ಭಾನುವಾರ, ಮೇ 31, 2009

ಅಘೋರೇಶ್ವರ ದೇವಾಲಯ - ಇಕ್ಕೇರಿ


೧೭-೦೨-೨೦೦೮. ಸುಮಾರು ೮೦ ವರ್ಷಗಳ ಕಾಲ ಕೆಳದಿ ಸಾಮ್ರಾಜ್ಯದ ದ್ವಿತೀಯ ರಾಜಧಾನಿಯಾಗಿ ಮೆರೆದಿದ್ದ ಊರು ಇಕ್ಕೇರಿ. ಕೆಳದಿಯಿಂದ ಇಕ್ಕೇರಿಗೆ ರಾಜಧಾನಿಯನ್ನು ಸ್ಥಳಾಂತರಿಸಿದ್ದು ಸದಾಶಿವ ನಾಯಕ ಎಂಬ ದೊರೆ. ಇಕ್ಕೇರಿಯಲ್ಲಿರುವ ಅಘೋರೇಶ್ವರ ದೇವಾಲಯದ ಭವ್ಯತೆಯನ್ನು ನೋಡಿಯೇ ಅನುಭವಿಸಬೇಕು. ನಿರೀಕ್ಷೆಗೂ ಮೀರಿದ ಅಗಾಧ ಆಕಾರ, ವಿಶಾಲ ನವರಂಗ, ಕಲಾತ್ಮಕ ಮುಖಮಂಟಪ, ಮುಖಮಂಟಪದೊಳಗಿನ ನಂದಿಯ ಸುಂದರ ಮೂರ್ತಿ ಇವೆಲ್ಲವನ್ನೂ ನೋಡುತ್ತಿದ್ದರೆ ದೇವಾಲಯದ ಪ್ರಾಂಗಣವನ್ನು ಬಿಟ್ಟು ಬರಲು ಮನಸ್ಸಾಗುವುದಿಲ್ಲ. ದೇವಾಲಯದ ಅಗಾಧ ಗಾತ್ರಕ್ಕೆ ತಕ್ಕಂತೆ ಇದೆ ನಂದಿಯ ಗಾತ್ರ.


ಕೆಳದಿ ಅರಸ ಸದಾಶಿವ ನಾಯಕನ ಪುತ್ರ ಸಂಕಪ್ಪ ನಾಯಕನು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ಅಲ್ಲಿ ಕಂಡಿದ್ದ ಅಘೋರೇಶ್ವರನ ಸುಂದರ ಮೂರ್ತಿಯಿಂದ ಪ್ರಭಾವಿತನಾಗಿ, ತನ್ನ ರಾಜಧಾನಿಯಲ್ಲಿ ಅದೇ ತರಹದ ಮೂರ್ತಿಯನ್ನು ನಿರ್ಮಿಸಬೇಕೆಂದು ಅದರ ಚಿತ್ರವನ್ನು ಬರೆಸಿಕೊಂಡು ಹಿಂತಿರುಗಿದನೆಂದು ಕೆಳದಿಯ ಗ್ರಂಥ 'ನೃಪವಿಜಯ'ದಲ್ಲಿ ಉಲ್ಲೇಖವಾಗಿದೆ. ಅದೇ ಪ್ರಕಾರ ಇಕ್ಕೇರಿಯಲ್ಲಿ ಬೃಹತ್ತಾದ ಅಘೋರೇಶ್ವರ ಮೂರ್ತಿಯನ್ನು ಶಿಲೆಯಲ್ಲಿ ನಿರ್ಮಿಸಿದನೆಂದು ನೃಪವಿಜಯ ತಿಳಿಸುತ್ತದೆ. ಈಗ ಗರ್ಭಗುಡಿಯಲ್ಲಿ ಮೂಲ ಅಘೋರೇಶ್ವರ ಮೂರ್ತಿ ಇಲ್ಲ. ಸುಮಾರು ನಾಲ್ಕು ಅಡಿ ಎತ್ತರದ ಪೀಠ ಮಾತ್ರ ಈಗ ಉಳಿದಿದೆ. ಇದರ ಮೇಲೆ ಒಂದು ಸಣ್ಣ ಲಿಂಗವನ್ನಿರಿಸಿ ಈಗ ಪೂಜೆ ಸಲ್ಲಿಸಲಾಗುತ್ತಿದೆ.


ಅಘೋರೇಶ್ವರ ದೇವಸ್ಥಾನದ್ದು ಏಕಕೂಟ ರಚನೆಯಾಗಿದ್ದು, ಬೃಹತ್ ಗರ್ಭಗೃಹ, ಅಂತರಾಳ ಮತ್ತು ವಿಶಾಲ ನವರಂಗಗಳನ್ನು ಹೊಂದಿದೆ. ನವರಂಗವು ೧೬ ಬೃಹತ್ ಆಕಾರದ ಕಲಾತ್ಮಕ ಕಂಬಗಳನ್ನು ಹೊಂದಿದೆ. ದೇವಸ್ಥಾನಕ್ಕಿರುವ ೩ ದ್ವಾರಗಳೂ ನವರಂಗಕ್ಕೇ ತೆರೆದುಕೊಳ್ಳುತ್ತವೆ. ಪ್ರಮುಖ ದ್ವಾರದ ಮುಂದೆನೇ ಮುಖಮಂಟಪವಿದ್ದು, ನಂದಿ ಆಸೀನನಾಗಿದ್ದಾನೆ. ಅಘೋರೇಶ್ವರ ದೇವಸ್ಥಾನದ ಪಕ್ಕದಲ್ಲೇ ಪಾರ್ವತಿಯ ಗುಡಿಯಿದೆ.


ಕೆಳದಿ ವಾಸ್ತುಶೈಲಿಯಲ್ಲಿ ಮಾತ್ರ ಇರುವ ವೈಶಿಷ್ಟ್ಯತೆಯೆಂದರೆ ದೇವಾಲಯದ ಪ್ರಮುಖ ದ್ವಾರದ ಒಳಗೆ ಮತ್ತು ಗರ್ಭಗುಡಿಯ ದ್ವಾರದ ಮುಂದೆ ನೆಲದಲ್ಲಿ ಚಿತ್ರಿಸಲಾಗಿರುವ ಮನುಷ್ಯರ ಉಬ್ಬುಶಿಲ್ಪ ಅಥವಾ ರೇಖಾಚಿತ್ರಗಳು. ಈ ಚಿತ್ರ/ಶಿಲ್ಪ ಗಳು ಯಾವಾಗಲೂ ಎರಡೂ ಕೈಗಳನ್ನು ಜೋಡಿಸಿ ಸ್ವಾಗತಗೈಯುವ ರೂಪದಲ್ಲೇ ಇರುತ್ತವೆ. ದೇವಾಲಯಕ್ಕೆ ಬರುವವರನ್ನು ಸ್ವಾಗತಿಸಲು ಮತ್ತು ದೇವಸ್ಥಾನದಂತಹ ಪವಿತ್ರ ಸ್ಥಳಕ್ಕೆ ಬರುವವರ ಪಾದ ಸೇವೆ ಮಾಡಲೋಸುಗ ದ್ವಾರದ ಮುಂದೆಯೇ ಈ ಶಿಲ್ಪ/ಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಒಳಗೆ ಬರುವವರು ಇವುಗಳನ್ನು ತುಳಿದೇ ಮುಂದೆ ಬರಬೇಕಾಗುತ್ತದೆ. ಕವಲೇದುರ್ಗದ ಕೋಟೆಯ ೩ನೇ ಸುತ್ತಿನಲ್ಲಿರುವ ಕೆಳದಿ ರಾಜರೇ ನಿರ್ಮಿಸಿರುವ ಕಾಶಿ ವಿಶ್ವನಾಥ ದೇವಸ್ಥಾನವನ್ನು ಪ್ರವೇಶಿಸುವಾಗಲೂ ದ್ವಾರದ ಒಳಗೆ ಕಾಲಿಟ್ಟೊಡನೆಯೇ ರಾಜನರ್ತಕಿಯ ರೇಖಾಚಿತ್ರವನ್ನು ತುಳಿದೇ ಬರಬೇಕಾಗುತ್ತದೆ. ಅಂತಹ ಸ್ವಾಗತ ದೇವಸ್ಥಾನಕ್ಕೆ ಬರುವವರಿಗೆ! ಕೆಳದಿಯ ರಾಮೇಶ್ವರ ದೇವಸ್ಥಾನದಲ್ಲೂ ಗರ್ಭಗುಡಿಯ ಮುಂದೆ ಇದೇ ರೀತಿಯ ಉಬ್ಬುಶಿಲ್ಪಗಳಿವೆ.


ಇನ್ನೊಂದು ವಾದವೆಂದರೆ...ದೇವಾಲಯ ನಿರ್ಮಾಣ ಸಮಯದಲ್ಲಿ ಯಾವುದಾದರು ಪ್ರಾಣಿ/ಜಂತು/ಮನುಷ್ಯ ಮರಣ ಉಂಟಾದರೆ ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಲು ಅರಸರು ತಮ್ಮ ಉಬ್ಬುಶಿಲ್ಪಗಳನ್ನು ನಿರ್ಮಿಸಲು ಆದೇಶ ನೀಡುತ್ತಿದ್ದರು. ದೇವಾಲಯಕ್ಕೆ ಬರುವವರು ಈ ಉಬ್ಬುಶಿಲ್ಪ ಅಥವಾ ರೇಖಾಚಿತ್ರಗಳನ್ನು ತುಳಿದೇ ಬರಬೇಕಾಗುತ್ತಿದ್ದರಿಂದ ಆ ರೀತಿಯಲ್ಲಿ ಪ್ರಾಯಶ್ಚಿತ್ತ ಪಡೆದಂತಾಗುವುದು ಎಂಬ ಅಭಿಪ್ರಾಯ. ಕವಲೇದುರ್ಗದ ದೇವಸ್ಥಾನದಲ್ಲಿ ರಾಜನರ್ತಕಿಯು ತನ್ನ ರೇಖಾಚಿತ್ರವನ್ನು ದೇವಸ್ಥಾನದ ದ್ವಾರದಲ್ಲಿ ರಚಿಸುವಂತೆ ಅರಸರಲ್ಲಿ ನಿವೇದನೆಯಿಟ್ಟಿರಬಹುದು.

ಮಾಹಿತಿ: ಜಯದೇವಪ್ಪ ಜೈನಕೇರಿ

ಭಾನುವಾರ, ಮೇ 24, 2009

ದೊಡ್ಡಬಸಪ್ಪ ದೇವಾಲಯ - ಡಂಬಳ


೩೦-೧೨-೨೦೦೮. ಗದಗ ಜಿಲ್ಲೆ ಐತಿಹಾಸಿಕವಾಗಿ ಬಹಳ ಪ್ರಾಮುಖ್ಯದ್ದು. ಜಿಲ್ಲೆಯ ತುಂಬಾ ಇರುವ ಪ್ರಾಚೀನ ದೇವಾಲಯಗಳು ಜಿಲ್ಲೆಯ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ. ಕಲ್ಯಾಣಿ ಚಾಳುಕ್ಯರು, ಯಾದವರು ಮತ್ತು ಕಳಚೂರ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ವೈಭವವಾಗಿ ಮೆರೆದ ಸ್ಥಳ ಡಂಬಳ, ಈಗೊಂದು ಸಣ್ಣ ಹಳ್ಳಿ. ಇಲ್ಲಿ ಪುರಾತತ್ವ ಇಲಾಖೆ ೨ ದೇವಾಲಯಗಳನ್ನು ಚೆನ್ನಾಗಿ ಕಾಪಾಡಿಕೊಂಡಿದೆ.


ದೊಡ್ಡಬಸಪ್ಪ ದೇವಾಲಯ ತನ್ನದೇ ಆದ ವಿಶಿಷ್ಟ ವಾಸ್ತುಶೈಲಿಯನ್ನು ಹೊಂದಿದೆ. ವೃತ್ತ ಮಾದರಿಯ ದ್ರಾವಿಡ ವಿಮಾನ ಶೈಲಿಯ ಈ ಏಕಕೂಟ ದೇವಸ್ಥಾನ ಮುಖಮಂಟಪ, ನವರಂಗ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಶಿವಲಿಂಗ ಸುಮಾರು ೫ ಅಡಿ ಎತ್ತರವಿದೆ. ಮುಖಮಂಟಪದಲ್ಲಿ ನಂದಿಯ ದೊಡ್ಡ ಮೂರ್ತಿಯಿದೆ. ಇಲ್ಲಿನ ನಂದಿ ದೊಡ್ಡ ಆಕಾರದ್ದಾಗಿರುವುದರಿಂದ ಈ ದೇವಾಲಯಕ್ಕೆ ’ದೊಡ್ಡಬಸಪ್ಪ ದೇವಾಲಯ’ ಎಂದು ಹೆಸರು. ಮುಖಮಂಟಪದಿಂದ ನವರಂಗಕ್ಕೆ ಪ್ರವೇಶಿಸುವ ದ್ವಾರದ ಸಮೀಪವೆ ಇನ್ನೊಂದು ನಂದಿಯ ಮೂರ್ತಿಯನ್ನಿಡಲಾಗಿದೆ. ಇದು ಸಣ್ಣದಾಗಿದ್ದು ಎಲ್ಲಿಯೋ ದೊರಕಿದ್ದನ್ನು ಇಲ್ಲಿ ತಂದಿರಿಸಲಾಗಿದ್ದಿರಬಹುದು.


ಗರ್ಭಗುಡಿಯ ದ್ವಾರ ೭ ತೋಳಿನದ್ದಾಗಿದೆ. ನವರಂಗದಲ್ಲಿ ಸುಂದರ ಪ್ರಭಾವಳಿ ಕೆತ್ತನೆಯಿರುವ ನಾಲ್ಕು ಕಂಬಗಳಿವೆ. ದೇವಾಲಯದ ನವರಂಗಕ್ಕೆ ೨ ದ್ವಾರಗಳಿವೆ. ವಿಶೇಷವೆಂದರೆ ಪ್ರಮುಖ ದ್ವಾರಕ್ಕಿಂತ (ನಂದಿ ಇರುವ), ಇನ್ನೊಂದು ದ್ವಾರವೇ ಸುಂದರವಾಗಿದೆ. ನಂದಿ ಇರುವ ದ್ವಾರವನ್ನು ದೇವಾಲಯದೊಳಗೆ ಪ್ರವೇಶಿಸಲು ಬಳಸಲಾಗುತ್ತಿತ್ತೇನೋ. ಆದರೆ ಈಗ ಈ ಇನ್ನೊಂದು ದ್ವಾರವನ್ನು ಅನುಕೂಲತೆಯ ಆಧಾರದಲ್ಲಿ ದೇವಾಲಯದ ಮುಖ್ಯ ದ್ವಾರವನ್ನಾಗಿ ಬಳಸಲಾಗುತ್ತಿದೆ. ಎರಡೂ ದ್ವಾರಗಳು ೭ ತೋಳಿನದಾಗಿದ್ದು ಸುಂದರ ಕೆತ್ತನೆಗಳನ್ನು ಹೊಂದಿವೆ. ಎರಡನೇ ದ್ವಾರಕ್ಕಿರುವ ಮಂಟಪ ಬಹಳ ಸುಂದರವಾಗಿದ್ದು ಇಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ದ್ವಾರಕ್ಕಿರುವ ೨ ಕಂಬಗಳ ಕೆತ್ತನೆಯಂತೂ ಅತ್ಯಾಕರ್ಷಕ.


ನಕ್ಷತ್ರಾಕಾರದ ವಿನ್ಯಾಸ, ವೃತ್ತಾಕಾರದ ಗರ್ಭಗುಡಿ ಹಾಗೂ ವೃತ್ತಾಕಾರದ ಗೋಪುರಗಳ ವಿನ್ಯಾಸ ಬಹಳ ಅಪರೂಪದ್ದು. ನೋಡಲೂ ಅಷ್ಟೇ ಚಂದ. ವೃತ್ತಾಕಾರವಾಗಿ ಗರ್ಭಗುಡಿಯ ಹೊರಭಾಗವನ್ನು ನಿರ್ಮಿಸಲಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಕಂಬಗಳನ್ನು ಬಳಸಲಾಗಿದೆ. ೨೪ ಕಂಬಗಳನ್ನು ಒತ್ತೊತ್ತಾಗಿ ನಿಲ್ಲಿಸಿರುವುದರಿಂದ ಕಂಬಗಳ ನಡುವೆ ಜಾಗ ಕಡಿಮೆ. ಉಳಿದೆಲ್ಲಾ ದೇವಾಲಯಗಳಲ್ಲಿ ೨ ಕಂಬಗಳ ನಡುವಿನ ಜಾಗದಲ್ಲಿ ಕೆತ್ತನೆ ಕಾರ್ಯ ಮಾಡಲು ಅನುಕೂಲವಿರುತ್ತದೆ. ಆದರೆ ಇಲ್ಲಿ ಕಂಬಗಳನ್ನು ಒತ್ತೊತ್ತಾಗಿ ನಿಲ್ಲಿಸಲಾಗಿರುವುದರಿಂದ ಕೆತ್ತನೆಗೆ ಸ್ಥಳಾವಕಾಶ ಕಡಿಮೆ. ಆದರೂ ಅಷ್ಟೇ ಸಣ್ಣ ಜಾಗದಲ್ಲಿ ಕರಾರುವಕ್ಕಾಗಿ ಸುಂದರ ಕೆತ್ತನೆಗಳನ್ನು ಮಾಡಲಾಗಿದೆ. ಈ ಕೆತ್ತನೆಗಳನ್ನು ನೋಡುತ್ತಾ ಗರ್ಭಗುಡಿಗೆ ಹೊರಗಿನಿಂದ ಸುತ್ತು ಹಾಕುವುದೇ ಸಂತೋಷದ ಅನುಭವ. ಗೋಪುರದಲ್ಲಿ ಕೆಲವೆಡೆ ಕೆತ್ತನೆಗಳು ಬಿದ್ದುಹೋಗಿದ್ದು ಹಿಂಭಾಗದ ಕಲ್ಲು ಮಾತ್ರ ಕಾಣುತ್ತಿದೆ.


ದೊಡ್ಡಬಸಪ್ಪ ದೇವಾಲಯದಲ್ಲಿ ಬಳಸಲಾಗಿರುವ ನಕ್ಷತ್ರ ಮಾದರಿಯ ಶೈಲಿ, ನಂತರ ಮುಂದೆ ಹೊಯ್ಸಳ ಆಳ್ವಿಕೆ ಸಮಯದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳಿಗೆ ಸ್ಫೂರ್ತಿ ಎಂದು ನಂಬಲಾಗಿದೆ. ಕಲ್ಯಾಣಿ ಚಾಲುಕ್ಯ ದೊರೆ ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ ಸುಮಾರು ಇಸವಿ ೧೧೨೪ರಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಅಜ್ಜಯ್ಯ ನಾಯಕ ಎಂಬವನು ಈ ದೇವಾಲಯವನ್ನು ನಿರ್ಮಿಸಿದ್ದರಿಂದ ಇದನ್ನು ಮೊದಲು ಅಜ್ಜಮೇಶ್ವರ ದೇವಾಲಯವೆಂದು ಕರೆಯಲಾಗುತ್ತಿತ್ತು.


ದೊಡ್ಡಬಸಪ್ಪ ದೇವಾಲಯದ ಎದುರಿಗೇ ಸೋಮೇಶ್ವರನ ಗುಡಿಯಿದೆ. ಈ ದೇವಾಲಯ ೨೪ ಕಂಬಗಳ ನವರಂಗ, ಅಂತರಾಳ ಮತ್ತು ಗರ್ಭಗುಡಿಯನ್ನು ಹೊಂದಿದೆ. ನಂದಿ ನವರಂಗದ ನಟ್ಟನಡುವೆ ಆಸೀನನಾಗಿದ್ದಾನೆ. ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಹಾಗೂ ಮೇಲ್ಗಡೆ ಜಾಲಂಧ್ರಗಳ ರಚನೆಯಿದೆ ಮತ್ತು ಗರ್ಭಗೃಹದ ದ್ವಾರ ೭ ತೋಳಿನದ್ದಾಗಿದೆ.

ಭಾನುವಾರ, ಮೇ 17, 2009

ಅಲೆಮಾರಿ ಹಾಡು ೨

ಈ ತಿಂಗಳ ಅಲೆಮಾರಿ ಹಾಡು - ಬ್ಯಾಚೆಲರ್ ಬಾಯ್. ಈ ಹಾಡನ್ನು ಹಾಡಿ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದೆ! ಈ ಹಾಡಿನ ವಿಡಿಯೋ ಇಲ್ಲಿ ನೋಡಬಹುದು. ಕೆಳಗಿನ ಪ್ಲೇಯರ್-ನಲ್ಲೂ ಕೇಳಬಹುದು.

When I was young, my father said,
"Son, I've something to say."
And what he told me I'll never forget
until my dying day.

He said, "Son, you are a bachelor boy
And that's the way to stay.
Son, you'll be a bachelor boy until your dying day.

"When I was sixteen I fell in love
With a girl as sweet as can be.
But I remembered just in time what my daddy said to me.

He said, "Son, you are a bachelor boy
And that's the way to stay.
Son, you'll be a bachelor boy until your dying day.

As time goes by,
I probably will meet a girl and fall in love.
Then, I'll get married, have A-wife and A-child
And they'll be my turtle dove.

But until then
Ill be a bachelor boy and thats the way Ill stay,
Happy to be a bachelor boy,
Until my dyin day.
Heyyyy
Ill be a bachelor boy and thats the way Ill stayyyyy,
Happy to be a bachelor boy,
Until my dyin dayyyy yyyy yyyy.

ಭಾನುವಾರ, ಮೇ 10, 2009

ಕರ್ನಾಟಕ ಕ್ರಿಕೆಟ್ ೯ - ರಾಬಿನ್ ಉತ್ತಪ್ಪ


ತನ್ನ ೧೭ರ ಹರೆಯದಲ್ಲೇ ರಾಜ್ಯ ತಂಡಕ್ಕೆ ಆಡುವ ಮೂಲಕ ರಣಜಿಗೆ ಪಾದಾರ್ಪಣೆ ಮಾಡಿದವರು ರಾಬಿನ್ ಉತ್ತಪ್ಪ. ಫರೀದಾಬಾದಿನಲ್ಲಿ ಹರ್ಯಾನ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ೩೨ ಎಸೆತಗಳನ್ನು ಎದುರಿಸಿ ೪೦ ಓಟಗಳನ್ನು ಗಳಿಸಿದರು. ಈಗಲೂ ಅದೇ ರೀತಿಯಲ್ಲಿ ಆಡುತ್ತಿದ್ದಾರೆ. ರಾಬಿನ್ ಒಬ್ಬ ಶಾಟ್-ಲೆಸ್ ವಂಡರ್. ಈತನಲ್ಲಿರುವುದೇ ನಾಲ್ಕೈದು ರೀತಿಯ ಹೊಡೆತಗಳು. ಅದನ್ನೇ ಬಂಡವಾಳ ಮಾಡಿಕೊಂಡು ಈವರೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಆದರೆ ಇನ್ನು ಮುಂದೆ ತನ್ನ ಆಟವನ್ನು ಗಣನೀಯವಾಗಿ ಸುಧಾರಿಸದಿದ್ದರೆ, ಕ್ರಿಕೆಟಿಗನೊಬ್ಬನಿಗೆ ’ಬ್ರೆಡ್ ಎಂಡ್ ಬಟರ್’ ಎನ್ನುವ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಕೊಳ್ಳದಿದ್ದರೆ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲೇ ಜೀವನ ಕಳೆಯುವ ಸಾಧ್ಯತೆಗಳಿವೆ.

ರಾಜ್ಯ ತಂಡಕ್ಕೆ ಅರುಣ್ ಕುಮಾರ್ ನಂತರ ಒಬ್ಬ ಸಮರ್ಥ ಆರಂಭಿಕ ಆಟಗಾರನಾಗಿ ದೊರಕಿದವರು ರಾಬಿನ್. ಆಟದ ಶೈಲಿ ವೇಗವಾಗಿ ರನ್ ಗಳಿಸುವುದು. ಬೌಂಡರಿ ಮತ್ತು ಸಿಕ್ಸರ್ ಬಾರಿಸುವುದೇ ರನ್ ಗಳಿಸಲು ಇರುವ ಏಕೈಕ ದಾರಿ ಎಂಬ ಮನೋಭಾವ. ರಾಜ್ಯಕ್ಕೆ ಆಡಿದ ಆರಂಭದ ದಿನಗಳಲ್ಲಿ ’ಬೌಲರ್ಸ್ ಅಸ್ಸಾಸಿನ್’ ಎಂಬ ಹೆಸರು ಉತ್ತಪ್ಪನಿಗಿತ್ತು. ಈಗೀಗ ರಾಬಿನ್ ಆಡುತ್ತಿರುವ ಪರಿ ನೋಡಿದರೆ ಇದೇ ಬೌಲರುಗಳು ’ರಾಬಿನ್ಸ್ ಅಸ್ಸಾಸಿನ್ಸ್’ಗಳಾಗಿದ್ದಾರೆ ಎನ್ನಬಹುದೇನೋ.

ತನ್ನ ಮೊದಲ ರಣಜಿ ಋತುವಿನಲ್ಲಿ ಒಂದೇ ಪಂದ್ಯ ಆಡಿದ ರಾಬಿನ್, ೨ನೇ ಋತುವಿನಲ್ಲಿ ೨ ಪಂದ್ಯ ಆಡಿ ೮.೦೦ರ ಸರಾಸರಿಯಲ್ಲಿ ರನ್ನು ಗಳಿಸಿ ವೈಫಲ್ಯ ಕಂಡರು. ೩ನೇ ಮತ್ತು ೪ನೆ ಋತುಗಳಲ್ಲಿ ಕ್ರಮವಾಗಿ ೪೨.೦೦ ಮತ್ತು ೩೫.೦೦ ಸರಾಸರಿಯಲ್ಲಿ ಸಾಧಾರಣ ಆಟ ತೋರ್ಪಡಿಸಿದರು. ಇದೇ ಸಮಯದಲ್ಲಿ ತನ್ನ ಚೊಚ್ಚಲ ಅಂತರಾಷ್ಟ್ರೀಯ ಏಕದಿನ ಪಂದ್ಯವನ್ನೂ ಆಡಿದರು. ಆದರೆ ರಾಬಿನ್ ನಿಜವಾಗಿ ತನ್ನ ನೈಜ ಬ್ಯಾಟಿಂಗ್ ಸಾಮರ್ಥ್ಯ ತೋರ್ಪಡಿಸಿದ್ದು ೨೦೦೬-೦೭ರ ರಣಜಿ ಋತುವಿನಲ್ಲಿ. ಭರ್ಜರಿ ಫಾರ್ಮಿನಲ್ಲಿದ್ದ ರಾಬಿನ್, ೭ ಪಂದ್ಯಗಳಲ್ಲಿ ೬೬.೦೦ರ ಸರಾಸರಿಯಂತೆ ೮೫೪ ಓಟಗಳನ್ನು ಕಲೆಹಾಕಿದರು. ಇಲ್ಲಿದ್ದವು ೪ ಶತಕಗಳು. ಆಗ ರಾಬಿನ್ ಭಾರತ ತಂಡಕ್ಕೆ ಮತ್ತೆ ಆಯ್ಕೆಯಾದರು. ಹಾಗಾಗಿ ಆ ಋತುವಿನ ಸೆಮಿ-ಫೈನಲ್ ಪಂದ್ಯಕ್ಕೆ ರಾಬಿನ್ ಇರಲಿಲ್ಲ ಮತ್ತು ಕರ್ನಾಟಕ ಸೋತಿತು.

ನಂತರ ಒಂದು ವರ್ಷ ರಾಷ್ಟ್ರ ತಂಡದೊಡನೆ ರಾಬಿನ್ ಹನಿಮೂನ್! ಇದೇ ಸಮಯದಲ್ಲಿ ಟ್ವೆಂಟಿ೨೦ ವಿಶ್ವಕಪ್ ಗೆದ್ದ ತಂಡದಲ್ಲಿ ಉತ್ತಮ ಸಾಧನೆ. ನಂತರ ಆಸ್ಟ್ರೇಲಿಯ ಪ್ರವಾಸದಲ್ಲಿ ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಉತ್ತಮ ನಿರ್ವಹಣೆ. ಇಲ್ಲೇ ಎಡವಟ್ಟು ಆಗಿರಬಹುದು ಎಂದು ತೋರುತ್ತದೆ. ಆಸ್ಟ್ರೇಲಿಯ ವಿರುದ್ಧದ ೨ ಫೈನಲ್ ಪಂದ್ಯಗಳಲ್ಲಿ ಸಚಿನ್ ಜೊತೆ ಉತ್ತಪ್ಪನ ಆರಂಭಿಕ ಜೊತೆಯಾಟ ಭಾರತ ಎರಡೂ ಪಂದ್ಯಗಳನ್ನು ಗೆಲ್ಲಲು ಮುಖ್ಯ ಕಾರಣವಾಯಿತು. ಆದರೆ ಇಲ್ಲಿ ಉತ್ತಪ್ಪ ತನ್ನ ಎಂದಿನ ಬಿರುಸಿನ ಆಟವನ್ನು ತೋರ್ಪಡಿಸಿರಲಿಲ್ಲ. ವಿಕೆಟ್ ಕಳಕೊಳ್ಳದಂತೆ ನಿಧಾನವಾಗಿ ಆಡಿ ಉತ್ತಮ ಅಡಿಪಾಯ ಹಾಕುವ ರೀತಿಯಲ್ಲಿ ಆಡುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಅದೇ ರೀತಿಯಲ್ಲಿ ಉತ್ತಪ್ಪ ಆಡಿದರು ಕೂಡಾ. ಆ ಕ್ಷಣದಿಂದಲೇ ಉತ್ತಪ್ಪನ ಎಲ್ಲ ಹೊಡೆತಗಳು ಮಾಯವಾದಂತೆ ಭಾಸವಾಗತೊಡಗಿದವು.

ನಂತರ ನಡೆದ ಐಪಿಎಲ್ ಪಂದ್ಯಾಟದಲ್ಲಿ ಮುಂಬೈ ಪರ ಆಡಿದ ಉತ್ತಪ್ಪ ೩೦೦ಕ್ಕೂ ಹೆಚ್ಚಿನ ಓಟಗಳನ್ನು ಗಳಿಸಿದರಾದರೂ ನಿರೀಕ್ಷಿತ ಸಾಧನೆಯಾಗಿರಲಿಲ್ಲ. ವೇಗವಾಗಿ ರನ್ನು ಗಳಿಸಲು ಪರದಾಡತೊಡಗಿದರು. ಅದುವರೆಗೆ ತನ್ನ ಬತ್ತಳಿಕೆಯಲ್ಲಿದ್ದ ಸೀಮಿತ ಸಾಧನಗಳಿಂದ ರನ್ನುಗಳನ್ನು ಸೂರೆಗೊಳ್ಳುತ್ತಿದ್ದ ಉತ್ತಪ್ಪನಿಗೆ ಕಡಿವಾಣ ಹಾಕಲು ಬೌಲರುಗಳು ಕಲಿತುಬಿಟ್ಟಿದ್ದರು. ಸೀಮಿತ ಹೊಡೆತಗಳಿದ್ದರೆ ಇದೇ ಅಪಾಯ. ಎಲ್ಲಾ ರೀತಿಯ ಹೊಡೆತಗಳನ್ನು ಆಡುವಲ್ಲಿ ನಿಸ್ಸೀಮರಾದ ಕ್ರಿಕೆಟಿಗರಿಗೆ ಕಡಿವಾಣ ಹಾಕುವುದು ಕಷ್ಟದ ಕೆಲಸ. ಆದರೆ ರಾಬಿನ್ ಅಂತಹ ಆಟಗಾರನಾಗಿರಲಿಲ್ಲ. ಇಂದಿಗೂ ಆಗಿಲ್ಲ. ಒಬ್ಬ ಯುವ ಕ್ರಿಕೆಟಿಗ ರಾಷ್ಟ್ರೀಯ ಕ್ರಿಕೆಟ್ ಇರಲಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್ ಇರಲಿ ಎಲ್ಲಾ ಪಂದ್ಯಗಳಲ್ಲೂ ಮತ್ತು ಯಾವಾಗಲೂ ಕಲಿಯುವ ಮನೋಭಾವ ಹೊಂದಿರಬೇಕು. ಆದರೆ ರಾಬಿನ್, ಏಳು ವರ್ಷಗಳ ಹಿಂದೆ ತನ್ನ ಚೊಚ್ಚಲ ರಣಜಿ ಪಂದ್ಯವನ್ನು ಹೇಗೆ ಆಡಿದರೋ, ಅದೇ ರೀತಿಯಲ್ಲಿ ಇಂದಿಗೂ ಆಡುತ್ತಿದ್ದಾರೆ. ಕಲಿತ ಹೊಸ ಹೊಡೆತವೆಂದರೆ ವಿಕೆಟ್ ಹಿಂದೆ ’ಸ್ಕೂಪ್’ ಮಾಡುವುದು ಮಾತ್ರ!

ರಣಜಿ ಪಂದ್ಯಗಳಲ್ಲಿ ದೆಹಲಿ ತಂಡವನ್ನು ಒಬ್ಬ ಯುವ ಕ್ರಿಕೆಟಿಗ ಪ್ರತಿನಿಧಿಸುತ್ತಿದ್ದ. ಉತ್ತಪ್ಪನಂತೆ ಆತನೂ ರಾಷ್ಟ್ರ ತಂಡದಲ್ಲಿ ಒಂದೆರಡು ಅವಕಾಶ ಪಡೆದಿದ್ದ ಮತ್ತು ಆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದರಲ್ಲಿ ವಿಫಲನಾಗಿದ್ದ. ೨೦೦೭ರ ವಿಶ್ವಕಪ್ ಪಂದ್ಯಾವಳಿಗೆ ಈ ಆಟಗಾರ ಮತ್ತು ಉತ್ತಪ್ಪನ ನಡುವೆ ಆರಂಭಿಕ ಆಟಗಾರನ ಸ್ಥಾನಕ್ಕೆ ಪೈಪೋಟಿಯಿತ್ತು. ಕೊನೆಗೂ ಉತ್ತಪ್ಪನೇ ಆಯ್ಕೆಯಾದ. ತುಂಬಾ ನಿರಾಶನಾದ ದೆಹಲಿಯ ಆ ಕ್ರಿಕೆಟಿಗ ಅದನ್ನು ಹೇಳಿಕೊಂಡ ಕೂಡ. ಆದರೆ ಉತ್ತಪ್ಪ ಅದೇ ಲೆವೆಲ್-ನಲ್ಲಿ ಇದ್ದುಬಿಟ್ಟರೆ, ಈತ ಮಾತ್ರ ತನ್ನ ಆಟವನ್ನು ಬಹಳ ಸುಧಾರಿಸಿಕೊಂಡ. ದೇಶೀಯ ಪಂದ್ಯಗಳಲ್ಲಿ ಮತ್ತೆ ರನ್ನುಗಳನ್ನು ಸೂರೆಗೈದ. ಅತ್ತ ಉತ್ತಪ್ಪ ವಿಶ್ವಕಪ್-ನಲ್ಲಿ ಹೀನಾಯವಾಗಿ ವೈಫಲ್ಯವನ್ನು ಕಂಡರು. ಉತ್ತಪ್ಪನನ್ನು ತಂಡದಲ್ಲಿಟ್ಟುಕೊಂಡೇ ಆಯ್ಕೆಗಾರರು ದೆಹಲಿಯ ಈ ಕ್ರಿಕೆಟಿಗನ ಸಾಧನೆಯನ್ನು ಗಮನಿಸಿ ಆತನಿಗೆ ಮತ್ತೊಂದು ಅವಕಾಶವನ್ನು ನೀಡಿದರು. ಸಿಕ್ಕ ಈ ಎರಡನೇ ಅವಕಾಶವನ್ನು ಗೌತಮ್ ಗಂಭೀರ್ ಯಾವ ಪರಿ ಬಳಸಿಕೊಂಡರೆಂಬುದು ಮತ್ತೆ ಹೇಳಬೇಕಾಗಿಲ್ಲ. ತನ್ನ ಆಟವನ್ನು ಬಹಳ ಸುಧಾರಿಸಿಕೊಂಡ ಎಲ್ಲ ಹೊಡೆತಗಳನ್ನು ಆಡುವ ಗೌತಮ್ ಗಂಭೀರ್ ಹೆಸರು ಈಗ ಎಲ್ಲಾ ರೀತಿಯ (೨೦-೨೦, ಏಕದಿನ, ಟೆಸ್ಟ್) ಪಂದ್ಯಗಳಲ್ಲಿ ಭಾರತ ತಂಡದ ಅಂತಿಮ ಹನ್ನೊಂದರ ಆಯ್ಕೆ ಮಾಡುವಾಗ ಮೊದಲಿಗೆ ಇರುತ್ತದೆ. ಕೇವಲ 2 ವರ್ಷಗಳ ಹಿಂದೆ ಪ್ರತಿಸ್ಪರ್ಧಿಗಳಾಗಿದ್ದವರು ಉತ್ತಪ್ಪ ಮತ್ತು ಗಂಭೀರ್. ಈಗ ಗಂಭೀರ್ ಎಲ್ಲಿ ... ಉತ್ತಪ್ಪ ಎಲ್ಲಿ? ಹೋಲಿಕೆಯೇ ಇಲ್ಲ.

ಆನ್ ಡ್ರೈವ್, ಕವರ್ ಡ್ರೈವ್ ಮತ್ತು ಸ್ಟ್ರೈಟ್ ಡ್ರೈವ್ ಈ ೩ ಹೊಡೆತಗಳಿಲ್ಲದಿದ್ದರೆ ಒಬ್ಬ ಕ್ರಿಕೆಟಿಗ ಆಗಲು ಹೇಗೆ ಸಾಧ್ಯ. ರಾಬಿನ್ ಅಪರೂಪಕ್ಕೊಮ್ಮೆ ಕವರ್ ಡ್ರೈವ್ ಆಡುತ್ತಾರೆ ಎಂಬುದನ್ನು ಹೊರತುಪಡಿಸಿದರೆ ಅವರಲ್ಲಿ ಈ ಹೊಡೆತಗಳ ಕೊರತೆಯಿದೆ. ಅವರು ಆಡುವುದು ’ಲಾಫ್ಟೆಡ್ ಆನ್ ಡ್ರೈವ್’ ಮಾತ್ರ. ಈ ಹೊಡೆತಕ್ಕೇ ಎಷ್ಟೋ ಸಲ ತಮ್ಮ ವಿಕೆಟ್ ಕಳಕೊಂಡಿದ್ದಾರೆ. ಒಂದೆರಡು ಹೆಜ್ಜೆ ಮುಂದೆ ಬಂದು ಚೆಂಡನ್ನು ಎತ್ತಿ ಬಾರಿಸುವ ಕೆಟ್ಟ ಹೊಡೆತ ಇದ್ದೇ ಇದೆ. ಅಡ್ಡ ಬ್ಯಾಟಿನ ಹೊಡೆತಗಳೇ ರಾಬಿನ್ ಆಟದಲ್ಲಿ ತುಂಬಿಹೋಗಿವೆ. ಬರೀ ಸ್ಟೈಲ್ ಮಾಡಿಕೊಂಡು, ಒಂದು ಸಲ ಕ್ರಾಸ್ ತೋರುವ ಹಾರ ಹಾಕಿಕೊಂಡು ಮತ್ತೊಂದು ಸಲ ಇನ್ನೊಂದೇನೋ ತೋರುವ ಹಾರ ಹಾಕ್ಕೊಂಡು, ತಲೆ ಕೂದಲನ್ನು ಅಡ್ಡಡ್ಡ ಕತ್ತರಿಸಿಕೊಂಡು, ಲೇಟೇಸ್ಟ್ ಕಾರುಗಳಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಅಡ್ಡಾಡುತ್ತ, ’ಹ್ಯಾಪನಿಂಗ್’(!?) ಜಾಗಗಳಿಗೆ ಎಡತಾಕುತ್ತಾ, ಬೇಕಾಬಿಟ್ಟಿ ತಿನ್ನುತ್ತಾ ತೂಕ ಹೆಚ್ಚಿಸಿಕೊಳ್ಳುತ್ತಾ, ಹೊಟ್ಟೆ ಬೆಳೆಸಿಕೊಳ್ಳುತ್ತಾ, ಸಂಕಟ ಬಂದಾಗ ಕುಕ್ಕೆ ಸುಬ್ರಹ್ಮಣ್ಯ ಮತ್ತು ಇನ್ನಷ್ಟು ಸಂಕಟ ಬಂದಾಗ ಯೇಸುಕ್ರಿಸ್ತ ಎನ್ನುತ್ತಾ ಇರುವುದನ್ನು ಬಿಟ್ಟು ತನ್ನ ಆಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ ಅಭ್ಯಾಸ ಮಾಡುವುದು ಒಳ್ಳೆಯದು.

೨೦-೨೦ ವಿಶ್ವಕಪ್ ಪಂದ್ಯಾವಳಿಯ ಬಳಿಕ ಏಕದಿನ ಪಂದ್ಯವೊಂದರಲ್ಲಿ ಬ್ರೆಟ್ ಲೀ ಎಸೆತವೊಂದರಲ್ಲಿ ಉತ್ತಪ್ಪ ’ಬೀಟ್’ ಆದ ಬಳಿಕ ಲೀ, ’ಇಟ್ಸ್ ಅ ಡಿಫರೆಂಟ್ ಬಾಲ್ ಗೇಮ್ ಮೇಟ್’ ಅಂದಾಗ ರಾಬಿನ್, ’ಬಟ್ ಇಟ್ಸ್ ದ ಸೇಮ್ ಬ್ಯಾಟ್’ ಎಂಬ ಉತ್ತರ ನೀಡಿದ್ದರು. ಈಗ ಅದೇ ಬ್ಯಾಟಿನಿಂದ ರನ್ನುಗಳು ಬರುತ್ತಿಲ್ಲ. ಕಳೆದ ರಣಜಿ ಋತುವಿನಲ್ಲಿ (೨೦೦೮-೦೯) ರಾಬಿನ್ ೫೦ರ ಸರಾಸರಿಯಲ್ಲಿ ರನ್ನು ಗಳಿಸಿದರಾದರೂ ಪ್ರಬಲ ತಂಡಗಳ ವಿರುದ್ಧ ಮುಗ್ಗರಿಸಿದರು. ನಂತರ ನಡೆದ ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಪಂದ್ಯಾಟಗಳಲ್ಲೂ ಉತ್ತಪ್ಪನದ್ದು ನೀರಸ ಪ್ರದರ್ಶನ. ಉತ್ತಪ್ಪ ಲಯ ಕಳೆದುಕೊಳ್ಳುತ್ತಿರುವುದು ಎದ್ದು ಕಾಣುತ್ತಿತ್ತು. ಇದೆಲ್ಲವನ್ನು ಮನಗಂಡ ಮುಂಬೈ ಇಂಡಿಯನ್ಸ್, ಉತ್ತಪ್ಪನನ್ನು ಬೆಂಗಳೂರು ರಾಯಲ್ಸ್-ಗೆ ಸಾಗಹಾಕಿದರು.
ಪಾರಂಪರಿಕ ಮತ್ತು ಹೊಸ ಕ್ರಿಕೆಟ್ ಹೊಡೆತಗಳನ್ನು ತನ್ನ ಆಟದಲ್ಲಿ ಅಳವಡಿಸಿಕೊಂಡರೆ ಉತ್ತಪ್ಪನಿಗೆ ಉಳಿಗಾಲ. ಅವೇ ಹಳಸಲು ಅಡ್ಡ ಬ್ಯಾಟಿನ ಹೊಡೆತಗಳು, ಲಾಫ್ಟೆಡ್ ಆನ್ ಡ್ರೈವ್, ಸ್ಕೂಪ್, ಒಂದೆರಡು ಹೆಜ್ಜೆ ಮುಂದೆ ಬಂದು ಎತ್ತಿ ಹೊಡೆಯುವುದು ಇವಿಷ್ಟನ್ನೇ ಆಡುತ್ತಾ ಕೂತರೆ ದೇಶೀಯ ಕ್ರಿಕೆಟಿನಲ್ಲೂ ನಂತರ ಪರದಾಡಬೇಕಾಗುತ್ತದೆ. ಅಷ್ಟಕ್ಕೂ ರಾಬಿನ್ ಬಳಿ ಉತ್ತಮ ರಕ್ಷಣಾತ್ಮಕ ಆಟ ಆಡುವ ಕಲೆಯೂ ಇಲ್ಲ. ಇತ್ತ ತಾಳ್ಮೆಯೂ ಇಲ್ಲ. ಈ ಸನ್ನಿವೇಶದಿಂದ ಹೇಗೆ ಹೊರಬರುತ್ತಾರೋ ಕಾದು ನೋಡೋಣ.

ಬುಧವಾರ, ಮೇ 06, 2009

ಇಲ್ಲೊಂದು ಚಂದದ ಜಲಧಾರೆ


ಮುಖ್ಯ ರಸ್ತೆಯಿಂದ ಒಂದು ಕಿ.ಮಿ ಇಳಿಜಾರಿನ ರಸ್ತೆಯನ್ನು ಕ್ರಮಿಸಿದರೆ ಈ ಪುಟ್ಟ ಹಳ್ಳಿ. ಇಲ್ಲಿ ಮನೆಯೊಂದರ ತೋಟದಲ್ಲಿ ಒಂದೈದು ನಿಮಿಷ ನಡೆದು ಪ್ರಾಂಗಣ ಗೋಡೆಯನ್ನು ಹಾರಿದರೆ ಮತ್ತೊಂದು ಕಡೆ ಹಳ್ಳಕ್ಕೇ ಕಾಲಿಟ್ಟಂತೆ. ಮರಗಳ ಮರೆಯಿಂದ ಸ್ವಲ್ಪ ಮುಂದೆ ಬಂದರೆ ಅಡಿಕೆ ತೋಟಗಳ ನಡುವೆ ಧುಮುಕುತ್ತಿರುವ ಈ ಚಂದದ ಜಲಧಾರೆಯ ದರ್ಶನ.


ಮನೆಯ ಬಳಿ ತೋಟಕ್ಕಿಳಿಯದೇ ಹಾಗೆ ಮೇಲಿನಿಂದಲೇ ನಡೆದರೆ ಜಲಧಾರೆಯ ಮೇಲ್ಭಾಗಕ್ಕೆ ಬರಬಹುದು. ಸುಮಾರು ೫೦ ಅಡಿ ಎತ್ತರವಿರುವ ಈ ಜಲಧಾರೆ ಮಳೆಗಾಲದ ಅತಿಥಿ. ವ್ಯವಸಾಯಕ್ಕಾಗಿ ಹಳ್ಳಿಗರು ಜಲಧಾರೆಯ ಮೇಲ್ಭಾಗದಲ್ಲಿ ಒಡ್ಡನ್ನು ನಿರ್ಮಿಸಿ ಹಳ್ಳದ ನೀರನ್ನು ಹಳ್ಳಿಯೆಡೆ ಹರಿಸಿಕೊಳ್ಳುವುದರಿಂದ ಮಳೆಗಾಲದ ನಂತರ ಇಲ್ಲಿ ನೀರಿರುವುದಿಲ್ಲ.


ಮಳೆ ಬೀಳಲಾರಂಭಿಸಿತ್ತು. ಆದರೂ ಜಲಧಾರೆಯ ಅಂದವನ್ನು ಹಳ್ಳದ ಮಧ್ಯೆ ಇರುವ ಬಂಡೆಗಳಲ್ಲೊಂದರ ಮೇಲೆ ಆಸೀನರಾಗಿ ೧೫-೨೦ ನಿಮಿಷ ಸವಿದೆವು. ಹಳ್ಳ ಈ ರೀತಿ ಹರಿಯುತ್ತಿರುವಾಗಲೇ ಇಲ್ಲಿಗೆ ಬರಬೇಕು. ಆಗಲೇ ಈ ಜಲಧಾರೆ ನೋಡಲು ಚಂದ.