ಮಂಗಳವಾರ, ಮೇ 22, 2007

ಸ್ವರೂಪ್ ಸ್ಮರಣೆ


ನಮ್ಮ ಕೂಸಳ್ಳಿ ಜಲಪಾತದ ಚಾರಣ ಬಹಳ ಚೆನ್ನಾಗಿತ್ತು, ನನಗೂ ಆ ಸ್ಥಳ ತುಂಬಾನೇ ಹಿಡಿಸಿತ್ತು. ಅಂತೆಯೇ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕೂಸಳ್ಳಿಗೆ ನಮ್ಮ ಚಾರಣದ ಬಗ್ಗೆ ಲೇಖನವೊಂದನ್ನು ಕಳಿಸಿದೆ. ಯಾವುದೇ ಪತ್ರಿಕೆಗೆ ನಾನು ಕಳಿಸಿದ ಪ್ರಥಮ ಲೇಖನ ಅದಾಗಿತ್ತು.

೨೦೦೪ ನವೆಂಬರ್ ತಿಂಗಳ ಅದೊಂದು ದಿನ (ನವೆಂಬರ್ ೯ ಇದ್ದಿರಬಹುದು) ಮುಂಜಾನೆ ೧೦ರ ಹೊತ್ತಿಗೆ ಗೆಳೆಯ ದಿನೇಶ್ ಹೊಳ್ಳರ ಫೋನು. ಇವತ್ತಿನ ವಿಜಯ ಕರ್ನಾಟಕ ನೋಡಿದ್ರಾ? ಎಂಬ ಪ್ರಶ್ನೆ. ಕೆಟ್ಟ ಸುದ್ದಿ ಅನ್ನುತ್ತಾ, ಕೂಸಳ್ಳಿ ಜಲಪಾತದಲ್ಲಿ ಚಾರಣಿಗನೊಬ್ಬನ ಮರಣದ ಬಗ್ಗೆ ಸುದ್ದಿ ಬಂದಿರುವುದಾಗಿ ತಿಳಿಸಿದರು. ಅಷ್ಟಕ್ಕೆ ನಿಲ್ಲಿಸದೇ, 'ನೀವು ಬರೆದ ಲೇಖನವನ್ನು ಆಧಾರವಾಗಿಟ್ಟುಕೊಂಡೇ ಅಣ್ಣ ತಮ್ಮಂದಿರಿಬ್ಬರು ಬಂದಿದ್ದರು, ಅವರಲ್ಲೊಬ್ಬ ದುರ್ಮರಣಕ್ಕೀಡಾದ' ಎಂದಾಗ ಅದೇನೋ ಕಳವಳ. ಒಬ್ಬ ಚಾರಣಿಗನ ಸಾವಿಗೆ ಕಾರಣನಾದೆನಲ್ಲ ಎಂಬ ಚಡಪಡಿಕೆ. ಆ ದಿನವೆಲ್ಲಾ ಯಾವುದೂ ಸರಿಯಾಗಿ ನಡೆಯಲಿಲ್ಲ. ದೊಡ್ಡ ಬಜೆಟಿನ ಜಾಹೀರಾತೊಂದರಲ್ಲಿ ತಪ್ಪು ಮಾಡಿ ಕ್ಲೈಂಟ್ ಕಡೆಯಿಂದ ಉಗಿಸಿಕೊಂಡೆ. ಎಂದೂ ಆಗದ ತಪ್ಪುಗಳು ಅಂದಾದವು. ಮನಸ್ಸು ಆಫ್ ಆಗಿತ್ತು.

ಬಾಕಿ ಉಳಿದಿದ್ದ ಸಣ್ಣ ಪುಟ್ಟ ಕೆಲಸಗಳನ್ನು ಸಹೋದ್ಯೋಗಿ ಪ್ರಶಾಂತ್ ಕೈಗೊಪ್ಪಿಸಿ ಸಂಜೆ ಬೇಗನೇ ಉಡುಪಿ ಬಸ್ಸು ಹತ್ತಿ ಮನೆಗೆ ಬಂದುಬಿಟ್ಟೆ. ಮನೆಗೆ ಬಂದರೂ ಎಲ್ಲಿದೆ ಮನಸ್ಸಿಗೆ ನೆಮ್ಮದಿ? ಮತ್ತದೇ ಚಿಂತೆ, ಯೋಚನೆ. ಯಾರಿದ್ದಿರಬಹುದು? ಹೇಗೆ ಪ್ರಾಣ ಕಳಕೊಂಡಿರಬಹುದು? ಏನಾಗಿರಬಹುದು? ಹಾಳಾದ್ದು; ಯಾಕಾದರೂ ಲೇಖನ ಬರೆದೆನೋ...ಬರೆಯದಿದ್ದಲ್ಲಿ ಒಬ್ಬ ಚಾರಣಿಗನ ಜೀವವಾದರೂ ಉಳಿಯುತ್ತಿತ್ತಲ್ಲ ಎಂಬ ಮಾತು ಬಹು ಕಾಡುತ್ತಿತ್ತು. ಯಾರ ಮಗನೋ? ಯಾರ ಸಹೋದರನೋ? ಮದುವೆಯಾಗಿತ್ತೆ? ಮಕ್ಕಳಿದ್ದರೆ? ಎಂಬಿತ್ಯಾದಿ ಪ್ರಶ್ನೆಗಳು. ಉತ್ತರ ಕೊಡುವವರು ಯಾರಿರಲಿಲ್ಲ. ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅದೇ ಶನಿವಾರದಂದು(ನವೆಂಬರ್ ೧೩, ೨೦೦೪) ಮಧ್ಯಾಹ್ನ ಕಲ್ಲಿಕೋಣೆಯತ್ತ ಯಮಾಹ ಓಡಿಸಿದೆ.

ಕಲ್ಲಿಕೋಣೆ ತಲುಪಿದಾಗ ಸಮಯ ೪ ಆಗಿತ್ತು. ಅಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ ಕಲ್ಲಿಕೋಣೆ ಮತ್ತು ಲಕ್ಷ್ಮಣ ನನ್ನನ್ನು ಕಂಡೊಡನೆ ಮನೆಯೆಡೆ ಬಂದರು. ಮೃತನಾದವನ ಬಗ್ಗೆ ವಿಚಾರಿಸಿದೆ. ಇದ್ದ ಪ್ರಶ್ನೆಗಳನ್ನೆಲ್ಲಾ ಕೇಳಿದೆ. ಬಂದವರು ಅಣ್ಣ ತಮ್ಮಂದಿರೆಂದು, ಮೃತನಾದವನು ಹಿರಿಯವನೆಂದು, ಅವಿವಾಹಿತನೆಂದು, ಬೆಂಗಳೂರಿನವರೆಂದು, ಇಬ್ಬರೇ ಮಕ್ಕಳೆಂದು, ಅನುಭವಿ ಚಾರಣಿಗರೆಂದು ತಿಳಿದುಕೊಂಡೆ. ಹಾಗೆ ಮಾತು ಮುಂದುವರಿಯಿತು.

ಬೆಂಗಳೂರಿನ ಸ್ವರೂಪ್ ಮತ್ತು ಶ್ರೀನಾಥ್ ಸಹೋದರರು. ಇಬ್ಬರೂ ಅನುಭವಿ ಚಾರಣಿಗರು. ಇವರಿಗೆ ಇಬ್ಬರೇ ಚಾರಣಕ್ಕೆ ಹೋಗುವುದು ಅಭ್ಯಾಸವಾಗಿಬಿಟ್ಟಿತ್ತು. ಕರ್ನಾಟಕದ ಕಾಡುಗಳನ್ನು, ಜಲಧಾರೆಗಳನ್ನು ಸುತ್ತಾಡಿ ಬಲ್ಲವರಾಗಿದ್ದರು. ನವೆಂಬರ್ ೨೦೦೪ರ ದೀಪಾವಳಿ ರಜೆಯಂದು ಕೂಸಳ್ಳಿ ಜಲಪಾತಕ್ಕೆ ಚಾರಣಗೈಯುವ ಸಲುವಾಗಿ ಅದೊಂದು ಮುಂಜಾನೆ ಕಲ್ಲಿಕೋಣೆಗೆ ಆಗಮಿಸಿದರು. ಡೆಕ್ಕನ್ ಹೆರಾಲ್ಡ್ ಲೇಖನದಲ್ಲಿ ನಾನು ಸೂಚಿಸಿದಂತೆ ಶಿರೂರಿನಿಂದ ಕಲ್ಲಿಕೋಣೆಗೆ ಆಟೋವೊಂದರಲ್ಲಿ ಆಗಮಿಸಿ, ಆತನಿಗೆ ಮರಳಿ ಸಂಜೆ ಬರುವಂತೆ ಹೇಳಿ, ನಾರಾಯಣ ಕಲ್ಲಿಕೋಣೆಯ ಮನೆಯವರೊಂದಿಗೆ ಸ್ವಲ್ಪ ಕಾಲ ಕಳೆದರು. ನಂತರ ದಾರಿ ಕೇಳಿ ಜಲಪಾತದೆಡೆ ಮುಂದುವರಿದರು. ಆ ದಿನ ಮಧ್ಯಾಹ್ನದ ಹೊತ್ತಿಗೆ ಮೋಡ ಕವಿಯಲು ಶುರುವಾಗಿದ್ದು ಆಗಾಗ ಹನಿ ಮಳೆ ಬೀಳುತ್ತಿತ್ತು ಎಂದು ನಾರಾಯಣ ಕಲ್ಲಿಕೋಣೆಯ ನೆನಪು.

ನಾವೆಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರಿಂದ ನಮಗ್ಯಾರಿಗೂ ಅವರೊಂದಿಗೆ ಹೋಗಲು ಆಗಲಿಲ್ಲ. ಒಂದು ವೇಳೆ ಹೋಗಿದ್ದರೆ ಈ ಅನಾಹುತ ಆಗುತ್ತಿರಲಿಲ್ಲವೇನೋ ಎಂದು ನಾರಾಯಣರ ಆಳಲು. ಮಧ್ಯಾಹ್ನ ಸುಮಾರು ೩.೩೦ರ ಹೊತ್ತಿಗೆ ಶ್ರೀನಾಥ್ ಒಬ್ಬರೇ ಅಳುತ್ತಾ, ಮಾತನಾಡಲೂ ಆಗದೇ, ಏದುಸಿರು ಬಿಡುತ್ತಾ ನಾರಾಯಣರ ಮನೆಯೆಡೆ ಬಂದಾಗ ಏನೋ ಅನಾಹುತ ಘಟಿಸಿದೆ ಎಂದು ಮನೆಯವರಿಗೆ ಅರಿವಾಗತೊಡಗಿತು. ವಿಷಯ ತಿಳಿದು ನಾರಾಯಣ, ಆತನ ಮಗ ಲಕ್ಷ್ಮಣ ಮತ್ತು ಮತ್ತಿಬ್ಬರು ಶ್ರೀನಾಥ್ ರೊಂದಿಗೆ ಜಲಪಾತದೆಡೆ ತೆರಳಿದರು.

ಕಲ್ಲಿಕೋಣೆಯಿಂದ ಅನಾಹುತ ನಡೆದ ಸ್ಥಳಕ್ಕೆ ೬೦ ನಿಮಿಷಗಳ ಹಾದಿ. ಸ್ವರೂಪ್ ಬಿದ್ದಲ್ಲಿ ಅವರ ಬ್ಯಾಗ್ ಮಾತ್ರ ನೀರಲ್ಲಿ ತೇಲಾಡುತ್ತಿತ್ತು. ಉದ್ದನೆಯ ಕೋಲೊಂದರಿಂದ ನೀರಲ್ಲಿ ತಡಕಾಡಿ ಮೃತದೇಹವನ್ನು ಹುಡುಕುವ ಪ್ರಯತ್ನ ಮಾಡಲಾಯಿತು. ಮೃತದೇಹವನ್ನು ಅಂದೇ ಮೇಲೆತ್ತಲಾಯಿತೋ ಅಥವಾ ಅಂದು ಸಿಗದೇ ಮರುದಿನ ಮುಂಜಾನೆ ಮತ್ತೆ ತೆರಳಿ ಮೇಲೆತ್ತಲಾಯಿತೋ ಎಂಬುದರ ಬಗ್ಗೆ ಅವರೆಲ್ಲ ಹೇಳಿದ್ದು ನನಗೆ ಸರಿಯಾಗಿ ನೆನಪಿಲ್ಲ. ಆದರೆ ಮೃತದೇಹವನ್ನು ನೀರಿನಿಂದ ಮೇಲೆತ್ತಿ ಅಲ್ಲೇ ಬಂಡೆಯೊಂದರ ಮೇಲಿಟ್ಟು, ಎಲ್ಲರೂ ಕಲ್ಲಿಕೋಣೆಗೆ ಮರಳಿದ್ದನ್ನು ನಾರಾಯಣ ಮತ್ತು ಲಕ್ಷ್ಮಣ ನನಗೆ ಹೇಳಿದ್ದು ಚೆನ್ನಾಗಿ ನೆನಪಿದೆ. ಮೃತದೇಹವೊಂದನ್ನು ಹಾಗ್ಯಾಕೆ ಬಿಟ್ಟುಬಂದಿರಿ ಎಂದು ನಾನು ಕೇಳಲು, ಪೊಲೀಸರಿಂದ ಅನಾವಶ್ಯಕ ಕಾಟವನ್ನು ತಪ್ಪಿಸಿಕೊಳ್ಳಲು ಹಾಗೆ ಮಾಡಲು ಊರ ಜನರು ನಿರ್ಧರಿಸಿದರು ಎಂದು ನಾರಾಯಣ ತಿಳಿಸಿದರು.

ಘಟನೆ ನಡೆದ ಸ್ಥಳವನ್ನು ಲಕ್ಷ್ಮಣ ಎಷ್ಟೇ ವಿವರಿಸಿದರೂ ನನಗೆ ತಿಳಿಯಲಿಲ್ಲ. ಕಡೆಗೆ ಆರನೇ ಹಂತದ ಆಸುಪಾಸಿನಲ್ಲೆಲ್ಲೋ ಅನಾಹುತ ಆಗಿರಬೇಕು ಎಂದು ಗ್ರಹಿಸಿದೆ. ಜಾರಿ ಬೀಳುವಾಗ ಬಂಡೆಗಳಿಗೆ ತಲೆ ಬಡಿದು ನೀರಿಗೆ ಬೀಳುವ ಮೊದಲೇ ಸ್ವರೂಪ್ ಪ್ರಾಣಪಕ್ಷಿ ಹಾರಿಹೋಗಿತ್ತು. ಕಣ್ಣ ಮುಂದೆ ಅಣ್ಣನನ್ನು ಕಳಕೊಂಡು, ಏನು ಮಾಡಬೇಕೆಂದು ತೋಚದೆ, ೬೦ ನಿಮಿಷ ನಡೆದು ಕಲ್ಲಿಕೋಣೆಗೆ ಬರುವಾಗ ಶ್ರೀನಾಥ್ ಮನಸ್ಥಿತಿ ಹೇಗಿರಬಹುದೆಂದು ಊಹಿಸಲೂ ಸಾಧ್ಯವಾಗದು. ನಂತರ ಮತ್ತೆ ತೆರಳಿ ಮೃತದೇಹಕ್ಕಾಗಿ ಹುಡುಕಾಟ ನಂತರ ರಾತ್ರಿಯಾಗುತ್ತಿದ್ದಂತೆ ಕಲ್ಲಿಕೋಣೆಗೆ ವಾಪಾಸ್, ಅಬ್ಬಾ ವೇದನೆಯೇ. ಆ ರಾತ್ರಿ ಅವರು ಹೇಗೆ ಕಳೆದಿರಬಹುದು?

ಮರುದಿನ ಮಧ್ಯಾಹ್ನದ ಹೊತ್ತಿಗೆ ಶ್ರೀನಾಥ್ ತಂದೆಯವರು ಬೆಂಗಳೂರಿನಿಂದ ಕಲ್ಲಿಕೋಣೆಗೆ ಆಗಮಿಸಿದ್ದರು. ಪೊಲೀಸರೂ ಇದ್ದರು. 'ಈ ಸ್ಥಳದ ಬಗ್ಗೆ ನಿಮಗ್ಯಾರು ಮಾಹಿತಿ ನೀಡಿದರು' ಎಂದು ಪೊಲೀಸರು ಕೇಳಿದಾಗ, ಶ್ರೀನಾಥ್ ತನ್ನ ಬ್ಯಾಗಿನಿಂದ ನಾನು ಡೆಕ್ಕನ್ ಹೆರಾಲ್ಡ್ ನಲ್ಲಿ ಬರೆದಿದ್ದ ಲೇಖನವನ್ನು ಹೊರತೆಗೆದರು ಎಂದು ಲಕ್ಷ್ಮಣ ತಿಳಿಸಿದ. ಶ್ರೀನಾಥರ ತಂದೆ ಮತ್ತು ಪೊಲೀಸರು ವಿನಂತಿಸಿದ ಬಳಿಕ ಮತ್ತೆ ಘಟನೆ ನಡೆದಲ್ಲಿ ತೆರಳಿದ ಹಳ್ಳಿಗರು ಸ್ವರೂಪ್ ಮೃತದೇಹವನ್ನು ಕಲ್ಲಿಕೋಣೆಗೆ ತಂದರು.

ನಾನೇ ಸ್ವರೂಪ್ ಸಾವಿಗೆ ಕಾರಣ ಎಂಬ ಅಪರಾಧಿ ಭಾವನೆ ನನ್ನಲ್ಲಿ ಮುಡತೊಡಗಿತ್ತು. ಆ ಲೇಖನವನ್ನು ನಾನು ಬರೆಯದಿದ್ದರೆ ಕೂಸಳ್ಳಿ ಜಲಪಾತಕ್ಕೆ ಸ್ವರೂಪ್ ಮತ್ತು ಶ್ರೀನಾಥ್ ಬರುತ್ತಲೇ ಇರುತ್ತಿರಲಿಲ್ಲ. ಯಾರಲ್ಲಿ ಕ್ಷಮೆ ಕೇಳುವುದು ಎಂದು ಯೋಚಿಸುತ್ತಲೇ ೨ ವರ್ಷಗಳು ಉರುಳಿದವು. ಆ ನಂತರ ಯಾವುದೇ ಪತ್ರಿಕೆಗೆ ಲೇಖನವನ್ನು ನಾನು ಕಳಿಸಿಲ್ಲ. ಬ್ಲಾಗ್ ಶುರುಮಾಡುವ ಮೊದಲು ಬಹಳ ಯೋಚಿಸಿದ್ದೆ. ಆದರೆ ನಾನು ಭೇಟಿ ನೀಡಿದ ತಾಣಗಳನ್ನು ಇತರ ಪ್ರಕೃತಿ ಪ್ರಿಯರಿಗೆ ಪರಿಚಯ ಪಡಿಸುವ ಸುಲಭ ವಿಧಾನ ಬೇರೊಂದು ಇರಲಿಲ್ಲವಾದ್ದರಿಂದ ಬ್ಲಾಗಿಂಗ್ ಶುರುಮಾಡಿಬಿಟ್ಟೆ.

ಅಂತರ್ಜಾಲದಲ್ಲಿರುವ ನನ್ನ ಚಿತ್ರಗಳ ಸಂಗ್ರಹಕ್ಕೆ ಕಳೆದ ಫೆಬ್ರವರಿ ತಿಂಗಳ ಒಂದು ದಿನ ಬೆಂಗಳೂರಿನ ಶ್ರೀನಾಥ್ ಎಂಬವರಿಂದ ವಿ-ಅಂಚೆಯೊಂದು ಬಂತು. 'ನನಗೆ ಚಾರಣ ಅಂದರೆ ಇಷ್ಟ ಆದರೆ ಎರಡು ವರ್ಷಗಳ ಹಿಂದೆ ಕೂಸಳ್ಳಿ ಜಲಪಾತಕ್ಕೆ ಚಾರಣ ಮಾಡುವಾಗ ಅಣ್ಣನನ್ನು ಕಳಕೊಂಡ ಬಳಿಕ ಈಗ ಚಾರಣ ಕಡಿಮೆಯಾಗಿದೆ........' ಎಂದು ಶ್ರೀನಾಥ್ ಬರೆದಿದ್ದರು. ಅಂತೂ ೨ ವರ್ಷಗಳಿಂದ ಯಾರಿಗೆ ಕ್ಷಮೆ ಯಾಚಿಸಲು ಕಾಯುತ್ತಿದ್ದೇನೊ ಅವರ ಸಂಪರ್ಕ ಸಾಧ್ಯವಾಯಿತು. ಕೂಡಲೇ ಶ್ರೀನಾಥ್ ಗೆ ವಿ-ಅಂಚೆಯೊಂದನ್ನು ಬರೆದು ಕ್ಷಮೆ ಯಾಚಿಸಿದೆ. ಅವರು 'ಛೇ, ಇದರಲ್ಲಿ ನಿಮ್ಮದೇನು ತಪ್ಪು? ಹೊಸ ಜಲಪಾತವೊಂದನ್ನು ನಮಗೆ ಪರಿಚಯಿಸಿದಿರಿ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳಬೇಕು. ಇನ್ನು ಅನಾಹುತ ನಡೆದದ್ದು ನನ್ನ ದುರಾದೃಷ್ಟ. ಸ್ವಲ್ಪ ಹುಷಾರಾಗಿದ್ದರೆ ನನ್ನಣ್ಣ ಇವತ್ತು ಇರುತ್ತಿದ್ದ' ಎಂದು ವಿಷಯವನ್ನು ಅಲ್ಲೇ ಅದುಮಿದರು. ಈ ಕೆಳಗಿನ ಚಿತ್ರವನ್ನು ಅಣ್ಣತಮ್ಮಂದಿರಿಬ್ಬರು ಯಲ್ಲಾಪುರ ಸಮೀಪದ ಶಿರಲೆ ಜಲಪಾತಕ್ಕೆ ತೆರಳಿದಾಗ ತೆಗೆದದ್ದು. ನೀಲಿ ಜೀನ್ಸ್ ಪ್ಯಾಂಟ್ ಹಾಕಿರುವವರು ಸ್ವರೂಪ್ ಮತ್ತು ಬಿಳಿ ಅಂಗಿ ತೊಟ್ಟವರು ಶ್ರೀನಾಥ್.


ಸ್ವರೂಪ್ ಮರಣದ ಬಳಿಕ ಏನಾಯಿತು ಎಂಬುದು ನನಗೆ ತಿಳಿದಿತ್ತು. ಆದರೆ ಹೇಗಾಯಿತು ಎಂಬುದನ್ನು ಕೇವಲ ಶ್ರೀನಾಥ್ ಹೇಳಬಲ್ಲವರಿದ್ದರು. ಅವರ ಪ್ರಕಾರ ಐದನೆ ಹಂತದಲ್ಲಿ ಇಬ್ಬರೂ ಮನಸಾರೆ ಜಲಕ್ರೀಡೆಯಾಡಿದರು. ಅಪರಾಹ್ನ ೨ ಗಂಟೆಯ ಸುಮಾರಿಗೆ ಆಗಸದಲ್ಲಿ ಕರಿಮೋಡಗಳು ಮುಡಲಾರಂಭಿಸಿದವು ಮತ್ತು ಒಂದೆರಡು ಸಣ್ಣ ಮಳೆ ಅದಾಗಲೇ ಬಿದ್ದಿದ್ದರಿಂದ ಕಲ್ಲುಬಂಡೆಗಳು ಒದ್ದೆಯಾಗಿ ಜಾರುತ್ತಿದ್ದವು. ಮಳೆ ಬಿರುಸಾಗಿ ಬಂದರೆ ನಂತರ ಕಲ್ಲಿಕೋಣೆ ತಲುಪಲು ತಡವಾಗಬಹುದು ಎಂದು ಇಬ್ಬರೂ ಕೊಂಡುಹೋಗಿದ್ದ ತಿಂಡಿಯನ್ನೂ ತಿನ್ನದೆ ಅವಸರದಿಂದ ಹೊರಟರು. ಶ್ರೀನಾಥ್ ಪ್ರಕಾರ ಅಲ್ಲೊಂದು ೧೫ ಅಡಿಯಷ್ಟು ಅಂತರವನ್ನು ಸ್ವಲ್ಪ ಎಚ್ಚರಿಕೆಯಿಂದ ದಾಟಬೇಕಾಗಿತ್ತು, ಮತ್ತು ಅಗಷ್ಟೆ ಬಿದ್ದ ಮಳೆಯಿಂದ ಜಾರುತ್ತಿತ್ತು ಕೂಡಾ. ಸ್ವರೂಪ್ ಗಿಂತ ನಾಲ್ಕೈದು ಹೆಜ್ಜೆ ಮುಂದಿದ್ದ ಶ್ರೀನಾಥ್ ಆ ೧೫ ಆಡಿಯ ಸ್ಥಳವನ್ನು ಸಾವಕಾಶವಾಗಿ ಎಚ್ಚರಿಕೆಯಿಂದ ದಾಟಿ ಅಣ್ಣನಿಗೆ ನಿಧಾನವಾಗಿ ಬರುವಂತೆ ಹೇಳುತ್ತಾ ಮುಂದಿನ ಹೆಜ್ಜೆಯಿಟ್ಟರು. ಆಗಲೇ ಸ್ವರೂಪ್ ಜಾರಿ, ಹಿಡಿಯಲು ಆಧಾರವೇನೂ ಇರಲಿಲ್ಲವಾದ್ದರಿಂದ ಕೆಳಗೆ ಬಿದ್ದುಬಿಟ್ಟರು. ಸದ್ದು ಕೇಳಿ ಶ್ರೀನಾಥ್ ಹಿಂದೆ ತಿರುಗಿದರೆ ಅಲ್ಲಿ ಸ್ವರೂಪ್ ಇಲ್ಲ. ಕೆಳಗೆ ನೋಡಿದರೆ, ನೀರಿನಲ್ಲಿ ಸ್ವರೂಪ್ ಬ್ಯಾಗ್ ಮಾತ್ರ ತೇಲಾಡುತ್ತಿತ್ತು.

ದಂಗಾದ ಶ್ರೀನಾಥ್, ಆದಷ್ಟು ಬೇಗ ಕೆಳಗೆ ಬಂದು, ಅಣ್ಣನ ಹೆಸರನ್ನು ಕೂಗಿ ಕೂಗಿ ಕರೆದರು. ಉತ್ತರ ಎಲ್ಲಿಂದಲೂ ಬರಲಿಲ್ಲ...ನೀರ ಹರಿವಿನ ಶಬ್ದವೊಂದನ್ನು ಬಿಟ್ಟರೆ ಎಲ್ಲಾ ಕಡೆ ಮೌನ. ಅಚೀಚೆ ಎಲ್ಲಾ ಕಡೆ ಹುಡುಕಾಡಿದರು, ಅತ್ತರು, ರೋದಿಸಿದರು, ಆದರೆ ಕೇಳುವವರು ಯಾರೂ ಇರಲಿಲ್ಲ. ಶ್ರೀನಾಥ್ ಪ್ರಕೃತಿಯ ನಡುವೆ ಅಣ್ಣನನ್ನು ಕಳಕೊಂಡು ಒಬ್ಬಂಟಿಯಾಗಿಬಿಟ್ಟಿದ್ದರು. ಕೂಸಳ್ಳಿ ಜಲಪಾತ ಏನೂ ಅಗದೇ ಇರದಿದ್ದಂತೆ ಧುಮುಕುತ್ತಿತ್ತು, ನೀರು ತನ್ನ ಪಾಡಿಗೆ ಹರಿಯುತ್ತಿತ್ತು, ಮರ ಗಿಡಗಳು ಶ್ರೀನಾಥ್ ಪಾಡನ್ನು ನೋಡಿ ಮರುಗುತ್ತಿದ್ದರೆ, ಬಂಡೆಗಳು ಘಟನೆಗೆ ಮುಕಸಾಕ್ಷಿಗಳಾಗಿದ್ದವು. ಎಲ್ಲಾ ಕಡೆ ಹುಡುಕಾಡಿ ಅತ್ತು ಅತ್ತು ಏನು ಮಾಡಬೇಕೆಂದು ದಿಕ್ಕು ತೋಚದ ಶ್ರೀನಾಥ್ ಕಲ್ಲಿಕೋಣೆಯತ್ತ ಧಾವಿಸಿದರು. ಹೀಗೆ ಕಲ್ಲಿಕೋಣೆಯತ್ತ, ಎರಡೂ ಬದಿಯಿಂದ ದಟ್ಟ ಕಾಡಿನಿಂದ ಆವೃತವಾಗಿರುವ ಹಳ್ಳಗುಂಟ ಒಬ್ಬಂಟಿಯಾಗಿ ಧಾವಿಸುವಾಗ ಆ ಒಂದು ತಾಸು ಅವರ ಪಾಡು ...... ಊಹಿಸಲಸಾಧ್ಯ.

ಶ್ರೀನಾಥ್ ರಲ್ಲಿ, ಸ್ವರೂಪ್ ಚಿತ್ರವೊಂದಿದ್ದರೆ ಕಳಿಸಿಕೊಡಿ ಎಂದು ವಿನಂತಿಸಿದೆ. ಅವರು ಕಳಿಸಿದ ಚಿತ್ರ ನೋಡಿ ಇನ್ನೂ ನೊಂದುಕೊಂಡೆ. ಸ್ವರೂಪ್ ಪಿಟೀಲು ಬಾರಿಸುತ್ತಾ ಇದ್ದ ಚಿತ್ರವಾಗಿತ್ತದು. ತನ್ನ ಅಣ್ಣ ಒಬ್ಬ ಅತ್ಯುತ್ತಮ ಪಿಟೀಲು ವಾದಕನಾಗಿದ್ದ ಎಂದು ಶ್ರೀನಾಥ್ ಹೇಳಿದಾಗ, ಚಾರಣಿಗನೊಂದಿಗೆ ಸಂಗೀತಗಾರನೊಬ್ಬನನ್ನೂ ಕಳಕೊಂಡದ್ದು, ನನಗೆ ಇನ್ನಷ್ಟು ನೋವನ್ನುಂಟುಮಾಡಿತು.

ಸ್ವರೂಪ್ ಚಿತ್ರವನ್ನು ಇಲ್ಲಿ ಪ್ರಕಟಿಸಲು ಮತ್ತು ಘಟನೆಯ ಬಗ್ಗೆ ವಿವರಿಸಿ ಇಲ್ಲಿ ಬರೆಯಲು ಅನುಮತಿ ನೀಡಿದ ಶ್ರೀನಾಥ್ ರಿಗೆ ಧನ್ಯವಾದಗಳು. ಶ್ರೀನಾಥ್ ರನ್ನು av.srinath at gmail dot com ಇಲ್ಲಿ ಸಂಪರ್ಕಿಸಬಹುದು.

ಸೋಮವಾರ, ಮೇ 14, 2007

ಚೆಲುವಿನ ಜಲಧಾರೆ


ಒತ್ತಿನೆಣೆ ಗುಡ್ಡದಿಂದ ದೂರದಲ್ಲಿ ಪಶ್ಚಿಮ ಘಟ್ಟಗಳೆಡೆ ನೋಡಿದರೆ ಎತ್ತರದಿಂದ ನೀರು ಬೀಳುವುದು ಜೂನ್ ತಿಂಗಳಿಂದ ಜನವರಿಯವರೆಗೆ ಕಾಣುವುದು.

ಸಣ್ಣಂದಿನಿಂದಲೂ ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ಮತ್ತು ದಸರಾ ರಜೆಗೆ ಊರಾದ ಹಳದೀಪುರಕ್ಕೆ ತೆರಳುವಾಗ ಒತ್ತಿನೆಣೆ ಗುಡ್ಡ ಬರುವುದನ್ನೇ ಕಾದು ಕುಳಿತಿರುತ್ತಿದ್ದೆ. ಆ ಬದಿಯ ಸೀಟನ್ನೆ ಅಪ್ಪ ಅಮ್ಮನನ್ನು ಪೀಡಿಸಿ, ಗದ್ದಲ ಮಾಡಿ ಹಿಡಿಯುತ್ತಿದ್ದೆ. ಒತ್ತಿನೆಣೆ ಗುಡ್ಡದ ಮೇಲೆ ಬಸ್ಸು ತಲುಪಿದಾಗ ದೂರದಲ್ಲಿ ಜಲಪಾತ ನೋಡಿದ ಸಂತೋಷ. ಇಪ್ಪತ್ತು ವರ್ಷ ಬರೀ ಹೀಗೆ ಬಸ್ಸಿನಿಂದಲೇ ನೋಡುತ್ತ ಕಾಲ ಕಳೆದೆ. ತಮ್ಮನ ಬೈಕ್ ಕೈಗೆ ಬಂದಂತೆ ಅಲ್ಲಿಗೆ ತೆರಳುವ ಸ್ಕೆಚ್ ಹಾಕಿಬಿಟ್ಟೆ. ಆದರೆ ಹಳ್ಳಗುಂಟ ಚಾರಣ ಮಾಡಬೇಕಾದ್ದರಿಂದ ನೀರಿನ ಹರಿವು ಕಡಿಮೆಯಾಗುವವರೆಗೆ ಅನಿವಾರ್ಯವಾಗಿ ಕಾಯಲೇಬೇಕಾಗಿತ್ತು. ಕಡೆಗೂ ನವೆಂಬರ್ ೨೩, ೨೦೦೩ರಂದು ಆ ಜಲಪಾತ ನೋಡಲು ಹೊರಟಾಗ ವಿಪರೀತ ಉತ್ಸಾಹ, ಸಂಭ್ರಮ. ಕಳೆದ ೨೦ ವರ್ಷಗಳಿಂದ ದೂರದಿಂದ ನೋಡುತ್ತಿದ್ದ ಜಲಪಾತವನ್ನು ಈಗ ಸಮೀಪದಿಂದ ನೋಡಲು ಹೋಗುವ ಸಮಯ ಬಂದಿತ್ತು. ಜೋಗವನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಇದುವರೆಗೆ ನಾನು ನೋಡಿದ 'ದಿ ಬೆಸ್ಟ್' ಜಲಪಾತ.

ತೂದಳ್ಳಿವರೆಗೆ ಟಾರು ರಸ್ತೆ. ನಂತರ ಮಣ್ಣು ರಸ್ತೆಯಲ್ಲಿ ೪ಕಿಮಿ ಕ್ರಮಿಸಿದರೆ ೩ ಮನೆಗಳ ಕಲ್ಲಿಕೋಣೆ ಎಂಬ ಸ್ಥಳ. ತೂದಳ್ಳಿಯಲ್ಲಿ ಎತ್ತ ಹೋಗುವುದು ಎಂದು ತಿಳಿಯದೆ ನೇರವಾಗಿ ಟಾರು ರಸ್ತೆಯಲ್ಲಿ ಯಮಾಹ ಓಡಿಸಿದೆ. ಸ್ವಲ್ಪ ದೂರ ಕ್ರಮಿಸಿದ ಬಳಿಕ ಮನೆಯೊಂದರಲ್ಲಿ ದಾರಿ ಕೇಳಿದಾಗ 'ಕಲ್ಲಿಕೋಣೆಗೆ ತೆರಳಿ ಅಲ್ಲಿಂದ ಹಳ್ಳದ ದಾರಿಯಲ್ಲಿ ಜಲಪಾತದೆಡೆ ನಡೆಯಬೇಕು' ಎಂದು ಹೇಳಲಾಯಿತು. 'ಕಲ್ಲಿಕೋಣೆಗೆ ತೆರಳಲು ಮರಳಿ ತೂದಳ್ಳಿಗೆ ಹೋಗಿ ಬಳಿಕ ಮಣ್ಣಿನ ರಸ್ತೆಯಲ್ಲಿ ತೆರಳಿ' ಎಂದ ಆ ಮನೆಯ ಯಜಮಾನ ಸಡನ್ನಾಗಿ ಚೇಳು ಕಡಿದವನಂತೆ ಕುರ್ಚಿಯಿಂದ ಜಿಗಿದೆದ್ದು 'ಬೇಗ ಹೋಗಿ, ನಾರಾಯಣ ಕಲ್ಲಿಕೋಣೆ ಅಲ್ಲೇ ತೂದಳ್ಳಿಯಲ್ಲಿ ಸೊಸೈಟಿಯಲ್ಲವ್ನೆ. ಅವ್ನ ಮನೆಯಿಂದ್ಲೇ ನಡ್ಕಂಡು ಹೋಗ್ಬೇಕ್' ಎಂದ. ವೇಗವಾಗಿ ಮರಳಿ ತೂದಳ್ಳಿಗೆ ಬಂದು ಸೊಸೈಟಿಯಲ್ಲಿ ನಾರಾಯಣ ಕಲ್ಲಿಕೋಣೆ ಬಗ್ಗೆ ವಿಚಾರಿಸಿದರೆ ಅಲ್ಲೇ ಬದಿಯಲ್ಲಿ 'ನಾನೆ' ಅಂದ ಒಬ್ಬ ಕುಬ್ಜ.


ನಾರಾಯಣನನ್ನು ಹಿಂದೆ ಕೂರಿಸಿ ಕಲ್ಲಿಕೋಣೆಯ ಅವನ ಮನೆಯತ್ತ ಮಣ್ಣು ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ಜಲಪಾತ ಆಗಾಗ ದರ್ಶನ ನೀಡುತ್ತಿತ್ತು. ಕೆಲವೊಂದು ಕಡೆಯಿಂದ ಸ್ವಲ್ಪ ಬೇರೆ ತರಹ ಕಾಣುತ್ತಿತ್ತು. ನಾರಾಯಣನಲ್ಲಿ ಅದ್ಯಾಕೆ ಹಾಗೆ ಎಂದು ವಿಚಾರಿಸಿದಾಗ 'ಹೆ ಹೆ ಹೆ ಅದು ಬ್ಯಾರೆನೇ ಇದು ಬ್ಯಾರೆನೇ' ಎಂದ. ಮತ್ತೊಂದು ಜಲಪಾತವೇ ಎಂದು ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು. ಆ ಮತ್ತೊಂದು ಜಲಪಾತ ನಾಲ್ಕಾರು ಕಿಮಿ ದೂರವಿರುವ ಚಕ್ತಿಕಲ್ ಎಂಬ ಹಳ್ಳಿಯಿಂದ ಚಾರಣಗೈಯುವ ಇನ್ನೊಂದು ಜಲಪಾತವಾಗಿತ್ತು.


ನಾರಾಯಣ ತನ್ನ ಕಿರಿಯ ಮಗ ಲಕ್ಷ್ಮಣನನ್ನು ನನಗೆ ಜಲಪಾತ ತೋರಿಸಲು ಕಳಿಸಿದ. ಮನೆಯಿಂದ ೨೦೦ಮೀಟರ್ ದೂರದಲ್ಲಿ ಹರಿಯುವ ಹಳ್ಳದ ಮಧ್ಯ ನಿಲ್ಲಿಸಿ ಕಾಡಿನ ನಡುವಿಂದ ದೂರದಲ್ಲಿ ರಾಜಗಾಂಭೀರ್ಯದಿಂದ ಧುಮುಕುತ್ತಿದ್ದ ಜಲಧಾರೆಯ ಪ್ರಥಮ ಹಂತವನ್ನು ತೋರಿಸಿ 'ಅದೇ ಅಲ್ಲಿ' ಎಂದು ಜಲಪಾತ ತೋರಿಸಿದ ಲಕ್ಷ್ಮಣನಲ್ಲಿ, ನನಗೆ 'ಅಲ್ಲಿ' ಹೋಗ್ಬೇಕು ಎಂದಾಗ ಆತ ನಂಬಲೇ ಇಲ್ಲ. ಆತನ ಪ್ರಕಾರ ನಾನು ನೋಡಲು ಬಂದಿದ್ದು ಇಷ್ಟೇ, ದೂರದಿಂದ! ನಾನ್ ಸೆನ್ಸ್.

ಆತ 'ಒಬ್ರೇ ಇದೀರಾ', ಎಂದಾಗ ನಾನು, 'ಇಲ್ವಲ್ಲಾ ನೀನೂ ಬಾ, ಇಬ್ರಾಗ್ತೀವಿ' ಎಂದೆ. 'ಮನೆ ಕಡೆ ಹೇಳಿ ಬರ್ತೆ' ಎಂದು ಮನೆಗೆ ಹೋಗಿ ಬಂದು ನನ್ನ ಮಾರ್ಗದರ್ಶಿಯಾಗಿ ಬಂಡೆಯಿಂದ ಬಂಡೆಗೆ ದಾರಿಮಾಡಿಕೊಂಡು ಮುನ್ನಡೆದ. ಬರೀ ನೀರಿನ ಹರಿವಿನ ಶಬ್ದ ಮಾತ್ರ. ಎಲ್ಲಾ ಗಾತ್ರದ ಮತ್ತು ರೂಪದ ಬಂಡೆಗಳು ದಾರಿಯುದ್ದಕ್ಕೂ. ಆದಷ್ಟು ಸುಲಭದ ದಾರಿಯಿಂದ ಲಕ್ಷ್ಮಣ ಕರೆದೊಯ್ದ. ಹಳ್ಳದ ಎರಡೂ ಬದಿ ದಟ್ಟ ಕಾಡು ಮತ್ತು ಸ್ವಲ್ಪ ಮೋಡ ಕವಿದಂತಿದ್ದರಿಂದ ಅಷ್ಟು ಬೆಳಕಿರಲಿಲ್ಲ. ಬಂಡೆಗಳ ಮೇಲಿಂದ ಜಿಗಿದು ಜಿಗಿದು ಸಾಗುತ್ತಿದ್ದೆವು. ಅಲ್ಲಲ್ಲಿ ಕೆಲವು ಆಳ ಗುಂಡಿಗಳು. ದಾರಿಯಲ್ಲಿ ಲಕ್ಷ್ಮಣನ ಪ್ರಶ್ನೆ 'ನೀವೊಬ್ರೆ ಯಾಕ್ಬಂದ್ರಿ?' ಎಂದು. 'ನಾನು ಪ್ರಕೃತಿ, ಪರಿಸರ ಇತ್ಯಾದಿಗಳನ್ನು ಇಷ್ಟ ಪಡುತ್ತೇನೆ......' ಎಂದು ಉತ್ತರ ಹೇಳುತ್ತಿದ್ದರೆ ಆತ ಅರ್ಥ ಆಗದೆ ತಲೆ ಕೆರೆದುಕೊಳ್ಳುತ್ತಿದ್ದ. ಹಲವಾರು ಉತ್ತರಗಳನ್ನು ನೀಡಿದರೂ ಆತನಿಗೆ ಸಮಾಧಾನವಾಗದೇ ಮತ್ತದೇ 'ನೀವೊಬ್ರೆ.......'? ಕಡೆಗೂ ನಾನು ಒಬ್ನೇ ಯಾಕ್ಬಂದೆ ಎನ್ನುವುದನ್ನು ಆತನಿಗೆ ತಿಳಿಹೇಳಲು ನನಗೆ ಸಾಧ್ಯವಾಗಲೇ ಇಲ್ಲ.


ಸುಮಾರು ೭೫ ನಿಮಿಷದ ಬಳಿಕ ಜಲಪಾತದ ೬ನೇ ಹಂತದ ದರ್ಶನ. ಕಾಡು ತೆರವುಗೊಂಡು, ಮೋಡಗಳೂ ಚದುರಿ, ಜಲಪಾತ ಅದ್ಭುತವಾಗಿ ವಿಜೃಂಭಿಸುತ್ತಿತ್ತು ಸೂರ್ಯನ ಬೆಳಕಿನಲ್ಲಿ. ಮೇಲೆ ಮೊದಲ ಹಂತದ ತುದಿಭಾಗ ಮಾತ್ರ ಗೋಚರಿಸುತ್ತಿತ್ತು.


ಆರನೇ ಹಂತ ಸುಮಾರು ೫೦ಅಡಿ ಎತ್ತರವಿದ್ದು ಹೆಣ್ಣಿಗಿರುವ ಬಳುಕು, ವೈಯ್ಯಾರ, ಅಂದ ಎಲ್ಲವೂ ಇದಕ್ಕಿದೆ. ಹೊರಚಾಚಿರುವ ಕಲ್ಲಿನ ಪದರಗಳನ್ನು ಸ್ಪರ್ಶಿಸುತ್ತಾ, ಬಳುಕುತ್ತಾ, ವೈಯ್ಯಾರದಿಂದ ಕೆಳಗಿಳಿಯುವ ಇದರ ಅಂದಕ್ಕೆ ಸೋತುಹೋದೆ. ಲಕ್ಷ್ಮಣ ಅಲ್ಲೇ ಬದಿಯಲ್ಲಿ ಗಲ್ಲದ ಮೇಲೆ ಕೈಯಿಟ್ಟು ಕೂತು ಆಶ್ಚರ್ಯಚಕಿತ ಮುಖಭಾವದಿಂದ ನನ್ನನ್ನು ನೋಡುತ್ತಿದ್ದರೆ ನಾನು ಆಚೀಚೆ ಓಡಾಡುತ್ತ ಈ ಸುಂದರಿಯ ಫೋಟೊ ತೆಗೆಯುವುದರಲ್ಲಿ ಮಗ್ನನಾದೆ.



ನಂತರ ೧೦ನಿಮಿಷ ಗುಡ್ಡದ ಬದಿಯಲ್ಲೇ 'ವಿ' ಆಕಾರದಲ್ಲಿ ನಡೆದು ಐದನೇ ಹಂತದ ಬಳಿ ತಲುಪಿದೆವು. ಇಲ್ಲಿ ವಿಶಾಲವಾದ ಜಾಗವಿದೆ. ಇಲ್ಲೇ ಸ್ವಲ್ಪ ಬಂಡೆಗಳನ್ನು ಹತ್ತಿ ನಿಂತರೆ ಮೊದಲನೇ ಹಂತದ ಅರ್ಧಭಾಗದವರೆಗೆ ಕಾಣುತ್ತದೆ. ಬದಿಯಲ್ಲೇ ಇರುವ ಮರಗಳ ನೆರಳಿನಲ್ಲಿ ಕೂತು ಆಯಾಸ ಪರಿಹಾರ ಮಾಡುತ್ತ ಕಾಲ ಕಳೆಯಲು ಪ್ರಶಸ್ತ ಜಾಗ. ಈ ಹಂತ ಸುಮಾರು ೧೦೦ಅಡಿಯಷ್ಟು ಎತ್ತರವಿದ್ದು ರಭಸವಾಗಿ ಮತ್ತು ಆಲ್ಮೋಸ್ಟ್ ನೇರವಾಗಿ ಧುಮುಕುತ್ತದೆ. ತಳದಲ್ಲಿರುವ ಸಣ್ಣ ಗುಂಡಿ ಜಲಕ್ರೀಡೆಯಾಡಲು ಸೂಕ್ತ ಸ್ಥಳ. ಈ ಹಂತದಿಂದ ಜಲಪಾತದ ವಿಹಂಗಮ ನೋಟ ಲಭ್ಯ. ಮೇಲೆ ದೂರದಲ್ಲಿ ಧುಮುಕುತ್ತಿರುವ ಪ್ರಥಮ ಹಂತ ಮತ್ತು ಕಣಿವೆಯ ಸಂಪೂರ್ಣ ಮತ್ತು ಸುಂದರ ನೋಟವನ್ನು 'ಪೋಸ್ಟ್ ಕಾರ್ಡ್' ನೋಟ ಎನ್ನಬಹುದು.

ಹೆಚ್ಚಿನ ಚಾರಣಿಗರು ಇಲ್ಲೇ ತಮ್ಮ ಚಾರಣವನ್ನು ನಿಲ್ಲಿಸಿಬಿಡುತ್ತಾರೆ. ಕಲ್ಲಿಕೋಣೆಯಿಂದ ೯೦ನಿಮಿಷ ನಡೆದು ಸುಸ್ತಾಗಿ ಇಲ್ಲೇ ಹೆಚ್ಚಿನವರು ವಿಶ್ರಾಂತಿ ಪಡೆದು ಹಿಂತಿರುಗುತ್ತಾರೆ. ಲಕ್ಷ್ಮಣನನ್ನು ನಾನು ಮತ್ತೂ ಮೇಲಕ್ಕೆ ಹೋಗುವ ಎಂದು ಒಪ್ಪಿಸಿದೆ. ಏರುಹಾದಿಯಲ್ಲಿ ಕೇವಲ ೨ನಿಮಿಷ ನಡೆದಾಗ, ಲಕ್ಷ್ಮಣ ಗಕ್ಕನೆ ನಿಂತುಬಿಟ್ಟ. ಪ್ರಶ್ನಾರ್ಥಕವಾಗಿ ಆತನೆಡೆ ನೋಡಲು ದಾರಿಯಲ್ಲೇ ಇರುವ ಮರವೊಂದರ ಕೊಂಬೆಯೆಡೆ ಕೈ ಮಾಡಿ ತೋರಿಸಿದಾಗ ಹೆದರಿಬಿಟ್ಟೆ. ಅಲ್ಲಿತ್ತೊಂದು ರಸೆಲ್ಸ್ ವೈಪರ್. ಕನ್ನಡಿ ಹಾವು ಎನ್ನುತ್ತಾರೆ. ೩-೪ ಅಡಿ ಉದ್ದದ ಬಲೂ ಅಪಾಯಕಾರಿ ಜಂತು. ತನ್ನ ತ್ರಿಕೋನಾಕಾರದ ಚಪ್ಪಟೆ ತಲೆಯನ್ನು ನಮ್ಮತ್ತ ಮುಂದೆ ಹಿಂದೆ ಚಲಿಸುತ್ತಾ ತನ್ನ ದೇಹದ ಹಿಂಭಾಗವನ್ನಷ್ಟೆ ಕೊಂಬೆಗೆ ಆಧಾರವಾಗಿ ಸುತ್ತಿ ಮುಂಭಾಗವನ್ನು 'ಎಸ್' ಆಕಾರದಲ್ಲಿಟ್ಟು ದಾಳಿ ಮಾಡಲು ಸನ್ನದ್ಧ ರೀತಿಯಲ್ಲಿ ತೂಗಾಡುತ್ತಿತ್ತು. ಈ ಹಾವಿಗೆ ಹಗಲಲ್ಲಿ ಕಣ್ಣು ಕಾಣದಿದ್ದರೂ, ಮನುಷ್ಯನ ದೇಹ ಹೊರಸೂಸುವ ಶಾಖವನ್ನು ಗ್ರಹಿಸಿ ದಾಳಿ ಮಾಡುತ್ತದೆ. ಮೊದಲೇ ಹಾವು ಎಂದರೆ ದೂರ ಓಡುವ ನಾನು ಆ ದೃಶ್ಯ ನೋಡಿ ಕಂಗಾಲಾಗಿ, ಹಿಂತಿರುಗುವಂತೆ ಲಕ್ಷ್ಮಣನಿಗೆ ಸೂಚಿಸಿ ಮರಳಿ ಕಲ್ಲಿಕೋಣೆಗೆ ನಡೆದೇಬಿಟ್ಟೆ.

ಮರುದಿನ ಚಿತ್ರಗಳನ್ನು ಗೆಳೆಯ ದಿನೇಶ್ ಹೊಳ್ಳರಿಗೆ ತೋರಿಸುತ್ತಿರುವಾಗ, ಸ್ಥಳದ ಸೌಂದರ್ಯಕ್ಕೆ ಮಾರುಹೋದ ಅವರು ಮುಂದಿನ ತಿಂಗಳ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಈ ಜಲಪಾತಕ್ಕೇ ಎಂದು ನಿರ್ಧರಿಸಿಬಿಟ್ಟರು. ಅಂತೆಯೇ ಶನಿವಾರ ಡಿಸೆಂಬರ್ ೨೦, ೨೦೦೩ರಂದು ೮ ಜನರ ನಮ್ಮ ತಂಡ ನಾರಾಯಣ ಕಲ್ಲಿಕೋಣೆಯ ಮನೆ ತಲುಪಿ ಅಲ್ಲಿ ರಾತ್ರಿ ಕ್ಯಾಂಪ್ ಹಾಕಿತು. ನಾರಾಯಣ ನಮ್ಮನ್ನು ಸಂತೋಷದಿಂದಲೇ ಬರಮಾಡಿಕೊಂಡರು. ಊಟಕ್ಕೆ ನಾವೇ ವ್ಯವಸ್ಥೆ ಮಾಡಿಕೊಂಡಿದ್ದು, ಪ್ಲೇಟ್, ಪಾತ್ರೆ ಇತ್ಯಾದಿಗಳನ್ನು ನೀಡಿ ಸಹಕರಿಸಿದರು. ರಾತ್ರಿ ಸುಮಾರು ಹೊತ್ತಿನವರೆಗೆ ನಮ್ಮೊಂದಿಗೆ ಸೇರಿ ಕೊರೆದರು. ಬೆಳಗ್ಗೆ ೭ಕ್ಕೆ ಸರಿಯಾಗಿ ಮತ್ತೆ ಲಕ್ಷ್ಮಣನ ಮಾರ್ಗದರ್ಶನದಲ್ಲಿ ಜಲಪಾತದೆಡೆ ಹೊರಟೆವು. ಈ ಸಲ ಲಕ್ಷ್ಮಣ ನನ್ನಲ್ಲಿ ಯಾವುದೇ ಪ್ರಶ್ನೆ ಕೇಳಲಿಲ್ಲ. ಗುಂಪಿನಲ್ಲಿ ಜನರು ಇಂತಹ ಸ್ಥಳಗಳಿಗೆ ತೆರಳುವುದು ಸಾಮಾನ್ಯ ಎಂದು ಆತನ ಅಭಿಪ್ರಾಯವಾಗಿದ್ದಿರಬಹುದು.


೯೦ ನಿಮಿಷದಲ್ಲಿ ಐದನೇ ಹಂತ ತಲುಪಿದೆವು. ಈ ಬಾರಿ ಯಾವುದೇ ಜಂತುಗಳು ನಮ್ಮ ದಾರಿಗೆ ಅಡ್ಡ ಬರಲಿಲ್ಲ. ಹೆಚ್ಚಿನ ಚಾರಣಗಳು ಐದನೇ ಹಂತದಲ್ಲೇ ಕೊನೆಗೊಳ್ಳುತ್ತವೆ. ಲಕ್ಷ್ಮಣನ ಪ್ರಕಾರ ಐದನೇ ಹಂತದ ನಂತರ ಮುಂದೆ ತೆರಳಿದವರು ವಿರಳ. ಐದನೇ ಹಂತದ ಮೇಲೆ ತೆರಳುವ ಹಾದಿ ಕಠಿಣ ಏರುದಾರಿ. ಬಂಡೆಗಳು, ಮರಗಳು, ಕೊಂಬೆ ಇತ್ಯಾದಿಗಳನ್ನು ಆಧಾರವಾಗಿ ಬಳಸಿ ಮೇಲೇರುತ್ತಿದ್ದೆವು. ಈ ಹಾದಿಯಲ್ಲಿ ೧೦ ನಿಮಿಷದ ಬಳಿಕ ಬೃಹತ್ ಬಂಡೆಯೊಂದು ದಾರಿಗಡ್ಡವಾಗಿ ಸಿಗುತ್ತೆ. ಇದಕ್ಕೆ ಸುತ್ತುಹಾಕಿ ಮೇಲೆ ತೆರಳಲು ಆಸ್ಪದವಿರಲಿಲ್ಲ. ವಿಸ್ಮಯವೆಂಬಂತೆ ಈ ಬಂಡೆಯ ಮಧ್ಯದಿಂದಲೇ ಸಣ್ಣ ಮರವೊಂದು ಜನ್ಮತಾಳಿದ್ದು ಇದರ ಎರಡು ಬೇರುಗಳು ಬಂಡೆಯ ಎರಡು ದಿಕ್ಕಿಗೆ ತೆವಳಿ ಅದನ್ನು ಆವರಿಸಿಕೊಂಡಿವೆ. ಈ ಮರವನ್ನು ಆಧಾರವಾಗಿ ಬಳಸಿಯೇ ಈ ಬಂಡೆಯನ್ನು ದಾಟಲು ಇರುವ ಏಕೈಕ ದಾರಿ. ಕೆಲವರು ಈ ಬಂಡೆಯನ್ನು ದಾಟಲಾಗದೇ ಇಲ್ಲಿಂದ ಹಿಂತಿರುಗುತ್ತಾರೆ. ನಮ್ಮಲ್ಲಿ ಹಿರಿಯರಾದ ರಮೇಶ್ ಕಾಮತ್ ತಾನು ಕೆಳಗೆ ಐದನೇ ಹಂತದ ಬಳಿ ಕಾಯುತ್ತಿರುತ್ತೇನೆ ಎಂದು ಹಿಂತಿರುಗಿದರೆ ಉಳಿದವರು ಮುನ್ನಡೆದರು.

ನಂತರ ಮತ್ತೆ ದಟ್ಟಕಾಡು ಮತ್ತು ಏರುಹಾದಿ. ಕಷ್ಟಪಟ್ಟು ಏನೇನನ್ನೋ ಆಧಾರವಾಗಿ ಬಳಸಿ ಉಸ್ಸಪ್ಪಾ ಎನ್ನುತ್ತ ಮುಂದುವರಿಯುತ್ತಿದ್ದೆವು. ಆ ಬೃಹತ್ ಬಂಡೆಯನ್ನು ದಾಟಿ ೧೫ ನಿಮಿಷಗಳ ಬಳಿಕ ಬರುವುದು ಮತ್ತೊಂದು ತೊಡಕು. ಇಲ್ಲಿ ಕ್ಲಿಫ್ ಒಂದರ ತುದಿಗೆ ಬಂದು ಹಾದಿ ಕೊನೆಗೊಳ್ಳುತ್ತೆ. ಐದನೇ ಹಂತದ ನೆತ್ತಿಯ ಮೇಲೆ ತಲುಪಬೇಕಾದರೆ ಈಗ ಸುಮಾರು ೨೫ಅಡಿ ಕಲ್ಲಿನ ಮೇಲ್ಮೈ ಬಳಸಿ ಕಣಿವೆಯಲ್ಲಿಳಿಯಬೇಕು. ಲ್ಯಾಡರ್ ಟೆಕ್ನಿಕ್ (ಏಣಿ ಇಳಿಯುವ ಶೈಲಿ) ಬಳಸಿಯೇ ಇಲ್ಲಿ ಕೆಳಗಿಳಿಯಬೇಕು. ಎಚ್ಚರಿಕೆಯಿಂದ ಇಳಿದರೆ ಐದನೇ ಹಂತದ ನೆತ್ತಿಯ ಮೇಲೆ. ಒಂದು ಹೆಜ್ಜೆ ತಪ್ಪಿದರೆ ನೇರವಾಗಿ ಐದನೇ ಹಂತದ ಬುಡಕ್ಕೆ! ನಿಧಾನವಾಗಿ ಎಲ್ಲ ೭ ಮಂದಿ ಕೆಳಗಿಳಿದೆವು. ಕೆಳಗೆ ರಮೇಶ ಕಾಮತ್ ಆರಾಮವಾಗಿ ಮಲಗಿ ನಮ್ಮತ್ತ ಕೈ ಬೀಸುತ್ತಿದ್ದರು.


ನಂತರ ಸಿಗುವ ೩೦-೪೦ ಅಡಿಗಳಷ್ಟು ಎತ್ತರವಿರುವ ನಾಲ್ಕನೇ, ಮುರನೇ ಮತ್ತು ಎರಡನೇ ಹಂತಗಳನ್ನು ದಾಟಿ ೧೫ ನಿಮಿಷದಲ್ಲಿ ಪ್ರಥಮ ಹಂತದ ಬುಡ ತಲುಪಿದೆವು. ಸುಮಾರು ೨೫೦ಅಡಿ ಎತ್ತರದಿಂದ ಬೀಳುತ್ತಿರುವ ಜಲಧಾರೆ. ಆ ಅಂದವನ್ನು ವರ್ಣಿಸುವಷ್ಟು ಪಾಂಡಿತ್ಯ ನನ್ನಲಿಲ್ಲ. ಅಷ್ಟು ಎತ್ತರದಿಂದ ನೀರು ಬೀಳುತ್ತಿರುವಾಗ ಸಮೀಪ ನಿಂತು ಕತ್ತು ಮೇಲೆತ್ತಿ ನೋಡುವುದೇ ಖುಷಿ. ಜಲಪಾತದ ಮುಂದೆಯೇ ಬಂಡೆಗಳಿಂದ ಕೂಡಿದ ಸಣ್ಣ ದಿಬ್ಬವೊಂದಿದ್ದು ಅದರ ಮೇಲೆ ಅಲ್ಲಲ್ಲಿ ಕುಳಿತು ಕೂಸಳ್ಳಿಯ ಅದ್ಭುತ ಸೌಂದರ್ಯವನ್ನು ಮನಸಾರೆ ಸವಿದೆವು. ಪ್ರಕೃತಿಯ ಮುಂದೆ ನಾವು ಅದೆಷ್ಟು ಸಣ್ಣವರು ಎಂಬ ಯೋಚನೆ ಬರದೇ ಇರಲಿಲ್ಲ. ಎಲ್ಲರೂ ಆ ಎತ್ತರ ಕಂಡು ಮಂತ್ರಮುಗ್ಧರಾಗಿದ್ದರು. ಬೀಸುತ್ತಿದ್ದ ಗಾಳಿಗೆ ಓಲಾಡುತ್ತಿದ್ದ ಜಲಪಾತದ ನೀರ ಹನಿಗಳು ನಮ್ಮ ಮೇಲೆ ಸಿಂಚನಗೊಳ್ಳುತ್ತಿರುವಾಗ, 'ನನ್ನ ನೋಡ ಬಂದಿರಿ, ಮನಸಾರೆ ನೋಡಿ ಸುರಕ್ಷಿತವಾಗಿ ಹಿಂದಿರುಗಿರಿ, ನಿಮಗೆ ಒಳ್ಳೆಯದಾಗಲಿ' ಎಂದು ಜಲಧಾರೆ ನಮ್ಮನ್ನು ಆಶೀರ್ವದಿಸಿ, ಪ್ರೋಕ್ಷಣೆ ಮಾಡಿದಂತೆ ನನಗನ್ನಿಸಿತು. ಒಂದು ತಾಸು ಹಾಗೇ ಕುಳಿತು ಜಲಪಾತದ ಅದ್ಭುತ ನೃತ್ಯವನ್ನು ವೀಕ್ಷಿಸಿದ ಬಳಿಕ ಒಲ್ಲದ ಮನಸ್ಸಿನಿಂದ ಹಿಂತಿರುಗಿದೆವು. ಅಗಾಗ ಹಿಂದೆ ತಿರುಗುತ್ತಾ ಮತ್ತೆ ಮತ್ತೆ ನೋಡುತ್ತಿದ್ದೆ ಜಲಧಾರೆಯ ಚೆಲುವನ್ನು.


ಐದನೇ ಹಂತದ ನೆತ್ತಿಯ ಮೇಲೆ ಬಂದಾಗ ಕೆಳಗೆ ನೋಡಿದರೆ ರಮೇಶ್ ಕಾಮತರಿಗೆ ಜೋರು ನಿದ್ರೆ. ಕೂ ಹಾಕಿದಾಗ ಗಾಬರಿಯಿಂದ ಎದ್ದು ಕೂತರು. ಬರುವಾಗ ಹೆದರಿ ಹೆದರಿ ಇಳಿದಿದ್ದ ಕ್ಲಿಫ್ ನ್ನು ಈಗ ಎಲ್ಲರೂ ಸಲೀಸಾಗಿ ಮೇಲೇರಿ ಕಾಡನ್ನು ಹೊಕ್ಕಿ ಅಲ್ಲಲ್ಲಿ ಜಾರಿ ಉರುಳುತ್ತಾ ಆ ಬೃಹತ್ ಬಂಡೆಯಿದ್ದೆಡೆ ತಲುಪಿದೆವು. ಇಲ್ಲಿ ಸ್ವಲ್ಪ ತೊಡಕಾದರೂ ಕೆಳಗಿಳಿದು ಐದನೇ ಹಂತ ತಲುಪಿ ಮನಸಾರೆ ಎಲ್ಲರೂ ಜಲಕ್ರೀಡೆಯಾಡಿ ಮತ್ತೊಂದು ತಾಸಿನ ಬಳಿಕ ಕಲ್ಲಿಕೋಣೆಯತ್ತ ಹೆಜ್ಜೆ ಇಟ್ಟೆವು. ೨೦ ವರ್ಷಗಳಿಂದ ದೂರದಿಂದ ನೋಡಿ ನೋಡಿ ಅಂತೂ ಕಡೆಗೆ ಈ ಜಲಧಾರೆಯ ಸಮೀಪ ತೆರಳಿ ಧನ್ಯನಾದೆ.

ರಾತ್ರಿ ಮನೆ ತಲುಪಿದಾಗಲೇ ಅರಿವು - ನನ್ನ ನೆಚ್ಚಿನ ಹೊದಿಕೆಯನ್ನು ಕಲ್ಲಿಕೋಣೆಯಲ್ಲೇ ಮರೆತಿದ್ದೆನೆಂದು. ಮುನ್ನಾ ದಿನ ರಾತ್ರಿ ನಾರಾಯಣರ ಮನೆಯಲ್ಲಿ ಮಲಗುವಾಗ ಬ್ಯಾಗ್ ನಿಂದ ಹೊರತೆಗೆದ ಹೊದಿಕೆಯನ್ನು ಮುಂಜಾನೆ ಮರಳಿ ಬ್ಯಾಗ್ ನೊಳಗೆ ಇಡಲು ಮರೆತುಬಿಟ್ಟಿದ್ದೆ. ನಾನು ಹುಟ್ಟಿದ ದಿನದಂದು ಅಪ್ಪ ಆ ಹೊದಿಕೆಯನ್ನು ನನಗಾಗಿ ಹಳಿಯಾಳದಲ್ಲಿ ಖರೀದಿಸಿದ್ದರಿಂದ ನನ್ನಷ್ಟೆ ವಯಸ್ಸು ಅದಕ್ಕೆ. ಮರುದಿನ ಆಫೀಸಿಗೆ 'ಹಾಫ್ ಡೇ' ರಜಾ ಹಾಕಿ ಮತ್ತೆ ನನ್ನ ಯಮಾಹಾವನ್ನು ಕಲ್ಲಿಕೋಣೆಗೆ ದೌಡಾಯಿಸಿದೆ. ಮುಂಜಾನೆ ೯ಕ್ಕೆ ನನ್ನನ್ನು ಅಲ್ಲಿ ಕಂಡು ನಾರಾಯಣನ ಮನೆಯವರು ಅಶ್ಚರ್ಯಚಕಿತರಾದರು. ಒಂದು ಹಳೆಯ, ಬಣ್ಣ ಮಾಸಿದ, ಒಂದೆರಡು ತೂತುಗಳಿರುವ ಹೊದಿಕೆಗೋಸ್ಕರ ನಾನಿಷ್ಟು ದೂರ ಬರಬಹುದೆಂದು ಅವರೆಣಿಸಿರಲಿಲ್ಲ. ಅವರ ಎರಡನೇ ಮಗ ಅಂದೇ ಮುಂಜಾನೆ ೧೦.೩೦ರ ಬಸ್ಸಿಗೆ ಮುಂಬೈಗೆ ಹೊರಡುವುದರಲ್ಲಿದ್ದ. ಐ ವಾಸ್ ದೆರ್ ಜಸ್ಟ್ ಇನ್ ಟೈಮ್. ನನ್ನ ಹೊದಿಕೆ ಆತನ ಬ್ಯಾಗ್ ನಲ್ಲಿ ನೀಟಾಗಿ ಪ್ಯಾಕ್ ಆಗಿ ಮುಂಬೈಗೆ ಪ್ರಯಾಣ ಮಾಡಲು ತಯಾರಾಗಿ ಕೂತಿತ್ತು. 'ಉಡುಪಿಯಿಂದ ಇವತ್ತೇ ಅದು ಕೂಡಾ ಬೆಳ್ಗೆನೇ ಬಂದ್ರೆಂದ್ರೆ ಆ ಹೊದ್ಕೆಯಲ್ಲಿ ಬಹ್ಳ ವಿಶೇಷವಿರ್ಬೆಕೆನೋ' ಅಂತ ನಾರಾಯಣ ನಗುತ್ತ, ಆದರೂ ಒಲ್ಲದ ಮನಸ್ಸಿನಿಂದ ಮಗನ ಬ್ಯಾಗ್ ನಿಂದ ತೆಗೆದು ನನ್ನ ಕೈಗೆ ನನ್ನ ಮೆಚ್ಚಿನ ಹೊದಿಕೆಯನ್ನು ನೀಡಿದಾಗಲೇ ನನಗೆ ಸಮಾಧಾನವಾದದ್ದು.

ಈ ಜಲಧಾರೆಗೆ ಕಿರು ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ದುಷ್ಟ ಯೋಚನೆ ಸಂಬಂಧಪಟ್ಟವರ ತಲೆಯಲ್ಲಿ ಸುಳಿದಾಡುತ್ತಿದೆ. ಆ ಬಗ್ಗೆ ಕಳೆದೊಂದು ವರ್ಷದಿಂದ ಸ್ಥಳೀಯ ಪತ್ರಿಕೆಗಳಲ್ಲಿ ವರದಿ ಮತ್ತು ಉಹಾಪೋಹಗಳು. ಸುತ್ತಮುತ್ತಲ ಹಳ್ಳಿಗರು ತಮ್ಮದೇ ಒಕ್ಕೂಟ ರಚಿಸಿ ಈ ಯೋಜನೆಯ ವಿರುದ್ಧ ಹೋರಾಟ ನಡೆಸುತ್ತಾ ಇದ್ದಾರೆ. ಆದರೆ ಏನನ್ನೂ ಹೇಳಲಾಗದು.

ಮಂಗಳವಾರ, ಮೇ 08, 2007

ವರ್ಣಶರಧಿ


ಗೆಳೆಯ ದಿನೇಶ್ ಹೊಳ್ಳರದ್ದು ಮಾತು ಕಡಿಮೆ ಆದರೆ ಕೆಲಸ ಅಗಾಧ. ಚಾರಣ, ಕಥೆ, ಕವನ, ಹನಿಗವನ, ಚಿತ್ರಕಲೆ ಇವೆಲ್ಲಾ ಇವರ ಹವ್ಯಾಸ. ೨೦೦೬ ಎಪ್ರಿಲ್ ತಿಂಗಳಲ್ಲಿ ಬಿಸಿಲೆ ಘಾಟಿಯ ವೀಕ್ಷಣಾ ಕಟ್ಟೆಯ ಬಳಿ ತನ್ನ ಹನಿಗವನಗಳ ಸಂಗ್ರಹದ ಎರಡನೇ ಪುಸ್ತಕ 'ಅಡವಿಯ ನಡುವೆ'ಯ ಬಿಡುಗಡೆಯ ಕಾರ್ಯಕ್ರಮವನ್ನು ದಿನೇಶ್ ವಿಶಿಷ್ಟ ರೀತಿಯಲ್ಲಿ ಅಡವಿಯ ನಡುವೆಯೇ ಹಮ್ಮಿಕೊಂಡಿದ್ದರು. ಕರಾವಳಿಯ ಸುಮಾರು ೫೦ ಕವಿಗಳನ್ನು ಮತ್ತು ಚಿತ್ರಕಾರರನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಅವರಿಂದ ಪ್ರಕೃತಿಯ ಬಗ್ಗೆ ಕವನಗಳನ್ನು ಓದಿಸಿ ಚಿತ್ರಗಳನ್ನು ಬರೆಯಿಸಿದ್ದರು. ಈ ವರ್ಷವೂ ಅದೇ ರೀತಿಯಲ್ಲಿ ಮತ್ತೊಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಕಳೆದ ೩ ತಿಂಗಳುಗಳಿಂದ ತಯಾರಿ ನಡೆದಿತ್ತು.

ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಆದಿತ್ಯವಾರಗಳಂದು 'ಸೂರ್ಯಕಾಂತಿ' ಎಂಬ ಅಂಕಣದಲ್ಲಿ ದಿನೇಶ್, ಕರಾವಳಿಯ ಉದಯೋನ್ಮುಖ ಕವಿಗಳನ್ನು ಮತ್ತು ಎಲೆಮರೆಯ ಕಾಯಿಗಳಂತಿದ್ದ ಚಿತ್ರಕಾರರನ್ನು ಓದುಗರಿಗೆ ಪರಿಚಯಿಸುತ್ತಿದ್ದರು. ಕರಾವಳಿಯಲ್ಲಿ 'ಆರ್ಟಿಸ್ಟ್ ಫೋರಂ' ಎಂದರೆ ಕೆಲವೇ ಹಳೇ ಮತ್ತು ಅದೇ ಬೋರಿಂಗ್ ಮುಖಗಳನ್ನೊಳಗೊಂಡ ಬೆರಳೆಣಿಕೆಯ ಕೆಲವೊಂದು ಹಿರಿಯ ಕಲಾವಿದರ ಆಡಂಬರದಿಂದ ಕೂಡಿದ ಒಕ್ಕೂಟವಾಗಿತ್ತು. ಯುವ, ಪ್ರತಿಭಾವಂತ ಕಲಾವಿದರಿಗೆ ಇಲ್ಲಿ ಪ್ರೋತ್ಸಾಹ, ಮನ್ನಣೆ ದೊರಕುತ್ತಿರಲಿಲ್ಲ. ಇದನ್ನು ಮನಗಂಡ ದಿನೇಶ್, ವಿಜಯ ಕರ್ನಾಟಕದಲ್ಲಿ 'ಸೂರ್ಯಕಾಂತಿ' ಅಂಕಣವನ್ನು ಬರೆಯಲಾರಂಭಿಸಿದರು. ಕೇವಲ ಕಲಾವಿದರಲ್ಲದೆ, ಯುವ ಮತ್ತು ಪ್ರತಿಭಾವಂತ ಕವಿ/ಕವಯಿತ್ರಿಗಳನ್ನು ಕೂಡಾ ಓದುಗರಿಗೆ ದಿನೇಶ್ ಸೂರ್ಯಕಾಂತಿಯ ಮುಲಕ ಪರಿಚಯಿಸಿದರು.

ಇತ್ತೀಚೆಗೆ ಸೂರ್ಯಕಾಂತಿ ೧೦೦ ವಾರಗಳನ್ನು ಪೂರೈಸಿ ಶತಕ ಬಾರಿಸಿದ ಸಂದರ್ಭದಲ್ಲಿ, ಎಲ್ಲಾ ೧೦೦ ಸೂರ್ಯಕಾಂತಿಗಳನ್ನು ಒಂದೆಡೆ ಸೇರಿಸಿ ಸನ್ಮಾನ ಮಾಡುವ ಮುಲಕ ವಿಶಿಷ್ಟ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವುದು ದಿನೇಶ್ ಯೋಜನೆಯಾಗಿತ್ತು. ಅದರಂತೆ ಎಪ್ರಿಲ್ ೨೨ ರಂದು ಮಂಗಳೂರಿನ ತಣ್ಣೀರುಬಾವಿಯ ರಮ್ಯ ಕಡಲ ಕಿನಾರೆಯಲ್ಲಿ ಸೂರ್ಯಕಾಂತಿಗಳ ಸಮ್ಮಿಲನ. ಒಟ್ಟು ೮೫ ಕಲಾವಿದರು/ ಕವಿಗಳು/ ಹಾಸ್ಯಗವಿಗಳು/ ಸಂಗೀತಗಾರರು/ ನೃತ್ಯಪಟುಗಳು ಅಲ್ಲಿದ್ದರು. ಆಕರ್ಷಕ ವೇದಿಕೆಯ ಎರಡು ಬದಿಯಲ್ಲಿ ದೈತ್ಯ ಗಾಳಿಪಟಗಳನ್ನು ಕೂರಿಸಲಾಗಿತ್ತು. ಸೂರ್ಯಕಾಂತಿ ಅಂಕಣದ ಎಲ್ಲಾ ೧೦೦ ಅಂಕಣಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ 'ಕಡಲ ತಟದ ಸೂರ್ಯಕಾಂತಿಗಳು' ಪುಸ್ತಕವನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ತುಳುನಾಡಿನ ನಶಿಸಿ ಹೋಗುತ್ತಿರುವ ಸಾಂಸ್ಕೃತಿಕ ಕಲೆ 'ಆಟಿ ಕಳಂಜ'ವನ್ನು ಅದಕ್ಕಾಗಿಯೇ ಬಂಟ್ವಾಳದಿಂದ ಕರೆಯಿಸಲಾಗಿದ್ದ ಕಲಾವಿದರು ನಡೆಸಿಕೊಡುತ್ತಿದ್ದಂತೆ, ಖ್ಯಾತ ಚಿತ್ರಗಾರ ಮೋಹನ್ ಸೋನಾ ವೇದಿಕೆಯ ಮುಂಭಾಗದಲ್ಲಿರಿಸಲಾಗಿದ್ದ ಕ್ಯಾನ್ ವಾಸ್ ಮೇಲೆ ರೇಖಾಚಿತ್ರವೊಂದನ್ನು ಎಳೆದರೆ ಅದಕ್ಕನುಗುಣವಾಗಿ ಖ್ಯಾತ ಹನಿಗವಿ ಡುಂಡಿರಾಜ್, 'ಎನಂದಿರಿ ಕವಿಗಳೇ? ಹೆಣ್ಣು ನೆಲವೇ? ಗಂಡು ಕಡಲೆ? ಹಾಗಾದರೆ ಮಕ್ಕಳು ನೆಲಗಡಲೆ?' ಎಂಬ ಹನಿಗವನವೊಂದನ್ನು ಅದೇ ಕ್ಯಾನ್ ವಾಸ್ ಮೇಲೆ ಗೀಚಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ನಂತರ ಕವಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರೆ, ಚಿತ್ರಕಲಾವಿದರು ಅಲ್ಲಲ್ಲಿ ಕೂತು ಬಣ್ಣಗಳೊಂದಿಗೆ ಸರಸವಾಡತೊಡಗಿದರು. ಭರತನಾಟ್ಯ ಪ್ರವೀಣರಿಂದ ನೃತ್ಯ ಪ್ರದರ್ಶನವಿದ್ದರೆ, ಯುವ ಪ್ರತಿಭೆ ನಯನಗೌರಿ ಹರಿಕಥೆಯನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದಳು. ಸಾವಿತ್ರಿ ರಾಮರಾವ್ ಅವರ ವೀಣಾವಾದನ ಕಡಲ ಅಲೆಗಳೊಂದಿಗೆ ಜುಗಲ್ ಬಂದಿ ಮಾಡುತ್ತಿದ್ದರೆ, ಪಟ್ಟಾಭಿರಾಮ್ ಅವರ ಹಾಸ್ಯ ಚಟಾಕಿಗಳಿಂದ ಹೊಟ್ಟೆ ಹುಣ್ಣಾಗುವಂತೆ ನಗದೇ ಇರದವರಿರಲಿಲ್ಲ. ಅನಿಲ್ ದೇವಾಡಿಗ ಮತ್ತು ವಿನಯ್ ಕುಮಾರ್ ಸಾಯರವರು ಸೃಜನಶೀಲ ಕಲಾಕೃತಿ (ಇನ್ ಸ್ಟಲೇಶನ್ ಆರ್ಟ್) ಯನ್ನು ಪರಿಚಯಿಸಿದರು. ಉಡುಪಿಯ ವೆಂಕಟ್ರಮಣ ಕಾಮತ್ ಮತ್ತು ಶ್ರೀನಾಥ್ ಮರಳು ಶಿಲ್ಪ ರಚನೆಯಲ್ಲಿ ಮಗ್ನರಾಗಿದ್ದರು.


ಹೀಗೆ ಮುಂಜಾನೆ ೯.೩೦ರಿಂದ ಸಂಜೆ ೭ರ ತನಕ 'ಕಾವ್ಯ ತರಂಗ'ದಡಿ ಕವಿಗಳು, 'ವರ್ಣ ತರಂಗ'ದಡಿ ಚಿತ್ರಗಾರರು, 'ರಾಗ ತರಂಗ'ದಡಿ ಸಂಗೀತಗಾರರು, 'ನಾಟ್ಯ ತರಂಗ'ದಡಿ ನೃತ್ಯಪಟುಗಳು ಮತ್ತು 'ಹಾಸ್ಯ ತರಂಗ'ದಡಿ ಹಾಸ್ಯಗವಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿ, 'ಕಡಲ ತಟದ ಸೂರ್ಯಕಾಂತಿಗಳಿಂದ ವರ್ಣಶರಧಿ' ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು. ಪಾಲ್ಗೊಂಡ ಎಲ್ಲರಿಗೂ ಸ್ಮರಣಿಕೆಯಾಗಿ ಪುಟ್ಟ ಸುಂದರ ನಾವೆಯೊಂದನ್ನು ನೀಡಲಾಯಿತು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಶ್ರೇಯ ಕೇವಲ ದಿನೇಶ್ ಹೊಳ್ಳರಿಗೆ ಸಲ್ಲತಕ್ಕದ್ದು. ಕಳೆದ ೩ ತಿಂಗಳುಗಳಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಮಾಡಲು ಅವರು ಪಟ್ಟ ಶ್ರಮ, ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಾಗ ಫಲ ಕೊಟ್ಟಿತ್ತು. ಅನಿವಾರ್ಯವಾಗಿ ವೈಯುಕ್ತಿಕ ಕಾರಣಗಳಿಂದ ನನಗೆ 'ವರ್ಣಶರಧಿ'ಯನ್ನು ಅಟೆಂಡ್ ಮಾಡಲಾಗಲಿಲ್ಲ. ಆದರೂ ತಯಾರಿಯ ಸಮಯದಲ್ಲಿ ದಿನೇಶರಿಗೆ ಸ್ವಲ್ಪವಾದರೂ ನೆರವಾಗಿದ್ದೆ ಎಂಬುದೊಂದೇ ತೃಪ್ತಿ.


೨ ವರ್ಷಗಳ ಹಿಂದೆ ವಿಜಯ ಕರ್ನಾಟಕದಲ್ಲಿ 'ಸೂರ್ಯಕಾಂತಿ' ಅಂಕಣ ಬರೆಯಲು ಆರಂಭಿಸಿದ ದಿನೇಶ್, ಕಲಾವಿದರನ್ನು ಹುಡುಕಾಡಿಕೊಂಡು ಜಿಲ್ಲೆಯ ಮುಲೆಮುಲೆಗಳಿಗೆ ತೆರಳಿ, ಅವರನ್ನು ಭೇಟಿಯಾಗಿ, ಮಾಹಿತಿ ಸಂಗ್ರಹಿಸಿ ನಂತರ ತನ್ನ ವಿಶಿಷ್ಟ ಶೈಲಿಯ ಲೇಖನದಲ್ಲಿ ಓದುಗರಿಗೆ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದರು. ಮಂಗಳೂರಿನ ವಿದ್ಯಾ ವಾಮಂಜೂರು ಮತ್ತು ಶಶಿಕಲಾ ಆಂಚನ್ ಹಾಗೂ ಉಡುಪಿಯ ಭಾಗ್ಯಶ್ರೀ ಕಂಬಳಕಟ್ಟ ಮತ್ತು ಕೆ.ಚಂದ್ರಕಾಂತ್ ತಮ್ಮ ಪಾಡಿಗೆ ಅಲ್ಲೊಂದು ಇಲ್ಲೊಂದು ಕವಿತೆಗಳನ್ನು ಬರೆದು ಅಪರಿಚಿತರಂತೆ ಉಳಿದುಬಿಡುತ್ತಿದ್ದರು. ಸೂರ್ಯಕಾಂತಿಯ ಮುಲಕ ಹೊರ ಜಗತ್ತಿಗೆ ಇವರ ಪರಿಚಯವಾದ ಬಳಿಕ ಈಗ ಅಲ್ಲಲ್ಲಿ ನಡೆಯುವ ಕವಿಗೋಷ್ಟಿಗಳಿಗೆ ಇವರಿಗೆ ಅಹ್ವಾನ ಬರಲು ಆರಂಭವಾಗಿದೆ!

ಮೊದಲು ಚೆನ್ನೈನಲ್ಲಿದ್ದು, ನಿವೃತ್ತಿಯ ಬಳಿಕ ಉಡುಪಿಗೆ ಬಂದು ನೆಲೆಸಿರುವ ಬಿ.ಸುಬ್ರಾಯ ಶಾಸ್ತ್ರಿಯವರದ್ದು ಚಿತ್ರಕಲೆಯಲ್ಲಿ ಪರಿಣಿತ ಕೈ. ಆದರೂ ಕರಾವಳಿಯಲ್ಲಿ ಇವರ ಹೆಸರು ಮನ್ನಣೆ ಪಡೆದಿದ್ದು ಸೂರ್ಯಕಾಂತಿಯಲ್ಲಿ ಅವರ ಬಗ್ಗೆ ದಿನೇಶ್ ಬರೆದ ಬಳಿಕ! ಅದರಂತೆ ಬ್ಯಾಂಕ್ ಉದ್ಯೋಗಿ ಕುಂದಾಪುರದ ಬಿ.ಕೆ.ಮಾಧವ ರಾವ್, ತನ್ನನ್ನು ತಾನು ಚಿತ್ರಕಲೆಯಲ್ಲಿ ಬಹಳ ಬ್ಯುಸಿಯಾಗಿ ತೊಡಗಿಸಿಕೊಂಡಿದ್ದು ಸೂರ್ಯಕಾಂತಿಯಲ್ಲಿ ಅವರ ಬಗ್ಗೆ ಲೇಖನ ಪ್ರಕಟಗೊಂಡ ಬಳಿಕ ಕುಂದಾಪುರದ ಜನರು ತಮಗೊಂದಷ್ಟು ಚಿತ್ರಗಳನ್ನು ಬಿಡಿಸಿಕೊಡುವಂತೆ ದುಂಬಾಲು ಬಿದ್ದಾಗ. ಮಂಗಳೂರಿನ ಗೃಹಿಣಿ ಜಾನಕಿರಾಣಿಯವರಂತೂ ಅದ್ಭುತ ಚಿತ್ರಕಲಾವಿದೆ. ಇವರನ್ನೂ ಅಡಿಗೆಮನೆಯಿಂದ ಹೊರಗೆಳೆದು ತಂದಿದ್ದು ದಿನೇಶ್. ಜಾನಕಿರಾಣಿಯವರನ್ನು ಮಾತನಾಡಿಸಲು ಅವರ ಮನೆಗೆ ತೆರಳಿದಾಗಲೇ, ಅವರ ಅಮ್ಮ ಸುಬ್ಬುಲಕ್ಷ್ಮಿಯವರು ಅಸಾಧಾರಣ ಕವಯಿತ್ರಿ ಎಂದು ದಿನೇಶರಿಗೆ ತಿಳಿದದ್ದು! ಒಂದೇ ಮನೆಯಲ್ಲಿ ೨ ಪ್ರತಿಭೆಗಳು. ಅಂತೆಯೇ ಮತ್ತೊಬ್ಬ ಚಿತ್ರಕಲಾವಿದೆ ಗೃಹಿಣಿ ಸುಧಾ ಯೋಗೀಶ್ ಪರಿಚಯವಾದದ್ದೂ ಸೂರ್ಯಕಾಂತಿಯ ಮುಲಕ. ಮಂಗಳೂರಿನ ಸಮೀಪದ ಕಲ್ಲಡ್ಕದ ಜಯರಾಮ ನಾವಡರೂ ಅಸಾಧಾರಣ ಚಿತ್ರಕಲಾವಿದ. ಇವರೂ ಚಿರಪರಿಚಿತರಾದದ್ದು ಸೂರ್ಯಕಾಂತಿಯ ಮುಲಕ.

ಶ್ರೀಪತಿ ಆಚಾರ್ಯ ಕಾರ್ಕಳದಲ್ಲಿ ವಾಸವಿರುವ ಯುವಕ. ಮದುವೆಯಾಗಲು ಹೆಣ್ಣಿನ ಹುಡುಕಾಟದಲ್ಲಿದ್ದ. ಕಲಾವಿದೆಯೊಬ್ಬಳನ್ನು ವರಿಸಬೇಕು ಎಂಬುದು ಈತನ ಆಸೆಯಾಗಿತ್ತು. ಇದೇ ಕಾರಣಕ್ಕಾಗಿ ತಪ್ಪದೆ ಸೂರ್ಯಕಾಂತಿ ಅಂಕಣವನ್ನು ಓದುತ್ತಿದ್ದ. ಶಿಲ್ಪಾ ಆಚಾರ್ಯ ಒಬ್ಬ ಯುವ ಚಿತ್ರಕಲಾವಿದೆಯಲ್ಲದೆ, ನೋಡಲು ಆಕರ್ಷಕವಾಗಿಯೂ ಇದ್ದಾಳೆ. ಈಕೆಯ ಬಗ್ಗೆ ಸೂರ್ಯಕಾಂತಿಯಲ್ಲಿ ದಿನೇಶ್ ಬರೆದಿದ್ದನ್ನು ಓದಿದ ಕೂಡಲೇ ಹಳ್ಳಕ್ಕೆ ಬಿದ್ದ ಶ್ರೀಪತಿ, ಕಾರ್ಕಳದಿಂದಲೇ ಚಡಪಡಿಸಿ ಆಕೆಗೆ ಫೋನ್ ಮಾಡಿ ಸತಾಯಿಸತೊಡಗಿದ್ದ. ಆದರೆ ಆತನದ್ದು ಪ್ರಾಮಾಣಿಕ ಪ್ರೊಪೋಸಲ್ ಆಗಿತ್ತು. ದಿನೇಶರ ಮಧ್ಯಸ್ಥಿಕೆಯಲ್ಲಿ ವಿಷಯ ಮುಂದುವರೆಯಿತು. ತನ್ನ ಅಕ್ಕನ ಮದುವೆಯಾಗದೇ ತಾನು ಮದುವೆಯಾಗಲಾರೆ ಎಂದು ಶಿಲ್ಪಾಳ ಹಟ. ಆಕೆಯ ಅಕ್ಕ ಶ್ರೀದೇವಿ ಆಚಾರ್ಯ ಕೂಡಾ ಒಬ್ಬ ಚಿತ್ರಕಲಾವಿದೆ. ಕಲಾವಿದೆಯೊಬ್ಬಳನ್ನು ಮದುವೆಯಾಗಬೇಕೆಂಬ ಆಸೆಯಿದ್ದ ಶ್ರೀಪತಿ, ಶ್ರೀದೇವಿ ಕೂಡಾ ಕಲಾವಿದೆ ಎಂದು ತಿಳಿದ ಕೂಡಲೇ ಆಕೆಗೆ 'ಯಸ್' ಅಂದುಬಿಟ್ಟ. ದಿನೇಶ್ ಹೊಳ್ಳರು ಸೂರ್ಯಕಾಂತಿಯ ಮುಖಾಂತರ ಮದುವೆಯೊಂದನ್ನು ನೆರವೇರಿಸಿ ಅಕ್ಷತೆ ಹಾಕಿ ಬಂದರು.

ಕುಂದಾಪುರದ ರಾಘವೇಂದ್ರ ಹಕ್ಲಾಡಿ ತರಕಾರಿಗಳಲ್ಲಿ ವಿವಿಧ ಆಕೃತಿಗಳನ್ನು ಮಾಡುವುದರಲ್ಲಿ ಪರಿಣಿತ - ವೆಜಿಟೇಬಲ್ ಕಟ್ಟಿಂಗ್ ಆರ್ಟ್. ತನ್ನ ಪ್ರತಿಭೆಯಿಂದ ಈಗ ಚೆನ್ನಾಗಿ ಹಣ ಗಳಿಸುತ್ತಾ ಇದ್ದಾನೆ ಸೂರ್ಯಕಾಂತಿಯಲ್ಲಿ ದಿನೇಶ್ ಬರೆದ ಬಳಿಕ. ಮಂಗಳೂರಿನ ಸುಬ್ರಹ್ಮಣ್ಯ ಮುಗನಾದರೂ, ಉತ್ತಮ ಚಿತ್ರಗಾರ. ಸೂರ್ಯಕಾಂತಿಯಲ್ಲಿ ಈತನ ಬಗ್ಗೆ ಲೇಖನ ಪ್ರಕಟವಾದ ಬಳಿಕ ಆರ್ಥಿಕವಾಗಿ ಸ್ವಲ್ಪ ಸಬಲನಾಗಿದ್ದಾನೆ. ತನ್ನ ಚಿತ್ರಗಳ ಎಕ್ಸಿಬಿಶನ್ ಕೂಡಾ ದಿನೇಶರ ನೆರವಿನಿಂದ ಏರ್ಪಡಿಸಿದ್ದಾನೆ. ಪ್ರಶಾಂತ್ ಆಚಾರ್ಯರದ್ದು ಚಾಕ್ ಪೀಸ್ ನಲ್ಲಿ ಆಕೃತಿಗಳನ್ನು ಕೆರೆಯುವ ಕಲೆ. ಇವರ ಕಲೆ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಕೆಲವೊಂದು ಕಡೆ ಡಿಸೈನ್ ಗಳನ್ನು ಭೂತಗನ್ನಡಿ ಬಳಸಿ ನೋಡಬೇಕಾಗುತ್ತದೆ.

ಇಷ್ಟೆಲ್ಲಾ ಬರೆದು ಕಡೆಗೆ ನಯನಗೌರಿಯ ಬಗ್ಗೆ ಒಂದೆರಡು ಮಾತು ಬರೆಯದಿದ್ದರೆ ಅನ್ಯಾಯವಾಗುತ್ತದೆ. ೧೩ರ ಹರೆಯದ ನಯನಗೌರಿಗೆ ಸಕ್ಕರೆ ಕಾಯಿಲೆಯಿದೆ. ಷುಗರ್ ಪ್ರಮಾಣ ಕೆಲವೊಮ್ಮೆ ಹೆಚ್ಚಾಗುವುದು ಮತ್ತು ಕೆಲವೊಮ್ಮೆ ಕಡಿಮೆಯಾಗುವುದು ಈಕೆಯನ್ನು ಕಾಡುವ ಕಾಯಿಲೆ. ಈಗೆಲ್ಲಾ ಮಾತ್ರೆಯಿದೆ. ಮೊದಲು ಷುಗರ್ ಪ್ರಮಾಣ ಕಡಿಮೆಯಾದಂತೆ ಆಕೆಯ ಬಾಯೊಳಗೆ ಸ್ವಲ್ಪ ಸಕ್ಕರೆಯನ್ನು ಹಾಕಲಾಗುತ್ತಿತ್ತು. ಈ ಕಾಯಿಲೆಯಿದ್ದರೂ, ನಯನಗೌರಿ ಅದ್ಭುತವಾಗಿ ಹರಿಕಥೆ ಹಾಡುತ್ತಾಳೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ, ಸ್ಪಷ್ಟ ಉಚ್ಚಾರ ಮತ್ತು ರಾಗಗಳ ಅದ್ಭುತ ಬಳಕೆ ಇತ್ಯಾದಿಗಳನ್ನು ಕಣ್ಣಾರೆ ಕಂಡು ಕೇಳಿದವರು ಆಕೆಯ ಪ್ರತಿಭೆಗೆ ತಲೆತೂಗಿದರು. ಅಯ್ಯೋ ಇಂತಹ ಪ್ರತಿಭೆಯನ್ನು ಪ್ರತ್ಯಕ್ಷವಾಗಿ ನೋಡಿ ಕೇಳಲು ನಾನಲ್ಲಿರಲಿಲ್ಲವಲ್ಲ! ಕಥೆ, ಕವನ, ಕಲೆಯಲ್ಲೂ ನಯನಗೌರಿ ಪಳಗಿದವಳು. ಯಕ್ಷಗಾನವನ್ನೂ ಬಲ್ಲವಳು, ಹಲವಾರು ಪ್ರಸಂಗಗಳಲ್ಲಿ ಪಾಲ್ಗೊಂಡವಳು. ತಬಲಾ, ಹಾರ್ಮೋನಿಯಮ್ ನುಡಿಸಬಲ್ಲಳು. ಇಂತಹ ಪ್ರತಿಭೆಯನ್ನು ಭೇಟಿ ಮಾಡುವ ಅವಕಾಶ ಕಳಕೊಂಡೆ ಎಂದು ದಿನೇಶರ ಮುಂದೆ ಕೊರಗುತ್ತಿರುವಾಗ ಅವರಂದರು 'ಜೂನ್ ೨ಕ್ಕೆ ಆಕೆಗೊಂದು ಸನ್ಮಾನ ಇಟ್ಟುಕೊಂಡಿದ್ದೇನೆ' ಎಂದು. ಆಗ ಭೇಟಿ ಮಾಡಲೇಬೇಕು.

'ಕಡಲ ತಟದ ಸೂರ್ಯಕಾಂತಿಗಳಿಂದ ವರ್ಣಶರಧಿ' ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಎಲ್ಲೂ ದಿನೇಶ್ ಹೆಸರಿರಲಿಲ್ಲ. 'ತಮ್ಮ ಆಗಮನವನ್ನು ಎದುರು ನೋಡುತ್ತಿರುವ - ಸೂರ್ಯಕಾಂತಿಗಳು' ಎಂದಷ್ಟೇ ಇತ್ತು. ದಿನೇಶ್ ಪ್ರಕಾರ ಇದೊಂದು ಸೂರ್ಯಕಾಂತಿಗಳಿಂದ ಸೂರ್ಯಕಾಂತಿಗಳಿಗಾಗಿ ಕಾರ್ಯಕ್ರಮ. ದಿನೇಶರ ಈ ಸೇವೆ ಹೀಗೆ ಮುಂದುವರೆಯಲಿ ಮತ್ತು ಮತ್ತಷ್ಟು ಸೂರ್ಯಕಾಂತಿಗಳನ್ನು ಅವರು ಕರಾವಳಿ ಜನತೆಗೆ ಪರಿಚಯಿಸುವಂತಾಗಲಿ ಎಂಬ ಶುಭ ಹಾರೈಕೆ.
ವರ್ಣಶರಧಿ ಕಾರ್ಯಕ್ರಮದಂದು ಪಾಲ್ಗೊಂಡ ಕಲಾವಿದರು ಬಿಡಿಸಿದ ಚಿತ್ರಗಳನ್ನು ಜೂನ್ ೨ರಿಂದ ಜೂನ್ ೫ರವರೆಗೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುವುದು.
ವರ್ಣಶರಧಿ ಕಾರ್ಯಕ್ರಮದ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಬುಧವಾರ, ಮೇ 02, 2007

ಅಕ್ಷರ ಅವಾಂತರ ೨ - ಅವಸರದಲ್ಲಿ ಆದ ಅವಾಂತರ


ಜೋಗ - ಭಟ್ಕಳ ದಾರಿಯಲ್ಲಿ ಕೋಗಾರು ನಂತರ ಬರುವ ಚೆನ್ನೆಕಲ್ ದಾಟಿ ಒಂದೆರಡು ಕಿಮಿ ಬಳಿಕ ಈ ಸುರಕ್ಷಾ ಸೂಚಿ ಇದೆ. 'ಅವಸರವೇ ಅಪಘಾತಕ್ಕೆ ಕಾರಣ' ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಬೇಕೆ?