ಭಾನುವಾರ, ಮಾರ್ಚ್ 29, 2009

ಕಳಚೆ ಕಲ್ಲು!



ಕಳಚೆ! ಈ ಹಳ್ಳಿಯಲ್ಲಿ ಸುಮಾರು ೮೦ ಅಡಿ ಎತ್ತರವಿರುವ ಕಲ್ಲೊಂದಿದೆ ಎಂದು ನೋಡೋಣವೆಂದು ತೆರಳಿದರೆ, ಇಳಿಜಾರಿನ ರಸ್ತೆಯಲ್ಲಿ ಎಷ್ಟು ಚಲಿಸಿದರೂ ಇಳಿಜಾರು ಮುಗಿಯುತ್ತಿರಲಿಲ್ಲ, ಕಳಚೆಯೂ ಬರುತ್ತಿರಲಿಲ್ಲ, ಕಲ್ಲೂ ಸಿಗುತ್ತಿರಲಿಲ್ಲ.


ಸುಮಾರು ೫ ಕಿ.ಮಿ.ನಷ್ಟು ಕ್ರಮಿಸಿದ ಬಳಿಕ ತಿರುವೊಂದರ ಬಳಿ ಗಗನದೆತ್ತರಕ್ಕೆ ಏರಿದಂತೆ ಪ್ರತ್ಯಕ್ಷವಾಯಿತು ಕಳಚೆ ಕಲ್ಲು.


ಈ ಸಣ್ಣ ಸ್ಥಳದಲ್ಲಿ ಅಚೀಚೆ ಬಂಡೆಗಳ ಸಮೂಹ. ರಸ್ತೆಯ ಒಂದು ಬದಿಯಲ್ಲಿ ಈ ಉದ್ದದ ಕಲ್ಲಿದ್ದರೆ ಇನ್ನೊಂದು ಬದಿಯಲ್ಲಿ ಅದಕ್ಕೆ ಸಡ್ಡು ಹೊಡೆದಂತೆ ಸುಮಾರು ೪೦ ಅಡಿ ಎತ್ತರದ ಇನ್ನೊಂದು ಕಲ್ಲು ಅಥವಾ ಬಂಡೆ. ಕಳಚೆ ಕಲ್ಲಿನ ಸುತ್ತ ಮಾನವ ಸರಪಳಿ ಮಾಡುವುದಾದರೆ ೧೭-೨೦ ಜನರು ಬೇಕಾಗಬಹುದೇನೋ.


ಕಳಚೆ ಕಲ್ಲನ್ನು ನೋಡಲು ಕಳಚೆಗೆ ತೆರಳುವುದೇ ಒಂದು ಅನುಭವ!

ಮಾಹಿತಿ: ಕೇಶವ ಹೆಗಡೆ ಕೊರ್ಸೆ

ಗುರುವಾರ, ಮಾರ್ಚ್ 26, 2009

ಸದಾಶಿವಘಡ


ಕಾಳಿ ನದಿಯನ್ನು ಸೀಳಿದಂತೆ ತೋರುವ ಸೇತುವೆ. ಅನತಿ ದೂರದಲ್ಲಿ ಸಮುದ್ರದಲ್ಲಿ ಲೀನವಾಗುವ ಕಾಳಿ.


ದ್ವೀಪಗಳಿಗೆ ಸಾಗುತ್ತಿರುವ ದೋಣಿಗಳು ಮತ್ತು ವಿಶಾಲ ನದಿಯ ಉದ್ದಗಲಕ್ಕೂ ಮೀನುಗಾರಿಕೆಯಲ್ಲಿ ತೊಡಗಿರುವ ಸಣ್ಣ ದೋಣಿಗಳು.


ಸಮುದ್ರದ ನಡುವೆ ತೋರುತ್ತಿರುವ ದ್ವೀಪಗಳು. ಒಟ್ಟಾರೆ ಸುಂದರ ದೃಶ್ಯ. ಕಾಳಿ ನದಿ ತನ್ನ ಪ್ರಯಾಣವನ್ನು ಕೊನೆಗೊಳಿಸುವ ಅಪೂರ್ವ ದೃಶ್ಯ.


ಸದಾಶಿವಗಡದ ಕೋಟೆಯ ಮೇಲೆ ತೆರಳಿದರೆ ಈ ದೃಶ್ಯ ಲಭ್ಯ. ಈಗ ಕೋಟೆಯ ಅವಶೇಷಗಳು ಮಾತ್ರ ಇವೆ. ತುಪಾಕಿಯೊಂದು ಸಮುದ್ರದ ಬದಿಗೆ ಮುಖ ಮಾಡಿ ಎಂದೂ ಬರದ ವೈರಿಗಾಗಿ ಕಾಯುತ್ತಿದೆ. ರಿಲ್ಯಾಕ್ಸ್ ಮಾಡಲು ಸೂಕ್ತ ಸ್ಥಳ.

ಮಾಹಿತಿ: ಲಕ್ಷ್ಮಣ ಟಿ ನಾಯ್ಕ

ಭಾನುವಾರ, ಮಾರ್ಚ್ 22, 2009

ಸರ್ವೇಶ್ವರ ದೇವಾಲಯ - ನರೇಗಲ್


೦೪-೦೧-೨೦೦೯. ಸಂಪೂರ್ಣವಾಗಿ ಪಾಳುಬಿದ್ದ ದೇವಾಲಯವನ್ನು ಈ ಮಟ್ಟಕ್ಕೆ ಪುನ: ರಚಿಸಿರುವ ಪುರಾತತ್ವ ಇಲಾಖೆಯನ್ನು ಅಭಿನಂದಿಸಬೇಕು. ದೇವಾಲಯ ನೋಡಲು ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದೆ. ದ್ವಾರ ತುಂಬಾ ಸಣ್ಣದಾಗಿದ್ದು, ಛಾವಣಿ ತುಂಬಾ ಕೆಳಮಟ್ಟದಲ್ಲಿದೆ. ದೇವಾಲಯದ ಸುತ್ತಮುತ್ತ ಭಗ್ನಗೊಂಡಿರುವ ಕೆಲವು ಮೂರ್ತಿಗಳನ್ನು ಮತ್ತು ದೊರಕಿರುವ ಶಾಸನಗಳನ್ನು ಇರಿಸಲಾಗಿದೆ.


ಈ ಏಕಕೂಟ ದೇವಾಲಯ ನವರಂಗ, ಅಂತರಾಳ ಮತ್ತು ಗರ್ಭಗೃಹಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಸಣ್ಣ ಶಿವಲಿಂಗ. ನವರಂಗ ಬಹಳ ವಿಶಾಲವಾಗಿದ್ದು ೨೪ ಕಂಬಗಳನ್ನು ಹೊಂದಿದೆ. ದೇವಾಲಯದ ಪ್ರಮುಖ ದ್ವಾರವನ್ನು ಹೊರತುಪಡಿಸಿ ನವರಂಗಕ್ಕೆ ಇನ್ನೆರಡು ದ್ವಾರಗಳಿವೆ. ಛಾವಣಿ ಬಹಳ ಕೆಳಮಟ್ಟದಲ್ಲಿದ್ದು, ಮೊದಲಿಂದಲೂ ಹಾಗೇ ಇತ್ತೋ ಅಥವಾ ನಂತರ ಪುರಾತತ್ವ ಇಲಾಖೆ, ’ಹಾಗಿದ್ದಿರಬಹುದು’ ಎಂದು ಊಹಿಸಿ ರಚಿಸಿದೆಯೋ ಎಂದು ಗೊತ್ತಾಗಲಿಲ್ಲ. ಈ ದೇವಾಲಯದ ಬಗ್ಗೆ ಯಾವ ಮಾಹಿತಿಯೂ ನನಗೆ ಲಭ್ಯವಾಗಲಿಲ್ಲ. ಪುರಾತತ್ವ ಇಲಾಖೆಯನ್ನು ಸಂಪರ್ಕಿಸಿಯೇ ಮಾಹಿತಿ ಪಡಕೊಳ್ಳಬೇಕು.


ನಂದಿಯ ಮೂರ್ತಿ ಎಲ್ಲೂ ಕಾಣಬರಲಿಲ್ಲ. ನವರಂಗದ ಇಕ್ಕೆಲಗಳಲ್ಲೂ ಕುಳಿತುಕೊಳ್ಳಲು ಕಲ್ಲಿನ ಆಸನವಿದೆ. ಅಂತರಾಳದ ದ್ವಾರಕ್ಕೆ ಸುಂದರ ಜಾಲಂಧ್ರಗಳಿವೆ. ಪ್ರಮುಖ ದ್ವಾರಕ್ಕೂ ಜಾಲಂಧ್ರಗಳಿವೆ. ಹೊಯ್ಸಳ ಕಾಲದಲ್ಲಿ ಈ ದೇವಾಲಯದ ನಿರ್ಮಾಣವಾಗಿರಬಹುದು ಎಂದು ನವರಂಗದ ಒಂದು ಮೂಲೆಯಲ್ಲಿರಿಸಲಾಗಿರುವ ಕಲ್ಲಿನ ಮೂರ್ತಿಯೊಂದನ್ನು ನೋಡಿ ಊಹಿಸಬಹುದು. ದೇವಾಲಯವೊಂದು ಈ ಮಟ್ಟಕ್ಕೂ ನಶಿಸಿಹೋಗಬಹುದೇ ಎಂದು ಆಶ್ಚರ್ಯವಾಯಿತು. ಪುರಾತತ್ವ ಇಲಾಖೆಯ ಸುಪರ್ದಿಗೆ ಬರುವ ಮೊದಲೇ ಸಂಪೂರ್ಣ ನಿರ್ನಾಮಗೊಂಡಿದ್ದ ದೇವಾಲಯವಿದು. ಅಲ್ಲಲ್ಲಿ ತೇಪೆ ಸಾರಿಸಿ, ಸಿಮೆಂಟ್ ಹಚ್ಚಿ ಮೂಲ ರೂಪಕ್ಕೆ ತರುವ ಹರಸಾಹಸವನ್ನು ಮಾಡಲಾಗಿದೆ.


ಪ್ರಮುಖ ದ್ವಾರದ ದುರವಸ್ಥೆಯನ್ನು ನೋಡಿ ಬೇಜಾರಾಯಿತು. ಪ್ರಾಚೀನ ಕಾಲದ ದೇವಾಲಯಗಳ ಮುಖ್ಯ ಅಂಗವೇ ಪ್ರಮುಖ ದ್ವಾರ. ಆದರೆ ಸರ್ವೇಶ್ವರನ ಪ್ರಮುಖ ದ್ವಾರ ಎಲ್ಲಿಂದಲೋ ತಂದಿಟ್ಟ ಬದಲಿ ದ್ವಾರದಂತೆ ಕಾಣುತ್ತದೆ. ಪುರಾತತ್ವ ಇಲಾಖೆಯನ್ನು ದೂರಲಾಗದು. ಅಷ್ಟಾದರೂ ಮಾಡಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳಬೇಕು. ಇಲ್ಲಿರುವ ಸಿಬ್ಬಂದಿಗೆ ದೇವಾಲಯದ ಬಗ್ಗೆ ಏನೂ ಗೊತ್ತಿಲ್ಲ. ನಾವು ಅಷ್ಟು ಚಿತ್ರಗಳನ್ನು ಯಾಕೆ ತೆಗೆಯುತ್ತಿದ್ದೇವೆ ಎಂಬುದೇ ಆತನ ದೊಡ್ಡ ಚಿಂತೆಯಾಗಿತ್ತು.

ಬುಧವಾರ, ಮಾರ್ಚ್ 18, 2009

ಬೆಳದಿಂಗಳ ರಾತ್ರಿಯ ಮಾರ್ಗದರ್ಶಿ

ಈ ಗುಡ್ಡಕ್ಕೊಂದು ಭೇಟಿ ನೀಡೋಣವೆಂದು ಈ ತಿಂಗಳ ಮೊದಲ ಶನಿವಾರದಂದು ಮಾಧವರೊಂದಿಗೆ ಆ ಹಳ್ಳಿಯನ್ನು ತಲುಪಿದಾಗ ರಾತ್ರಿ ೮.೩೦ರ ಸಮಯ. ಈ ಗುಡ್ಡಕ್ಕೆ ಚಾರಣ ಆರಂಭವಾಗುವುದೇ ಎಸ್ಟೇಟೊಂದರ ಒಳಗಿನಿಂದ. ಹಳ್ಳಿಯಿಂದ ಎಸ್ಟೇಟಿಗೆ ೫ ಕಿ.ಮಿ ದೂರ. ಬೆಳದಿಂಗಳಿದ್ದರೂ ಈ ದೂರವನ್ನು ನಾವಿಬ್ಬರೇ ಕ್ರಮಿಸಲು ಧೈರ್ಯ ಸಾಲುತ್ತಿರಲಿಲ್ಲ. ನಾವು ಬಸ್ಸಿನಿಂದಿಳಿದ ಸ್ಥಳದಲ್ಲೊಂದು ಮನೆ/ಅಂಗಡಿ ಬಿಟ್ಟರೆ ಬೇರೇನೂ ಇಲ್ಲ. ಯಾರಾದರೂ ಜೊತೆಯಿದ್ದರೆ ಎಂದು ಯೋಚಿಸುತ್ತಿರುವಾಗಲೇ, ಆಪದ್ಬಾಂಧವನಂತೆ ಆಗಮಿಸಿದವನು ನಾವು ಹೋಗಬೇಕಾಗಿದ್ದ ಎಸ್ಟೇಟಿನಲ್ಲೇ ಕೆಲಸ ಮಾಡುತ್ತಿರುವ ಚಿನ್ನಯ್ಯ. ನಮ್ಮನ್ನು ಎಸ್ಟೇಟಿಗೆ ಕರೆದೊಯ್ಯುವಂತೆ ವಿನಂತಿಸಿದಾಗ, ’ಒಂತೆ ಬೇಲೆ ಉಂಡು. ಅವೆನ್ ಮುಗಿಪಾದ್ ಇತ್ತೆ ಬರ್ಪೆ’ (ಸ್ವಲ್ಪ ಕೆಲಸ ಇದೆ. ಅದನ್ನು ಮುಗಿಸಿ ಈಗ ಬರುವೆ)’ ಎಂದು ಆಚೆ ಹೋದವ ೧೦ ನಿಮಿಷದಲ್ಲಿ ಹಾಜರಾದ.

ಆತನೊಂದಿಗೆ ಹೊರಟ ಕೂಡಲೇ ನಮಗೆ ಅರಿವಾಗತೊಡಗಿತು - ಆತ ಮುಗಿಸಿ ಬಂದ ಕೆಲಸವೆಂದರೆ ಕಂಠಪೂರ್ತಿ ಸಾರಾಯಿ ಕುಡಿದದ್ದು ಎಂದು! ರಸ್ತೆಯ ಮಧ್ಯದಿಂದ ಒಂದು ಬದಿಗೆ, ನಂತರ ಪುನ: ಮಧ್ಯಕ್ಕೆ, ನಂತರ ಮತ್ತೊಂದು ಬದಿಗೆ ಹೀಗೆ ಹಾಸ್ಯಾಸ್ಪದವಾಗಿ ತೂರಾಡುತ್ತ ನಡೆಯುತ್ತಿದ್ದ ಚಿನ್ನಯ್ಯ. ನಡೆಯುತ್ತಾ ಹೋದಂತೆ ಆತನಿಗೆ ಅಮಲು ಏರುತ್ತಾ ಹೋಯಿತು. ಮಾತನಾಡಿದ್ದನ್ನೇ ಮತ್ತೆ ಮತ್ತೆ ಮಾತನಾಡತೊಡಗಿದ. ಅಸಂಬದ್ಧ ಉತ್ತರಗಳನ್ನು ನೀಡತೊಡಗಿದ. ಎಸ್ಟೇಟಿನಲ್ಲಿ ನಮಗೆ ಆ ರಾತ್ರಿ ತಂಗಲು ಅನುಮತಿ ದೊರೆಯಬಹುದೇ ಎಂಬ ಒಂದೇ ಪ್ರಶ್ನೆಗೆ ಆತ ಸುಮಾರು ೧೦-೧೫ ಸಲ ಉತ್ತರ ನೀಡಿದ!

ಪ್ರತಿ ೨-೩ ನಿಮಿಷಕ್ಕೊಮ್ಮೆ ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ (ಏನೂ ತಲೆಬಿಸಿ ಮಾಡಿಕೊಳ್ಳಬೇಡಿ) ಎಂದು ಹೇಳುತ್ತಲೇ ಇದ್ದ. ಆತನ ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ ಕೇಳಿಯೇ ನನಗೆ ಮಂಡೆಬೆಚ್ಚ ಶುರುವಾಗತೊಡಗಿತು. ಆದರೂ ಆತ ಹಾಗೆ ಹೇಳುವುದನ್ನು ಎಸ್ಟೇಟಿನ ಮ್ಯಾನೇಜರ್ ಅವರ ಮನೆಯ ತನಕ ನಮ್ಮನ್ನು ಬೀಳ್ಕೊಡುವವರೆಗೂ ನಿಲ್ಲಿಸಲೇ ಇಲ್ಲ. ಆತನೊಂದಿಗಿದ್ದ ಸುಮಾರು ೯೦ ನಿಮಿಷಗಳಲ್ಲಿ ಸರಿಸುಮಾರು ೩೦-೩೫ ಸಲವಾದರೂ ಚಿನ್ನಯ್ಯ ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ ಎಂದು ಉಸುರಿದ್ದ. ಮೊನ್ನೆ ಉಡುಪಿ ಪೇಟೆಯಲ್ಲಿ ಸಿಕ್ಕಿದ್ದ ಮಾಧವರು, ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’ ಎಂದೇ ಮಾತು ಆರಂಭಿಸಿದರೆಂದರೆ, ಚಿನ್ನಯ್ಯ ಯಾವ ಪರಿ ನಮ್ಮಿಬ್ಬರ ಮೇಲೆ ಆ ೩ ಶಬ್ದಗಳ ಪ್ರಹಾರ ಮಾಡಿರಬಹುದೆಂದು ನೀವು ಊಹಿಸಬಹುದು.

ಯಾವಾಗಲೂ ಸ್ವಲ್ಪ ವೇಗವಾಗಿ ನಡೆಯುವ ಮಾಧವ ೧೫-೨೦ ಹೆಜ್ಜೆ ಮುಂದೆ ಇದ್ದರೆ, ನಾನು ಸ್ವಲ್ಪ ಹಿಂದೆ ಮತ್ತು ನಮ್ಮಿಬ್ಬರ ನಡುವೆ ಚಿನ್ನಯ್ಯ. ಈ ಚಿನ್ನಯ್ಯ ಆಗೊಮ್ಮೆ ಈಗೊಮ್ಮೆ ನನ್ನತ್ತ ತಿರುಗಿ ’ದಾಲ ಮಂಡೆಚ್ಚ ಮಲ್ಪೊಡ್ಚಿ’ ಎಂದು ಹೇಳುತ್ತಾ, ತೂರಾಡುತ್ತಾ, ಅಸಂಬದ್ಧ ಹೆಜ್ಜೆಗಳನ್ನು ಇಡುತ್ತಾ, ನಂಬಲಸಾಧ್ಯ ವೇಗದಲ್ಲಿ ನಡೆಯುತ್ತಿದ್ದ. ಈಗ ನಾವು ಎಸ್ಟೇಟಿನೊಳಗೆ ನಡೆಯುತ್ತಿದ್ದೆವು. ಸುಮಾರು ಒಂದು ತಾಸು ನಡೆದ ಬಳಿಕ ’ದನಿ, ಒಂತೆ ಬೇಗ ಬಲೆ’ (ಸ್ವಲ್ಪ ಬೇಗ ಬನ್ನಿ) ಎಂದು ನನಗೆ ಹೇಳಿದಾಗ ಮಾಧವರಿಗೆ ನಗು. ನಶೆಯಲ್ಲಿದ್ದವನೊಬ್ಬ ನನಗೆ ’ವೇಗವಾಗಿ ನಡೆಯಿರಿ’ ಎಂದನೆಂದು ಅವರಿಗೆ ನಗು. ಈಗ ಮಾಧವರ ಹಿಂದೆ ನಾನಿದ್ದರೆ ನನ್ನ ಹಿಂದೆ ಚಿನ್ನಯ್ಯ. ಸ್ವಲ್ಪ ಸಮಯದ ಬಳಿಕ ಹಿಂದೆ ’ಅಯ್ಯಮ್ಮ’ ಎಂಬ ಉದ್ಗಾರ ಬಂದಾಗ ಹಿಂತಿರುಗಿ ನೋಡಿದರೆ ಚಿನ್ನಯ್ಯ ರಸ್ತೆಯಲ್ಲಿರಲಿಲ್ಲ! ರಸ್ತೆ ಬದಿಯಲ್ಲಿದ್ದ ಹೊಂಡದಲ್ಲಿ ಆತ ಕುಳಿತುಕೊಂಡ ಸ್ಥಿತಿಯಲ್ಲಿ ಬಿದ್ದಿದ್ದ! ಆಗ ಆತ ನಮ್ಮಲ್ಲಿ ಏನೆಂದ ಗೊತ್ತೇ? ಆತನಿಂದ ಸುಮಾರು ೧೫ ಹೆಜ್ಜೆಯಷ್ಟು ದೂರದಲ್ಲಿ ನಿಂತಿದ್ದ ನಮಗೆ ಹೊಂಡದಲ್ಲಿ ಕೂಳಿತುಕೊಂಡೇ ತನ್ನ ಮುಖದ ಮುಂದೆ ಬಲಗೈಯ ತೋರುಬೆರಳನ್ನು ನಿಧಾನವಾಗಿ ಅಲ್ಲಾಡಿಸುತ್ತಾ ಆತ ಉಸುರಿದ ೩ ಶಬ್ದಗಳು - ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ’!!

ಸ್ವಲ್ಪ ಮುಂದೆ ಹೋದಾಗ ಎಲ್ಲಿಂದಲೋ ನಾಯಿಯೊಂದು ಬೊಗಳುತ್ತಾ ಬಂದಾಗ ಚಿನ್ನಯ್ಯ, ’ಏ ರಾಹುಲ್, ರಾಹುಲ್’ ಎಂದು ಅದನ್ನು ನಿಯಂತ್ರಿಸಿದ. ’ಇವನು ರಾಹುಲ್. ನನ್ನ ಬೆಸ್ಟ್ ದೋಸ್ತಿ. ಅವನಿಗೆ ಗೊತ್ತುಂಟು ನಾನೀಗ ಫುಲ್ ಟೈಟ್ ಎಂದು. ಅದಕ್ಕೆ ಅವನು ರಾತ್ರಿ ನನ್ನತ್ರ ಜಾಸ್ತಿ ಮಾತಾಡುದಿಲ್ಲ’ ಎಂದು ಇನ್ನೊಂದು ಪ್ರಲಾಪ ಆರಂಭಿಸಿದ. ರಾಹುಲ್ ಯಾವಾಗಲೂ ಚಿನ್ನಯ್ಯನ ರೂಮಿನಲ್ಲೇ ಮಲಗುವುದಂತೆ. ಸ್ವಲ್ಪ ಮುಂದೆ ಮ್ಯಾನೇಜರರ ಮನೆ ಕಾಣಿಸಿದಾಗ, ’ದಾಲ ಮಂಡೆಬೆಚ್ಚ ಮಲ್ಪೊಡ್ಚಿ, ಬೊಲ್ಪುಗ್ ತಿಕ್ಕಗ’ (ಏನೂ ತಲೆಬಿಸಿ ಮಾಡಿಕೊಳ್ಳಬೇಡಿ. ಮುಂಜಾನೆ ಸಿಗೋಣ) ಎಂದು ಚಿನ್ನಯ್ಯ ನಮಗೆ ವಿದಾಯ ಹೇಳಿ ರಾಹುಲ್-ನೊಂದಿಗೆ ತನ್ನ ರೂಮಿನೊಳಗೆ ತರಳಿದ. ಇಂತಹ ಮಾರ್ಗದರ್ಶಿ ಸಿಗುವುದು ಬಹಳ ಅಪರೂಪ. ಯಾವಾಗಲೂ ಎಸ್ಟೇಟಿನಿಂದ ಹಳ್ಳಿಯೆಡೆ ತೆರಳಿ, ಟೈಟಾಗಿ ರಾತ್ರಿ ೧೧-೧೨ಕ್ಕೆ ಎಸ್ಟೇಟಿನ ದಾರಿ ತುಳಿಯುವ ಚಿನ್ನಯ್ಯ ಅಂದು ನಮ್ಮ ಸಲುವಾಗಿ ೮.೪೫ಕ್ಕೇ ಹಿಂತಿರುಗಿ ಎಸ್ಟೇಟಿನವರೆಗೆ ನಮ್ಮನ್ನು ಕರೆದೊಯ್ದ. ಈ ಉಪಕಾರಕ್ಕಾಗಿ ಚಿನ್ನಯ್ಯನಿಗೆ ತುಂಬಾ ಥ್ಯಾಂಕ್ಸ್.

ಸೋಮವಾರ, ಮಾರ್ಚ್ 02, 2009

ಆಪರೇಷನ್ ವಾಲ್ಕರಿ

’ತೋಳದ ಗುಹೆ’ ಅಥವಾ ’ತೋಳದ ಮನೆ’. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಝಿ ಜರ್ಮನಿಯ ಸಮರ ಯೋಜನೆ ಮತ್ತು ರಣನೀತಿಗಳಿಗೆ ಅಂತಿಮ ರೂಪ ಕೊಡುವ ಸಭೆಗಳು ನಡೆಯುತ್ತಿದ್ದ ಗುಹೆಯಂತಹ ಕಟ್ಟಡ. ಆಗಿನ ಜರ್ಮನಿಯ ಪ್ರಾಂತ್ಯವಾಗಿದ್ದ ಪೂರ್ವ ಪ್ರಷ್ಯಾದ ರಾಸ್ಟೆನ್-ಬರ್ಗ್ (ಈಗ ಪೋಲಂಡ್-ನ ಕೆಂಟ್ಝುನ್) ಎಂಬ ಪಟ್ಟಣದ ಸಮೀಪವಿದೆ ಈ ತೋಳದ ಗುಹೆ.

ಆ ದಿನ ತಾರೀಕು ಜುಲಾಯಿ ೨೦, ೧೯೪೪. ತೋಳದ ಗುಹೆಯಲ್ಲಿ ಹಿಟ್ಲರ್ ಮತ್ತು ಆತನ ಸೈನ್ಯಾಧಿಕಾರಿಗಳು ಮೇಜೊಂದರ ಸುತ್ತಲೂ ನಿಂತು ಆ ಮೇಜಿನ ಮೇಲೆ ಹರಡಲಾಗಿದ್ದ ನಕ್ಷೆಯೊಂದರ ಮೂಲಕ ಯುದ್ಧದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಮಧ್ಯಾಹ್ನ ೧೨.೪೨ಕ್ಕೆ ಸರಿಯಾಗಿ ಆ ಮೇಜಿನ ಕೆಳಗಿರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತು! ಕೆಲವೇ ನಿಮಿಷಗಳ ಮೊದಲು ಆ ಬಾಂಬ್ ಇದ್ದ ಬ್ರೀಫ್-ಕೇಸನ್ನು ಮೇಜಿನ ಕೆಳಗಿರಿಸಿ, ಅಲ್ಲಿಂದ ಹೊರನಡೆದಿದ್ದ ನಾಝಿ ಮೀಸಲು ಪಡೆಯ ಅಧಿಕಾರಿಯಾಗಿದ್ದ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್, ಹಿಟ್ಲರ್ ಸತ್ತೇ ಹೋಗಿದ್ದಾನೆ ಎಂದು ತಿಳಿದು ಸಂತಸದಿಂದ ಬೀಗುತ್ತಾ ಬರ್ಲಿನ್ ಗೆ ಹೊರಟರು.

ಆದರೆ ಹಿಟ್ಲರ್ ಸತ್ತಿರಲಿಲ್ಲ, ಗಾಯಗೊಂಡಿದ್ದನಷ್ಟೆ ಮತ್ತು ವೈದ್ಯರಲ್ಲಿ, ’ನಾನು ಅಮರ... ನನ್ನನ್ನೇನು ಮಾಡಲಾಗದು... ನಾನು ಅಮರ’ ಎಂದು ರೋಷದಿಂದ ಬಡಬಡಿಸುತ್ತಿದ್ದ. ಮೊದಲ ಎರಡು ಪ್ರಯತ್ನಗಳಂತೆ, ಹಿಟ್ಲರ್-ನನ್ನು ಕೊಂದು ಜರ್ಮನಿಯನ್ನು ಆತನ ಕಪಿಮುಷ್ಠಿಯಿಂದ ಪಾರುಗೊಳಿಸುವ ಈ ೩ನೇ ಪ್ರಯತ್ನವೂ ವಿಫಲವಾಯಿತು.

ಜೂನ್ ೧೯೪೪ರ ಹೊತ್ತಿಗೆ ಎರಡನೇ ಮಹಾಯುದ್ಧ ಸಾಗುತ್ತಿದ್ದ ರೀತಿಯನ್ನು ಅವಲೋಕಿಸಿದಾಗ ಜರ್ಮನಿಯ ಅವನತಿಯನ್ನು ತಡೆಯುವುದು ಅಸಾಧ್ಯ ಎಂದು ಒಬ್ಬ ಅಡಾಲ್ಫ್ ಹಿಟ್ಲರ್-ನನ್ನು ಬಿಟ್ಟು ಉಳಿದೆಲ್ಲಾ ಉನ್ನತ ನಾಝಿ ಅಧಿಕಾರಿಗಳಿಗೆ ಗೊತ್ತಾಗಿ ಹೋಗಿತ್ತು. ತನ್ನ ಅಧಿಕಾರಿಗಳು ನೀಡುತ್ತಿದ್ದ ಶಾಂತಿ ಸಂಧಾನದ ಸಲಹೆಗಳನ್ನು ಕೇಳಲು ಹಿಟ್ಲರ್ ತಯಾರಿರಲಿಲ್ಲ. ಜರ್ಮನಿ ಇನ್ನೂ ಯುದ್ಧ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಭ್ರಮೆಯಲ್ಲೇ ’ತೋಳದ ಗುಹೆ’ಯಲ್ಲಿ ಘರ್ಜಿಸುತ್ತಾ ತನ್ನ ಅಧಿಕಾರಿಗಳಿಗೆ ಆದೇಶಗಳನ್ನು ನೀಡುತ್ತಿದ್ದ.

ಕೆಲವು ಉನ್ನತ ನಾಝಿ ಅಧಿಕಾರಿಗಳು ಮತ್ತು ಕೆಲವು ಪ್ರಮುಖ ನಾಗರಿಕರು, ಹಿಟ್ಲರ್ ಸಾಯುವ ಮೂಲಕ ಜರ್ಮನಿಯನ್ನು ರಕ್ಷಿಸಲು ಸಾಧ್ಯವಾಗುವುದಾದರೆ ಅದಕ್ಕೂ ಸಿದ್ಧರಾಗಿದ್ದರು. ಇವರಲ್ಲಿ ಪ್ರಮುಖರಾದವರೆಂದರೆ ಜನರಲ್ ಲೂಡ್ವಿಷ್ ಬೆಕ್, ಮೇಜರ್ ಜನರಲ್ ಬಾರೋನ್ ಹೆನ್ನಿಂಗ್ ವೊನ್ ಟ್ರೆಸ್ಕೊವ್, ಲೆಫ್ಟಿನಂಟ್ ಜನರಲ್ ಫ್ರೀಡ್ರಿಷ್ ಓಲ್-ಬ್ರೈಷ್ಟ್, ಕರ್ನಲ್ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್ ಮತ್ತು ಲೈಪ್-ಝಿಷ್ ನಗರದ ಮಾಜಿ ಮೇಯರ್ ಮತ್ತು ಹಿಟ್ಲರ್ ಸರಕಾರದ ಮಾಜಿ ಸದಸ್ಯರಾಗಿದ್ದ ಕಾರಲ್ ಗರ್ಡೆಲೊರ್.

ಹಿಟ್ಲರ್-ನನ್ನು ಮುಗಿಸುವ ಮೊದಲ ಪ್ರಯತ್ನ ನಡೆದದ್ದು ಮಾರ್ಚ್ ೧೯೪೩ರಲ್ಲಿ. ವೊನ್ ಟ್ರೆಸ್ಕೊವ್ ಮತ್ತು ಆತನ ಗೆಳೆಯ ಕ್ಯಾಪ್ಟನ್ ಫಾಬಿಯಾನ್ ವೊನ್ ಸ್ಲಾಕನ್-ಡೊರ್ಫ್, ಬ್ರಾಂಡಿ ಬಾಟ್ಲಿಗಳಿದ್ದ ಪಾರ್ಸೆಲ್ ಒಂದರಲ್ಲಿ ಬಾಂಬನ್ನು ಇರಿಸಿ ಹಿಟ್ಲರ್-ನನ್ನು ಕೊಲ್ಲುವ ಪ್ರಯತ್ನ ಮಾಡಿದ್ದರು. ಆದರೆ ಆ ಬಾಂಬ್ ಸ್ಫೋಟಗೊಳ್ಳಲೇ ಇಲ್ಲ. ಕೆಲವು ತಿಂಗಳುಗಳ ಬಳಿಕ ಕರ್ನಲ್ ರುಡೊಲ್ಫ್ ವೊನ್ ಗೆರ್ಸ್-ದೊರ್ಫ್ ತನ್ನ ಕೋಟಿನ ಜೇಬುಗಳಲ್ಲಿ ಬಾಂಬುಗಳನ್ನಿರಿಸಿ ಹಿಟ್ಲರ್ ಸಮೀಪಕ್ಕೆ ಬಂದ ಕೂಡಲೇ ಆತನ ಮೇಲೆ ಜಿಗಿದು ಬಾಂಬನ್ನು ಸ್ಫೋಟಗೊಳಿಸಿ ಹಿಟ್ಲರ್-ನನ್ನು ಸಾಯಿಸಿ ತಾನೂ ಸಾಯಲು ಮುಂದಾದರು. ಈ ಪ್ರಯತ್ನವೂ ವಿಫಲವಾಯಿತು.

ನಂತರ ನಡೆದದ್ದು ಮೇಲೆ ತಿಳಿಸಿದಂತೆ ೩ನೇ ಪ್ರಯತ್ನ. ಕರ್ನಲ್ ಕ್ಲೌಸ್ ಷೆಂಕ್ ಹಾಫ್ ವೊನ್ ಸ್ಟೌಫನ್-ಬರ್ಗ್, ೩೭ ವರ್ಷ ವಯಸ್ಸಿನ ಚಾಣಾಕ್ಷ ಮತ್ತು ಸಮರ್ಥ ಅಧಿಕಾರಿಯಾಗಿದ್ದರು. ಟ್ಯುನೀಶಿಯಾದಲ್ಲಿ ’ನಾಝಿ ಆಫ್ರಿಕಾ ಪಡೆ’ಯ ಪರ ಹೋರಾಡುವಾಗ ಬಲ ತೋಳು, ಬಲ ಕಣ್ಣು ಮತ್ತು ಎಡ ಕೈಯಲ್ಲಿನ ಎರಡು ಬೆರಳುಗಳನ್ನು ಕಳಕೊಂಡಿದ್ದರು. ಸ್ಟೌಫನ್-ಬರ್ಗ್ ನ ಸಾಧನೆಗಳನ್ನು ಗಮನಿಸಿದ ಹಿಟ್ಲರ್, ಆತನಿಗೆ ನಾಝಿ ಮೀಸಲು ಪಡೆಯ ಅಧಿಕಾರಿಯಾಗಿದ್ದ ಜನರಲ್ ಫ್ರೀಡ್ರಿಷ್ ಹೊಮ್ಮ್ ಅವರ ಚೀಫ್ ಆಫ್ ಸ್ಟಾಫ್ ಆಗಿ ಭಡ್ತಿ ನೀಡಿದನು. ಯುದ್ಧದ ರಣನೀತಿಗಳನ್ನು ಚರ್ಚೆ ಮಾಡುವಾಗ ಮೀಸಲು ಪಡೆಯ ಅಧಿಕಾರಿಗಳ ಉಪಸ್ಥಿತಿ ಅತ್ಯಗತ್ಯ. ಹಾಗಾಗಿ ಈಗ ಸ್ಟೌಫನ್-ಬರ್ಗ್ ಹಿಟ್ಲರ್-ನ ಸಮೀಪ ಸುಲಭದಲ್ಲಿ ಸುಳಿಯಬಹುದಾಗಿತ್ತು.

ಸ್ಟೌಫನ್-ಬರ್ಗ್ ಒಬ್ಬ ದೇಶಪ್ರೇಮಿಯಾಗಿದ್ದರೂ, ನಾಝಿ ಆಡಳಿತದ ವಿರೋಧಿಯಾಗಿದ್ದ. ಒಬ್ಬ ಜರ್ಮನಿಯ ಅಧಿಕಾರಿಯಾಗಿ ಯುದ್ಧದಲ್ಲಿ ಪಾಲ್ಗೊಂಡನೇ ಹೊರತು ನಾಝಿ ಯೋಧನಾಗಿಯಲ್ಲ. ನಾಝಿ ಆಡಳಿತ ವೈಖರಿ, ಆಚಾರ ವಿಚಾರಗಳು ಸ್ಟೌಫನ್-ಬರ್ಗ್ ಗೆ ಮೊದಲಿನಿಂದಲೂ ಹಿಡಿಸುತ್ತಿರಲಿಲ್ಲ. ಜರ್ಮನಿಯ ಸೋಲು ಖಚಿತವಾದ ಬಳಿಕವೂ ಅನಾವಶ್ಯಕವಾಗಿ ಯುದ್ಧವನ್ನು ಮುಂದುವರಿಸಿದ್ದ ಹಿಟ್ಲರ್-ನನ್ನು ಮುಗಿಸುವ ಸಂಚಿನ ರೂವಾರಿಯಾಗಿದ್ದ ಸ್ಟೌಫನ್-ಬರ್ಗ್, ತೋಳದ ಮನೆಯಲ್ಲಿ ಬಾಂಬ್ ಇರಿಸುವ ಸ್ವಲ್ಪ ದಿನಗಳ ಮೊದಲು, ’ಜರ್ಮನಿಯನ್ನು ರಕ್ಷಿಸಲು ಈಗ ತಾನೇನಾದರು ಮಾಡಲೇಬೇಕು’ ಎಂದು ತನ್ನ ಪತ್ನಿಯಲ್ಲಿ ಹೇಳಿದ್ದ.

ತನ್ನ ಕೆಳಗಿನ ಅಧಿಕಾರಿಗಳು ಹೂಡುತ್ತಿರುವ ಸಂಚು ನಾಝಿ ಮೀಸಲು ಪಡೆಯ ಮುಖ್ಯಸ್ಥ ಫ್ರೀಡ್ರಿಷ್ ಹೊಮ್ಮ್ ಅವರಿಗೆ ತಿಳಿದಿತ್ತಾದರೂ ಅವರು ಅದರಲ್ಲಿ ಯಾವುದೇ ರೀತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಮತ್ತು ತನ್ನ ಮೇಲಧಿಕಾರಿಗಳಿಗೆ ಇದರ ಬಗ್ಗೆ ಸುಳಿವನ್ನೂ ನೀಡಲಿಲ್ಲ. ತಟಸ್ಥ ನಿಲುವನ್ನು ತಾಳಿದರು. ಈ ದಿವ್ಯ ಮೌನ ನಂತರ ಫ್ರೀಡ್ರಿಷ್ ಹೊಮ್ಮ್ ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಸ್ಟೌಫನ್-ಬರ್ಗ್, ಕಾರಲ್ ಗರ್ಡೆಲೊರ್, ಲೂಡ್ವಿಷ್ ಬೆಕ್, ಫ್ರೀಡ್ರಿಷ್ ಓಲ್-ಬ್ರೈಷ್ಟ್, ವೊನ್ ಟ್ರೆಸ್ಕೊವ್ ಮತ್ತು ಇತರ ನಾಝಿ ವಿರೋಧಿ ಪ್ರಮುಖರು ಹಿಟ್ಲರ್-ನನ್ನು ಮುಗಿಸಿ ತಮ್ಮದೇ ಒಂದು ಹೊಸ ಸರಕಾರವನ್ನು ನಿರ್ಮಿಸಿ ಮಿತ್ರಪಡೆಗಳೊಂದಿಗೆ ಶಾಂತಿ ಸಂಧಾನದ ಮಾತುಕತೆಯನ್ನು ನಡೆಸುವ ಕಾರ್ಯತಂತ್ರವೊಂದನ್ನು ರೂಪಿಸಿದರು. ಇದಕ್ಕೆ ’ಆಪರೇಷನ್ ವಾಲ್ಕರಿ’ ಎಂಬ ಹೆಸರನ್ನಿಡಲಾಯಿತು. ಆಪರೇಷನ್ ವಾಲ್ಕರಿಯಲ್ಲಿ ೩ ಹಂತಗಳಿದ್ದವು. ಒಂದನೇಯದು ಹಿಟ್ಲರ್-ನನ್ನು ಮುಗಿಸುವುದು, ಎರಡನೇಯದು ನಾಝಿ ಪರ ಅಧಿಕಾರಿಗಳನ್ನು ಬಂಧಿಸಿ ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡು ದೇಶವನ್ನು ತಮ್ಮ ಆಧೀನಕ್ಕೆ ತೆಗೆದುಕೊಳ್ಳುವುದು ಮತ್ತು ೩ನೇಯದು ಮಿತ್ರಪಡೆಗಳೊಂದಿಗೆ ಶಾಂತಿ ಮಾತುಕತೆ. ಪ್ಲ್ಯಾನ್ ಚೆನ್ನಾಗಿತ್ತು ಆದರೆ ಎಕ್ಸಿಕ್ಯೂಷನ್ ವೆರಿ ವೆರಿ ಬ್ಯಾಡ್.

೧೯೪೪ ಜುಲಾಯಿ ೨೦ರ ಮುಂಜಾನೆ ಸ್ಟೌಫನ್-ಬರ್ಗ್, ತನ್ನ ಸಹಾಯಕ ವೆರ್ನರ್ ವೊನ್ ಹಾಫನ್ ಜೊತೆಗೆ ತೋಳದ ಗುಹೆ ಇರುವ ರಾಸ್ಟೆನ್ ಬರ್ಗ್ ಗೆ ವಿಮಾನದಲ್ಲಿ ತೆರಳಿದರು. ಇಬ್ಬರ ಕೈಯಲ್ಲೂ ಬಾಂಬ್ ಇರುವ ಒಂದೊಂದು ಬ್ರೀಫ್-ಕೇಸ್ ಇತ್ತು. ನಂತರ ಸ್ಟೌಫನ್-ಬರ್ಗ್ ಗೆ ತಿಳಿದುಬಂದ ವಿಷಯವೆಂದರೆ, ಆ ದಿನ ಮಧ್ಯಾಹ್ನ ಬೆನಿಟೋ ಮುಸ್ಸೋಲಿನಿ ರಾಸ್ಟೆನ್-ಬರ್ಗ್ ಗೆ ಆಗಮಿಸಲಿರುವುದರಿಂದ ಯಾವ ಸಭೆಗಾಗಿ ತನ್ನನ್ನು ಹಿಟ್ಲರ್ ಕರೆದಿದ್ದನೋ ಆ ಸಭೆಯನ್ನು ಒಂದು ತಾಸು ಮುಂಚಿತವಾಗಿಯೇ ನಡೆಸಲಾಗುವುದು ಎಂದು. ಈ ಸುದ್ದಿ ಕೇಳಿ ಸ್ಟೌಫನ್ ಬರ್ಗ್ ತನ್ನ ಕೆಲಸ ಸ್ವಲ್ಪ ಬೇಗನೇ ಮುಗಿಯಲಿದೆ ಎಂದು ಸಂತಸಪಟ್ಟನು. ಆದರೆ ಅಲ್ಲೊಂದು ಪ್ರಾಬ್ಲೆಮ್ ಇತ್ತು. ಹಿಟ್ಲರ್ ಯಾವಾಗಲೂ ಇಂತಹ ಸಭೆಗಳನ್ನು ತೋಳದ ಮನೆಯ ಭೂಮಿಯ ಮಟ್ಟಕ್ಕಿಂತ ಕೆಳಗಿರುವ ಬಂಕರ್ ಒಂದರಲ್ಲಿ ಮಾಡುತ್ತಿದ್ದ. ಆದರೆ ಇಂದು ಈ ಬಂಕರ್ ನಲ್ಲಿ ಸ್ವಲ್ಪ ದುರಸ್ತಿ ಕಾರ್ಯವಿದ್ದುದರಿಂದ, ಮರದ ಸಾಮಗ್ರಿಗಳಿಂದ ನಿರ್ಮಿಸಲಾಗಿದ್ದ ಕಿಟಕಿಗಳಿದ್ದ ತಾತ್ಕಾಲಿಕ ಕೊಠಡಿಯೊಂದರಲ್ಲಿ ಈ ಸಭೆಯನ್ನು ನಡೆಸುವುದಾಗಿ ನಿರ್ಧರಿಸಲಾಗಿತ್ತು. ಈ ಕೊಠಡಿಯಲ್ಲಿ ಬಾಂಬ್ ಸ್ಫೋಟಗೊಳಿಸಿದರೆ, ಬಂಕರಿನಲ್ಲಿ ಉಂಟಾಗುವಷ್ಟು ಹಾನಿ ಆಗುವುದಿಲ್ಲ ಎಂದು ಸ್ಟೌಫನ್ ಬರ್ಗ್ ಗೆ ಮನವರಿಕೆಯಾದರೂ, ಈಗ ಹಿಂದೇಟು ಹಾಕುವಂತಿರಲಿಲ್ಲ.

ತನ್ನ ಪೈಲಟ್-ಗೆ ತಯಾರಾಗಿರುವಂತೆ ಆದೇಶಿಸಿ, ವೆರ್ನರ್ ವೊನ್ ಹಾಫನ್ ಜೊತೆ ತೋಳದ ಗುಹೆಯೆಡೆ ಸ್ಟೌಫನ್ ಬರ್ಗ್ ತೆರಳಿದನು. ಬಾಂಬ್ ಇಟ್ಟ ಬಳಿಕ ಆದಷ್ಟು ಬೇಗ ಅಲ್ಲಿಂದ ನಿರ್ಗಮಿಸಲು ಸಹಕಾರಿಯಾಗುವಂತೆ ವೊನ್ ಹಾಫನ್ ನನ್ನು ಕಾರಿನಲ್ಲೇ ಇರಲು ತಿಳಿಸಿ, ತಾನು ಮಾತ್ರ ಬ್ರೀಫ್ ಕೇಸ್ ಹಿಡಿದು ಸಭೆ ನಡೆಯುವ ಕೊಠಡಿಗೆ ತೆರಳಿದನು. ಅಲ್ಲಿ ಹಿಟ್ಲರ್ ಮತ್ತು ೨೩ ಇತರ ಅಧಿಕಾರಿಗಳು ದೊಡ್ಡ ಮೇಜೊಂದರ ಮೇಲೆ ನಕ್ಷೆಯೊಂದನ್ನು ಹರಡಿ ಚರ್ಚಿಸುತ್ತಿದ್ದರು. ಸ್ಟೌಫನ್ ಬರ್ಗ್, ಬ್ರೀಫ್ ಕೇಸನ್ನು ಟೇಬಲಿನ ಕಾಲೊಂದಕ್ಕೆ ಒರಗಿಸಿ ಹಿಟ್ಲರ್ ನಿಂದ ಸುಮಾರು ೬ ಅಡಿ ದೂರ ಇರಿಸಿದನು. ಸ್ವಲ್ಪ ಸಮಯದ ಬಳಿಕ ತುರ್ತು ಕರೆಯೊಂದನ್ನು ಮಾಡಲಿರುವುದು ಎಂಬ ನೆವ ಹೇಳಿ ಅಲ್ಲಿಂದ ಆತ ಹೊರನಡೆದನು. ಆಗ ಸಭೆಯಲ್ಲಿದ್ದ ಇನ್ನೊಬ್ಬ ಅಧಿಕಾರಿ ಕರ್ನಲ್ ಹೈನ್ಝ್ ಬ್ರಾಂಟ್, ಹಿಟ್ಲರಿನ ಸಮೀಪ ತೆರಳುವ ಅಥವಾ ತನ್ನ ಕಾಲನ್ನು ಉದ್ದಕ್ಕೆ ಚಾಚುವ ಆತುರದಲ್ಲಿ (ಇವೆರಡರಲ್ಲಿ ಯಾವುದು ಸರಿ ಎಂದು ಎಲ್ಲೂ ಸರಿಯಾಗಿ ತಿಳಿಸಲಾಗಿಲ್ಲ), ಮೇಜಿನ ಕಾಲಿಗೆ ಒರಗಿ ಇರಿಸಿದ್ದ ಬ್ರೀಫ್ ಕೇಸನ್ನು ಕೆಳಗೆ ಬೀಳಿಸಿದನು. ನಂತರ ಅದನ್ನೆತ್ತಿ ಹಿಟ್ಲರಿನಿಂದ ಸ್ವಲ್ಪ ದೂರದಲ್ಲಿ ಸರಿಯಾಗಿ ಇರಿಸಿದನು.

ಇದೇ ಸಮಯದಲ್ಲಿ ಸ್ಟೌಫನ್ ಬರ್ಗ್, ವೊನ್ ಹಾಫನ್ ಇದ್ದ ಕಾರಿನೆಡೆ ತೆರಳುತ್ತಿದ್ದನು. ಆತ ಕಾರಿನೆಡೆ ತಲುಪಿದಾಗ ಸಮಯ ೧೨.೪೨. ಆಗ ಇತ್ತ ಬಾಂಬ್ ಸ್ಫೋಟಗೊಂಡಿತು. ಆ ದೊಡ್ಡ ಸದ್ದು ಮತ್ತು ಚೀತ್ಕಾರಗಳನ್ನು ಕೇಳಿ, ಹಿಟ್ಲರ್ ಸತ್ತಿರುವನೆಂದು ತಿಳಿದು ಆಪರೇಷನ್ ವಾಲ್ಕರಿಯ ಮೊದಲ ಹಂತ ಯಶಸ್ವಿಯಾಯಿತೆಂದು ಸ್ಟೌಫನ್ ಬರ್ಗ್, ವೊನ್ ಹಾಫನ್ ಜೊತೆ ಬರ್ಲಿನ್ ಗೆ ವಿಮಾನದಲ್ಲಿ ಹಿಂತಿರುಗಿದನು.

ಆದರೆ ಹಿಟ್ಲರ್ ಬದುಕುಳಿದಿದ್ದ. ಕಿಟಕಿಗಳಿಂದ ಕೂಡಿದ್ದ ತಾತ್ಕಾಲಿಕ ಕೊಠಡಿಯ ಪರಿಣಾಮ ಮತ್ತು ಕರ್ನಲ್ ಬ್ರಾಂಟ್ ಆ ಬ್ರೀಫ್ ಕೇಸನ್ನು ಇದ್ದಲ್ಲಿಂದ ತೆಗೆದು ದೂರವಿರಿಸಿದ್ದು: ಈ ಎರಡು ಕಾರಣಗಳಿಂದ ಬಾಂಬ್ ನಿರೀಕ್ಷಿಸಿದಂತೆ ಸ್ಫೋಟಗೊಂಡರೂ, ಹಾನಿ ಮಾತ್ರ ನಿರೀಕ್ಷಿಸಿದಂತೆ ಆಗಲಿಲ್ಲ. ನಾಲ್ಕು ಜನರು ಸತ್ತು ಹಲವು ಉನ್ನತ ನಾಝಿ ಅಧಿಕಾರಿಗಳು ಬಹಳ ಕೆಟ್ಟದಾಗಿ ಗಾಯಗೊಂಡರು. ಹಿಟ್ಲರ್ ಕುಂಟುತ್ತಾ ಅಲ್ಲಿಂದ ಹೊರನಡೆದನು.

ತನ್ನ ಕೆಳಗಿರುವ ಆಧಿಕಾರಿಗಳು ನಡೆಸಿರುವ ಕೃತ್ಯದ ಬಗ್ಗೆ ತಿಳಿದಿದ್ದ ಫ್ರೀಡ್ರಿಷ್ ಹೊಮ್ಮ್, ಸ್ಟೌಫನ್ ಬರ್ಗ್ ಬೀಗುತ್ತಾ ಬಂದಿರುವುದನ್ನು ಗಮನಿಸಿದ ಕೂಡಲೇ ತೋಳದ ಗುಹೆಗೆ ಫೋನಾಯಿಸಿ ಹಿಟ್ಲರ್ ಇನ್ನೂ ಬದುಕಿರುವನೆಂದು ತಿಳಿದುಕೊಂಡನು. ಈಗೆಲ್ಲಾದರೂ ಸ್ಟೌಫನ್ ಬರ್ಗ್ ಮತ್ತು ಇತರರು ಬಂಧಿಸಲ್ಪಟ್ಟರೆ ಅವರು ತನ್ನ ಬಗ್ಗೆ ಬಾಯಿ ಬಿಡುವರೆಂಬ ನಡುಕ ಫ್ರೀಡ್ರಿಷ್ ಹೊಮ್ಮ್ ಗೆ ಆರಂಭವಾಯಿತು. ಕೂಡಲೇ ಹಿಟ್ಲರ್ ಕೊಲೆ ಪ್ರಯತ್ನದ ಆರೋಪದ ಮೇಲೆ ಸ್ಟೌಫನ್ ಬರ್ಗ್, ವೊನ್ ಹಾಫನ್, ಓಲ್ ಬ್ರೈಷ್ಟ್ ಮತ್ತು ಕರ್ನಲ್ ಮತ್ಝ್ ವೊನ್ ಕ್ವಿರ್ನ್-ಹೈಮ್ ಇವರುಗಳನ್ನು ಬಂಧಿಸಿ, ಕೋರ್ಟ್ ಮಾರ್ಷಲ್ ಮಾಡಿಸಿ ಮಧ್ಯರಾತ್ರಿಯ ಬಳಿಕ ಗುಂಡಿಟ್ಟು ಕೊಲ್ಲಿಸಿದನು. ನಂತರ ಸೆರೆಸಿಕ್ಕ ೮ ನಾಝಿ ವಿರೋಧಿ ಅಧಿಕಾರಿಗಳನ್ನು ತಂತಿಗಳ ಸಹಾಯದಿಂದ ನೇಣು ಹಾಕಲಾಯಿತು. ಈ ೮ ಮಂದಿಯ ಯಾತನೆಭರಿತ ಸಾವನ್ನು ರೆಕಾರ್ಡ್ ಮಾಡಿ ನಂತರ ಹಿಟ್ಲರ್ ತನ್ನ ಮನೋರಂಜನೆಗಾಗಿ ಅವನ್ನು ವೀಕ್ಷಿಸುತ್ತಿದ್ದ.

ಹಿಟ್ಲರ್ ಕೊಲೆ ಪ್ರಯತ್ನದ ನಂತರದ ಬಂಧನಗಳು ಮತ್ತು ಮರಣದಂಡನೆಗಳು ಐದಾರು ತಿಂಗಳುಗಳವರೆಗೆ ನಡೆದವು. ’ಜನರ ನ್ಯಾಯಾಲಯ’ ಎಂಬ ಹೆಸರಿನ ನ್ಯಾಯಾಲಯದ ಕುಪ್ರಸಿದ್ಧ ನ್ಯಾಯಾಧೀಶರಾಗಿದ್ದ ರೋಲಂಡ್ ಫ್ರೈಸ್ಲರ್ ನ್ಯಾಯ ದೊರಕಿಸುವ ನೆವದಲ್ಲಿ ಕಾಟಾಚಾರದ ವಿಚಾರಣೆಗಳನ್ನು ನಡೆಸಿ ಬಂಧನೆಗೆ ಒಳಗಾದವರನ್ನೆಲ್ಲಾ ಮರಣದಂಡನೆಗೆ ಒಳಪಡಿಸಿದನು. ಎಲ್ಲವೂ ಫ್ಯೂಹ್ರರ್ (ಸರ್ವಾಧಿಕಾರಿ ಹಿಟ್ಲರ್) ನನ್ನು ಸಂತುಷ್ಟಪಡಿಸುವ ಸಲುವಾಗಿ. ಸುಮಾರು ೫೦೦೦ ಜನರನ್ನು ಯಾವುದೇ ವಿಚಾರಣೆ ಇಲ್ಲದೇ ಮರಣದಂಡನೆಗೆ ಒಳಪಡಿಸಲಾಯಿತು.

ಈ ಸಂಚಿನಲ್ಲಿ ಭಾಗಿಯಾಗಿದ್ದ ಲೂಡ್ವಿಷ್ ಬೆಕ್ ಆತ್ಮಹತ್ಯೆ ಮಾಡಿಕೊಂಡರು. ವೊನ್ ಟ್ರೆಸ್ಕಾವ್ ರಷ್ಯಾ ಜೊತೆಗಿನ ಯುದ್ಧದಲ್ಲಿ ತಾನಾಗಿಯೇ ವೈರಿಯ ಗುಂಡಿನ ಮಳೆಯತ್ತ ನಡೆದುಕೊಂಡು ಹೋದರು. ಫ್ರೀಡ್ರಿಷ್ ಹೊಮ್ಮ್ ಅವರನ್ನು ಸಂಚಿನ ಬಗ್ಗೆ ತಿಳಿದೂ ಮೌನ ವಹಿಸಿದ್ದರಿಂದ ಕರ್ತವ್ಯ ಲೋಪದ ಆರೋಪದಲ್ಲಿ ಮರಣದಂಡನೆಗೆ ಒಳಪಡಿಸಲಾಯಿತು.

೨೦೦೮ರ ಕೊನೆಯಲ್ಲಿ ಟಾಮ್ ಕ್ರೂಸ್, ಸ್ಟೌಫನ್ ಬರ್ಗ್ ಪಾತ್ರಧಾರಿಯಾಗಿ ನಟಿಸಿರುವ ’ವಾಲ್ಕರಿ’ ಎಂಬ ಹೆಸರಿನ ಚಲನಚಿತ್ರವನ್ನು ಈ ನೈಜ ಘಟನೆಯನ್ನು ಕಥಾವಸ್ತುವನ್ನಾಗಿ ಮಾಡಿಕೊಂಡು ನಿರ್ಮಿಸಲಾಗಿದೆ. ಹಾಗೇನೆ ಈ ಚಿತ್ರವನ್ನು ನಿರ್ಮಿಸುವಾಗ ಸ್ಟೌಫನ್-ಬರ್ಗ್ ಅವರ ಮಗ, ಚಿತ್ರದ ಬಗ್ಗೆ ಹೇಳಿರುವ ಮಾತುಗಳನ್ನು ಇಲ್ಲಿ ಓದಬಹುದು.