ಸೋಮವಾರ, ಜೂನ್ 18, 2007

ಗುಂಡಿಗೊಂದು ಭೇಟಿ


ಮೊನ್ನೆ ಶನಿವಾರ ಜೂನ್ ೯ರಂದು ಜಗದೀಶ್ ಕಾಮತ್ ಫೋನಾಯಿಸಿ, 'ಸಂಜೆ ೭ಕ್ಕೆ ಬರುತ್ತೇವೆಂದು ಜೋಶಿಯವರಿಗೆ ತಿಳಿಸಿದ್ದೇನೆ. ಅಲ್ಲಿಂದ ನಾಳೆ ಬೆಳಗ್ಗೆ ಟ್ರೆಕ್ ಮಾಡುವ' ಎಂದಾಗ ಸಂಜೆ ೪.೩೦ರ ಸಮಯ ಮತ್ತು ನಾನಿನ್ನೂ ಮಂಗಳೂರಿನಲ್ಲಿದ್ದೆ. ಕೂಡಲೇ ಮೈಗೆ ಕರೆಂಟ್ ತಾಗಿದಂತೆ ಫಾಸ್ಟ್ ಆಗಿ ಎಲ್ಲಾ ಕೆಲಸ ಮುಗಿಸಿ, ಉಡುಪಿಗೆ ಬಂದು, ಟ್ರೆಕ್ ಬ್ಯಾಗ್ ರೆಡಿ ಮಾಡಿ, ಸ್ನಾನ ಮಾಡಿ ಫ್ರೆಶ್ ಆಗಿ, ಎಲ್ಲರನ್ನೂ ಸೇರಿಕೊಂಡಾಗ ರಾತ್ರಿ ೮.೩೦ ಆಗಿತ್ತು. ಕಡೆಗೆ ಎಲ್ಲಾ ೯ ಮಂದಿ ಬಂದು ಹೊರಡುವಾಗ ರಾತ್ರಿ ೯ ಆಗಿತ್ತು. ೨ ಓಮ್ನಿಗಳಲ್ಲಿ ಹೊರಟ ನಾವು, ಒಂದೆಡೆ ಊಟ ಮುಗಿಸಿ ಜೋಶಿಯವರ ಮನೆ ರಾತ್ರಿ ೧೧.೪೫.

ನಮ್ಮನ್ನು ೧೦.೩೦ರವರೆಗೆ ಕಾದು ಶ್ರೀ ಗಂಗಾಧರ ಜೋಶಿಯವರು, ಹೊರಗಿನ ಲೈಟನ್ನು ಆನ್ ಇಟ್ಟು ಮಲಗಿದ್ದರು. ವಾಹನಗಳ ಸದ್ದು ಕೇಳಿ, ಎದ್ದು ಬಂದು ನಮ್ಮನ್ನು ಸ್ವಾಗತಿಸಿದರು. ಹೆಚ್ಚು ತಡಮಾಡದೇ ಅವರ ಮನೆಯ ವಿಶಾಲ ಜಗಲಿಯಲ್ಲಿ ನಿದ್ರಾದೇವಿಗೆ ಶರಣಾದೆವು. ಮುಂಜಾನೆ ನಮಗೆ ಯಾರೂ ಮಾರ್ಗದರ್ಶಿಗಳು ಸಿಗಲಿಲ್ಲ. ಜೋಶಿಯವರಿಗೆ, ನಾವು ಬರುತ್ತಿದ್ದೇವೆಂದು ತಡವಾಗಿ ತಿಳಿಸಿದ್ದರಿಂದ ಅವರಿಗೂ ಒಬ್ಬ ಮಾರ್ಗದರ್ಶಿಯನ್ನು ರೆಡಿ ಮಾಡಿ ಇಡಲು ಅಸಾಧ್ಯವಾಗಿತ್ತು. ಗೋವಿಂದ ಎಂಬ ನಮ್ಮ ರೆಗ್ಯುಲರ್ ಗೈಡ್ ಆ ದಿನ ಬೇರೆ ಕಡೆ ಬಿಝಿ. ಕಡೆಗೆ ಎಲ್ಲಿ ಹೋಗಬೇಕೆಂದು ಇದ್ದೇವೋ ಆ ಚಾರಣವನ್ನು ರದ್ದು ಮಾಡಿ, ಅಲ್ಲೇ ಸಮೀಪದಲ್ಲಿರುವ ಗುಂಡಿ ಜಲಪಾತಕ್ಕೆ ಹೋಗೋಣವೆಂದು ನಿರ್ಧರಿಸಿದೆವು.

ಮುಂಜಾನೆ ೮.೩೦ರ ಸುಮಾರಿಗೆ ನಾವು ಹೊರಟ ಕೂಡಲೇ ಮಳೆ ಬಿರುಸಾಗಿ ಬೀಳಲಾರಂಭಿಸಿತು. ಸುಮಾರು ಒಂದು ತಾಸು ಅಲ್ಲಲ್ಲಿ ಅಲೆದು ದಾರಿ ತಪ್ಪಿ, ಜಲಪಾತಕ್ಕೆ ದಾರಿ ಸಿಗದೇ ಮತ್ತೆ ಮರಳಿ ಜೋಶಿಯವರ ಮನೆಗೆ ಬಂದೆವು. ಈಗ ಮಳೆ ನಿಂತು, ಬಿಸಿಲು ಶುರುವಾಗಿತ್ತು. ಈ ಬಾರಿ ಜೋಶಿಯವರ ಮಗ ಡುಂಡಿರಾಜ, ತಾನು ಜಲಪಾತ ತೋರಿಸುವೆನೆಂದು ನಮ್ಮೊಂದಿಗೆ ಬಂದ. ತೋಟಗಳ ನಡುವೆ ೧೦ನಿಮಿಷ ನಡೆದು, ನಂತರ ಕಾಡಿನಲ್ಲಿ ೧೫ ನಿಮಿಷ ನಡೆದು ಗುಂಡಿ ಜಲಪಾತಕ್ಕೆ ತಲುಪಿದೆವು. ಜೋಶಿಯವರ ಮನೆಯಿಂದ ಕೇವಲ ೨೦-೨೫ ನಿಮಿಷದ ನಡಿಗೆ.

ಸುಮಾರು ೪೦ ಅಡಿ ಎತ್ತರದಿಂದ ಬೀಳುವ ಸಣ್ಣ ಜಲಧಾರೆ ಗುಂಡಿ ಜಲಪಾತ. ಇದೇ ತೊರೆ ಮೇಲ್ಗಡೆ ಸುಮಾರು ೧೦೦ ಅಡಿಯಷ್ಟು ಜಲಪಾತವನ್ನು ನಿರ್ಮಿಸಿದ್ದು, ಹಳ್ಳಗುಂಟ ಇನ್ನೂ ೧೫೦ ನಿಮಿಷದಷ್ಟು ನಡೆದರೆ ಅಲ್ಲಿಗೆ ತಲುಪಬಹುದು. ಆದ್ದರಿಂದ ನಾವು ನೋಡಿದ ೪೦ ಅಡಿ ಎತ್ತರದ ಜಲಧಾರೆಯನ್ನು, 'ಗುಂಡಿ ೨ನೇ ಜಲಪಾತ' ಎನ್ನಬಹುದು. ಜಟ್ಟಿಗಳೆಲ್ಲರೂ ನೀರಿಗಿಳಿದು ಜಲಕ್ರೀಡೆಯಾಡಲು ಶುರುಮಾಡಿದರು. ಒಂದು ತಾಸಿನ ಬಳಿಕ ಮರಳಿ ಜೋಶಿಯವರ ಮನೆಗೆ. ತಾವು ಬೆಳೆದಿದ್ದ ತರಕಾರಿ ಇತ್ಯಾದಿಗಳನ್ನು ಶ್ರೀಮತಿ ಜೋಶಿಯವರು, 'ತಗೊಂಡುಹೋಗಿ' ಎಂದು ನಮ್ಮ ಮುಂದೆ ಇಟ್ಟಾಗ, ಅಲ್ಲಿ ನಡೆದಿತ್ತು 'ಫ್ರೀ ಫಾರ್ ಆಲ್' ತಳ್ಳಾಟ, ನುಗ್ಗಾಟ, ಜಗ್ಗಾಟ. ಎಲ್ಲರೂ ಸಿಕ್ಕಿದಷ್ಟನ್ನು ಬಾಚಿಕೊಂಡೆವು. ಪುಕ್ಕಟೆ ಸಿಕ್ಕಿದ್ದಕ್ಕೆ ರುಚಿ ಹೆಚ್ಚಂತೆ.

ಮತ್ತೆ ಯಾವಾಗಲಾದರೂ ಮತ್ತೊಂದು ಚಾರಣಕ್ಕೆ ಬರುತ್ತೇವೆಂದು ಜೋಶಿಯವರಿಗೆ ವಿದಾಯ ಹೇಳಿ, ಉಡುಪಿ ತಲುಪಿದಾಗ ಮಧ್ಯಾಹ್ನ ೨.೧೫. ಇಷ್ಟು ಬೇಗ ಯಾವುದೇ ಚಾರಣದಿಂದ ಹಿಂತಿರುಗಿರಲಿಲ್ಲ!

4 ಕಾಮೆಂಟ್‌ಗಳು:

ಯಜಮಾನ ಹೇಳಿದರು...

Namaskaara,

naanu nimma ella blaag'gaLannu odutta bandiddEne. nimma blaag-gaLu nanage bahaLa hiDiside. ide reeti mundu varesi.

iMti,
Suhruta

ರಾಜೇಶ್ ನಾಯ್ಕ ಹೇಳಿದರು...

ಸುಹೃತ,
ಪ್ರೋತ್ಸಾಹದ ಮಾತುಗಳಿಗಾಗಿ ಧನ್ಯವಾದಗಳು. ಬರುತ್ತಾ ಇರಿ ಇಲ್ಲಿಗೆ. ನಿಮ್ಮ ಅನಿಸಿಕೆಗಳನ್ನು ತಿಳಿಸುತ್ತಿರಿ.

ಸಿಂಧು sindhu ಹೇಳಿದರು...

ರಾಜೇಶ್,

ಇನ್ ಸ್ಟಾಂಟ್ ಚಾರಣ ಇಷ್ಟವಾಯ್ತು.

Srik ಹೇಳಿದರು...

You stay soo close to all these places...hmmm...

I am as close + 12 hours!! :'(