ಸೋಮವಾರ, ಜುಲೈ 07, 2008

ಕೆಳದಿಯ ದೇವಾಲಯಗಳು


ನಿರ್ಮಾಣ: ೧೬ನೇ ಶತಮಾನದ ಆರಂಭದಲ್ಲಿ ಮೊದಲ ಕೆಳದಿ ನಾಯಕ ದೊರೆ ಚೌಡಪ್ಪ ನಾಯಕನಿಂದ.

ಸಾಗರದಿಂದ ೭ ಕಿಮಿ ದೂರದಲ್ಲಿರುವ ಕೆಳದಿ, ಕೆಳದಿ ಸಾಮ್ರಾಜ್ಯದ ರಾಜಧಾನಿಯಾಗಿ ೧೭೫ ವರ್ಷಗಳಷ್ಟು ದೀರ್ಘ ಕಾಲ ಉತ್ತುಂಗದಲ್ಲಿದ್ದ ಸ್ಥಳ. ಇಲ್ಲಿರುವ ದೇವಸ್ಥಾನ ಸಮುಚ್ಚಯದಲ್ಲಿ ೩ ದೇವಾಲಯಗಳಿವೆ - ರಾಮೇಶ್ವರ, ವೀರಭದ್ರೇಶ್ವರ ಮತ್ತು ಪಾರ್ವತಿ ದೇವಸ್ಥಾನಗಳು. ರಾಮೇಶ್ವರ ಮತ್ತು ವೀರಭದ್ರೇಶ್ವರ ದೇವಾಲಯಗಳನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದರೆ ಪಾರ್ವತಿ ದೇವಾಲಯವನ್ನು ಕಲ್ಲು ಮತ್ತು ಮರದ ಸಾಮಗ್ರಿಗಳಿಂದ ನಿರ್ಮಿಸಲಾಗಿದೆ.

ರಾಮೇಶ್ವರ ದೇವಸ್ಥಾನ ಮಧ್ಯದಲ್ಲಿದೆ. ಎಡಕ್ಕೆ ವೀರಭದ್ರೇಶ್ವರ ಮತ್ತು ಬಲಕ್ಕೆ ಪಾರ್ವತಿ ದೇವಸ್ಥಾನಗಳಿವೆ. ರಾಮೇಶ್ವರ ಮತ್ತು ವೀರಭದ್ರೇಶ್ವರ ದೇವಸ್ಥಾನಗಳು ಒಂದೇ ಸೂರಿನಡಿಯಲ್ಲಿದ್ದು ಒಂದು ಸಾಮಾನ್ಯ ಅರ್ಧ ಗೋಡೆ ಇವೆರಡೂ ದೇವಾಲಯಗಳನ್ನು ಬೇರ್ಪಡಿಸುತ್ತದೆ. ಆದರೆ ಎರಡೂ ದೇವಸ್ಥಾನಗಳ ಗರ್ಭಗುಡಿ ಪ್ರತ್ಯೇಕವಾಗಿದ್ದು ನಡುವೆ ತೆರೆದ ಅಂತರವಿದೆ. ಈ ಅಂತರ ದೇವಾಲಯದ ಹಿಂದಿನಿಂದ ಮಾತ್ರ ಗೋಚರಿಸುವುದು. ವೀರಭದ್ರೇಶ್ವರ ದೇವಸ್ಥಾನ ಗರ್ಭಗುಡಿ ಮತ್ತು ಸುಖನಾಸಿಯನ್ನು ಹೊಂದಿದೆ. ಗರ್ಭಗುಡಿಯ ದ್ವಾರದ ಹೊರಗೆ ನೆಲದಲ್ಲಿ ೪ ನೃತ್ಯಪಟುಗಳು ಸ್ವಾಗತ ಕೋರುವ ಉಬ್ಬುಶಿಲ್ಪವಿದೆ.

ಸುಖನಾಸಿಯ ಜಗಲಿಯಲ್ಲಿ ೬ ಕಂಬಗಳಿವೆ. ಛಾವಣಿಯಲ್ಲಿ ನಾಗನ ಕೆತ್ತನೆ ಮತ್ತು ಗಂಡಭೇರುಂಡದ ಅದ್ಭುತ ಕೆತ್ತನೆ ಇದೆ. ರಾಮೇಶ್ವರ ದೇವಸ್ಥಾನ ಗರ್ಭಗುಡಿ, ಅಂತರಾಳ ಮತ್ತು ನವರಂಗವನ್ನು ಹೊಂದಿದೆ. ನಂದಿ ಅಂತರಾಳದಲ್ಲೇ ಆಸೀನನಾಗಿದ್ದಾನೆ. ದೇವಾಲಯದ ಮುಂದಿರುವ ಧ್ವಜಸ್ತಂಭದ ಬುಡದಲ್ಲಿ ಕೆಳದಿಯ ರಾಣಿ ಚೆನ್ನಮ್ಮಾ ಒಂದು ಪಟ್ಟಿಯನ್ನು ಅಳವಡಿಸಿದ್ದಳು. ಇದರಲ್ಲಿ ರಾಣಿ ಚನ್ನಮ್ಮಾ ಮತ್ತು ಶಿವಾಜಿಯ ಮಗ ರಾಜಾರಾಮನ ಕೆತ್ತನೆಯಿದೆ.

8 ಕಾಮೆಂಟ್‌ಗಳು:

jomon varghese ಹೇಳಿದರು...

ನಮಸ್ಕಾರ,

ನಾಯ್ಕರೇ,

ಕರ್ನಾಟಕದಲ್ಲಿ ನೀವು ನೋಡದೇ ಇದ್ದ ಸ್ಥಳಗಳು, ಭೇಟಿ ನೀಡದಿರುವ ದೇವಸ್ಥಾನಗಳು, ಚಿತ್ರ ತೆಗೆಯದೆ ಉಳಿದಿರುವ ಜಲಪಾತಗಳು, ಹತ್ತದಿರುವ ಗುಡ್ಡಗಳು ಯಾವುದಾದರೂ ಇದ್ದರೆ ಅಲ್ಲಿಗೆ ನಮ್ಮನ್ನೂ ಕರೆದುಕೊಂಡು ಹೋಗಿ. ಎಂಥ ಮಾರಾಯ್ರೇ .. ಹೀಗೆ ತಿರುಗುವುದು ಉಂಟಾ?

ಹಳ್ಳಿಕನ್ನಡ ಹೇಳಿದರು...

ನಿಮ್ಮ ಪ್ರವಾಸ ಆಸಕ್ತಿ ಕಂಡು ಸಂತೋಷವಾಗ್ತಿದೆ.
ಚಿತ್ರಗಳು ಚೆನ್ನಾಗಿವೆ.
ಪಾರ್ವತಿ ದೇವಾಲಯ ಈಗಲೂ ಸುಸ್ಥಿತಿಯಲ್ಲಿದೆಯೇ? ದೇವಾಲಯಗಳ ನಿರ್ಮಾಣ ಕಾಲ ತಿಳಿಸಿದ್ದರೆ ಚನ್ನಾಗಿತ್ತು.
-ಮಂಜುನಾಥ ಸ್ವಾಮಿ

ಸಿಂಧು sindhu ಹೇಳಿದರು...

ರಾಜೇಶ್,

ಓದಿ, ನೋಡಿ ಖುಶೀ.... ಆಯ್ತು. ದೇವಸ್ಥಾನದಿಂದ ಹಾಗೇ ಮುಂದೆ ಬಂದ್ರೆ ಅಲ್ಲೊಂದು ತುಂಬ ಚೆನಾಗಿರೋ ಕೆರೆ ಇದೆ. ದೇವಸ್ಥಾನದ ಪಕ್ಕದಲ್ಲೇ ಒಂದು ಮ್ಯೂಸಿಯಂ, ತಾಳೆಗರಿ ಸಂಗ್ರಹಾಲಯ, ಕೆಳದಿಯ ಚರಿತ್ರೆ ಇತ್ಯಾದಿ ವಿವರಗಳಿರುವ ಸ್ಥಳವೂ ಇದೆ.

ಹೊರಗಿನಿಂದ ನೋಡಿದರೆ, ಯಾರೋ ಹಳೆಕಾಲದ ಶ್ರೀಮಂತರ ಮನೆಯಂತೆ ಕಾಣುವ ದೇವಳದ ಒಳಹೊಕ್ಕರೆ ಪ್ರಾಂಗಣದಲ್ಲಿ ತೆರೆದು ನಿಲ್ಲುವ ಚೆಲುವು ದೈವಸದೃಶವೇ.

ಅಪರೂಪದ ಮುತ್ತುಗಳನ್ನ ಹೆಕ್ಕಿ ಪೋಣಿಸುವ ನಿಮ್ಮ ’ಅಲೆ-ಮಾಲೆ” ತುಂಬ ಚೆನಾಗಿ ಬರ್ತಿದೆ.

ಪ್ರೀತಿಯಿಂದ
ಸಿಂಧು

ಅನಾಮಧೇಯ ಹೇಳಿದರು...

ಈ ದೇವಸ್ಥಾನವನ್ನ ನೋಡಲು ಸಿಕ್ಕಿದ ಅವಕಾಶವನ್ನ ಮಿಸ್ಸ್ ಮಾಡಿದ್ದಕ್ಕೆ ಈಗ ಪಶ್ಚತಾಪ ಪಡುತ್ತಿದ್ದೆನೆ.ನಿಮ್ಮೆದುರು ನಾವು ನಿಲ್ ಸರ್.

ರಾಜೇಶ್ ನಾಯ್ಕ ಹೇಳಿದರು...

ಜೋಮನ್,
ಇದೆಲ್ಲಾ ಏನೂ ಇಲ್ಲ. ಇನ್ನೂ ನೋಡಬೇಕಾದ್ದು ಬಹಳಷ್ಟು ಇದೆ. ಇನ್ನೂ ಹೆಚ್ಚು ಸ್ಥಳಗಳನ್ನು ನೋಡಿದವರಿದ್ದಾರೆ ಜೋಮನ್. ಆದರೆ ಅವರು ಬ್ಲಾಗುಗಳಲ್ಲಿ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ತಮ್ಮ ಪ್ರಯಾಣ/ಚಾರಣ ಅನುಭವಗಳನ್ನು ಬರೆಯುತ್ತಾ ಇಲ್ಲ. ಅವರ ಅಲೆದಾಟಗಳಿಗೆ ಹೋಲಿಸಿದರೆ ನನ್ನ ಅಲೆದಾಟ ಕೇವಲ ಸಾಸಿವೆಕಾಳು.

ಹಳ್ಳಿ ಕನ್ನಡ ಮಂಜುನಾಥ್,
ಸ್ವಾಗತ ಇಲ್ಲಿಗೆ. ಕೆಳದಿಯ ೩ ದೇವಾಲಯಗಳು ಸುಸ್ಥಿತಿಯಲ್ಲಿವೆ. ೧೬ನೇ ಶತಮಾನದ ಆರಂಭದಲ್ಲಿ ಈ ದೇವಾಲಯಗಳನ್ನು ನಿರ್ಮಿಸಲಾಗಿತ್ತು ಎಂಬಷ್ಟೇ ಮಾಹಿತಿ ನನ್ನಲ್ಲಿದೆ. ನಿಮ್ಮ ಪಟ್ಟದಕಲ್ಲು ಮತ್ತು ಬದಾಮಿ ಚಿತ್ರಗಳು ಸೂಪರ್.

ಸಿಂಧು,
"ಹೊರಗಿನಿಂದ ನೋಡಿದರೆ, ಯಾರೋ ಹಳೆಕಾಲದ ಶ್ರೀಮಂತರ ಮನೆಯಂತೆ ಕಾಣುವ ದೇವಳದ..". ನಿಜ. ನಾನೂ ಹಾಗೇ ಅಂದ್ಕೊಂಡಿದ್ದೆ. ಆದರೆ ದೇವಾಲಯಗಳ ಅಂದಕ್ಕೆ ಮಾರುಹೋಗದೇ ಇರಲು ಅಸಾಧ್ಯ. ಸಣ್ಣ ದೇವಾಲಯಗಳಾದರೂ ಅಷ್ಟರಲ್ಲೇ ಮಾಡಿರುವ ಕೆತ್ತನೆಗಳನ್ನು ನೋಡಲು ಬಹಳ ಸಮಯವೇ ಬೇಕು. ’ಅಲೆ-ಮಾಲೆ’ ಶಬ್ದ ಬಹಳ ಚೆನ್ನಾಗಿದೆ.

ಸುಧೀರ್,
ಬರೀ ಈ ದೇವಸ್ಥಾನವಷ್ಟೇ ಅಲ್ಲ...ಇನ್ನೂ ನಾಲ್ಕಾರು ಚಂದದ ದೇವಾಲಯಗಳನ್ನು ಮಿಸ್ ಮಾಡ್ಕೊಂಡಿದ್ದೀರಾ. ಪಶ್ಚಾತಾಪ ಯಾಕೆ? ಒಂದು ಆದಿತ್ಯವಾರದಂದು ಕಾರು ಸ್ಟಾರ್ಟ್ ಮಾಡಿ, ಹೊರಡಿ. ’ನಿಮ್ಮೆದುರು ನಾವು ನಿಲ್ ಸರ್’ ಈ ವಾಕ್ಯ ಮಾತ್ರ ನನಗೆ ಎಳ್ಳಷ್ಟು ಹಿಡಿಸಲಿಲ್ಲ.

ಶರಶ್ಚಂದ್ರ ಕಲ್ಮನೆ ಹೇಳಿದರು...

ಹಾಯ್ ರಾಜೇಶ್ ಅವ್ರೆ ಸಾಗರದಿಂದ ೭-೮ ಕಿಮೀ ಸೊರಬದ ಹಾದಿಯಲ್ಲಿ ಕಲಸೆ ಎಂಬ ಊರಿದೆ. ಅಲ್ಲಿಯ ದೇವಾಲಯವೂ ಪ್ರಸಿದ್ದ. ಅಲ್ಲಿನ ಕೆತ್ತನೆಗಳು ತುಂಬಾ ಸುಂದರವಾಗಿವೆ. ಈ ಬಾರಿ ಮಿಸ್ಸ್ ಮಾಡ್ಕೊಂಡ್ರೆ ಮುಂದಿನ ಬಾರಿ ಬಂದಾಗ ತಪ್ಪಿಸಿಕೊಳ್ಳಬೇಡಿ.

ರಾಜೇಶ್ ನಾಯ್ಕ ಹೇಳಿದರು...

ಶರಶ್ಚಂದ್ರ,
ಛೆ, ಮಿಸ್ ಮಾಡ್ಕೊಂಬಿಟ್ಟೆ. ಹೊಸಗುಂದ ಎಂಬಲ್ಲಿ ಪ್ರಾಚೀನ ದೇವಾಲಯವಿದೆ ಎಂಬುದು ಅಲ್ಲೆಲ್ಲಾ ಅಲೆದಾಡಿದ ಬಳಿಕ ತಿಳಿದಿತ್ತು. ಈಗ ನೀವು ತಿಳಿಸಿರುವ ಕಲಸೆ. ಮುಂದಿನ ಬಾರಿ ತಪ್ಪಿಸ್ಕೊಳ್ಳೋ ಹಾಗಿಲ್ಲ. ಈ ಮಾಹಿತಿಗಾಗಿ ತುಂಬಾ ಥ್ಯಾಂಕ್ಸ್.

Srik ಹೇಳಿದರು...

I visited and was mesmerised at this wonderful temple.

What touched me here most was the 'sacrifice' of the two servants who gave up their lives in order to get their master become a king(based on a dream), and the king's humble remembrance of them, as long as the traditions are followed in Keladi, these two 'Mara' and 'Barama' are revered. Before the God's procession on festivals, idols of these two servants would make round of the village!!

What a superb story. Humbleness was won by Humility. Long live such stories, and long live Indian tradition.