ಭಾನುವಾರ, ಜೂನ್ 29, 2008

ಗುಡ್ಡದ ಚೆಲುವು


ಈ ದಾರಿಯಲ್ಲಿ ಪ್ರಯಾಣಿಸುವಾಗ ಈ ಬೆಟ್ಟ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿತ್ತು. ಬೆಟ್ಟದ ಹೆಸರೇನೆಂದು ಗೊತ್ತಿರಲಿಲ್ಲ. ಆದರೆ ಅದನ್ನು ನೋಡಿದಾಗಲೆಲ್ಲಾ ಅದರ ತುದಿಗೊಂದು ಸಲ ಭೇಟಿ ನೀಡಬೇಕೆಂಬ ಆಸೆ ಹೆಚ್ಚಾಗುತ್ತಿತ್ತು. ಮೊನ್ನೆ ಮೇ ೪ರಂದು ರಾಕೇಶ್ ಹೊಳ್ಳ ಮತ್ತು ಅಶೋಕ, ಇಬ್ಬರೊಂದಿಗೆ ಆ ಬೆಟ್ಟದೆಡೆ ಹೊರಟೆ. ರಾಕೇಶ್ ಶರವೇಗದಲ್ಲಿ ಬೈಕ್ ಓಡಿಸಿದರೆ ನಾನು ಬಹಳ ನಿಧಾನ. ದಾರಿಯಲ್ಲಿ ಸಿಗುವ ದೇವಸ್ಥಾನವೊಂದರಲ್ಲಿ ಇವರಿಬ್ಬರು ಬೋರ್ ಹೊಡೆಸಿಕೊಂಡು ನನಗೆ ಕಾಯುತ್ತಿದ್ದರು. 'ಎಂತ ಮಾರ್ರೆ ನೀವು. ನಾವು ದೇವಿಗೆ ನಮಸ್ಕಾರ ಹಾಕಿ, ದೇವಸ್ಥಾನಕ್ಕೆ ೩ ಸುತ್ತು ಹಾಕಿ, ಚಾ ಕುಡ್ದು, ಅಚೀಚೆ ನೋಡಿ ಎಲ್ಲ ಮಾಡಾಯ್ತು ಆದ್ರೂ ನಿಮ್ಮ ಪತ್ತೆ ಇಲ್ಲ.....' ಎಂದು ರಾಕೇಶ ತನ್ನ ಅಸಹನೆಯನ್ನು ವ್ಯಕ್ತಪಡಿಸಿದ.

ಅಶೋಕನ ಪ್ರಕಾರ ನಾವು ತೆರಳುವುದು ಅಂಬಾರಗುಡ್ಡ ಇರಬಹುದು. ಅಂಬಾರಗುಡ್ಡ ಹೆಸರು ನಾನು ಕೇಳಿದ್ದೆ. ಇಲ್ಲಿ ಮ್ಯಾಂಗನೀಸ್ ಗಣಿಗಾರಿಕೆಯ ವಿರುದ್ಧ ರಾಮಚಂದ್ರಾಪುರ ಮಠದ ಸ್ವಾಮಿಗಳ ನೇತೃತ್ವದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದಾಗ ಗಣಿಗಾರಿಕೆ ಸ್ಥಗಿತಗೊಂಡಿತ್ತು ಎಂದು ಓದಿದ ನೆನಪು. ಅಶೋಕನಿಗಂತೂ ನಾವು ತೆರಳುವುದು ಅಂಬಾರಗುಡ್ಡಕ್ಕೇ ಎಂಬುದು ಖಚಿತವಾಗಿತ್ತು. ಆದರೆ ನನಗೆ ಸಂಶಯವಿತ್ತು.

ಹೊಸಕೊಪ್ಪದಲ್ಲಿ ಮನೆಯೊಂದರ ಬಳಿ ಮಾಹಿತಿ ಕೇಳೋಣವೆಂದು ನಿಂತೆವು. ಮನೆಯ ಯಜಮಾನ ಒಳಗಿನಿಂದಲೇ ಜೋರಾಗಿ ಒದರುತ್ತಾ ಮಾಹಿತಿ ನೀಡುತ್ತಿದ್ದರೆ ನಾವು ಹೊರಗಿನಿಂದ ಜೋರಾಗಿ ಒದರುತ್ತಾ ಪ್ರಶ್ನೆ ಕೇಳುತ್ತಿದ್ದೆವು. 'ಒಳ್ಗೆ ಬನ್ನಿ. ನಾನು ತಿಂಡಿ ತಿಂತಾ ಇದ್ದೀನಿ. ಸ್ವಲ್ಪ ಹೊತ್ತು ಕೂತ್ಕೊಂಡು ಹೋಗಿ' ಎಂದು ಒಳಗೆ ಕರೆದರು. ಇವರು ಪ್ರಭಾಕರ ಹೆಗಡೆ. ಆ ಬೆಟ್ಟದ ಹೆಸರು ಅಂಬಾರಗುಡ್ಡ ಎಂದು ತಿಳಿಸಿ, ಹೋಗುವ ದಾರಿಯನ್ನೂ ತಿಳಿಸಿ, ಹಿಂತಿರುಗುವಾಗ ಎಷ್ಟೇ ತಡವಾದರೂ ಪರವಾಗಿಲ್ಲ ಮನೆಗೆ ಬಂದು ಊಟ ಮಾಡಿಕೊಂಡೇ ತೆರಳಬೇಕೆಂದು ನಮ್ಮನ್ನು ಕಳಿಸಿಕೊಟ್ಟರು.

ಗಣಿಗಾರಿಕೆ ಇದ್ದ ಕಾರಣ ಅಂಬಾರಗುಡ್ಡದ ಮೇಲಿನವರೆಗೂ ರಸ್ತೆಯಿದೆ. ಕೊನೆಗೊಂದು ೩೦ ನಿಮಿಷ ನಡೆದರಾಯಿತಷ್ಟೇ. ಇಲ್ಲಿ ನೆಲವನ್ನು ಅಗೆಯಬೇಕಾಗಿಲ್ಲ, ಗುಡಿಸಿದರೂ ಮ್ಯಾಂಗನೀಸ್ ಅದಿರು ಸಿಗುತ್ತದೆ. ಅಲ್ಲಲ್ಲಿ ಅದಿರನ್ನು ಬಗೆದು ರಾಶಿ ಹಾಕಲಾಗಿತ್ತು. ದೂರದಲ್ಲಿ ಕೊಡಾಚಾದ್ರಿ ಶಿಖರ ಮತ್ತು ಬೆಟ್ಟಗಳ ಶ್ರೇಣಿ ಕಾಣುತ್ತಿತ್ತು. ಸುತ್ತಲೂ ಹಳ್ಳಿಗಳಿವೆ. ಆದರೆ ಒಂದು ಪಾರ್ಶ್ವದಲ್ಲಿ ಸುಂದರವಾದ ಕಣಿವೆಯಿದೆ. ಈ ಕಣಿವೆ ದಾಟಿ, ಮಳೆ ಕಾಡೊಂದನ್ನು ದಾಟಿದರೆ ಇನ್ನೊಂದು ಬೆಟ್ಟ. ಮುಂದಿನ ಸಲ ಇಲ್ಲಿಗೆ ಬಂದರೆ ಆ ಬೆಟ್ಟಕ್ಕೂ ತೆರಳಬೇಕು. ಕಣಿವೆಯ ಸೌಂದರ್ಯವನ್ನು ಆನಂದಿಸುತ್ತಾ ನಿಧಾನವಾಗಿ ಅಂಬಾರಗುಡ್ಡದ ತುದಿಯನ್ನು ಸಮೀಪಿಸತೊಡಗಿದೆವು.

ತುದಿ ತಲುಪಿದ ಕೂಡಲೇ ಇನ್ನೊಂದು ಸುಂದರ ದೃಶ್ಯ. ಮುಂದೆ ಕೆಳಗಡೆ ಇನ್ನೊಂದು ಶಿಖರ. ಹಾವಿನಂತೆ ಮುಂದಕ್ಕೆ ಚಾಚಿಕೊಂಡಿರುವ ಈ ಬೆಟ್ಟದ ದೃಶ್ಯ ನೋಡಿ ರಾಕೇಶ ಸಂತೋಷದಿಂದ ಚೀರಾಡುತ್ತಿದ್ದ. ಅಂಬಾರಗುಡ್ಡದ ತುದಿಯಿಂದ ಹಾಗೆ ಕೆಳಗಿಳಿದು ಈ ಮತ್ತೊಂದು ಬೆಟ್ಟದ ಮೇಲಕ್ಕೆ ಬರಬಹುದು. ಈ ಬೆಟ್ಟದ ಒಂದು ಬದಿ ೯೦ ಡಿಗ್ರೀ ಪ್ರಪಾತವಿದ್ದರೆ ಇನ್ನೊಂದು ಬದಿ ಇಳಿಜಾರಾಗಿದೆ. ನಡುವೆ ನಡೆಯುತ್ತಾ ಅದರ ಇನ್ನೊಂದು ತುದಿಯತ್ತ ಸಾಗುವಾಗ ಬೀಸುತ್ತಿದ್ದ ಗಾಳಿ ನೀಡುತ್ತಿದ್ದ ಸಂತೋಷವನ್ನು ಸದಾ ಅನುಭವಿಸುತ್ತಾ ಅಲ್ಲೇ ಇದ್ದು ಬಿಡೋಣವೆಂದೆನಿಸುತ್ತಿತ್ತು. ಇಲ್ಲಿಂದ ಕೋಗಾರಿಗೆ ತೆರಳುವ ರಸ್ತೆ ಕಾಣುತ್ತಿತ್ತು. ಬಹು ದಿನದ ಆಸೆಯೊಂದು ಈಡೇರಿತು. ಅಲ್ಲೇ ಸಣ್ಣ ಗಿಡವೊಂದರ ನೆರಳಿನಲ್ಲಿ ಸುಮಾರು ಒಂದು ತಾಸು ವಿಶ್ರಮಿಸಿದೆವು.

ಅಂಬಾರಗುಡ್ಡದಲ್ಲಿ ಚಾರಣ ಕಡಿಮೆ. ಆದರೆ ಇಲ್ಲಿ ಪ್ರಕೃತಿಯ ಅನುಪಮ ಸೌಂದರ್ಯ ಲಭ್ಯ. ಎಲ್ಲಾ ಕೋನಗಳಲ್ಲಿ ಫೋಟೋಗಳನ್ನು ತೆಗೆದು ಅಲ್ಲಿಂದ ಹೊರಟವರು ಮತ್ತೆ ನಿಂತದ್ದು ಹೊಸಕೊಪ್ಪ ಪ್ರಭಾಕರ ಹೆಗಡೆಯವರ ಮನೆಯಲ್ಲಿ ಊಟಕ್ಕೆ!

ಮಂಗಳವಾರ, ಜೂನ್ 17, 2008

ಹರಿಹರೇಶ್ವರ ದೇವಾಲಯ - ಹರಿಹರ


ಹರಿಹರ ನಗರದ ಮಧ್ಯದಲ್ಲೇ ಹರಿಹರೇಶ್ವರ ದೇವಾಲಯ ಇದೆ. ದೇವಾಲಯದ ಸುತ್ತಲೂ ಮನೆಗಳು. ಇಸವಿ ೧೨೨೪ರಲ್ಲಿ ಹೊಯ್ಸಳ ದೊರೆ ೨ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಲ್ವಾಳನು ಈ ದೇವಾಲಯವನ್ನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ.

ಗರ್ಭಗುಡಿ, ಅಂತರಾಳ, ನವರಂಗ ಮತ್ತು ವಿಶಾಲವಾದ ಮುಖಮಂಟಪಗಳನ್ನು ಈ ದೇವಾಲಯ ಹೊಂದಿದೆ. ಇಲ್ಲಿ ಮುಖಮಂಟಪವೇ ಸುಖನಾಸಿ. ಮುಖಮಂಟಪದಲ್ಲಿ ೬೦ ಕಲಾತ್ಮಕ ಕಂಬಗಳ ರಚನೆಯಿದೆ. ಇವು ಹೊಯ್ಸಳ ಶೈಲಿಯ ಪ್ರತಿಬಿಂಬ ನೇರವಾಗಿಯೂ ತಲೆಕೆಳಗಾಗಿಯೂ ಕಾಣಿಸುವ ಕಂಬಗಳು.

ಮುಖಮಂಟಪವನ್ನು ಸುಂದರವಾಗಿ ನಿರ್ಮಿಸಲಾಗಿದೆಯಲ್ಲದೇ ದೇವಾಲಯದ ಪ್ರಮುಖ ದ್ವಾರ ಮುಖಮಂಟಪಕ್ಕೇ ಇದೆ. ಅಕ್ಕ ಪಕ್ಕದಲ್ಲಿ ಇನ್ನೆರಡು ದ್ವಾರಗಳು ಮುಖಮಂಟಪಕ್ಕೆ ತೆರೆದುಕೊಳ್ಳುತ್ತವೆ. ನವರಂಗಕ್ಕೆ ೩ ದ್ವಾರಗಳಿವೆ. ನವರಂಗಕ್ಕೆ ಪ್ರಮುಖ ದ್ವಾರ ಮುಖಮಂಟಪದಿಂದ ಇದೆ. ದೇವಾಲಯದ ಎಡ ಮತ್ತು ಬಲ ಪಾರ್ಶ್ವಗಳಿಂದ ನವರಂಗಕ್ಕೆ ೨ ದ್ವಾರಗಳಿವೆ ಮತ್ತು ಇವನ್ನು ಮುಚ್ಚಲಾಗಿದೆ. ಈ ಎರಡೂ ದ್ವಾರಗಳು ಸಣ್ಣ ಸುಂದರ ಮುಖಮಂಟಪಗಳನ್ನು ಹೊಂದಿವೆ.

ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿದ್ದು, ಎರಡೂ ಸೇರಿ ಹರಿಹರೇಶ್ವರನಾಗಿದೆ. ಇದೇ ಕಾರಣದಿಂದ ದೇವಾಲಯದಲ್ಲೆಲ್ಲೂ ನಂದಿ ಕಾಣಸಿಗುವುದಿಲ್ಲ. ಆದರೆ ಹರಿಹರೇಶ್ವರ ದೇವಾಲಯದ ಬಲಕ್ಕೆ ಗರ್ಭಗುಡಿಗೆ ಸಮಾನಾಂತರವಾಗಿ ಸಣ್ಣದಾದ ಶಿವ ದೇವಾಲಯವೊಂದಿದೆ. ನಂದಿ ಈ ಸಣ್ಣ ದೇವಾಲಯದ ಹೊರಗಡೆ ಆಸೀನನಾಗಿದ್ದಾನೆ. ಅಲ್ಲೇ ಮುಂದೆ ರಾಮೇಶ್ವರನ ಗುಡಿಯೊಂದಿದೆ. ದೇವಾಲಯದ ಗೋಪುರ ಸುಣ್ಣ ಬಳಿದಿರುವ ಕಾರಣ ನೋಡಲು ಯೋಗ್ಯವಾಗಿಲ್ಲ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು ೭ ಅಡಿಯಷ್ಟು ಎತ್ತರವಿದ್ದು ಆಕರ್ಷಕವಾಗಿದೆ.

ದೇವಾಲಯದ ಮುಂದೆ ಎರಡೂ ಪಾರ್ಶ್ವಗಳಲ್ಲಿ ಅತ್ಯಾಕರ್ಷಕವಾದ ದೀಪಸ್ತಂಭಗಳಿವೆ. ಈ ಎರಡೂ ದೀಪಸ್ತಂಭಗಳ ಬುಡದಲ್ಲಿ ಸಣ್ಣ ನಂದಿ ಮೂರ್ತಿಯನ್ನು ಕೆತ್ತಲಾಗಿದೆ.

ಮಾಹಿತಿ: ಸಾಂತೇನಹಳ್ಳಿ ಕಾಂತರಾಜ್

ಭಾನುವಾರ, ಜೂನ್ 08, 2008

ಎರಡು ಕಡಲತೀರಗಳು


ದಿನಾಂಕ: ಎಪ್ರಿಲ್ ೯, ೨೦೦೬.

ನಾನು ಮತ್ತು ಗೆಳೆಯ ಲಕ್ಷ್ಮೀನಾರಾಯಣ(ಪುತ್ತು) ಮುಂಜಾನೆ ೯ಕ್ಕೆ ಬೇಲೆಕಾನ್ ತಲುಪಿದ್ದೆವು. ನಮ್ಮ ಗುರಿ ಪ್ಯಾರಡೈಸ್ ಕಡಲತೀರಕ್ಕೆ ಹೋಗುವುದಾಗಿತ್ತು. ದಾರಿಯಲ್ಲಿ ಸಿಗುವ ಬೇಲೆಕಾನ್ ಕಡಲತೀರದ ಸೌಂದರ್ಯಕ್ಕೆ ಮಾರುಹೋಗಿ ಅಲ್ಲೊಂದಷ್ಟು ಸಮಯವನ್ನು ಕಳೆದೆವು. ನದಿ ಸಮುದ್ರ ಸೇರುವ ಸ್ವಲ್ಪ ಮೊದಲು ಇರುವ ಬೇಲೆಕಾನ್ ಕಡಲತೀರದ ಕೊನೆಯ ಭಾಗ ಅರ್ಧಚಂದ್ರಾಕೃತಿಯಲ್ಲಿದೆ. ಸಮೀಪದಲ್ಲೇ ನಿರ್ಮಿತಗೊಳ್ಳಲಿರುವ ಉಷ್ಣಸ್ಥಾವರ ಅಸ್ತಿತ್ವಕ್ಕೆ ಬಂದರೆ ಈ ಕಡಲತೀರ ತನ್ನ ಅಂದವನ್ನು ಶಾಶ್ವತವಾಗಿ ಕಳಕೊಳ್ಳಲಿದೆ.


ಬೇಲೆಕಾನ್ ಕಡಲತೀರದ ಕೊನೆಯಲ್ಲಿ ಸಣ್ಣ ಬೆಟ್ಟವನ್ನೇರಿ ಒಂದೈದು ನಿಮಿಷ ನಡೆದು ಬೆಟ್ಟದ ಇನ್ನೊಂದು ತುದಿ ತಲುಪಿದರೆ ಪ್ಯಾರಡೈಸ್ ಕಡಲತೀರದ ಮನಮೋಹಕ ನೋಟ. ಯಾವ ಬೆಟ್ಟ/ಜಲಧಾರೆ ನೋಡಿದರೂ ಯಾವುದೇ ಉದ್ಗಾರ ಹೊರಬರದ ಪುತ್ತುವಿನ ಬಾಯಿಯಿಂದ ಅಂದು ’ವ್ಹಾ...’ ಎಂಬ ಉದ್ಗಾರ ಹೊರಬಂತು. ಆ ದೃಶ್ಯ ನೋಡಿದ ಬಳಿಕ ಕೆಳಗಿಳಿಯುವ ತವಕ. ಬೆಟ್ಟದ ಬದಿಯಲ್ಲೇ ಇರುವ ಕಾಲುದಾರಿಯಲ್ಲಿ ಸರಸರನೆ ನಡೆದು ಕಡಲತೀರ ತಲುಪಿದೆವು. ಅಲ್ಲೇ ’ಓಮ್ ಶಾಂತಿ’ ರೆಸಾರ್ಟ್(!?) ನಡೆಸುವ ಮಹಾದೇವ ನಾಯ್ಕರ ಭೇಟಿಯಾಯಿತು. ಬೀಚನ್ನೆಲ್ಲಾ ಅಡ್ಡಾಡಿ ನಂತರ ಬಂದು ಅವರೊಂದಿಗೆ ಹರಟೆ ಹೊಡೆಯೋಣವೆಂದು ಮುನ್ನಡೆದೆವು. ಕಡಲತೀರದಲ್ಲಿ ಮೂರ್ನಾಲ್ಕು ಹೋಟೇಲುಗಳು ಮತ್ತು ಕುಟೀರಗಳು. ಅಲ್ಲಲ್ಲಿ ಬಂಡೆಗಳು. ಮುಂದಕ್ಕೆ ಹೋದಂತೆ ಮತ್ತೂ ಸುಂದರ ದೃಶ್ಯ. ಬೆಟ್ಟವೊಂದಕ್ಕೆ ಸವರಿಕೊಂಡೇ ಈ ಬೀಚ್ ಇರುವುದರಿಂದ ಅಂದಕ್ಕೆ ಸ್ವಲ್ಪ ಹೆಚ್ಚು ಮಾರ್ಕ್ಸ್.


ಮಹಾದೇವ ನಾಯ್ಕರಲ್ಲಿ ಮರಳಿ ಬಂದೆವು. ನಾಯ್ಕರು ಊಟಕ್ಕೆ ಪರೋಟಾ ಮಾಡುವೆನೆಂದಾಗ ಸಮ್ಮತಿಸಿದೆವು. ಆಗ ಎಲ್ಲಿಂದಲೋ ಸಣ್ಣ ದೋಣಿಯೊಂದು ತೀರಕ್ಕೆ ಬರುತ್ತಿರುವುದು ಕಾಣಿಸಿದಾಗ ನಾವಿಬ್ಬರೂ ತೀರದೆಡೆ ಓಡಿದೆವು. ದೋಣಿಯಲ್ಲಿ ವಿವಿಧ ಜಾತಿಯ ಮೀನುಗಳು. ಪುತ್ತುವಿನ ಬಾಯಲ್ಲಿ ಜೊಲ್ಲುರಸರಾಶಿಭರಿತ ನೊರೆ. ಅಕ್ಕ ಪಕ್ಕದ ಹೋಟೇಲಿನವರೂ ಅಲ್ಲಿ ಕೂಡಿದರು. ಅವರೆಲ್ಲರೂ ಆ ಮೀನುಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದರು. ಕಡಿಮೆ ದರಕ್ಕೆ ಸಿಗುವುದು ಖಾತ್ರಿ ಎಂದಾದಾಗ ಪುತ್ತು ಖರೀದಿ ಮಾಡಿ ಮನೆಗೊಯ್ಯುವ ವಿಚಾರದಲ್ಲಿದ್ದ. ’ಮೀನು ಇರುವ ಚೀಲವಿದ್ದರೆ ಬಸ್ಸಲ್ಲಿ ಹೋಗು, ನನ್ನ ಬೈಕಲ್ಲಿ ನಿನಗೆ ಜಾಗವಿಲ್ಲ....’ ಎಂದು ನಾನು ಹೇಳಿದಾಗ ಆ ವಿಚಾರ ಕೈಬಿಟ್ಟ. ಅದ್ಯಾವುದೋ ಅಪರೂಪದ ಮೀನಂತೆ...ಬಹಳ ದುಬಾರಿಯಂತೆ...ಬಹಳ ರುಚಿಯಂತೆ...ಬಹಳ ವಿರಳವಾಗಿ ಸಿಗುವುದಂತೆ...ಇಲ್ಲಿ ಅತಿ ಕಡಿಮೆ ದರಕ್ಕೆ ಸಿಗುತ್ತಿರುವುದರಿಂದ ಮನೆಗೊಯ್ದರೆ ರಾತ್ರಿ ಒಳ್ಳೆ ಊಟ ಆಗುತ್ತದಂತೆ... ಎಂದು ಪರಿಪರಿಯಾಗಿ ಬೇಡುತ್ತಾ ಇದ್ದ.


ಮಹಾದೇವ ನಾಯ್ಕರ ಕೈ ರುಚಿಗೆ ಜಯವಾಗಲಿ. ಅದ್ಭುತ ರುಚಿಯ ಪಲ್ಯ ಮತ್ತು ತುಪ್ಪ ಸಾರಿದ ಹಲವಾರು ಪರೋಟಾಗಳನ್ನು ಉದರಕ್ಕಿಳಿಸಿದ ಬಳಿಕ ಅಲ್ಲಿಂದ ಸದ್ಯಕ್ಕೆ ಹೊರಡುವ ವಿಚಾರವನ್ನು ನಾವಿಬ್ಬರೂ ಬದಿಗೆ ಸರಿಸಿದೆವು. ದಟ್ಟ ಕಾಡಿನ ನಡುವೆ ಬೆಟ್ಟವೊಂದರ ಮೇಲಿರುವ ’ನಿಶಾನೆ’ ಎಂಬ ಸುಂದರ ಹಳ್ಳಿಯೊಂದಕ್ಕೆ ಭೇಟಿ ನೀಡುವ ಸ್ಕೆಚ್ ಹಾಕಿದ್ದೆವು. ಆದರೆ ಪ್ಯಾರಡೈಸ್ ಕಡಲತೀರದ ಅಂದ ಮತ್ತು ಅಲ್ಲಿನ ವಾತಾವರಣ ನಮ್ಮನ್ನು ಅದ್ಯಾವ ಮಟ್ಟಕ್ಕೆ ಮೋಡಿಗೊಳಪಡಿಸಿತೆಂದರೆ ಅಲ್ಲೇ ಮರಳಿನಲ್ಲಿ ಚಾಪೆ ಹಾಕಿಕೊಂಡು ತೆಂಗಿನಮರಗಳ ನೆರಳಿನಲ್ಲಿ ಗೊರಕೆ ಹೊಡೆಯಲು ಶುರುಮಾಡಿದೆವು. ಪುತ್ತುವಂತೂ ಮಹಾದೇವ ನಾಯ್ಕರು ಎರಡು ತೆಂಗಿನಮರಗಳಿಗೆ ಕಟ್ಟಿ ತೂಗುಹಾಕಿದ್ದ ’ತೂಗುಚಾಪೆ’ಯಲ್ಲಿ ಮಲಗಿ ಗಾಳಿಗೆ ಓಲಾಡುತ್ತಾ ನಿದ್ರಾವಶನಾದ. ಅಂದು ನಿಶಾನೆಗೆ ಹೋಗದೇ ಅಲ್ಲೇ ಮಲಗಿದ್ದು, ಇಂದಿನವರೆಗೂ ನಿಶಾನೆಗೆ ಹೋಗಲಾಗಿಲ್ಲ. ಯಾವಾಗ ಆ ಕಾಲ ಕೂಡಿಬರುತ್ತೋ?


ಕಡಲ ತೀರಗಳನ್ನು ಅಷ್ಟಾಗಿ ಇಷ್ಟಪಡದ ನಾನು ಕಡಲ ತೀರವೊಂದನ್ನು ತುಂಬಾ ’ಎಂಜಾಯ್’ ಮಾಡಿದ್ದು ಪ್ಯಾರಡೈಸ್ ಕಡಲತೀರದಲ್ಲಿ. ಒಂದು ಸಂಪೂರ್ಣ ದಿನ ಅಲ್ಲೇ ಅಡ್ದಾಡುತ್ತಾ, ಮರಳಿನಲ್ಲಿ ಹೊರಳಾಡುತ್ತಾ, ಮಹಾದೇವ ನಾಯ್ಕರೊಂದಿಗೆ ಹರಟೆ ಹೊಡೆಯುತ್ತಾ ಕಳೆದುಬಿಟ್ಟೆವು. ತುಂಬಾ ಮೆಮೋರೇಬಲ್.

ಬುಧವಾರ, ಜೂನ್ 04, 2008

ಹೀಗೊಂದು ಊರು - ೨


ಅಂತೂ ೩ನೇ ಭೇಟಿಯಲ್ಲಿ ಈ ಚಿತ್ರ ತೆಗೆಯಲು ಸಾಧ್ಯವಾಯಿತು. ವಿಶಿಷ್ಟ ಹೆಸರಿನ ಈ ಹಳ್ಳಿ ದಾಂಡೇಲಿ ಸಮೀಪವಿದೆ.

ಭಾನುವಾರ, ಜೂನ್ 01, 2008

ಮೆಟ್ಕಲ್ ಗುಡ್ಡ


ಮೆಟ್ಕಲ್ ಗುಡ್ಡ ಒಂದು ಸಣ್ಣ ಬೆಟ್ಟವಾಗಿದ್ದರಿಂದ ಇದನ್ನು ನಾನು ನಿರ್ಲಕ್ಷಿಸಿದ್ದೆ. ಈ ಬೆಟ್ಟದ ಮೇಲಿಂದ ಕಾಣುವ ದೃಶ್ಯ ಬಹಳ ಚೆನ್ನಾಗಿದೆ ಎಂದು ಅಲ್ಲಿಗೆ ನಾಲ್ಕಾರು ಬಾರಿ ಭೇಟಿ ನೀಡಿದ್ದ ರಾಕೇಶ ಹೊಳ್ಳ ತನ್ನ ಅಭಿಪ್ರಾಯ ತಿಳಿಸಿದಾಗ, ಎಲ್ಲಾದರೂ ತೆರಳಲು ’ಶಾರ್ಟ್ ನೋಟೀಸ್’ನಲ್ಲೇ ತಯಾರಾಗುವ ಮಾಧವರಿಗೆ ಫೋನಾಯಿಸಿ, ಅವರೊಂದಿಗೆ ಯಮಾಹವನ್ನು ಮೆಟ್ಕಲ್ ಗುಡ್ಡದೆಡೆ ದೌಡಾಯಿಸಿದೆ.


ಬೆಟ್ಟವನ್ನೇರಲು ಮೆಟ್ಟಿಲುಗಳಿವೆ, ರಸ್ತೆಯೂ ಇದೆ. ಮೆಟ್ಟಿಲುಗಳಿರುವ ದಾರಿ ನಮಗೆ ಸಿಗಲಿಲ್ಲವಾದ್ದರಿಂದ ರಸ್ತೆಯ ದಾರಿಯಲ್ಲೇ ತೆರಳಿದೆವು. ಮಣ್ಣಿನ ರಸ್ತೆಯ ಈ ದಾರಿಯಲ್ಲಿ ಒಂದು ಕಿ.ಮಿ. ದೂರದವರೆಗೆ ಬೈಕನ್ನು ಚಲಾಯಿಸಿ ನಂತರ ನಡೆಯಲು ಆರಂಭಿಸಿದೆವು. ಮೆಟ್ಕಲ್ ಗುಡ್ಡದ ತುದಿವೆರೆಗೂ ಜೀಪ್ ರಸ್ತೆಯಿದ್ದರೂ ಕೆಲವೊಂದೆಡೆ ರಸ್ತೆ ಬಹಳ ಕಡಿದಾಗಿದೆ. ಆದ್ದರಿಂದ ನಾನು ಮತ್ತು ಮಾಧವ ನಡೆಯುವುದೇ ಸೂಕ್ತ ಎಂದು ನಿರ್ಧರಿಸಿದೆವು.


ಬೆಟ್ಟದ ತುದಿಯವರೆಗೂ ಚೆನ್ನಾದ ಕಾಡಿದೆ. ಒಂದೆರಡು ’ಯು’ ತಿರುವುಗಳು. ರಸ್ತೆಯ ಏರು ನೋಡಿದಾಗ, ಬೈಕನ್ನು ಹಿಂದೆಯೇ ನಿಲ್ಲಿಸಿದ್ದು ಒಳ್ಳೆಯ ನಿರ್ಧಾರವೆಂದೆನಿಸತೊಡಗಿತು. ಬೇಗನೇ ಸುಸ್ತಾಗುತ್ತಿದ್ದ ನಾನು ಅಲ್ಲಲ್ಲಿ ಕಿತ್ತಳೆ ಹಣ್ಣುಗಳನ್ನು ಕಬಳಿಸುತ್ತಾ ೫೦ ನಿಮಿಷದಲ್ಲಿ ತುದಿ ತಲುಪಿದೆವು. ಮೆಟ್ಕಲ್ ಗುಡ್ಡದ ತುದಿಗಿಂತ ಸುಮಾರು ೩೦೦ ಮೀಟರ್ ಮೊದಲು ಕಾಲುದಾರಿಯೊಂದು ಕೆಳಗೆ ಕವಲೊಡೆಯುತ್ತದೆ. ಅದೇ ಮೆಟ್ಟಿಲುಗಳ ದಾರಿ. ಆ ದಾರಿಯಾಗಿ ಕೆಲವು ಹುಡುಗರು ಬರುತ್ತಾ ಇದ್ದರು.


ಮೆಟ್ಕಲ್ ಗುಡ್ಡದ ತುದಿಯಲ್ಲಿ ಗಣಪತಿ ದೇವಾಲಯವಿದೆ. ೩ ದಿಕ್ಕುಗಳಲ್ಲಿ ಕಡಿದಾದ ಪ್ರಪಾತ ಹೊಂದಿರುವ ಈ ಬೆಟ್ಟದ ಮೇಲೂ ಶಿವಪ್ಪ ನಾಯಕ ಸಣ್ಣ ಕೋಟೆಯೊಂದನ್ನು ನಿರ್ಮಿಸಿದ ಕುರುಹುಗಳಿವೆ.


ಭಾರತದಲ್ಲೇ ಎತ್ತರದ ಜಲಧಾರೆ ಎಂದು ಹವಾ ಮಾಡಿರುವ ಕುಂಚಿಕಲ್ ಜಲಧಾರೆಯ ೩ನೇ ಹಂತ ದೂರದಲ್ಲಿ ಕಾಣುತ್ತಿತ್ತು. ಮಳೆಗಾಲದಲ್ಲಿ ಬಂದರೆ ಈ ಜಲಧಾರೆಯ ಅಕ್ಕ ಪಕ್ಕಗಳಲ್ಲಿ ಇನ್ನೆರಡು ಜಲಧಾರೆಗಳು! ಸುಗ್ಗಿ!! ಆ ಅದ್ಭುತ ದೃಶ್ಯಾವಳಿಯನ್ನು ಕಾಣಲು ಮಳೆಗಾಲದಲ್ಲಿ ಇಲ್ಲಿಗೆ ಇನ್ನೊಂದು ಭೇಟಿ ನಿಶ್ಚಿತ. ಆಗ ಮೆಟ್ಟಿಲುಗಳ ದಾರಿಯಲ್ಲಿ ಬರಬೇಕು.


ಇನ್ನೊಂದೆಡೆ ವಾರಾಹಿ ನದಿ ಹರಿಯುವ ದೃಶ್ಯ ಮತ್ತು ಅಗಾಧ ಗಾತ್ರದ ಬೆಟ್ಟಗಳು ಗೋಡೆಯಂತೆ ನಿಂತಿರುವ, ಎಷ್ಟು ನೋಡಿದರೂ ಸಾಲದೆನಿಸುವ ಇನ್ನೂ ಸುಂದರ ದೃಶ್ಯ. ದೇವಸ್ಥಾನದ ಬದಿಯಲ್ಲಿ ಎಚ್ಚರದಿಂದ ಸ್ವಲ್ಪ ಕೆಳಗಿಳಿದರೆ ವಿಶಾಲ ಸ್ಥಳ. ಇಲ್ಲಿ ವಿಶ್ರಮಿಸುತ್ತಾ ಕಣ್ಣುಗಳಿಗೆ ಲಭ್ಯವಿದ್ದ ಪ್ರಕೃತಿಯ ರಸದೌತಣವನ್ನು ಸವಿಯುತ್ತಾ ಉಳಿದ ಕಿತ್ತಳೆಗಳನ್ನು ಮುಗಿಸಿದೆವು.

ಮಾಹಿತಿ: ರಘುನಂದನ ಭಟ್ಟ ಹಾಗೂ ರಾಕೇಶ್ ಹೊಳ್ಳ