ಭಾನುವಾರ, ಮಾರ್ಚ್ 30, 2008

ಶಿಗ್ಗಾವಿ ಮಾಸ್ತರರು ಮತ್ತವರ ಪ್ರೀತಿಯ ಕೋತಿಗಳು ...


ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.


ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.


ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ.


ಇಷ್ಟನ್ನೆಲ್ಲಾ ಓದಿದ ಬಳಿಕ ಗುತ್ತಲದ ಶಿಗ್ಗಾವಿ ಮಾಸ್ತರರ ಮನೆಗೆ ಭೇಟಿ ನೀಡಲೇಬೇಕೆಂದು ನಿರ್ಧಾರ ಮಾಡಿದ್ದೆ. ಹಾಗೇನೆ ನಾವು ಗುತ್ತಲ ತಲುಪಿದಾಗ ೪ ಗಂಟೆಯಾಗಿತ್ತು. ಕೋತಿಗಳು ಸಂಜೆಯ ಊಟಕ್ಕೆ ಬರುವ ಸಮಯ. ಅಲ್ಲಲ್ಲಿ ಕೇಳಿ ಶಿಗ್ಗಾವಿ ಮಾಸ್ತರರ ಮನೆ ತಲುಪಿದಾಗ ಅಲ್ಲಿ ಕೋತಿಗಳೇ ಇಲ್ಲ! ಮನೆಯೆಡೆ ನಡೆದುಕೊಂಡು ಹೋದರೆ ಯಾರ ಸುಳಿವೂ ಇಲ್ಲ. ಕಡೆಗೆ ನಿಧಾನವಾಗಿ ಅನುಸೂಯಮ್ಮನವರು ಹೊರಗಡೆ ಬಂದರು. ಅವರ ಹಣೆ ಮೇಲೆ ಕುಂಕುಮ ಮರೆಯಾಗಿರುವುದನ್ನು ಗಮನಿಸಿದ ಕೂಡಲೇ ಕೋತಿಗಳ ಗೈರುಹಾಜರಿಗೆ ಕಾರಣ ತಿಳಿದುಬಿಟ್ಟಿತು. ಶಿಗ್ಗಾವಿ ಮಾಸ್ತರರು ತೀರಿಕೊಂಡಿರಬೇಕು ಎಂದು ಊಹಿಸಿದೆ. ನನ್ನ ಊಹೆ ಸರಿಯಾಗಿತ್ತು. ಶಿಗ್ಗಾವಿ ಮಾಸ್ತರರು ಒಂದು ವರ್ಷದ ಹಿಂದೆ ತೀರಿಕೊಂಡರು. ಅವರ ಮರಣದ ಬಳಿಕ ಒಂದೆರಡು ಬಾರಿ ಆಗಮಿಸಿದ ಕೋತಿಗಳು ನಂತರ ಬರಲೇ ಇಲ್ಲ. ಈಗಲೂ ೧೫ ದಿನಗಳಿಗೊಮ್ಮೆ ಮನೆಯ ಮುಂದಿರುವ ಮರಗಳ ಮೇಲೆ ನಾಲ್ಕೈದು ಕೋತಿಗಳು ಬಂದು ಮನೆಯಡೆ ನೋಡಿ ಹಾಗೆ ಹೊರಟುಹೋಗುತ್ತವೆಯೋ ವಿನ: ಮನೆಯೊಳಗೆ ಬರುವುದಿಲ್ಲ.


ಶಿಗ್ಗಾವಿ ಮಾಸ್ತರರ ಮರಣದ ಬಳಿಕ ಒಂದೆರಡು ಬಾರಿ ಮನೆಯೊಳಗೆ ಬಂದ ಕೋತಿಗಳಿಗೆ ತಮ್ಮ ಪ್ರೀತಿಯ ಶಿಗ್ಗಾವಿ ಮಾಸ್ತರರು ಇಲ್ಲದ ಮನೆ ಬೀಕೋ ಅನಿಸಿರಬೇಕು ಅಥವಾ ಅವರು ನೀಡಿದ ಪ್ರೀತಿ, ಪ್ರೀತಿಯ ಮಾತುಗಳು ಮತ್ತು ಸಲುಗೆ ಉಳಿದವರಿಂದ ಸಿಗದೇ ಇರಲು ಬರುವುದನ್ನೇ ನಿಲ್ಲಿಸಿರಬಹುದು. ಈಗಲೂ ಆಗಾಗ ಬಂದು ಇಣುಕಿ ಹೋಗುವುದರ ಹಿಂದೆ ಏನು ಕಾರಣವಿರಬಹುದು...ಆ ಕೋತಿಗಳಿಗೇ ಗೊತ್ತು. ಶಿಗ್ಗಾವಿ ಮಾಸ್ತರರು ಅನಾರೋಗ್ಯದ ಕಾರಣ ತೀರಿಕೊಂಡಾಗ ಅವರ ದೇಹವನ್ನು ಮಣ್ಣು ಮಾಡಲು ಒಯ್ದಾಗ ಕೋತಿಗಳಿಗೆ ಹೇಗೆ ಸುದ್ದಿ ಸಿಕ್ಕಿತೋ ದೇವರೇ ಬಲ್ಲ. ಮುಂಜಾನೆ ೧೧ ಕ್ಕೆ ಆಗಮಿಸಿ ಊಟ ಮುಗಿಸಿ ಕೋತಿಗಳು ತೆರಳಿದ ಸ್ವಲ್ಪವೇ ಸಮಯದ ಬಳಿಕ ಶಿಗ್ಗಾವಿ ಮಾಸ್ತರರು ಕೊನೆಯುಸಿರೆಳೆದಿದ್ದಾರೆ. ಸಂಜೆ ಊರ ಹೊರಗೆ ಅವರ ಅಂತ್ಯಕ್ರಿಯೆಯ ನಡೆಯುವ ಸ್ಥಳದಲ್ಲಿ ಸುತ್ತಲಿರುವ ಮರಗಳ ಮೇಲೆ ಕೋತಿಗಳು ತುಂಬಿಕೊಂಡಿದ್ದವು! ಅಂತ್ಯಕ್ರಿಯೆಯ ಬಳಿಕ ಜನರೆಲ್ಲಾ ಮರಳಿದರೂ ಕೋತಿಗಳು ಅಲ್ಲೇ ಠಿಕಾಣಿ ಹೂಡಿದ್ದವು. ಎಲ್ಲಿಯ ಸಂಬಂಧ!


ಇದನ್ನೆಲ್ಲಾ ಅನುಸೂಯಮ್ಮನವರ ಜೊತೆಗೆ ಮಾತುಕತೆಗೆ ಇಳಿದಾಗ ಅವರು ಹೇಳಿದ ವಿಷಯಗಳು. ನಂತರ ಒಂದಷ್ಟು ಫೋಟೋಗಳನ್ನು ಅವರು ತೋರಿಸಿದರು. ಶಿಗ್ಗಾವಿ ಮಾಸ್ತರರನ್ನು ಮತ್ತು ಕೋತಿಗಳನ್ನು ಕಾಣಲು, ಫೋಟೋ ತೆಗೆಯಲು ಬಂದ ನಾನು ಈಗ ಬರೀ ಫೋಟೋಗಳನ್ನೇ ನೋಡಿ ತೃಪ್ತಿಪಡಬೇಕಾಯಿತು. ಇದ್ದ ಎಲ್ಲಾ ಫೋಟೋಗಳ 'ಫೋಟೋ' ತೆಗೆದೆ, ಆಷ್ಟಾದರೂ ಇರಲಿ ಎಂದು.


ಈ ಫೋಟೋಗಳನ್ನು ನೋಡಿದರೇ ತಿಳಿಯುವುದು, ಎಷ್ಟರ ಮಟ್ಟಿಗೆ ಕೋತಿಗಳು ಶಿಗ್ಗಾವಿ ಮಾಸ್ತರರೊಂದಿಗೆ ಸಲುಗೆ ಬೆಳೆಸಿಕೊಂಡಿದ್ದವೆಂದು. ಸಣ್ಣ ಮರಿ ಇರುವ ತಾಯಿ ಮಂಗಗಳೂ ಶಿಗ್ಗಾವಿ ಮಾಸ್ತರರ ಬಳಿ ಬಂದು ಕುಳಿತುಕೊಳ್ಳುವುದಾದರೆ ಅಲ್ಲಿರುವ ನಂಬಿಕೆ ಯಾವ ಮಟ್ಟದ್ದಿರಬಹುದು ಎಂದು ತಿಳಿದುಕೊಳ್ಳಬಹುದು.


ಸುಮಾರು ೪೫ ನಿಮಿಷಗಳ ಕಾಲ ಅನುಸೂಯಮ್ಮನವರೊಡನೆ ಮಾತನಾಡಿ, ಚಹಾ ಕುಡಿದು, ಅವರಿಗೆ ವಿದಾಯ ಹೇಳಿ ಹೊರಟೆವು. ಮನದ ತುಂಬಾ ಶಿಗ್ಗಾವಿ ಮಾಸ್ತರರೇ ತುಂಬಿಕೊಂಡಿದ್ದರು.

16 ಕಾಮೆಂಟ್‌ಗಳು:

ಬ್ರಹ್ಮಾನಂದ ಎನ್.ಹಡಗಲಿ ಹೇಳಿದರು...

ರಾಜೇಶ್,
ಶಿಗ್ಗಾವಿ ಮಾಸ್ತರ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿದೆ.
ಲೇಖನ ಓದಿಸಿಕೊಂಡು ಹೋಗುವಂತಿದೆ. ಫೋಟೋಗಳು ಇದಕ್ಕಿಂತಲೂ ಚೆನ್ನಾಗಿವೆ.
ಬ್ರಹ್ಮಾನಂದ

Annapoorna Daithota ಹೇಳಿದರು...

Rajesh, idannu Odi, mana mookavaayithu... manushyarigillada bandha pranigaligirutthade annuvudakkondu kannadi idu.

ಅನಾಮಧೇಯ ಹೇಳಿದರು...

So touching!!!Hats off to the master and his family. This proves,yet again,that animals respond to love and affection. Humans just need to learn to become friendly towards animals. Great work!!

Srikanth - ಶ್ರೀಕಾಂತ ಹೇಳಿದರು...

ನಿಜವಾಗಲೂ ಶಿಗ್ಗಾವಿ ಮಾಸ್ತರರು ಪುಣ್ಯವಂತರು ಕಣ್ರೀ! ಅವರು ಇನ್ನೂ ಬದುಕಿದ್ದರೆ ಒಂದೆರಡು ವಾರದ್ದಲ್ಲೇ ಅವರ ಮನೆಗೆ ಹೊರಟುಬಿಡುತ್ತಿದ್ದೆ. ಅಷ್ಟೊಂದು ಕುತೂಹಲ ಕೆರಳಿಸುತ್ತೆ ಈ ಲೇಖನ.

ಈಗ ನಾವು ಮಾಡಬಹುದಾದ ಕೆಲಸವೊಂದೇ - ಈ 'ಕಥೆ'ಯ ನೀತಿ ಅರಿತು ಅದರಂತೆ ನಡೆದುಕೊಳ್ಳುವುದು.

Srik ಹೇಳಿದರು...

What a beautiful post... I wonder if we still have such nice people around. Hats off to monkies and their master....And to you for taking this odyssey to Shigganvi, to bring to us this heart rendering account.

Really moving, heart touching!

ರಾಜೇಶ್ ನಾಯ್ಕ ಹೇಳಿದರು...

ಬ್ರಹ್ಮಾನಂದ,
ನನ್ನ ಬ್ಲಾಗಿನಲ್ಲಿ ತಮ್ಮ ಮೊದಲ ಟಿಪ್ಪಣಿ. ಧನ್ಯವಾದಗಳು. ಬರ್ತಾ ಇರಿ.

ಅನ್ನಪೂರ್ಣ,
ಥ್ಯಾಂಕ್ಸ್. ತುಂಬಾ ದಿನಗಳ ಬಳಿಕ ತಮ್ಮ ಟಿಪ್ಪಣಿ. ಪ್ರಾಣಿಗಳ ಈ ಪ್ರೀತಿಯನ್ನೇ ಕಣ್ಣಾರೆ ಕಾಣಲು ಅಷ್ಟು ದೂರ ತೆರಳಿದ್ದೆ.

ಹೆಗಡೆ,
ಪ್ರಾಣಿಗಳೆಡೆ ಪ್ರೀತಿ ತೋರಿಸಿದರೆ ಅವು ಅದನ್ನೇ ನಮಗೆ ಹಿಂತಿರುಗಿಸುತ್ತವೆ. ಶಿಗ್ಗಾವಿ ಮಾಸ್ತರರಿಗೆ ಕೋತಿಗಳು ಮಾಡಿದ್ದೂ ಅದನ್ನೇ.

ಶ್ರೀಕಾಂತ್ ಕೆ ಎಸ್,
’ನಿಜವಾಗಲೂ ಶಿಗ್ಗಾವಿ ಮಾಸ್ತರರು ಪುಣ್ಯವಂತರು ಕಣ್ರೀ!’ - ನಾನೂ ಒಪ್ಪುವ ಮಾತು.

ಶ್ರೀಕಾಂತ್,
ಕೋತಿಗಳೆಡೆ ಶಿಗ್ಗಾವಿ ಮಾಸ್ತರರು ತೋರಿದ ಪ್ರೀತಿಯಲ್ಲಿ ಅದೇನೋ ಇದೆ. ನಮ್ಮಂತ ಹುಲುಮಾನವರಿಗೆ ಅವು ಗೋಚರಿಸದೆ, ಕೋತಿಗಳಿಗೆ ಮಾತ್ರ ತಿಳಿದಿತ್ತೇನೋ.

ನಾವಡ ಹೇಳಿದರು...

ನಿಜವಾಗಲೂ ಲೇಖನ ಖುಷಿ ನೀಡಿತು. ಬದುಕಿನಲ್ಲಿ ಎಂಥೆಂಥವರೆಲ್ಲಾ ಪ್ರೀತಿ ಹರಿಸ್ತಾರಲ್ವಾ. ಒಳ್ಳೆ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದ.
ನಾವಡ

ಹರೀಶ್ ಕೇರ ಹೇಳಿದರು...

Great write up Rajesh.
Waiting for next trip !
- Harish Kera

ಯಜಮಾನ ಹೇಳಿದರು...

hrudayakke taTTuvanta vishaya.. bahaLa chennagi barediddiri!

ಅರೇಹಳ್ಳಿ ರವಿ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅರೇಹಳ್ಳಿ ರವಿ ಹೇಳಿದರು...

ರಾಜೇಶ್,
ಪ್ರಾಣಿಗಳು ಮನುಷ್ಯರಂತಲ್ಲ; ಒಂದು ಸಾರಿ ಬಂಧವೆಂಬುದು ಏರ್ಪಟ್ಟರೆ ಮುಗೀತು. ಅದು ಅವುಗಳ ಅಥವ ನಮ್ಮ ಸಾವಿನೊಂದಿಗೆ ಮಾತ್ರ ಕೊನೆಯಾಗೋದು.
ನಮ್ಮ ಮನೆಯಲ್ಲೊಂದು ಬೆಕ್ಕಿತ್ತು. ಎಲ್ಲಿಗಾದರೂ ಹೊರಟರೆ ಬಸ್ಟಾಪಿನವರೆಗೂ ಬಂದು ಅಲ್ಲಿನ ಮರ ಹತ್ತಿ ಕೂಡುತ್ತಿತ್ತು.
ನಂತರ ಎಷ್ಟೋ ಹೊತ್ತಿನ ಮೇಲೆ ಮನೆಗೆ ಮರಳುತ್ತಿತ್ತು.
ನಾಯಿ, ಹಸುಗಳು ತಮ್ಮ ಪ್ರೀತಿಪಾತ್ರ ಒಡೆಯರು ತೀರಿಕೊಂಡಾಗ ಊಟ ಬಿಟ್ಟು ಸತ್ತ ಕಥೆಗಳನ್ನು ಕೇಳುತ್ತಿರುತ್ತೇವೆ. ಯಾವ ಜನ್ಮದ ಮೈತ್ರಿಯೋ? ಮನುಷ್ಯರ ಮನೋವಿಜ್ಞಾನದಂತೆ ಪ್ರಾಣಿಗಳದೂ ಅಧ್ಯಯನಯೋಗ್ಯ ವಿಷಯ.
ರವೀ...
ಒಂದು ಹೊಸ ಲೇಖನ::ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...

ರಾಜೇಶ್ ನಾಯ್ಕ ಹೇಳಿದರು...

ನಾವಡ,
ಪ್ರೀತಿಯ ಮತ್ತೊಂದು ರೂಪ ಇದು.

ಹರೀಶ್, ಯಜಮಾನ
ಧನ್ಯವಾದ.

ರವಿ,
ಪ್ರಾಣಿಗಳ ಪ್ರೀತಿಗೆ ಬೆಲೆ ಕಟ್ಟಲಸಾಧ್ಯ. ಆ ಪ್ರೀತಿಯನ್ನು ಅರಿಯುವ ಸೂಕ್ಷ್ಮತನ ಅವುಗಳಿಗಿರುವುದೇ ಸೋಜಿಗ.

Amitha Rajesh ಹೇಳಿದರು...

Rajesh,

Very good article. The narrative and the photos are very touching.

Amitha Bhat
Sydney

ರಾಜೇಶ್ ನಾಯ್ಕ ಹೇಳಿದರು...

ಅಮಿತಾ,
ಸ್ವಾಗತ ಅಲೆಮಾರಿಯ ಅನುಭವಕ್ಕೆ. ನಿಮ್ಮ ಮೊದಲ ಟಿಪ್ಪಣಿ. ಬರ್ತಾ ಇರಿ ಆಗಾಗ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ರಾಜೇಶ್ ಅವರೆ...
ಮನ ಕಲಕುವ ಬರಹ. ಇಂಥಹ ವಸ್ತು ಹೊತ್ತಿರುವ ಕಥೆ ಓದುವಾಗಲೇ ಮನಮಿಡಿಯುತ್ತದೆ. ಅದೇ ವಾಸ್ತವವನ್ನು ಇಲ್ಲಿ ಓದುವಾಗ ಇನ್ನಷ್ಟು.

ರಾಜೇಶ್ ನಾಯ್ಕ ಹೇಳಿದರು...

ಶಾಂತಲಾ,
ಸರಿಯಾಗಿ ಹೇಳಿದ್ದೀರಿ. ಅಲ್ಲಿಂದ ಹೊರಡುವಾಗ ಮನಸ್ಸು ಭಾರವಾಗಿತ್ತು.