ಭಾನುವಾರ, ಏಪ್ರಿಲ್ 26, 2009

ಹೀಗೊಂದು ಸೇತುವೆ


ಎಪ್ರಿಲ್ ೨೬, ೨೦೦೪.

ಆ ದಿನ ಲೋಕಸಭೆಯ ಚುನಾವಣೆ ಪ್ರಯುಕ್ತ ರಜಾ ಇತ್ತು. ಮುಂಜಾನೆ ೭.೦೧ಕ್ಕೆ ಮತ ಚಲಾಯಿಸಿ ಯಮಾಹವನ್ನು ಈ ಹಳ್ಳಿಯತ್ತ ಓಡಿಸಿದೆ. ಇಲ್ಲಿರುವ ನದಿಗೆ ಅಣೆಕಟ್ಟು ನಿರ್ಮಿಸುವ ಮೊದಲು ರಸ್ತೆ ಇತ್ತು. ಅಣೆಕಟ್ಟು ನಿರ್ಮಾಣದ ಬಳಿಕ ಈ ರಸ್ತೆ ಮುಳುಗಿತು. ಇಲ್ಲಿ ಒಂದು ಸೇತುವೆ ಇದ್ದು, ಬೇಸಗೆಯಲ್ಲಿ ಹಿನ್ನೀರಿನ ಪ್ರಮಾಣ ಕಡಿಮೆಯಾದಾಗ ಗೋಚರಿಸುತ್ತದೆ. ಹಲವಾರು ವರ್ಷ ನೀರಿನಲ್ಲಿ ಮುಳುಗಿದ್ದರೂ ಇಂದಿಗೂ ಹಾನಿಯಾಗದೇ ನಿಂತಿರುವ ಸುಂದರವಾದ ಸೇತುವೆಯಿದು. ಇದೇ ಸೇತುವೆಯನ್ನು ನೋಡಲೋಸುಗ ೫ ವರ್ಷಗಳ ಹಿಂದೆ ಈ ಹಳ್ಳಿಗೆ ತೆರಳಿದ್ದು.


ಈಗಲೂ ಈ ಹಳೇ ರಸ್ತೆಯನ್ನು ಹಿನ್ನೀರಿನ ಅಂಚಿನವರೆಗೆ ವಾಸಿಸುವ ಹಳ್ಳಿಗರು ಬಳಸುತ್ತಾರೆ. ಆ ಬಳಿಕದ ರಸ್ತೆ ಹಿನ್ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಗೋಚರಿಸುವುದು. ಈ ರಸ್ತೆಯಲ್ಲಿ ಪ್ರಯಾಣಿಸುವುದೇ ರೋಮಾಂಚಕ ಅನುಭವ. ಕೆಲವೊಂದೆಡೆ ರಸ್ತೆಯನ್ನು ಅಡ್ಡಕ್ಕೆ ಅಗೆದು ಹಾಕಲಾಗಿದೆ. ಮರಗಳನ್ನು ಕಡಿದು ಸಾಗಿಸುವುದನ್ನು ತಡೆಯಲು ಈ ಕ್ರಮ! ಇಂತಹ ಗುಣಗಳು (ಮರ ಕಡಿಯುವುದು) ಎಷ್ಟು ಸ್ವಾಭಾವಿಕವಾಗಿ ನಮ್ಮವರಿಗೆ ಬರುತ್ತದಲ್ಲವೇ?! ಅಪ್ಪಿ ತಪ್ಪಿಯೂ ಮರಗಳನ್ನು ರಕ್ಷಿಸುವ ಗುಣ ಬರೋದೇ ಇಲ್ಲ.


ಹಿನ್ನೀರಿನ ಪರಿಧಿಯ ಆರಂಭದಲ್ಲೇ ಹಳೇ ರಸ್ತೆಯ ಸ್ಪಷ್ಟ ಕುರುಹು. ರಸ್ತೆಯ ಇಬ್ಬದಿಯಲ್ಲಿ ಮರಗಳ ಅವಶೇಷಗಳು! ಈ ಮರಗಳ ಸಾಲು ಮುಗಿದ ಬಳಿಕ ನಂತರ ಅಸ್ಪಷ್ಟ ರಸ್ತೆ. ಕೆಲವೊಂದೆಡೆ ಹಿನ್ನೀರು ರಸ್ತೆಯ ಮೇಲೆಯೇ ಇತ್ತು. ಹಾಗಿರುವಲ್ಲಿ ಯಮಾಹವನ್ನು ನೀರಿನ ಅಂಚಿನಲ್ಲೇ ಚಲಿಸಿ ಮತ್ತೆ ಮುಂದೆ ಕಾಣಬರುವ ರಸ್ತೆಯೆಡೆ ಬರಬೇಕಾಗುತ್ತಿತ್ತು. ವಿಶಾಲ ಪ್ರದೇಶ. ಒಬ್ಬ ನರಪಿಳ್ಳೆ ಕಾಣುತ್ತಿರಲಿಲ್ಲ. ಗಾಳಿ ಮತ್ತು ನನ್ನ ಯಮಾಹಾದ ಶಬ್ದ ಮಾತ್ರ. ಮಧ್ಯಾಹ್ನದ ಜೋರು ಬಿಸಿಲು. ಅಲ್ಲಲ್ಲಿ ಬೋಳು ಮರಗಳು ಕಂಬಗಳಂತೆ ನಿಂತಿದ್ದವು. ರಸ್ತೆಯನ್ನು ಒಂದೆರಡು ಕಡೆ ಅಗೆಯಲಾಗಿದ್ದರಿಂದ ಯಮಾಹವನ್ನು ರಸ್ತೆಯಿಂದ ಕೆಳಗಿಳಿಸಿ ಮೇಲೇರಿಸಬೇಕಾಗುತ್ತಿತ್ತು. ವರ್ಷವಿಡೀ ನೀರು ನಿಂತಿರುವ ಸ್ಥಳದಲ್ಲಿ ಬೈಕು ಚಲಾಯಿಸುವುದೇನು, ನಡೆಯುವುದು ಕೂಡಾ ಅಪಾಯ! ಸಡಿಲ ಮಣ್ಣು ಇದ್ದರೆ ಫಜೀತಿ.


ಹಿನ್ನೀರಿನಲ್ಲೇ ರಸ್ತೆಯ ಕುರುಹು ಕಾಣಿಸುತ್ತಿದ್ದರೂ ಅದರಲ್ಲಿ ಬೈಕು ಚಲಾಯಿಸಲು ಧೈರ್ಯ ಸಾಲುತ್ತಿರಲಿಲ್ಲ. ಅದೇ ಸಡಿಲ ಮಣ್ಣಿನ ಹೆದರಿಕೆ. ಸುತ್ತಿ ಬಳಸಿ ಸಾಗಿದರೂ ಪರವಾಗಿಲ್ಲವೆಂದು ನೀರಿನ ಅಂಚಿನಲ್ಲೇ ಸಾಗತೊಡಗಿದೆ. ಒಬ್ಬನೇ ಇದ್ದಿದ್ದರಿಂದ ಆ ಸ್ಥಳದ ಅಧಿಪತಿಯೇ ನಾನು ಎಂಬಂತೆ ಭಾಸವಾಗುತ್ತಿತ್ತು. ಬಟ್ ಐ ವಾಸ್ ರಾಂಗ್! ಒಂದೆಡೆ ಹಿನ್ನೀರಿನ ಅಂಚಿನಲ್ಲಿ ಸಾಗುತ್ತಿರಬೇಕಾದರೆ ಮುಂದೆ ಇದ್ದ ಬೋಳು ಮರದ ಹಿಂದೆ ಯಾರೋ ಚಲಿಸಿದಂತೆ ಭಾಸವಾಯಿತು. ಆ ಮರದ ಸಮಾನಾಂತರಕ್ಕೆ ಬಂದಾಗ ಅಲ್ಲಿ ಕಂಡ ದೃಶ್ಯ ನಂಬಲಸಾಧ್ಯ. ಪ್ರೇಮಿಗಳಿಬ್ಬರು ತಮ್ಮದೇ ಲೋಕದಲ್ಲಿ ಮೈಮರೆತಿದ್ದರು. ಗಾಳಿಯ ಶಬ್ದಕ್ಕೆ ನನ್ನ ಬೈಕಿನ ಸದ್ದೇ ಅವರಿಗೆ ಕೇಳಿರಲಿಕ್ಕಿಲ್ಲ. ನನ್ನ ಕಂಡು ಗಲಿಬಿಲಿಗೊಂಡರು. ರೋಮಾನ್ಸ್ ಮಾಡಲು ಎಂತಹಾ ಸ್ಥಳ. ಆ ರಣಬಿಸಿಲಿನಲ್ಲಿ... ಒಂದೇ ಒಂದು ಮನುಷ್ಯನ ಸುಳಿವಿಲ್ಲ ಎಂಬ ಮಾತನ್ನು ಪರಿಗಣಿಸಿದರೆ ಪ್ರಶಸ್ತ ಸ್ಥಳ ಎನ್ನಬಹುದು.


ಇನ್ನೊಂದೈದು ನಿಮಿಷದ ಬಳಿಕ ಸೇತುವೆಯ ಬಳಿ ತಲುಪಿದೆ. ಅಲ್ಲಿತ್ತು ಒಂದು ’ರಿಂಗ್’ ಬಾವಿ. ಒಳಗೆ ಇಣುಕಿದರೆ ನೀರು ಮತ್ತು ಕಪ್ಪೆಗಳು. ಸಮೀಪದಲ್ಲೆ ಮನೆಯೊಂದಿದ್ದ ಕುರುಹು.


ಇಲ್ಲೀಗ ನೀರನ್ನು ದಾಟಲೇಬೇಕಾಗಿತ್ತು. ನಡೆದೇ ತೆರಳಬಹುದಾಗಿದ್ದರಿಂದ ಬೈಕನ್ನು ಅಲ್ಲೇ ನಿಲ್ಲಿಸಿ ನೀರಿರುವಲ್ಲಿ ತೆರಳಿದೆ. ಅಲ್ಲೇ ಬಿದ್ದಿದ್ದ ಕೋಲಿನಿಂದ ನೆಲ ಗಟ್ಟಿಯಾಗಿದೆಯೇ ಎಂದು ಪರೀಕ್ಷಿಸಿ ನೀರನ್ನು ದಾಟಿ ಸೇತುವೆಯ ಮೇಲೆ ತೆರಳಿದೆ. ಇಲ್ಲೂ ಸೇತುವೆಯ ಆರಂಭಕ್ಕೇ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಎಲ್ಲೆಡೆ ಬೋಳು ಮರಗಳು, ಅಲ್ಲಲ್ಲಿ ಹಿನ್ನೀರಿನ ಕೊಳಗಳು, ಕಡಿದು ಹಾಕಿದ ಮರಗಳ ಅವಶೇಷಗಳು. ಈ ದೃಶ್ಯ ಸ್ವಲ್ಪನೂ ಇಷ್ಟವಾಗಲಿಲ್ಲ. ನೋಡಲು ಯೋಗ್ಯವಾಗಿರುವುದೆಂದರೆ ಸೇತುವೆ ಮಾತ್ರ.


ಬ್ರಿಟಿಷರ ಸಮಯದಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ಈ ಸೇತುವೆಯನ್ನು ನಿರ್ಮಿಸಲಾಗಿದೆ. ೯ ಕಮಾನುಗಳನ್ನು ಸುಂದರವಾಗಿ ರಚಿಸಲಾಗಿದೆ. ಆಗಿನ ಕಾಲದಲ್ಲಿ ಬಳಸುವಂತೆ ಬೆಲ್ಲ ಮತ್ತು ಸುಣ್ಣದ ಮಿಶ್ರಣವನ್ನು ಈ ಸೇತುವೆಯ ನಿರ್ಮಾಣದಲ್ಲಿ ಬಳಸಲಾಗಿದೆ. ಈಗಿನ ಸಿಮೆಂಟಿಗಿಂತ ಈ ಬೆಲ್ಲ ಮತ್ತು ಸುಣ್ಣದ ಮಿಶ್ರಣವೇ ಹೆಚ್ಚು ಸುದೃಢ. ಮಡೆನೂರು ಅಣೆಕಟ್ಟನ್ನೂ ಇದೇ ಮಿಶ್ರಣವನ್ನು ಬಳಸಿ ನಿರ್ಮಿಸಲಾಗಿತ್ತು. ಆದ್ದರಿಂದ ಎಷ್ಟೋ ದಶಕಗಳ ಕಾಲ ನೀರಿನಡಿ ಇದ್ದರೂ ಇವು ಇನ್ನೂ ಸುದೃಢವಾಗಿವೆ. ಕಲ್ಲುಗಳ್ಳರಿಂದ ಈ ಸೇತುವೆಯ ಒಂದು ಕಲ್ಲನ್ನೂ ಅಲುಗಾಡಿಸಲು ಆಗಿಲ್ಲ.


ಆಗಿನ ಮೈಲಿಕಲ್ಲುಗಳನ್ನು ಈಗಲೂ ಕಾಣಬಹುದು. ’೧೯’ ಎಂದು ಬರೆಯಲಾಗಿರುವ ಮೈಲಿಕಲ್ಲೊಂದು ಎದ್ದು ಕಾಣುತ್ತಿತ್ತು. ಅಣೆಕಟ್ಟು ನಿರ್ಮಾಣದ ಮೊದಲು ಈ ನದಿ ಇದೇ ಸೇತುವೆಯ ಅಡಿಯಿಂದ ೯ ಕಮಾನುಗಳ ಮೂಲಕ ಹರಿದು ಸಾಗುತ್ತಿತ್ತು. ಈಗ ನದಿಯ ಹಿನ್ನೀರು ಸೇತುವೆಯನ್ನೇ ಮುಳುಗಿಸಿ ನಿಂತಿರುತ್ತದೆ.

ಭಾನುವಾರ, ಏಪ್ರಿಲ್ 12, 2009

ಸಿದ್ಧೇಶ್ವರ ದೇವಾಲಯ - ಹಾವೇರಿ


೨೧-೦೬-೨೦೦೮. ಹಾವೇರಿ ನಗರದ ಮಧ್ಯದಲ್ಲೇ ವಿಶಾಲ ಉದ್ಯಾನದ ನಡುವೆ ೧೧ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸಿದ್ಧೇಶ್ವರ ದೇವಾಲಯವಿದೆ. ಪುರಾತತ್ವ ಇಲಾಖೆ ದೇವಾಲಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ೩ ದ್ವಾರಗಳುಳ್ಳ ಮುಖಮಂಟಪ, ನವರಂಗ, ಅಂತರಾಳ ಮತ್ತು ಗರ್ಭಗುಡಿಗಳನ್ನು ಒಳಗೊಂಡಿರುವ ಸಣ್ಣ ಏಕಕೂಟ ದೇವಾಲಯವಿದು.


ಮುಖಮಂಟಪದಲ್ಲಿ ೧೪ ಕಂಬಗಳಿವೆ. ನವರಂಗದಲ್ಲಿ ನಾಲ್ಕು ಸುಂದರ ಕಂಬಗಳಿವೆ. ಮುಖಮಂಟಪ ಮತ್ತು ನವರಂಗದ ನಡುವೆ ಗಣೇಶನ ಸುಂದರ ವಿಗ್ರಹವಿದೆ. ಛಾವಣಿಯಲ್ಲಿ ಎಲ್ಲೆಡೆ ಕಮಲಗಳ ಕೆತ್ತನೆಯಿದೆ. ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ ಮತ್ತು ನಂದಿಯ ಕಲಾತ್ಮಕ ಮೂರ್ತಿಯಿದೆ. ಗರ್ಭಗುಡಿಯಲ್ಲಿ ಸಿಮೆಂಟಿನ ಪಾಣಿಪೀಠವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ! ಇದರ ಮೇಲೆ ಸಣ್ಣ ಶಿವಲಿಂಗವನ್ನಿರಿಸಲಾಗಿದೆ. ಇದು ಮೂಲ ಶಿವಲಿಂಗವಿರಲಾರದು. ಸಿದ್ಧೇಶ್ವರನನ್ನು ನಾಗರಾಜ ಸದಾ ಕಾಯುತ್ತಾ ಇರುವಂತೆ ನಾಗನ ಹೆಡೆಯನ್ನು ಶಿವಲಿಂಗದ ಬಳಿ ಇರಿಸಲಾಗಿದೆ.


ಈ ದೇವಾಲಯದ ಆಕರ್ಷಣೆಯೆಂದರೆ ಸುಂದರ ಮತ್ತು ಕಲಾತ್ಮಕ ಕೆತ್ತನೆಯಿರುವ ಗೋಪುರ. ಪಶ್ಚಿಮ ಚಾಳುಕ್ಯ ಕಲೆಯ ಅಷ್ಟೂ ಗುಣಗಳನ್ನು ಈ ಒಂದು ಗೋಪುರದಲ್ಲೇ ಕಾಣಬಹುದು. ಈ ದೇವಾಲಯದ ಇನ್ನೊಂದು ವೈಶಿಷ್ಟ್ಯವೆಂದರೆ, ಎಲ್ಲಾ ಚಾಲುಕ್ಯ ದೇವಾಲಯಗಳಂತೆ ಇದು ಸೂರ್ಯ ಉದಯಿಸುವ ದಿಕ್ಕಿಗೆ ಮುಖ ಮಾಡಿಕೊಂಡಿಲ್ಲ. ಬದಲಾಗಿ ಪಶ್ಚಿಮ ದಿಕ್ಕಿಗೆ ಮುಖಮಾಡಿಕೊಂಡಿರುವಂತೆ ನಿರ್ಮಿಸಲಾಗಿದೆ.


ದೇವಾಲಯದ ಹೊರಗೋಡೆಯ ಮೇಲೆಲ್ಲಾ ಸುಂದರ ಕೆತ್ತನೆಗಳು. ಅಲ್ಲಿರುವ ಪುರಾತತ್ವ ಇಲಾಖೆಯ ಸಿಬ್ಬಂದಿಯ ವಿರೋಧದ ನಡುವೆಯೂ ಒಂದಷ್ಟು ಚಿತ್ರಗಳನ್ನು ತೆಗೆದೆ. ಸಿದ್ಧೇಶ್ವರನ ದೇವಾಲಯದ ಪಾರ್ಶ್ವದಲ್ಲೇ ಉಗ್ರನರಸಿಂಹನ ಗುಡಿಯಿದೆ. ಉಗ್ರನರಸಿಂಹ ಹಿರಣ್ಯಕಷಿಪುವಿನ ಹೊಟ್ಟೆ ಬಗೆಯುವ ಕೆತ್ತನೆಯ ಮೂರ್ತಿಯಿದೆ. ಅಲ್ಲಲ್ಲಿ ಸಿಕ್ಕಿರುವ ಭಗ್ನಗೊಂಡಿರುವ ಹಲವಾರು ಮೂರ್ತಿಗಳನ್ನು ಉಗ್ರನರಸಿಂಹನ ಸುತ್ತಲೂ ಇರಿಸಲಾಗಿದೆ.

ಮಂಗಳವಾರ, ಏಪ್ರಿಲ್ 07, 2009

ಅಲೆಮಾರಿ ಹಾಡು ೧

ಚಾರಣ/ಪ್ರವಾಸಕ್ಕೆ ಹೋಗುವಾಗ ಬಸ್ಸಿನಲ್ಲಿ ಕಿವಿಗೆ ವಾಯರ್ ಸಿಕ್ಕಿಸಿ ಹಾಡು ಕೇಳುವ ಚಟ ನನಗೂ ಇದೆ. ಕೆಲವೊಂದು ಹಾಡುಗಳನ್ನು ಪ್ರತಿ ಬಾರಿ ಪ್ರಯಾಣಿಸುವಾಗಲೂ ಕೇಳುತ್ತಿರುತ್ತೇನೆ. ಇಂತಹ ಒಂದು ಹಾಡು ’ಕಂಟ್ರಿ ರೋಡ್ಸ್ ಟೇಕ್ ಮಿ ಹೋಮ್’. ಈ ಹಾಡಿನ ವಿಡಿಯೋ ಇಲ್ಲಿ ನೋಡಬಹುದು ಅಥವಾ ಕೆಳಗಿರುವ ಪ್ಲೇಯರ್-ನಲ್ಲೂ ಕೇಳಬಹುದು.


Almost heaven, west virginia
Blue ridge mountains, shenandoah river
Life is old there, older than the trees
Younger than the mountains, blowing like a breeze

Country roads, take me home
To the place, I be-long
West virginia, mountain momma
Take me home, country roads

All my memries, gather round her
Miners lady, stranger to blue water
Dark and dusty, painted on the sky
Misty taste of moonshine, teardrop in my eye

Country roads, take me home
To the place, I be-long
West virginia, mountain momma
Take me home, country roads

I hear her voice, in the mornin hours she calls to me
The radio reminds me of my home far a-way
And drivin down the road I get a feeling
That I should have been home yesterday, yesterday

Country roads, take me home
To the place, I be-long
West virginia, mountain momma
Take me home, country roads

Country roads, take me home
To the place, I be-long
West virginia, mountain momma
Take me home, country roads
Take me home, country roads
Take me home, country roads

ಬುಧವಾರ, ಏಪ್ರಿಲ್ 01, 2009

ಉಮಾಮಹೇಶ್ವರ ದೇವಾಲಯ - ಹೊಸಗುಂದ


೦೪-೦೧-೨೦೦೯. ಹೊಸಗುಂದದ ಉಮಾಮಹೇಶ್ವರ ದೇವಸ್ಥಾನ ೧೯೯೫ರವರೆಗೂ ಕಾಡಿನಲ್ಲಿ ಮರೆಯಾಗಿತ್ತು. ದೊಡ್ಡ ಆಲದಮರವೊಂದು ದೇವಾಲಯದ ಮೇಲೆಯೇ ಬೆಳೆದು ಹಗಲಲ್ಲೂ ಒಳಗೆ ಬೆಳಕು ಪ್ರವೇಶಿಸುವುದನ್ನು ತಡೆಯುತ್ತಿತ್ತು. ಬಾವಲಿಗಳು ಮತ್ತು ಗೂಬೆಗಳು ಈ ದೇವಾಲಯವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವು. ದೇವಾಲಯಕ್ಕೆ ಯಾರೂ ಬರುತ್ತಿರಲಿಲ್ಲ. ಚಾರಣಿಗರು ಮತ್ತು ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಇರುವವರು ಆಗೊಮ್ಮೆ ಈಗೊಮ್ಮೆ ಭೇಟಿ ನೀಡುತ್ತಿದ್ದರು.


ಕಡೆಗೂ ಸಾಗರ ಯೂತ್ ಹಾಸ್ಟೆಲಿನ ಸದಸ್ಯರು ೧೯೯೫ರ ಸುಮಾರಿಗೆ ದೇವಾಲಯದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು ಸ್ವಚ್ಛಮಾಡಲಾರಂಭಿಸಿದರು. ಸ್ಥಳೀಯರೂ ಕೈಗೂಡಿಸಿದರು. ಈಗ ನೋಡಿದರೆ ಅವಶ್ಯಕ್ಕಿಂತ ಸ್ವಲ್ಪ ಹೆಚ್ಚೇ ಕಾಡನ್ನು ಕಡಿದಂತೆ ತೋರುತ್ತದೆ. ಉತ್ಖನನದ ಬಳಿಕ ಪ್ರವಾಸಿಗರು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹೊಸಗುಂದಕ್ಕೆ ಆಗಮಿಸಲಾರಂಭಿಸಿದರು. ಈಗ ಪುರಾತತ್ವ ಇಲಾಖೆ, ಧರ್ಮಸ್ಥಳ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ಸಹಯೋಗದಲ್ಲಿ ಈ ದೇವಾಲಯದ ಪುನ: ನಿರ್ಮಾಣದ ಪ್ರಾಜೆಕ್ಟ್-ನ್ನು ಕೈಗೆತ್ತಿಕೊಂಡಿದೆ. ಸ್ಥಳೀಯರೂ ಇದರಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ. ಒಂದು ವಿಶಾಲ ಪ್ರಾಂಗಣವನ್ನು ರಚಿಸಿ, ಪ್ರಾಂಗಣದೊಳಗೆ ಸಮೀಪದ ಕಾಡಿನಲ್ಲಿ ದೊರಕಿರುವ ೧೧ನೇ ಶತಮಾನದ ವೀರಭದ್ರ, ವಿನಾಯಕ ಮತ್ತು ಕಂಚಿಕಾಲಮ್ಮ ವಿಗ್ರಹಗಳನ್ನು, ಉಮಾ ಮಹೇಶ್ವರ ಲಿಂಗದೊಂದಿಗೆ ಪ್ರತಿಷ್ಠಾಪಿಸುವ ದೊಡ್ಡ ಯೋಜನೆ ಇದೆ.


ಇಷ್ಟನ್ನು ಓದಿದ ಬಳಿಕ ಅಲ್ಲಿಗೆ ತೆರಳಿದರೆ ಮುಖ್ಯ ರಸ್ತೆಯಿಂದ ದೇವಾಲಯಕ್ಕಿರುವ ೨ ಕಿ.ಮಿ. ಮಣ್ಣಿನ ರಸ್ತೆಯ ಉದ್ದಕ್ಕೂ ದೀಪಾಲಂಕಾರ ಮಾಡಲಾಗಿತ್ತು. ನಾವು ಹೊಸಗುಂದ ತಲುಪಿದಾಗಲೆ ಸಂಜೆ ೬.೧೫ರ ಸಮಯ. ಕತ್ತಲಾಗುತ್ತಿತ್ತು. ದೇವಾಲಯದ ಸಮೀಪವೆಲ್ಲಾ ಜನಜಂಗುಳಿ. ಎಲ್ಲರೂ ಅದೇನೋ ಉತ್ಸಾಹದಿಂದ ಅಚೀಚೆ ಓಡಾಡುತ್ತಿದ್ದರು. ಅಂದು ಉಮಾ ಮಹೇಶ್ವರ ದೇವಾಲಯದ ವಾರ್ಷಿಕೋತ್ಸವ. ಸ್ವಲ್ಪ ದೂರದಲ್ಲಿತ್ತು ತಲೆ ಬೋಳಿಸಿದಂತೆ ಕಾಣುತ್ತಿದ್ದ ಉಮಾಮಹೇಶ್ವರ ದೇವಾಲಯ! ದೇವಾಲಯದ ಛಾವಣಿಯನ್ನು ಸಂಪೂರ್ಣವಾಗಿ ಬಿಚ್ಚಲಾಗಿತ್ತು. ಪುರಾತತ್ವ ಇಲಾಖೆ ಪುನ: ನಿರ್ಮಾಣದ ಕಾರ್ಯವನ್ನು ಶುರುಮಾಡಿಯಾಗಿತ್ತು.

ನಾನು ಬಾಡಿಗೆ ಕಾರಿನಿಂದ ನನ್ನ ಸ್ವಂತ ಕಾರೆಂಬಂತೆ ಇಳಿದ ಪರಿ ನೋಡಿ ಇಬ್ಬರು ಸ್ವಯಂಸೇವಕರು, ಯಾರೋ ಗಣ್ಯ ವ್ಯಕ್ತಿ ಬಂದಿರಬೇಕೆಂದು ತಿಳಿದು ನನ್ನ ಬಳಿ ಬಂದು ಸ್ವಾಗತಿಸಿದರು. ದೇವಾಲಯ ನೋಡಲು ಬಂದಿರುವೆನೆಂದು ಹೇಳಿದ ಬಳಿಕ, ಉಮಾಮಹೇಶ್ವರ ದೇವಾಲಯದ ಬಳಿ ಕರೆದೊಯ್ದು, ನಾನು ಅದಾಗಲೇ ಓದಿ ತಿಳಿದಿಕೊಂಡಿದ್ದ ಎಲ್ಲಾ ವಿಷಯಗಳೊಂದಿಗೆ ಇನ್ನು ಸ್ವಲ್ಪ ಹೆಚ್ಚಿನ ಮಾಹಿತಿಗಳನ್ನು ನೀಡತೊಡಗಿದರು.


ಅವಶ್ಯವಿರುವುದಕ್ಕಿಂತ ಸ್ವಲ್ಪ ಹೆಚ್ಚೇ ಕಾಡು ಕಡಿದಿರುವಂತೆ ತೋರುತ್ತದೆ ಎಂದು ನಾನು ಕೇಳಿದಾಗ ಉತ್ತರಕ್ಕೆ ತಡವರಿಸತೊಡಗಿದರು. ವಿಶಾಲ ಟೆಂಪಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಇರಾದೆಯಿರುವುದರಿಂದ ಅಷ್ಟು ಕಾಡು ಕಡಿಯಬೇಕಾಯಿತು ಎಂಬ ಸಮರ್ಥನೆ. ಅದಾಗಲೇ ವೀರಭದ್ರ, ವಿನಾಯಕ, ಕಂಚಿಕಾಲಮ್ಮ ವಿಗ್ರಹಗಳನ್ನು ಮತ್ತು ಉಮಾ ಮಹೇಶ್ವರ ಲಿಂಗವನ್ನು ಅಲ್ಲೇ ಸಮೀಪದಲ್ಲಿ ನೂತನವಾಗಿ (ತಾತ್ಕಾಲಿಕವಾಗಿಯೂ) ನಿರ್ಮಿಸಲಾಗಿರುವ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವುದಾಗಿಯೂ, ಉಮಾ ಮಹೇಶ್ವರ ದೇವಾಲಯದ ಪುನ: ನಿರ್ಮಾಣದ ಬಳಿಕ ಲಿಂಗವನ್ನು ಇಲ್ಲಿಯೂ ಮತ್ತು ಉಳಿದ ೩ ವಿಗ್ರಹಗಳನ್ನು ಸೂಕ್ತ ಸ್ಥಳಗಳಲ್ಲಿ ಪುನ:ಪ್ರತಿಷ್ಠಾಪನಗೊಳಿಸುವುದಾಗಿಯೂ ಹೇಳಿ ಸ್ವಲ್ಪ ಕನ್ಫ್ಯೂಷನ್ ಉಂಟುಮಾಡಿದ. ಹೆಚ್ಚಿನ ಪ್ರಶ್ನೆ ಕೇಳಿದರೆ ನನಗೆ ಇನ್ನಷ್ಟು ಗೊಂದಲವುಂಟಾಗಬಹುದು ಎಂದು ನಂತರ ಸುಮ್ಮನುಳಿದೆ. ದೇವಾಲಯ ನೋಡಿ ಬನ್ನಿ, ಕಾಯುತ್ತಿರುತ್ತೇವೆ ಎಂದು ಅವರಿಬ್ಬರು ಹೋಮ ಹವನ ನಡೆಯುತ್ತಿದ್ದ ಸ್ಥಳದೆಡೆ ತೆರಳಿದರು.


೧೧ನೇ ಶತಮಾನದಲ್ಲಿ ಹುಂಚದಲ್ಲಿ ನೆಲೆಗೊಂಡಿದ್ದ ಸಂತರ ಸಾಮ್ರಾಜ್ಯದ ರಾಜರು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಈ ದೇವಾಲಯ ಮುಖಮಂಟಪ, ನವರಂಗ, ಗರ್ಭಗುಡಿ ಮತ್ತು ಪ್ರದಕ್ಷಿಣಾಪಥಗಳನ್ನು ಹೊಂದಿದೆ. ಮುಖಮಂಟಪದಲ್ಲಿ ೨೦ ಕಂಬಗಳಿದ್ದು, ೩ ಕಡೆಯಿಂದ ದ್ವಾರಗಳಿವೆ. ನವರಂಗದ ದ್ವಾರಕ್ಕೆ ಜಾಲಂಧ್ರಗಳಿದ್ದು, ಬದಿಯಲ್ಲಿ ಕಿಟಕಿಯಂತಹ ರಚನೆಯಿದೆ. ಗರ್ಭಗುಡಿಯಲ್ಲಿ ಮೊದಲಿನಿಂದಲೂ ಶಿವಲಿಂಗವಿರಲಿಲ್ಲವಂತೆ. ಈಗ ಪುನ: ನಿರ್ಮಾಣದ ಬಳಿಕ ನೂತನವಾಗಿ ಪ್ರತಿಷ್ಠಾಪಿಸಲಿದ್ದಾರಂತೆ. ಹಳೇ ದೇವಾಲಯದ ಆಧುನೀಕರಣದ ಪ್ರಕ್ರಿಯೆ ಆರಂಭವಾಗಿದೆ ಎನ್ನಬಹುದು. ಮೂಲ ದೇವಾಲಯದ ರೂಪಕ್ಕೆ ಧಕ್ಕೆಯುಂಟಾಗದಂತೆ ನೋಡಿಕೊಂಡರೆ ಸಾಕು. ಇನ್ನು ಐದಾರು ವರ್ಷಗಳ ಬಳಿಕ ಇಲ್ಲಿ ಹೇಗೆ ಕಾಣಬಹುದೇನೋ. ಸುತ್ತಮುತ್ತಲಿನ ಸುಮಾರು ೫೦೦ ಎಕರೆಯಷ್ಟು ಜಾಗದಲ್ಲಿರುವ ಕಾಡನ್ನು ದೇವರಕಾಡು ಎಂದು ಅಧಿಕೃತವಾಗಿ ಘೋಷಿಸಲು ಸರಕಾರಕ್ಕೆ ಹೊಸಗುಂದದ ನಾಗರಿಕರು ಮನವಿ ಸಲ್ಲಿಸಿದ್ದಾರೆ.


ಇನ್ನೊಂದು ವಿಷಯವೆಂದರೆ ಉಮಾಮಹೇಶ್ವರ ದೇವಾಲಯವನ್ನು ಮಲೆನಾಡಿನ ಖಜುರಾಹೋ ಎನ್ನುತ್ತಾರೆ. ನಾಡಕಲಸಿಯ ರಾಮೇಶ್ವರ ದೇವಾಲಯದಲ್ಲಿ ಕೆಲವೊಂದು ಮಿಥುನ ಶಿಲ್ಪಗಳಿದ್ದವು. ಆದರೆ ಹೊಸಗುಂದದ ಉಮಾಮಹೇಶ್ವರ ದೇವಾಲಯದಲ್ಲಿ ಅದ್ಭುತ ಮಿಥುನ ಶಿಲ್ಪಗಳಿವೆ. ದೇವಾಲಯದ ಮುಖಮಂಟಪದ ೩ ಸುತ್ತಲ್ಲೂ ಸಣ್ಣ ಜಾಗದಲ್ಲಿ ಸುಂದರವಾಗಿ ದೇವ ದೇವಿಯರ, ಸಮುದ್ರ ಮಂಥನದ, ಆನೆ ಕುದುರೆಗಳ ಮತ್ತು ಮಿಥುನ ಶಿಲ್ಪಗಳನ್ನು ಸುಂದರವಾಗಿ ಕೆತ್ತಲಾಗಿದೆ. ಕತ್ತಲಾವರಿಸುತ್ತಿದ್ದರಿಂದ ಹೆಚ್ಚು ಚಿತ್ರಗಳನ್ನು ತೆಗೆಯಲಾಗಲಿಲ್ಲ. ಪುನ: ನಿರ್ಮಾಣ ಪ್ರಕ್ರಿಯೆಗೆ ಇನ್ನೊಂದೆರಡು ವರ್ಷ ತಗಲಬಹುದು. ನಂತರ ಮತ್ತೊಮ್ಮೆ ಹೊಸಗುಂದಕ್ಕೆ ಭೇಟಿ ನೀಡಬೇಕು: ದೇವಾಲಯದ ಅಂದವನ್ನು ವೃದ್ಧಿಸಿದ್ದಾರೋ ಅಥವಾ ಕ್ಷೀಣಿಸಿದ್ದಾರೋ ಎಂದು ತಿಳಿದುಕೊಳ್ಳಲು!

ಮಾಹಿತಿ: ವೀರೇಂದ್ರ ಪಿ.ಎಮ್