ಮಂಗಳವಾರ, ಆಗಸ್ಟ್ 12, 2008

ಇಂಥವರೂ ಇರ್ತಾರೆ...!


ಇವರು ರಮೇಶ್ ಕಾಮತ್. ವಯಸ್ಸು ೫೨. ಸದಾ ನುಗುಮೊಗದ ಧರ್ಮಪತ್ನಿ ಮತ್ತು ಅವಳಿ ಹೆಣ್ಣು ಮಕ್ಕಳ ಸಂಸಾರ. ಮಂಗಳೂರಿನಲ್ಲಿ ಸಣ್ಣ ಚೊಕ್ಕ ಸ್ವಂತ ಉದ್ಯಮ ನಡೆಸುತ್ತಾರೆ. ಭರ್ಜರಿ ಹಾಸ್ಯ ಮನೋಭಾವವುಳ್ಳ ವ್ಯಕ್ತಿ. ಪ್ರಕೃತಿಯನ್ನು ತುಂಬಾ ಪ್ರೀತಿಸುವ, ಆರಾಧಿಸುವ ಸಜ್ಜನ. ಮಂಗಳೂರು ಯೂತ್ ಹಾಸ್ಟೆಲಿನ ಬಹಳ ಮುಖ್ಯ ಕೊಂಡಿ.

ಬಹಳ ಹಾಸ್ಯ ಪ್ರವೃತ್ತಿಯ ವ್ಯಕ್ತಿಯಾಗಿರುವ ರಮೇಶ್, ಮಾತನಾಡಲು ಆರಂಭಿಸಿದರೆ ನಮ್ಮ ಚಾರಣ ವಾಹನ ’ಶಕ್ತಿ’ಯಲ್ಲಿ ನಗುವಿನ ಅಲೆ ಪ್ರತಿಧ್ವನಿಸುತ್ತಿರುತ್ತದೆ. ಪ್ರತಿ ವಿಷಯದಲ್ಲೂ ಏನಾದರೊಂದು ಹಾಸ್ಯದ ತುಣುಕನ್ನು ಕಂಡು ಅದನ್ನು ಹೇಳಿ ಎಲ್ಲರನ್ನೂ ನಗಿಸುವ ಕಲೆ ಇವರಿಗೆ ಕರಗತ. ಸನ್ನಿವೇಶಕ್ಕೆ ತಕ್ಕಂತೆ ಇವರಿಂದ ಜೋಕೊಂದು ಹೊರಬಂದಾಯಿತು. ಕೆಲವೊಮ್ಮೆ ಜೋಕುಗಳು ರಿಪೀಟ್ ಆದರೂ ಅವರು ಅದನ್ನು ಹೇಳುವ ರೀತಿ, ಮತ್ತೆ ಮತ್ತೆ ಕೇಳಿದರೂ ನಮ್ಮಂತಹ ಕೇಳುಗರಿಗೆ ನಗುವನ್ನು ತಂದೇ ತರಿಸುತ್ತದೆ.

ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಕಾರ್ಯಕ್ರಮಗಳು ಚಾರಣವೂ ಹೌದು ಮತ್ತು ಕಾಮತರ ಕೃಪೆಯಿಂದ ಹಾಸ್ಯಗೋಷ್ಠಿಯೂ ಹೌದು. ಮೊದಲ ಸಲ ಕಾಮತರೊಂದಿಗೆ ಚಾರಣಕ್ಕೆ ಬಂದವರಿಗೆ ಚಾರಣಕ್ಕೆ ಎಲ್ಲಿಗೆ ತೆರಳಿದೆವು ಎನ್ನುವುದಕ್ಕಿಂತ ಕಾಮತರ ಹಾಸ್ಯ ಚಟಾಕಿಗಳೇ ನೆನಪಿನಲ್ಲಿರುತ್ತವೆಯೆಂದರೆ ’ಕಾಮತ್ ಕಮಾಲ್’ ಯಾವ ಮಟ್ಟದ್ದಿರಬಹುದೆಂದು ಊಹಿಸಬಹುದು. ಇವರು ಜೋಕು ಹೇಳಲು ಆರಂಭಿಸಿದ ಕೂಡಲೇ ಮುಂದೆ ಬರಬಹುದಾದ ಹಾಸ್ಯ ಸನ್ನಿವೇಶವನ್ನು ಕಲ್ಪಿಸಿಯೇ ನಗುವವರಿದ್ದಾರೆ! ಈ ’ಕಾಮತ್ ಇಫೆಕ್ಟ್’ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಚಾರಣಕ್ಕೆ ಬರುವ ಕೆಲವರು, ’ನೀವು ಎಲ್ಲಿಗೆ ಬೇಕಾದರೂ ಹೋಗಿ, ನನಗದು ಮುಖ್ಯವೇ ಅಲ್ಲ. ರಮೇಶ್ ಕಾಮತ್ ಬರ್ತಿದ್ದಾರೋ ... ಅದು ಮುಖ್ಯ’ ಎಂದು ಕಾಮತ್ ಬಂದರೆ ಮಾತ್ರ ಚಾರಣಕ್ಕೊಂದು ರಂಗು ಇಲ್ಲಾದ್ರೆ ನೀರಸ ಎಂಬಂತೆ ಮಾತನಾಡುತ್ತಾರೆ. ಈ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ಪ್ರಯಾಣ ಮಾಡುವಾಗ ಸಮಯ ಕಳೆದದ್ದು ಕಾಮತರ ಮಾತಿನಲ್ಲಿ ತಿಳಿಯುವುದೇ ಇಲ್ಲ.


ಇವರಿಗೆ ಕಷ್ಟಗಳು ಬಹಳಷ್ಟು ಇವೆ. ಆದರೆ ಅದನ್ನೆಲ್ಲಾ ಮೀರಿಸುವ ಮಾನಸಿಕ ಧೈರ್ಯ ಮತ್ತು ಸ್ಥೈರ್ಯ ಇವರಲ್ಲಿದೆ. ಕಷ್ಟಗಳಿದ್ದರೂ ನಗುನಗುತ್ತಾ, ಎಲ್ಲರನ್ನೂ ನಗಿಸುತ್ತಾ ಚಾರಣವನ್ನು ಆನಂದಿಸುವ ಇವರ ಉನ್ನತ ಮನೋಭಾವನೆಯನ್ನು ಮೆಚ್ಚಲೇಬೇಕು. ಎಲ್ಲಾದರೂ ಆ ತಿಂಗಳ ಕಾರ್ಯಕ್ರಮ ಚಾರಣರಹಿತವಾಗಿದ್ದರೆ ತಮ್ಮ ಧರ್ಮಪತ್ನಿ ಮತ್ತು ಮಕ್ಕಳನ್ನೂ ಕರೆದುಕೊಂಡು ಬರುತ್ತಾರೆ. ಆಗ ನೋಡಬೇಕು ಗಂಡ-ಹೆಂಡತಿ ಒಬ್ಬರೊಬ್ಬರ ಕಾಲೆಳೆಯುವುದನ್ನು. ಪ್ರತಿ ಚಾರಣಕ್ಕೂ ಬಿಳಿ ಅಂಗಿ ಮತ್ತು ಕಪ್ಪು ಶಾರ್ಟ್ಸ್ ಧರಿಸಿ ಬರುವ ಕಾಮತರಿಗೆ ಈ ೨ ಬಣ್ಣಗಳೆಂದರೆ ಬಲೂ ಇಷ್ಟ. ಜೀವನವನ್ನೂ ಅವರು ಈ ೨ ಬಣ್ಣಗಳಂತೆ ಸರಳವಾಗಿ, ನೇರವಾಗಿ ಜೀವಿಸುತ್ತಾರೆ ಮತ್ತು ಕಾಣುತ್ತಾರೆ. ಇವರ ದ್ವಿಚಕ್ರ ವಾಹನಗಳ ಬಣ್ಣ ಕಪ್ಪು ಮತ್ತು ಚತುಷ್ಚಕ್ರ ವಾಹನಗಳ ಬಣ್ಣ ಬಿಳಿ.

ಎಲ್ಲರಲ್ಲೂ ಈ ’ನಗಿಸುವ’ ಕಲೆ ಇರುವುದಿಲ್ಲ. ತಮ್ಮ ಕಷ್ಟಗಳನ್ನು ಹೇಳಿಕೊಳ್ಳದೆ, ಅವುಗಳನ್ನೆಲ್ಲಾ ಸ್ವಲ್ಪ ಸಮಯಕ್ಕಾದರೂ ಬದಿಗಿಟ್ಟು, ಬೇರೆಯವರನ್ನು ಹಾಸ್ಯ ಸಾಗರದಲ್ಲಿ ಮುಳುಗಿಸುವುದನ್ನು ರಮೇಶ್ ಕಾಮತ್ ನಮ್ಮ ಚಾರಣ ಕಾರ್ಯಕ್ರಮಗಳಲ್ಲಿ ಮಾಡುತ್ತಲೇ ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಮಂಗಳೂರಿನ ಹೊರವಲಯದಲ್ಲೆಲ್ಲಾದರೂ ತೆರಳಿ ನೇತ್ರಾವತಿಯ ತಟದಲ್ಲೋ ಅಥವಾ ಫಲ್ಗುಣಿಯ ತಟದಲ್ಲೋ ಸಮಯ ಕಳೆಯುತ್ತಾ, ಅಲ್ಲಿರುವ ಸಣ್ಣ ಬೆಟ್ಟಗಳನ್ನೆಲ್ಲಾ ಏರುತ್ತಾ, ರೈಲುಹಳಿಯ ಮೇಲೆ ನಡೆಯುತ್ತಾ ಪ್ರಕೃತಿಯ ನಡುವೆ ಒಂಟಿಯಾಗಿ ಸಮಯ ಕಳೆಯುತ್ತಾರೆ. ಮಂಗಳೂರಿನ ಆಸುಪಾಸಿನಲ್ಲಿ ಸುಂದರ ದೃಶ್ಯಾವಳಿ ಲಭ್ಯವಿರುವ ಸ್ಥಳಗಳ ಸಂಪೂರ್ಣ ಮಾಹಿತಿ ರಮೇಶ್ ಕಾಮತರಲ್ಲಿದೆ.


೨೦೦೩ ಅಗೋಸ್ಟ್ ತಿಂಗಳಿಂದ ಆರಂಭಿಸಿ ಮಂಗಳೂರು ಯೂತ್ ಹಾಸ್ಟೆಲಿನ ಯಾವುದೇ ಚಾರಣ ಕಾರ್ಯಕ್ರಮವನ್ನು ರಮೇಶ್ ಕಾಮತ್ ತಪ್ಪಿಸಿಕೊಂಡಿರಲಿಲ್ಲ. ಉಳಿದವರೆಲ್ಲರೂ ಏನಾದರೊಂದು ಕಾರಣದಿಂದ ಒಂದಾದರೂ ಚಾರಣಕ್ಕೆ ಗೈರುಹಾಜರಾಗಿದ್ದಿದ್ದರೆ, ಕಾಮತರು ಯಾವುದೇ ಚಾರಣವನ್ನು ತಪ್ಪಿಸಿರಲಿಲ್ಲ. ಅವರ ಈ ಸಾಧನೆಯನ್ನು ನಾನೇ ಮೊದಲು ಗಮನಿಸಿದ್ದು ಎಂದು ಹೇಳಲು ನನಗೆ ಬಹಳ ಹೆಮ್ಮೆ. ಈ ಸಾಧನೆಗಾಗಿ ಮುಂದಿನ ಚಾರಣ ಕಾರ್ಯಕ್ರಮವೊಂದರಲ್ಲಿ ಕಾಮತರಿಗೆ ನಮ್ಮಿಂದಲೇ ಸಣ್ಣ ಸನ್ಮಾನ ಮಾಡಬೇಕೆಂಬ ವಿಚಾರವನ್ನು ಮಂಗಳೂರು ಯೂತ್ ಹಾಸ್ಟೆಲಿನ ಆರ್ಗನೈಸಿಂಗ್ ಸೆಕ್ರೆಟರಿಯಾಗಿರುವ ಗೆಳೆಯ ದಿನೇಶ್ ಹೊಳ್ಳರಲ್ಲಿ ನಾನು ಪ್ರಸ್ತಾವಿಸಿದಾಗ ಅವರು, ’ಕಾಮತರು ಇದಕ್ಕೆಲ್ಲಾ ಒಪ್ಪಲಾರರು’ ಎಂದರು. ಆದ್ದರಿಂದ ಈ ವಿಷಯವನ್ನು ಕಾಮತರಿಗೆ ತಿಳಿಯದಂತೆ ಗೌಪ್ಯವಾಗಿಟ್ಟು ೨೦೦೭ ಮೇ ತಿಂಗಳ ಶಿಂಗಾಣಿಬೆಟ್ಟ ಚಾರಣದ ಮುನ್ನಾ ದಿನ ಶಿಶಿಲದಲ್ಲಿ ಶ್ರೀ ಗೋಪು ಗೋಖಲೆಯವರಿಂದ ಸನ್ಮಾನಿಸಲಾಯಿತು.

ಸತತ ೫೨ ತಿಂಗಳುಗಳ ಬಳಿಕ ಅಂತೂ ಕೊನೆಗೆ ೨೦೦೭ ಡಿಸೆಂಬರ್ ತಿಂಗಳ ಗಂಗಡಿಕಲ್ಲು ಚಾರಣಕ್ಕೆ ಕಾಮತ್ ಗೈರುಹಾಜರಾದರು. ಅಂದು ಅವರಿಗೆ ಚಾರಣ ತಪ್ಪಿಸದೇ ಬೇರೆ ವಿಧಿಯಿರಲಿಲ್ಲ. ಅಂದು ನಮ್ಮನ್ನು ಬೀಳ್ಕೊಡಲು ಬಂದಿದ್ದ ಕಾಮತರ ಮುಖ ಸಣ್ಣ ಮಗುವನ್ನು ಎಲ್ಲಾದರೂ ಬಿಟ್ಟುಹೋದರೆ ಆಗುವಂತೆ ಅಳುಮುಖವಾಗಿತ್ತು. ಅಷ್ಟು ಪ್ರೀತಿ ಈ ಹಿರಿಯರಿಗೆ ಚಾರಣ ಮತ್ತು ಪ್ರಕೃತಿಯೆಂದರೆ. ಆ ನಂತರ ಅವರ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ ಮತ್ತು ಇದು ಮೊದಲ ಇನ್ನಿಂಗ್ಸ್-ಗಿಂತಲೂ ಹೆಚ್ಚು ಕಾಲ ಮುಂದುವರಿಯಲಿ ಎಂಬುವುದು ನಮ್ಮೆಲ್ಲರ ಆಶಯ.

(ಎರಡನೇ ಚಿತ್ರ ಕೃಪೆ - ರಾಕೇಶ್ ಹೊಳ್ಳ ; ಮೂರನೇ ಚಿತ್ರ ಕೃಪೆ - ಸುಧೀರ್ ಕುಮಾರ್)

16 ಕಾಮೆಂಟ್‌ಗಳು:

Rakesh Holla ಹೇಳಿದರು...

Tumba chennagide total nimma barahada style & especially this article antu sakhat agide....

ಮಿಥುನ ಕೊಡೆತ್ತೂರು ಹೇಳಿದರು...

ರಮೇಶ ಕಾಮತರ ನಗೆ ಚಟಾಕಿಗಳನ್ನೂ ಒಂದಿಷ್ಟು ಹಾಕಿ.ಎಲ್ಲರೂ ನಗಲಿ.

VENU VINOD ಹೇಳಿದರು...

ಕಾಮತರ ಕುರಿತು ನಾನೂ ಬರೆಯೋಣ ಅಂತಿದ್ದೆ, ನನ್ನ ಕೆಲಸ ನೀವೇ ಮಾಡಿದ್ರಿ ಬಿಡಿ. ಕಾಮತರು ಈಗ ಮಂಗಳೂರು ಯೂತ್ ಹಾಸ್ಟೆಲ್‌ನ ಕುಸಲ್ದರಸೆ :)

ಹರೀಶ್ ಕೇರ ಹೇಳಿದರು...

ನಾವು ಜತೆಯಾಗಿ ಹೋದ ಚಾರಣಗಳು, ಅಲ್ಲಿ ಕೇಳಿಸಿಕೊಂಡ ಕಾಮತರ ಜೋಕುಗಳು ನಿಮ್ಮೀ ಬರಹದಿಂದ ನೆನಪಾಗಿ ನಗು ತಡೆಯುವುದೇ ಕಷ್ಟವಾಯಿತು. ನಮ್ಮ ಚಾರಣದಲ್ಲಿ ಯಾರೂ ಬಳಲದೇ ಇರುವುದಕ್ಕೆ ಮುಖ್ಯ ಕಾರಣ ಈ ಕಾಮತರೇ ಎಂದರೆ ಉತ್ಪ್ರೇಕ್ಷೆ ಆಗಲಾರದು.
ಈ ಬೆಂಗಳೂರು ತೊರೆದು, ಮತ್ತೆ ನಮ್ಮ ಗುಂಪಿನಲ್ಲಿ ಚಾರಣ ಹೋಗಬೇಕೆನಿಸಿದೆ. ಹ್ಹಾಂ, ಕಾಮತರು ಇರಬೇಕು ಮತ್ತೆ !
-ಹರೀಶ್ ಕೇರ

Annapoorna Daithota ಹೇಳಿದರು...

Rajesh,

Nimma jothe charana maadabeku ennuva aase jothe eega innondu aase serithu :)

ಶರಶ್ಚಂದ್ರ ಕಲ್ಮನೆ ಹೇಳಿದರು...

ಕಾಮತರ ಹಾಸ್ಯ ಚಟಾಕಿ ನಮಗೂ ದೊರೆಯುವಂತಾಗಲಿ. ಅವರು ಇನ್ನಷ್ಟು ಚಾರಣಗಳಲ್ಲಿ ಪಾಲ್ಗೊಂಡು ಎಲ್ಲರನ್ನೂ ಹಾಸ್ಯಗಡಲಲ್ಲಿ ತೇಲಿಸಲಿ.

sudheer kumar ಹೇಳಿದರು...

ಇಬ್ಬರು ದಡೂತಿ ವ್ಯಕ್ತಿಗಳ ಸಂಭಾಷಣೆ.ಒಬ್ಬಾತ ನನ್ನದು ದೊಡ್ಡ ಸಮಸ್ಯೆ ಮಾರಾಯ,ಎನೊಂದ್ರೆ ನನ್ನ ಹೆಂಡ್ತಿ ತುಂಬಾ ದಪ್ಪಗಾಗಿದು ಆಕೆಯನ್ನು ಸಿನಿಮಾಕ್ಕೆ ಕರೆದುಕೊಂಡು ಹೋದರೆ ಅಥವಾ ಬಸ್ಸಲ್ಲಿ ಕರೆದುಕೊಂಡು ಹೋಗುವಾಗ ಡಬ್ಬಲ್ ಟಿಕೆಟ್ ಕೇಳ್ತಾರೆ,ಬೇಸರಾಗ್ತೀದೆ.ಆಗ ಇನ್ನೊಬ್ಬ ಏ ಸುಮ್ನಿರೋ ಅದೇನು ದೊಡ್ಡ ಸಮಸ್ಯೆ? ನನ್ನ ಹೆಂಡ್ತಿಯ ಚೂಡೀದಾರ್ ,ನೈಟಿಯನ್ನು ಡ್ರೈವಾಶ್ ಗೆ ಕೊಟ್ಟಾಗ ’ಕ್ಷಮಿಸಿ, ನಾವು ಶಾಮಿಯಾನವನ್ನು ಒಗೆದು ಕೊಡುವುದಿಲ್ಲ’ ಅಂತಾರೆ.
೩ ವರುಷದ ಹಿಂದೆ ದಿನೇಶ್ ಹೊಳ್ಳರು ರಮೇಶ್ ಕಾಮತರ ಬಗೆ ೧೫-೦೭-೨೦೦೫ರ "ವಿಜಯ ಕರ್ನಾಟಕ"ದಲ್ಲಿ ಬರೆಯುತ್ತ ಅವರ ನಗೆಹನಿಯನ್ನು ನೆನಪಿಸಿದು ಹೀಗೆ.

ಹೌದು, ಕಾಮತ್ ನಮ್ಮ ತಂಡದ "ಹಾಸ್ಯಾ ಭಂಡಾರ" ಅನ್ನುವುದರಲ್ಲಿ ತಪ್ಪಿಲ್ಲ.
ಕಾಮತ್ ಬಗೆ ನನ್ನ ಎರಡು ಮಾತು:
ಬೆಳಗೆ ತಮ್ಮ ಪ್ರೀತಿಯ ಸೈಕಲಲ್ಲಿ ಸೈಕ್ಲಿಂಗ್ ಮಾಡುವುದು, ಮಂಗಳೂರಿನ ಮೋತಿಮಹಲ್ ಹೋಟೆಲಿನ್ ಈಜುಕೋಳದಲ್ಲಿ ಈಜುವುದು ಅವರ ಹವ್ಯಾಸವು ಹೌದು.
ನೀವು ಹೇಳಿದ ಹಾಗೆ ಕಷ್ಟಗಳಿದ್ದರೂ ಅದನ್ನು ತೋರಿಸದೆ ಸದಾ ನಗುವಿನ ಅಲೆಯನ್ನು ತೇಲಿಸುವ ಇವರು ಅನಂದ ಪಡುವ ಕೆಲವು ಜಾಗಗಳನ್ನು ಅರ್ದ ದಿನದ ಚಾರಣದಲ್ಲಿ ೩ ಸಲ ನೋಡುವ ಭಾಗ್ಯ ನಮ್ಮದಾಗಿತು.ಇನ್ನೂ ಕೆಲವು ಜಾಗಗಳುಂಟು ಹೋಗುವ ಅಂದಿದಾರೆ. ಒಮ್ಮೆ ತಿಂಗಳ ಚಾರಣಕ್ಕೆ ಜನ ಕಡಿಮೆ ಅದಾಗ ಅವರ ಆಗಿನ ವಾಹನ ಒಮ್ನಿಯಲ್ಲಿ ೮ ಜನರನ್ನು ಕೂರಿಸಿ ಈಡೀ ದಿನ ಮಂಗಳೂರಿನ ಹೊರವಲಯದ ದರ್ಶನ ಮಾಡಿಸಿದ್ದರು, ಮಂಗಳೂರಿನಲ್ಲಿ ಇಷ್ಟೂ ಒಳ್ಳೆ ಜಾಗಗಳೂ ಉಂಟೆ ಎಂದೂ ನಮಗನಿಸಿತು.

ಚಾರಣದಿಂದ ಪರಿಚಯ ವಾದ ಕಾಮತ್ ಫ್ಯಾಮಿಲಿಯೊಟ್ಟಿಗೆ ನಾವು ಹೋದ ಹೊರ್ನಾಡು/ಕುದುರೆಮುಖ, ಚಿತ್ರದುರ್ಗ ಹಾಗು ಇತರ ಜಾಗಗಳು, ಮೆಲುಕೋಟೆ,ತಲಕಾಡು ,ಗಗನ/ಭರ ಚುಕ್ಕಿ ಜಲಪಾತ ,ಹಿಮದ್ ಗೋಪಲಸ್ವಾಮಿ ಬೆಟ್ಟ ,ಬಂಡಿಪುರ ,ಕೆಮ್ಮಣ್ಣುಗುಂಡಿ,ಮುಳ್ಳಯ್ಯನಗಿರಿಬೆಟ್ಟ,ಬೇಲೂರು/ಹಳೆಬೀಡು ಪ್ರವಾಸಗಳಂತೂ ಸುಫರ್.

ನಮ್ಮೋಟ್ಟಿಗೆ ಚಾರಣಕ್ಕೆ ಹೊಸಬರು ಬಂದರೆ ಅವರು ಕಾಮತ್ ಫ್ಯಾನ್ ಆಗಿಯೆ ಬಿಡುತ್ತಾರೆ ಅನ್ನುವುದರಲ್ಲಿ ತಪ್ಪಿಲ್ಲ .ಕಳೆದ ತಿಂಗಳ ಬೊಳ್ಳೆ ಜಲಪಾತ ಚಾರಣಕ್ಕೆ ನನ್ನ ಮಿತ್ರ ಹೊಸದಾಗಿ ಬಂದಿದು,ಮರುದಿನ ಚಾರಣದ ಬಗೆ ಕೇಳುವಾಗ ಬೊಳ್ಳೆ ಜಲಪಾತ ಚಾರಣ ಬಿಟ್ಟು , ಕಾಮತ್ ಬಗೆ ಮಾತನಾಡುತ್ತಾನೆ ಅಂದರೆ ನೋಡಿ ’ಕಾಮತ್ ಕಮಾಲ್’ ’ಕಾಮತ್ ಇಫೆಕ್ಟ್’

ಕಾಮತ್ ಬಗೆ ನಿಮ್ಮ ಬರಹ ದಿ ಬೆಸ್ಟ್. ರಾಜೇಶ್.

sunaath ಹೇಳಿದರು...

ದಯವಿಟ್ಟು ಕಾಮತರ ಹಾಸ್ಯಚಟಾಕಿಗಳನ್ನಷ್ಟು ಬರೆಯಿರಿ,plz.

ಅನಾಮಧೇಯ ಹೇಳಿದರು...

ಮದುವೆಯ ಮೊದಲು ಚಾರಣದ ಬಗ್ಗೆ ನನ್ನಲ್ಲಿ ಮಾತನಾಡುತ್ತಾ ರಾಜೇಶ್ ಕಾಮತರ ಬಗ್ಗೆಯೂ ಹೇಳುತ್ತಿದ್ದರು. ಆಗಿಂದಲೇ ಈ ಕಾಮತರನ್ನು ಭೇಟಿಯಾಗಬೇಕೆಂಬ ಕುತೂಹಲ ನನಗಿತ್ತು. ನನ್ನ ಮೊದಲ ಚಾರಣದಲ್ಲಿ ಸ್ವತ: ಕಾಮತರೇ ಅಲ್ಲೇ ಒಂದು ಹಾಸ್ಯ ಚಟಾಕಿಯನ್ನು ಹಾರಿಸಿ ತನ್ನ ನಗುಭರಿತ ಪರಿಚಯ ಮಾಡಿಸಿಕೊಂಡರು. ನನ್ನ ಜೀವನದ ಮೊದಲ ಚಾರಣವನ್ನು ನಾನು ಬಹಳ ಎಂಜಾಯ್ ಮಾಡಿದುದರಲ್ಲಿ ರಮೇಶ್ ಕಾಮತರ ಹಾಸ್ಯಭರಿತ ಮಾತುಗಳು ಪ್ರಮುಖ ಕಾರಣ. ಜೀವಮಾನದಲ್ಲಿ ಯಾವುದೇ ಪ್ರಯಾಣದಲ್ಲಿ ಆ ಪರಿ ಬಿದ್ದು ಬಿದ್ದು ನಕ್ಕಿದ್ದು ಇಲ್ಲ. ನನ್ನ ೨ನೇ ಚಾರಣಕ್ಕೆ ಕಾಮತರು ಗೈರುಹಾಜರಾಗಿದ್ದು, ಪ್ರಯಾಣ ಬಹಳ ಬೋರ್ ಎಂದೆನಿಸತೊಡಗಿತ್ತು. ನಾನು ತೆರಳಿದ್ದೇ ೨ ಚಾರಣಗಳಿಗೆ. ಮೊದಲ ಬಾರಿ ಕಾಮತ್ ಇದ್ದಾಗ ಆ ಚಾರಣಕ್ಕಿದ್ದ ಹಾಸ್ಯ ಲೇಪನವನ್ನು, ೨ನೇ ಬಾರಿ ಅವರು ಇರದಿದ್ದಾಗ ಬಹಳ ಮಿಸ್ ಮಾಡಿಕೊಂಡೆ.

ಲೀನಾ

ಅನಾಮಧೇಯ ಹೇಳಿದರು...

hello Rajesh kamtha, nimma "namma kamath bagge baredha article thumba chennagidhe.Jothegistu "kamath Jokes" galannu serisidre Ennu Chenngiruthithu.
Kamatharu nijavaglu namma Charana thandada " HASYA RATNA".Thamma novannu thamma manadolagittu ennobbarige avaranovannu maresi avaralli nagu tharisuvantha Dodda Manushya" Hats up to Kamath".
*Hey harish Khera ravare...Yavaga baruthire namma jothe....banni..banni mundhina thingalu.Kamathranthu Khanditha Eruthare Nimmannu Edhurugollalu !!!!...ha...haa...haaa....!!!!!!

Damodar kadri

ಅನಾಮಧೇಯ ಹೇಳಿದರು...

ಯಾವುದೆ ಗಂಡಸ್ಸಿನ ಯಶಸ್ಸಿನ ಹಿಂದೆ ಸ್ತ್ರೀಯ ಕೈ ಇರುತ್ತದೆ ಎನ್ನುವಂತೆ ಕಾಮತರ ವಿಷಯದಲ್ಲಿ ಸಹ ಇದೂ ಅರ್ಥಪೂರ್ಣವಾದುದು.ಕಾಮತರ ಚಾರಣ ಅಬಿಯಾನಕ್ಕೆ ಹಾಗೂ ಅವರ ಸ್ವಂತ ಉದ್ಯಮದ ವಿಷಯದಲ್ಲಿ ಸದಾ ನುಗುಮೊಗದ ಧರ್ಮಪತ್ನಿ ಯ ಸಹಕಾರ ಮರೆಯಲಾರದು.ತಿಂಗಳ ಚಾರಣದ ಊಟಕ್ಕೆ ತರುವ ಮುಡೆ ,ಫುಲವು, ಅಕ್ಕಿಶಾವಿಗೆಯ ವ್ಯವಸ್ತೆ ಮಾಡುವುದರಲ್ಲಿ ಕಾಮತರ ಧರ್ಮಪತ್ನಿ ಯು ಒಬ್ಬರು.
ನಿಮ್ಮ ಬರಹದಲ್ಲಿ ಕಾಮತರ ಫಾಮಿಲಿಯ ಫೋಟೊವನ್ನು ಹಾಕಿದ್ದರೆ ಇನ್ನು ಓಳ್ಳೆಯದಾಗುತಿತ್ತು.ತನ್ನ ಬಗೆಯೆ ಹಾಸ್ಯಚಟಾಕಿಯನ್ನು ಹೇಳುವವರು ಕಡಿಮೆ.ಅದರೆ ಕಾಮತ ರು ಡಿಪ್ ರೆಂಟ್ . ತನ್ನ ಹಾಗೂ ಫಾಮಿಲಿಯ ಘಟನೆಗಳನ್ನು ಹಾಸ್ಯಕ್ಕೆ ಉಪಯೊಗಿಸಿ ನಮ್ಮನ್ನು ನಗಿಸುತ್ತಾರೆ.
ಕಾಮತರ ಹಾಸ್ಯಚಟಾಕಿಗಳ ಬಗೆ ಎರಡು ಮಾತಿಲ್ಲ.
ಲೇಖನ ತುಂಬಾ ಚೆನ್ನಾಗಿದೆ .

ರಾಜೇಶ್ ನಾಯ್ಕ ಹೇಳಿದರು...

ರಾಕೇಶ್,
ಥ್ಯಾಂಕ್ಸ್. ನಿಮ್ಮಿಂದ ಇನ್ನೂ ಉದ್ದದ ಕಮೆಂಟ್ ನಿರೀಕ್ಷಿಸಿದ್ದೆ. ಕಾಮತರ ಬಹಳ ಆಪ್ತರಲ್ಲವೇ ನೀವು...

ಮಿಥುನ್, ಸುನಾಥ್
ಅದೊಂದು ದೊಡ್ಡ ಪುಸ್ತಕವೇ ಆಗಬಹುದೇನೋ...
ಕಾಮತರ ಜೋಕ್ಸ್-ಗಳನ್ನು ಅವರಿಂದಲೇ ಕೇಳುವಾಗ ನಗು ಉಕ್ಕಿಬರುತ್ತದೆ. ನಾವುಗಳು ಅದೇ ಜೋಕನ್ನು ಹೇಳಿದರೆ ನೀರಸ ಎಂದೆನಿಸುತ್ತದೆ.

ವೇಣು,
ನಾನು ಬರೆದ್ರೆ ನೀವು ಬರೀಬಾರ್ದು ಅಂತಿದೆಯಾ, ವೇಣು? ನೀವು ನೋದುವ ದೃಷ್ಟಿಕೋನವೇ ಬೇರೆ ಅಲ್ಲವೇ? ಅಷ್ಟೇ ಅಲ್ಲದೆ ನಿಮ್ಮ ಬರಹದಲ್ಲಿರುವ ಅಂದ ನನ್ನ ಬರಹದಲ್ಲೆಲ್ಲಿ? ದಯವಿಟ್ಟು ಕಾಮತರ ಬಗ್ಗೆ ಬರೆಯಿರಿ.

ಹರೀಶ್,
ಕಾಮತರು ಆಗಾಗ ’ಮೊದಲ ಸಲ ಒಟ್ಟಿಗೆ ಬಂದರೂ ಬೇರೆ ಬೇರೆಯಾಗಿ ಬಂದರು ... ಎರಡನೇ ಸಲ ಒಟ್ಟಿಗೆ ಮತ್ತು ಒಂದಾಗಿ ಬಂದರು’ ಎಂದು ನಿಮ್ಮನ್ನು ನೆನೆಸುತ್ತಾ ಇರುತ್ತಾರೆ! ಕುಡ್ಲಕ್ಕೆ ಬಂದಾಗ ಚಾರಣಕ್ಕೆ ಬನ್ನಿ. ಕಾಮತರು ಇರುತ್ತಾರೆ ಪೀಡಿಸಲು, ಕಾಡಿಸಲು ಮತ್ತು ಮುಖ್ಯವಾಗಿ ನಗಿಸಲು.

ಅನ್ನಪೂರ್ಣ,
ಕಾಮತರನ್ನು ಭೇಟಿಯಾದರೆ ಮರೆಯಲಾರಿರಿ ಅವರನ್ನು. ಅವರೊಬ್ಬ ಅಮೇಝಿಂಗ್ ಮ್ಯಾನ್!

ಸುಧೀರ್,
ನೀವು ಕಾಮತರ ಫ್ಯಾಮಿಲಿ ಮೆಂಬರ್ ಇದ್ದ ಹಾಗೆ ತಾನೆ? ಅವರು ಎಲ್ಲಿಗೆ ಪ್ರವಾಸ ಹೊರಟರೂ ನಿಮಗೊಂದು ಆಹ್ವಾನ ಇದ್ದೇ ಇರುತ್ತದೆ. ನಿಮ್ಮಿಬ್ಬರ ಆತ್ಮೀಯತೆ ಹೀಗಿರುವಾಗ ನಿಮ್ಮ ಟಿಪ್ಪಣಿಯ ಉದ್ದ ನೋಡಿ ಅಶ್ಚರ್ಯವಾಗಿಲ್ಲ. ಅವರ ’ಮಂಗಳೂರು ದರ್ಶನ’ ನಾನು ಮಿಸ್ ಮಾಡ್ಕೊಂಡೆ. ನಂತರ ನನಗೆ ಅವರೊಂದಿಗೆ ’ಮಂಗಳೂರು ದರ್ಶನ’ ಮಾಡುವ ಕಾಲ ಕೂಡಿ ಬಂದಿಲ್ಲ.

ಲೀನಾ,
ರಾಜೇಶ್ ಆದ ಮೇಲೆ ಒಂದು ’ಕೊಮಾ’ ಹಾಕಿದ್ದರೆ ಬರೆದದ್ದು ಸರಿಯಾಗಿ ಅರ್ಥವಾಗುತ್ತಿತ್ತು. ಸ್ವಲ್ಪ ಗಲಿಬಿಲಿಯಾದರೂ ಅರ್ಥ ಮಾಡಿಕೊಂಡೆ. ಕಾಮತರ ಮಾತುಗಳಿಗೆ ನೀನು ಕ್ಲೀನ್ ಬೌಲ್ಡ್ ಆದದ್ದು ಸರಿ. ಆದರೆ, ನನ್ನನ್ನೂ ಆಗಾಗ ಹೊಗಳುವ ಕೃಪೆ ತೋರು.

ದಾಮೋದರ್,
ಸ್ವಾಗತ ನನ್ನ ಬ್ಲಾಗಿಗೆ. ಅಂತೂ ಕಾಮತರ ಕೃಪೆಯಿಂದ ನನ್ನ ಬ್ಲಾಗಿನಲ್ಲಿ ನಿಮ್ಮ ಮೊದಲ ಕಮೆಂಟು. ಬರೊಂದುಪ್ಪುಲೆ ಅಣ್ಣಾ. ಖುಷಿ ಆಂಡ್ ಈರೆನ ಕಮೆಂಟ್ ತೂದ್.

ಆರತಿ,
ಕಾಮತರ ಫ್ಯಾಮಿಲಿ ಫೋಟೊ ನನ್ನಲ್ಲಿದೆ. ಆದರೆ ಅಪ್ಪಣೆ ಇಲ್ಲದೆ ಕುಟುಂಬದ ಚಿತ್ರಗಳನ್ನು ಇಲ್ಲಿ ಹಾಕುವುದು ಸರಿಯೆನಿಸದ ಕಾರಣ ಹಾಕಲಿಲ್ಲ. ’ತನ್ನ ಬಗೆಯೆ ಹಾಸ್ಯಚಟಾಕಿಯನ್ನು ಹೇಳುವವರು ಕಡಿಮೆ’ - ಈ ಮಾತನ್ನು ಸರಿಯಾಗಿ ಹೇಳಿದ್ರಿ. ತನ್ನ ಮೇಲೆ ನಗುವ ಸಾಮರ್ಥ್ಯ ಇರುವವರಿಗೆ ಮಾತ್ರ ಬೇರೆಯವರ ಮೇಲೆ ನಗುವ ಹಕ್ಕು ಇರುತ್ತದೆ. ಅವರ ಪತ್ನಿಯ ಸಹಕಾರ ಇಲ್ಲದಿದ್ದರೆ ಎಲ್ಲಿ ಕಾಮತ್ ಚಾರಣಕ್ಕೆ ಬರುವುದು, ಮತ್ತು ಎಲ್ಲಿ ನಾವೆಲ್ಲಾ ಹಾಸ್ಯ ಸಾಗರದಲ್ಲಿ ಮುಳುಗುವುದು? ಪರೋಕ್ಷವಾಗಿ ಕಾಮತರ ಪತ್ನಿಗೆ ನಾವೆಲ್ಲಾ ಋಣಿ.

ಅನಾಮಧೇಯ ಹೇಳಿದರು...

Dear Rajesh,
after reading ur article about me,my family members have started respecting me,more than before.
Nanu ishtu gunavanta anta nanagae gotiralilla.Nanu charana hoda devasa maneyalli tumba nemmadi. Avarae force madi,beda beda helidaru maneyinda odistare. Nanage tumba kushi ayatu thank u.
-RAMESH KAMATH

ಅನಾಮಧೇಯ ಹೇಳಿದರು...

ಹಾಸ್ಯದಿಂದಲೇ ಲೇಖನಕ್ಕೆ ಸ್ಪಂದನ ಮಾಡಿದ್ದಿರ ಕಾಮತ್ರೆ .
u are realy great kamath

ರಾಜೇಶ್ ನಾಯ್ಕ ಹೇಳಿದರು...

ಕಾಮತ್,
ಥ್ಯಾಂಕ್ಸ್. ನಿಮ್ಮ ಮನೆಯವರು ನಿಮ್ಮನ್ನು ಚಾರಣಕ್ಕೆ ’ಓಡಿಸದೇ’ ಇದ್ದರೆ, ನಮ್ಮನ್ನೆಲ್ಲಾ ನಗಿಸುವವರಾರು?

ರಾಜೇಶ್ ನಾಯ್ಕ ಹೇಳಿದರು...

ಶರಶ್ಚಂದ್ರ,
ಕಾಮತರೊಂದಿಗೆ ಚಾರಣಕ್ಕೆ ಒಮ್ಮೆ ಬಂದು ನೋಡಿ. ಹಾಸ್ಯಕಡಲಲ್ಲಿ ತೇಲಾಡುತ್ತಾ ಇರುತ್ತೀರಾ!