ಬುಧವಾರ, ಜೂನ್ 20, 2007

ರಾಜಹಂಸಘಡ ಕೋಟೆಗೆ


ಜೂನ್ ೧೫ ಮತ್ತು ೧೬ರಂದು ಕೆಲಸದ ನಿಮಿತ್ತ ಹುಬ್ಬಳ್ಳಿಯಲ್ಲಿದ್ದೆ. ೧೭ನೇ ತಾರೀಕು ಆದಿತ್ಯವಾರವಾಗಿದ್ದರಿಂದ, ಧಾರವಾಡದ ಗೆಳೆಯರು ಎಲ್ಲಾದರೂ ಹೊರಟಿರಬಹುದೇ ಎಂದು ಕೇಳಿ ನೋಡೋಣವೆಂದು ವಿವೇಕ್ ಯೇರಿಗೊಂದು ಫೋನ್ ಮಾಡಿದ್ರೆ, 'ಎಳ್ಳೂರುಘಡ್ ಹೊಂಟಿವ್ರಿ. ನೀವ ಉಡುಪಿಯಿಂದ ಬರೋವಷ್ಟು ಮಸ್ತ್ ಇಲ್ರಿ ಅದ....ಅದ್ಕೇ ನಿಮ್ಗೆ ತಿಳ್ಸಿಲ್ಲ' ಎಂದರು. ಹೇಗಿದ್ರೂ ಹುಬ್ಬಳ್ಳಿವರೆಗೆ ಬಂದಿದ್ದೇನಲ್ಲ.... ಈ ಸಣ್ಣ ಚಾರಣವನ್ನು ಮುಗಿಸಿಯೇ ಹೋಗೋಣವೆಂದು ನಿರ್ಧರಿಸಿದೆ.

ಅಂದು ನಾವು ಹೊರಟಿದ್ದು ಶಿವಾಜಿ ಕಟ್ಟಿಸಿದ 'ರಾಜಹಂಸಘಡ' ಎಂಬ ಕೋಟೆಗೆ. ಸಣ್ಣ ಬೆಟ್ಟದ ಶಿಖರದಲ್ಲಿ ಸುತ್ತಲೂ ನಡೆಯಲು ಸಾಕಾಗುವಷ್ಟು ಜಾಗವನ್ನು ಮಾತ್ರ ಬಿಟ್ಟು ಈ ಕೋಟೆಯನ್ನು ಕಟ್ಟಲಾಗಿದೆ. ಎಳ್ಳೂರು ಎಂಬ ಹಳ್ಳಿಯ ಸಮೀಪವಿರುವುದರಿಂದ ಈ ಕೋಟೆಯನ್ನು ಎಳ್ಳೂರುಘಡ್ ಎಂದೂ ಕರೆಯಲಾಗುತ್ತದೆ.

ಖಾನಾಪುರ ಸಮೀಪದ ದೇಸೂರ್ ಎಂಬಲ್ಲಿಂದ ಕೋಟೆಗೆ ಚಾರಣ ಆರಂಭಿಸಿ, ಬೆಳಗಾವಿ ಸಮೀಪದ ಎಳ್ಳೂರು ಎಂಬಲ್ಲಿಗೆ ಇಳಿಯುವುದೆಂದು ನಿರ್ಧರಿಸಲಾಗಿತ್ತು. ರಾಣಿ ಚೆನ್ನಮ್ಮ ಎಕ್ಸ್-ಪ್ರೆಸ್ ನಲ್ಲಿ ಅಂದು ಮುಂಜಾನೆ ಹೊರಟ ೩೨ ಜನರ ತಂಡ ಖಾನಾಪುರ ರೈಲು ನಿಲ್ದಾಣದಲ್ಲಿ ಇಳಿದಾಗ ಸಮಯ ೮.೪೫. ಉಪಹಾರ ಮುಗಿಸಿ ಟೆಂಪೋವೊಂದರಲ್ಲಿ ೧೨ಕಿಮಿ ದೂರವಿರುವ ದೇಸೂರ ತಲುಪಿ ಚಾರಣ ಆರಂಬಿಸಿದಾಗ ೧೦.೧೫ ಆಗಿತ್ತು.

ದೇಸೂರದಿಂದಲೇ ದೂರದಲ್ಲಿ ಬೆಟ್ಟದ ತುದಿಯಲ್ಲಿ ವಿರಾಜಮಾನವಾಗಿರುವ ರಾಜಹಂಸಘಡ ಕಾಣುತ್ತದೆ. ದೇಸೂರವನ್ನು ಎಳ್ಳೂರು ಮೂಲಕ ಬೆಳಗಾವಿಗೆ ಸಂಪರ್ಕಿಸುವ ರಸ್ತೆಯಲ್ಲಿ ಒಂದೆರಡು ಕಿಮಿ ನಡೆದು ನಂತರ ರಸ್ತೆ ಬಿಟ್ಟು, ಗದ್ದೆ, ಬಯಲುಗಳನ್ನು ದಾಟಿ ಬೆಟ್ಟದ ಬುಡ ತಲುಪಿ ಸ್ವಲ್ಪ ವಿರಾಮ ಪಡೆದೆವು. ಪರಸ್ಪರ ಪರಿಚಯ ಮಾಡಿಕೊಳ್ಳುವ ಕಾರ್ಯಕ್ರಮ ಇಲ್ಲಿ ನಡೆಯಿತು. ಮಕ್ಕಳ ಸಂಖ್ಯೆ ೮-೧೦ ಇದ್ದಿದ್ದು ಗಮನಾರ್ಹ. ಸಣ್ಣ ವಯಸ್ಸಿನಲ್ಲೇ ಈ ಹವ್ಯಾಸ ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿದರೆ ಅದೊಂದು ಒಳ್ಳೆಯ ಬೆಳವಣಿಗೆ. ಈ ಮಕ್ಕಳ ಸೈನ್ಯದಲ್ಲೊಬ್ಬ ೩ನೇ ತರಗತಿಯ ಪೋರನಿದ್ದ. ತನ್ನ ಪರಿಚಯವನ್ನು 'ನನ್ ಹೆಸ್ರು ಶ್ರೀಕಾಂತ್ ಅಂತದ, ಆದ್ರ ನೀವೆಲ್ರೂ ನನ್ನ ಡಾನ್ ಅಂತ ಕರೀಬೇಕ್ರಿ' ಎಂದೇ ಮಾಡಿಕೊಂಡ. ಚಾರಣದುದ್ದಕ್ಕೂ ಅಗಾಗ, 'ನನ್ನನ್ನು ಗುರುತಿಸಿ ........ ನಾನು ಡಾನ್' ಎಂದು ಹಾಡುತ್ತಿದ್ದ!

೧೧.೪೫ರ ಹೊತ್ತಿಗೆ ಕೋಟೆಯ ಒಳಗಿದ್ದೆವು. ಕೊನೆಯ ೨೦ನಿಮಿಷದ ಹಾದಿ ಮಾತ್ರ ಏರುಹಾದಿಯಾಗಿತ್ತು. ಚಾರಣದ ಹಾದಿಯಲ್ಲಿ ಅಲ್ಲಲ್ಲಿ ಕೆಲವು ಪೊದೆಗಳು ಮತ್ತು ಸಣ್ಣ ಗಿಡಗಳು. ಕೋಟೆ ಸಮೀಪಿಸಿದಂತೆ ಕೆಲವೊಂದು ಕಡೆ ನೆಟ್ಟು ಬೆಳೆಸಿದಂತಿರುವ ಸಾಲು ಮರಗಳು. ಇದು ಶಿವಾಜಿಯ ಪಾಳೇಗಾರನಿಗಾಗಿ ಕಟ್ಟಿಸಿದ ಕೋಟೆಯಾಗಿತ್ತು. ಕೋಟೆಯಿಂದ ಬೆಳಗಾವಿ, ಖಾನಾಪುರ, ಗೋವಾ ಕರ್ನಾಟಕ ಗಡಿಯಲ್ಲಿರುವ ಕಾಡಿನ ದೃಶ್ಯ ಕಾಣಸಿಗುತ್ತದೆ. ಕೋಟೆಯೊಳಗೊಂದು ಶಿವ ದೇವಾಲಯ, ಅಲ್ಲೇ ಪಕ್ಕದಲ್ಲೊಂದು ಮೆಟ್ಟಿಲುಗಳಿರುವ ಬಾವಿ ಮತ್ತು ಒಂದೆರಡು ನೆಲಗಟ್ಟುಗಳಿವೆ. ಇವಿಷ್ಟು ಬಿಟ್ಟರೆ ಮತ್ತೇನೂ ಇಲ್ಲ.

ರಾಜಹಂಸಘಡದ ಸುತ್ತಲೂ ಈಗ ಹಳ್ಳಿಗಳು ಬೆಳೆದಿರುವುದರಿಂದ ಕಾಡಿದ್ದ ಯಾವುದೇ ಕುರುಹು ಉಳಿದಿಲ್ಲ. ದೂರದಲ್ಲಿ ಖಾನಾಪುರದ ಆಚೆ ಗೋವಾ ಗಡಿಯಲ್ಲಿ ಕಾಡಿನಿಂದ ಆವೃತವಾದ ಬೆಟ್ಟಗಳು ಕಾಣಿಸುತ್ತಿದ್ದವು. ಮತ್ತೊಂದು ಕಡೆ ವಿಶಾಲವಾಗಿ ಬೆಳೆದು ನಿಂತಿದ್ದ ಬೆಳಗಾವಿ ನಗರ.

ಕೆಳಗಿಳಿಯುವಾಗ ಸಣ್ಣ ಜಾಗದಲ್ಲಿ ಬಣ್ಣ ಬಣ್ಣದ ಹೂವುಗಳು. ಆ ಒಂದು ಸಣ್ಣ ಜಾಗ ಬಿಟ್ಟರೆ ಬೇರೆ ಎಲ್ಲೂ ಅವು ನಮಗೆ ಗೋಚರಿಸಲಿಲ್ಲ. ಒಂದೇ ತಾಸಿನಲ್ಲಿ ಎಳ್ಳೂರು ತಲುಪಿ, ೪ ಗಂಟೆಯ ಬಸ್ಸಿನಲ್ಲಿ ೭ ಕಿಮಿ ದೂರವಿರುವ ಬೆಳಗಾವಿಯೆಡೆ ಹೊರಟೆವು.

ರಾಜಹಂಸಘಡದ ಚಿತ್ರಗಳನ್ನು ಇಲ್ಲಿ ಕಾಣಬಹುದು.

5 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಚೆನ್ನಾಗಿದೆ.

ಸಿಂಧು sindhu ಹೇಳಿದರು...

ರಾಜೇಶ್,

ನಿಮ್ಮ ಯೂಷುವಲ್ ಚಾರಣಕ್ಕಿಂತ ಬೇರೆಯ ಅನುಭವ, ಹೊಸನೋಟ. ಚೆನ್ನಾಗಿದೆ. ನೀವು ಇಷ್ಟೊಂದು ಓಡಾಡಿದರೆ ಹೇಗೆ, ನಾನು ಓಡಾಡುವುದಿರಲಿ, ಓದಲೂ ಸಮಯವಾಗುತ್ತಿಲ್ಲ.. :)

ರಾಜೇಶ್ ನಾಯ್ಕ ಹೇಳಿದರು...

ಸುಧೀರ್,
ಏನು ಚೆನ್ನಾಗಿದೆ....?

ಸಿಂಧು,
ಕಾಲಲ್ಲಿ ಶಕ್ತಿ , ಮನಸಲ್ಲಿ ಉತ್ಸಾಹ ಮತ್ತು ಓಡಾಡಲು ಸಮಯ ಇರೋವರೆಗೆ ಓಡಾಡುದು. ಈ ೩ರಲ್ಲಿ ಯಾವುದು ಯಾವಾಗ ಕೈಕೊಡುತ್ತೆ ಎಂದು ಹೇಳಲಾಗದು. ಆದ್ದರಿಂದ ಎಲ್ಲವೂ ಸರಿಯಿದ್ದಾಗಲೇ ಕರ್ನಾಟಕವನ್ನು ಆದಷ್ಟು ನೋಡಿಬಿಡುವುದು.

Srik ಹೇಳಿದರು...

I agree with Rajesh.

Srik ಹೇಳಿದರು...

Rajahamsagadha reminded me of Skandagiri near Bangalore. This one seems to be a bigger fort, but Skandagiri has a very trivial 'koTe' and it offers no exhautic view either, but u can camp there to derive bigger pleasure. It hosted only shrubs and remains of an era in the past. As usual, a temple atop the hill, that has been destroyed some times in the history.

Your experience of Rajahamsagadha made a good reading. A crowd of 32!! Unimaginable for me... I usually fail to mobilize at least 8 people to accompany me!!