ಶನಿವಾರ, ಜೂನ್ 30, 2007

ಬಾಳೆ ಜಲಧಾರೆ ಮತ್ತು ಒಂದು ಕೋಟೆ


ರಸ್ತೆಯ ಪಕ್ಕದಲ್ಲೇ ಸುಮಾರು ೧೨೦ ಅಡಿಯೆತ್ತರದಿಂದ ಧುಮುಕುವ ಜಲಪಾತವೊಂದು ಕಾಣಬರುವುದು. ಅಗೋಸ್ಟ್ ೮, ೨೦೦೪ರಂದು ನನ್ನ ಯಮಾಹವನ್ನು ಇತ್ತ ಓಡಿಸಿದೆ. ಊರು ದಾಟಿದ ಕೂಡಲೇ ಆರಂಭವಾಗುವ ಘಟ್ಟದ ರಸ್ತೆಯಲ್ಲಿ ೮ಕಿಮಿ ಸಾಗಿದ ನಂತರ ರಸ್ತೆಯ ಪಕ್ಕದಲ್ಲೇ ಕಾಣಬರುವುದು ಈ ಜಲಪಾತ. ವಾಹನದಿಂದ ಇಳಿಯುವ ಅವಶ್ಯಕತೆಯೇ ಇಲ್ಲ. ರಸ್ತೆಗೆ ಅಷ್ಟು ಸಮೀಪದಲ್ಲಿದೆ ಈ ಜಲಧಾರೆ. ಇದೊಂದು 'ಮಳೆಗಾಲದ ಜಲಧಾರೆ'.



ಜುಲಾಯಿ ೩೦, ೨೦೦೬ರಂದು ಒಂದು ಕೋಟೆಗೆ ಹೋಗುವಾಗ ಮತ್ತದೇ ದಾರಿಯಲ್ಲಿ ಪಯಣ. ಈ ಬಾರಿ ನೀರಿನ ಪ್ರಮಾಣ ನಾನು ಕಳೆದ ಬಾರಿ ತೆರಳಿದ್ದಕ್ಕಿಂತ ಕಡಿಮೆಯಿತ್ತು.



ಹಾಗೆ ಮುಂದೆ ಮತ್ತೆ ೧೪ಕಿಮಿ ಕ್ರಮಿಸಿ ಹೋಟೆ ಇರುವ ನಗರ ತಲುಪಿದೆ. ಆ ದಿನ ಇಲ್ಲೆಲ್ಲಾ ವಿಪರೀತ ಮಳೆ. ನನಗೆ ಮಳೆಯಲ್ಲಿ ಬೈಕು ಓಡಿಸುವುದೆಂದರೆ ತುಂಬಾ ಇಷ್ಟ. ಆ ಸವಾರಿಯನ್ನು ನಾನು ಬಹಳ ಎಂಜಾಯ್ ಮಾಡಿದೆ. ಜಲಪಾತವನ್ನು ನೋಡಿ ಒಂದೆರಡು ಕಿಮಿ ಕ್ರಮಿಸಿದ ಕೂಡಲೇ ಶುರುವಾದ ಮಳೆ, ನಾನು ಕೋಟೆ ನೋಡಿ ಹಿಂತಿರುಗುವವರೆಗೂ ಕ್ಷೀಣಿಸಲಿಲ್ಲ. ಮಳೆಯಲ್ಲೇ ನಿಧಾನವಾಗಿ ಬೈಕನ್ನು ಚಲಾಯಿಸುತ್ತಾ ನಗರ ತಲುಪಿದೆ. ಮಳೆ ಕಡಿಮೆಯಾದ ನಂತರ ಕೋಟೆಯೊಳಗೆ ಹೋಗೋಣವೆಂದು ಬೈಕನ್ನು ಕೋಟೆಯ ಹೆಬ್ಬಾಗಿಲನ್ನು ದಾಟಿ ಕೋಟೆಯ ಮತ್ತೊಂದು ಬದಿಯಿರುವ ಕೋಟೆಕೆರೆಯತ್ತ ಓಡಿಸಿದೆ.


ಕೋಟೆಕೆರೆ ಮೈದುಂಬಿ ಉಕ್ಕಿ ಹರಿಯುತ್ತಿತ್ತು. ಈ ಕೆರೆಯ ಆ ಬದಿಯಲ್ಲಿ ಬೈಕನ್ನು ನಿಲ್ಲಿಸಿ ಅಲ್ಲಿಂದ ಕೋಟೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದೆ. ಮಳೆ ಸ್ವಲ್ಪ ಹೊತ್ತು ನಿಂತಿತು. ಕೂಡಲೇ ಹತ್ತಾರು ಫೋಟೊ ತೆಗೆದೆ. ನಂತರ ಮತ್ತೆ ಮಳೆ ಶುರು. ಅಲ್ಲೇ ೨೦ನಿಮಿಷ ಕಾದರೂ ಮಳೆ ಕಡಿಮೆಯಾಗಲಿಲ್ಲ. ಮತ್ತೆ ನಿಧಾನವಾಗಿ ಬೈಕನ್ನು ಕೋಟೆಯತ್ತ ಚಲಿಸಿದೆ. ಕೋಟೆಯ ಪಾರ್ಶ್ವದಲ್ಲಿ ಇನ್ನೂ ಸ್ವಲ್ಪ ಹೊತ್ತು ಬೈಕು ನಿಲ್ಲಿಸಿದೆ. ಮಳೆ ಹೊಯ್ಯುತ್ತಲೇ ಇತ್ತು. ಇನ್ನೂ ಕಾದು ಪ್ರಯೋಜನವಿಲ್ಲವೆಂದು ಬೈಕನ್ನು ಕೋಟೆಯ ಹೆಬ್ಬಾಗಿಲಿನ ಹೊರಗೆ ನಿಲ್ಲಿಸಿ ಕೋಟೆಯೊಳಗೆ ಹೆಜ್ಜೆಯಿಟ್ಟೆ. ಎಡೆಬಿಡದೆ ಒಂದೇ ಸವನೆ ಸುರಿಯುತ್ತಿದ್ದ ಮಳೆಯಲ್ಲಿ ಕೋಟೆ ವಿಜೃಂಭಿಸುತ್ತಿತ್ತು ಮತ್ತು ಒಳಗಿನ ನೋಟ ನಾನು ಬೆರಗಾಗುವಷ್ಟು ಬದಲಾಗಿತ್ತು. ಭಾರತೀಯ ಪುರಾತತ್ವ ಇಲಾಖೆ ಇಲ್ಲಿ ಪ್ರಶಂಸನೀಯ ಕೆಲಸ ಮಾಡಿದೆ.


೨೦೦೩ರ ಜುಲಾಯಿ ತಿಂಗಳಲ್ಲಿ ತೀರ್ಥಹಳ್ಳಿ ಸಮೀಪ 'ಅರಳ ಸುರಳಿ' ಎಂಬಲ್ಲಿರುವ ಅಚ್ಚಕನ್ಯಾ ಜಲಧಾರೆಯನ್ನು ನೋಡಿಬರೋಣವೆಂದು ತೆರಳಿದ್ದೆ. ತೀರ್ಥಹಳ್ಳಿ - ಸಾಗರ ರಸ್ತೆಯಲ್ಲಿ ಸಿಗುವ ಕೋಣಂದೂರಿನಲ್ಲಿ ಮುಖ್ಯ ರಸ್ತೆ ಬಿಟ್ಟು ತೆರಳಿದರೆ ಅರಳ ಸುರಳಿ. ತೀರ್ಥಹಳ್ಳಿಯಿಂದ ೨೫ಕಿಮಿ ದೂರ. ಅರಳ ಸುರಳಿಯಿಂದ ಒಂದೆರಡು ಕಿಮಿ ಮಣ್ಣಿನ ರಸ್ತೆಯಲ್ಲಿ ತೆರಳಿದರೆ ಅಚ್ಚಕನ್ಯಾ ಜಲಧಾರೆ. ಇದು ಕೇವಲ ೧೨ಅಡಿ ಎತ್ತರವಿರುವ ಸಣ್ಣ ಜಲಧಾರೆಯಾಗಿದ್ದರೂ ಶಿವಮೊಗ್ಗ ಜಿಲ್ಲಾ ಗಜೆಟೀಯರ್-ನಲ್ಲಿ ಪ್ರವಾಸಿ ತಾಣವೆಂದು ದಾಖಲಾಗಿದೆ. ಇದರ ಒಂದೇ ಪ್ರಾಮುಖ್ಯತೆಯೆಂದರೆ, ಇಲ್ಲಿಂದ ಹಳ್ಳಗುಂಟ ೩ಕಿಮಿ ಮೇಲ್ಗಡೆ ಅಂಬುತೀರ್ಥದಲ್ಲಿ ಉದ್ಭವಿಸುವ ಶರಾವತಿ ನದಿಯಿಂದ ಉಂಟಾಗುವ ಪ್ರಥಮ ಜಲಪಾತವಿದು! ನದಿಯ ಅಗಲ ನೋಡಿ ಇದು ಶರಾವತಿ ಇರಬಹುದೇ ಎಂದು ಆಶ್ಚರ್ಯವಾಯಿತು. ಉಗಮ ಸ್ಥಳದಿಂದ ಸ್ವಲ್ಪವೇ ದೂರವಿರುವುದರಿಂದ ಅಗಲ ಇಷ್ಟು ಕಿರಿದಾಗಿರಬಹುದು.

ಅರಳ ಸುರಳಿಯಲ್ಲಿ ಹಳ್ಳಿಗರೊಬ್ಬರ ಸಲಹೆಯಂತೆ ಶಾರ್ಟ್-ಕಟ್ ತಗೊಂಡು ಈ ಕೋಟೆಯಿರುವ ಊರಿಗೆ ಬಂದು ತಲುಪಿದೆ. ಮುಂದೆ ಕೋಟೆಯ ದ್ವಾರ ಭವ್ಯವಾಗಿ ಕಾಣಿಸಿದಾಗ ಒಳಗೆ ತೆರಳಿದೆ, ಆಘಾತಗೊಂಡೆ. ಎಲ್ಲಾ ಕಡೆ ಗಲೀಜು, ಮುಳ್ಳು, ಪೊದೆಗಳು ಇಡೀ ಕೋಟೆಯನ್ನು ಆವರಿಸಿಕೊಂಡಿದ್ದವು. ಅಲ್ಲಿಂದಲೇ ಹಿಂತಿರುಗಿದೆ.


ಆದರೆ ಈ ಬಾರಿ ಒಳಗೆ ಯಾವುದೇ ಪೊದೆಗಳಿಲ್ಲ. ಎಲ್ಲಾ ಕ್ಲೀನ್. ಶಿವಪ್ಪ ನಾಯಕ ಮತ್ತು ಇತರರು ದರ್ಬಾರು ನಡೆಸುತ್ತಿದ್ದ ಸ್ಥಳ ಕೋಟೆಯ ಮಧ್ಯದಲ್ಲೇ ಇದೆ. ಉಳಿದ ಕೆಲವು ನೆಲಗಟ್ಟುಗಳ ಮಹತ್ವ ಗೊತ್ತಾಗಲಿಲ್ಲ. ಅಲ್ಲೇನಿತ್ತು ಎಂದು ಫಲಕಗಳನ್ನು ಹಾಕಿದರೆ ಚೆನ್ನಾಗಿರುತ್ತಿತ್ತು. ಮಳೆಯ ನಡುವೆಯೇ ಎಲ್ಲಾ ಕಡೆ ಅಡ್ಡಾಡಿದೆ. ಬುರುಜುಗಳನ್ನು ಹತ್ತಿ ಕೋಟೆಕೆರೆಯ ಅಂದವನ್ನು ವೀಕ್ಷಿಸಿದೆ. ಅಲ್ಲೊಂದೆರಡು ಬಾವಿಗಳು. ಉತ್ಖನನ ಇನ್ನೂ ನಡೆದಿತ್ತು.

ಸುಮಾರು ೩೦ನಿಮಿಷ ಕೋಟೆಯೊಳಗೇ ಕೂತು ಮಳೆ ಕಡಿಮೆಯಾಗಲೆಂದು ಕಾದೆ. ನನಗೆ ಫೋಟೊ ತೆಗೆಯಬೇಕಿತ್ತು. ಆದರೆ ಮಳೆಗೆ ಅದನ್ನು ಹೇಳುವರು ಯಾರು? ಅದಂತೂ ಪುರುಸೊತ್ತಿಲ್ಲದಂತೆ ಸುರಿಯುತ್ತಿತ್ತು. ಆದರೂ ಹೇಗಾದರೂ ಮಾಡಿ ಮಳೆಯಲ್ಲೇ ಒಂದೆರಡು ಫೋಟೋ ತೆಗೆದೆ. ಮಳೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣದಿದ್ದಾಗ ಮರಳಿ ಉಡುಪಿಯತ್ತ ಹೊರಟೆ.

ಮಾಹಿತಿ: ಎಂ.ಶರಾಮ್

10 ಕಾಮೆಂಟ್‌ಗಳು:

Srik ಹೇಳಿದರು...

What a beauty and what a pleasant narration!

I wish I go there immediately. How far is this from Udupi?

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್,

ಉಡುಪಿಯಿಂದ ಬಾಳೆಬರೆ ಜಲಧಾರೆಗೆ ೭೦ ಕಿಮಿಗಳು ಮತ್ತು ನಗರಕ್ಕೆ ೯೨ ಕಿಮಿಗಳು.

Aravind GJ ಹೇಳಿದರು...

ಮತ್ತೊಂದು ಮಳೆಗಾಲದ ಜಲಪಾತವನ್ನು ತೋರಿಸಿದ್ದಕ್ಕೆ ಧನ್ಯವಾದಗಳು!! ಹತ್ತು ವರ್ಷದ ಹಿಂದೆ ನಗರ ಕೋಟೆಗೆ ಹೋಗಿದ್ದೆ. ಬರಿ ಕಲ್ಲು ಮುಳ್ಳು ತುಂಬಿದ ಜಾಗವಾಗಿತ್ತು. ಈಗ ಮತ್ತೊಮ್ಮೆ ಹೋಗಬೇಕು ಅನ್ನಿಸ್ತಾ ಇದೆ.

Unknown ಹೇಳಿದರು...

chitragaLu bahaLa suMdaravaagide

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

Mahantesh ಹೇಳಿದರು...

jalapathgaLa darshan anno title tuMba chennagide...

Srikanth - ಶ್ರೀಕಾಂತ ಹೇಳಿದರು...

ಎಲ್ಲಿಂದ ಹುಡುಕ್ತೀರೋ ಇಷ್ಟೊಂದು ಜಾಗಗಳನ್ನು! ನಿಮ್ಮ ಬ್ಲಾಗ್ ನೋಡ್ತಿದ್ರೆ ಕರ್ನಾಟಕದಲ್ಲಿ ನಮಗೆ ಗೊತ್ತಿಲ್ಲದ ಜಾಗಗಳು ಲೆಕ್ಕವಿಲ್ಲದಷ್ಟಿವೆ ಅಂತ ಗೊತ್ತಾಗತ್ತೆ.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಈಗ ನಗರ ಕೋಟೆ ನಳನಳಿಸುತ್ತಿದೆ. ಮೊದಲಿನಂತಿಲ್ಲ.

ಸಂಗೊಳ್ಳಿ,
ನೀವು ಹೇಳುವ ಮೊದಲೇ 'ಬನವಾಸಿ ಬಳಗ'ದ 'ಏನ್ ಗುರು'ಗೆ ಭೇಟಿ ನೀಡಿ, ನನ್ನ ಬ್ಲಾಗ್ ನಿಂದ ಕೊಂಡಿ ಕೂಡಾ ಕೊಟ್ಟಾಗಿದೆ.

ಮಹಾಂತೇಶ್,
ಆ ಶೀರ್ಷಿಕೆ ಕೊಡಬಹುದಿತ್ತೇನೊ...

ಶ್ರೀನಾಥ್,
ಅಯ್ಯೋ, ಇದೇನು ಮಹಾ ಬಿಡಿ. ನಿಮಗೆ ಗೊತ್ತಿರುವ ಅದೆಷ್ಟೋ ಜಾಗಗಳ ಬಗ್ಗೆ ನನಗೂ ಗೊತ್ತಿಲ್ಲವಲ್ಲ. ಕೋಟೆಬೆಟ್ಟದ ಬಗ್ಗೆ ನನಗೆ ಗೊತ್ತೇ ಇರಲಿಲ್ಲ.

ಸಿಂಧು sindhu ಹೇಳಿದರು...

ರಾಜೇಶ್,

ಇವತ್ತು ಓದಿದೆ ಇದನ್ನು..
ತುಂಬ ಚೆನ್ನಾಗಿದೆ.
ಚಿತ್ರಗಳು ಇಲ್ಲೆ ಕಿಟಕಿಯಿಂದ ಹೊರಗಿಣುಕಿ ನೋಡಿದಾಗ ಕಂಡಷ್ಟು ಸಹಜವಾಗಿ ಬಂದಿವೆ.. ಅವುಗಳಿಗೆ ಒಪ್ಪ ಕೊಟ್ಟ ನಿಮ್ಮ ಸೂಕ್ತ ಬರಹದ ಫ್ರೇಮ್... ಒಂದು ಅಪರೂಪದ ಅನುಭವ.

ನಾನು ಹೋಗಲಾಗದ ಜಾಗಗಳ ವಿವರವನ್ನು ನಿಮಗೆ ಕೊಟ್ಟು, ನಿಮ್ಮ ಬ್ಲಾಗ್ ಓದಿದರೆ ಸಾಕು ಅಂತನ್ನಿಸುತ್ತಿದೆ.. :)

ರಾಜೇಶ್ ನಾಯ್ಕ ಹೇಳಿದರು...

ಸಿಂಧು,
ಹೊಗಳಿಕೆಗೆ ಧನ್ಯವಾದಗಳು.

Uday ಹೇಳಿದರು...

ತುಂಬ ಉತ್ತಮವಾದ ಛಾಯಾಚಿತ್ರಗಳು..