ಭಾನುವಾರ, ಮೇ 29, 2011

ಲಕ್ಷ್ಮೀನರಸಿಂಹ ದೇವಾಲಯ - ವಿಘ್ನಸಂತೆ


ವಿಘ್ನಸಂತೆಯ ಲಕ್ಷ್ಮೀ ನರಸಿಂಹ ದೇವಾಲಯದ ಅರ್ಚಕ ವಾಸವಿರುವುದು ೩ ಕಿಮಿ ದೂರವಿರುವ ಇನ್ನೊಂದು ಹಳ್ಳಿಯಲ್ಲಿ. ಅಲ್ಲಿ ವಿಚಾರಿಸಿದಾಗ ಅವರು ಕೆಲವೊಂದು ದಿನಗಳ ಮಟ್ಟಿಗೆ ಎಲ್ಲೋ ತೆರಳಿರುವುದಾಗಿ ತಿಳಿದುಬಂತು. ಬೀಗದಕೈ ಬಗ್ಗೆ ವಿಚಾರಿಸಿದರೆ ಯಾರಿಗೂ ಏನೂ ಗೊತ್ತಿಲ್ಲ. ಅದಾಗಲೇ ಸಮಯ ಸಂಜೆ ೬.೧೫ ಆಗಿತ್ತು. ಇನ್ನು ಸಮಯ ವ್ಯರ್ಥ ಮಾಡುವುದು ಬೇಡವೆಂದು ವಿಘ್ನಸಂತೆಯತ್ತ ತೆರಳಿದೆ.


ಸಣ್ಣ ದಿಬ್ಬದ ಮೇಲೆ ಸ್ಥಿಥಗೊಂಡಿರುವ ಈ ತ್ರಿಕೂಟ ದೇವಾಲಯವನ್ನು ಹೊಯ್ಸಳರು ಇಸವಿ ೧೨೮೬ರಲ್ಲಿ ನಿರ್ಮಿಸಿದ್ದಾರೆ. ದೇವಾಲಯದ ಹೊರಗೋಡೆಯಲ್ಲಿ ಪ್ರತಿ ಕಲ್ಲಿನ ಕಂಬಗಳ ನಡುವೆ ಕಮಲವೊಂದನ್ನು ಕೆತ್ತಲಾಗಿದ್ದು ಬಿಟ್ಟರೆ ಬೇರೆ ಯಾವ ಭಿತ್ತಿಚಿತ್ರಗಳೂ ಇಲ್ಲ. ಪ್ರಮುಖ ಗರ್ಭಗುಡಿಯ ಮೇಲಿನ ಗೋಪುರ ಮಾತ್ರ ಉಳಿದುಕೊಂಡಿದೆ. ಗೋಪುರವನ್ನು ಮೂರು ತಾಳಗಳಲ್ಲಿ ನಿರ್ಮಿಸಲಾಗಿದ್ದು ಮೇಲೊಂದು ಪದ್ಮವನ್ನಿರಿಸಿ ಅದರ ಮೇಲೆ ಕಲಶವನ್ನಿರಿಸಲಾಗಿದೆ.


ದೇವಾಲಯದ ಮೇಲ್ಛಾವಣಿಯ ಸುತ್ತಲೂ ಕೆತ್ತನೆಯಿದೆ. ಇವಕ್ಕೆ ’ಕೈಪಿಡಿ’ ಎನ್ನಲಾಗುತ್ತದೆ. ಹೆಚ್ಚಿನ ಹೊಯ್ಸಳ ದೇವಾಲಯಗಳಲ್ಲಿ ಕೈಪಿಡಿಯಿದ್ದು ಅವುಗಳ ಕೆತ್ತನೆಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. ಕೈಪಿಡಿ ಇದ್ದರೆ ದೇವಾಲಯಕ್ಕೊಂದು ಮುಕುಟವಿದ್ದಂತೆ ಎಂದು ನಂಬಲಾಗುತ್ತದೆ.


ಗೋಪುರದ ಮೂರು ಬದಿಯಲ್ಲಿ (ಮುಂಭಾಗ ಹೊರತುಪಡಿಸಿ) ಸಣ್ಣ ಸಣ್ಣ ಕಲಾತ್ಮಕ ಕೆತ್ತನೆಗಳಿವೆ. ಮೇಲ್ನೋಟಕ್ಕೆ ಎಲ್ಲಾ ಬದಿಯಲ್ಲೂ ಒಂದೇ ತರಹದ ಕೆತ್ತನೆಗಳಿವೆ ಎಂದೆನಿಸಿದರೂ ಸೂಕ್ಷ್ಮವಾಗಿ ಪ್ರಮುಖ ಕೆತ್ತನೆಗಳನ್ನು ಗಮನಿಸಿದರೆ ಎಲ್ಲೂ ಪುನರಾವರ್ತನೆ ಕಂಡುಬರುವುದಿಲ್ಲ. ಅಷ್ಟೆತ್ತರದಲ್ಲಿರುವ ಈ ಕೆತ್ತನೆಗಳನ್ನು ಸರಿಯಾಗಿ ನೋಡುವುದು ಅಸಾಧ್ಯ. ಚೆನ್ನಾದ ಕ್ಯಾಮರಾ ಇದ್ದರೆ ಉತ್ತಮ ಚಿತ್ರಗಳನ್ನು ತೆಗೆಯಬಹುದು.


ದೇವಾಲಯವಿರುವ ದಿಬ್ಬಕ್ಕಿರುವ ನಾಲ್ಕಾರು ಮೆಟ್ಟಿಲುಗಳನ್ನೇರಿದ ಕೂಡಲೇ ಸ್ವಾಗತ ನೀಡುವುವು ಕುಳಿತುಕೊಂಡ ಭಂಗಿಯಲ್ಲಿರುವ ಎರಡು ಆನೆಗಳು. ಅದೇಕೋ ಈ ಕಲ್ಲಿನ ಆನೆಗಳು ಬಹಳ ಮುದ್ದಾಗಿ ಕಂಡವು.


ಅಪರೂಪದ ಮತ್ತು ಸರಳ ವಿನ್ಯಾಸದ ಎರಡು ಕಂಬಗಳ ಹೊರಚಾಚು ಮುಖಮಂಟಪವನ್ನು ದೇವಾಲಯವು ಹೊಂದಿದೆ. ಮುಖಮಂಟಪದ ಮೇಲ್ಛಾವಣಿಯ ಒಳಮೇಲ್ಮೈಯಲ್ಲಿ ಕಲಾತ್ಮಕ ಕೆತ್ತನೆಯನ್ನು ಕಾಣಬಹುದು. ದೇವಾಲಯದ ಪ್ರಮುಖ ದ್ವಾರವು ಐದು ತೋಳುಗಳನ್ನು ಹೊಂದಿದೆ.


ಈ ದೇವಾಲಯದಲ್ಲಿ ೩ ವಿಶೇಷತೆಗಳಿವೆ. ಪ್ರಮುಖ ದ್ವಾರದ ಮೇಲ್ಭಾಗದಲ್ಲಿ ಎಲ್ಲೆಡೆ ಇರುವಂತೆ ಗಜಲಕ್ಷ್ಮೀಯ ಕೆತ್ತನೆಯಿರದೆ ವೇಣುಗೋಪಾಲನ ಸುಂದರ ಕೆತ್ತನೆಯಿದೆ. ಇಕ್ಕೆಲಗಳಲ್ಲಿ ಗೊಲ್ಲರು, ಗೋಪಿಕಾ ಸ್ತ್ರೀಯರು ಮತ್ತು ಹಸುಗಳು ವೇಣುಗೋಪಾಲನಿಗೆ ನಮಸ್ಕರಿಸುವ ದೃಶ್ಯದ ಕೆತ್ತನೆಯಿದೆ.


ಎರಡನೇ ವಿಶೇಷತೆಯೇನೆಂದರೆ ದೇವಾಲಯದ ಪ್ರಾಮುಖ ದ್ವಾರದ ನೇರ ಮೇಲಕ್ಕೆ ಛಾವಣಿಯಲ್ಲಿರುವ ಕೈಪಿಡಿಯಲ್ಲಿ ನಾಟ್ಯಗಣಪತಿಯ ಸುಂದರ ಕೆತ್ತನೆಯಿದೆ. ನಾಟ್ಯಗಣೇಶನೂ ಆಗಿದ್ದು ಬಲಮುರಿಯೂ ಆಗಿರುವುದು ಇನ್ನೂ ವಿಶೇಷ. ಮೂರನೆಯದಾಗಿ ದೇವಾಲಯದ ಒಳಗಿರುವ ಲಕ್ಷ್ಮೀನರಸಿಂಹ ವಿಗ್ರಹ. ಲಕ್ಷ್ಮೀಯು ನರಸಿಂಹನ ತೊಡೆಯ ಮೇಲೆ ಆಸೀನಳಾಗಿದ್ದು, ಆಕೆಯ ಪಾದ ಕಮಲವೊಂದರ ಮೇಲಿದೆ. ಪಾದದ ಭಾರವನ್ನು ತಾಳುವಂತೆ ಕಮಲಕ್ಕೆ ಆನೆಯೊಂದು ತನ್ನ ಸೊಂಡಿಲನ್ನು ಆಧಾರವಾಗಿ ನೀಡಿರುವ ಸುಂದರ ಕೆತ್ತನೆ (ಈ ಮಾಹಿತಿ ಕೆಳಗೆ ನೀಡಿರುವ ಕೊಂಡಿಯಲ್ಲಿ ದೊರಕಿತು. ದೇವಾಲಯಕ್ಕೆ ಬೀಗ ಹಾಕಲಾಗಿದ್ದರಿಂದ ನನಗೆ ಈ ಸುಂದರ ಮೂರ್ತಿಯನ್ನು ನೋಡಲಾಗಲಿಲ್ಲ).


ದೇವಾಲಯದ ಒಳಭಾಗದ ರಚನೆಯನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದಾದಂತಹ ಸರಳ ವಿನ್ಯಾಸ ಈ ದೇವಾಲಯದ್ದು. ಎಲ್ಲಾ ಗರ್ಭಗುಡಿಗಳಿಗೂ ಸಾಮಾನ್ಯ ನವರಂಗವಿದ್ದು ಅಂತರಾಳ ಇದ್ದಂತೆ ಅನಿಸುವುದಿಲ್ಲ. ದೇವಾಲಯದ ಪ್ರಮುಖ ಗರ್ಭಗುಡಿಯಲ್ಲಿ ಚನ್ನಕೇಶವನ ವಿಗ್ರಹವಿದ್ದು, ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ ಮತ್ತು ಲಕ್ಷ್ಮೀನರಸಿಂಹ ಮೂರ್ತಿಗಳಿವೆ.

ಮಾಹಿತಿ: ಇಲ್ಲಿಂದ ಮತ್ತು ಇಲ್ಲಿಂದ

ಭಾನುವಾರ, ಮೇ 22, 2011

ವೈಶಿಷ್ಟ್ಯಮಯ ಜಲಧಾರೆಗೆ ಚಾರಣ


ಕಾರವಾರದಲ್ಲಿ ಒಬ್ಬ ಹಿರಿಯ ಚಾರಣಿಗರಿದ್ದಾರೆ. ಕಳೆದ ೧೦ ವರ್ಷಗಳಿಂದಲೂ ವಿವಿಧ ದಿನ/ವಾರಪತ್ರಿಕೆಗಳಲ್ಲಿ ಇವರ ಲೇಖನಗಳನ್ನು ಓದುತ್ತಿದ್ದೇನೆ. ಈ ಹಿರಿಯರು ಬರೆದ ಲೇಖನಗಳಿಂದಲೇ ಕೆಲವು ಜಲಧಾರೆಗಳ ಪರಿಚಯ ನನಗಾಗಿದ್ದು.


ಕಳೆದ ವರ್ಷ ಜುಲಾಯಿ ತಿಂಗಳ ಅದೊಂದು ಶನಿವಾರ ರಾಕೇಶ ಹೊಳ್ಳ ಮನೆಗೆ ಬಂದಿದ್ದರು. ಸಂಗ್ರಹದಲ್ಲಿದ್ದ ಎಲ್ಲಾ ಲೇಖನಗಳನ್ನು ಜಾಲಾಡುತ್ತಿರುವಾಗ ಹಾಗೇ ಮಡಿಚಿ ಇಟ್ಟುಬಿಟ್ಟಿದ್ದ ಕಾಗದದ ಚೂರನ್ನು ತೆರೆದೆ. ಅದು ಜಲಧಾರೆಯೊಂದರ ಬಗ್ಗೆ ಆ ಹಿರಿಯರು ಬರೆದಿದ್ದ ಲೇಖನವಾಗಿತ್ತು. ೧೦-೧೫ ಅಡಿ ಎತ್ತರದ ಜಲಧಾರೆಯ ಚಿತ್ರವೊಂದಿತ್ತು ಮತ್ತು ’ಅದ್ಭುತ’, ’ಮನಮೋಹಕ’, ’ರುದ್ರ ರಮಣೀಯ’ ಎಂದು ಜಲಧಾರೆಯನ್ನು ಹೊಗಳಲಾಗಿತ್ತು. ಲೇಖನದಲ್ಲಿದ್ದ ಚಿತ್ರದಲ್ಲಿ ಅದ್ಭುತವೇನಿದೆ? ಮನಮೋಹಕವೇನಿದೆ? ರುದ್ರ ರಮಣೀಯವೇನಿದೆ? ಎಂದು ನಾವಿಬ್ಬರೂ ಎಲ್ಲಾ ಕೋನಗಳಲ್ಲಿ ಚಿತ್ರವನ್ನು ನೋಡುತ್ತಾ ಅವರನ್ನು ಗೇಲಿ ಮಾಡಿದೆವು. ಆದರೂ ಬೇರೇನೂ ಪ್ಲ್ಯಾನ್ ಇಲ್ಲವಾದ್ದರಿಂದ ಅಲ್ಲಿಗೇ ಹೋಗಿ ಬರೋಣ ಎಂದು ನಿರ್ಧರಿಸಿದೆವು.


ಜಲಧಾರೆ ಇರುವ ಊರಿನಲ್ಲಿ ಗದ್ದೆಯಲ್ಲೊಂದಷ್ಟು ಮಂದಿ ಕೆಲಸ ಮಾಡುತ್ತಿದ್ದರು. ಅವರಲ್ಲೊಬ್ಬ, ’ಅಲ್ಲಿಗೆ ಹೋದ್ರೆ ನೀವು ವಾಪಸ್ ಬರುದಿಲ್ರೀ’! ಎಂದು ಹೆದರಿಸಿಯೇಬಿಟ್ಟ. ಚಕಿತಗೊಂಡ ನಾನು ’ಯಾಕೆ’ ಎಂದು ಕೇಳಿದರೆ, ’ಕಾಡುಪ್ರಾಣಿಗಳು ತುಂಬಾ ಇವೆ’ ಎಂದ. ಅವನ ಮಾತು ಕೇಳಿ ಜೋರಾಗಿ ನಕ್ಕುಬಿಟ್ಟೆ. ನನ್ನ ನಗುವಿನಲ್ಲಿದ್ದ ಕುಹಕವನ್ನು ಅರಿತ ಆತನೊಂದಿಗಿದ್ದ ಇತರರು ಆತನೆಡೆಗೆ ನಕ್ಕರು. ಮುಜುಗರಗೊಂಡ ಆತ ಕೂಡಲೇ ಮಾತನ್ನು ಬದಲಾಯಿಸಿ ’ವಿಪರೀತ ಇಂಬ್ಳ ಕಾಟ, ಒಂದೊಂದು ಕಾಲ್ಗೆ ೩೦-೫೦ ಹತ್ಕೊಳ್ತವೆ’ ಎಂದ.


ಕೇವಲ ೧೫ ವರ್ಷಗಳ ಮೊದಲು ಹೇರಳ ಮತ್ತು ವೈವಿಧ್ಯಮಯ ವನ್ಯಜೀವಿಗಳ ನೆಲೆಯಾಗಿದ್ದ ಈ ಭಾಗದಲ್ಲಿ ಈಗ ಕೆಲವು ಹಂದಿಗಳು ಮಾತ್ರ ಉಳಿದುಕೊಂಡಿವೆ. ಹೊರಗಿನಿಂದ ಬಂದು ನೆಲೆಸಿರುವ ಜನರು ಕಾಡನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಾಶಪಡಿಸಿ ಗದ್ದೆ, ತೋಟ ಮಾಡಿಕೊಂಡಿದ್ದಾರೆ. ೨೦ ವರ್ಷಗಳ ಮೊದಲು ನಾಲ್ಕು ಮನೆಗಳಿದ್ದು, ದಟ್ಟ ಮತ್ತು ದುರ್ಗಮ ಕಾಡಿನ ನಡುವೆ ಇದ್ದ ಸ್ಥಳ ಇಂದು ಊರಾಗಿದ್ದು ೭೧ ಮನೆಗಳಿವೆ. ಅತ್ಯುತ್ತಮ ರಸ್ತೆಯಿದೆ, ಶಾಲೆಯಿದೆ, ಬಸ್ಸು ಸೌಕರ್ಯವಿದೆ, ಸೇತುವೆಗಳ ನಿರ್ಮಾಣ ನಡೆಯುತ್ತಿದೆ. ಇಪ್ಪತ್ತು ವರ್ಷಗಳ ಮೊದಲು ಮುಖ್ಯ ಊರಿನಿಂದ ಕಾಡಿನ ಅಂಚಿಗೆ ಬರಲು ೧೫ಕಿಮಿ ಕ್ರಮಿಸಿದರೆ ಸಾಕಿತ್ತು. ಇಂದು ಅದೇ ಕಾಡು ವೈಮಾನಿಕ ಅಂತರ ಲೆಕ್ಕ ಹಾಕಿದರೆ ೫-೬ ಕಿಮಿ ಹಿಂದೆ ಸರಿದಿದೆ. ಈಗ ಮುಖ್ಯ ಊರಿನಿಂದ ಕಾಡಿನಂಚಿಗೆ ಬರಲು ೨೩ಕಿಮಿ ಕ್ರಮಿಸಬೇಕು! ನನ್ನ ಮಕ್ಳು ಇದ್ದ ಎಲ್ಲಾ ಪ್ರಾಣಿಗಳನ್ನು ಹೊಡೆದು ತಿಂದು ಮುಗಿಸಿಬಿಟ್ಟಿದ್ದಾರೆ, ಆದರೂ ಮತ್ತೆ ’ಕಾಡುಪ್ರಾಣಿಗಳು’ ಎಂದು ನಮ್ಮನ್ನು ಹೆದರಿಸುವುದು ಬೇರೆ.


ದಾರಿಯಲ್ಲಿ ಸಿಕ್ಕ ಮನೆಯೊಂದರಲ್ಲಿ ದಾರಿ ಕೇಳಲು ನಿಂತಾಗ ಸಜೇಶ್ ಎಂಬ ಯುವಕ ಎದುರಾದ. ಆತನಿಗೆ ನಮ್ಮೊಂದಿಗೆ ಬರಲು ವಿನಂತಿಸಿದಾಗ ಆತನಿಗೆ ಮನಸ್ಸಿದ್ದರೂ ’ಮನೆಯಲ್ಲಿ ತುಂಬಾ ಕೆಲಸವಿದೆ, ಅದನ್ನು ಮೊದ್ಲು ಮಾಡು’ ಎಂದು ಆತನ ಅಮ್ಮ ಗದರಿಸಿದರು. ಆದರೂ ಸ್ವಲ್ಪ ದೂರದವರೆಗೆ ಬಂದು ದಾರಿ ತೋರಿಸಿ ಹಿಂತಿರುಗಿದ.


ಜಲಧಾರೆಯಿಂದ ಕಾಲುವೆಯೊಂದರ ಮೂಲಕ ನೀರನ್ನು ಹಳ್ಳಿಗರು ತಮ್ಮ ತಮ್ಮ ಜಾಗಕ್ಕೆ ಹರಿದುಬರುವ ಹಾಗೆ ಮಾಡಿಕೊಂಡಿದ್ದಾರೆ. ಈ ಕಿರಿದಾದ ಕಾಲುವೆಗುಂಟ ನಡೆದರೆ ನೇರವಾಗಿ ಜಲಧಾರೆಯಿರುವಲ್ಲಿ ತಲುಪುತ್ತೀರಿ ಎಂದು ಸಜೇಶ್ ಹೇಳಿದ್ದರು. ಸುಮಾರು ೬೦ ನಿಮಿಷ ಕಿರಿದಾದ ಕಾಲುವೆಗುಂಟ ನಡೆದ ಬಳಿಕ ಜಲಧಾರೆ ನಿರ್ಮಿಸುವ ಹಳ್ಳವನ್ನು ತಲುಪಿದೆವು.


ಮುಂದೆ ಇದ್ದ ಬಂಡೆಗಳ ಬೃಹತ್ ರಾಶಿ ಎಲ್ಲವನ್ನೂ ಮರೆಮಾಚಿತ್ತು. ಬಲಕ್ಕೆ ಬೆಟ್ಟದ ಕಡಿದಾದ ಇಳಿಜಾರಿನಲ್ಲಿ ದಟ್ಟ ಕಾಡು. ಎಡಕ್ಕೆ ಮತ್ತಷ್ಟು ಆಳಕ್ಕೆ ಭೋರ್ಗರೆಯುತ್ತ ಹರಿಯುತ್ತಿರುವ ಹಳ್ಳ. ಜಲಧಾರೆ ಎಲ್ಲಿ ಎಂದು ಹುಡುಕಾಡುತ್ತಾ ಲೇಖನದಲ್ಲಿ ಬಳಸಿದ ಪದಪುಂಜಗಳನ್ನು ನೆನಪಿಸಿಕೊಂಡು ನಕ್ಕೆವು.


ರಾಕೇಶ್ ಮತ್ತು ಅನಿಲ್ ಆ ಬಂಡೆಗಳ ರಾಶಿಯನ್ನು ಎಚ್ಚರಿಕೆಯಿಂದ ಮೇಲೇರಿದರು. ನಿಧಾನವಾಗಿ ಪ್ರತಿ ಹೆಜ್ಜೆಯನ್ನು ನಾಲ್ಕಾರು ಬಾರಿ ರಿಹರ್ಸಲ್ ಮಾಡುತ್ತಾ ನಾನೂ ಮೇಲೇರಿದೆ. ಏನೋ ದೊಡ್ಡ ಸಾಹಸ ಮಾಡಿದಂತಾಯಿತು. ನನ್ನನ್ನು ಮೇಲಕ್ಕೆಳೆದುಕೊಂಡ ಬಳಿಕ ಅವರಿಬ್ಬರೂ ಮುನ್ನಡೆದರು. ನಾನೂ ಸ್ವಲ್ಪ ಸಾವರಿಸಿಕೊಂಡು ಎರಡು ಹೆಜ್ಜೆ ಇಟ್ಟೆನಷ್ಟೇ ಜಾರಿ ಬಿದ್ದುಬಿಟ್ಟೆ. ಮುನ್ನಡೆದಿದ್ದ ಅವರಿಬ್ಬರಿಗೂ ಮಳೆ ಮತ್ತು ನೀರಿನ ಸದ್ದಿನಲ್ಲಿ ನಾನು ಬಿದ್ದದ್ದು ಗೊತ್ತಾಗಲೇ ಇಲ್ಲ. ನನ್ನ ಅದೃಷ್ಟ ಚೆನ್ನಾಗಿತ್ತು. ಏನೂ ಆಗದೆ ಪಾರಾದೆ. ಇದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುವೆ.


ಅಲ್ಲೇ ಸ್ವಲ್ಪ ಮುಂದೆ ಕಾಣುತ್ತಿತ್ತು ಲೇಖನದಲ್ಲಿದ್ದ ೧೦-೧೫ ಅಡಿ ಎತ್ತರದ ಜಲಧಾರೆ. ಈ ಸಣ್ಣ ಜಲಧಾರೆಯ ಸುತ್ತ ಮುತ್ತ ಮತ್ತು ಮೇಲೆಲ್ಲಾ ಕಾಡು ಬಹಳ ದಟ್ಟವಾಗಿದ್ದು, ಅದರ ಹಿಂದಿನ ನೋಟವನ್ನು ಮರೆಮಾಚಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ದೊಡ್ಡ ಜಲಧಾರೆಯೊಂದು ಸುಮಾರು ೧೦೦ ಅಡಿಗಳಷ್ಟು ಎತ್ತರದಿಂದ ಬೀಳುತ್ತಿರುವ ಅಸ್ಪಷ್ಟ ನೋಟ! ಈಗ ಕಾರವಾರದ ಹಿರಿಯರ ಬಗ್ಗೆ ಮತ್ತವರ ಲೇಖನದ ಬಗ್ಗೆ ಗೇಲಿ ಮಾಡಿದ್ದೆಲ್ಲಾ ನೆನಪಾಗಿ ಒಂದೆಡೆ ಮುಜುಗರವಾಗತೊಡಗಿದರೆ ಇನ್ನೊಂದೆಡೆ ಸಣ್ಣ ಜಲಧಾರೆಯಿರಬಹುದು ಎಂದು ನಿರೀಕ್ಷಿಸಿ, ಭರ್ಜರಿ ಜಲಧಾರೆ ನೋಡಲು ಸಿಕ್ಕಿದ ಆನಂದ.


ಈ ಜಲಧಾರೆ ತನ್ನ ಪೂರ್ಣ ನೋಟ ಸುಲಭದಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ನಾವು ಹಳ್ಳವನ್ನು ದಾಟುವ ಮೊದಲು ಅಸ್ಪಷ್ಟವಾಗಿ ಗೋಚರಿಸುತ್ತಿದ್ದ ಜಲಧಾರೆ ಹಳ್ಳ ದಾಟಿದ ಬಳಿಕ ಕಾಣಿಸುತ್ತಿರಲಿಲ್ಲ! ಮತ್ತೊಂದಷ್ಟು ಬಂಡೆಗಳ ರಾಶಿ ಜಲಧಾರೆಯನ್ನು ಮರೆಮಾಚಿತ್ತು. ಆದರೆ ಇಲ್ಲೇಕೋ ಮುಂದುವರಿಯುವುದು ಬೇಡ ಎಂದು ನನಗನಿಸತೊಡಗಿತು. ಅದೆಷ್ಟೇ ಪ್ರಯತ್ನಿಸಿದರೂ ಆ ತೊಡಕನ್ನು ದಾಟಲು ಸುಲಭ ದಾರಿ ಸಿಗುತ್ತಿರಲಿಲ್ಲ. ರಾಕೇಶ್ ಮತ್ತು ಅನಿಲ್ ಅದಾಗಲೇ ಏನೋ ಸರ್ಕಸ್ ಮಾಡಿ ಮೇಲೇರಿದ್ದರು. ಜಲಧಾರೆ ಅದ್ಭುತವಾಗಿದೆ ಎಂದು ಅವರು ಕೈಸನ್ನೆ ಮಾಡುತ್ತಿರಬೇಕಾದರೆ ನನಗೆ ಪೀಕಲಾಟ. ಮೊದಲು ಸಿಕ್ಕಿದ್ದ ಬಂಡೆಗಳ ರಾಶಿಯ ಬಳಿ ಭಾರಿ ಅನಾಹುತದಿಂದ ಕೂದಲೆಳೆಯಷ್ಟು ಅಂತರದಿಂದ ಪಾರಾಗಿದ್ದೆ. ಕೊನೆಗೂ ಮುಂದುವರಿಯುವುದು ಬೇಡ ಎಂದು ನಿರ್ಧರಿಸಿದೆ. ’ಎಂತ ನೀವು’ ಎಂದು ನಕ್ಕ ರಾಕೇಶ್ ಕೆಳಗಿಳಿದು ಬಂದು, ತನ್ನ ತೊಡೆಯ ಮೇಲೆ ಕಾಲನ್ನು ಇಟ್ಟು ಮೇಲಕ್ಕೇರುವಂತೆ ಹೇಳಿದರು. ಅಲ್ಲಿಂದ ಅನಿಲ್, ನನ್ನ ಎರಡೂ ಕೈಗಳನ್ನು ಹಿಡಿದು ಮೇಲಕ್ಕೆ ಎಳೆದರು.


ಪ್ರಕೃತಿ ಏನನ್ನೆಲ್ಲಾ ತನ್ನ ಒಡಲಲ್ಲಿ ಅಡಗಿಸಿಟ್ಟುಕೊಂಡಿದೆ! ಜಲಧಾರೆಯ ಈ ನೂತನ ವಿನ್ಯಾಸ ಬಹಳ ಮೆಚ್ಚುಗೆಯಾಯಿತು. ಈ ಜಲಧಾರೆಯ ನೋಟ ವಿಶಿಷ್ಟವಾಗಿದೆ. ಸುಮಾರು ೧೫೦ ಅಡಿ ಎತ್ತರದಿಂದ ಬೀಳುವ ಜಲಧಾರೆ ಮೊದಲು ೩ ಕವಲುಗಳಲ್ಲಿ ನಂತರ ೨ ಕವಲುಗಳಲ್ಲಿ ಮತ್ತು ಅಂತಿಮವಾಗಿ ಒಂದೇ ಕವಲಿನಲ್ಲಿ ಬೀಳುತ್ತದೆ.


ಜಲಧಾರೆಯ ಅಂದದ ಬಗ್ಗೆ ಚಿತ್ರಗಳೇ ಎಲ್ಲವನ್ನೂ ಹೇಳುತ್ತವೆ. ಸುತ್ತಲೂ ಇರುವ ಕಾಡು, ’ತಾನೂ ಇದ್ದೇನೆ’ ಎಂದು ಹೇಳುವಂತೆ ಸ್ವಲ್ಪ ಮಾತ್ರ ಕಾಣುತ್ತಿದ್ದ ಅಂಬರ, ಸುತ್ತಲಿನ ಮರಗಿಡಗಳ ಮೇಲೆ ಸಿಂಚನಗೊಳ್ಳುತ್ತಿದ್ದ ಜಲಧಾರೆಯ ನೀರಿನ ಹನಿಗಳು, ಆಗಾಗ ಮೋಡಗಳ ಮರೆಯಿಂದ ಹೊರಬರುತ್ತಿದ್ದ ನೇಸರ, ಹನಿಹನಿಯಾಗಿ ಬೀಳುತ್ತಿದ್ದ ಹದವಾದ ಮಳೆ ಇವೆಲ್ಲಾ ಜಲಧಾರೆಯ ಅಂದಕ್ಕೆ ಇನ್ನಷ್ಟು ಮೆರುಗು ನೀಡಿದ್ದವು.


ಸುಮಾರು ಅರ್ಧಗಂಟೆ ಅಲ್ಲೇ ಕುಳಿತಿದ್ದ ನಾವು ಜಲಧಾರೆಯ ಅಪ್ರತಿಮ ನೋಟವನ್ನು ಹೊಗಳುತ್ತಾ ಇದ್ದೆವು. ಆ ಹಿರಿಯರು ಬಳಸಿದ ಶಬ್ದಗಳು ಮತ್ತು ಬಣ್ಣಿಸಿದ ರೀತಿ ಎಲ್ಲವೂ ಈಗ ನಮಗೆ ಅರ್ಥಗರ್ಭೀತವಾಗಿ ಕಾಣತೊಡಗಿದವು.


ಮರುದಿನ ಕಾರವಾರದ ಹಿರಿಯರ ದೂರವಾಣಿ ನಂಬರ್ ಹುಡುಕಿ ತೆಗೆದು ಅವರಿಗೆ ಕರೆ ಮಾಡಿ ಪರಿಚಯ ಮಾಡಿಸಿಕೊಂಡೆ. ಈ ಜಲಧಾರೆಯ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿ ಒಂದಷ್ಟು ಸಮಯ ಮಾತನಾಡಿದೆ. ಆಗ ಅವರು ಹೇಳಿದ ಜಲಧಾರೆಗಳ ಲಿಸ್ಟು ಕೇಳಿಯೇ ದಂಗಾದೆ. ಒಂದಷ್ಟು ಜಲಧಾರೆಗಳನ್ನು ನೋಡಿ ನಾನು ಬೀಗುತ್ತಿರಬೇಕಾದರೆ ಈ ಹಿರಿಯರು ಯಾರಿಗೂ ಗೊತ್ತಿರದ ಸುಮಾರಷ್ಟು ಜಲಧಾರೆಗಳನ್ನು ಹುಡುಕಿ ತೆಗೆದಿದ್ದಾರೆ. ಕೆಲವು ಹೊಸ ಜಲಧಾರೆಗಳ ಮಾಹಿತಿ ಅವರಿಂದ ದೊರಕಿತು. ಈಗ ಮಳೆ ಆರಂಭವಾಗಲಿ. ಅವರ ಮನೆಯ ದೂರವಾಣಿ ಮತ್ತೆ ರಿಂಗಿಣಿಸಲಿದೆ.

ಭಾನುವಾರ, ಮೇ 15, 2011

ಹಾರ್ನಹಳ್ಳಿಯ ಚನ್ನಕೇಶವ ಮತ್ತು ಸೋಮೇಶ್ವರ


ಹಾರ್ನಹಳ್ಳಿ ೧೮೮೨ರವರೆಗೆ ಒಂದು ತಾಲೂಕು ಕೇಂದ್ರವಾಗಿತ್ತು. ಅರಸೀಕೆರೆ ತಾಲೂಕು ರಚನೆಯಾದ ಬಳಿಕ ಅದರೊಂದಿಗೆ ಹಾರ್ನಹಳ್ಳಿ ವಿಲೀನವಾಯಿತು. ಹಿಂದೆ ಈ ಗ್ರಾಮವನ್ನು ಲಕ್ಷ್ಮೀನರಸಿಂಹಪುರವೆಂದೂ ನಂತರ ಹಿರಿಯ ಸೋಮನಾಥಪುರವೆಂದೂ ನಂತರ ಹಾರುವನಹಳ್ಳಿಯೆಂದೂ ಕರೆಯಲಾಗುತ್ತಿತ್ತು. ಊರಿನ ನಟ್ಟನಡುವೆ ಹಾದುಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಸಮಾನ ಅಂತರಗಳಲ್ಲಿ ಕೇಶವ ದೇವಾಲಯ ಮತ್ತು ಸೋಮೇಶ್ವರ ದೇವಾಲಯಗಳಿವೆ. ಎರಡೂ ದೇವಾಲಯಗಳನ್ನು ೧೩ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.


ಪೂರ್ವಾಭಿಮುಖವಾಗಿರುವ ಕೇಶವ ದೇವಾಲಯವನ್ನು ಇಸವಿ ೧೨೩೪ ರಲ್ಲಿ ನಿಜೇಶ್ವರ ಭಟ್ಟ, ಸಂಕಣ್ಣ ಮತ್ತು ಗೋಪಣ್ಣ ಎಂಬ ಮೂವರು ಸಹೋದರರು ತಮ್ಮ ತಂದೆಯ ಸ್ಮರಣಾರ್ಥ ಮಲ್ಲಿತಮ್ಮ ಎಂಬ ಶಿಲ್ಪಿಯಿಂದ ನಿರ್ಮಿಸಿದರು. ಈ ಮಲ್ಲಿತಮ್ಮನೇ ನಂತರ ಸೋಮನಾಥಪುರ, ನುಗ್ಗೇಹಳ್ಳಿ ಮತ್ತು ಹೊಸಹೊಳಲು ದೇವಾಲಯಗಳಲ್ಲಿಯೂ ಕೆಲಸ ಮಾಡಿದ್ದನೆಂದು ನಂಬಲಾಗಿದೆ. ಪ್ರಧಾನ ಗರ್ಭಗುಡಿಯಲ್ಲಿ ಚನ್ನಕೇಶವ ದೇವರ ಮೂರ್ತಿಯಿದ್ದು, ಉಳಿದೆರಡರಲ್ಲಿ ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ ಮೂರ್ತಿಗಳಿವೆ. ತ್ರಿಕೂಟ ಶೈಲಿಯ ದೇವಸ್ಥಾನದ ಪ್ರಧಾನ ಗರ್ಭಗುಡಿಯ ಮೇಲ್ಭಾಗದಲ್ಲಿ ಆಕರ್ಷಕ ಗೋಪುರವಿದೆ.


ಶಾಸನಗಳಲ್ಲಿ ಈ ದೇವಾಲಯವನ್ನು ನರಸಿಂಹ ದೇವಾಲಯವೆಂದು ಕರೆಯಲಾಗಿದೆ. ದೇವಾಲಯ ನಿರ್ಮಿಸಿದ ೩ ಸಹೋದರರು ಪ್ರತಿಷ್ಠಾಪಿಸಿದ್ದು ಲಕ್ಷ್ಮೀನರಸಿಂಹ ದೇವರ ಮೂರ್ತಿಯನ್ನಾಗಿದ್ದರಿಂದ ಶಾಸನಗಳಲ್ಲಿ ಹಾಗೆ ಹೇಳಿದ್ದಿರಬಹುದು. ಮುಖಮಂಟಪ, ಸುಖನಾಸಿ ಮತ್ತು ನಾಲ್ಕು ಕಂಬಗಳ ನವರಂಗವನ್ನು ದೇವಾಲಯ ಹೊಂದಿದೆ. ನವರಂಗದ ಛಾವಣಿಯಲ್ಲೂ ಸುಂದರ ಕೆತ್ತನೆಗಳಿವೆ. ಸುಖನಾಸಿಯಲ್ಲಿ ಒಂದು ಪಾರ್ಶ್ವದಲ್ಲಿ ೩೦ ಮೂಲೆಗಳ ಕಂಬ ಮತ್ತು ಇನ್ನೊಂದು ಪಾರ್ಶ್ವದಲ್ಲಿ ೬೦ ಮೂಲೆಗಳ ಕಂಬವಿದೆ. ಇಲ್ಲಿ ದಿನಾಲೂ ಪೂಜೆ ನಡೆಯುತ್ತದೆ. ನವರಾತ್ರಿ, ವೈಕುಂಠ ಏಕಾದಶಿ ಮತ್ತು ಶ್ರಾವಣ ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.


ದೇವಾಲಯದ ಹೊರಗೋಡೆಯಲ್ಲಿ ಭಿತ್ತಿಚಿತ್ರಗಳನ್ನು ಅದ್ಭುತವಾಗಿ ಮತ್ತು ಒತ್ತೊತ್ತಾಗಿ ಕೆತ್ತಲಾಗಿದೆ. ಹೊರಗೋಡೆಯ ತಳಭಾಗದಿಂದ ಒಂದರ ಮೇಲೊಂದರಂತೆ ೬ ಪಟ್ಟಿಗಳಲ್ಲಿ (ಸಾಲುಗಳಲ್ಲಿ) ವಿವಿಧ ಕೆತ್ತನೆಗಳನ್ನು ಮಾಡಲಾಗಿದೆ. ತಳಭಾಗದಲ್ಲಿ ಮೊದಲು ಆನೆಗಳ ಸಾಲನ್ನು ನಂತರ ಅಶ್ವಗಳ ಸಾಲನ್ನು ಕೆತ್ತಲಾಗಿದೆ. ಮೂರನೆಯದಾಗಿ ಬಳ್ಳಿ ಸುರುಳಿಯನ್ನು ಕೆತ್ತಲಾಗಿದೆ. ನಾಲ್ಕನೇ ಸಾಲನಲ್ಲಿ ಯಾವುದೇ ಕೆತ್ತನೆಗಳಿಲ್ಲ. ಐದನೇ ಸಾಲಿನಲ್ಲಿ ಮಕರ ಹಾಗೂ ಕೊನೆಯ ಪಟ್ಟಿಯಲ್ಲಿ ಹಂಸಗಳ ಸಾಲನ್ನು ಕೆತ್ತಲಾಗಿದೆ.


ಈ ಆರು ಪಟ್ಟಿಗಳ ಮೆಲೆ ಭಿತ್ತಿಚಿತ್ರಗಳನ್ನು ಕೆತ್ತಲಾಗಿದೆ. ಈ ಕೆತ್ತನೆಗಳಿಗೆ ಮಾರುಹೋಗದಿರಲು ಅಸಾಧ್ಯ. ಇಲ್ಲಿ ೧೪೦ ಕೆತ್ತನೆಗಳಿದ್ದು ಪ್ರತಿಯೊಂದು ಸುಮಾರು ೨-೩ ಅಡಿ ಎತ್ತರವಿವೆ. ಬಲಮುರಿ ಗಣೇಶನ ಕೆತ್ತನೆಯಂತೂ ಅದ್ಭುತವಾಗಿದೆ.


ಉಳಿದ ಪ್ರಮುಖ ಕೆತ್ತನೆಗಳು - ಕಾಳಿಂಗಮರ್ದನ, ರತಿ ಮನ್ಮಥ, ಬ್ರಹ್ಮ, ಮಹಿಷಾಸುರಮರ್ದಿನಿ, ವಾಮನ, ಹರಿಹರ, ದುರ್ಗಾ, ಭೈರವ, ದಕ್ಷಿಣಾಮೂರ್ತಿ, ಹಿರಣ್ಯಕಷಿಪು, ಆರು ಕೈಗಳ ವೀಣಾ ಸರಸ್ವತಿ, ಬಲರಾಮ, ಪರಶುರಾಮ, ಇತ್ಯಾದಿ.


ಸೋಮೇಶ್ವರ ದೇವಾಲಯ ದಕ್ಷಿಣಾಭಿಮುಖವಾಗಿದೆ. ಮುಖಮಂಟಪದ ಮೇಲೆ ನಂದಿಯ ಮೂರ್ತಿಯನ್ನು ಕೂರಿಸಿರುವುದು ವಿಶೇಷ. ಚನ್ನಕೇಶವ ದೇವಾಲಯದಲ್ಲಿ ೩ ಗರ್ಭಗುಡಿಗಳು ಮತ್ತು ಒಂದೇ ದ್ವಾರವಿದ್ದರೆ, ಇಲ್ಲಿ ಒಂದೇ ಗರ್ಭಗುಡಿ ಮತ್ತು ೩ ದ್ವಾರಗಳಿವೆ. ಗರ್ಭಗುಡಿಯಲ್ಲಿ ಸೋಮೇಶ್ವರ ಹೆಸರಿನ ಶಿವಲಿಂಗವಿದ್ದು ಮೇಲ್ಭಾಗದಲ್ಲಿ ಕಲಶವಿರುವ ಗೋಪುರವಿದೆ. ದೇವಾಲಯಕ್ಕೆ ಬೀಗ ಹಾಕಿದ್ದರಿಂದ ನಮಗೆ ಒಳಗೆ ತೆರಳಲಾಗಲಿಲ್ಲ.


ಹೊರಗೋಡೆಯಲ್ಲಿರುವ ಕೆತ್ತನೆಗಳ ರಚನೆ ಮತ್ತು ತಳಭಾಗದಲ್ಲಿರುವ ಪಟ್ಟಿಗಳ ರಚನೆ ಎಲ್ಲವೂ ಚನ್ನಕೇಶವ ದೇವಾಲಯವನ್ನೇ ಹೋಲುತ್ತದೆ. ಆದರೆ ಇಲ್ಲಿ ಕೆತ್ತನೆಗಳ ಕಾರ್ಯ ಅಪೂರ್ಣವಾಗಿದೆ. ಹೊರಗೋಡೆಯಲ್ಲಿ ತಳಭಾಗದಿಂದ ೬ ಪಟ್ಟಿಗಳೇನೋ ಇವೆ. ಆದರೆ ಇವುಗಳ ಮೇಲಿನ ಕೆತ್ತನೆ ಕೆಲಸ ಕೆಲವೊಂದೆಡೆ ಮಾತ್ರ ಇದೆ. ಇಲ್ಲೂ ಮೊದಲ ಸಾಲಿನಲ್ಲಿ ಆನೆಗಳು ಮತ್ತು ಎರಡನೇ ಸಾಲಿನಲ್ಲಿ ಅಶ್ವಗಳಿವೆ. ಆದರೆ ನಂತರದ ಸಾಲುಗಳಲ್ಲಿ ಕೆಲವೆಡೆ ಮಾತ್ರ ಕೆತ್ತನೆಗಳಿವೆ.


ಹೊರಗೋಡೆಯಲ್ಲಿ ಭಿತ್ತಿಚಿತ್ರಗಳಿವೆ. ಆದರೆ ದೇವಾಲಯದ ಸುತ್ತಲೂ ಎಲ್ಲೆಡೆಯಲ್ಲೂ ಕೆತ್ತಲಾಗಿಲ್ಲ. ಇಲ್ಲಿರುವ ಪ್ರಮುಖ ಕೆತ್ತನೆಗಳು - ಭೈರವ, ದುರ್ಗಾ, ಲಕ್ಷ್ಮೀ, ತ್ರಿವಿಕ್ರಮ, ಹರಿಹರ, ಮೋಹಿನಿ, ತಾಂಡವ ಗಣೇಶ, ಮಹಿಷಾಸುರಮರ್ದಿನಿ, ವೇಣುಗೋಪಾಲ, ನೃತ್ಯ ಭಂಗಿಯಲ್ಲಿರುವ ಶಿವ, ಕಾಳಿಂಗಮರ್ದನ, ಇತ್ಯಾದಿ.


ಹಾರ್ನಹಳ್ಳಿಯಲ್ಲೊಂದು ವಿಶಾಲವಾದ ಸುಂದರ ಕೆರೆ ಇದೆ. ೧೧ನೇ ಶತಮಾನದಲ್ಲಿ ಹೊಯ್ಸಳ ದೊರೆ ಸೋಮೇಶ್ವರನು ತನ್ನ ಮಗಳು ನಾಗರತಿಯ ಹೆಸರಿನಲ್ಲಿ ಕಟ್ಟಿರುವ ಪುರಾತನ ಕೆರೆ ಇದು. ಈಗಲೂ ಈ ಕೆರೆಯನ್ನು ’ನಾಗರ್ತಿ ಕೆರೆ’ಯೆಂದೇ ಕರೆಯಲಾಗುತ್ತದೆ.


ಸೋಮೇಶ್ವರನು ಇಲ್ಲಿ ಕೋಟೆಯೊಂದನ್ನೂ ನಿರ್ಮಿಸಿದ್ದಾನೆ. ಊರಿನಲ್ಲಿ ಕೋಟೆಯ ಅವಶೇಷಗಳನ್ನು ಕಾಣಬಹುದು ಎನ್ನಲಾಗುತ್ತದೆಯಾದರೂ ನನಗಂತೂ ಎಲ್ಲೂ ಕಾಣಬರಲಿಲ್ಲ. ಊರಿನ ಹೊರಗೆ ಎಲ್ಲಾದರೂ ಇರಬಹುದು.

ಮಾಹಿತಿ: ಐ.ಸೇಸುನಾಥನ್, ಬಿ.ಆರ್.ಸತ್ಯನಾರಾಯಣ ಮತ್ತು ನಾಗೇಂದ್ರ ಹಾರ್ನಹಳ್ಳಿ

ಭಾನುವಾರ, ಮೇ 08, 2011

ಶಬರಿ ಕೊಳ್ಳ - ಸುರೇಬಾನ


ಇದು ನನಗೆ ತುಂಬಾ ನಿರಾಸೆಯುಂಟುಮಾಡಿದ ಸ್ಥಳ. ಕಣಿವೆಯ ನೋಟ ಸುಂದರವಾಗಿದ್ದರೂ ಸ್ಥಳದಲ್ಲಿ ಗಲೀಜು ಹೆಚ್ಚೇ ಇತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಇಲ್ಲಿದ್ದ ಜಲಧಾರೆ ಈಗ ಶಾಶ್ವತವಾಗಿ ಕಣ್ಮರೆಯಾಗಿದೆ ಎಂಬುದನ್ನು ಕೇಳಿ ಬಹಳ ಖೇದವಾಯಿತು. ಈ ಜಲಧಾರೆಯನ್ನು ನೋಡಲೆಂದೇ ಶಬರಿ ಕೊಳ್ಳಕ್ಕೆ ಬಂದರೆ ಅದು ದರ್ಶನ ನೀಡದೆ ಈಗ ೩ನೇ ವರ್ಷ ಎಂದು ಕೇಳಿ ಬಹಳ ನಿರಾಸೆಯಾಯಿತು.


ಕಣಿವೆ ತುಂಬಾ ವೃಕ್ಷಗಳೇ ತುಂಬಿಹೋಗಿವೆ. ಎಲ್ಲಾ ಉತ್ತಮ ಜಾತಿಯ ವೃಕ್ಷಗಳು. ವೃಕ್ಷಗಳ ತುಂಬಾ ಪಕ್ಷಿಗಳು. ಪಕ್ಷಿಗಳ ಕಲರವ ಕಿವಿಗಳಿಗೆ ಇಂಪಾದ ಅನುಭವವನ್ನು ನೀಡಿತು. ಎರಡೂ ಕಡೆಯಿಂದ ಮೇಲಕ್ಕೆ ಹಬ್ಬಿರುವ ಬೆಟ್ಟಗಳು. ಎರಡೂ ಬೆಟ್ಟಗಳು ಸಂಧಿಸುವ ಸ್ಥಳದಲ್ಲಿ ಇದ್ದ ಜಲಧಾರೆ ಮಾಯ. ಶಬರಿಯ ಮಂದಿರದ ಪಕ್ಕದಲ್ಲೇ ಎರಡು ನೀರಿನ ಹೊಂಡಗಳು. ಅಲ್ಲೇ ಶಬರಿ ರಾಮನಿಗೆ ನೀಡಿದ್ದ ಬೋರೆ ಹಣ್ಣುಗಳ ಮರ.


ಶ್ರೀರಾಮನ ದರ್ಶನಕ್ಕಾಗಿ ಶಬರಿ ಕಾದು ನಿಂತಿದ್ದು, ಆತ ಬಂದಾಗ ಬಟ್ಟಲು ತುಂಬಾ ಇದ್ದ ಬೋರೆ ಹಣ್ಣುಗಳಲ್ಲಿ ಸಿಹಿಯಾದುದು ಯಾವುದೆಂದು ತಾನೇ ತಿಂದು ಪರೀಕ್ಷಿಸಿ ಆ ಹಣ್ಣನ್ನು ಮಾತ್ರ ಶ್ರೀರಾಮನಿಗೆ ನೀಡಿದಳು. ರಾಮನು ಆಕೆಯ ಭಕ್ತಿಯನ್ನು ಮೆಚ್ಚಿ ವರ ಕೇಳು ಎಂದಾಗ, ಆಕೆ ರಾಮನ ತೊಡೆಯ ಮೇಲೆ ಶಿರವನ್ನಿಟ್ಟು ಅಲ್ಲೇ ಕೊನೆಯುಸಿರೆಳೆಯಲು ಇಚ್ಛಿಸಿದಾಗ ಆಕೆಗೆ ನೀರು ಬೇಕಿತ್ತು. ರಾಮ ಕುಳಿತಲ್ಲಿಂದಲೇ ಬಾಣ ಬಿಟ್ಟು ನೀರು ಪುಟಿದ ಸ್ಥಳವನ್ನು ಈಗ ಎಣ್ಣೆಹೊಂಡ ಎನ್ನಲಾಗುತ್ತದೆ. ಈ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲ ಮತ್ತು ಇದನ್ನು ಪವಿತ್ರ ತೀರ್ಥವೆಂದು ಇಲ್ಲಿಗೆ ಬರುವ ಭಕ್ತಾದಿಗಳು ಭಾವಿಸುತ್ತಾರೆ. ಆದರೆ ಈ ಹೊಂಡ ತುಂಬಾ ಗಲೀಜಾಗಿತ್ತು. ಅದನ್ನು ಸ್ವಚ್ಛ ಮಾಡದೇ ಅದೆಷ್ಟು ವರ್ಷಗಳಾದವೋ.


ಇಲ್ಲಿರುವ ಬೋರೆ ಹಣ್ಣಿನ ಮರದ ಎಲ್ಲಾ ಹಣ್ಣುಗಳನ್ನು ಲೀನಾ ಮತ್ತು ಆಕೆಯ ತಂಡ ಪೂರ್ತಿಯಾಗಿ ಖಾಲಿಮಾಡಿತು. ಸರಿಯಾಗಿ ಹಣ್ಣಾದ ಮೇಲೆ ತಿಂದರೆ ಅದ್ಭುತ ರುಚಿಯಿರುತ್ತೆ ಎನ್ನುತ್ತಾ ಇನ್ನೂ ಪಕ್ವವಾಗದ ಹಣ್ಣುಗಳನ್ನು ಕೂಡಾ ಚೀಲದಲ್ಲಿ ತುಂಬಿಸಿಕೊಂಡರು. ಪುಕ್ಕಟೆ ಸಿಕ್ಕಿದರೆ ಬಾಚುವ ನಮ್ಮ ಚಾಳಿ ಕಂಡು ಸೋಜಿಗವೆನಿಸಿತು!


ಶಬರಿಯ ದೇಗುಲ ಬಹಳ ವಿಶಾಲ ಮುಖಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿಯ ಮೂರ್ತಿಯು ಸಣ್ಣ ಆಕಾರದಾಗಿದ್ದು, ಹಸಿರು ಬಣ್ಣದ ಸೀರೆಯನ್ನು ತೊಡಿಸಲಾಗಿತ್ತು. ಈ ಸೀರೆಯಲ್ಲಿ ಶಬರಿ ಬಹಳ ಆಕರ್ಷಕವಾಗಿ ಕಾಣುತ್ತಿದ್ದಳು. ಅಲ್ಲೇ ಸಮೀಪದಲ್ಲಿ ರಾಮನ ಭೇಟಿಯ ನೆನಪಿಗಾಗಿ ಸಣ್ಣ ರಾಮ ದೇವಾಲಯವನ್ನೂ ನಿರ್ಮಿಸಲಾಗಿದೆ.

ಮಾಹಿತಿ: ವಿವೇಕ್ ಯೇರಿ