗಿದ್ದು!


ನಂತರ ಎರಡನೇ ಭೇಟಿಗೆ ಸಮಯಾವಕಾಶ ಆಗಿದ್ದು ೨೦ ತಿಂಗಳುಗಳ ಬಳಿಕ. ಮೊದಲನೇ ಸಲ ತೆರಳಿದಾಗ ನನಗೆ ದೇವಾಲಯಗಳನ್ನು ತೋರಿಸಿದ್ದ ವ್ಯಕ್ತಿಯೇ ಎರಡನೇ ಬಾರಿಯೂ ಜೊತೆಯಾದರು. ಪ್ರಾಚ್ಯ ವಸ್ತು ಇಲಾಖೆ ಹೂಲಿಯ ಎಲ್ಲಾ ದೇವಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಸಲುವಾಗಿ ಎಲ್ಲಾ ದೇವಾಲಯಗಳನ್ನು ಒಂದು ತಿಂಗಳ ಹಿಂದೆಯಷ್ಟೇ ಸ್ವಚ್ಛ ಮಾಡಿದೆ ಎಂದು ಅವರು ತಿಳಿಸಿದರು. ಅಂತೂ ಹೂಲಿಯ ದೇವಾಲಯಗಳು ಮುಂದಿನ ಪೀಳಿಗೆಯವರೆಗೆ ಉಳಿದುಕೊಳ್ಳಲಿವೆ ಎಂದಾಯಿತು. ಹೂಲಿಯಲ್ಲೇ ಇರುವ ಸಂಗ್ರಹಾಲಯದಲ್ಲಿ ದೊರೆತಿರುವ ಕೆಲವು ವಿಗ್ರಹಗಳನ್ನು ಮತ್ತು ಶಾಸನಗಳನ್ನು ಸಂರಕ್ಷಿಸಿ ಇಡಲಾಗಿದೆ.


ಇಲ್ಲಿನ ಕೆಲವು ದೇವಾಲಯಗಳ ಹೆಸರುಗಳ ಬಗ್ಗೆ ಗೊಂದಲವಿದ್ದವು. ಪ್ರವಾಸೋದ್ಯಮ ಇಲಾಖೆ ಮತ್ತು ಪ್ರಾಚ್ಯ ವಸ್ತು ಇಲಾಖೆಗಳಿಗೆ ದೇವಾಲಯಗಳ ಹೆಸರುಗಳು ಗೊತ್ತಿದ್ದರೂ ನಿಖರವಾಗಿ ’ಈ ದೇವಾಲಯದ ಹೆಸರು ಇದು’ ಎಂದು ಹೇಳಲು ಅಸಾಧ್ಯವಾಗಿತ್ತು. ಈ ಗೊಂದಲ ತೀರಾ ಇತ್ತೀಚಿನವರೆಗೆ ಅಂದರೆ ಎಪ್ರಿಲ್ ೨೦೧೧ರವರೆಗೂ ಇತ್ತು. ಹಳ್ಳಿಗರ ಮಾತುಗಳಲ್ಲಿ ತೇಲಾಡುತ್ತಿದ್ದ ಹೆಸರುಗಳ ಆಧಾರದ ಮೇಲೆ ದೇವಾಲಯಗಳನ್ನು ನಿರ್ದಿಷ್ಟ ಹೆಸರಿನಲ್ಲಿ ಕರೆಯಲಾಗುತ್ತಿತ್ತಾದರೂ ಮೂಲ ಹೆಸರು ಬೇರೇನೆ ಇದೆ ಎಂಬ ಅರಿವಿದ್ದ ಪ್ರಾಚ್ಯ ವಸ್ತು ಇಲಾಖೆ, ಧಾರವಾಡದ ತಜ್ಞರೊಬ್ಬರಿಗೆ (ಇವರ ಹೆಸರು ನನಗೆ ನೆನಪಿಲ್ಲ) ಇಲ್ಲಿನ ದೇವಾಲಯಗಳ ಕೂಲಂಕೂಷ ಅಧ್ಯಯನ ಮಾಡಿ ಮೂಲ ಹೆಸರುಗಳನ್ನು ಪತ್ತೆ ಹಚ್ಚುವ ಕಾರ್ಯ ವಹಿಸಿತು. ಈ ತಜ್ಞರ ಅಧ್ಯಯನದಿಂದಾಗಿ ಇಂದು ಹೂಲಿಯ ದೇವಾಲಯಗಳ ಮೂಲ ಹೆಸರು ನಮಗೆಲ್ಲರಿಗೂ ತಿಳಿಯುವಂತಾಗಿದೆ.


ತಾರಕೇಶ್ವರ, ಹರಕೇಶ್ವರ ಎಂದು ಕರೆಯಲಾಗುತ್ತಿದ್ದ ದೇವಾಲಯದ ಮೂಲ ಹೆಸರು ನೀಲಕಂಠೇಶ್ವರ.
ಮದನೇಶ್ವರ, ನಂದಿಕೇಶ್ವರ, ಕರಿಗುಡಿ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ದೇವಾಲಯದ ಮೂಲ ಹೆಸರು ತಾರಕೇಶ್ವರ.
ದಕ್ಷಿಣ ಕಾಶಿ ವಿಶ್ವೇಶ್ವರ ದೇವಾಲಯದ ಮೂಲ ಹೆಸರು ವಿಶ್ವನಾಥ ದೇವಾಲಯ.
ಕಲ್ಮೇಶ್ವರ ದೇವಾಲಯದ ಮೂಲ ಹೆಸರು ಭೀಮೇಶ್ವರ ದೇವಾಲಯ.
ರಾಮೇಶ್ವರ ಎಂದು ಕರೆಯಲ್ಪಡುವ ದೇವಾಲಯದ ಮೂಲ ಹೆಸರು ಅಗಸ್ತ್ಯೇಶ್ವರ.
ಅಗಸ್ತ್ಯೇಶ್ವರ ದೇವಾಲಯದ ಮೂಲ ಹೆಸರು ರಾಮೇಶ್ವರ.
ಈಗ ಎಲ್ಲಾ ದೇವಾಲಯಗಳ ಹೆಸರನ್ನು ಅವುಗಳ ಮೂಲ ಹೆಸರುಗಳಿಗೆ ಬದಲಾಯಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಹೂಲಿ ಗ್ರಾಮ ಪಂಚಾಯತ್ ಈ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದೆ.


ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿಯುಳ್ಳವರು ಭೇಟಿ ನೀಡಲೇಬೇಕಾದ ಸ್ಥಳ ಹೂಲಿ. ಅಂದಾಜು ಬದಾಮಿ ಚಾಲುಕ್ಯರ ಸಮಯದಲ್ಲಿ ನಿರ್ಮಿತಗೊಂಡ ಈ ದೇವಾಲಯಗಳಲ್ಲಿ ಹೊರಗೋಡೆಯಲ್ಲಿ ಶಿಲ್ಪಕಲೆಗೆ ಆದ್ಯತೆಯಿಲ್ಲ. ಆದರೆ ದ್ವಾರಗಳು, ಶಾಖೆಗಳು, ಕಲ್ಲಿನ ಕಂಬಗಳು, ಇತ್ಯಾದಿಗಳ ಕೆತ್ತನೆ ಮನಸೆಳೆಯುತ್ತದೆ. ಒಂದೇ ಹಳ್ಳಿಯಲ್ಲಿ ಏಕಕೂಟ, ದ್ವಿಕೂಟ, ತ್ರಿಕೂಟ ಮತ್ತು ಪಂಚಕೂಟ ಶೈಲಿಯ ದೇವಾಲಯಗಳನ್ನು ಕಾಣುವ ಭಾಗ್ಯ ಬೇರೆಲ್ಲಾದರೂ ಲಭ್ಯವಾದಿತೇ?

ಮಾಹಿತಿ: ಪ್ರಾಚ್ಯ ವಸ್ತು ಇಲಾಖೆ

6 ಕಾಮೆಂಟ್‌ಗಳು:

Ashok ಹೇಳಿದರು...

We saw only Panchalingeshwara Temple.. We missed other temples.. Nice place to visit..

Srik ಹೇಳಿದರು...

Abba! enthaa itihaasa! neevu namma prachya vastu tagnarigintaa bega allige hogiddeeralla!

Aravind GJ ಹೇಳಿದರು...

ವಾವ್!! ಸೊಗಸಾದ ವರ್ಣನೆ.

ನಾನು ಸಂಸಾರ ನಮೇತನಾಗಿ ಹೋದ ಕಾರಣ ಹೂಲಿಯನ್ನು ಪೂರ್ತಿ ನೋಡಲಾಗಲಿಲ್ಲ. ಇನ್ನೊಮ್ಮೆ ಹೋಗಬೇಕು.

Teamgsquare ಹೇಳಿದರು...

Very detailed post . Pictures are different from the usual .

ಸಿಂಧು sindhu ಹೇಳಿದರು...

very interesting post. nodidashte khushiyaaytu odi.

regards, sindhu

ರಾಜೇಶ್ ನಾಯ್ಕ ಹೇಳಿದರು...

ಅಶೋಕ್,
ಧನ್ಯವಾದ.

ಅನಾಮಧೇಯ,
ನೀವು ಕೇಳಿರುವುದನ್ನು ನೀವೇ ಕಂಡುಹಿಡಿಯಬೇಕು.

ಶ್ರೀಕಾಂತ್,
ಹೂಲಿಯ ಇತಿಹಾಸವೇ ಹಾಗೆ!

ಅರವಿಂದ್, ಧೀರಜ್ ಅಮೃತಾ,
ಧನ್ಯವಾದ.

ಸಿಂಧು,
ಧನ್ಯವಾದ.