ಗುರುವಾರ, ಸೆಪ್ಟೆಂಬರ್ 23, 2010

ಚಂದ್ರಮೌಳೇಶ್ವರ ದೇವಾಲಯ - ಅರಸೀಕೆರೆ


ಅರಸೀಕೆರೆಯ ಚಂದ್ರಮೌಳೇಶ್ವರ ದೇವಾಲಯ ತನ್ನ ವಿಶಿಷ್ಟವಾದ ಮುಖಮಂಟಪದಿಂದ ಪ್ರಸಿದ್ಧಿಯನ್ನು ಪಡೆದಿದೆ. ಹೊಯ್ಸಳ ದೇವಾಲಯಗಳೆಲ್ಲೂ ಈ ಶೈಲಿಯ ಮುಖಮಂಟಪ ಕಾಣಬರುವುದಿಲ್ಲ. ಇಸವಿ ೧೨೨೦ರಲ್ಲಿ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಪೂರ್ವಾಭಿಮುಖವಾಗಿರುವ ಈ ದೇವಾಲಯ ನಿರ್ಮಾಣಗೊಂಡಿದೆ. ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ದೊರೆ ತನ್ನ ಅರಸಿಯ ಹೆಸರಿನಲ್ಲಿ ಇಲ್ಲಿ ಬೃಹತ್ ಕೆರೆಯೊಂದನ್ನು ನಿರ್ಮಿಸಿದ್ದರಿಂದ ಈ ಊರಿಗೆ ಅರಸೀಕೆರೆ ಎಂಬ ಹೆಸರು ಬಂದಿದೆ. ಶಾಸನಗಳಲ್ಲಿ ಅರಸೀಕೆರೆಯನ್ನು ’ಸರ್ವಜ್ಞ ವಿಜಯ’ ಮತ್ತು ’ಬಲ್ಲಾಳಪುರ’ ಎಂದು ಕರೆಯಲಾಗಿದೆ.


ನಕ್ಷತ್ರಾಕರದ ವಿನ್ಯಾಸದಿಂದ ಕೂಡಿರುವ ಮುಖಮಂಟಪದಲ್ಲಿ ಕುಳಿತುಕೊಂಡು ಟೈಮ್ ಪಾಸ್ ಮಾಡುವುದೇ ಒಂದು ಸಂತೋಷದ ಅನುಭವ. ಸುತ್ತಲೂ ಇರುವ ಕಲ್ಲಿನ ಆಸನಗಳನ್ನು ಆನೆಗಳು ಹೊತ್ತಿರುವಂತೆ ವಿನ್ಯಾಸಗೊಳಿಸಲಾಗಿದೆ. ಈ ದೇವಾಲಯವನ್ನು ’ಶಿವಾಲಯ’ವೆಂದೂ ಕರೆಯುತ್ತಾರೆ.


ಈ ಏಕಕೂಟ ದೇವಾಲಯದ ಗೋಪುರವನ್ನು ೫ ತಾಳಗಳಲ್ಲಿ ನಿರ್ಮಿಸಲಾಗಿದ್ದು, ಇವುಗಳ ಮೇಲೊಂದು ಪದ್ಮವನ್ನಿರಿಸಿ ನಂತರ ಕಳಸವೊಂದನ್ನು ಕೂರಿಸಲಾಗಿದೆ. ಗೋಪುರದ ಮುಂಭಾಗದಲ್ಲಿ ನಂದಿಯ ಮೂರ್ತಿಯನ್ನು ನಿಲ್ಲಿಸಲಾಗಿದೆ. ಹೆಚ್ಚಾಗಿ ಸಳ ಹುಳಿಯನ್ನು ಕೊಲ್ಲುವ ಕೆತ್ತನೆ ಇರುವ ಸ್ಥಳದಲ್ಲಿ ಈ ನಂದಿಯ ಮೂರ್ತಿ ಕಂಡು ಸೋಜಿಗವಾಯಿತು. ಇಲ್ಲಿ ಮತ್ತು ಹಾರ್ನಹಳ್ಳಿಯ ಒಂದು ದೇವಾಲಯದಲ್ಲೂ ಗೋಪುರದ ಮುಂಭಾಗದಲ್ಲಿ ನಂದಿ ಆಸೀನನಾಗಿರುವುದು ಅಚ್ಚರಿ ಮೂಡಿಸಿತು.


ನವರಂಗದ ದ್ವಾರಕ್ಕೆ ಬೀಗ ಹಾಕಲಾಗಿದ್ದರಿಂದ ನಮಗೆ ದೇವಾಲಯದ ಒಳಗೆ ತೆರಳಲು ಆಗಲಿಲ್ಲ. ನವರಂಗ ಮತ್ತು ಗರ್ಭಗುಡಿಗಳ ದ್ವಾರದಲ್ಲಿ ಅಪೂರ್ವ ಕೆತ್ತನೆಗಳಿವೆಯೆಂದು ಓದಿದ್ದೆ. ದೇವಾಲಯದ ಹೊರಗೋಡೆಯ ತುಂಬಾ ಕೆತ್ತನೆಗಳ ರಾಶಿ. ಈ ದೇವಾಲಯದ ಸಮೀಪದಲ್ಲೇ ಇನ್ನೊಂದು ಶಿವ ದೇವಾಲಯವಿದೆ. ಇಲ್ಲಿರುವ ಎರಡೂ ಗರ್ಭಗೃಹಗಳಲ್ಲಿ ಶಿವಲಿಂಗವಿದ್ದು ವೀರೇಶ್ವರ ಮತ್ತು ಬಕ್ಕೇಶ್ವರ ಎಂದು ಕರೆಯಲಾಗುತ್ತದೆ.

ಮಾಹಿತಿ: ಐ.ಸೇಸುನಾಥನ್ ಮತ್ತು ಪ್ರೇಮಕುಮಾರ್

7 ಕಾಮೆಂಟ್‌ಗಳು:

sunaath ಹೇಳಿದರು...

ಹಳೆಯ ಯಾವ ದೇವಾಲಯಕ್ಕೂ ಗುಮ್ಮಟವಿದ್ದದ್ದನ್ನು ನಾನು ನೋಡಿದಂತಿಲ್ಲ. ಈ ದೇವಾಲಯಕ್ಕೆ ಗುಮ್ಮಟವಿದೆಯಲ್ಲ! (ಮೊದಲನೆಯ ಚಿತ್ರ.)

Lakshmipati ಹೇಳಿದರು...

ರಾಜೇಶ್,

ಹತ್ತಾರು ಬಾರಿ ಅರಸೀಕೆರೆ ಹಾದಿಯಲ್ಲಿ ಓಡಾಡಿದ್ದೇನೆ...ಆದರೆ ಅಲ್ಲಿ ಇಂತಹ ಸುಂದರವಾದ ದೇವಾಲಯವಿದೆ ಎಂಬುದು ತಿಳಿದಿರಲಿಲ್ಲ. ಮಾಹಿತಿಗಾಗಿ ಧನ್ಯವಾದಗಳು.

ಲಕ್ಷ್ಮೀಪತಿ

Srik ಹೇಳಿದರು...

antoo intoo arasikere varegoo bantu nimma aledaata... Inna nammooroo hattiradalle irabeku alwe?

Arasikereya ee devalayakke collegenalli iddaga hogiddu... Alle hattiradalle iruva Chikka Thirupati (Malekallu tirupati) betta aa bhagakkella ati ettaraddu.

Aravind GJ ಹೇಳಿದರು...

ಸೊಗಸಾದ ಲೇಖನ.

ಕಳೆದ ವಾರವಷ್ಟೇ ಈ ದೇವಾಲಯಕ್ಕೆ ಹೋಗಿದ್ದೆ. ಇದರ ಗುಮ್ಮಟವೇ ವಿಶೇಷವಾಗಿದೆ.

hamsanandi ಹೇಳಿದರು...

ಅರಸೀಕೆರೆಗೆ ಅಷ್ಟು ಹತ್ತಿರವಿದ್ದರೂ, ಈ ದೇವಾಲಯಕ್ಕೆ ಒಮ್ಮೆಯೂ ಹೋಗಿಲ್ಲ :( ಚಿತ್ರಗಳನ್ನು ನೋಡಿ ಬಹಳ ಆನಂದವಾಯಿತು.

ರಾಜೇಶ್ ನಾಯ್ಕ ಹೇಳಿದರು...

ಸುನಾಥ್,
ಅದೇ ಇಲ್ಲಿನ ವೈಶಿಷ್ಟ್ಯ. ಅಂತಹ ಮುಖಮಂಟಪ ಬೇರೆಲ್ಲಾದರೂ ಇದೆಯೇ ಎನ್ನುವುದು ಕಾಡುವ ಪ್ರಶ್ನೆ.

ಲಕ್ಷ್ಮೀಪತಿ,
ಧನ್ಯವಾದ.

ಶ್ರೀಕಾಂತ್,
ಮಾಲೇಕಲ್ಲು ತಿರುಪತಿಗೂ ಹೋಗಿದ್ದೆ. ಆ ಬೆಟ್ಟವಂತೂ ಬಹಳ ಆಕರ್ಷಕವಾಗಿತ್ತು. ತುದಿವರೆಗೂ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಿರುವುದು ಕಾಣುತ್ತದೆ. ಸುಂದರ ಸ್ಥಳ.

ಅರವಿಂದ್, ಹಂಸಾನಂದಿ
ಧನ್ಯವಾದ.

ಬಸವ ರಾಜು ಎಲ್. ಹೇಳಿದರು...

ಅರಸೀಕೆರೆ'ಯ ಹೆಸರು ಕೇಳಿದ್ದೆ, ಬಹಳಷ್ಟು ವರ್ಷಗಳ ಹಿಂದೆ ಚಿಕ್ಕವನಿದ್ದಾಗ ಒಮ್ಮೆ ಅಲ್ಲಿಗೆ ಹೋಗಿದ್ದೂ ನೆನಪು
ಆದ್ರೆ ಈಗ ಮತ್ತೊಮ್ಮೆ ಹೋಗಲೆಬೇಕೆನಿಸುತ್ತಿದೆ ಅದೂ ಕೇವಲ ನೀವು ಪರಿಚಯಿಸಿದ ಚಂದ್ರಮೌಳೇಶ್ವರ ದೇವಾಲಯವನ್ನು ನೋಡಲು ಸಲುವಾಗಿ
ಧನ್ಯವಾದಗಳು - ಬಸವ ರಾಜು ಎಲ್.