ಭಾನುವಾರ, ಅಕ್ಟೋಬರ್ 02, 2011

ಸವೆದ ಹಾದಿ...


ಇಂದಿಗೆ ಸರಿಯಾಗಿ ಏಳು ವರ್ಷಗಳ (ಅಕ್ಟೋಬರ್ ೩, ೨೦೦೪) ಹಿಂದೆ ತೆಗೆದ ಚಿತ್ರವಿದು. ಗೆಳೆಯ ಲಕ್ಷ್ಮೀನಾರಾಯಣ(ಪುತ್ತು), ಮಧುಕರ್ ಕಳಸ್ ಮತ್ತು ನಾನು ದೇವಕಾರ್ ಜಲಧಾರೆಯ ಸಮೀಪ ತೆಗೆಸಿಕೊಂಡ ಚಿತ್ರ. ಲುಂಗಿಯಲ್ಲಿ ನಾನು ಕೈಗೊಂಡ ಮೊದಲ ಮತ್ತು ಕೊನೆಯ ಚಾರಣ! ಅಂಗಿ ಕೂಡಾ ಧರಿಸದೇ ಕೈಗೊಂಡ ಮೊದಲ ಮತ್ತು ಕೊನೆಯ ಚಾರಣವೂ ಹೌದು. ಅವರಿಬ್ಬರು ಸ್ವಲ್ಪವೂ ಬೆವರಿಲ್ಲ. ಆದರೆ ನಾನು ಬೆವರಿನಲ್ಲಿ ತೊಯ್ದುಹೋಗಿದ್ದೆ. ತುಂಬಾ ತುಂಬಾ ನೆನಪು ಬರುವ ಪ್ರಯಾಣ ಮತ್ತು ಚಾರಣವಿದು. ಮಧುಕರ್ ಈಗ ದೇವಕಾರ್ ಬಿಟ್ಟು ಸಮೀಪದ ಕಳಚೆಗೆ ಸ್ಥಳಾಂತರಗೊಂಡಿದ್ದಾರೆ. ಪುತ್ತು, ಶಾಶ್ವತವಾಗಿ ಹಳದೀಪುರ ಬಿಟ್ಟು ಗೋವಾಗೆ ತೆರಳಿ ಎರಡು ವರ್ಷಗಳೇ ಕಳೆದವು. ನಾನು ಉಡುಪಿಯಲ್ಲೇ ಇದ್ದರೂ ದೇವಕಾರಿಗೆ ಕೊನೆಯ ಭೇಟಿ ನೀಡಿ ನಾಲ್ಕು ವರ್ಷಗಳಾದವು. ಆದರೂ ಈ ಸ್ಥಳದ ಗುಂಗು ನನ್ನನ್ನು ಬಿಟ್ಟು ತೆರಳಿಲ್ಲ. ಇಂದು (ಅಕ್ಟೋಬರ್ ೨) ದೇವಕಾರಿಗೆ ಮೊದಲ ಭೇಟಿ ನೀಡಿ ಸರಿಯಾಗಿ ಏಳು ವರ್ಷಗಳಾದವು. ಹಾಗೇನೇ ನಿನ್ನೆ (ಅಕ್ಟೋಬರ್ ೧) ’ಅಲೆಮಾರಿಯ ಅನುಭವಗಳು’ ಐದು ವರ್ಷಗಳನ್ನು ಪೂರ್ಣಗೊಳಿಸಿತು. ಈ ಪರಿ ಬರೆದು ರಾಶಿ ಹಾಕಲಿರುವೆನೆಂದು ಕಲ್ಪಿಸಿರಲಿಲ್ಲ. ಎಷ್ಟೇ ಕೆಟ್ಟದಾಗಿ ಬರೆದರೂ ಓದಿ ಪ್ರೋತ್ಸಾಹಿಸಿದ ತಮಗೆಲ್ಲರಿಗೂ ಧನ್ಯವಾದಗಳು.