ಭಾನುವಾರ, ಡಿಸೆಂಬರ್ 25, 2011

ಚಾರಣ ಚಿತ್ರ - ೧೫


ಬಯಕೆ - ಕೋರಿಕೆ - ನಂಬಿಕೆ

ಬಟ್ಟೆಯಲ್ಲಿ ತೆಂಗಿನಕಾಯಿ ಸುತ್ತಿ ಶಿರಸಂಗಿಯ ಕಾಳಿಕಾದೇವಿಗೆ ಸಮರ್ಪಿಸಿ ಬಂದರೆ ಎಲ್ಲಾ ಬಯಕೆಗಳು ಈಡೇರುವುದು ಎಂಬ ನಂಬಿಕೆ.

ಭಾನುವಾರ, ಡಿಸೆಂಬರ್ 18, 2011

ಲಕ್ಷ್ಮೀನರಸಿಂಹ ದೇವಾಲಯ - ಜಾವಗಲ್


ಅಗಾಧ ಗಾತ್ರದ ಸ್ವಾಗತ ಗೋಪುರ, ಹೋರಗೋಡೆಯಲ್ಲಿರುವ ಅದ್ಭುತ ಮತ್ತು ಅಸಂಖ್ಯಾತ ಕೆತ್ತನೆಗಳು ಮತ್ತು ೩ ಸುಂದರ ವಿಗ್ರಹಗಳು ಇವಿಷ್ಟು ಜಾವಗಲ್‍ನಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದ ವೈಶಿಷ್ಟ್ಯಗಳು. ಹಳ್ಳಿಯ ಸಂದಿಗೊಂದಿಗಳಲ್ಲಿ ಒಂದಷ್ಟು ದೂರ ಕ್ರಮಿಸಿದ ಬಳಿಕ ದೇವಾಲಯದ ಸ್ವಾಗತ ಕಮಾನು ಎದುರಾಗುತ್ತದೆ. ಇಸವಿ ೧೨೫೦ರಲ್ಲಿ ಹೊಯ್ಸಳ ದೊರೆ ವೀರ ಸೋಮೇಶ್ವರನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು.


ತ್ರಿಕೂಟ ಶೈಲಿಯ ಈ ದೇವಾಲಯ ಮುಖಮಂಟಪ, ಸುಖನಾಸಿ ಮತ್ತು ನವರಂಗಗಳನ್ನು ಹೊಂದಿದೆ. ನಾಲ್ಕು ತೋಳಿನ ನವರಂಗದ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರಿದ್ದಾರೆ. ಸುಮಾರು ಆರು ಅಡಿ ಎತ್ತರವಿದ್ದು ಸುಂದರವಾಗಿ ಕೆತ್ತಲಾಗಿರುವ ಈ ದ್ವಾರಪಾಲಕರನ್ನು ’ಗರುಡ ದ್ವಾರಪಾಲಕರು’ ಎಂದು ಕರೆಯಲಾಗುತ್ತದೆಯಂತೆ ಮತ್ತು ವಿಜಯನಗರ ಅರಸರ ಕಾಲದಲ್ಲಿ ಇವನ್ನು ಅಳವಡಿಸಲಾಗಿದೆಯೆಂದು ನಂಬಲಾಗಿದೆ. ನವರಂಗದ ದ್ವಾರದ ಮುಂದೆ ನರ್ತಕಿಯೊಬ್ಬಳು ತಲೆಯ ಮೇಲೆ ಎರಡೂ ಕೈಗಳನ್ನು ಜೋಡಿಸಿ ಸ್ವಾಗತಕೋರುವ ಭಂಗಿಯಲ್ಲಿರುವ ಕೆತ್ತನೆಯನ್ನು ನೆಲದಲ್ಲಿ ಬಿಡಿಸಲಾಗಿದೆ. ಸಾಮಾನ್ಯವಾಗಿ ಕೆಳದಿ ಅರಸರ ದೇವಾಲಯಗಳಲ್ಲಿರುವ ಈ ಶೈಲಿಯನ್ನು ಇಲ್ಲಿಯೂ ಕಂಡು ಆಶ್ಚರ್ಯವಾಯಿತು.


ದೇವಾಲಯದ ೩ ಗರ್ಭಗುಡಿಗಳಿಗೂ ಒಂದೇ ನವರಂಗವಿದೆ. ಪ್ರಮುಖ ಗರ್ಭಗುಡಿಗೆ ಮಾತ್ರ ಅಂತರಾಳವಿದೆ. ಎಲ್ಲಾ ಗರ್ಭಗುಡಿಗಳಿಗೆ ಮತ್ತು ನವರಂಗಕ್ಕೆ ಗ್ರಾನೈಟ್ ಹಾಸಲಾಗಿದೆ. ಪ್ರಮುಖ ಗರ್ಭಗುಡಿಯಲ್ಲಿ ಶ್ರೀಧರ ವಿನ್ಯಾಸದ ವಿಷ್ಣುವಿನ ವಿಗ್ರಹವಿದ್ದರೆ, ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ದೇವರ ಮೂರ್ತಿಗಳಿವೆ. ಎಲ್ಲಾ ೩ ವಿಗ್ರಹಗಳೂ ಬಹಳ ಸುಂದರವಾಗಿವೆ. ಪ್ರಮುಖ ದೇವರು ಶ್ರೀಧರನಾದರೂ ದೇವಾಲಯವನ್ನು ಲಕ್ಷ್ಮೀನರಸಿಂಹ ದೇವಾಲಯ ಎಂದೇ ಕರೆಯಲಾಗುತ್ತದೆ. ನಾವು ತೆರಳಿದಾಗ ಲಕ್ಷ್ಮೀನರಸಿಂಹನಿಗೆ ಕ್ಷೀರಾಭಿಷೇಕ ನಡೆಯುತ್ತಿತ್ತು.


ಈ ದೇವಾಲಯದ ರಚನೆ ಹಾರ್ನಹಳ್ಳಿ, ಹೊಸಹೊಳಲು, ಸೋಮನಾಥಪುರ ಮತ್ತು ನುಗ್ಗೇಹಳ್ಳಿಯ ದೇವಾಲಯಗಳನ್ನು ಹೋಲುತ್ತದೆ. ಸೋಮನಾಥಪುರ ಮತ್ತು ನುಗ್ಗೇಹಳ್ಳಿ ದೇವಾಲಯಗಳ ಶಿಲ್ಪಿ ’ಮಲ್ಲಿತಮ್ಮ’ನೇ ಈ ದೇವಾಲಯದಲ್ಲಿಯೂ ಕೆಲಸ ಮಾಡಿದ್ದಾನೆ ಎಂದು ಇತಿಹಾಸಕಾರರ ಅಭಿಪ್ರಾಯ.


 ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳನ್ನು ಅದ್ಭುತವಾಗಿ ಕೆತ್ತಲಾಗಿದೆ. ಹೊರಗೋಡೆಯ ತಳಭಾಗದಿಂದ ಒಂದರ ಮೇಲೊಂದರಂತೆ ೬ ಪಟ್ಟಿಗಳಲ್ಲಿ (ಸಾಲುಗಳಲ್ಲಿ) ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ತಳಭಾಗದಿಂದ ಮೊದಲು ಆನೆಗಳ ಸಾಲು ನಂತರ ಎರಡನೇಯದಾಗಿ ಅಶ್ವಗಳ ಸಾಲನ್ನು ಕೆತ್ತಲಾಗಿದೆ. ಮೂರನೆಯದಾಗಿ ಬಳ್ಳಿ ಸುರುಳಿಯನ್ನು ಕೆತ್ತಲಾಗಿದೆ. ನಾಲ್ಕನೇ ಸಾಲಿನಲ್ಲಿ ಪೌರಾಣಿಕ ಘಟನೆಗಳನ್ನು ಬಿಂಬಿಸುವ ಕೆತ್ತನೆಗಳಿವೆ. ಐದನೇ ಸಾಲಿನಲ್ಲಿ ಮಕರ ಹಾಗೂ ಕೊನೆಯ ಪಟ್ಟಿಯಲ್ಲಿ ಹಂಸಗಳ ಸಾಲನ್ನು ಕೆತ್ತಲಾಗಿದೆ.


ತ್ರಿಕೂಟ ಶೈಲಿಯ ದೇವಾಲಯವಾದರೂ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದೆ. ದೇವಾಲಯದ ಹೊರಗೋಡೆಯಲ್ಲಿರುವ ೧೩೭ ಶಿಲ್ಪಗಳನ್ನು ನೋಡಲು ತುಂಬಾ ಸಮಯ ಬೇಕು. ಪ್ರತಿಯೊಂದು ಕೆತ್ತನೆಯೂ ಅದ್ಭುತ, ಸುಂದರ.


ಹೊಯ್ಸಳರು ನಿರ್ಮಿಸಿದ ದೇವಾಲಯಗಳ ಬಾಹ್ಯ ಸೌಂದರ್ಯ ಚೆನ್ನಾಗಿರುತ್ತದೆ. ಎಲ್ಲಾ ಕೆತ್ತನೆಗಳನ್ನು ನೋಡುತ್ತಾ ಸಮಯ ಹೋದದ್ದೆ ಅರಿವಾಗುವುದಿಲ್ಲ.

ಬುಧವಾರ, ಡಿಸೆಂಬರ್ 14, 2011

ಕೆನ್‍ಬೆರ್ರಾದಲ್ಲಿ ರಾಹುಲ್ ದ್ರಾವಿಡ್

ಆಸ್ಟ್ರೇಲಿಯಾದ ರಾಜಧಾನಿ ಕೆನ್‍ಬೆರ್ರಾದಲ್ಲಿ ಇಂದು ನಡೆದ ವಾರ್ಷಿಕ ’ಡೊನಾಲ್ಡ್ ಬ್ರಾಡ್‍ಮನ್ ಒರೇಷನ್’ನಲ್ಲಿ ಈ ಬಾರಿ ಪ್ರಮುಖ ಭಾಷಣದ ಗೌರವ ರಾಹುಲ್ ದ್ರಾವಿಡ್‍ಗೆ. ಇಸವಿ ೨೦೦೦ದಿಂದ ಪ್ರತಿ ವರ್ಷ ನಡೆಯುವ ಈ ಸಮಾರಂಭದಲ್ಲಿ ಒಬ್ಬ ಗಣ್ಯ ಕ್ರಿಕೆಟಿಗನನ್ನು ಪ್ರಮುಖ ಭಾಷಣ ನೀಡಲು ಆಹ್ವಾನಿಸಲಾಗುತ್ತದೆ. ಆ ಗೌರವಕ್ಕೆ ಪಾತ್ರನಾದ ಮೊದಲ ವಿದೇಶಿ ಕ್ರಿಕೆಟಿಗ ಎಂಬ ಗೌರವ ಕೂಡಾ ದ್ರಾವಿಡ್ ಪಾಲಿಗೆ.

ರಾಹುಲ್ ದ್ರಾವಿಡ್‍ರನ್ನು ಮುಖ್ಯ ಭಾಷಣಕಾರನಾಗಿ ಮಾತನಾಡಲು ಆಹ್ವಾನಿಸಲಾಗಿದೆ ಎಂದು ಸುಮಾರು ಒಂದು ತಿಂಗಳ ಹಿಂದೆ ತಿಳಿದುಬಂದಾಗ, ಇದೊಂದು ಅತ್ಯುತ್ತಮ ಭಾಷಣವಾಗಲಿದೆ ಎಂದು ಅಂದೇ ಗ್ರಹಿಸಿದ್ದೆ. ಏನೇ ಮಾಡಿದರೂ ಅಲ್ಲಿ ಉತ್ಕೃಷ್ಟ ನಿರ್ವಹಣೆ ತೋರುವುದು ದ್ರಾವಿಡ್ ಹಳೇ ಚಾಳಿ. ದ್ರಾವಿಡ್ ಭಾಷಣವನ್ನು ಇಲ್ಲಿ ಓದಬಹುದು. ವಿಡಿಯೋ ಇಲ್ಲಿ ನೋಡಬಹುದು.

ಭಾನುವಾರ, ಡಿಸೆಂಬರ್ 11, 2011

ಕುಂಭಕಲ್ಲು


ಜನವರಿ ೨೦೦೪ರ ಅದೊಂದು ದಿನ ದಿನೇಶ್ ಹೊಳ್ಳ ಕರೆ ಮಾಡಿ ಕುಂಭಕಲ್ಲು ನೋಡಿ ಬರೋಣವೇ ಎಂದಾಗ ಒಪ್ಪಿಕೊಂಡೆ. ಯಮಾಹದಲ್ಲಿ ಉಡುಪಿಯಿಂದ ಹೊರಟು ಬೆಳ್ತಂಗಡಿ ತಲುಪಿದಾಗ ಹೊಳ್ಳ ಅಲ್ಲಿ ಅದಾಗಲೇ ಬಂದುಬಿಟ್ಟಿದ್ದರು. ಅಲ್ಲಿಂದ ಮುಂದೆ ಚಾರ್ಮಾಡಿಗೆ ತೆರಳಿದೆವು. ಇಲ್ಲಿಯ ಫೇಮಸ್ (?) ಗೈಡ್ ಇಸುಬು ಸ್ವಲ್ಪ ಬ್ಯುಸಿ ಇದ್ದಂತೆ ನಾಟಕವಾಡುತ್ತಿದ್ದ. ಸ್ವಲ್ಪ ಹೆಚ್ಚು ಹಣ ಕೊಡುತ್ತೇನೆಂದು ಹೊಳ್ಳರು ಹೇಳಿದಾಗ ಆಸಾಮಿ ನಮ್ಮೊಂದಿಗೆ ಬರಲು ಕೂಡಲೇ ರೆಡಿಯಾದ! ಆದರೆ ೩ ಮಂದಿ ನನ್ನ ಯಮಾಹದಲ್ಲಿ ಹೇಗೆ ತೆರಳುವುದು? ಮೊದಲು ಇಸುಬುವನ್ನು ಚಾರಣ ಆರಂಭವಾಗುವೆಡೆ (ಚಾರ್ಮಾಡಿಯಿಂದ ೧೭ ಕಿ.ಮಿ) ಇಳಿಸಿ ಹೊಳ್ಳರನ್ನು ಪಿಕ್ ಮಾಡಲು ಚಾರ್ಮಾಡಿಗೆ ಹಿಂತಿರುಗಿ ಬರುವಾಗ, ದಿನೇಶ್ ಹೊಳ್ಳ ಅದಾಗಲೇ ೭ಕಿ.ಮಿ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿಯಾಗಿತ್ತು. ಅಸಾಧಾರಣ ಮನುಷ್ಯ!


ಚಾರಣ ಆರಂಭವಾಗುವಲ್ಲಿರುವ ಮನೆಯಲ್ಲಿ ಬೈಕನ್ನಿರಿಸಿ ಕುಂಭಕಲ್ಲಿನೆಡೆ ನಡೆಯಲಾರಂಭಿಸಿದೆವು. ಸುಮಾರು ಒಂದು ತಾಸು ಎಸ್ಟೇಟಿನ ಜೀಪ್ ರಸ್ತೆಯಲ್ಲೇ ನಡೆಯಬೇಕು. ನನಗಂತೂ ಇದು ತುಂಬಾ ಕಷ್ಟ. ಸಿಕ್ಕಾಪಟ್ಟೆ ಏರು. ಜೀಪ್ ದಾರಿ ಬಿಟ್ಟು ಕಾಡಿಗೆ ಎಂಟ್ರಿ ಮಾಡುವ ಸ್ಥಳ ಬಂದಾಗ ನಾನಂತೂ ಸುಸ್ತು. ಹೊಳ್ಳ ಮತ್ತು ಇಸುಬುರಿಗೆ ನಾನು ಇನ್ನು ಮುಂದಕ್ಕೆ ಬರುವುದಿಲ್ಲವೆಂದು ತಿಳಿಸಿ, ಬೀಸುತ್ತಿದ್ದ ತಂಪು ಗಾಳಿಗೆ ಮೈಯೊಡ್ಡಿ, ನೆರಳಲ್ಲಿ ಎರಡು ಸಣ್ಣ ಬಂಡೆಗಳ ನಡುವೆ ಮಲಗಿಬಿಟ್ಟೆ. ಸರಿಯಾಗಿ ಒಂದು ತಾಸಿನ ನಂತರ ಎಚ್ಚರವಾಯಿತು. ನಂತರ ಟೈಮ್ ಪಾಸ್ ಮಾಡುವುದು ಕಷ್ಟವಾದಾಗ, ಹಾಗೇ ಕೆಳಗಿಳಿದು ಬೈಕ್ ಇಟ್ಟಲ್ಲಿ ಬಂದು ಅವರಿಬ್ಬರಿಗಾಗಿ ಕಾದುಕುಳಿತೆ.


ಈ ಪೈಲಟ್ ಟ್ರೆಕ್‍ನ ಸುಮಾರು ಎರಡು ವರ್ಷದ ಬಳಿಕ ಡಿಸೆಂಬರ್ ೨೫, ೨೦೦೫ರಂದು ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮವನ್ನು ದಿನೇಶ್ ಹೊಳ್ಳರು ಇದೇ ಕುಂಭಕಲ್ಲಿಗೆ ಆಯೋಜಿಸಿದರು. ಮತ್ತದೇ ದಾರಿ. ಹಿಂದಿನ ಬಾರಿ ನಿದ್ರೆ ಮಾಡಿದ್ದ ಸ್ಥಳ ತಲುಪಿದಾಗ ಮತ್ತೆ ಸುಸ್ತು. ಮತ್ತೆ ಇಲ್ಲೇ ಮಲಗೋಣವೇ ಎಂಬ ವಿಚಾರ ಬಂದರೂ ಹೇಗೋ ಮಾಡಿ ಅಲ್ಲಿಂದ ಮುನ್ನಡೆದೆ. ಕಾಡಿನ ನಡುವೆ ಕಾಲುದಾರಿ. ಮುಂದೆ ಒಂದು ಹಳ್ಳ. ಇಲ್ಲಿ ದಣಿವಾರಿಸಿದ ನಂತರ ದಾರಿಯೇ ಇಲ್ಲದಲ್ಲಿ ಎಲ್ಲೋ ಮೇಲೇರಬೇಕು. ಸ್ವಲ್ಪ ಸಮಯದ ಬಳಿಕ ಕಾಡು ಅಂತ್ಯ ಕಂಡು ಓಪನ್ ಜಾಗ. ಆದರೂ ಕುಂಭಕಲ್ಲಿನ ತುದಿ ಮೆಟ್ಟಬೇಕಾದರೆ ಇನ್ನೆರಡು ಸಣ್ಣ ಬೆಟ್ಟಗಳನ್ನು ದಾಟಬೇಕಾಗಿತ್ತು. ಅದಾಗಲೇ ನಮ್ಮ ಗುಂಪಿನ ಒಂದಿಬ್ಬರು ಕುಂಭಕಲ್ಲಿನ ತುದಿ ತಲುಪಿ ಅಲ್ಲಿ ಚುಕ್ಕಿಗಳಂತೆ ಕಾಣುತ್ತಿದ್ದರು!


ಆಳೆತ್ತರ ಬೆಳೆದ ಹುಲ್ಲುಗಳ ನಡುವೆ ದಾರಿ ಮಾಡಿಕೊಂಡು, ಭಾರವೆನಿಸತೊಡಗಿದ್ದ ಜೀವವನ್ನು ಎಳೆಯುತ್ತಾ ಹೇಗೋ ಮುನ್ನಡೆದೆ. ಬೆಟ್ಟವನ್ನೇರುವುದು ನನಗೆಂದು ಇಷ್ಟ ಇಲ್ಲ. ಆದರೆ ಬೆಟ್ಟದ ತುದಿಯಿಂದ ಕಾಣುವ ದೃಶ್ಯಕ್ಕಾಗಿ ಮನಸು ಹಾತೊರೆಯುತ್ತಿರುತ್ತದೆ. ಆದ್ದರಿಂದ ಮನಸ್ಸಿನ ಸುಖಕ್ಕಾಗಿ ದೇಹವನ್ನು ದಂಡಿಸುವುದು. ಯಾವಾಗಲೂ ಜೋಕ್ಸ್ ಮಾಡುವ ರಮೇಶ್ ಕಾಮತ್ ಇಂದು ಮಂಕಾಗಿದ್ದರು. ಇನ್ನೇನು ಕುಂಭಕಲ್ಲಿನ ತುದಿ ಸ್ವಲ್ಪವೇ ದೂರದಲ್ಲಿರುವಾಗ ’ಅಬ್ಬಾ, ಏನೋ ಆಗ್ತಿದೆ, ಎದೆ ನೋಯುತ್ತಿದೆ, ಡಾಕ್ಟ್ರೇ (ಚಾರಣಿಗ ವಿಜೇಶ್) ಇಲ್ಲಿ ಬನ್ನಿ, ಏನೋ ಸರಿಯಿಲ್ಲ’ ಎನ್ನುತ್ತಾ ಅಲ್ಲಿದ್ದ ಬಂಡೆಗೆ ಒರಗಿ ಕೂತುಬಿಟ್ಟರು. ವಿಜೇಶ್ ಏನೋ ಮಾಡಿ ಒಂದೆರಡು ಮಾತ್ರೆ ನೀಡಿದ ಬಳಿಕ ಕಾಮತರಿಗೆ ಸ್ವಲ್ಪ ನಿರಾಳವೆನಿಸಿತು.


ಚಾರ್ಮಾಡಿ ಶ್ರೇಣಿಯ ಸೂಪರ್ ಸ್ಟಾರುಗಳಾದ ಎತ್ತಿನಭುಜ, ಅಮೇದಿಕಲ್ಲು ಮತ್ತು ಮಿಂಚುಕಲ್ಲುಗಳ ಮುಂದೆ ಕುಂಭಕಲ್ಲು ಕುಬ್ಜನಾದರೂ ಇವೆಲ್ಲದರ ನಡುವೆ ಇರುವುದರಿಂದ ಸುತ್ತಲೂ ಅಮೋಘ ದೃಶ್ಯಾವಳಿ. ಆದರೆ ಕುಂಭಕಲ್ಲಿನ ಕೆಳಗೆನೇ ಎಸ್ಟೇಟುಗಳ ಅವ್ಯಾಹತ ಹಾವಳಿ. ಕಾಡು ಮರೆಯಾಗಿದೆ. ಮರೆಯಾಗುತ್ತಿದೆ.