ಬುಧವಾರ, ಡಿಸೆಂಬರ್ 05, 2007

ನಾ ಕಂಡಂತೆ 'ಕುಡ್ಲ ಕಲಾವಳಿ'


೨೨೭ ಕಲಾವಿದರು; ಐದು ಸಾವಿರಕ್ಕೂ ಅಧಿಕ ಕಲಾಕೃತಿಗಳು; ೪ ಲಕ್ಷ ರೂಪಾಯಿಗಳಷ್ಟು ಮೌಲ್ಯದ ಕಲಾಕೃತಿಗಳ ಮಾರಾಟ; ಕರಾವಳಿ ಪ್ರದೇಶವಲ್ಲದೇ ಬಾಗಲಕೋಟ, ಬದಾಮಿ, ಗುಲ್ಬರ್ಗ, ಮೂಡಿಗೆರೆ, ಬೆಂಗಳೂರು, ಮುಂಬೈ ಇಲ್ಲಿಂದಲೂ ಕಲಾವಿದರ ಆಗಮನ ಇವಿಷ್ಟು ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಕುಡ್ಲ ಕಲಾವಳಿಯ ಬಹಳ ಸಂಕ್ಷಿಪ್ತ ವಿವರ.

ಕುಡ್ಲ ಕಲಾವಳಿಯ ಮೊದಲ ದಿನ ಮುಂಜಾನೆ ೯.೩೦ಕ್ಕೆ ಉದ್ಘಾಟನ ಸಮಯಕ್ಕೆ ಸರಿಯಾಗಿ ಪತ್ನಿಯೊಡನೆ ಕದ್ರಿ ಪಾರ್ಕ್ ತಲುಪಿದಾಗ ಕಂಡದ್ದು ರಸ್ತೆಯ ಇಕ್ಕೆಲಗಳಲ್ಲಿ ಕಲಾವಿದರ ಪರದಾಟ, ಒದ್ದಾಟ ತಮ್ಮ ತಮ್ಮ ಚಿತ್ರಗಳನ್ನು ಸರಿಯಾಗಿ ಪ್ರದರ್ಶನಕ್ಕೆ ಇಡಲೋಸುಗ. ಒಂಥರಾ ವ್ಯಥೆಯಾಯಿತು. ಉರಿ ಬಿಸಿಲಿನಿಂದ ರಕ್ಷಣೆಯಿಲ್ಲದೆ ಆಚೀಚೆ ಒಡಾಡುತ್ತಿದ್ದರು ಕೆಲವರು. ಇನ್ನು ಕೆಲವರು ತಮ್ಮ ತಮ್ಮ ಚಿತ್ರಗಳನ್ನು ತೂಗುಹಾಕಿ ಬಿಸಿಲಿನಲ್ಲೇ ಕೂತಿದ್ದರು. ಕೆಲವರಿಗೆ ಮರಗಳ ನೆರಳಿನ ರಕ್ಷಣೆಯಿತ್ತು. ಕೆಲವರಿಗೆ ಆ ಭಾಗ್ಯವಿರಲಿಲ್ಲ. ಕಲಾಕೃತಿಗಳ ರಾಶಿ. ಯಾವುದನ್ನು ನೋಡುವುದೆಂದು ಗೊತ್ತಾಗುತ್ತಿರಲಿಲ್ಲ. ಆಗಲೇ 'ಫಳ್' ಎಂಬ ಸದ್ದು. ಸದ್ದು ಬಂದೆಡೆ ನೋಡಿದರೆ, ಗ್ಲಾಸ್ ಫ್ರೇಮ್ ಹಾಕಿದ ಕಲಾಕೃತಿಯೊಂದು ಕೆಳಗೆ ಬಿದ್ದು, ಫ್ರೇಮ್ ನುಚ್ಚುನೂರು. ಆ ಕಲಾವಿದನೆಡೆ ನೋಡದೇ ಮುನ್ನಡೆದೆ. ನೋಡಿದರೆ ಆತನ ಮುಖದಲ್ಲಿ ಆ ಕ್ಷಣದಲ್ಲಿ ಇರಬಹುದಾದ ನೋವನ್ನು ಸಹಿಸಲು ನನಗಾಗದು ಎಂಬ ಭಯ.


ಅಲ್ಲೇನೂ ಸರಿಯಾಗಿದ್ದಂತೆ ಕಾಣುತ್ತಿರಲಿಲ್ಲ. ಕೇವಲ ಕಲಾವಿದರು ಮಾತ್ರ ಆಚೀಚೆ ಓಡಾಡುತ್ತಿದ್ದರು. 'ಸ್ಟಾಲ್'ಗಳು ಎಲ್ಲಿವೆ ಎಂದು ಪತ್ನಿ ನನ್ನಲ್ಲಿ ಕೇಳುತ್ತಿದ್ದಳು, ನಾನು ಹುಡುಕುತ್ತಿದ್ದೆ. ಅಲ್ಲಿ 'ಸ್ಟಾಲ್'ಗಳೇ ಇರಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೆ ಬಿಳಿ ಬಟ್ಟೆಯನ್ನು ಕಟ್ಟಲಾಗಿತ್ತು. ಅದಕ್ಕೆ ತಮ್ಮ ತಮ್ಮ ಕಲಾಕೃತಿಗಳನ್ನು ಜೋತುಹಾಕಿ , ಉದ್ದಕ್ಕೆ ಊಟಕ್ಕೆ ಕುಳಿತಂತೆ ಪಂಕ್ತಿಯಲ್ಲಿ ಕಲಾವಿದರು. ನೋಡಿ ಏನೇನೂ ಸಂತೋಷವಾಗಲಿಲ್ಲ. ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಈ ರಸ್ತೆಯಲ್ಲಿ ೨ ದಿನಗಳ ಕಾಲ ವಾಹನ ಸಂಚಾರವನ್ನು ನಿಲ್ಲಿಸಲಾಗಿದ್ದರೂ, ವಾಹನಗಳು ಮಾತ್ರ ಓಡಾಡುತ್ತಲೇ ಇದ್ದವು. ಮಧ್ಯಾಹ್ನದ ಬಳಿಕ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ದಿನೇಶ್ ಹೊಳ್ಳ ಯಾವಾಗಲೂ ತಯಾರಿಯನ್ನು ಕೂಲಂಕುಷವಾಗಿ ಮಾಡುವ ಮನುಷ್ಯ. ಇಲ್ಲಿ ಅವರಿಗೆ ಯಾರೋ ಕೈ ಕೊಟ್ಟಿರಬೇಕು ಎಂದು ಯೋಚಿಸುತ್ತಾ ಮುನ್ನಡೆಯುತ್ತಿದ್ದೆ.


ಅಲ್ಲಿ ಒಂದೆಡೆ ಸಣ್ಣ ಗುಂಪು. ಅವರೆಲ್ಲಾ ನಿಂತ ಸ್ಟೈಲ್ ನೋಡಿಯೇ ತಿಳಿಯಿತು. ಹುಡುಗಿಯ ಹೆಸರನ್ನು ಹೋಲುವ ಕಲಾನಾಮವಿರುವ ಒಬ್ಬ ಕಲಾಕಾರ, 'ರೂ.೧೦೦' ಎಂಬ ಬೋರ್ಡ್ ತಗುಲಿಸಿ, ಅಲ್ಲಿ ಆಸೀನನಾಗಿ ರೂ.೧೦೦ ಕೊಟ್ಟು ತಮ್ಮ ಕಾರ್ಟೂನ್ (ಕ್ಯಾರಿಕೇಚರ್) ಬಿಡಿಸಿಕೊಳ್ಳುವ ಇಚ್ಛೆಯಿದ್ದವರಿಗೆ ಬಿಡಿಸಿಕೊಡುವುದರಲ್ಲಿ ಮಗ್ನನಾಗಿದ್ದಾನೆ ಎಂದು. ಉಳಿದ ಕಲಾಕಾರರು ಪರದಾಡುತ್ತಿದ್ದರೆ, ಈತನಿಗೆ ಅದ್ಯಾವ ಪ್ರಾಬ್ಲೆಮ್ಮೂ ಇಲ್ಲ. ಯಾರ ಕಲಾಕೃತಿಗಳು ಮಾರಾಟವಾದವೋ ನಾನರಿಯೆ ಆದರೆ ಈತನ ಕಿಸೆ ತುಂಬ ೧೦೦ರ ನೋಟುಗಳು. ಈತನೊಬ್ಬ ಉತ್ತಮ ಕಲಾವಿದ. ಯಾರದ್ದೇ ಆಗಲಿ, ನಾಲ್ಕೈದು ನಿಮಿಷಗಳಲ್ಲೇ ಕ್ಯಾರಿಕೇಚರ್ ಬಿಡಿಸಿ ಬಿಡುತ್ತಾರೆ. ವರ್ಣಶರಧಿಯಂತಹ ಮಾರಾಟಕ್ಕೆ ಆಸ್ಪದವಿರದಂತಹ, ಕೇವಲ ತಮ್ಮ ಕಲೆಯನ್ನು ಪ್ರದರ್ಶಿಸುವ ಮಂಚದಲ್ಲೂ 'ರೂ.೧೦೦' ಎಂಬ ಬೋರ್ಡ್ ತಗುಲಿಸಿ ಬಂದವರಲ್ಲಿ ಹಣ ಕೀಳಲು ಆರಂಭಿಸಿದಾಗ ದಿನೇಶ್ ಆಕ್ಷೇಪ ವ್ಯಕ್ತಪಡಿಸಲು, 'ಹ್ಹೆ ಹ್ಹೆ ನನಗೆ ಗೊತ್ತೇ ಇರಲಿಲ್ಲ...' ಎಂದು ಪೆಚ್ಚು ಪೆಚ್ಚಾಗಿ ಮೂರ್ಖ ನಗು ತೋರ್ಪಡಿಸಿದ ಆಸಾಮಿ ಈತ. ಇಲ್ಲಿ, ಕುಡ್ಲ ಕಲಾವಳಿಯಲ್ಲಿ ಅವರಿಗೆ ವರ್ಣಶರಧಿಯಲ್ಲಿದ್ದಂತಹ ನಿರ್ಬಂಧನೆಯಿರಲಿಲ್ಲ. ಜನ ಅವರನ್ನು ಮುತ್ತುತ್ತಾ ಇದ್ದರು. ಇವರು ಬಿಡಿಸುತ್ತಾ ಇದ್ದರು. ಕಿಸೆ ತುಂಬುತ್ತಾ ಇತ್ತು. ಪಕ್ಕದಲ್ಲೊಂದು ಚೀಲವಿತ್ತು. ಮರುದಿನ ಸಂಜೆಯಾಗುವಷ್ಟರಲ್ಲಿ ಅದೂ ತುಂಬಿತ್ತೇನೋ! ಮಂಗಳೂರಿನಲ್ಲೊಂದು ಜೋಕು. ಯಾವುದೇ ವೈಯುಕ್ತಿಕ ಸಭೆ ಸಮಾರಂಭಗಳಿಗೆ ಈತನನ್ನು ಆಮಂತ್ರಿಸಬಾರದು ಎಂದು. ಎಲ್ಲಾದರೂ ಆಮಂತ್ರಿಸಿದರೆ, ಅಲ್ಲೇ ಮೂಲೆಯಲ್ಲಿ 'ರೂ.೧೦೦' ಎಂದು ಬೋರ್ಡ್ ತಗುಲಿಸಿ ಈ ಮಹಾಶಯ ಆಸೀನನಾಗಿಬಿಟ್ಟರೆ?!


ಇನ್ನೂ ಮುಂದಕ್ಕೆ ಹೋದಾಗ ಅಲ್ಲಿ ಮರಳು ಶಿಲ್ಪ ಪ್ರದರ್ಶನ. ನಂತರ ಮತ್ತಷ್ಟು ಕಲಾಕೃತಿಗಳು. ಸರಿಯಾದ ವ್ಯವಸ್ಥೆಯಿರಲಿಲ್ಲ. ಪ್ರದರ್ಶನದ ಒಂದು ದಿಕ್ಕಿನಲ್ಲಂತೂ ಬಿಸಿಲಿನಿಂದ ಪಾರಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಅವ್ಯವಸ್ಥೆಯ ಪರಿ ಕಂಡು ಕೆಲವು ಕಲಾವಿದರು ಭಾಗವಹಿಸದೇ ಹಿಂತಿರುಗಿದರು ಎಂದು ನಂತರ ದಿನೇಶ್ ಹೊಳ್ಳ ತಿಳಿಸಿದರು. ನಂತರ ಕದ್ರಿ ಪಾರ್ಕಿನ ಒಳಗೆ ತೆರಳಿದೆ. ಇಲ್ಲೂ ಮತ್ತಷ್ಟು ಕಲಾವಿದರು ಮತ್ತು ಕಲಾಕೃತಿಗಳು. ಅವನ್ನೆಲ್ಲಾ ನೋಡುತ್ತಾ ಸಭಾಂಗಣದತ್ತ ತೆರಳಿ ಆಸೀನನಾದೆ. ಕರ್ನಾಟಕ ಬ್ಯಾಂಕಿನ ಚೇರ್ಮನ್ ಅದೇನೋ ಮಾತನಾಡುತ್ತಿದ್ದರು. ಇತ್ತೀಚೆಗೆ ಸಿಕ್ಕಸಿಕ್ಕಲ್ಲಿ ರಿಬ್ಬನ್ ಕಟ್ ಮಾಡಲು ಇವರು ತೆರಳುವುದು ಕಡಿಮೆಯಾಗಿದೆ. ಮೊದಲೆಲ್ಲಾ ಸಣ್ಣ ಅಂಗಡಿ/ಗ್ಯಾರೇಜು ಉದ್ಘಾಟನೆಗೂ ಇವರು ತೆರಳಲು ತಯಾರು, ಆ ಅಂಗಡಿ/ಗ್ಯಾರೇಜಿನ ಖಾತೆ ಕರ್ನಾಟಕ ಬ್ಯಾಂಕಿನಲ್ಲಿದ್ದರೆ!

ಸ್ವಲ್ಪ ಸಮಯದ ಬಳಿಕ ದಿನೇಶ್ ಹೊಳ್ಳ ನನ್ನ ಬಳಿ ಬಂದು ಕುಳಿತರು. 'ಎಲ್ಲಾ ಗೊಂದಲ' ಎಂಬ ಅವರ ಎರಡೇ ಮಾತುಗಳಲ್ಲಿ ಬಹಳ ಅರ್ಥವಿತ್ತು. ಇಂತಹ ಪ್ರದರ್ಶನವನ್ನು ಆಯೋಜಿಸುವಾಗ ತಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಎಲ್ಲರು ಸರಿಯಾಗಿ ನಿರ್ವಹಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ದಿನೇಶ್ ಮತ್ತು ಇನ್ನು ೪ ಜನರನ್ನು ಬಿಟ್ಟರೆ ಉಳಿದವರೆಲ್ಲಾ ಬರೀ ಮಾತುಗಾರರು. ಸತತವಾಗಿ ೪ ದಿನ ರಾತ್ರಿಯಿಡೀ ಕೆಲಸ ಮಾಡಿದ ದಿನೇಶ್, ನನ್ನಲ್ಲಿ ಮಾತನಾಡುತ್ತಾ ಅಲ್ಲೇ ನಿದ್ರಾವಶರಾಗಿಬಿಟ್ಟಿದ್ದರು. 'ಅಡವಿಯ ನಡುವೆ' ಮತ್ತು 'ವರ್ಣಶರಧಿ' ಎಂಬ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದೇ ದಿನೇಶರಿಗೆ ಮುಳುವಾಗಿಹೋಯಿತು. ಆಯಾ ಜವಾಬ್ದಾರಿಯನ್ನು ಹೊತ್ತ ಪ್ರತಿಯೊಬ್ಬರು, ಹೇಗೂ ದಿನೇಶರಿಗೆ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವವಿದೆಯಲ್ಲ ಎಂದು, ತಮ್ಮ ತಮ್ಮ ಕೆಲಸಗಳನ್ನು ಸ್ವಲ್ಪ ಸ್ವಲ್ಪ ಮಾಡಿ ನಿಧಾನವಾಗಿ ಜಾಗ ಖಾಲಿ ಮಾಡಿದರು. ಕೊನೆಗೆ ಉಳಿದದ್ದು ದಿನೇಶ್ ಸೇರಿದಂತೆ ೫ ಮಂದಿ. ೫ ಮಂದಿ ಎಷ್ಟು ತಾನೆ ಮಾಡಿಯಾರು?


ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಬುದ್ಧಿವಂತರು (ಕರಾವಳಿಯ ಜನತೆ) ಪ್ರದರ್ಶನಕ್ಕೆ ಆಗಮಿಸಲಿಲ್ಲ. ಎರಡನೇ ದಿನ ಅಂದರೆ ಆದಿತ್ಯವಾರ ಸಂಜೆ ಹೊತ್ತಿಗೆ ಸುಮಾರು ಜನ ಸೇರಿದ್ದರು. ಇಲ್ಲಿ ಉದಯವಾಣಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಕರಾವಳಿಯ ಪ್ರಮುಖ ದಿನಪತ್ರಿಕೆಯಾಗಿ, ಕುಡ್ಲ ಕಲಾವಳಿಯ ಬಗ್ಗೆ ಸಮಗ್ರ ಸುದ್ದಿಯನ್ನು ಪ್ರಕಟಿಸಿ, ಜನರಿಗೆ ಮಾಹಿತಿ ತಲುಪಿಸಲು ಉದಯವಾಣಿ ಆಸಕ್ತಿ ತೋರಿಸಲಿಲ್ಲ. ಮಾಧ್ಯಮ ಪ್ರಾಯೋಜಕರಾಗುವಂತೆ ವಿನಂತಿಸಿದರೆ, ಸರಿಯಾದ ಉತ್ತರ ನೀಡದೆ ಕೊನೇ ಕ್ಷಣದವರೆಗೆ ನಿರ್ಧಾರ ತಗೊಳ್ಳದೆ, ಕುಡ್ಲ ಕಲಾವಳಿಯ ಆಯೋಜಕರನ್ನು ಕಾಡಿಸಿ, ಕೊನೆಗೆ 'ಬೊಡ್ಚಿ' ಎಂದು ನಿರಾಕರಿಸಿದ ಪತ್ರಿಕೆ ಈ ಉದಯವಾಣಿ. ಮಾಧ್ಯಮ ಪ್ರಾಯೋಜಕರಾಗದಿದ್ದರೂ ಪರವಾಗಿಲ್ಲ, ನಾಲ್ಕೈದು ದಿನ ಮೊದಲಿನಿಂದಲೇ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿದ್ದರೆ ಕೆಲವು ಬಡ ಕಲಾವಿದರಿಗೆ ಪ್ರಯೋಜನವಾದರೂ ಆಗುತ್ತಿತ್ತು. ಅದನ್ನೂ ಮಾಡಲಿಲ್ಲ ಉದಯವಾಣಿ. ಒಳಗಿನ ಪುಟದಲ್ಲೆಲ್ಲೋ ಸಂಕ್ಷಿಪ್ತವಾಗಿ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿ, 'ರಿಕ್ಷಾ ಪಲ್ಟಿ' ಮತ್ತು 'ಮನೆಯಾಕೆಯ ತಾಳಿ ಕೆಲಸದಾಕೆಯ ಕೊರಳಿನಲ್ಲಿ' ಎಂಬ ಸುದ್ದಿಗಳನ್ನು ದಪ್ಪಕ್ಷರಗಳಲ್ಲಿ ಪ್ರಕಟಿಸಿ ತನ್ನ ಲೆವೆಲ್ ಏನು ಎಂಬುದನ್ನು ಉದಯವಾಣಿ ತೋರ್ಪಡಿಸಿತು. ಸ್ವಂತ ನಿಲುವಿಲ್ಲದ (ಸಂಪಾದಕೀಯ) ಪತ್ರಿಕೆಯಿಂದ ಮತ್ತೇನನ್ನು ತಾನೆ ನಿರೀಕ್ಷಿಸಬಹುದು?

"ಪ್ರಥಮ ಪ್ರಯತ್ನ. ಬಹಳ ವಿಷಯಗಳು ತಿಳಿದವು. ಪ್ರಶಂಸೆಯ ಮಾತುಗಳಿದ್ದರೂ, ಸಹಜವಾಗಿಯೇ ದೂರುಗಳೇ ಹೆಚ್ಚಿದ್ದವು. ಯಾರು ಮಾತನಾಡುತ್ತಾರೆ ಮತ್ತು ಯಾರು ಕೆಲಸ ಮಾಡುತ್ತಾರೆ ಎಂದು ಈಗ ಚೆನ್ನಾಗಿ ತಿಳಿದಿದೆ. ಮುಂದಿನ ಸಲ ಮತ್ತೆ ಕುಡ್ಲ ಕಲಾವಳಿ ಮಾಡಬೇಕು .... ಯಾವ ದೂರಿಗೂ ಆಸ್ಪದವಿಲ್ಲದಂತೆ" ಎಂಬುದು ದಿನೇಶ್ ಹೊಳ್ಳರ ಮಾತು.