ಬುಧವಾರ, ಡಿಸೆಂಬರ್ 23, 2009

ಚಾರಣ ಚಿತ್ರ - ೩


ಜಲಧಾರೆಯೊಂದು ಭೋರ್ಗರೆಯುತ್ತಿರುವಾಗ ಅದರ ಅಂದವನ್ನು ಸ್ವಲ್ಪ ದೂರದಿಂದಲೇ ಸವಿಯಬೇಕು!

ಶನಿವಾರ, ಡಿಸೆಂಬರ್ 12, 2009

ಮನೆಗೆ ಬಿತ್ತು ಬೀಗ

ನಿನ್ನೆ (ಡಿಸೆಂಬರ್ ೧೦, ೨೦೦೯) ಹಳದೀಪುರದ ನಾನು ಬಹಳ ಪ್ರೀತಿಸುತ್ತಿದ್ದ ನಮ್ಮ ಮೂಲ ಮನೆಗೆ ಬೀಗ ಬಿತ್ತು. ಈ ಮನೆಯಲ್ಲಿ ವಾಸವಿದ್ದ ಚಿಕ್ಕಪ್ಪ ನವೆಂಬರ್ ೨೨, ೨೦೦೯ ರಂದು ಮೃತರಾದರು. ಆದ್ದರಿಂದ ೧೯೦೮ ರಿಂದ ೨೦೦೯ ರವರೆಗೆ ನೂರಾ ಒಂದು ವರ್ಷ ಜನರ ವಾಸವಿದ್ದ ಮನೆಗೆ ಈಗ ಬೀಗ ಜಡಿಯಲಾಗಿದೆ.

ಈ ಮನೆಯಲ್ಲಿ ೨೦೦೧ ರವರೆಗೆ ತುಂಬು ಸಂಸಾರ ವಾಸವಾಗಿತ್ತು: ಚಿಕ್ಕಪ್ಪ, ಚಿಕ್ಕಮ್ಮ ಮತ್ತು ೩ ಗಂಡು ಮಕ್ಕಳು. ೨೦೦೧ ರಲ್ಲಿ ಚಿಕ್ಕಮ್ಮ ತೀರಿಕೊಂಡರು. ಅಮ್ಮನನ್ನು ಬಹಳ ಪ್ರೀತಿಸುತ್ತಿದ್ದ ಹಿರಿಮಗ ನೀತಿನ ಅಮ್ಮ ತೀರಿಕೊಂಡ ಆ ಮನೆಯಲ್ಲಿರಲಾಗದೆ ದೂರದೂರಿಗೆ ಉದ್ಯೋಗಕ್ಕೆ ಸೇರಿಕೊಂಡ. ಎರಡನೇಯವನು ಡಿಸೆಂಬರ್ ೭, ೨೦೦೮ ರಂದು ೨೫ರ ಯುವ ವಯಸ್ಸಿನಲ್ಲಿ ತೀರಿಕೊಂಡ. ಈಗ ಚಿಕ್ಕಪ್ಪ ಅವರಿಬ್ಬರನ್ನು ಹಿಂಬಾಲಿಸಿದ್ದಾರೆ. ಮನೆಯಲ್ಲಿ ಉಳಿದವನು ಈಗ ಕೊನೆಯ ಮಗ ೨೧ ವರ್ಷ ವಯಸ್ಸಿನ ನಯನ ಮಾತ್ರ. ಈಗ ನಿತಿನ ಉದ್ಯೋಗವಿದ್ದ ಊರಿಗೆ ಹಿಂದಿರುಗಿದ. ನಯನ, ಆಡ್ಕಾರದ (ಹೊನ್ನಾವರ-ಗೇರುಸೊಪ್ಪಾ ರಸ್ತೆಯಲ್ಲಿದೆ) ತನ್ನ ತಾಯಿಯ ಮನೆ ಸೇರಿಕೊಂಡಿದ್ದಾನೆ.

ನಾವಂತೂ ಉಡುಪಿಗೆ ಬಂದು ೩೨ ವರ್ಷಗಳಾದವು. ಅದಕ್ಕೂ ಮೊದಲು ೫ ವರ್ಷ ಹಳಿಯಾಳದಲ್ಲಿದ್ದೆವು. ಆದರೂ ನನಗೆ ಹಳದೀಪುರದ ಈ ಮನೆಯೇ ಮನೆ. ನಾಲ್ಕಾರು ದಿನ ರಜೆ ಬಂತೆಂದರೆ ನಾನಿಲ್ಲಿ ಹಾಜರು. ರಜೆ ಬರುವ ಮೊದಲೇ ಚಿಕ್ಕಪ್ಪನಿಂದ ಅಪ್ಪನಿಗೆ ನನ್ನನ್ನು ಮತ್ತು ತಮ್ಮನನ್ನು ಕಳಿಸುವಂತೆ ಪತ್ರ ಬರುತ್ತಿತ್ತು. ೧೯೯೫ರ ನಂತರ ಓದು ಮತ್ತು ಉದ್ಯೋಗದ ಕಾರಣಗಳಿಂದ ಮನಬಂದಂತೆ ಹಳದೀಪುರಕ್ಕೆ ತೆರಳಲು ಆಗುತ್ತಿರಲಿಲ್ಲವಾದರೂ, ಅವಕಾಶ ಸಿಕ್ಕಾಗೆಲ್ಲಾ ಅಲ್ಲಿರುತ್ತಿದ್ದೆ.


೨೦೦೭ರ ಎಪ್ರಿಲ್ ತಿಂಗಳಲ್ಲಿ ನಡೆದ ನನ್ನ ವಿವಾಹವೇ ಈ ಮನೆಯಲ್ಲಿ ನಡೆದ ಕೊನೆಯ ಸಮಾರಂಭ. ನನ್ನ, ಅಪ್ಪನ ಮತ್ತು ಅಮ್ಮನ ಪರಿಚಯದವರೆಲ್ಲಾ ಉಡುಪಿ ಮತ್ತು ಆಸುಪಾಸಿನ ಸಮೀಪದವರಾಗಿದ್ದರೂ ಮತ್ತು ಅಮ್ಮನಿಗೆ ಉಡುಪಿಯಲ್ಲೇ ನನ್ನ ಮದುವೆ ನಡೆಯಬೇಕೆಂಬ ಆಸೆ ಇದ್ದರೂ, ನಾನು ಮಾತ್ರ ಮದುವೆ ಹಳದೀಪುರದ ಮನೆಯಲ್ಲೇ ನಡೆಯಬೇಕೆಂದು ಪಟ್ಟು ಹಿಡಿದು ಮದುವೆ ದಿಬ್ಬಣ ಅಲ್ಲಿಂದಲೇ ಹೊರಡುವಂತೆ ನೋಡಿಕೊಂಡಿದ್ದೆ. ಆಗ ಚಿಕ್ಕಪ್ಪ ತುಂಬು ಸಂಭ್ರಮದಿಂದ ಆಚೀಚೆ ಓಡಾಡಿದ್ದರು. ಅವರ ಸಂಭ್ರಮವನ್ನು ಕಂಡು ಹಳದೀಪುರವೇ ಬೆರಗಾಗಿತ್ತು. ಮದುವೆ ನಡೆಯುತ್ತಿದ್ದಲ್ಲಿಯೂ ಅದೇ ಸಂಭ್ರಮ ಮುಂದುವರಿದಿತ್ತು. ಅತಿಥಿಗಳನ್ನು ಬರಮಾಡಿಕೊಳ್ಳುವುದೇನು... ಬೀಳ್ಕೊಡುವುದೇನು... ಮದುವೆ ನಂತರದ ಎರಡು ದಿನಗಳಲ್ಲಿರುವ ಔತಣ ಸಮಾರಂಭದಲ್ಲೂ ಅದೇ ಉತ್ಸಾಹ, ಸಂತೋಷ. ಮತ್ತೆ ಯುವಕನಾಗಿದ್ದರು ಚಿಕ್ಕಪ್ಪ. ತನ್ನ ಅಣ್ಣನ ಮಗನ ಮದುವೆಗೇ ಈ ಪರಿ ಸಂಭ್ರಮಿಸುತ್ತಿರಬೇಕಾದರೆ ಇನ್ನು ತನ್ನ ೩ ಗಂಡುಮಕ್ಕಳ ವಿವಾಹದಲ್ಲಿ ಇನ್ಯಾವ ಪರಿ ಸತೋಷಪಟ್ಟಾನು ಈತ, ಎಂದು ಹಳದೀಪುರ ಆಡಿಕೊಳ್ಳುತ್ತಿತ್ತು. ಆದರೆ... ಆ ದಿನಗಳು ಬರಲೇ ಇಲ್ಲ.


ಅಪ್ಪನಿಗೆ ಇನ್ನೂ ೪ ತಮ್ಮಂದಿರಿದ್ದಾರೆ. ಇವರೆಲ್ಲರೂ ದೂರದ ಊರುಗಳಲ್ಲಿ ಉದ್ಯೋಗದಲ್ಲಿದ್ದಾರೆ. ಒಬ್ಬರು ವಿದೇಶದಲ್ಲಿದ್ದಾರೆ. ೧೪ನೇ ದಿವಸದ ನಂತರ ಎಲ್ಲರೂ ಹಿಂತಿರುಗಿದ ಬಳಿಕ ಮೊನ್ನೆ ಬುಧವಾರ ರಾತ್ರಿ ಮಲಗಿದಾಗ ಅದೇನೋ ಬೇಸರ. ನಾಳೆ ಮನೆಗೆ ಬೀಗ ಎಂಬ ಯೋಚನೆ. ನಿನ್ನೆ ಮುಂಜಾನೆ ನೀತಿನ ಮತ್ತು ನಯನ ಇಬ್ಬರನ್ನೂ ಹೊನ್ನಾವರದ ನ್ಯಾಯಾಲಯಕ್ಕೆ ಕರೆದೊಯ್ದು, ಇವರಿಬ್ಬರೇ ಚಿಕ್ಕಪ್ಪನ ವಾರಿಸುದಾರರು ಎಂದು ಸಾಬೀತುಪಡಿಸಲು ಅವಶ್ಯವಿದ್ದ ಕಾಗದ ಪತ್ರಗಳನ್ನೆಲ್ಲಾ ರೆಡಿ ಮಾಡಿ ನ್ಯಾಯಾಧೀಶರ ಸಹಿ ಹಾಕಿ ಮನೆಗೆ ಹಿಂತಿರುಗಿದಾಗ ಮಧ್ಯಾಹ್ನ ೩ ಗಂಟೆ.

ಅಪ್ಪ ಊಟ ಮಾಡಿ ನಮಗಾಗಿ ಕಾಯುತ್ತಿದ್ದರು. ನಾವು ೩ ಮಂದಿ ಬೇಗನೇ ಊಟ ಮುಗಿಸಿದೆವು. ಚಿಕ್ಕಪ್ಪನ ಬಲಗೈ ಬಂಟನಂತಿದ್ದ ಪಕ್ಕದ್ಮನೆ ಉದಯನದ್ದೇ ಅಡಿಗೆ. ಎಲ್ಲಾ ಕೋಣೆಗಳಿಗೂ ಒಂದೊಂದಾಗಿ ಬೀಗ ಹಾಕುವ ಪ್ರಕ್ರಿಯೆ ಶುರುವಾಯಿತು. ನನಗಂತೂ ನೋಡಲಾಗುತ್ತಿರಲಿಲ್ಲ. ನಯನ ಬಿಕ್ಕಿ ಬಿಕ್ಕಿ ಅಳುತ್ತಾ ಬೀಗ ಜಡಿಯುತ್ತಿದ್ದ. ಆತನ ಅಳು ಜೋರಾಗುತ್ತಿದ್ದಂತೆಯೇ, ಆತನನ್ನು ಬದಿಗೆ ಕುಳ್ಳಿರಿಸಿ, ಉದಯನಿಗೆ ಬೀಗ ಹಾಕಲು ಹೇಳಿದೆ. ಮೊದಲು ಮಾಳಿಗೆಗೆ ತೆರಳಿ ಅಲ್ಲಿನ ೨ ಕೋಣೆಗಳಿಗೆ ಬೀಗ ಜಡಿದು ಬಂದೆವು. ನಂತರ ಅಡಿಗೆ ಮನೆಗೆ ಮತ್ತು ಇನ್ನುಳಿದ ೨ ಕೋಣೆಗಳಿಗೆ. ನಂತರ ದೇವರ ಕೋಣೆಗೆ ತೆರಳಿ ನಾನು, ಅಪ್ಪ, ನಯನ ಮತ್ತು ನೀತಿನ ದೇವರಿಗೆ ನಮಸ್ಕರಿಸಿ ಬಂದೆವು. ದೇವರ ಕೋಣೆಯಿಂದ ಹೊರಬರುವಾಗ ದು:ಖ ತಾಳಲಾಗದೆ ಅಪ್ಪ ಗಳಗಳನೆ ಅತ್ತುಬಿಟ್ಟರು. ಉದಯ ಅವರನ್ನು ಅಪ್ಪಿ ಹಿಡಿದು ಸಮಾಧಾನಗೊಳಿಸತೊಡಗಿದ. ಯಾವುದೇ ಸನ್ನಿವೇಶದಲ್ಲೂ ಗಟ್ಟಿಗನಾದ ನನಗೂ ನಾನು ಭಾವುಕನಾಗುವುದನ್ನು ತಡೆದುಕೊಳ್ಳಲು ಅಪ್ಪ ಆ ಪರಿ ಅಳುವುದನ್ನು ನೋಡಿದಾಗ ಆಗಲಿಲ್ಲ. ಕಣ್ಣುಗಳು ತೇವಗೊಂಡರೂ ಕೂಡಲೇ ಸಾವರಿಸಿಕೊಂಡೆ. ಈ ದೇವರ ಕೋಣೆಗೇ ಲೀನಾ ಬಲಗಾಲಿಟ್ಟು ಒಳಗೆ ಬಂದದ್ದು ಆಗ ನೆನಪಾಯಿತು. ನಾವು ಮನೆಯ ಗೇಟು ದಾಟಿದ ಬಳಿಕ ದೇವರ ಕೋಣೆಗೆ ಬೀಗ ಹಾಕಿ ಬೀಗದಕೈ ತಂದುಕೊಡುವಂತೆ ಉದಯನಿಗೆ ಸೂಚಿಸಿದೆ.


ತುಳಸಿಗೂ ನಮಸ್ಕರಿಸಿ, ಗೇಟು ದಾಟಿದಾಗ ಅಲ್ಲಿ ನೆರೆದಿದ್ದ ಕೇರಿಯ ಜನರೆಲ್ಲರ ಕಣ್ಣಲ್ಲೂ ನೀರು. ಹಳದೀಪುರದವರೆಲ್ಲರ ಪಾಲಿಗೂ ನಯನ ’ಪುಟ್ಟು’ ಆಗಿದ್ದ. ಕೊಂಕಣಿಯಲ್ಲಿ ಪುಟ್ಟು ಎಂದರೆ ’ಸಣ್ಣವ’ ಎಂದು. ಇನ್ನು ಈ ಪುಟ್ಟು ಇಲ್ಲಿರುವುದಿಲ್ಲ ಎಂದು ಎಲ್ಲರಿಗೂ ವಿಷಾದ. ಅಳು ಎಲ್ಲಾ ಜೋರಾಗುತ್ತಿದ್ದಂತೆಯೇ, ಅಪ್ಪನನ್ನು ರಿಕ್ಷಾದೊಳಗೆ ಕುಳ್ಳಿರಿಸಿ, ಮನೆಯೆಡೆ ಶೂನ್ಯವಾಗಿ ದಿಟ್ಟಿಸುತ್ತಿದ್ದ ನೀತಿನನನ್ನು ರಿಕ್ಷಾದೊಳಗೆ ತಳ್ಳಿದೆ. ಅಷ್ಟರಲ್ಲಿ ಉದಯ ದೇವರ ಕೋಣೆಯ ಬೀಗದಕೈ ತಂದುಕೊಟ್ಟ. ಆ ಜಾಗ ಬಿಟ್ಟು ಕದಲಲು ಒಪ್ಪದ ನಯನನನ್ನು ಉದಯ ಧೈರ್ಯದ ಮಾತುಗಳನ್ನಾಡಿ, ಬೈದು ರಿಕ್ಷಾದೊಳಗೆ ಕುಳ್ಳಿರಿಸಿದ. ನಂತರ ನಾನು ಕುಳಿತುಕೊಂಡ ಬಳಿಕ ಆಟೋ ಹೊನ್ನಾವರ ಬಸ್ಸು ನಿಲ್ದಾಣದೆಡೆ ದೌಡಾಯಿಸಿತು. ಸಂಜೆ ೪ರ ಸಮಯವಾಗಿತ್ತು.